ಗಾಂಧಿನಗರ: ಗುಜರಾತ್ ಸೌರಷ್ಟ್ರದಲ್ಲಿ ತೆರೆದ ವಾಹನದಲ್ಲಿ ಪ್ರಚಾರ ಮಾಡಲು ಪೊಲೀಸರು ಅವಕಾಶ ನೀಡದ ಹಿನ್ನೆಲೆಯಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಎತ್ತಿನ ಗಾಡಿ ಏರಿ ಪ್ರಚಾರ ಆರಂಭಿಸಿದ್ದಾರೆ.
ವಿಧಾನಸಭಾ ಚುನಾವಣೆ ಪ್ರಯುಕ್ತ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಇಂದಿನಿಂದ ಮೂರು ದಿನಗಳ ಕಾಲ ಗುಜರಾತ್ನಲ್ಲಿ ಪ್ರಚಾರ ನಡೆಸಲಿದ್ದಾರೆ. ಆದರೆ ಪೊಲೀಸರು ರಸ್ತೆಯಲ್ಲಿ ತೆರೆದ ವಾಹನದಲ್ಲಿ ಪ್ರಚಾರ ಮಾಡಲು ಅನುಮತಿಯನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಎತ್ತಿನ ಗಾಡಿ ಏರಿ ಪ್ರಚಾರ ಕಾರ್ಯ ಆರಂಭಿಸಿದರು.
ದ್ವಾರಕದ ದೇವಾಲಯದಲ್ಲಿ ರಾಹುಲ್ ಗಾಂಧಿ ಪ್ರಾರ್ಥನೆ ಸಲ್ಲಿಸಿದರು. ದ್ವಾರಕ, ಜಾಮ್ನಗರ, ಮೋರ್ಬಿ, ರಾಜ್ಕೋಟ್ ಮತ್ತು ಸುರೇಂದ್ರನಗರ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಪ್ರಚಾರವನ್ನು ಮಾಡಲಿದ್ದಾರೆ.
ಗುಜರಾತ್ ವಿಧಾನಸಭೆಯ ಒಟ್ಟು 182 ಸ್ಥಾನಗಳ ಪೈಕಿ 56 ಸ್ಥಾನಗಳು ಸೌರಾಷ್ಟ್ರದಲ್ಲಿದೆ. ಇಲ್ಲಿ ಪಟೇಲ್ ಸಮುದಾಯದವರು ಪ್ರಬಲರಾಗಿದ್ದು, ಈ ಮತಗಳನ್ನು ಸೆಳೆಯಲು ರಾಹುಲ್ ಗಾಂಧಿ ಇಲ್ಲಿಂದಲೇ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ ಎಂದು ಹೇಳಲಾಗಿದೆ.
ಆಗಸ್ಟ್ನಲ್ಲಿ ನಡೆದ ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರ ರಾಜಕೀಯ ಸಲಹೆಗಾರ ಅಹ್ಮದ್ ಪಟೇಲ್ ಸುಲಭವಾಗಿ ಗೆಲುವು ಸಾಧಿಸಲಿದ್ದಾರೆ ಎಂದು ಮೊದಲು ನಿರೀಕ್ಷೆ ಮಾಡಲಾಗಿತ್ತಾದರೂ ಕೊನೆಯಲ್ಲಿ ಭಾರೀ ಕಷ್ಟದಿಂದ ಗೆಲುವು ಸಾಧಿಸಿದ್ದರು. ಹಿರಿಯ ನಾಯಕ ಶಂಕರ್ ಸಿಂಗ್ ವಘೇಲಾ ರಾಜೀನಾಮೆ ಜೊತೆ 14 ಮಂದಿ ಶಾಸಕರು ಕಾಂಗ್ರೆಸ್ ಗೆ ಗುಡ್ಬೈ ಹೇಳಿದ್ದರು.
ಮಂಗಳವಾರ ಬೆಳಗ್ಗೆ ರಾಹುಲ್ ಗಾಂಧಿ ತಂಕಾರಾ ಮತ್ತು ವಂಕಾನರ್ನಿಂದ ರಾಜ್ಕೋಟಾಗೆ ಹೋಗುತ್ತಾರೆ. ಅಲ್ಲಿ ವ್ಯಾಪಾರಿಗಳನ್ನು ಭೇಟಿ ಮಾಡಿ ಹೊಸದಾಗಿ ಜಾರಿಯಾದ ಜಿಎಸ್ಟಿ, ಕಳೆದ ನವೆಂಬರ್ನಿಂದ ಹಣ್ಣು, ತರಕಾರಿಗಳ ಬೆಲೆ ಏರಿಳಿತ ಇತರೆ ಸಮಸ್ಯೆಗಳ ಬಗ್ಗೆ ಕುರಿತು ಚರ್ಚಿಸಲಿದ್ದಾರೆ.
ಕೊನೆಯ ದಿನದಂದು ಸುರೇಂದ್ರನಗರದಲ್ಲಿರುವ ಎರಡು ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ. ಮೊದಲು ಚೋಟೈಲ್ನಲ್ಲಿರುವ ಬೆಟ್ಟದ ದೇವಸ್ಥಾನ ಮತ್ತು ಎರಡನೆದಾಗಿ ಕಾಗ್ವಾಡದಲ್ಲಿರುವ ಖೊಡಾಲ್ಧಾಮ್ ದೇವಸ್ಥಾನಕ್ಕೆ ತೆರಳುತ್ತಾರೆ. ಇದು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಪ್ರಭಾವಶಾಲಿಯಾದ ದೇವರಾಗಿದೆ.
ಮೂರು ದಶಕಗಳ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್ ಹಿರಿಯ ನಾಯಕರು ಮೂರು ದಿನಗಳ ಕಾಲ ಗುಜರಾತ್ ನಲ್ಲಿ ತಡೆರಹಿತ ಪ್ರಚಾರವನ್ನು ನಡೆಸುತ್ತಿದ್ದಾರೆ. 1881ರಲ್ಲಿ ದಿವಂಗತ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಅವರು ಗುಜರಾತ್ನಲ್ಲಿ ಎರಡು ದಿನಗಳ ಕಾಲ ಪ್ರಚಾರ ನಡೆಸಿದ್ದರು ಎಂದು ಪಕ್ಷದ ವಕ್ತಾರ ಶಕ್ತಿ ಸಿಂಗ್ ಗೊಹಿಲ್ ಹೇಳಿದ್ದಾರೆ.