Tag: ಚಿನ್ನದ ಪದಕ

  • ಬೆಳ್ತಂಗಡಿಯ ಫಿಯೋನಾ ಜಿ.ಡಿ ಕೋಸ್ತಗೆ ಚಿನ್ನದ ಪದಕ

    ಬೆಳ್ತಂಗಡಿಯ ಫಿಯೋನಾ ಜಿ.ಡಿ ಕೋಸ್ತಗೆ ಚಿನ್ನದ ಪದಕ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಫಿಯೋನಾ ಜಿ.ಡಿ ಕೋಸ್ತ(ಮಂಗಳೂರು ವಿ.ವಿ ವಿದ್ಯಾರ್ಥಿನಿ) ಎಂಕಾಂನಲ್ಲಿ ಪ್ರಥಮ ರ್‍ಯಾಂಕ್ ಪಡೆದು ಚಿನ್ನದ ಪದಕ ಗಳಿಸಿದ್ದಾರೆ.

    ಮಂಗಳೂರು ಯೂನಿವರ್ಸಿಟಿ ನಡೆಸಿದ 2019-20ನೇ ಸಾಲಿನ ಎಂಕಾಂ ಎಚ್.ಆರ್.ಡಿ ವಿಭಾಗದಲ್ಲಿ ಇವರು ಪ್ರಥಮ ರ್‍ಯಾಂಕ್ ಪಡೆದಿದ್ದಾರೆ. ವಿ.ವಿಯಲ್ಲಿ ಇಂದು ನಡೆದ 39ನೇ ಘಟಿಕೋತ್ಸವದಲ್ಲಿ ಕುಲಾಧಿಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಪದವಿಯನ್ನು ಫಿಯೋನಾ ಅವರಿಗೆ ನೀಡಿದರು.

    ಸದ್ಯ ಫಿಯೋನಾ ವಾಮಂಜೂರು ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಹೆಚ್.ಆರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇವರು ಬದ್ಯಾರಿನ ಗ್ರೆಟ್ಟಾ ಡಿ ಕೋಸ್ತ ಹಾಗೂ ದಿ.ಫೆಲಿಕ್ಸ್ ಡಿ ಕೋಸ್ತರ ಪುತ್ರಿ.

  • ರಾಜ್ಯಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಶ್ವಾನ ‘ಸಿರಿ’ಗೆ ಪ್ರಥಮ ಸ್ಥಾನ

    ರಾಜ್ಯಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಶ್ವಾನ ‘ಸಿರಿ’ಗೆ ಪ್ರಥಮ ಸ್ಥಾನ

    ರಾಯಚೂರು: ಬೆಂಗಳೂರಿನ ಯಲಹಂಕದಲ್ಲಿ ಇತ್ತೀಚಿಗೆ ನಡೆದ ರಾಜ್ಯಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಉತ್ತಮ ಪ್ರದರ್ಶನ ತೋರಿದ ರಾಯಚೂರಿನ ಜಿಲ್ಲಾ ಪೊಲೀಸ್ ಅಪರಾಧ ಪತ್ತೆ ವಿಭಾಗದ ಶ್ವಾನದಳದ ‘ಸಿರಿ’ ಹೆಸರಿನ ಶ್ವಾನ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಮುಡಿಗೇರಿಸಿಕೊಂಡಿದೆ.

    ಈ ಶ್ವಾನ ಅಪರಾಧ ಪತ್ತೆ ಹಚ್ಚುವಲ್ಲಿ ಚಾಣಾಕ್ಷತೆ ಮೆರದು ಪ್ರಥಮ ಸ್ಥಾನಗಳಿಸಿದೆ. ಬೆಂಗಳೂರಿನ ಆಡುಗೋಡಿ ತರಬೇತಿ ಶಾಲೆಯಲ್ಲಿ 9 ತಿಂಗಳ ಕಾಲ ಕಠಿಣ ತರಬೇತಿಯನ್ನು ಪಡೆದಿರುವ ಸಿರಿ ರಾಷ್ಟ್ರದ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ಕೆಯಾಗಿದೆ.

    ಸಿರಿ ಶ್ವಾನವನ್ನು ನಿರ್ವಹಣೆ ಮಾಡುವ ಪೊಲೀಸ್ ಪೇದೆಗಳಾದ ಜಯಕುಮಾರ್ ಹಾಗೂ ಶರಣಬಸವ ಕೆಲಸಕ್ಕೆ ಪ್ರಶಂಸೆ ನೀಡಲಾಗಿದೆ. ಇದೇ ವೇಳೆ ರಾಯಚೂರಿನ 12 ಜನ ಪೊಲೀಸರು ಸಹ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಬಹುಮಾನ ಪಡೆದಿದ್ದಾರೆ. ಕ್ರೀಡಾಕೂಟದಲ್ಲಿ ಬಹುಮಾನ ಪಡೆದ ಪೊಲೀಸ್ ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಹಾಗೂ ಹಿರಿಯ ಅಧಿಕಾರಿಗಳು ಇಂದು ಸನ್ಮಾನಿಸಿದರು.

  • ಸ್ಕೇಟಿಂಗ್ ಚಾಂಪಿಯನ್ ಅನಘಾಗೆ ವೀರೇಂದ್ರ ಹೆಗ್ಗಡೆಯವರಿಂದ ಚಿನ್ನದ ಪದಕ

    ಸ್ಕೇಟಿಂಗ್ ಚಾಂಪಿಯನ್ ಅನಘಾಗೆ ವೀರೇಂದ್ರ ಹೆಗ್ಗಡೆಯವರಿಂದ ಚಿನ್ನದ ಪದಕ

    ಮಂಗಳೂರು: ಅಂತರಾಷ್ಟ್ರೀಯ ಐಸ್ ಸ್ಕೇಟಿಂಗ್ ಚಾಂಪಿಯನ್, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಮಂಗಳೂರಿನ ಕುಮಾರಿ ಅನಘಾ ಅವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಚಿನ್ನದ ಪದಕ ನೀಡಿ ಅಭಿನಂದಿಸಿದರು.

    ಐಸ್ ಸ್ಕೇಟಿಂಗ್ ಅನ್ನುವ ಅಪರೂಪದ ಹಾಗೂ ಕಷ್ಟಕರವಾದ ಕ್ರೀಡೆಯಲ್ಲಿ ಅತೀ ಕಿರಿಯ ವಯಸ್ಸಿನಲ್ಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಎರಡು ಚಿನ್ನದ ಪದಕ ಪಡೆದು ನಮ್ಮ ಜಿಲ್ಲೆಯ ಕೀರ್ತಿ ಪತಾಕೆಯನ್ನು ಹಾರಿಸಿದ ಅನಘಾ ಇನ್ನಷ್ಟು ಸಾಧನೆ ಮಾಡುವಂತೆ ಮಂಜುನಾಥ ಸ್ವಾಮಿ ಹರಸಲಿ ಎಂದು ಅವರು ಆಶೀರ್ವಾದಿಸಿದರು. ಈ ಸಂದರ್ಭದಲ್ಲಿ ಮಾತೃಶ್ರೀ ಹೇಮಾವತಿ ಹೆಗ್ಗಡೆ, ಅನಘಾ ರ ತಂದೆ ಡಾ.ರಾಜೇಶ್ ಹುಕ್ಕೇರಿ, ತಾಯಿ ಡಾ.ಅನಿತಾ ರಾಜೇಶ್, ಅಜ್ಜಿ ಮೀನಾಕ್ಷಿ ಆರ್ ಪುತ್ರನ್ ಜೊತೆಗಿದ್ದರು.

    ಅನಘಾ ಕಳೆದ 2020 ಜನವರಿ 4 ಹಾಗೂ 5 ರಂದು ಸಿಂಗಾಪುರದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಐಸ್ ಸ್ಕೇಟಿಂಗ್ ನಲ್ಲಿ ಎರಡು ಚಿನ್ನದ ಪದಕ ಪಡೆದು ಅತೀ ಕಿರಿಯ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಚಿನ್ನದ ಪದಕ ಪಡೆದ ದೇಶದ ಮೊದಲ ಸ್ಕೇಟರ್ ಅನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅನಘಾ ಈವರೆಗೆ ಜಿಲ್ಲಾ, ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಒಟ್ಟು 23 ಚಿನ್ನದ ಪದಕ, 9 ಬೆಳ್ಳಿ ಹಾಗೂ 6 ಕಂಚಿನ ಪದಕ ಪಡೆದಿದ್ದಾರೆ.

    ಮಂಗಳೂರಿನ ಅನಘಾ ಡೆಂಟಲ್ ಸ್ಪೆಷಾಲಿಟಿ ಕ್ಲಿನಿಕ್ ನ ವೈದ್ಯರಾದ ಡಾ.ರಾಜೇಶ್ ಹುಕ್ಕೇರಿ ಹಾಗೂ ಡಾ.ಅನಿತಾ ರಾಜೇಶ್ ದಂಪತಿಯ ಪುತ್ರಿಯಾದ ಅನಘಾ, ಬಿಜೈ ಲೂಡ್ರ್ಸ್ ಸೆಂಟ್ರಲ್ ಸ್ಕೂಲ್ ನ ನಾಲ್ಕನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅನಘಾ ಅವರ ಕ್ರೀಡಾ ಸಾಧನೆಯನ್ನು ಪರಿಗಣಿಸಿ ಜನವರಿ 26 ರಂದು ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ದೆಹಲಿಯಲ್ಲಿ ಐಸ್ ಸ್ಕೇಟಿಂಗ್‍ನ ಭಾರತ ತಂಡದ ಕೋಚ್ ಅವಧೂತ್ ಥಾವಡೇ ಅವರಿಂದ ಐಸ್ ಸ್ಕೇಟಿಂಗ್ ತರಬೇತಿ ಪಡೆಯುತ್ತಿರುವ ಅನಘಾ, ಮಂಗಳೂರಿನಲ್ಲಿ ಮೋಹನ್ ದಾಸ್.ಕೆ ಹಾಗೂ ಜಯರಾಜ್ ಕುಕ್ಯಾನ್ ಅವರಿಂದ ರೋಲರ್ ಸ್ಕೇಟಿಂಗ್ ತರಬೇತಿ ಪಡೆಯುತ್ತಿದ್ದಾರೆ.

  • ಸ್ಕೇಟಿಂಗ್‍ನಲ್ಲಿ ಅಂತಾರಾಷ್ಟ್ರೀಯ ಚಿನ್ನದ ಪದಕ ಪಡೆದ ಅನಘಾಗೆ ಸಿಎಂ ಅಭಿನಂದನೆ

    ಸ್ಕೇಟಿಂಗ್‍ನಲ್ಲಿ ಅಂತಾರಾಷ್ಟ್ರೀಯ ಚಿನ್ನದ ಪದಕ ಪಡೆದ ಅನಘಾಗೆ ಸಿಎಂ ಅಭಿನಂದನೆ

    ಮಂಗಳೂರು: ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಅಂತಾರಾಷ್ಟ್ರೀಯ ಐಸ್ ಸ್ಕೇಟಿಂಗ್ ನಲ್ಲಿ ಎರಡು ಚಿನ್ನದ ಪದಕ ಪಡೆದ ಮಂಗಳೂರಿನ ಕುಮಾರಿ ಅನಘಾ ಅವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬೆಂಗಳೂರಿನ ಅವರ ಸ್ವಗೃಹ ಧವಳಗಿರಿಯಲ್ಲಿ ಅಭಿನಂದಿಸಿದರು.

    ಕಿರಿಯ ಪ್ರಾಯದಲ್ಲೇ ಐಸ್ ಸ್ಕೇಟಿಂಗ್ ಅನ್ನುವ ಕಷ್ಟಕರ ಕ್ರೀಡೆಯಲ್ಲಿ ಸಾಧನೆ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಪಡೆದಿರೋದು ಈ ರಾಜ್ಯಕ್ಕೆ ಹೆಮ್ಮೆಯ ವಿಚಾರ, ಮುಂದಿನ ದಿನದಲ್ಲೂ ಈ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯ ಹಾಗೂ ದೇಶಕ್ಕೆ ಹೆಸರು ತರುವಂತೆ ಅವರು ಆಶಿಸಿದರು.

    ಅನಘಾ ಕಳೆದ 2020 ಜನವರಿ 4 ಹಾಗೂ 5 ರಂದು ಸಿಂಗಾಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಐಸ್ ಸ್ಕೇಟಿಂಗ್ ನಲ್ಲಿ ಎರಡು ಚಿನ್ನದ ಪದಕ ಪಡೆದು ಅತೀ ಕಿರಿಯ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಚಿನ್ನದ ಪದಕ ಪಡೆದ ದೇಶದ ಮೊದಲ ಸ್ಕೇಟರ್ ಅನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅನಘಾ ಈವರೆಗೆ ಜಿಲ್ಲಾ, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಒಟ್ಟು 22 ಚಿನ್ನದ ಪದಕ, 9 ಬೆಳ್ಳಿ ಹಾಗೂ 6 ಕಂಚಿನ ಪದಕ ಪಡೆದಿದ್ದಾರೆ.

    ಮಂಗಳೂರಿನ ಕದ್ರಿ ಹಿಲ್ಸ್ ನಿವಾಸಿ, ಅನಘಾ ಡೆಂಟಲ್ ಸ್ಪೆಷಾಲಿಟಿ ಕ್ಲಿನಿಕ್‍ನ ವೈದ್ಯರಾದ ಡಾ.ರಾಜೇಶ್ ಹುಕ್ಕೇರಿ ಹಾಗೂ ಡಾ.ಅನಿತಾ ರಾಜೇಶ್ ದಂಪತಿಯ ಪುತ್ರಿಯಾದ ಅನಘಾ ಬಿಜೈ ಲೂಡ್ರ್ಸ್ ಸೆಂಟ್ರಲ್ ಸ್ಕೂಲ್‍ನ ನಾಲ್ಕನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅನಘಾ ಅವರ ಕ್ರೀಡಾ ಸಾಧನೆಯನ್ನು ಪರಿಗಣಿಸಿ ಜನವರಿ 26 ರಂದು ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

    ದೆಹಲಿಯಲ್ಲಿ ಐಸ್ ಸ್ಕೇಟಿಂಗ್ ನ ಭಾರತ ತಂಡದ ಕೋಚ್ ಅವಧೂತ್ ಥಾವಡೇ ಅವರಿಂದ ಐಸ್ ಸ್ಕೇಟಿಂಗ್ ತರಬೇತಿ ಪಡೆಯುತ್ತಿರುವ ಅನಘಾ, ಮಂಗಳೂರಿನಲ್ಲಿ ತರಬೇತುದಾರರಾದ ಮೋಹನ್ ದಾಸ್.ಕೆ ಹಾಗೂ ಜಯರಾಜ್ ಕುಕ್ಯಾನ್ ಅವರಿಂದ ರೋಲರ್ ಸ್ಕೇಟಿಂಗ್ ತರಬೇತಿ ಪಡೆಯುತ್ತಿದ್ದಾರೆ.

  • ಖೇಲೋ ಇಂಡಿಯಾ: ಚಿನ್ನ ಗೆದ್ದು ರಾಜ್ಯಕ್ಕೆ ಕೀರ್ತಿ ತಂದ ಯುವಕ

    ಖೇಲೋ ಇಂಡಿಯಾ: ಚಿನ್ನ ಗೆದ್ದು ರಾಜ್ಯಕ್ಕೆ ಕೀರ್ತಿ ತಂದ ಯುವಕ

    ಧಾರವಾಡ: ಖೇಲೋ ಇಂಡಿಯಾ ಕ್ರೀಡಾಕೂಟದ ಜಿಮ್ನಾಸ್ಟಿಕ್‍ನಲ್ಲಿ ಧಾರವಾಡ ಯುವಕ ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

    ಆಸ್ಸಾಂನ ಗುವಾಹಟಿಯಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಧಾರವಾಡ ಅಮೃತ ಮುದ್ರಬೆಟ್ಟ ಅವರು ಚಿನ್ನದ ಪದಕ ಪಡೆದಿದ್ದಾರೆ. ಜಿಮ್ನಾಸ್ಟಿಕ್‍ನ ಫ್ಲೋರ್ ಎಕ್ಸಸೈಜ್ ವಿಭಾಗದಲ್ಲಿ ಚಿನ್ನ ಪದಕ ಗಳಿಸಿ ಕೀರ್ತಿ ತಂದಿದ್ದಾರೆ.

    ಧಾರವಾಡದ ಬಾಲ ಮಾರುತಿ ಜಿಮ್ನಾಸ್ಟಿಕ್‍ನ ಕ್ರೀಡಾಪಟುವಾಗಿರುವ ಮುದ್ರಬೆಟ್ಟ ಅವರು, ಖೇಲೋ ಇಂಡಿಯಾದ ಜಿಮ್ನಾಸ್ಟಿಕ್ ವಿಭಾಗದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು. ಉಳಿದಂತೆ ಜಿಮ್ನಾಸ್ಟಿಕ್‍ನ ಫ್ಲೋರ್ ಎಕ್ಸಸೈಜ್‍ನಲ್ಲಿ ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರದ ಕ್ರೀಡಾಪಟುಗಳು ಕ್ರಮವಾಗಿ 2 ಮತ್ತು 3ನೇ ಪಡೆದುಕೊಂಡಿದ್ದಾರೆ.

    ಅಮೃತ ಮುದ್ರಬೆಟ್ಟ ಅವರು ಚಿನ್ನ ಗೆಲ್ಲುತಿದ್ದಂತೆಯೇ ತಂದೆ ನಾಗೇಶ್ ಅವರೊಂದಿಗೆ ಮಾತನಾಡಿ ಸಂತಸ ಹಂಚಿಕೊಂಡಿದ್ದಾರೆ. ಮುದ್ರಬೆಟ್ಟ ಅವರ ಸಾಧನೆಗೆ ಇಡೀ ಕುಟುಂಬ ಸಂತಸ ವ್ಯಕ್ತಪಡಿಸಿದೆ. ಅಮೃತ ಮುದ್ರಬೆಟ್ಟ ಅವರು ಟೆಬಲ್ ವಾಲ್ಟ್ ಹಾಗೂ ಪಾಮೆಲ್ ಹಾರ್ಸ್ ಪಂದ್ಯ ಕೂಡಾ ಆಡಲಿದ್ದು, ಅದರಲ್ಲಿ ಕೂಡಾ ಟಾಪ್ 8 ರಲ್ಲಿದ್ದಾರೆ ಎಂದು ನಾಗೇಶ್ ಅವರು ಮಾಹಿತಿ ನೀಡಿದರು. ಈ ವಿಭಾಗಳಲ್ಲಿ ಅಮೃತ ಬೆಟ್ಟ ಅವರು ಚಿನ್ನ ಗೆಲ್ಲಲಿ ಎಂದು ಕುಟುಂಬಸ್ಥರು ಆಶಯ ವ್ಯಕ್ತಪಡಿಸಿದ್ದಾರೆ.

  • ಶ್ರೀಲಂಕಾದಲ್ಲಿ ಕರಾಟೆ ಸ್ಪರ್ಧೆ – ಬಂಗಾರದ ಪದಕ ಗೆದ್ದ ಚನ್ನಪಟ್ಟಣದ ವಿದ್ಯಾರ್ಥಿಗಳು

    ಶ್ರೀಲಂಕಾದಲ್ಲಿ ಕರಾಟೆ ಸ್ಪರ್ಧೆ – ಬಂಗಾರದ ಪದಕ ಗೆದ್ದ ಚನ್ನಪಟ್ಟಣದ ವಿದ್ಯಾರ್ಥಿಗಳು

    ರಾಮನಗರ: ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಬೊಂಬೆನಗರಿ ಚನ್ನಪಟ್ಟಣ ತಾಲೂಕಿನ ಇಬ್ಬರು ವಿದ್ಯಾರ್ಥಿಗಳು ಬಂಗಾರದ ಪದಕಕ್ಕೆ ಕೊರಳೊಡ್ಡುವ ಮೂಲಕ ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

    ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಕೊಂಡಾಪುರ ಗ್ರಾಮದ ಪೂರ್ಣಿಮಾ ಹಾಗೂ ಪಟ್ಟಣದ ಕೇಂಬ್ರಿಡ್ಜ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಸುಣ್ಣಘಟ್ಟ ಗ್ರಾಮದ ನಿಖಿಲ್ ಈ ಸಾಧನೆ ಮಾಡಿದ ವಿದ್ಯಾರ್ಥಿಗಳಾಗಿದ್ದಾರೆ. ಕಳೆದ 28 ರಂದು ಶ್ರೀಲಂಕಾದಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಕರಾಟೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕರಾಟೆ ಶಿಕ್ಷಕ ಆನಂದ್ ಮಾರ್ಗದರ್ಶನದಲ್ಲಿ ಇಬ್ಬರು ವಿದ್ಯಾರ್ಥಿಗಳು ಸಹ ಕರಾಟೆಯ ತರಬೇತಿ ಪಡೆದು ಶ್ರೀಲಂಕಾಗೆ ಪಯಣಿಸಿ ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದು ತಂದಿದ್ದಾರೆ.

    ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ. ಅಲ್ಲದೇ ಬಡಕುಟುಂಬದ ಹೆಣ್ಣು ಮಗಳೊಬ್ಬಳು ಅಂತರಾಷ್ಟ್ರೀಯ ಮಟ್ಟದಲ್ಲಿ ಕರಾಟೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿರುವುದು ಕುಟುಂಬಸ್ಥರಲ್ಲಿ ಸಂತೋಷ ಮನೆ ಮಾಡುವಂತಾಗಿದೆ.

    ಬಡತನ ಮೆಟ್ಟಿ ನಿಂತ ಕರಾಟೆ ಪಟು
    ಆರ್ಥಿಕ ಸಂಕಷ್ಟದಲ್ಲಿದ್ದ ಕರಾಟೆಪಟು ಪೂರ್ಣಿಮಾಗೆ ಶ್ರೀಲಂಕಾದಲ್ಲಿ ನಡೆಯಲಿದ್ದ ಚಾಂಪಿಯನ್ ಶಿಪ್‍ನಲ್ಲಿ ಪಾಲ್ಗೊಳ್ಳಲು ಹಣದ ಸಮಸ್ಯೆ ಎದುರಾಗಿತ್ತು. ಪ್ರಯಾಣದ ಖರ್ಚನ್ನು ಬರಿಸುವುದಿಲ್ಲ ಎಂದು ರಾಜ್ಯದ ಕರಾಟೆ ಸಂಸ್ಥೆ ತಿಳಿಸಿದ್ದರಿಂದ ಪೂರ್ಣಿಮಾ ಸಾಕಷ್ಟು ಆತಂಕ್ಕೆ ಒಳಗಾಗಿದ್ದರು. ಅಲ್ಲದೇ ಈಗಾಗಲೇ ಸಾಕಷ್ಟು ಸಾಲ ಮಾಡಿ ಮಗಳನ್ನು ವಿದ್ಯಾಭ್ಯಾಸಕ್ಕೆ ಸೇರಿಸಿದ್ದ ತಂದೆ-ತಾಯಿ ಸಹ ಹಣವಿಲ್ಲದೇ ಮಗಳನ್ನು ಶ್ರೀಲಂಕಾಗೆ ಕಳುಹಿಸಲು ಹಿಂದೇಟು ಹಾಕಿದ್ದರು.

    ಇದೇ ವೇಳೆ ಜಿಲ್ಲೆಯ ಹಲವು ದಾನಿಗಳು ಪೂರ್ಣಿಮಾಳ ನೆರವಿಗೆ ನಿಂತು ಧನ ಸಹಾಯ ಮಾಡಿದ್ರು. ರಾಮನಗರ ಜಿಲ್ಲಾ ವಾರ್ತಾಧಿಕಾರಿ ಎಸ್ ಶಂಕರಪ್ಪ ತಮ್ಮ ಕಚೇರಿಗೆ ಪೂರ್ಣಿಮಾಳ ಕುಟುಂಬದವರನ್ನು ಕರೆಸಿಕೊಂಡು ತಮ್ಮ ವೇತನದ ಹಣದಲ್ಲಿ ಪ್ರಯಾಣಕ್ಕೆ ನೆರವಾಗಿದ್ರು. ಇದೇ ವೇಳೆ ವಾರ್ತಾಧಿಕಾರಿಗಳನ್ನು ಭೇಟಿಯಾಗಲು ಬಂದಿದ್ದ ಕ್ರೀಡಾಸಕ್ತರೋರ್ವರು ಕೂಡ ವೈಯಕ್ತಿಕವಾಗಿ 10 ಸಾವಿರ ರೂಪಾಯಿಗಳನ್ನು ನೀಡಿ ಪೂರ್ಣಿಮಾಳು ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಲು ನೆರವಾಗಿದ್ರು.

    ಬಂಗಾರದ ಪದಕ ಗೆದ್ದ ಖುಷಿಯಲ್ಲಿರುವ ಪೂರ್ಣಿಮಾ ತನ್ನ ಆಸೆಗೆ ನೀರೆರೆಯುವ ಮೂಲಕ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಲು ನೆರವಾದ ಪ್ರತಿಯೊಬ್ಬರಿಗೂ ಸಹ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಲ್ಲದೇ ಮುಂದೆ ದೇಶಕ್ಕಾಗಿ ಕ್ರೀಡೆಯಲ್ಲಿ ಭಾಗವಹಿಸಿ ಪದಕ ಗೆದ್ದು ತ್ರಿವರ್ಣ ಧ್ವಜವನ್ನ ಹಿಡಿಯಬೇಕು ಎಂಬ ಮಹದಾಸೆಯನ್ನು ಹೊಂದಿದ್ದಾಳೆ.

  • 1500 ಮೀ. ಓಡಿ ಚಿನ್ನ ಗೆದ್ದು ಮೈದಾನದಲ್ಲೇ ಪ್ರಾಣ ಬಿಟ್ಟ 78 ವರ್ಷದ ಸ್ಪರ್ಧಿ

    1500 ಮೀ. ಓಡಿ ಚಿನ್ನ ಗೆದ್ದು ಮೈದಾನದಲ್ಲೇ ಪ್ರಾಣ ಬಿಟ್ಟ 78 ವರ್ಷದ ಸ್ಪರ್ಧಿ

    ಚಂಢೀಗಡ: 78 ವರ್ಷದ ವೃದ್ಧರೊಬ್ಬರು 1500 ಮೀ. ಓಡಿ ಚಿನ್ನದ ಪದಕ ಗೆದ್ದು ಮೈದಾನದಲ್ಲೇ ಮೃತಪಟ್ಟ ಘಟನೆಯೊಂದು ಪಂಜಾಬ್‍ನ ಸಂಗ್ರೂರ್‍ನಲ್ಲಿ ನಡೆದಿದೆ.

    ಬಕ್ಷೀಶ್ ಸಿಂಗ್ ಮೃತಪಟ್ಟ ವ್ಯಕ್ತಿ. ಪಂಜಾಬ್ ಮಾಸ್ಟರ್ ಅಥ್ಲೆಟಿಕ್ ಅಸೋಸಿಯೇಷನ್ ವೃದ್ಧರಿಗೆ ಅಥ್ಲೆಟಿಕ್ ಮೀಟ್ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಬಕ್ಷೀಶ್ ಸಿಂಗ್ ಭಾಗವಹಿಸಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಬಳಿಕ ಮೈದಾನದಲ್ಲಿಯೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.

    1500 ಮೀ. ರೇಸ್ ಪೂರ್ಣಗೊಳಿಸಿದ ನಂತರ ಬಕ್ಷೀಶ್ ವಿಶ್ರಾಂತಿ ಪಡೆಯುತ್ತಿದ್ದರು. ಇದೇ ವೇಳೆ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಸಿಂಗ್ರೂರ್ ನ ಸಿವಿಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ವೈದ್ಯರು ಬಕ್ಷೀಶ್ ಸಿಂಗ್ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

    ಕಳೆದ ಶನಿವಾರ ಈ ಅಥ್ಲೆಟಿಕ್ ಮೀಟ್ ಆಯೋಜಿಸಲಾಗಿತ್ತು. 1500 ಮೀ. ಓಟದಲ್ಲಿ ಬಕ್ಷೀಶ್ ಚಿನ್ನದ ಪದಕ ಗೆದ್ದಿದ್ದರು ಎಂದು ಸಂಬಂಧಿ ಮಹಿಂದರ್ ಸಿಂಗ್ ವರ್ಕ್ ತಿಳಿಸಿದ್ದಾರೆ. ಬಕ್ಷೀಶ್ ತಮ್ಮ ಓಟವನ್ನು ಪೂರ್ಣಗೊಳಿಸಿದ್ದು ಸಂತಸ ತಂದಿದೆ ಎಂದು ಜೊತೆಯಲ್ಲಿದ್ದವರಿಗೆ ಹೇಳಿದ್ದರು.

    ವಿಶ್ರಾಂತಿ ಪಡೆಯಲು ಬಕ್ಷೀಶ್ ಮೊದಲು ತಮ್ಮ ಉಡುಪನ್ನು ಧರಿಸಲು ಹೋಗಿದ್ದರು. ಆದರೆ ಅವರಿಗೆ ತಮ್ಮ ಉಡುಪನ್ನು ಧರಿಸಲು ಆಗಲಿಲ್ಲ. ಈ ವೇಳೆ ಬಕ್ಷೀಶ್ ಅಲ್ಲಿಯೇ ಕುಸಿದು ಬಿದ್ದರು. ಬಕ್ಷೀಶ್‍ಗೆ ಓಡುವುದು ಎಂದರೆ ತುಂಬಾ ಇಷ್ಟ. ಅಲ್ಲದೆ ಅವರು ಯಾವಾಗಲೂ ನಾನು ಸತ್ತರೆ ಮೈದಾನದಲ್ಲಿಯೇ ಆಟಗಾರನಾಗಿ ಸಾಯಬೇಕು ಎಂದು ಹೇಳುತ್ತಿದ್ದರು ಎಂದು ಬಕ್ಷೀಶ್ ಸ್ನೇಹಿತರು ತಿಳಿಸಿದ್ದಾರೆ.

    ಬಕ್ಷೀಶ್ ಸಿಂಗ್ ಮೊದಲು ಸೈನ್ಯೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ನಿವೃತ್ತಿ ಪಡೆದ ಬಳಿಕ ಅವರು ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ. 1982ರಲ್ಲಿ ಅವರು ಕ್ರೀಡೆಯಲ್ಲಿ ಭಾಗವಹಿಸಲು ಶುರು ಮಾಡಿದ್ದರು. ಬಕ್ಷೀಸ್ ಅವರು ಇವರೆಗೂ 200ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ. ಅಲ್ಲದೆ ಬೇರೆ ಬೇರೆ ರಾಜ್ಯಗಳಲ್ಲಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಬಕ್ಷೀಶ್ 800, 1500 ಹಾಗೂ 5000 ಮೀ. ಓಡುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರು.

  • ಕಾಮನ್ ವೆಲ್ತ್ ಗೇಮ್ಸ್‌ನಲ್ಲಿ ಕನ್ನಡಿಗನ ಸಾಧನೆ

    ಕಾಮನ್ ವೆಲ್ತ್ ಗೇಮ್ಸ್‌ನಲ್ಲಿ ಕನ್ನಡಿಗನ ಸಾಧನೆ

    – 2 ಚಿನ್ನದ ಪದಕ ಗೆದ್ದ ಋತ್ವಿಕ್

    ಬೆಂಗಳೂರು: ಕಾಮನ್ ವೆಲ್ತ್ ಗೇಮ್‍ನಲ್ಲಿ ಕನ್ನಡಿಗ ಋತ್ವಿಕ್ ಅಲೆವೂರಾಯ ಎರಡು ಚಿನ್ನದ ಪದಕ ಗೆದ್ದು ಕೀರ್ತಿ ತಂದಿದ್ದಾರೆ.

    ಕೆನಡಾದ ಸೈಂಟ್ ಜಾನ್ಸ್‌ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಅಂತಾರಾಷ್ಟ್ರೀಯ ಬೆಂಚ್ ಪ್ರೆಸ್ ಪವರ್ ಲಿಫ್ಟ್ ಚಾಂಪಿಯನ್‍ಶಿಪ್‍ನಲ್ಲಿ ಋತ್ವಿಕ್ ಸ್ಪರ್ಧಿಸಿದ್ದರು. ಈ ಚಾಂಪಿಯನ್‍ಶಿಪ್‍ನಲ್ಲಿ ಋತ್ವಿಕ್ ಎರಡು ಚಿನ್ನದ ಪದಕವನ್ನು ಗೆದ್ದು ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಮಂಗಳವಾರ ನಡೆದ ಸ್ಪರ್ಧೆಯಲ್ಲಿ 83 ಕಿಲೋ ಸಬ್ ಜೂನಿಯರ್ ವಿಭಾಗದಲ್ಲಿ ಋತ್ವಿಕ್ ಭಾರತದಿಂದ ಪ್ರತಿನಿಧಿಸಿ ಎರಡು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಕ್ಲಾಸಿಕ್ ಹಾಗೂ ಎಕ್ವಿಡ್ ವಿಭಾಗದಲ್ಲಿ ಭಾರ ಎತ್ತಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಪ್ರಶಂಸೆಗೆ ಭಾಜನರಾಗಿದ್ದಾರೆ. ಮೂಲತಃ ಮಂಗಳೂರಿನವರಾದ ಋತ್ವಿಕ್, ವಾಸುದೇವ ಭಟ್ ಹಾಗೂ ದೀಪಾ ದಂಪತಿ ಪುತ್ರ. ಋತ್ವಿಕ್ ಅವರು ತರಬೇತಿಗಾರ ಪ್ರದೀಪ್ ಆಚಾರ್ಯ ಅವರಿಂದ ತರಬೇತಿ ಪಡೆಯುತ್ತಿದ್ದು, ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

  • ಅಂತರಾಷ್ಟ್ರೀಯ ಮಾಡೆಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಕಲಬುರಗಿಯ ಬಾಲಕಿ

    ಅಂತರಾಷ್ಟ್ರೀಯ ಮಾಡೆಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಕಲಬುರಗಿಯ ಬಾಲಕಿ

    ಕಲಬುರಗಿ: ಬಿಸಿಲು ನಾಡು ಕಲಬುರಗಿಯ ಬಾಲಕಿ ಮಾಡಲಿಂಗ್ ಮೂಲಕ ದೇಶದ ಗಮನ ಸೆಳೆದಿದ್ದು, ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.

    ಹಾಂಕಾಂಗ್‍ನಲ್ಲಿ ಇತ್ತೀಚೆಗೆ ನಡೆದ ಜೂನಿಯರ್ ಇಂಟರ್ ನ್ಯಾಷನಲ್ ಮಾಡೆಲ್ ಸ್ಪರ್ಧೆಯಲ್ಲಿ, ಕಲಬುರಗಿಯ ಅನನ್ಯ ರೈ ಚಿನ್ನದ ಪದಕ ಗಳಿಸಿದ್ದಾಳೆ. ಭಾರತದ ಪರ ಜೂನಿಯರ್ ಮಾಡೆಲಿಂಗ್‍ನಲ್ಲಿ ಇದೇ ಮೊದಲ ಬಾರಿಗೆ ರಾಜ್ಯದಿಂದ ಆಯ್ಕೆಯಾದ ಮಾಡೆಲ್ ಅನನ್ಯ ಆಗಿದ್ದಾಳೆ. ದೇಶದಲ್ಲಿ ಮಿಂಚಿದ್ದ ಅನನ್ಯ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಪ್ರತಿಭೆಯನ್ನು ಅನಾವರಣಗೊಳಿಸಿ, ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾಳೆ.

    ಅನನ್ಯ ತಮ್ಮ ತಂದೆ-ತಾಯಿಯ ಏಕೈಕ ಪುತ್ರಿ. ಅನನ್ಯಳ ತಂದೆ ಹೋಟೆಲ್ ಉದ್ಯಮಿ ಆಗಿದ್ದು, ತಾಯಿ ರೂಪಾಕ್ಷಿ ಅವರು ಕಲಬುರಗಿಯ ಜೆಸ್ಕಾಂ ಇಲಾಖೆಯಲ್ಲಿ ಜೆಇ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನನ್ಯ ಹೈದರಾಬಾದ್‍ನ ನರ್ಸರಿ ಶಾಲೆಯಲ್ಲಿ ಕ್ಯಾಟ್‍ವಾಕ್ ಮಾಡಿ ಬಹುಮಾನ ಗೆದಿದ್ದಳು. ಬಳಿಕ ಅನನ್ಯ ಮಾಡೆಲ್ ಆಗಬೇಕೆಂಬ ಆಸೆಯನ್ನು ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಳು.

    ಹೈದರಾಬಾದ್‍ನ ಚೈತನ್ಯ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಅನನ್ಯ 9ನೇ ತರಗತಿ ಓದುತ್ತಿದ್ದಾಳೆ. ಏಪ್ರಿಲ್ 27ರಿಂದ 29ರವರೆಗೆ ಕೇರಳದ ಕ್ಯಾಲಿಕಟ್‍ನಲ್ಲಿ ಜ್ಯೂನಿಯರ್ ಮಾಡೆಲ್ ಇಂಟರ್ ನ್ಯಾಷನಲ್ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಅನ್ಯನ ಪ್ರದರ್ಶನ ನೀಡಿ ಹಾಂಕಾಂಗ್‍ನಲ್ಲಿ ನಡೆದ ಸ್ಪರ್ಧಕ್ಕೆ ಆಯ್ಕೆ ಆಗಿದ್ದಳು.

    ಅನನ್ಯ ತಾಯಿ ಸುಮಿತ್ರ ರೈ ಅವರು ತಮ್ಮ ಮಗಳ ಡಯಟ್ ಬಗ್ಗೆ ನಿರ್ಧರಿಸುತ್ತಾರೆ. ಆರೋಗ್ಯ ಮತ್ತು ಸೌಂದರ್ಯವನ್ನು ನೋಡಿಕೊಳ್ಳುವ ಸಲುವಾಗಿ ಅನನ್ಯ ಜಂಕ್ ಫುಡ್ ತಿನ್ನುವುದಿಲ್ಲ. ಸದ್ಯ ಅನನ್ಯ ಈಗ ಲೀ ಬ್ರಾಂಡ್ ಜೀನ್ಸ್ ಹಾಗೂ ಅರುಣ್ ಐಸ್‍ಕ್ರೀಂ ಜಾಹೀರಾತಿಗೆ ಆಯ್ಕೆ ಆಗಿದ್ದಾಳೆ.

  • ಸಿಂಧು ಜಿಮ್ ಟ್ರೈನಿಂಗ್ ವಿಡಿಯೋ ನೋಡಿ ಆಯಾಸಗೊಂಡೆ ಎಂದ ಆನಂದ್ ಮಹೀಂದ್ರಾ

    ಸಿಂಧು ಜಿಮ್ ಟ್ರೈನಿಂಗ್ ವಿಡಿಯೋ ನೋಡಿ ಆಯಾಸಗೊಂಡೆ ಎಂದ ಆನಂದ್ ಮಹೀಂದ್ರಾ

    ನವದೆಹಲಿ: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ನಲ್ಲಿ ಭಾರತಕ್ಕೆ ಚಿನ್ನ ತಂದ ಆಟಗಾರ್ತಿ ಪಿ.ವಿ ಸಿಂಧು ಅವರು ಅಭ್ಯಾಸ ಮಾಡುವ ವಿಡಿಯೋ ನೋಡಿ ನಾನು ಆಯಾಸಗೊಂಡೆ ಎಂದು ಉದ್ಯಮಿ ಅನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.

    ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಪರ ಮೊದಲ ಬಾರಿಗೆ ಚಿನ್ನ ಗೆದ್ದ ಪಿ.ವಿ ಸಿಂಧು ಅವರು ಹೈದರಾಬಾದಿನ ಸುಚಿತ್ರಾ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಟ್ವೀಟ್ ಮಾಡಿರುವ ಅನಂದ್ ಮಹೀಂದ್ರಾ ತುಂಬಾ ಕ್ರೂರವಾಗಿದೆ ಈ ಅಭ್ಯಾಸ. ಈ ವಿಡಿಯೋ ನೋಡಿಯೇ ನಾನು ದಣಿದಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಆಕೆಯ ಅಭ್ಯಾಸ ಮಾಡುವ ವಿಡಿಯೋ ನೋಡಿಯೇ ನಾನು ದಣಿದಿದ್ದೇನೆ. ಆಕೆ ವಿಶ್ವ ಚಾಂಪಿಯನ್ ಎಂಬುದರಲ್ಲಿ ಯಾವುದೇ ರಹಸ್ಯವಿಲ್ಲ. ಉದಯೋನ್ಮುಖ ಭಾರತೀಯ ಕ್ರೀಡಾಪಟುಗಳು ಆಕೆಯನ್ನು ಅನುಸರಿಸಬೇಕು ಮತ್ತು ಉನ್ನತವಾದದ್ದನ್ನು ಸಾಧಿಸಲು ಆಕೆಯ ಬದ್ಧತೆಯನ್ನು ನೋಡಿ ಕಲಿಯಬೇಕು ಎಂದು ವಿಡಿಯೋ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸಿಂಧು ಅವರು ರನ್ನಿಂಗ್ ಮಾಡುತ್ತಿರುವುದು, ವೇಟ್ ಲಿಫ್ಟಿಂಗ್ ಸೇರಿದಂತೆ ಹಲವು ಅಭ್ಯಾಸಗಳನ್ನು ಮಾಡುತ್ತಿರುವುದು ಸೆರೆಯಾಗಿದೆ.

    ಭಾನುವಾರ ನಡೆದ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಪಿ.ವಿ ಸಿಂಧು ಅವರು ಜಪಾನ್ ದೇಶದ ಒಕುಹಾರ ಅವರ ವಿರುದ್ಧ 21-7, 21-7 ರ ನೇರ ಸೆಟ್‍ನಲ್ಲಿ ಗೆದ್ದು ಚಿನ್ನಕ್ಕೆ ಕೊರಳೊಡ್ಡಿದರು. ಪಂದ್ಯದ ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಸಿಂಧು ನೇರ ಸೆಟ್‍ನಲ್ಲಿ ಸುಲಭವಾಗಿ ಜಯಸಾಧಿಸಿದರು. ಈ ಮೂಲಕ ಭಾರತದ ಪರ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಗೆದ್ದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

    ಚಿನ್ನ ಗೆದ್ದು ಭಾರತಕ್ಕೆ ವಾಪಸ್ ಬಂದ 24 ವರ್ಷದ ಪಿ.ವಿ ಸಿಂಧು, ಈ ವಿಜಯಕ್ಕಾಗಿ ತುಂಬಾ ದಿನಗಳಿಂದ ತಯಾರಿಯಾಗಿದ್ದೆ. ಇದಕ್ಕಾಗಿ ನನ್ನ ಪೋಷಕರಿಗೆ ಮತ್ತು ನನ್ನ ತರಬೇತುಗಾರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇವರ ಬೆಂಬಲವಿಲ್ಲದೆ ನಾನು ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಗೆಲ್ಲಲು ಆಗುತ್ತಿರಲಿಲ್ಲ. ಮುಖ್ಯವಾಗಿ ನನ್ನ ಪ್ರಯೋಜಕರಿಗೆ ಮತ್ತು ನನ್ನನ್ನು ಬೆಂಬಲಿಸಿದ ನನ್ನ ಅಭಿಮಾನಿಗಳಿಗೆ ಧನ್ಯವಾದಗಳು ಎಂದು ಪಿ.ವಿ ಸಿಂಧು ಹೇಳಿದ್ದಾರೆ.

    ವಿಶ್ವ ಚಾಂಪಿಯನ್‍ಶಿಪ್ ಮುಗಿಸಿ ಸೋಮವಾರ ರಾತ್ರಿ ದೆಹಲಿಗೆ ಬಂದಿಳಿದ ಪಿ.ವಿ ಸಿಂಧು ಅವರನ್ನು ಅದ್ಧೂರಿಯಾಗಿ ಸ್ವಾಗತ ಮಾಡಲಾಯಿತು. ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ರೀಡಾ ಸಚಿವ ಕಿರೆನ್ ರಿಜಿಜು ಅವರನ್ನು ಮಂಗಳವಾರ ಭೇಟಿಯಾದರು. ಈ ಸಮಯದಲ್ಲಿ ಸಿಂಧು ಅವರನ್ನು “ಭಾರತದ ಹೆಮ್ಮೆ” ಎಂದು ಕರೆದ ಮೋದಿ ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸಿದರು.