Tag: ಚೀಫ್ ಆಫ್ ಡಿಫೆನ್ಸ್ ಸ್ಟಾಫ್

  • 2 ದಶಕದ ಬೇಡಿಕೆ ಈಡೇರಿಕೆ – ಏನಿದು ಸಿಡಿಎಸ್? ಭಾರತದ ಸೈನ್ಯಕ್ಕೆ ಯಾಕೆ ಬೇಕು?

    2 ದಶಕದ ಬೇಡಿಕೆ ಈಡೇರಿಕೆ – ಏನಿದು ಸಿಡಿಎಸ್? ಭಾರತದ ಸೈನ್ಯಕ್ಕೆ ಯಾಕೆ ಬೇಕು?

    ನವದೆಹಲಿ: ಮೂರು ಸೇನಾ ಪಡೆಗಳ ಮಧ್ಯೆ ಸಮನ್ವಯತೆ ತರುವುದಕ್ಕಾಗಿ ಮುಖ್ಯ ಸೇನಾ ಸಿಬ್ಬಂದಿ(ಸಿಡಿಎಸ್) ನೇಮಕ ಮಾಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಕೆಂಪುಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮೋದಿ ಅವರು, ಭೂ, ವಾಯು ಹಾಗೂ ನೌಕಾ ಪಡೆಗಳು ನಮ್ಮ ಹೆಮ್ಮೆ. ಈ ಮೂರೂ ಸೇನಾ ಪಡೆಗಳ ಮಧ್ಯೆ ಸಮನ್ವಯತೆ ತರುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ನೇಮಕ ಮಾಡಲಾಗುತ್ತದೆ ಎಂದು ಐತಿಹಾಸಿಕ ಘೋಷಣೆ ಮಾಡಿದ್ದಾರೆ.

    ಸಿಡಿಎಸ್ ನೇಮಕಕ್ಕಾಗಿ ದೀರ್ಘಕಾಲದಿಂದ ಸೇನಾ ಅಧಿಕಾರಿಗಳು ಒತ್ತಾಯಿಸುತ್ತಾ ಬಂದಿದ್ದಾರೆ. ಸದ್ಯ ನಾವು ಅದನ್ನು ಕಾರ್ಯಗತಕ್ಕೆ ತರಲು ನಿರ್ಧಸಿದ್ದೇವೆ. ಈ ನೇಮಕವು ಮೂರು ಪಡೆಗಳ ಉನ್ನತ ಮಟ್ಟದಲ್ಲಿ ಪರಿಣಾಮಕಾರಿ ನಾಯಕತ್ವವನ್ನು ನೀಡಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

    ಸಿಡಿಎಸ್ ವಿಶೇಷತೆ ಏನು?:
    ಭೂ, ವಾಯು ಹಾಗೂ ನೌಕಾ ಪಡೆಗಳಿಗೆ ಪ್ರತ್ಯೇಕ ಮುಖ್ಯಸ್ಥರಿದ್ದಾರೆ. ರಾಷ್ಟ್ರಪತಿಗಳು ನೇತೃತ್ವ, ಆದೇಶದಂತೆ ಮೂರು ಪಡೆಗಳು ಕಾರ್ಯನಿರ್ವಹಿಸುತ್ತಿವೆ.ಕೇಂದ್ರ ಸರ್ಕಾರ ಹಾಗೂ ಮೂರು ಪಡೆಗಳ ಮಧ್ಯೆ ಸಮನ್ವಯ ತರುವ ಕೆಲಸವನ್ನು ಸಿಡಿಎಸ್ ಮಾಡಲಿದ್ದಾರೆ. ಈ ಹುದ್ದೆಗೆ ಆಯ್ಕೆ ಆಗಲಿರುವ ಅವರು 5 ಸ್ಟಾರ್ ಹೊಂದಿರುವ ಮಿಲಿಟರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ.

    ಮುಖ್ಯ ಸೇನಾಧಿಕಾರಿಯು ಪ್ರಸ್ತುತ ಇರುವ ಸೇನೆಯ ಮೂರು ವಿಭಾಗದ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವ ಏಕೈಕ ಸಮನ್ವ ಅಧಿಕಾರಿಯಾಗಿರುತ್ತಾರೆ. ಭಾರತದ ಭೂ ಸೇನೆ, ನೌಕಾದಳ ಮತ್ತು ವಾಯುದಳಕ್ಕೆ ಸಂಬಂಧಿಸಿದ ಸಲಹೆಯನ್ನು ಸರ್ಕಾರಕ್ಕೆ ನೀಡುವ ಸಿಂಗಲ್ ಪಾಯಿಂಟ್ ಅಧಿಕಾರ ಅವರದ್ದಾಗಿರುತ್ತದೆ.

    ಮುಖ್ಯ ಸೇನಾಧಿಕಾರಿ ನೇಮಕವು ಈಗಿನ ಮಾತಲ್ಲ. 20 ವರ್ಷಗಳ ಹಿಂದೆಯೇ ಈ ವಿಚಾರ ಪ್ರಸ್ತಾಪವಾಗಿತ್ತು. ಆದರೆ ಕಾರ್ಯರೂಪಕ್ಕೆ ಬಾರದೇ ಹಾಗೆ ಉಳಿದಿತ್ತು. ಸದ್ಯ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಮುಖ್ಯ ಸೇನಾಧಿಕಾರಿ ನೇಮಕ ನಿರ್ಧಾರವನ್ನು ಮತ್ತೆ ಪ್ರಸ್ತಾಪಿಸಿದೆ.

    ಕಾರ್ಗಿಲ್ ಯುದ್ಧದ ನಂತರ ಭದ್ರತಾ ಲೋಪ ಮತ್ತು ಸೇನಾಪಡೆಗಳ ನಡುವೆ ಇರುವ ಅಂತರಗಳ ಕುರಿತು ಅಧ್ಯಯನ ನಡೆಸಿ ವರದಿ ನೀಡಲು 1999ರಲ್ಲಿ ಸಂಸತ್ತಿನ ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ಈ ಸಮಿತಿಯ ನೇತೃತ್ವವನ್ನು ಅಂದಿನ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರು ವಹಿಸಿಕೊಂಡಿದ್ದರು. ಸುದೀರ್ಘ ಅಧ್ಯಯನ ನಡೆಸಿದ ಸಮಿತಿಯು, ಮೂರೂ ಸೇನಾಪಡೆಗಳ ನಡುವೆ ಹಲವೆಡೆ ಸಂವಹನ ಮತ್ತು ಹೊಂದಾಣಿಕೆಯ ಕೊರತೆಯಾಗಿದ್ದನ್ನು ಗುರುತಿಸಿತ್ತು. ಹೀಗಾಗಿ ಮೂರೂ ಸೇನಾಪಡೆಗಳು ಸೇರಿ ಓರ್ವ ಮುಖ್ಯಸ್ಥರನ್ನು ನೇಮಿಸುವಂತೆ ವರದಿ ನೀಡಿತ್ತು. ಆದರೆ ಬದಲಾದ ರಾಜಕೀಯ ಹಾಗೂ ಅಧಿಕಾರಿಗಳ ಆಕ್ಷೇಪದಿಂದಾಗಿ ಸಮಿತಿಯ ಶಿಫಾರಸು ಕಾರ್ಯರೂಪಕ್ಕೆ ಬಂದಿರಲಿಲ್ಲ.

    https://www.youtube.com/watch?v=XWI-1Nqwnxc&feature=youtu.be

    ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಸೇನೆಯ ಸಾರಥ್ಯವನ್ನು ಹೊತ್ತಿದ್ದ ನಿವೃತ್ತ ಜನರಲ್ ವೇದ್ ಮಲ್ಲಿಕ್ ಅವರು ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದಾರೆ. ಈ ನಿರ್ಧಾರದಿಂದ ಸೇನೆ ಮಧ್ಯೆ ಸಮನ್ವಯ ಸಾಧಿಸಲು ನೆರವಾಗುತ್ತದೆ ಎಂದು ಹೇಳಿದ್ದಾರೆ.

    2012 ರಲ್ಲಿ ನರೇಶ್ ಚಂದ್ರಾ ನೇತೃತ್ವದ ಟಾಸ್ಕ್ ಫೋರ್ಸ್, 2016 ರಲ್ಲಿ ಲೆಫ್ಟಿನೆಂಟ್ ಜನರಲ್ ಡಿಬಿ ಶೇಕ್ತ್‍ಕಾರ್ ಸಮಿತಿ ಸಿಡಿಎಸ್ ನೇಮಕವಾಗಬೇಕೆಂದು ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು. ಮೂರು ಸೇನೆಯ ಪ್ಲಾನಿಂಗ್, ಬಜೆಟ್, ಸಂಗ್ರಹಣೆ, ಶಸ್ತ್ರಾಸ್ತ್ರ ಖರೀದಿ, ತರಬೇತಿ ವಿಚಾರದ ಬಗ್ಗೆ ಸಿಡಿಎಸ್ ಗಮನ ಹರಿಸಿ ಕೇಂದ್ರ ರಕ್ಷಣಾ ಇಲಾಖೆಯ ಜೊತೆ ಸೇತುವೆಯಾಗಿ ಕೆಲಸ ಮಾಡುತ್ತದೆ.