Tag: ಚಿನ್ಮಯಾನಂದ

  • ಚಿನ್ಮಯಾನಂದ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ವಿದ್ಯಾರ್ಥಿನಿ ಅರೆಸ್ಟ್

    ಚಿನ್ಮಯಾನಂದ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ವಿದ್ಯಾರ್ಥಿನಿ ಅರೆಸ್ಟ್

    ಲಕ್ನೋ: ಬಿಜೆಪಿ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಚಿನ್ಮಯಾನಂದ ಅವರ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಕಾನೂನು ವಿದ್ಯಾರ್ಥಿನಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಸ್ನೇಹಿತರ ಜೊತೆಗೂಡಿ ಅತ್ಯಾಚಾರ ಆರೋಪ ಮಾಡಿ ಚಿನ್ಮಯಾನಂದ ಅವರ ಬಳಿ 5 ಕೋಟಿ ರೂ. ಸುಲಿಗೆಗೆ ಯತ್ನಿಸಿದ್ದಾಳೆ ಎಂಬ ಆರೋಪ ಕೇಳಿ ಬಂದಿದ್ದು ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ಇಂದು ಬೆಳಗ್ಗೆ ಆಕೆಯನ್ನು ವಿಶೇಷ ತನಿಖಾ ದಳ(ಎಸ್‍ಐಟಿ) ಪೊಲೀಸರು ಬಂಧಿಸಿದ್ದಾರೆ.

    ಮಂಗಳವಾರ ಆಕೆ ಬಂಧನದಿಂದ ರಕ್ಷಣೆ ಕೋರಿ ನ್ಯಾಯಾಲಯಕ್ಕೆ ಮನವಿ ಕೇಳಿದ್ದಳು. ಇದನ್ನು ಗುರುವಾರ ವಿಚಾರಣೆ ಮಾಡುವುದಾಗಿ ಕೋರ್ಟ್ ಒಪ್ಪಿಕೊಂಡಿತ್ತು. ಆದರೆ ಇಂದು ಎಸ್‍ಐಟಿ ಪೊಲೀಸರು ಆಕೆಯನ್ನು ಅರೆಸ್ಟ್ ಮಾಡಿದ್ದು, ಚಪ್ಪಲಿಯನ್ನು ಹಾಕಿಕೊಳ್ಳಲು ಬಿಡದೆ ಬಲವಂತವಾಗಿ ನಮ್ಮ ಮಗಳನ್ನು ಎಳೆದುಕೊಂಡು ಹೋಗಿದ್ದಾರೆ ಎಂದು ಆಕೆಯ ಕುಟುಂಬದವರು ಆರೋಪ ಮಾಡಿದ್ದಾರೆ.

    ಮನೆಯಿಂದ ಆಕೆಯ ಬಂಧಿಸಿದ ಎಸ್‍ಐಟಿ ಪೊಲೀಸರು, ನಂತರ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ಮಾಡಿಸಿ ನಂತರ ಆಕೆಯನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ವಿಚಾರವಾಗಿ ಬಂಧಿತರಾಗಿರುವ ಚಿನ್ಮಯಾನಂದ ಅವರು ಬಂಧಿಸಿದ ದಿನದಿಂದ ಅನಾರೋಗ್ಯಕ್ಕೆ ಒಳಗಾಗಿದ್ದು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮಂಗಳವಾರ ಈ ವಿಚಾರದ ಬಗ್ಗೆ ಮಾತನಾಡಿದ್ದ ಚಿನ್ಮಯಾನಂದ ಅವರ ವಕೀಲ ಓಂ ಸಿಂಗ್ ಆಕೆ ಅವಳ ಸ್ನೇಹಿತರ ಜೊತೆ ಸೇರಿಕೊಂಡು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಚಿನ್ಮಯಾನಂದ ಅವರಿಂದ ದುಡ್ಡು ಸುಲಿಗೆ ಮಾಡವ ಪ್ರಯತ್ನ ಮಾಡಿದ್ದಾಳೆ. ಆದರೆ ಆಕೆ ಇನ್ನೂ ಯಾಕೆ ಅರೆಸ್ಟ್ ಆಗಿಲ್ಲ ಎಂದು ನನಗೆ ಅರ್ಥವಾಗಿಲ್ಲ. ಖಂಡಿತವಾಗಿಯೂ ಆಕೆ ಈ ವಿಚಾರದಲ್ಲಿ ಜೈಲಿಗೆ ಹೋಗುತ್ತಾಳೆ ಎಂದು ಹೇಳಿದ್ದರು.

  • ವಿದ್ಯಾರ್ಥಿನಿಯನ್ನು ಮಸಾಜ್ ಮಾಡಲು ಬಾ ಎಂದಿದ್ದು ನಿಜ – ತಪ್ಪೊಪ್ಪಿಕೊಂಡ ಚಿನ್ಮಯಾನಂದ

    ವಿದ್ಯಾರ್ಥಿನಿಯನ್ನು ಮಸಾಜ್ ಮಾಡಲು ಬಾ ಎಂದಿದ್ದು ನಿಜ – ತಪ್ಪೊಪ್ಪಿಕೊಂಡ ಚಿನ್ಮಯಾನಂದ

    ಲಕ್ನೋ: ಆತ್ಯಾಚಾರ ಪ್ರಕರಣದಲ್ಲಿ ಇಂದು ಬೆಳಗ್ಗೆ ಅರೆಸ್ಟ್ ಆಗಿದ್ದ, ಬಿಜೆಪಿ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಚಿನ್ಮಯಾನಂದ ಅವರು ನಾನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದು ನಿಜ ಎಂದು ತಪ್ಪೊಪ್ಪಿಕೊಂಡಿದ್ದಾರೆ.

    ಇಂದು ಬೆಳಗ್ಗೆ ಬಂಧನಕ್ಕೊಳಗಾಗಿ 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದ ಚಿನ್ಮಯಾನಂದ ನಾನು ಕಾನೂನು ವಿದ್ಯಾರ್ಥಿನಿಗೆ ಮಸಾಜ್ ಮಾಡಲು ಬಾ ಎಂದು ಕರೆದಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಈ ಕೃತ್ಯ ಎಸಗಿದ್ದಕ್ಕೆ ನನಗೆ ನಾಚಿಕೆಯಾಗುತ್ತಿದೆ ಎಂದು ಚಿನ್ಮಯಾನಂದ ಹೇಳಿದ್ದಾರೆ ಎಂದು ತನಿಖಾ ತಂಡ ಹೇಳಿದೆ.

    ಈ ವಿಚಾರದ ಬಗ್ಗೆ ಮಾತನಾಡಿದ ವಿಶೇಷ ತನಿಖಾ ತಂಡದ ಮುಖ್ಯಸ್ಥ ನವೀನ್ ಅರೋರಾ, ಸ್ವಾಮಿ ಚಿನ್ಮಯಾನಂದ ಅವರು ತಮ್ಮ ವಿರುದ್ಧ ಕೇಳಿಬಂದಿರುವ ಲೈಂಗಿಕ ಸಂಭಾಷಣೆ ಮತ್ತು ಬಾಡಿ ಮಸಾಜ್ ಸೇರಿದಂತೆ ಬಹುತೇಕ ಎಲ್ಲ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ. ಸಾಂದರ್ಭಿಕ ಸಾಕ್ಷ್ಯಗಳನ್ನು ಸಹ ಪರಿಶೀಲನೆ ಮಾಡಲಾಗುತ್ತಿದೆ. ತಾನು ಮಾಡಿರುವ ಕೆಲಸದ ಬಗ್ಗೆ ತಾನೇ ಬೇಸರ ವ್ಯಕ್ತಪಡಿಸಿರುವ ಚಿನ್ಮಯಾನಂದ ಅವರು, ಈ ವಿಚಾರದ ಬಗ್ಗೆ ಹೆಚ್ಚಿಗೆ ಹೇಳುವುದಿಲ್ಲ ಎಂದು ಹೇಳಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ನನ್ನ ಮೇಲೆ ಬಿಜೆಪಿ ನಾಯಕರೊಬ್ಬರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಮಸಾಜ್ ಮಾಡಲು ಬಾ ಎಂದು ಕರೆಯುತ್ತಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬಳು ವಿಡಿಯೋ ಮಾಡಿದ್ದಳು ಅದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ನಂತರ ಈ ವಿಚಾರಕ್ಕೆ ಸಂಬಂಧಪಟ್ಟ ವಿಡಿಯೋವನ್ನು ವಿದ್ಯಾರ್ಥಿನಿ ಕುಟುಂಬದವರು ತನಿಖಾ ತಂಡಕ್ಕೆ ನೀಡಿದ್ದರು.

    ವಿದ್ಯಾರ್ಥಿನಿ ಆರೋಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ, ಚಿನ್ಮಯಾನಂದ ಅವರ ವಕೀಲ ಓಂ ಸಿಂಗ್ ಈ ವಿಡಿಯೋ ಮೂಲಕ ತನ್ನ ಕಕ್ಷಿದಾರನನ್ನು ಕೆಣಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದ್ದರು ಮತ್ತು ಓಂ ಸಿಂಗ್ ತನ್ನ ಬಳಿ ಹುಡುಗಿ ಮತ್ತು ಅವರ ಸ್ನೇಹಿತರ ವಿಡಿಯೋ ಇದ್ದು, ಅದು ಚಿನ್ಮಯಾನಂದ್ ಅವರ ಮೇಲೆ ಸುಳ್ಳು ಆರೋಪ ಮಾಡಲು ಸಂಚು ರೂಪಿಸಿರುವುದನ್ನು ತೋರುತ್ತದೆ ಎಂದು ಹೇಳಿದ್ದರು.

    ಈ ಹಿಂದೆ ಈ ವಿಚಾರದ ಬಗ್ಗೆ ಮಾತನಾಡಿದ್ದ ಉತ್ತರ ಪ್ರದೇಶದ ಡಿಜಿಪಿ ಒಪಿ ಸಿಂಗ್ ಅವರು, ಚಿನ್ಮಯಾನಂದ ಪ್ರಕರಣದಲ್ಲಿ ಯಾವುದೇ ವಿಳಂಬ ಮಾಡುವುದಿಲ್ಲ. ಈ ಪ್ರಕರಣದಲ್ಲಿ ಚಿನ್ಮಯಾನಂದ ಅವರ ಪರವಾಗಿ ಬೆದರಿಕೆ ಹಾಕಿದ ಇನ್ನೂ ಮೂವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದರು.