Tag: ಚಿದಾನಂದ ಮೂರ್ತಿ

  • ಆರ್‌ಪಿಸಿ ಲೇಔಟ್ ಲೈಬ್ರರಿಗೆ ಚಿದಾನಂದಮೂರ್ತಿ ಹೆಸರಿಡಲು ಚಿಂತನೆ

    ಆರ್‌ಪಿಸಿ ಲೇಔಟ್ ಲೈಬ್ರರಿಗೆ ಚಿದಾನಂದಮೂರ್ತಿ ಹೆಸರಿಡಲು ಚಿಂತನೆ

    ಬೆಂಗಳೂರು: ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಎಂ. ಚಿದಾನಂದಮೂರ್ತಿಯವರ ಹೆಸರನ್ನು ಆರ್‌ಪಿಸಿ ಲೇಔಟ್ ನಲ್ಲಿರುವ ಲೈಬ್ರರಿಗೆ ಇಡುವ ಚಿಂತನೆಯನ್ನು ಸರ್ಕಾರ ಮಾಡಿದೆ.

    ಶನಿವಾರ ಸಂಜೆ ಬಿಎಸ್ ಯಡಿಯೂರಪ್ಪ ಅವರು ಚಿ.ಮೂ ಅಂತಿಮ ದರ್ಶನ ಪಡೆದ ಸಮಯದಲ್ಲಿ ಸ್ಥಳೀಯರು ಸಿಎಂ ಜೊತೆ ಮಾತಾನಾಡಿ ಚಿದಾನಂದಮೂರ್ತಿ ಅವರ ಕೆಲಸ- ಕಾರ್ಯಗಳನ್ನ ನೆನಪಿಸಿದ್ರು. ಜೊತೆಗೆ ಚಿದಾನಂದಮೂರ್ತಿ ಅವರ ಹೆಸರನ್ನ ಲೈಬ್ರರಿಗೆ ಇಡಬೇಕು ಎಂದು ಮೌಖಿಕವಾಗಿ ಮನವಿ ಮಾಡಿದರು.

    ಈ ವೇಳೆ ಸಿಎಂ ಅವರು ಕೂಡ ಸ್ಥಳೀಯರ ಮನವಿಗೆ ಸ್ಪಂದಿಸಿದ್ದು, ಸ್ಥಳೀಯ ಶಾಸಕರು ಹಾಗೂ ಸಚಿವರಾಗಿರೋ ವಿ.ಸೋಮಣ್ಣ ಜೊತೆ ಮಾತಾನಾಡಿ ಆಯ್ತು ಚಿದಾನಂದಮೂರ್ತಿ ಅವರ ಹೆಸರನ್ನ ಲೈಬ್ರರಿಗೆ ನಾಮಕಾರಣ ಮಾಡುವ ಚಿಂತನೆ ಮಾಡುತ್ತೇವೆ ಎಂದಿದ್ದಾರೆ.

    ವಯೋಸಹಜ ಕಾಯಿಲೆಯಿಂದ ಚಿದಾನಂದಮೂರ್ತಿ ಅವರು ಶನಿವಾರ ವಿಧಿವಶರಾಗಿದ್ದರು. ಚಿಮೂ ಮೃತದೇಹದ ಅಂತಿಮ ದರ್ಶನದ ವ್ಯವಸ್ಥೆಯನ್ನ ಅವರ ನಿವಾಸ ಮಿಂಚುವಿನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯದ ಅನೇಕ ಗಣ್ಯ ಸಾಹಿತಿಗಳು ವಿದ್ಯಾರ್ಥಿಗಳು ಚಿಮೂ ಅವರ ಅಂತಿಮ ದರ್ಶನ ಪಡೆದು ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಶ್ರದ್ಧಾಂಜಲಿ ಅರ್ಪಿಸಿದ್ದರು.

    ಇಂದು ಸುಮನಹಳ್ಳಿಯಲ್ಲಿರೋ ವಿದ್ಯುತ್ ಚಿತಾಗಾರದಲ್ಲಿ ಯಾವುದೇ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡದೇ ಅಂತ್ಯಕ್ರಿಯೆ ನರವೇರಿಸಲಾಯಿತು.

  • ಬಿಎಸ್‍ವೈ ಆಫರ್ ತಿರಸ್ಕರಿಸಿದ್ರು ಚಿಮೂ

    ಬಿಎಸ್‍ವೈ ಆಫರ್ ತಿರಸ್ಕರಿಸಿದ್ರು ಚಿಮೂ

    ಬೆಂಗಳೂರು: ಸಂಶೋಧಕ, ಇತಿಹಾಸಕಾರ ಚಿದಾನಂದ ಮೂರ್ತಿ ಈ ಹಿಂದೆ ಸಿಎಂ ಬಿ.ಎಸ್.ಯಡಿಯೂರಪ್ಪ ನೀಡಿದ್ದ ಆಫರ್ ತಿರಸ್ಕರಿಸಿದ್ದರು.

    ಸಂಶೋಧಕರಾಗಿ, ಇತಿಹಾಸಕಾರಾಗಿ ಚಿಮೂ ಸಾಧನೆ ಅಪಾರ. ಅಷ್ಟೆಲ್ಲ ಸಾಧನೆ ಮಾಡಿದ್ರು ಚಿಮೂ ಅವರು ಸರಳವಾಗಿ ಬದುಕಿದ್ದರು. ಹಿಂದುತ್ವ, ಕನ್ನಡದ ಅಸ್ಮಿತೆಗಾಗಿ ಹೋರಾಡುತ್ತಿದ್ದ ಚಿಮೂ ಅವರಿಗೆ ಸಿಎಂ ಬಿಎಸ್ ವೈ ಸೇರಿದಂತೆ ರಾಜಕೀಯ ಮುಖಂಡರ ಜೊತೆ ಒಡನಾಟವಿತ್ತು. ಆದರೆ ಅದನ್ನು ಅವರ ಸ್ವಾರ್ಥಕ್ಕೆ ಬಳಸಿಕೊಂಡಿರಲಿಲ್ಲ. ಈ ಹಿಂದೆ ವಿಧಾನ ಪರಿಷತ್ ಸ್ಥಾನ ಕೊಡ್ತೀನಿ ಬನ್ನಿ ಎಂದು ಯಡಿಯೂರಪ್ಪನವರು ಆಫರ್ ನೀಡಿದ್ದರಂತೆ ಆದರೆ ರಾಜಕೀಯ ನನಗೆ ಒಗ್ಗಲ್ಲ ಅಂತಾ ಒಂದೇ ಬಾರಿಗೆ ಆಫರ್ ತಿರಸ್ಕರಿಸಿದ್ದರು.

    ಇಂದು ಚಿಮೂ ಅವರ ಅಂತಿಮ ದರ್ಶನ ಪಡೆದ ಸಿಎಂ ಅವರ ಜೊತೆಗಿನ ಒಡನಾಟವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡರು.

  • ಯಾವುದೇ ವಿಧಿವಿಧಾನವಿಲ್ಲದೇ ಅಂತ್ಯಕ್ರಿಯೆ: ಚಿಮೂ ಪುತ್ರ

    ಯಾವುದೇ ವಿಧಿವಿಧಾನವಿಲ್ಲದೇ ಅಂತ್ಯಕ್ರಿಯೆ: ಚಿಮೂ ಪುತ್ರ

    ಬೆಂಗಳೂರು: ಹಿರಿಯ ಸಂಶೋಧಕ, ಕನ್ನಡ ಭಾಷೆ, ಗಡಿನಾಡಿನ ಬಗ್ಗೆ ಹೆಚ್ಚು ಸಂಶೋಧನೆ ಮಾಡಿದ್ದ ಚಿದಾನಂದ ಮೂರ್ತಿ ಅವರು ಶನಿವಾರ ಬೆಳಗ್ಗೆ 4 ಗಂಟೆ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

    ಭಾನುವಾರ 11 ಗಂಟೆ ನಂತರ ಅವರ ಅಂತ್ಯಸಂಸ್ಕಾರ ನಡೆಯಲಿದೆ. ಆದರೆ ಅವರ ಕುಟುಂಬ ತೆಗೆದುಕೊಂಡ ನಿರ್ಧಾರ ಎಲ್ಲರಿಗೂ ಕುತೂಹಲ ಮೂಡಿಸಿದೆ.

    ಮಾಧ್ಯಮಕ್ಕೆ ಮಾಹಿತಿ ನೀಡಿದ ಚಿಮೂ ಪುತ್ರ ವಿನಯ್ ಕುಮಾರ್, ನಮ್ಮ ತಂದೆ ನಿಧನರಾಗಿದ್ದು ಕೇವಲ ಸಂಸಾರದ ನಷ್ಟವಲ್ಲ. ರಾಷ್ಟ್ರದ ನಷ್ಟ. ಚಿದಾನಂದಮೂರ್ತಿ ನಮ್ಮ ದೇಶದ ಆಸ್ತಿ. ಕರ್ನಾಟಕ, ಕನ್ನಡ ಅದನ್ನು ಮೀರಿ ಭಾರತಿಯರಾಗಬೇಕು ಎನ್ನುವುದನ್ನು ಯಾವಾಗಲೂ ಹೇಳುತ್ತಿದ್ದರು. ಮಾತೃಭಾಷೆಯನ್ನು ಯಾರೂ ಬಿಡಬಾರದು ಎನ್ನುವುದು ಅವರ ಆಸೆಯಾಗಿತ್ತು. ಅವರ ಕಡೆ ಆಸೆಯಂತೆ ಅವರ ವಿಧಿವಿಧಾನ ನಡೆಸಲಾಗುತ್ತೆ ಎಂದರು.

    ವೀರಶೈವರಾದರೂ ನಮ್ಮ ತಂದೆಯಾಗಲಿ ನಾವಾಗಲಿ ವಿಭೂತಿ ಸಹ ಹಚ್ಚಿರಲಿಲ್ಲ. ಅವರು ಸಹ ಹಾಗೆ ಬದುಕಿದ್ದರು. ಪೂಜೆ ಸಹ ಅವರು ಮಾಡುತ್ತಿರಲಿಲ್ಲ. ಕುಟುಂಬದಿಂದ ಪೂಜೆ ಎಂದು ಮಾಡಲ್ಲ. ಲಿಂಗಾಯತರಲ್ಲಿ ಹೂಳುವ ಪದ್ಧತಿ ಇದೆ ಯಾಕೆ ಸುಡುತ್ತೀರ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಆದರೆ ಅವರ ಆಸೆಯನ್ನು ನಾವು ನೆರವೇರಿಸಬೇಕಿದೆ. ಯಾವುದೇ ವಿಧಾನವನ್ನೂ ಅನುಸರಿಸಲ್ಲ. ಪೂಜೆಯನ್ನು ಸಹ ಮಾಡಲ್ಲ. ಸರ್ಕಾರಿ ಗೌರವ ಹೊರತುಪಡಿಸಿ ನಾವೇನೂ ವಿಧಾನವನ್ನು ಅನುಸರಿಸಲ್ಲ. ಹೂಳುವ ಪದ್ಧತಿ ಇದ್ರೂ ನಮ್ಮ ತಂದೆಯ ಇಚ್ಛೆಯಂತೆ ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ಅವರ ಅಂತ್ಯಸಂಸ್ಕಾರ ನಡೆಸುವ ತೀರ್ಮಾನವನ್ನು ನಾವು ಮಾಡಿದ್ದೇವೆ ಎಂದು ಹೇಳಿದ್ದಾರೆ.

  • ಅಮಿತ್ ಶಾಗೆ ಸಲಹೆ ಕೊಟ್ಟಿದ್ದ ಚಿದಾನಂದ ಮೂರ್ತಿ!

    ಅಮಿತ್ ಶಾಗೆ ಸಲಹೆ ಕೊಟ್ಟಿದ್ದ ಚಿದಾನಂದ ಮೂರ್ತಿ!

    ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಹಿರಿಯ ಸಾಹಿತಿ, ಸಂಶೋಧಕ ಚಿದಾನಂದ ಮೂರ್ತಿಯವರು ಸಲಹೆ ಕೊಟ್ಟಿದ್ದರು.

    ಹೌದು. ಖುದ್ದು ಅಮಿತ್ ಶಾ ಅವರು ಬಿಜೆಪಿ ಪ್ರಣಾಳಿಕೆಯಲ್ಲಿ ಏನೆಲ್ಲ ಸೇರಿಸಬೇಕು ಅನ್ನುವ ಸಲಹೆ ಕೇಳಲು ಚಿಮೂ ಮನೆಗೆ ಬಂದಿದ್ದರು. ಈ ವೇಳೆ ಚಿಮೂ ಅಮಿತ್ ಶಾಗೆ ಪಂಚ ಸಲಹೆ ಕೂಡ ಕೊಟ್ಟಿದ್ದರು.

    ಬಿಳಿ ನಿಲುವಂಗಿ, ಅದರ ಮೇಲೊಂದು ತ್ರಿವರ್ಣ ಧ್ವಜದ ಸಿಂಬಲ್. ಟಿಪ್ಪು, ಹಿಂದುತ್ವ, ಲಿಂಗಾಯತ ಧರ್ಮದ ವಿಚಾರ ಬಂದರೆ ಗಂಟೆಗಟ್ಲೆ ಮಾತಾನಾಡುವ ಛಾತಿ. ಮಗುವಿನ ಮುಖದ ಚಿಮೂ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅದೆಷ್ಟು ಬಾರಿ ಗಲಾಟೆ ಮಾಡಿದ್ದಾರೋ ಗೊತ್ತಿಲ್ಲ. ಟಿಪ್ಪುನ ಕಟ್ಟಾ ವಿರೋಧಿಯಾಗಿದ್ದ ಚಿದಾನಂದ ಮೂರ್ತಿ ಟಿಪ್ಪು ಜಯಂತಿ ಆಚರಣೆಗೆ ಭಾರೀ ವಿರೋಧ ಒಡ್ಡಿದ್ದರು. ಇಷ್ಟು ಮಾತ್ರವಲ್ಲದೇ ಹಂಪಿ ಸ್ಮಾರಕ ರಕ್ಷಣೆಗೂ ಓಡಾಡಿದ್ದ ಚಿಮೂ ಪೌರತ್ವ ಕಾಯ್ದೆಯ ಬಗ್ಗೆಯೂ ಬೆಂಬಲಿಸಿ ಮಾತಾನಾಡಿದ್ದರು. ಲಿಂಗಾಯತ ಧರ್ಮ ಒಡೆಯುವ ವಿಚಾರ ಬಂದಾಗ ಅದನ್ನು ಖಂಡಿಸಿ ಹೋರಾಟ ಮಾಡಿದ್ದರು.

    ಒಟ್ಟಿನಲ್ಲಿ ಸಂಶೋಧಕರಾಗಿ ಅನೇಕ ಅಧ್ಯಯನವನ್ನು ಮಾಡಿ, ಕನ್ನಡ ಸಂಶೋಧನಾ ಜಗತ್ತಿಗೆ ಹೊಸ ಆಯಾಮವನ್ನು ಕೂಡ ಚಿದಾನಂದ ಮೂರ್ತಿ ಕೊಟ್ಟಿರುವುದನ್ನು ಸ್ಮರಿಸಬಹುದು.

  • ತಂದೆಯ ಶವಕ್ಕೆ ಹೂವಿನ ಹಾರ ಹಾಕ್ಬೇಡಿ- ಜನ್ರಲ್ಲಿ ಚಿಮೂ ಮಗ ಮನವಿ

    ತಂದೆಯ ಶವಕ್ಕೆ ಹೂವಿನ ಹಾರ ಹಾಕ್ಬೇಡಿ- ಜನ್ರಲ್ಲಿ ಚಿಮೂ ಮಗ ಮನವಿ

    ಬೆಂಗಳೂರು: ಹಿರಿಯ ಸಾಹಿತಿ ಸಂಶೋಧಕ ಚಿದಾನಂದ ಮೂರ್ತಿ ವಯೋಸಹಜ ಕಾಯಿಲೆಯಿಂದ ಇಂದು ಸಾವನ್ನಪ್ಪಿದ್ದಾರೆ. ಹೀಗಾಗಿ ಅವರ ಅಂತಿಮ ದರ್ಶನಕ್ಕೆ ಬರುವವರಿಗೆ ಹೂವಿನ ಹಾರ ಹಾಕಲು ಅವಕಾಶ ನೀಡಿಲ್ಲ.

    ಹೌದು. ಚಿಮೂ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಬರುತ್ತಿರುವ ಎಲ್ಲರೂ ಹೂವಿನ ಹಾರ ಹಾಕಿ ಅಂತಿಮ ಗೌರವ ನೀಡಲು ಮುಂದಾದರು. ಆದರೆ ಅವರ ಪುತ್ರ ಚಿಮೂ ದೇಹದ ಮೇಲೆ ಹೂವಿನ ಹಾರಹಾಕಲು ಅವಕಾಶ ನೀಡಲಿಲ್ಲ. ಯಾಕೆಂದರೆ ಚಿಮೂ ಕೊನೆಯಾಸೆ ಅದೇ ಆಗಿತ್ತು. ಯಾವುದೇ ಪೂಜೆ ನಡೆಸೋದು, ಹೂವಿನ ಹಾರ ಹಾಕೋದು ಬೇಡ ಎಂದು ಚಿಮೂ ತನ್ನ ಮಗನಲ್ಲಿ ಹೇಳಿದ್ದರಂತೆ. ಹೀಗಾಗಿ ಮಗನೇ ಖುದ್ದು ಬಂದವರಿಗೆ ಮನವಿ ಮಾಡಿಕೊಂಡರು.

    ಅಪ್ಪ ಅವರಿಚ್ಛೆಯಂತೆ ಬದುಕಿದ್ರು. ಅದೇ ರೀತಿ ಅಂತಿಮ ಇಚ್ಛೆಯನ್ನು ಈಡೇರಿಸಬೇಕಾಗಿದೆ ಅಂದ್ರು. ಆದರೂ ಸಾಕಷ್ಟು ಜನ ಇನ್ನೂ ಶವದ ಪೆಟ್ಟಿಗೆಯ ಮೇಲೆ ಹೂವಿನ ಹಾರ ಹಾಕಿದರು. ಅದನ್ನು ಪದೇ ಪದೇ ತೆಗೆದು ಅವರ ಕುಟುಂಬಸ್ಥರು ಸ್ವಚ್ಛಗೊಳಿಸುತ್ತಾ ಇದ್ರು. ಅಲ್ಲದೆ ಬದುಕಿದ್ದಾಗ ಸರಳವಾಗಿ, ಕನ್ನಡ ಪ್ರೇಮಿಯಾಗಿ ಬದುಕಿದ ಚಿಮೂ ಜೀವನ ಎಲ್ಲರಿಗೂ ಮಾದರಿ ಅಂತ ಜನ ಅವರ ಅಂತಿಮದರ್ಶನ ಪಡೆದು ಮಾತನಾಡಿಕೊಂಡರು.

  • ಚಿದಾನಂದ ಮೂರ್ತಿ ನಿಧನಕ್ಕೆ ನಂದೀಶ್ ಹಂಚೆ ಸಂತಾಪ

    ಚಿದಾನಂದ ಮೂರ್ತಿ ನಿಧನಕ್ಕೆ ನಂದೀಶ್ ಹಂಚೆ ಸಂತಾಪ

    ಬೆಂಗಳೂರು: ಕನ್ನಡದ ಹಿರಿಯ ಲೇಖಕ, ಸಂಶೋಧಕ, ಚಿಂತಕ ಡಾ.ಎಂ ಚಿದಾನಂದ ಮೂರ್ತಿ ಅವರ ನಿಧನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್ ನಂದೀಶ್ ಹಂಚೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

    ಕನ್ನಡ ಸಾಹಿತ್ಯ ದಿಗ್ಗಜರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದ ಚಿದಾನಂದ ಮೂರ್ತಿ ಅವರು ಕನ್ನಡದ ಸಂಶೋಧನಾ ಕ್ಷೇತ್ರಕ್ಕೆ ಹೊಸ ಆಯಾಮ ಕೊಟ್ಟವರು. ತಮ್ಮ ಅಸಾಧಾರಣ ಪ್ರತಿಭೆಯಿಂದ ಕನ್ನಡ ಸಾಹಿತ್ಯದ ಔನ್ನತ್ಯಕ್ಕೆ ಏರಿದವರು. ಅವರ ಶೂನ್ಯ ಸಂಪಾದನೆಯನ್ನು ಕುರಿತು ಕೃತಿ ಇಂದಿಗೂ ವಿದ್ಯಾರ್ಥಿಗಳ ಕೈಪಿಡಿ ಎಂದು ಪರಿಗಣಿಸಲ್ಪಟ್ಟಿದೆ ಎಂದಿದ್ದಾರೆ.

    ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಸಂಶೋಧನಾ ಗ್ರಂಥವೊಂದು ಹೇಗಿರಬೇಕು ಎಂಬುದಕ್ಕೆ ಮಾದರಿ ಆಗಿದೆ. ನಲವತ್ತಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು, ನೂರಾರು ಸಂಶೋಧನಾ ಲೇಖನಗಳನ್ನು ನೀಡಿರುವ ಚಿದಾನಂದಮೂರ್ತಿ ಅಪರಿಮಿತವಾದ ಶಿಷ್ಯ ಸಂಪತ್ತನ್ನು ಹೊಂದಿದ್ದಾರೆ. ಬಹಳ ಮುಖ್ಯವಾಗಿ ಕನ್ನಡ ಶಕ್ತಿ ಕೇಂದ್ರವನ್ನು ಸ್ಥಾಪಿಸಿ ಅದರ ಮೂಲಕ ಕನ್ನಡಕ್ಕೆ ಕುತ್ತು ಬಂದ ಸಂದರ್ಭಗಳಲ್ಲಿ ಅವರು ನಡೆಸಿದ ಹೋರಾಟ ಅವಿಸ್ಮರಣೀಯ ಗೋಕಾಕ್ ಚಳವಳಿಯಲ್ಲಿ ಅವರು ನೀಡಿದ ಕಾಣಿಕೆ ಬಹಳ ದೊಡ್ಡದು ಎಂದು ನೆನಪು ಮಾಡಿಕೊಂಡಿದ್ದಾರೆ.

    ಕನ್ನಡ ಪುಸ್ತಕ ಪ್ರಾಧಿಕಾರ 2018ನೇ ಸಾಲಿನ ಡಾ ಎಂಎಂ ಕಲಬುರಗಿ ಮಾನವಿಕ ಅಧ್ಯಯನ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿತ್ತು.ಫೆಬ್ರವರಿ 11 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಿಗದಿಯಾಗಿತ್ತು. ಅದಕ್ಕೂ ಮುನ್ನವೇ ಅವರು ವಿಧಿವಶರಾಗಿದ್ದು ನಮ್ಮ ದುರ್ದೈವವಾಗಿದೆ. ಅವರ ನಿಧನದಿಂದ ಕನ್ನಡ ಸಾಹಿತ್ಯ ಒಂದು ತಲೆಮಾರಿನ ಕೊಂಡಿಯನ್ನು ಕಳಚಿಕೊಂಡಿದೆ ಎಂದು ಡಾ. ಎಂ ಎನ್ ನಂದೀಶ್ ಹಂಚೆ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

  • ಖ್ಯಾತ ಸಾಹಿತಿ ಡಾ. ಎಂ ಚಿದಾನಂದಮೂರ್ತಿ ಇನ್ನಿಲ್ಲ

    ಖ್ಯಾತ ಸಾಹಿತಿ ಡಾ. ಎಂ ಚಿದಾನಂದಮೂರ್ತಿ ಇನ್ನಿಲ್ಲ

    ಬೆಂಗಳೂರು: ಹಿರಿಯ ಸಾಹಿತಿ, ಲೇಖಕ ಸಂಶೋಧಕ ಡಾ. ಎಂ ಚಿದಾನಂದಮೂರ್ತಿ ಇಂದು ನಿಧನರಾಗಿದ್ದಾರೆ.

    ಅನಾರೋಗ್ಯದಿಂದ ಬಳಲುತ್ತಿದ್ದ ಮೂರ್ತಿ ಅವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

    ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಲು ಪ್ರಮುಖ ಕಾರಣರಾಗಿದ್ದ ಚಿದಾನಂದ ಮೂರ್ತಿಯವರು ಇತಿಹಾಸಕಾರರಾಗಿ ಅಪಾರ ಸೇವೆ ಸಲ್ಲಿಸಿದ್ದರು. ಬೆಳಗ್ಗೆ 7 ಗಂಟೆಗೆ ಅವರ ಪಾರ್ಥಿವ ಶರೀರವನ್ನು ನಿವಾಸಕ್ಕೆ ತರಲಾಗುವುದು. ಹಿರಿಯ ಸಾಹಿತಿ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.

  • ‘ಪೌರತ್ವ’ ಕಾಯ್ದೆಯನ್ನು ಸ್ವಾಗತಿಸಿದ ಚಿದಾನಂದ ಮೂರ್ತಿ

    ‘ಪೌರತ್ವ’ ಕಾಯ್ದೆಯನ್ನು ಸ್ವಾಗತಿಸಿದ ಚಿದಾನಂದ ಮೂರ್ತಿ

    – ಗೋಲಿಬಾರ್ ಮಾಡಿದ್ದು ತಪ್ಪು

    ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್ ಸಿ) ಜಾರಿ ವಿರುದ್ಧ ದೇಶಾದ್ಯಂತ ವಿರೋಧ ವ್ಯಕ್ತವಾಗಿ ಪ್ರತಿಭಟನೆ ಕಾವು ಹೆಚ್ಚಾಗುತ್ತಿದೆ. ಎಲ್ಲೆಡೆ ಪ್ರತಿಭಟನೆ ಜೋರಾಗಿದ್ದು, ರಾಜ್ಯದಲ್ಲೂ ಗೋಲಿಬಾರ್ ನಡೆದು ಇಬ್ಬರು ಮೃತ ಪಟ್ಟಿದ್ದಾರೆ. ಪರ ವಿರೋಧ ಹೆಚ್ಚಾಗುತ್ತಿರುವ ಬೆನ್ನಲ್ಲೇ ಈ ಬಗ್ಗೆ ಹಿರಿಯ ಸಂಶೋಧಕ ಚಿದಾನಂದ ಮೂರ್ತಿ ಅವರು ಪ್ರತಿಕ್ರಿಯಿಸಿದ್ದು, ಪೌರತ್ವ ಕಾಯ್ದೆಯ ಜಾರಿ ಮಾಡಿರುವುದನ್ನು ಸ್ವಾಗತ ಮಾಡಿದ್ದಾರೆ.

    ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ಮುಗಿಸಿ ಟೌನ್ ಹಾಲ್ ಬಳಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ಕಾಯ್ದೆಯನ್ನು ಸ್ವಾಗತಿಸುತ್ತೇನೆ. ಮೋದಿ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆಗೆ ಸಂಪೂರ್ಣ ಬೆಂಬಲವಿದೆ. ಯಾವುದೇ ಧರ್ಮದವರಿಗೆ ಅನ್ಯಾಯ ಮಾಡುವ ಕ್ರಮ ಈ ಕಾಯ್ದೆಯದ್ದಲ್ಲ. ಪಾಕಿಸ್ತಾನದಿಂದ ಬಂದಿರುವ ಹಿಂದೂಗಳು, ಕ್ರೈಸ್ತ ಮತ್ತು ಪಾರ್ಸಿಗಳಿಗೆ ಪೌರತ್ವ ಕೊಡುವುದು ಸರಿಯಾದ ಕ್ರಮ. ಇದನ್ನು ವಿರೋಧಿಸುವುದು ಸರಿಯಲ್ಲ ಎಂದರು.

    ಇನ್ನೂ ಕೆಲವರು ಪ್ರತಿಭಟನೆ ಮಾಡುತ್ತಿದ್ದಾರೆ. ಕೆಲವರು ಈ ಬಗ್ಗೆ ತಿಳಿಯದೇ ಪ್ರತಿಭಟನೆ ಮಾಡುತ್ತಿದ್ದಾರೆ. ಎಲ್ಲೂ ಕೂಡ ಹಿಂಸಾತ್ಮಕವಾಗಿ ಹೋರಾಟ ಮಾಡಬಾರದು. ಅಲ್ಲದೇ ರಾಜ್ಯದಲ್ಲಿ ಗೋಲಿಬಾರ್ ಆಗಿದ್ದು ಕೂಡ ತಪ್ಪೇ. ಗೋಲಿಬಾರ್ ಮಾಡಬಾರದಿತ್ತು. ಪ್ರತಿಭಟನೆ ಮಾಡುವುದಾದರೆ ಹಿಂಸಾತ್ಮಕ ನಡೆ ಸಲ್ಲದು ಅಹಿಂಸಾತ್ಮಕ ಹೋರಾಟ ಮಾಡಲಿ ಎಂದರು.

  • ಮಠಾಧೀಶರ ಭೇಟಿ ಬಳಿಕ ಸಾಹಿತಿಗಳ ಭೇಟಿಗೆ ಮುಂದಾದ ಅಮಿತ್ ಶಾ

    ಮಠಾಧೀಶರ ಭೇಟಿ ಬಳಿಕ ಸಾಹಿತಿಗಳ ಭೇಟಿಗೆ ಮುಂದಾದ ಅಮಿತ್ ಶಾ

    ಬೆಂಗಳೂರು: ಈ ಹಿಂದೆ ಪಕ್ಷದ ಪ್ರಚಾರಕ್ಕಾಗಿ ರಾಜ್ಯದ ವಿವಿಧ ಮಠಗಳಿಗೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಾಹಿತಿಗಳಿಂದ ಸಲಹೆ ಪಡೆಯಲು ಮುಂದಾಗಿದ್ದಾರೆ.

    ಕರ್ನಾಟಕ ಚುನಾವಣೆಯ ಕುರಿತಾಗಿ ಸಲಹೆಗಳನ್ನು ಸಂಗ್ರಹಿಸುವ ಉದ್ದೇಶದಿಂದ ಏಪ್ರಿಲ್ 18 ಮತ್ತು 19ರಂದು ನಗರಕ್ಕೆ ಅಮಿತ್ ಶಾ ಭೇಟಿ ನೀಡಲಿದ್ದಾರೆ. ಏ.18ರಂದು ರಾಜರಾಜೇಶ್ವರಿ ನಗರದಲ್ಲಿರುವ ದಲಿತ ಸಾಹಿತಿ ಸಿದ್ಧಲಿಂಗಯ್ಯ ಮತ್ತು ಹಂಪಿನಗರದಲ್ಲಿರುವ ಸಂಶೋಧಕ ಚಿದಾನಂದಮೂರ್ತಿ ನಿವಾಸಕ್ಕೆ ಭೇಟಿ ನೀಡಲಿದ್ದಾರೆ.

    ಈ ವೇಳೆ ಇಬ್ಬರು ಸಾಹಿತಿಗಳೊಂದಿಗೆ ಚರ್ಚೆ ನಡೆಸಿ ರಾಜ್ಯ ವಿಧಾನ ಸಭಾ ಚುನಾವಣೆಗೆ ಅವರಿಂದ ಸಲಹೆಯನ್ನು ಸಂಗ್ರಹಿಸಲಿದ್ದಾರೆ. ಸಾಹಿತಿ ಹಾಗೂ ಸಂಶೋಧಕರಿಂದ ಸಲಹೆ ಪಡೆದು ಪರಿಣಾಮಕಾರಿ ಪ್ರಣಾಳಿಕೆಯನ್ನು ಸಿದ್ಧ ಪಡಿಸುವ ಉದ್ದೇಶವನ್ನು ಅಮಿತ್ ಶಾ ಹೊಂದಿದ್ದಾರೆ ಎನ್ನಲಾಗಿದೆ.