Tag: ಚಿಕನ್ ಸಾಂಬಾರ್

  • ಚಿಕನ್ ಸಾಂಬಾರ್‌ಗಾಗಿ ಗಂಡ, ಹೆಂಡತಿಯ ನಡುವೆ ಜಗಳ – ಕೊಲೆಯಲ್ಲಿ ಅಂತ್ಯ

    ಚಿಕನ್ ಸಾಂಬಾರ್‌ಗಾಗಿ ಗಂಡ, ಹೆಂಡತಿಯ ನಡುವೆ ಜಗಳ – ಕೊಲೆಯಲ್ಲಿ ಅಂತ್ಯ

    ದಾವಣಗೆರೆ: ಸಂಸಾರದಲ್ಲಿ ಎಲ್ಲವು ಸರಿ ಇದ್ದರೆ ಸುಖವಾಗಿ ಇರುತ್ತದೆ. ಏನಾದರೂ ಅನುಮಾನ ಮನಸ್ತಾಪಗಳು ಬಂದರೆ ನಿಜಕ್ಕೂ ನರಕವಾಗುತ್ತದೆ. ಸಂಸಾರದಲ್ಲಿ ಮನಸ್ತಾಪಗಳು ಬಂದು ಜೀವವನ್ನು ಕಳೆದುಕೊಳ್ಳುವಂತಾಗುತ್ತದೆ. ಅದೇ ರೀತಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿ ಕೋಡು ಗ್ರಾಮದಲ್ಲಿ ಗಂಡ ಹೆಂಡತಿಯ ನಡುವೆ ಚಿಕನ್ ಊಟದ ವಿಚಾರವಾಗಿ ಜಗಳವಾಗಿ ತಾರಕಕ್ಕೇ ಏರಿ ತನ್ನ ಹೆಂಡತಿಯನ್ನು ಪತಿಯೇ ಚಾಕುವಿನಿಂದ ಹಿರಿದುಕೊಲೆ ಮಾಡಿದ್ದಾನೆ.

    ಕೊಲೆಯಾದ ದುರ್ದೈಯನ್ನು ಶೀಲಾ ಎಂದು ಗುರುತಿಸಲಾಗಿದ್ದು, ಈಕೆಗೆ ಬನ್ನಿಕೋಡು ಗ್ರಾಮದ ರೋಡ್ ರೋಲರ್ ಆಪರೇಟರ್ ಆಗಿದ್ದ ಕೆಂಚಪ್ಪ ಜೊತೆ 9 ವರ್ಷಗಳ ಹಿಂದೆ ಮದುವೆಯಾಗಿತ್ತು. ಹರಿಹರ ತಾಲೂಕಿನ ವಾಸನ ಗ್ರಾಮದ ಶೀಲಾಳನ್ನು ಕೆಂಚಪ್ಪ ಪ್ರೀತಿಸಿದ್ದು, ಮನೆಯವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಮನೆಯಿಂದ ಓಡಿ ಬಂದು ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಹೇಗೋ ಸುಖವಾಗಿ ಸಂಸಾರ ಮಾಡಿ ಒಂದು ಮುದ್ದಾದ ಮಗುವನ್ನು ಪಡೆದಿದ್ದರು. ಆಗ ಕೆಂಚಪ್ಪನ ಅಸಲಿ ಸತ್ಯ ಗೊತ್ತಾಗಿದೆ. ಕೆಂಚಪ್ಪನಿಗೆ ಈಗಾಗಲೇ ಮದುವೆಯಾಗಿದ್ದು, ಆಕೆಗೆ ಮಕ್ಕಳಿಲ್ಲ ಎನ್ನುವ ಕಾರಣಕ್ಕೆ ತನ್ನನ್ನು ಮದುವೆಯಾಗಿರುವ ವಿಚಾರ ಶೀಲಾಗೆ ತಿಳಿದು ಬಂದಿದೆ. ಇದರಿಂದ ಪ್ರತಿನಿತ್ಯ ಜಗಳ ಶುರುವಾಗಿದೆ. ಕೆಂಚಪ್ಪ ಕೂಡ ಮದ್ಯ ಸೇವನೆ ಮಾಡಿ ರಾದ್ಧಾಂತ ಮಾಡುತ್ತಿದ್ದ, ಇದು ಎರಡು ಮನೆಯವರಿಗೆ ಗೊತ್ತಾಗಿ ರಾಜೀ ಪಂಚಾಯಿತಿ ಮಾಡಿ ಹೋಗಿದ್ದರು. ಆದರೆ ಕಳೆದ ರಾತ್ರಿ ಮದ್ಯ ಸೇವನೆ ಮಾಡಿ ಬಂದ ಕೆಂಚಪ್ಪ ಹೆಂಡತಿಗೆ ಚಿಕನ್ ಅಡುಗೆ ಮಾಡಿಲ್ಲ ಎಂದು ಜಗಳವಾಡಿ ಕೊನೆಗೆ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. ಇದನ್ನೂ ಓದಿ: ಭಾರೀ ಮಳೆಯಿಂದ ಭೂಕುಸಿತ – ಎರಡುವರೆ ವರ್ಷದ ಮಗು ಸೇರಿ ನಾಲ್ವರು ಸಾವು

    crime

    ಒಂದು ಮಗು ಆಗುವವರೆಗೂ ಚೆನ್ನಾಗಿದ್ದ ಕೆಂಚಪ್ಪ ನಂತರ ನಿತ್ಯ ಕುಡಿದು ಬಂದು ಜಗಳವಾಡುತ್ತಿದ್ದ ಶೀಲಾಳ ಬಗ್ಗೆ ಅನುಮಾನ ಪಡುತ್ತಿದ್ದ ಎನ್ನಲಾಗಿದೆ. ಇದರಿಂದ ಶೀಲಾ ತನ್ನ 4 ವರ್ಷದ ಮಗಳನ್ನು ವಾಸನದಲ್ಲಿರುವ ತಾಯಿ ಮನೆಯಲ್ಲಿಯೇ ಬಿಟ್ಟಿದ್ದಳು, ಅಲ್ಲದೇ ಕಳೆದ ಜೂನ್ 7ರಂದು ಮಗಳ ಹುಟ್ಟುಹಬ್ಬವನ್ನು ತವರು ಮನೆಯಲ್ಲಿಯೇ ಮಾಡಿ ಬನ್ನಿಕೋಡ್ ಗೆ ಬಂದಿದ್ದರು. ಹುಟ್ಟು ಹಬ್ಬಕ್ಕೂ ಕೂಡ ಕೆಂಚಪ್ಪ ಹೋಗಿರಲಿಲ್ಲ. ತವರಿನಿಂದ ವಾಪಸ್ಸು ಬಂದ ನಂತರ ಮತ್ತೆ ಜಗಳವಾಡಿದ್ದ, ಅಲ್ಲದೇ ಸಂಜೆ ಬರುವುದರೊಳಗೆ ಚಿಕನ್ ಮಾಡು ಎಂದು ಹೇಳಿ ಹೋಗಿದ್ದಾನೆ. ರಾತ್ರಿ ಮದ್ಯ ಸೇವನೆ ಮಾಡಿ ಬಂದ ಕೆಂಚಪ್ಪ ಶೀಲಾಳ ಜೊತೆ ಜಗಳವಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಇದೀಗ ಈ ಸಂಬಂಧ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸುಳ್ಳು ಮತ್ತೆ ಮದ್ಯದಿಂದ ಒಂದು ಸಂಸಾರವೇ ಹಾಳಾಗಿದ್ದು, ತಂದೆ, ತಾಯಿಯನ್ನು ಕಳೆದುಕೊಂಡು ಪುಟ್ಟ ಮಗು ಮಾತ್ರ ಅನಾಥವಾಗಿದೆ. ಇದನ್ನೂ ಓದಿ: ರಾಜ್ಯಸಭೆ ಫೈಟ್‍ನಲ್ಲಿ ಟ್ವಿಸ್ಟ್ – ಕಾಂಗ್ರೆಸ್, ಜೆಡಿಎಸ್ ಮಧ್ಯೆ ‘ಆತ್ಮಸಾಕ್ಷಿ’ ಫೈಟ್

  • ಚಿಕನ್ ಸಾಂಬಾರ್ ಕಡಿಮೆ ಹಾಕಿದ್ದಕ್ಕೆ ನಡೀತು ಕೊಲೆ

    ಚಿಕನ್ ಸಾಂಬಾರ್ ಕಡಿಮೆ ಹಾಕಿದ್ದಕ್ಕೆ ನಡೀತು ಕೊಲೆ

    ಮಡಿಕೇರಿ: ಊಟ ಮಾಡುವ ಸಂದರ್ಭದಲ್ಲಿ ಚಿಕನ್ ಸಾಂಬಾರ್ ಕಡಿಮೆ ಹಾಕಿದ್ದಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದಲ್ಲಿ ಕೊಲೆ ನಡೆದಿದೆ.

    25 ವರ್ಷದ ಕುಮಾರ್ ದಾಸ ಕೊಲೆಯಾದ ಯುವಕ. ನಂಜನಗೂಡು ತಾಲೂಕಿನ ಕೊತ್ತೆನಾಹಳ್ಳಿಯ ಕುಮಾರ್ ಮತ್ತು 17 ವರ್ಷದ ಹುಡುಗನ ಜೊತೆ ನಾಲ್ಕೇರಿ ಗ್ರಾಮದ ಮಹೇಶ್ ಎಂಬವರ ಕಾಫಿ ತೋಟದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. 25 ದಿನಗಳ ಹಿಂದೆ ಕೆಲಸಕ್ಕೆ ಸೇರಿದ್ದ ಇಬ್ಬರು ಜೊತೆಯಲ್ಲಿಯೇ ವಾಸವಾಗಿದ್ದರು.

    ಸೋಮವಾರ ಸಂಜೆ ಮಹೇಶ್ ಅವರ ಕಾಫಿ ತೋಟದ ಅಂಗಳಲ್ಲಿ ಬಾಡೂಟಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಸುಮಾರು ರಾತ್ರಿ 10.30ಕ್ಕೆ ಊಟ ಮಾಡುತ್ತಿರುವಾಗ ತನಗೆ ಕಡಿಮೆ ಚಿಕನ್ ಸಾಂಬಾರ್ ಹಾಕಲಾಗಿದೆ ಎಂದು ಬಾಲಕ ಜಗಳ ತೆಗೆದಿದ್ದಾನೆ. ಇದೇ ವಿಷಯಕ್ಕೆ ಇಬ್ಬರ ಮಧ್ಯೆ ಜಗಳ ನಡೆದಿದೆ. ಈ ವೇಳೆ ಕೋಪಗೊಂಡ ಆರೋಪಿ ಬ್ಯಾಟ್ ಮತ್ತು ಒಲೆಯಲ್ಲಿದ್ದ ಸೌದೆಯಿಂದ ಕುಮಾರ್ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಕುಮಾರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸದ್ಯ ಪೊಲೀಸರು ಅಪ್ರಾಪ್ತ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.