Tag: ಚಾಮರಾಜನಗರ ಆಕ್ಸಿಜನ್ ದುರಂತ

  • ಚಾಮರಾಜನಗರ ಆಕ್ಸಿಜನ್ ದುರಂತ ಕೇಸ್ ರೀ ಓಪನ್‌ಗೆ ಉಪಸಮಿತಿ ನಿರ್ಧಾರ

    ಚಾಮರಾಜನಗರ ಆಕ್ಸಿಜನ್ ದುರಂತ ಕೇಸ್ ರೀ ಓಪನ್‌ಗೆ ಉಪಸಮಿತಿ ನಿರ್ಧಾರ

    – ಆರ್‌ಟಿಪಿಸಿಆರ್‌ ಟೆಸ್ಟಿಂಗ್‌ನಲ್ಲಿ 500 ಕೋಟಿಗೂ ಹೆಚ್ಚು ಹಗರಣ ನಡೆದಿರುವ ಆರೋಪ
    – ಕೋವಿಡ್‌ ಅಕ್ರಮಗಳ ತನಿಖೆಗೆ ಸಮಿತಿ ರಚಿಸಲು ಸಂಪುಟ

    ಬೆಂಗಳೂರು: ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೂ ಮುನ್ನ ಕೋವಿಡ್ ತನಿಖೆ (Covid Investigation) ಬಿಸಿ ಕಾಯಿಸುವ ಆಟ. ನೀವು ಮುಡಾ, ವಕ್ಫ್ ಅಸ್ತ್ರ ಪ್ರಯೋಗ ಮಾಡಿದ್ರೆ ನಮ್ ಹತ್ರ ಕೋವಿಡ್ ಬ್ರಹ್ಮಾಸ್ತ್ರ ಇದೆ. ಇದು ಕಾಂಗ್ರೆಸ್ ಸರ್ಕಾರದ (Congress Government) ಗೇಮ್ ಪ್ಲ್ಯಾನ್.

    ಹೌದು. ಜಸ್ಟೀಸ್ ಮೈಕಲ್ ಡಿ ಕುನ್ಹಾ ವರದಿ ಶಿಫಾರಸ್ಸುಗಳ ಜಾರಿ ವಿಚಾರವಾಗಿ ವಿಧಾನಸೌಧದಲ್ಲಿ ಸಂಪುಟ ಉಪಸಮಿತಿ ಸಭೆ ನಡೆಯಿತು. ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೋವಿಡ್ ಅಕ್ರಮಗಳ (Covid Scam) ಬಗ್ಗೆ ಇನ್ನಷ್ಟು ತನಿಖೆ ನಡೆಸಲು ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ. ಚಾಮರಾಜನಗರ ಆಕ್ಸಿಜನ್ ದುರಂತ ಕೇಸ್ ರೀ ಓಪನ್ ಮಾಡಲು ತೀರ್ಮಾನಿಸಲಾಗಿದೆ. ಅಷ್ಟೇ ಅಲ್ಲ ಆರ್‌ಟಿಪಿಸಿಆರ್‌ ಟೆಸ್ಟ್‌ಕಿಟ್‌ನಲ್ಲಿ (RTPCR Testing) 500 ಕೋಟಿ ರೂ.ಗಿಂತಲೂ ಹೆಚ್ಚು ಹಗರಣ ಆಗಿದೆ. ಈ ಕುರಿತಂತೆಯೂ ತನಿಖೆಗೆ ವಹಿಸಲು ಸಂಪುಟ ಉಪಸಮಿತಿ ಸಭೆ ತೀರ್ಮಾನಿಸಿದೆ. ಒಟ್ಟಾರೆ ಇಂದಿನ ಉಪಸಮಿತಿ ಸಭೆಯಲ್ಲಾದ ಪ್ರಮುಖ ತೀರ್ಮಾನಗಳು ಈ ಕೆಳಕಂಡಂತಿವೆ.

    ಚಾಮರಾಜನಗರ ಆಕ್ಸಿಜನ್ ದುರಂತ ಕೇಸ್ ರೀ ಓಪನ್:
    ಸಂಪುಟ ಉಪಸಮಿತಿ ಸಭೆಯಲ್ಲಿ ಚಾಮರಾಜನಗರ ಆಕ್ಸಿಜನ್ ದುರಂತ ಕೇಸ್ ರೀ ಓಪನ್‌ಗೆ ತೀರ್ಮಾನಿಸಲಾಗಿದೆ. ಅಂದಿನ ಸಚಿವರಿಂದ ವರದಿಯನ್ನು ತಿರಸ್ಕರಿಸಿದೆ. ಕೋವಿಡ್‌ ಹಗರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಆಗಿಲ್ಲ, ಹಾಗಾಗಿ ಪ್ರಕರಣದ ಬಗ್ಗೆ ಮರು ತನಿಖೆಗೆ ತೀರ್ಮಾನಿಸಲಾಗಿದೆ ಎಂದು ಡಿಸಿಎಂ ಸಭೆಯಲ್ಲಿ ಹೇಳಿದ್ದಾರೆ.

    ಆರ್‌ಟಿಪಿಸಿಆರ್ ಟೆಸ್ಟ್ ಅಕ್ರಮ ತನಿಖೆ:
    ಕೋವಿಡ್‌ ಸಂದರ್ಭದಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿ ನಡೆಸಿದ್ದ ಆರ್‌ಟಿಪಿಸಿಆರ್ ಟೆಸ್ಟ್‌ ಕಿಟ್‌ನಲ್ಲಿಯೂ ಅಕ್ರಮ ಆರೋಪ ಕೇಳಿಬಂದಿದೆ. 80 ಲಕ್ಷ ಆರ್‌ಟಿಪಿಸಿಆರ್‌ ಕಿಟ್‌ಗೆ 400 ಕೋಟಿ ರೂ. ಹಣ ಬಿಡುಗಡೆ ಆಗಿದೆ ಎನ್ನಲಾಗಿದೆ. ಅಲ್ಲದೆ ಕಿದ್ವಾಯಿ ಆಸ್ಪತ್ರೆಯಲ್ಲಿ 25 ಲಕ್ಷ ರೂ.ನಷ್ಟು ಅಕ್ರಮ ಆಗಿದೆ ಎಂಬ ಆರೋಪಗಳು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ತನಿಖೆಗೆ ವಹಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

    ಅಧಿಕಾರಿಗಳ ಸಮಿತಿ ರಚನೆಗೆ ತೀರ್ಮಾನ:
    ಕೋವಿಡ್ ಅಕ್ರಮಗಳ ತನಿಖೆ ವ್ಯಾಪ್ತಿ ನಿರ್ಧರಿಸಲು ಅಧಿಕಾರಿಗಳ ರಚಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಹಾಲಿ, ನಿವೃತ್ತ ಅಧಿಕಾರಿಗಳ ಸಮಿತಿ ರಚಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

  • ರೋಹಿಣಿ ಸಿಂಧೂರಿ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು

    ರೋಹಿಣಿ ಸಿಂಧೂರಿ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು

    ನವದೆಹಲಿ: ಆಕ್ಸಿಜನ್ ಕೊರತೆಯಿಂದ ಚಾಮರಾಜನಗರದಲ್ಲಿ 35 ಮಂದಿ ಸಾವನ್ನಪ್ಪಿರುವ ಪ್ರಕರಣ ತನಿಖೆ ನಡೆಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ದಾಖಲಿಸಲಾಗಿದೆ. ವಿಧಾನಮಂಡಲ ನಿವೃತ್ತ ಭದ್ರತಾ ಅಧಿಕ್ಷಕ ಎಂ.ಎನ್ ಪಿಳ್ಳಪ್ಪ ದೂರು ದಾಖಲಿಸಿದ್ದಾರೆ.

    ಚಾಮರಾಜನಗರ ಪ್ರಕರಣದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಸ್ಪಷ್ಟವಾಗಿದೆ. ವರ್ಗಾವಣೆ ಹೊರತುಪಡಿಸಿ ಇನ್ಯಾವುದೇ ಕ್ರಮಗಳನ್ನು ಅಧಿಕಾರಿಗಳ ವಿರುದ್ಧ ತೆಗೆದುಕೊಂಡಿಲ್ಲ. ಈ ಪ್ರಕರಣದಲ್ಲಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ತಪ್ಪಿಸ್ಥರಾಗಿದ್ದು, ಇತರೆ ಅಧಿಕಾರಿಗಳೊಂದಿಗಿನ ಮನಸ್ಥಾಪದ ಕಾರಣ ಈ ಘಟನೆ ನಡೆದಿದೆ. ಈ ಹಿನ್ನೆಲೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಚಾಮರಾಜನಗರ ಆಕ್ಸಿಜನ್ ದುರಂತ – ರೋಹಿಣಿ ಸಿಂಧೂರಿಗೆ ಕ್ಲೀನ್‍ಚಿಟ್

    ರೋಹಿಣಿ ಸಿಂಧೂರಿ ವಿರುದ್ಧ ಅಕ್ರಮ ಈಜುಕೊಳ ನಿರ್ಮಾಣ, ತಿರುಪತಿಯಲ್ಲಿದ್ದ ಮೈಸೂರು ಮಹಾರಾಜರ ಭೂಮಿ ಆಂಧ್ರಪ್ರದೇಶ ಸರ್ಕಾರಕ್ಕೆ ಹಸ್ತಾಂತರ ಸೇರಿ ಹಲವು ಆರೋಪಗಳಿವೆ. ಅವುಗಳ ಬಗ್ಗೆಯೂ ತನಿಖೆಯಾಗಬೇಕಿದ್ದು, ಕೂಡಲೇ ಅವರನ್ನು ಅಮಾನತು ಮಾಡಿ ತನಿಖೆ ಮಾಡಬೇಕು ಎಂದು ಎಂ.ಎನ್ ಪಿಳ್ಳಪ್ಪ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಚಾಮರಾಜನಗರ ಆಕ್ಸಿಜನ್ ದುರಂತ – ತಾಳಿ ಉಳಿಸಿಕೊಡಿ ಅಂತ ಅಂಗಲಾಚಿದ ನವ ವಧು

  • ಚಾಮರಾಜನಗರ ಆಕ್ಸಿಜನ್ ದುರಂತ – ಡಿಸಿ ರೋಹಿಣಿ ಸಿಂಧೂರಿ ಮೊದಲ ಪ್ರತಿಕ್ರಿಯೆ

    ಚಾಮರಾಜನಗರ ಆಕ್ಸಿಜನ್ ದುರಂತ – ಡಿಸಿ ರೋಹಿಣಿ ಸಿಂಧೂರಿ ಮೊದಲ ಪ್ರತಿಕ್ರಿಯೆ

    – 10 ವರ್ಷದ ಸೇವೆಯಲ್ಲಿ ಎಂದೂ ಈ ರೀತಿ ಕೆಲಸ ಮಾಡಿಲ್ಲ
    – ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ರೋಹಿಣಿ ಸಿಂಧೂರಿ ಪ್ರಶ್ನೆ
    – ಕೆಲಸ ಮಾಡದೇ ನಮ್ಮ ಮೇಲೆ ಆರೋಪ ಮಾಡಿದ್ರೆ ನೋವಾಗುತ್ತೆ

    ಮೈಸೂರು: ಚಾಮರಾಜನಗರ ಆಕ್ಸಿಜನ್ ದುರಂತದ ಬಳಿಕ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ 10 ವರ್ಷದ ಸೇವೆಯಲ್ಲಿ ನಾನು ಎಂದು ಈ ರೀತಿ ಕೆಲಸ ಮಾಡಿಲ್ಲ ಎಂದು ತಮ್ಮ ವಿರುದ್ಧ ಕೇಳಿ ಬಂದ ಎಲ್ಲ ಆರೋಪಗಳನ್ನ ತಳ್ಳಿ ಹಾಕಿದ್ದಾರೆ.

    ಇಂದು ಮಾಧ್ಯಮಗಳ ಜೊತೆ ಮಾತನಾಡಿದ ರೋಹಿಣಿ ಸಿಂಧೂರಿ, ಚಾಮರಾಜನಗರದಲ್ಲಿ ಆಗಿರುವ ಸಾವುಗಳಿಗೆ ನೋವಾಗಿವೆ. ಇದರ ಬೆನ್ನಲ್ಲೇ ಸಾಕಷ್ಟು ಊಹಾಪೋಹಗಳು ನಡೆಯುತ್ತಿದ್ದರಿಂದ ವೈಯಕ್ತಿಕವಾಗಿ ತುಂಬಾ ನೋವಾಗಿದೆ. ನನ್ನ 10 ವರ್ಷದ ಸೇವೆಯಲ್ಲಿ ಎಂದೂ ಈ ರೀತಿ ಕೆಲಸ ಮಾಡಿಲ್ಲ. ಸರ್ಕಾರ ತನಿಖೆ ಆದೇಶ ಮಾಡಿದ್ದರಿಂದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿಲ್ಲ. ಚಾಮರಾಜನಗರ ಜಿಲ್ಲಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದ್ದರಿಂದ ಕೆಲ ವಿಷಯಗಳಿಗೆ ಸ್ಪಷ್ಟನೆ ನೀಡಬೇಕಿದೆ ಎಂದರು.

    ರೋಹಿಣಿ ಸಿಂಧೂರಿ ಪ್ರಶ್ನೆ: ಚಾಮರಾಜನಗರಕ್ಕೆ ಸ್ಪಂದಿಸಿಲ್ಲ ಅನ್ನೋದು ಸತ್ಯಕ್ಕೆ ದೂರವಾದದ್ದು. ನಾವು ರಿಸ್ಕ್ ತೆಗೆದುಕೊಂಡು 40 ಸಿಲಿಂಡರ್ ಗಳನ್ನು ಚಾಮರಾಜನಗರಕ್ಕೆ ಕಳುಹಿಸಲಾಗಿದೆ. ದಾಖಲಾತಿಗಳ ಪ್ರಕಾರ ರಾತ್ರಿ 11 ಗಂಟೆಗೆ ಕೇಳಿದ್ದಾರೆ. ಅದಕ್ಕೂ ಮುಂಚಿತವಾಗಿ ಕೇಳಿದ್ರೆ ಸಿಲಿಂಡರ್ ಕಳುಹಿಸಲಾಗುತ್ತಿತ್ತು. ಆಸ್ಪತ್ರೆ ಮತ್ತು ಆಕ್ಸಿಜನ್ ರಿಫಿಲ್ಲಿಂಗ್ ಕಂಪನಿಗಳ ನಡುವೆ ಒಪ್ಪಂದ ಆಗಿರುತ್ತದೆ. ಎಲ್ಲ ಆಕ್ಸಿಜನ್ ಕೊರತೆಯಾದ್ರೂ ರಿಫಿಲ್ಲಿಂಗ್ ಘಟಕದಿಂದಲೇ ಪೂರೈಕೆ ಮಾಡಲಾಗುತ್ತದೆ. ಮಾನವೀಯತೆ ದೃಷ್ಟಿಯಿಂದ ಜಿಲ್ಲಾಸ್ಪತ್ರೆಯಲ್ಲಿದ್ದ 40 ಆಕ್ಸಿಜನ್ ಸಿಲಿಂಡರ್ ಗಳನ್ನ ನೀಡಿದ್ದೇವೆ. ಇದೆಲ್ಲ ಆಸ್ಪತ್ರೆಗಳ ದಾಖಲಾತಿಯಲ್ಲಿ ದಾಖಲಾಗಿದೆ. ಹಾಗಾದ್ರೆ ಇದು ಮಾನವೀಯತೆ ಅಲ್ವಾ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ರವಿ ಅವರನ್ನ ರೋಹಿಣಿ ಸಿಂಧೂರಿ ಪ್ರಶ್ನಿಸಿದರು. ಇದನ್ನೂ ಓದಿ: ಚಾಮರಾಜನಗರ ಆಕ್ಸಿಜನ್ ದುರಂತ – ತಾಳಿ ಉಳಿಸಿಕೊಡಿ ಅಂತ ಅಂಗಲಾಚಿದ ನವ ವಧು

    ಭಾವುಕರಾದ ರೋಹಿಣಿ ಸಿಂಧೂರಿ: ನಮಗೂ ಲಿಕ್ವಿಡ್ ಆಕ್ಸಿಜನ್ ಬಳ್ಳಾರಿಯಿಂದ ಬರುತ್ತೆ. ಝೀರೋ ಟ್ರಾಫಿಕ್ ಮಾಡಿಸಿ ಬಳ್ಳಾರಿಯಿಂದ ಇಲ್ಲಿಗೆ ಆಕ್ಸಿಜನ್ ತೆಗೆದುಕೊಂಡು ಬರುತ್ತಿದ್ದೇವೆ. ಇಲ್ಲಿ ಏನಾದ್ರೂ ಆದ್ರೆ ಬಳ್ಳಾರಿಯವರ ಮೇಲೆ ಆರೋಪ ಮಾಡೋಕೆ ಆಗುತ್ತಾ? ನಾವು ಜನರ ಪ್ರಾಣ ಉಳಿಸಲು 24/7 ಕೆಲಸ ಮಾಡುತ್ತಿದ್ದೇವೆ. ನಮ್ಮ ಜಿಲ್ಲೆಯಲ್ಲಿ ಈ ರೀತಿ ಆಗಿದ್ದರೆ ಯಾರನ್ನಾದರೂ ಹೇಗಾದರೂ ಸಂಪರ್ಕಿಸಿ ಆಕ್ಸಿಜನ್ ಪಡೆಯುತ್ತಿದ್ದೇವು. ಅವರು ಆ ಕೆಲಸ ಮಾಡದೇ ನಮ್ಮ ಮೇಲೆ ಆರೋಪ ಮಾಡಿದ್ರೆ ನೋವಾಗುತ್ತೆ ಎಂದು ರೋಹಿಣಿ ಸಿಂಧೂರಿ ಭಾವುಕರಾದ್ರು.

    ಕಳೆದ 10 ದಿನಗಳಿಂದ ನಮ್ಮಲ್ಲಿ ಆಕ್ಸಿಜನ್ ಕೊರತೆ ಇದೆ ಅಂತ ಹೇಳಿದ್ದೇವೆ. ರೆಮ್‍ಡೆಸಿವರ್ ಕಾಳಸಂತೆಯಲ್ಲಿ ಮಾರಾಟ ಆಗುತ್ತಿರೋದು ಪತ್ತೆ ಹಚ್ಚಲಾಗಿದೆ. ಕೇವಲ ವೈದ್ಯಕೀಯ ಬಳಕೆಗಾಗಿ ಆಕ್ಸಿಜನ್ ನೀಡಬೇಕೆಂದು ಸರ್ಕಾರ ಸುತ್ತೋಲೆ ಸಹ ಹೊರಡಿಸಿದೆ. ಆದ್ರೆ ರೀಫಿಲ್ಲಿಂಗ್ ಘಟಕಗಳು ಕೈಗಾರಿಕೆಗಳಿಗೂ ನೀಡುತ್ತಿದ್ದಾರೆ. ಕೆಲ ಆಸ್ಪತ್ರೆಗಳು ಹೆಚ್ಚು ಹೆಚ್ಚು ಆಕ್ಸಿಜನ್ ಸಿಲಿಂಡರ್ ಗಳನ್ನ ಸ್ಟಾಕ್ ಮಾಡಿಕೊಳ್ಳುತ್ತಿರುವ ಆರೋಪಗಳು ಕೇಳಿ ಬಂದಿದೆ. ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

    ಆಕ್ಸಿಜನ್ ಯಾರಿಗೆ ಕೊಡಬೇಕು? ಯಾರಿಗೆ ಕೊಡಬಾರದು ಅಂತ ಹೇಳೋದು ನಮ್ಮ ಪರಿಧಿಯಲ್ಲಿರಲ್ಲ. ಅದು ಆಸ್ಪತ್ರೆ ಮತ್ತು ಘಟಕಗಳ ನಡುವಿನ ಒಪ್ಪಂದ ಇರುತ್ತೆ. ಆದ್ರೂ ಘಟಕಗಳಿಗೆ ವೈದ್ಯಕೀಯ ಬಳಕೆಗೆ ಮಾತ್ರ ಆಕ್ಸಿಜನ್ ನೀಡುವಂತೆ ಹೇಳಿದ್ದೇವೆ ಎಂದರು. ಇದನ್ನೂ ಓದಿ: ಸತ್ತಿರೋದು 24 ಅಲ್ಲ, 34 ರಿಂದ 35 – ಸುಳ್ಳು ಹೇಳ್ತಿದೆಯಾ ಸರ್ಕಾರ? – ಕಾಂಗ್ರೆಸ್ ಶಾಸಕರ ಸುದ್ದಿಗೋಷ್ಠಿ ತಡೆದ ಅಧಿಕಾರಿಗಳು

    ಆಸ್ಪತ್ರೆಗಳು ಮುಂಚಿತವಾಗಿಯೇ ತಮಗೆ ಎಷ್ಟು ಆಕ್ಸಿಜನ್ ಬೇಕು ಅನ್ನೋದು ತಿಳಿದುಕೊಂಡು ಪೂರೈಕೆ ಮಾಡುವಂತೆ ಹೇಳೋದು ಅವರ ಜವಾಬ್ದಾರಿ. ಇಂತಹ ಸಂದರ್ಭದಲ್ಲಿ ಆರೋಪ ಮಾಡೋದು, ಪ್ರೆಸ್ ಮೀಟ್ ಮಾಡೋದರಿಂದ ಜನಕ್ಕೆ ತಪ್ಪು ಅಭಿಪ್ರಾಯ ಹೋಗುತ್ತದೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿಗಳ ವಿರುದ್ಧ ಬೇಸರ ಹೊರ ಹಾಕಿದರು. ಇದನ್ನೂ ಓದಿ: ದುರಂತದ ನಡುವೆ ವಿಚಿತ್ರ ಘಟನೆ – ಬದುಕಿದ್ರೂ ಸತ್ತಿದ್ದಾರೆ ಅಂತ ಸುಳ್ಳು ಮಾಹಿತಿ-ವೆಂಟಿಲೇಟರ್‌ನಲ್ಲಿದ್ದ ಅಮ್ಮನ ಕಂಡು ನಿಟ್ಟುಸಿರು ಬಿಟ್ಟ ಪುತ್ರ