Tag: ಚಹಾ

  • 1 ಕಪ್ ಚಹಾದ ಬೆಲೆ ಬರೋಬ್ಬರಿ 1 ಸಾವಿರ ರೂಪಾಯಿ

    1 ಕಪ್ ಚಹಾದ ಬೆಲೆ ಬರೋಬ್ಬರಿ 1 ಸಾವಿರ ರೂಪಾಯಿ

    ಕೊಲ್ಕತ್ತಾ: ಒಂದು ಕಪ್ ಚಹಾದ ಬೆಲೆ 10 ರೂಪಾಯಿ ಇರುತ್ತೆ. ದೊಡ್ಡ ಹೋಟೆಲ್‍ಗಳಲ್ಲಿ ಸ್ವಲ್ಪ ಹೇಚ್ಚಾಗಿರುತ್ತದೆ. ಆದರೆ ಕೋಲ್ಕತ್ತಾದಲ್ಲಿ ಸಿಗುವ ಟೀ ಬೆಲೆ ಬರೋಬ್ಬರಿ 1000 ರೂಪಾಯಿ ಆಗಿದೆ.

    ಒಂದು ಕಪ್ ಟೀ ಬೆಲೆ ಬರೋಬ್ಬರಿ 1000 ರೂಪಾಯಿಯಂತೆ. ಕೋಲ್ಕತ್ತಾದಲ್ಲಿನ ಮುಕುಂದಪುರದ ನಿಜಶ್ ಟೀ ಅಂಗಡಿಯಲ್ಲಿ ಇಷ್ಟೋಂದು ಬೆಲೆಬಾಳುವ ಟೀಗಳು ದೊರೆಯುತ್ತದೆ.

    ಈ ಹೋಟೆಲ್‍ನಲ್ಲಿ ಸಿಗುವ ಟೀಗಳಲ್ಲಿ ಅತೀ ದುಬಾರಿ ಟೀ ಎಂದರೆ ಬೋ-ಲಿಯೋ ಚಹಾದ ಒಂದು ಕಪ್‍ಗೆ 1000ರೂಪಾಯಿ ಆಗಿದೆ. ಟೀ ತಯಾರಿಸಲು ಬಳಸುವ ಬೋ-ಲಿಯೋ ಸೊಪ್ಪಿಗೆ 1 ಕೇಜಿಗೆ ಬರೋಬ್ಬರಿ 3 ಲಕ್ಷರೂಪಾಯಿಯಂತೆ. ಹಾಗಾಗಿ ಈ ಟೀ ಇಷ್ಟೊಂದು ಬೆಲೆ ಎಂದು ಹೇಳಲಾಗುತ್ತಿದೆ.

    ಸಿಲ್ವರ್ ಸ್ಯೂ ವೈಟ್, ಬ್ಲೂ ಟೆಸಾನೆ, ಲೆವೆಂಡರ್, ಹಿಬಿಸ್ಕಾಸ್, ವೈನ್ ಟೀ ಸೇರಿದಂತೆ ಹತ್ತಾರು ಬಗೆಯ ಟೀಗಳು ನಿಮಗೆ ಇಲ್ಲಿ ದೊರೆಯುತ್ತವೆ. 12 ರೂಪಾಯಿನಿಂದ ಪ್ರಾರಂಭವಾಗಿ 1000 ರೂಪಾಯಿ ಬೆಲೆಬಾಳುವ ಟೀಗಳು ಈ ಅಂಗಡಿಯಲ್ಲಿ ದೊರೆಯತ್ತವೆ.

    ಈ ಅಂಗಡಿ ಮಾಲೀಕರಾಗಿರುವ ಆಪಾರ್ಥ ಪ್ರತಿಮ್ ಗಂಗೂಲಿ ಅವರು ಮೊದಲು ಕಂಪನಿಯೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದರು. ಮುಂದೆ ಒಂದು ದಿನ ನಾನ್ಯಾಕೆ ಒಂದು ವ್ಯಾಪಾರ ಶುರು ಮಾಡಬಾರದು ಎಂದು ಯೋಚಿಸುತ್ತಿದ್ದಾಗ ಟೀ ಅಂಗಡಿ ಮಾಡುವ ಆಲೋಚನೆ ಇವರಿಗೆ ಬಂದಿದೆ. ಇದೀಗ ಕೋಲ್ಕತ್ತಾದಲ್ಲಿ ಫೇಮಸ್ ಟೀ ಅಂಗಡಿಗಳಲ್ಲಿ ಇದೂ ಕೂಡಾ ಒಂದಾಗಿದೆ.

  • ಕೋಲ್ಕತ್ತಾದಲ್ಲಿ ಒಂದು ಸ್ಪೆಷಲ್ ಟೀಗೆ 1,000 ರೂ

    ಕೋಲ್ಕತ್ತಾದಲ್ಲಿ ಒಂದು ಸ್ಪೆಷಲ್ ಟೀಗೆ 1,000 ರೂ

    ಕೋಲ್ಕತ್ತಾ: ಸಾಮಾನ್ಯವಾಗಿ ಚಹಾ ಎಲ್ಲರಿಗೂ ಬಹಳ ಇಷ್ಟವಾದ ಪಾನೀಯ. ಎಷ್ಟೋ ಮಂದಿ ಚಹಾ ಕುಡಿಯುವುದನ್ನು ತಮ್ಮ ದಿನನಿತ್ಯದ ಅಭ್ಯಾಸವಾಗಿ ಮಾಡಿಕೊಂಡಿರುತ್ತಾರೆ. ಅಲ್ಲದೆ ಚಹಾಕ್ಕಾಗಿ ಬೆಲೆಬಾಳುವಂತಹ ಕೆಫೆ ಅಥವಾ ರೆಸ್ಟೊರೆಂಟ್‍ಗಳಿಗೆ ಭೇಟಿ ನೀಡಿ ಚಹಾ ಸವಿಯುವುದನ್ನು ನಾವು ನೋಡಿರುತ್ತೇವೆ. ಆದರೆ ಕೋಲ್ಕತ್ತಾದ ಮುಕುಂದಪುರದ ರಸ್ತೆ ಬದಿಯಲ್ಲಿ ಛತ್ರಿ ನೆಟ್ಟು, ಅನೇಕ ಪ್ಲಾಸ್ಟಿಕ್ ಚೇರ್‍ಗಳನ್ನು ಹಾಕಿಕೊಂಡಿರುವ ಚಿಕ್ಕದೊಂದು ಚಹಾ ಅಂಗಡಿ ದುಬಾರಿ ಮೊತ್ತದ ಚಹಾವನ್ನು ಮಾರಾಟ ಮಾಡುತ್ತಿದೆ. ಈ ಚಿಕ್ಕ ಅಂಗಡಿಯಲ್ಲಿ ದೊರೆಯುವ ಸ್ಪೆಷಲ್ ಚಹಾದ ಬೆಲೆ 1,000 ರೂ ಆಗಿದೆ.

    ಹೌದು ಕೋಲ್ಕತ್ತಾದ ಪುಟ್ಟ ಚಹಾದ ಅಂಗಡಿಯೊಂದು ಸುಮಾರು ನೂರಕ್ಕೂ ಅಧಿಕ ವಿವಿಧ ರೀತಿಯ ಚಹಾಗಳನ್ನು ಮಾರಾಟ ಮಾಡುವ ಮೂಲಕ ಬಹಳ ಪ್ರಸಿದ್ಧಿಗಳಿಸಿದೆ. ಈ ಅಂಗಡಿಯಲ್ಲಿ ಒಂದು ಕಪ್ ಚಹಾ 12ರೂ. ಯಿಂದ ಪ್ರಾರಂಭವಾಗಿ 1,000 ರೂ.ವರೆಗೂ ದೊರೆಯುತ್ತದೆ. ಅದರಲ್ಲೂ ಇಲ್ಲಿ ದೊರೆಯುವ ಬೊ-ಲೇ ಟೀ ಒಂದು ಕೆಜಿಗೆ ಸುಮಾರು 3 ಲಕ್ಷ ರೂ. ಆಗಿದೆ. ಸಿಲ್ವರ್ ನೀಡಲ್ ವೈಟ್ ಟೀ, ಲ್ಯಾವೆಂಡರ್ ಟೀ, ಹೈಬಿಸ್‍ಕಸ್(ದಾಸವಾಳದ)ಟೀ, ವೈನ್ ಟೀ, ತುಳಸಿ ಟೀ, ನೀಲಿ ಟಿಸೇನ್ ಟೀ, ಟೀಸ್ತಾ ವ್ಯಾಲಿ ಟೀ, ಮಕೈಬರಿ ಟೀ, ರೂಬಿಯೋಸ್ ಟೀ ಮತ್ತು ಒಕೈಟಿ ಟೀ ಹೀಗೆ ಹಲವು ರೀತಿಯ ಭಿನ್ನ ಭಿನ್ನ ರುಚಿ ನೀಡುವ ಚಹಾ ಈ ಮುಕುಂದಪುರ ಪ್ರದೇಶದಲ್ಲಿ ದೊರೆಯುತ್ತದೆ.

    ಈ ವಿಚಾರವಾಗಿ ಮಾತನಾಡಿದ ಅಂಗಡಿಯ ಮಾಲೀಕ ಪಾರ್ಥ ಪ್ರತಿಮ್ ಗಂಗೂಲಿ, ನಾನು ಮೊದಲಿಗೆ ಬೇರೆ ಕಡೆ ಪೂರ್ತಿದಿನ ಕೆಲಸ ಮಾಡುತ್ತಿದೆ. ಆದರೆ 2014ರಲ್ಲಿ ಚಹಾದ ಅಂಗಡಿಯನ್ನು ತೆರೆದು ಸ್ವಂತ ವ್ಯಾಪಾರ ಮಾಡಲು ಆರಂಭಿಸಿದೆ. ಮೊದಲಿಗೆ ವ್ಯಾಪಾರದಲ್ಲಿ ಯಶಸ್ಸು ಕಾಣಲಿಲ್ಲ ಹೀಗಾಗಿ ವಿವಿಧ ರೀತಿಯ ಚಹಾಗಳನ್ನು ಮಾರಾಟ ಮಾಡಲು ಆರಂಭಿಸಿದೆ. ಇದರಿಂದಾಗಿ ವ್ಯಾಪಾರ ಮಾಡಲು ಹಲವು ರೀತಿಯ ಚಹಾಗಳ ಬಗ್ಗೆ ಅರಿವಿರಬೇಕು ಹಾಗೂ ಅವುಗಳನ್ನು ಹೇಗೆ ಮಾರಾಟ ಮಾಡಬೇಕೆಂಬುವುದನ್ನು ತಿಳಿದಿರಬೇಕು ಎಂದು ಹೇಳಿದರು.

  • ಪ್ರಧಾನಿಗೆ ಪತ್ರ ಬರೆದು 100 ರೂ. ಚಹಾವನ್ನು 15 ರೂ.ಗೆ ಇಳಿಸಿದ ಗ್ರಾಹಕ

    ಪ್ರಧಾನಿಗೆ ಪತ್ರ ಬರೆದು 100 ರೂ. ಚಹಾವನ್ನು 15 ರೂ.ಗೆ ಇಳಿಸಿದ ಗ್ರಾಹಕ

    ತಿರುವನಂತಪುರಂ: 100 ರೂ.ಗೆ ಮಾರಾಟವಾಗುತ್ತಿದ್ದ ಚಹಾವನ್ನು ಗ್ರಾಹರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುವ ಮೂಲಕ 15 ರೂ.ಗೆ ಇಳಿಸಿದ್ದಾರೆ.

    ಕೇರಳದ ತ್ರಿಶ್ಯೂರ್‌ ನಿವಾಸಿ ಶಾಜಿ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬಾರಿಗೆ ಬೆಲೆಗೆ ಚಹಾ ಮತ್ತು ತಿಂಡಿಗಳು ಮಾರಾಟವಾಗುತ್ತಿರುವುನ್ನು ನೋಡಿ ಪ್ರಧಾನಿಗೆ ಮೇಲ್‌ ಮಾಡಿದ್ದರು. ಈ ಮೇಲ್‌ಗೆ ಪ್ರಧಾನಿ ಸ್ಪಂದಿಸಿ ಗ್ರಾಹಕರ ಹಕ್ಕುಗಳ ಪರವಾಗಿ ನಿಂತಿದ್ದಾರೆ. ಎಲ್ಲ ವಿಮಾನ ನಿಲ್ದಾಣಗಳಲ್ಲಿ ಚಹಾ ಮತ್ತು ತಿಂಡಿಗಳಿಗೆ ದರ ನಿಗದಿ ಮಾಡಿ ಪ್ರಧಾನಿ ಸಚಿವಾಲಯ ಆದೇಶ ಪ್ರಕಟಿಸಿದೆ.

    ಆಗಿದ್ದು ಏನು?
    ಶಾಜಿಯವರು ಕೊಚ್ಚಿ ವಿಮಾನ ನಿಲ್ದಾಣಕ್ಕೆ ತೆರಳಿದಾಗ ಚಹಾಗೆ 100 ರೂ, ಮಜ್ಜಿಗೆಗೆ 110 ರೂ. ತಿಂಡಿಗೆ 200 ರೂ. ನೋಡಿ ಶಾಕ್‌ ಆಗಿದ್ದಾರೆ. ಇಷ್ಟೊಂದು ದುಬಾರಿ ದರದಲ್ಲಿ ಯಾಕೆ ಮಾರಾಟ ಮಾಡಲಾಗುತ್ತದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಅಧಿಕಾರಿಗಳ ಜೊತೆ ಈ ವಿಚಾರಕ್ಕೆ ಜಗಳ ಮಾಡಿದರೂ ಸಮಸ್ಯೆ ಪರಿಹಾರವಾಗದ ಕಾರಣ ನೇರವಾಗಿ ಪ್ರಧಾನಿಗೆ ಪತ್ರ ಬರೆದು ದೂರು ನೀಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಗೆ ರಾಖಿ ಕಳುಹಿಸಿದ ಪಾಕಿಸ್ತಾನ ಮಹಿಳೆ

    ದೂರು ನೀಡಿದ ನಂತರದ ದಿನದಲ್ಲಿ ಪ್ರಧಾನಿ ವೆಬ್‌ಸೈಟ್‌ ಗಮನಿಸಿದೆ. ಈ ವೇಳೆ ನನ್ನ ಪತ್ರದ ಹಿನ್ನೆಲೆಯಲ್ಲಿ ಚಹಾಗೆ 15 ರೂ., ಕಾಫಿಗೆ 20 ರೂ., ವಡೆಗೆ 15 ರೂ. ಗರಿಷ್ಟ ದರ ನಿಗದಿ ಪಡಿಸುವಂತೆ ವಿಮಾನ ನಿಲ್ದಾಣಗಳಿಗೆ ನಿರ್ದೇಶನ ನೀಡಿರುವ ವಿಚಾರ ತಿಳಿಯಿತು ಎಂದು ಶಾಜಿ ತಿಳಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಶಾಜಿ, ವಿಮಾನ ನಿಲ್ದಾಣಗಳಿಗೆ ಪ್ರಯಾಣಿಕರು ಸಾಧಾರಣವಾಗಿ 2-3 ಗಂಟೆ ಮೊದಲೇ ಬರುತ್ತಾರೆ. ಹೀಗಾಗಿ ವಿಮಾನ ನಿಲ್ದಾಣಗಳಲ್ಲಿರುವ ಆಹಾರವನ್ನು ಬಲವಂತವಾಗಿ ದುಬಾರಿ ಬೆಲೆ ನೀಡಿ ಸೇವಿಸಬೇಕಾಗುತ್ತದೆ. ಹಿರಿಯರು ಮತ್ತು ಹಜ್‌ ಪ್ರವಾಸಿಗರಿಗೆ ಇದು ಬಹಳ ದುಬಾರಿಯಾಗುತ್ತದೆ ಎಂದು ಹೇಳಿದರು.

    ಎಂಆರ್‌ಪಿ ದರ ನಿಗದಿಯಾಗಿದ್ದರೂ ಅಂಗಡಿಗಳು 4-5 ಪಟ್ಟು ಹೆಚ್ಚು ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ನನ್ನ ಗಮನಕ್ಕೆ ಬಂತು. ಈ ವಿಚಾರವನ್ನು ಕೊಚ್ಚಿ ವಿಮಾನ ನಿಲ್ದಾಣ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದ್ದೆ. ಆದರೆ ನನಗೆ ಯಾವುದೇ ಸಕರಾತ್ಮಕ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ ನಾನು ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ದೂರು ನೀಡಿದ್ದೆ ಎಂದು ಶಾಜಿ ವಿವರಿಸಿದರು.

  • ದಿನಕ್ಕೆ 40 ಕಪ್ ಚಹಾ ಕುಡಿಯುತ್ತಿದ್ದ ಮಹಿಳೆ ‘ಟೀ ಬಾಕ್ಸ್’ನಲ್ಲೇ ಶವವಾದ್ಳು

    ದಿನಕ್ಕೆ 40 ಕಪ್ ಚಹಾ ಕುಡಿಯುತ್ತಿದ್ದ ಮಹಿಳೆ ‘ಟೀ ಬಾಕ್ಸ್’ನಲ್ಲೇ ಶವವಾದ್ಳು

    – ತಾಯಿಯ ಕೊನೆ ಆಸೆ ತೀರಿಸಿದ ಮಗಳು

    ಲಂಡನ್: ಇಂಗ್ಲೆಂಡ್‌ನ ಮಹಿಳೆಯೊಬ್ಬರಿಗೆ ಚಹಾ ಎಂದರೆ ಅಚ್ಚುಮೆಚ್ಚು, ಪ್ರತಿದಿನ ಏನಿಲ್ಲವೆಂದರು 30ರಿಂದ 40 ಕಪ್ ಚಹಾವನ್ನು ಮಹಿಳೆ ಸವಿಯುತ್ತಿದ್ದರು. ಅವರ ಚಹಾ ಪ್ರೀತಿ ಕೇವಲ ಅವರು ಬದುಕಿದ್ದಾಗ ಮಾತ್ರವಲ್ಲದೆ ಸಾವಿನಲ್ಲೂ ಜೊತೆಯಾಗಿದೆ.

    ಇಂಗ್ಲೆಂಡ್‌ನ ಲೀಸೆಸ್ಟರ್ ಶೈರ್‌ನ ನಿವಾಸಿ ಟೀನಾ ವ್ಯಾಟ್ಸನ್(73) ಅವರಿಗೆ ಚಹಾ ಎಂದರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಅವರು ತಮ್ಮ ಸಾವಿನಲ್ಲೂ ಚಹಾ ತಮ್ಮೊಂದಿಗೆ ಒಂದಾಗಬೇಕು ಎಂಬ ಆಸೆ ಇಟ್ಟುಕೊಂಡಿದ್ದರು. ಟೀನಾ ಅವರು ಸಾಯುವ 4 ವರ್ಷಗಳ ಹಿಂದೆಯೇ ಅವರು ತಾವು ನಿಧನವಾದರೆ ತಮ್ಮ ಅಂತ್ಯಸಂಸ್ಕಾರ ಹೇಗೆ ನಡೆಯಬೇಕು ಎನ್ನುವ ಬಗ್ಗೆ ಮಗಳು ಡೇಬ್ಸ್ ಬಳಿ ಹೇಳಿಕೊಂಡಿದ್ದರು. ತಮ್ಮ ಮೃತದೇಹವನ್ನು ಚಹಾದ ಬ್ಯಾಗ್ ರೀತಿ ಕಾಣುವ ಶವದ ಪೆಟ್ಟಿಗೆಯಲ್ಲಿ ಇಟ್ಟು ಅಂತ್ಯಸಂಸ್ಕಾರ ಮಾಡಿ ಎಂದು ತಮ್ಮ ಆಸೆ ತಿಳಿಸಿದ್ದರು.

    ಹೀಗಾಗಿ ಟೀನಾ ಸಾವನ್ನಪ್ಪಿದಾಗ ಅವರ ಮೃತದೇಹವನ್ನು ಚಹಾದ ಬ್ಯಾಗ್ ರೀತಿಯೇ ಕಾಣುವ ಶವದ ಪೆಟ್ಟಿಗೆಯಲ್ಲಿ ಇಟ್ಟು ಅಂತ್ಯಸಂಸ್ಕಾರ ಮಾಡಲಾಯಿತು. ಈ ವಿಚಾರ ತಿಳಿದು ಅನೇಕರು ಎಂಥ ವಿಚಿತ್ರ ಆಸೆಯೋ ಎಂದಿದ್ದರೆ, ಕೆಲವರು ತಾಯಿಯ ಕೊನೆ ಆಸೆ ಪೂರೈಸಿದ ಮಗಳ ಪ್ರೀತಿಗೆ ಭೇಷ್ ಎಂದಿದ್ದಾರೆ.

    ಈ ಬಗ್ಗೆ ಮಾತನಾಡಿದ ಡೇಬ್ಸ್, ನನ್ನ ತಾಯಿಯ ಆಸೆಯನ್ನು ಪೂರೈಸಿದ್ದೇನೆ ಎಂಬ ತೃಪ್ತಿ ನನಗಿದೆ. ಅಮ್ಮನನ್ನು ಚಹಾದ ಬ್ಯಾಗ್ ರೀತಿ ಕಾಣುವ ಶವದ ಪೆಟ್ಟಿಗೆಯಲ್ಲಿ ಅಂತ್ಯಸಂಸ್ಕಾರ ಮಾಡಿರೋದನ್ನು ಅವರೂ ಕೂಡ ಸ್ವರ್ಗದಿಂದ ನೋಡಿದ್ದಾರೆ ಎಂದು ನಾನು ಅಂದುಕೊಂಡಿದ್ದೇನೆ. ಮೇಲಿನಿಂದ ತನ್ನ ಚಹಾ ಬ್ಯಾಗ್ ರೀತಿ ಕಾಣುವ ಶವದ ಪೆಟ್ಟಿಗೆ ನೋಡಿ ಅವರು ಸಿಕ್ಕಾಪಟ್ಟೆ ನಕ್ಕಿರುತ್ತಾರೆ. ಅವರಿಗೆ ಇದರಿಂದ ಖುಷಿಯಾಗಿದೆ ಎಂದು ನನಗೆ ಗೊತ್ತು. ಈಗಲೂ ನಾನು ಚಹಾ ಮಾಡಿದಾಗಲೆಲ್ಲಾ ಅಮ್ಮನಿಗಾಗಿ ಚಹಾವನ್ನು ಎತ್ತಿಡುತ್ತೇನೆ ಎಂದು ಹೇಳಿದ್ದಾರೆ.

    ನನ್ನ ಅಮ್ಮ 73ನೇ ವಯಸ್ಸಿಗೆ ಹೃದಯಾಘಾತದಿಂದ ನಮ್ಮನ್ನು ಅಗಲಿದರು. ಅವರು ಎರಡು ಬಾರಿ ಕ್ಯಾನ್ಸರ್ ಜೊತೆ ಹೋರಾಡಿ ಗುಣಮುಖರಾಗಿದ್ದರು. ಅವರು 14 ವರ್ಷದವರಾಗಿದ್ದಾಗ ಸ್ಪೇನ್‌ನಲ್ಲಿ ಒಂದು ಕೀಟ ಅವರನ್ನು ಕಚ್ಚಿತ್ತು. ಅದರ ಕಡಿತದಿಂದ ಅವರ 1 ಕಾಲಿಗೆ ಇನ್ಫೆಕ್ಷನ್ ಆಗಿ ಕಾಲನ್ನೇ ಕತ್ತರಿಸಬೇಕಾಯ್ತು. ಬಳಿಕ ಸೋಂಕು ಹರಡಿ ಇನ್ನೊಂದು ಕಾಲನ್ನು ಕೂಡ ಕತ್ತರಿಸಬೇಕಾಯ್ತು. ಎರಡೂ ಕಾಲನ್ನು ಕಳೆದುಕೊಂಡಿದ್ದರೂ ನನ್ನ ಅಮ್ಮ ಛಲ ಬಿಟ್ಟಿರಲಿಲ್ಲ. ಧೈರ್ಯದಿಂದ ತಮ್ಮ ಜೀವನ ನಡೆಸಿದ್ದರು. ಎಲ್ಲರನ್ನೂ ಸದಾ ಖುಷಿಯಾಗಿಡುತ್ತಿದ್ದರು ಎಂದು ತಾಯಿ ಬಗ್ಗೆ ತಿಳಿಸಿದ್ದಾರೆ. ಮಗಳು ತಾಯಿ ಮೇಲಿಟ್ಟಿರುವ ಪ್ರೀತಿ ಎಲ್ಲರ ಮನಗೆದ್ದಿದೆ.

  • ತಂದೆ, ಮಗನ ಜೀವಕ್ಕೆ ಮಾರಕವಾಯ್ತು ಚಹಾ

    ತಂದೆ, ಮಗನ ಜೀವಕ್ಕೆ ಮಾರಕವಾಯ್ತು ಚಹಾ

    ನವದೆಹಲಿ: ರಾಷ್ಟ್ರ ರಾಜಧಾನಿಯ ಬೆತುಲ್‍ನ ಮುಲ್ತೈ ಪ್ರದೇಶದಲ್ಲಿ ಚಹಾವೇ ತಂದೆ, ಮಗನ ಜೀವಕ್ಕೆ ಕುತ್ತು ತಂದಿದೆ. ವಿಷಪೂರಿತ ಚಹಾ ಕುಡಿದು ವೃದ್ಧ ರೈತ ಮೃತಪಟ್ಟಿದ್ದು, ಮಗನ ಸ್ಥಿತಿ ಚಿಂತಾಜನಕವಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.

    ಹಥ್ನಾಪುರದ ನಿವಾಸಿ ನಾತು ಬುವಾಡೆ(80) ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಚಹಾ ತಯಾರಿಸಲು ತನ್ನ ಮಗ ಡೊಮಾಗೆ ಹೇಳಿದ್ದರು. ಆದರೆ ಚಹಾ ತಯಾರಿಸುವಾಗ, ಮಗ ಗೊತ್ತಿಲ್ಲದೆ ಚಹಾ ಎಲೆಗಳ ಬದಲಿದೆ ಅದರಂತೆ ಕಾಣುವ ಬೇರೆಯ ಎಲೆಯನ್ನು ಹಾಕಿದ್ದಾನೆ. ಅಷ್ಟೇ ಅಲ್ಲದೆ ಅದೇ ಚಹಾವನ್ನು ತಂದೆ ಮತ್ತು ಮಗ ಇಬ್ಬರೂ ಕುಡಿದಿದ್ದಾರೆ. ಸ್ವಲ್ಪ ಸಮಯದ ನಂತರ ಇಬ್ಬರೂ ವಾಂತಿ ಮಾಡಲು ಶುರುಮಾಡಿದ್ದಾರೆ.

    ತಡರಾತ್ರಿ ಇಬ್ಬರ ಆರೋಗ್ಯ ಸ್ಥಿತಿ ಗಂಭಿರವಾಗಿದ್ದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ತಂದೆ ದಾರಿಮಧ್ಯೆಯೇ ಕೊನೆಯುಸಿರು ಎಳೆದಿದ್ದಾರೆ. ಮಗನನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಸದ್ಯ ಮಗನ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದಿದ್ದಾರೆ.

    ಈ ಬಗ್ಗೆ ವೈದ್ಯರು ಪ್ರತಿಕ್ರಿಯಿಸಿ, ಚಹಾದಲ್ಲಿ ವಿಷಕಾರಿ ಅಂಶ ಬೆರೆತಿದೆ. ಎಲೆಗಳಂತಹ ವಿಷಕಾರಿ ವಸ್ತುಗಳನ್ನು ಚಹಾದಲ್ಲಿ ಹಾಕಿ ತಂದೆ ಮಗ ಕುಡಿದಿದ್ದಾರೆ. ಇದು ಕಾರ್ಕೊಟಕ ವಿಷವಾಗಿರುವುದರಿಂದ ಮನುಷ್ಯನ ದೇಹಕ್ಕೆ ಸೇರಿದರೆ ತುಂಬ ಅಪಾಯಕಾರಿ.

    ತಂದೆ, ಮಗ ಇಬ್ಬರೂ ಅವರ ಚಿಕ್ಕಪ್ಪನ ಮನೆಯಲ್ಲಿದ್ದರು ಎಂದು ಸಂಬಂಧಿಕರು ಪೊಲೀಸರಿಗೆ ತಿಳಿಸಿದ್ದಾರೆ. ಸದ್ಯ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

  • ಚಹಾ, ತಿಂಡಿ ನೀಡಲು ನಿರಾಕರಿಸಿದಕ್ಕೆ ಪತ್ನಿಯನ್ನೇ ಕೊಂದ ಪತಿ!

    ಚಹಾ, ತಿಂಡಿ ನೀಡಲು ನಿರಾಕರಿಸಿದಕ್ಕೆ ಪತ್ನಿಯನ್ನೇ ಕೊಂದ ಪತಿ!

    ಮುಂಬೈ: ಚಹಾ ಮತ್ತು ಸ್ನಾಕ್ಸ್ ತಯಾರಿಸಿ ಕೊಡಲು ನಿರಾಕರಿಸಿದ್ದಕ್ಕೆ ರೊಚ್ಚಿಗೆದ್ದ ಪತಿರಾಯನೊಬ್ಬನು ತನ್ನ ಪತ್ನಿಯನ್ನೇ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆದಿದೆ.

    ಕೊಲ್ಲಾಪುರದ ಕುರುಂದ್ವಾಡ್ ಗ್ರಾಮದ ನಿವಾಸಿಯಾಗಿರುವ ರಮೇಶ್ ಗಾಯಕ್ವಾಡ್ ಕ್ಷುಲ್ಲಕ ಕಾರಣಕ್ಕೆ ಪತ್ನಿ ಮಂಗಳನನ್ನು ಕೊಲೆ ಮಾಡಿದ್ದಾನೆ. ದಂಪತಿಗಳ ನಡುವೆ ಯಾವಾಗಲೂ ಸಣ್ಣ ಪುಟ್ಟ ವಿಷಯಗಳಿಗೂ ಜಗಳ, ಗಲಾಟೆ ನಡೆಯುತ್ತಲೇ ಇತ್ತು. ಆದ್ರೆ ಭಾನುವಾರ ಮಾತ್ರ ಈ ಜಗಳ ಕೊಲೆ ಮಾಡುವ ಹಂತಕ್ಕೆ ತಲುಪಿದೆ.

    ಭಾನುವಾರ ಸಂಜೆ ರಮೇಶ್ ತನ್ನ ಪತ್ನಿಗೆ ಚಹಾ ಮತ್ತು ತಿಂಡಿಯನ್ನು ಮಾಡಿ ಕೊಡಲು ಹೇಳಿದ್ದಾನೆ, ಆಗ ಪತ್ನಿ ಮಾಡಲು ಆಗಲ್ಲ ಎಂದು ನಿರಾಕರಿಸಿದ್ದಳು. ಇಷ್ಟು ಸಣ್ಣ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಪತ್ನಿ ಕೋಪಗೊಂಡು ತನ್ನ ತವರಿಗೆ ಹೋಗುತ್ತೇನೆ ಎಂದು ಹೊರಟ್ಟಿದ್ದಾರೆ. ಆಗ ಪತಿ ಬಸ್ ನಿಲ್ದಾಣವರೆಗೂ ಬಂದು ಮನೆಗೆ ವಾಪಾಸ್ ಬರುವಂತೆ ಮನವಿ ಮಾಡಿಕೊಂಡಿದ್ದಾನೆ. ಆದ್ರೆ ಪತ್ನಿ ಇದಕ್ಕೆ ಒಪ್ಪದಿದ್ದಾಗ ಸಿಟ್ಟಿಗೆದ್ದ ಪತಿ ನೈಲಾನ್ ಹಗ್ಗದಿಂದ ಕುತ್ತಿಗೆಗೆ ಬಿಗಿದು ಆಕೆಯನ್ನು ಕೊಲೆ ಮಾಡಿದ್ದಾನೆ.

    ಕೊಲೆ ಮಾಡಿದ ಬಳಿಕ ತನ್ನ ತಪ್ಪಿನ ಅರಿವಾಗಿ, ತನ್ನ ಕುಟುಂಬಕ್ಕೆ ಮಾಹಿತಿ ತಿಳಿಸಿ ಪೊಲೀಸರಿಗೆ ಶರಣಾಗಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಗೆಯೇ ಆರೋಪಿ ಮೇಲೆ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ಪೊಲಿಸರು ತನಿಖೆ ನಡೆಸುತ್ತಿದ್ದಾರೆ.

  • ವಿಶ್ವದಾಖಲೆ ಬರೆದ ಅಸ್ಸಾಂ ಚಹಾ: 1 ಕೆಜಿ ಎಲೆಗಳಿಗೆ 39 ಸಾವಿರ!

    ವಿಶ್ವದಾಖಲೆ ಬರೆದ ಅಸ್ಸಾಂ ಚಹಾ: 1 ಕೆಜಿ ಎಲೆಗಳಿಗೆ 39 ಸಾವಿರ!

    ಗುವಾಹಟಿ: ಅಸ್ಸಾಂನ ದಿಬ್ರುಗಡ್ ಜಿಲ್ಲೆಯ ಮನೋಹರಿ ಟೀ ಎಸ್ಟೇಟ್ ತನ್ನ ಚಹಾದ ಎಲೆಗಳ ಮಾರಾಟದಲ್ಲಿ ವಿಶ್ವದಾಖಲೆ ಬರೆದಿದೆ. ಇದೇ ಮೊದಲಿಗೆ ಪ್ರತಿ ಕೆ.ಜಿ ಗೆ 39,001 ರೂ. ಗೆ ಹರಾಜು ಪ್ರಕ್ರಿಯೆಯಲ್ಲಿ ಮಾರಾಟ ಮಾಡಿ ಸುದ್ದಿಯಾಗಿದೆ.

    ರಾಷ್ಟ್ರಮಟ್ಟದಲ್ಲಿ ಚಹಾದ ಎಲೆಗಳ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಇದೇ ಮೊದಲಿಗೆ ಇಷ್ಟೊಂದು ಬೆಲೆಗೆ ಮಾರಾಟವಾಗಿದ್ದು, ಇತಿಹಾಸದ ದಾಖಲೆಯನ್ನೇ ಸೃಷ್ಟಿಸಿದೆ ಎಂದು ಗುವಾಹಟಿನ ಚಹಾದ ಹರಾಜು ಕೇಂದ್ರ ತಿಳಿಸಿದೆ.

    ವಿಶ್ವಾದ್ಯಂತ ಯಾವುದೇ ಹರಾಜು ಕೇಂದ್ರದಲ್ಲಿ ಚಹಾ ಈ ರೀತಿ ಹೆಚ್ಚಿನ ಬೆಲೆಗೆ ಮಾರಾಟವಾಗಿರಲಿಲ್ಲ. ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಹರಾಜಾಗಿದೆ. ಇದು ಹೆಮ್ಮೆ ಪಡುವಂತಹ ಕ್ಷಣವಾಗಿದೆ. ನಮ್ಮ ಸಂಸ್ಥೆ ವಿಶೇಷ ವೈವಿಧ್ಯತೆಗಳಿಗೆ ವೇದಿಕೆಯಾಗಿದ್ದು, ಇತರ ಚಹಾದ ಬೆಳೆಗಾರರಿಗೆ ಪ್ರೋತ್ಸಾಹದಾಯಕವಾಗಿದೆ. ಚಹಾದ ಎಲೆಗಳನ್ನು ದೆಹಲಿ ಮತ್ತು ಅಹಮದಾಬಾದ್‍ನಲ್ಲಿದ್ದ ಖರೀದಿಗಾರರಿಗೆ ಮಾರಲಾಯಿತು ಎಂದು ಗುವಾಹಟಿಯ ಚಹಾದ ಹರಾಜು ಕೇಂದ್ರದ ದಿನೇಶ್ ಬಿಹಾನಿರವರು ಹೇಳಿದರು.

    ಮನೋಹರಿ ಟೀ ಎಸ್ಟೇಟ್ ಮಾಲೀಕರಾದ ರಾಜನ್ ಲೋಹಿಯಾರವರ ಮಾರ್ಗದರ್ಶನದಲ್ಲಿ ಸಿ.ಕೆ. ಪರಾಶರವರು ಚಹಾವನ್ನು ಬೆಳೆಸುತ್ತಿದ್ದರು. ಅವರು ಬೆಳೆಯುವುದಕ್ಕೆ ಬೇಕಾದ ಎಲ್ಲಾ ಸೌಲಭ್ಯವನ್ನು ಒದಗಿಸುವ ಮೂಲಕ ಎಲೆಗಳ ಗುಣಮಟ್ಟ, ಸಾಕಷ್ಟು ಶ್ರಮವಹಿಸಿ ಬೆಳದಿದ್ದರಿಂದ ಈ ರೀತಿಯ ಬೆಲೆ ಪಡೆಯಲು ಸಾಧ್ಯವಾಯಿತು. ಚಹಾದ ಎಲೆಗಳು ನೋಡಲು 24 ಕ್ಯಾರೆಟ್ ಚಿನ್ನದ ಹಾಗೇ ಇವೆ ಎಂದು ಲೋಹಿಯ ಹೇಳಿದರು.

    ನಮ್ಮ ಗ್ರಾಹಕರು ಉತ್ತಮ ಗುಣಮಟ್ಟದ ಚಹಾವನ್ನು ಹೆಚ್ಚಾಗಿ ಬೇಡಿಕೆ ಇಡುತ್ತಾರೆ. ಹಾಗಾಗಿ ಕಳೆದ ವರ್ಷ ಡೋನಿ ಪ್ಲೋ ಟೀ ಎಸ್ಟೇಟ್‍ನ ಚಹಾದ ಎಲೆಗಳನ್ನು 18,801 ರೂ ಗೆ ಮಾರಾಟ ಮಾಡಲಾಗಿತ್ತು. ಗುವಾಹಟಿ ಚಹಾದ ಕೇಂದ್ರವೇ ಅತಿ ದೊಡ್ಡ ಹರಾಜು ಕೇಂದ್ರವಾಗಿದ್ದು, ಪ್ರತಿ ಬಾರಿ ದಾಖಲೆಯ ಬೆಲೆ ಪ್ರತಿ ಕೆ.ಜಿಗೆ 511 ರೂ ಮಾತ್ರವಿತ್ತು ಎಂದು ಸೌರಭ್ ಟೀ ಎಸ್ಟೇಟ್ ನ ಮಾಲೀಕ ಎಂ.ಎಲ್ ಮಹೇಶ್ವರಿರವರು ಹೇಳಿದರು.

  • ಉತ್ತರಾಖಂಡ್ ರಕ್ಷಣಾ ಕಾರ್ಯಚರಣೆ ಸ್ಫೂರ್ತಿ -ಚಹಾ ಮಾರುವವನ ಪುತ್ರಿ ಭಾರತೀಯ ವಾಯುಸೇನೆಗೆ ಆಯ್ಕೆ!

    ಉತ್ತರಾಖಂಡ್ ರಕ್ಷಣಾ ಕಾರ್ಯಚರಣೆ ಸ್ಫೂರ್ತಿ -ಚಹಾ ಮಾರುವವನ ಪುತ್ರಿ ಭಾರತೀಯ ವಾಯುಸೇನೆಗೆ ಆಯ್ಕೆ!

    ಭೋಪಾಲ್: ಭಾರತೀಯ ವಾಯುಸೇನೆ ನಡೆಸುವ ಹಾರಾಟ ವಿಭಾಗಕ್ಕೆ ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಮಧ್ಯಪ್ರದೇಶದ ಮಿಮುಚ್ ಜಿಲ್ಲೆಯಿಂದ ಚಹಾ ಮಾರಾಟ ಮಾಡುವವನ ಪುತ್ರಿ ನೇಮಕಗೊಂಡು ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.

    ಅಂಚಲ್ ಗಂಗ್ವಾಲ್(24) ಆಯ್ಕೆಗೊಂಡ ಯುವತಿ. ಮೂಲತಃ ಮಿಮುಚ್ ಜಿಲ್ಲೆಯವರಾದ ಅಂಚಲ್ ವಾಯುಸೇನೆ ನೇಮಕಾತಿ ಪ್ರವೇಶ ಪರೀಕ್ಷೆಯಲ್ಲಿ ಮಧ್ಯಪ್ರದೇಶ ರಾಜ್ಯದಿಂದ ಆಯ್ಕೆಯಾದ ಒಬ್ಬಳೆ ಒಬ್ಬ ಯುವತಿ. ಇವರ ತಂದೆ ಸುರೇಶ್ ಗಂಗ್ವಾಲ್ ಮಿಮುಚ್‍ನ ಬಸ್ ನಿಲ್ದಾಣದ ಬಳಿ ಚಹಾ ಅಂಗಡಿ ನಡೆಸುತ್ತಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಂಚಲ್, ನಾನು 12ನೇ ತರಗತಿಯಲ್ಲಿ ಓದುತ್ತಿರುವಾಗ 2013ರ ಉತ್ತರಾಖಂಡ್‍ನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಭಾರತೀಯ ರಕ್ಷಣಾ ಪಡೆಗಳು ನಡೆಸಿದ ರಕ್ಷಣಾ ಕಾರ್ಯಚರಣೆಯಿಂದ ಪ್ರೇರೇಪಣೆಗೊಂಡು ಅಂದೇ ಭಾರತೀಯ ಸೇನೆಗೆ ಸೇರಬೇಕೆಂದು ನಿರ್ಧಾರ ಮಾಡಿಕೊಂಡಿದ್ದೆ. ಆದರೆ ನನ್ನ ಕುಟುಂಬ ನನ್ನನ್ನು ಓದಿಸುವಷ್ಟು ಆರ್ಥಿಕ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ನಾನು ಭಾರತೀಯ ವಾಯುಸೇನೆಯ ಪ್ರವೇಶ ಪರೀಕ್ಷೆಯನ್ನು ತೆಗೆದುಕೊಂಡು ಆಯ್ಕೆಯಾಗಿದ್ದೇನೆ ಎಂದು ತಿಳಿಸಿದರು.

    ಭಾರತೀಯ ವಾಯುಸೇನಾ ಪರೀಕ್ಷೆಯು ಅಷ್ಟು ಸುಲಭವಾಗಿರಲಿಲ್ಲ. ನಾನು ಹಲವು ವರ್ಷಗಳಿಂದ 5 ಭಾರೀ ಪರೀಕ್ಷೆ ಬರೆದಿದ್ದರೂ ಆಯ್ಕೆಗೊಂಡಿರಲಿಲ್ಲ. ಈ ವರ್ಷ ಬರೆದ ಪರೀಕ್ಷೆಯಲ್ಲಿ ಜೂನ್ 6ರ ಫಲಿತಾಂಶದಲ್ಲಿ ತೇರ್ಗಡೆಯಾಗಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ.

    ಮಗಳ ಸಾಧನೆಯ ಬಗ್ಗೆ ಪ್ರತಿಕ್ರಿಯಿಸಿದ ತಂದೆ, ನಾನು ಬಸ್ ನಿಲ್ದಾಣದ ಹತ್ತಿರ ಚಹಾ ವ್ಯಾಪಾರ ಮಾಡುತ್ತಿದ್ದು, ಎಲ್ಲರೂ ನಾಮದೇವ್ ಟೀ ಸ್ಟಾಲ್ ಎಂದೇ ಗುರುತಿಸುತ್ತಾರೆ. ಮಗಳ ಈ ಸಾಧನೆಗೆ ಬರುವ ಗ್ರಾಹಕರು ಅಭಿನಂದನೆ ಸಲ್ಲಿಸಿ ಹೋಗುತ್ತಿದ್ದಾರೆ ಎಂದು ಹೇಳಿದ್ದಾರೆ.

    ನನ್ನ ಆರ್ಥಿಕ ಸಂಕಷ್ಟದ ನಡುವೆಯೂ ಮೂರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದ್ದೇನೆ. ಮಗ ಎಂಜಿನಿಯರಿಂಗ್ ಮಾಡುತ್ತಿದ್ದು, ಮಗಳು 12 ನೇ ತರಗತಿ ಓದುತ್ತಿದ್ದಾಳೆ. ಇಬ್ಬರಿಗೂ ಕೋಚಿಂಗ್ ನೀಡಲು ಸಾಲ ಮಾಡಿ ಸೇರಿಸಿದ್ದೆ ಎಂದು ಈ ವೇಳೆ ಹೇಳಿಕೊಂಡರು.

    ದೇಶಾದ್ಯಂತ ಒಟ್ಟು 6 ಲಕ್ಷ ಅಭ್ಯರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದು,  ಕೇವಲ 22 ಮಂದಿ ಆಯ್ಕೆಗೊಂಡಿದ್ದಾರೆ ಇದರಲ್ಲಿ ಅಂಚಲ್‍ ಕೂಡ ಒಬ್ಬರಾಗಿದ್ದಾರೆ. ವಾಯುಸೇನಾ ಪಡೆಯು ಅಂಚಲ್‍ಗೆ ಜೂನ್ 30ರೊಳಗಾಗಿ ಹೈದರಾಬಾದ್‍ನ ದುಂಡಿಗಲ್ ಬಳಿ ಇರುವ ಭಾರತೀಯ ವಾಯುಸೇನಾ ಅಕಾಡೆಮಿಗೆ ಸೇರುವಂತೆ ಸೂಚಿಸಿದೆ.

  • ಅಂದು ಚಾಯ್‍ವಾಲಾ, ಇಂದು ನೀಚ್ ಅಂದ್ರು: ಬಿಜೆಪಿ ಭರ್ಜರಿ ಗೆಲುವಿಗೆ ಕಾರಣವಾಗುತ್ತಾ?

    ಅಂದು ಚಾಯ್‍ವಾಲಾ, ಇಂದು ನೀಚ್ ಅಂದ್ರು: ಬಿಜೆಪಿ ಭರ್ಜರಿ ಗೆಲುವಿಗೆ ಕಾರಣವಾಗುತ್ತಾ?

    ನವದೆಹಲಿ: ಗುಜರಾತ್ ವಿಧಾನಸಭೆಯ ಮೊದಲ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಗುರುವಾರ ತೆರೆಬೀಳುವ ಮುನ್ನ ಭಾರೀ ವಾಕ್ಸಮರ ನಡೆದಿದೆ. ಪ್ರಧಾನಿ ಮೋದಿ ಅವರನ್ನು ಮಾನಸಿಕವಾಗಿ ಆಘಾತಗೊಳಿಸುವ ಕಾಂಗ್ರೆಸ್ ಯತ್ನ ಮುಂದುವರಿದಿದೆ. 2014ರ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ಅಭ್ಯರ್ಥಿ ಮೋದಿಯನ್ನು ಚಾಯ್‍ವಾಲಾ ಎಂದು ಹೀಗಳೆದಿದ್ದ ಮಣಿಶಂಕರ್ ಅಯ್ಯರ್ ಇವತ್ತು ಮತ್ತೆ ಹರಕುಬಾಯಿಯನ್ನು ಹರಿಬಿಟ್ಟು ವಿವಾದಕ್ಕೆ ಕಾರಣರಾಗಿದ್ದಾರೆ.

    ತಾನೊಬ್ಬ ಶಿವಭಕ್ತ ಎನ್ನುತ್ತಿರುವ ಕಾಂಗ್ರೆಸ್‍ನವರಿಗೆ ಈಗ ಬಾಬಾ ಸಾಹೇಬ್‍ಗಿಂತ ಬಾಬಾ ಬೋಲೆ ಅಂದ್ರೆ ಶಿವನ ನೆನಪು ಆಗುತ್ತಿದೆ ಎಂದು ಹೇಳಿ ಪ್ರಧಾನಿ ಮೋದಿ ಟೀಕಿಸಿದ್ದರು. ಇದಕ್ಕೆ ತಿರುಗೇಟು ನೀಡುವ ಯತ್ನದಲ್ಲಿ ಮೋದಿಯೊಬ್ಬ `ನೀಚ ಮನುಷ್ಯ’, ಅವರಿಗೆ ಮೌಲ್ಯಗಳೇ ಇಲ್ಲ. ಅಂಥವರ ಬಗ್ಗೆ ಏನು ಹೇಳಲಿಕ್ಕೆ ಆಗುತ್ತೆ ಎಂದು ಮಣಿಶಂಕರ್ ಅಯ್ಯರ್ ಮತ್ತೊಮ್ಮೆ ನಾಲಿಗೆಯನ್ನು ಹರಿಯಬಿಟ್ಟಿದ್ದಾರೆ.

    ಈ ಹೇಳಿಕೆಗೆ ಸೂರತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಇದು `ಗುಜರಾತ್ ಜನರಿಗೆ ಮಾಡಿದ ಅವಮಾನ’ ಎಂದು ತಿರುಗೇಟು ನೀಡಿದ್ದರೆ, ಪ್ರಧಾನಿ ವಿರುದ್ಧದ ಇಂಥ ಹೇಳಿಕೆಗಳು ನಾಚಿಕೆಗೇಡು. `ಮೊಘಲ್ ಮನಸ್ಥಿತಿ’ ಅಂತ ಸಚಿವ ರವಿಶಂಕರ್ ಪ್ರಸಾದ್ ಕಿಡಿ ಕಾರಿದರು.

    ಈ ವಿಚಾರ ದೊಡ್ಡದಾಗುತ್ತಿದ್ದಂತೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಪ್ರಧಾನಿ ಮೋದಿ ಅವರನ್ನು ಉದ್ದೇಶಿಸಿ ಮಣಿಶಂಕರ್ ಅಯ್ಯರ್ ಬಳಸಿದ ಭಾಷೆ ಸರಿಯಲ್ಲ, ಕಾಂಗ್ರೆಸ್ ಈ ಸಂಸ್ಕೃತಿಯನ್ನು ಬಯಸುವುದಿಲ್ಲ. ಹೀಗಾಗಿ ಮಣಿಶಂಕರ್ ಅಯ್ಯರ್ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ. ಈ ಟ್ವೀಟ್ ಬೆನ್ನಲ್ಲೇ ಮಣಿಶಂಕರ್ ಅಯ್ಯರ್ ಪ್ರತಿಕ್ರಿಯಿಸಿ ಕ್ಷಮೆ ಕೇಳಿ ನಾನು ಆ ಪದವನ್ನು ಜಾತಿ ಆಧಾರದಲ್ಲಿ ಬಳಸಿ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಮೋದಿ ತಿರುಗೇಟು: ತನ್ನ ವಿರುದ್ಧ ಮಾತನಾಡಿದವರ ಹೇಳಿಕೆಯನ್ನು ಬಳಸಿಕೊಂಡೇ ಅವರಿಗೆ ತಿರುಗೇಟು ನೀಡುವ ಅಭ್ಯಾಸ ಮಾಡಿಕೊಂಡಿರುವ ಮೋದಿ ಅಯ್ಯರ್ ಹೇಳಿಕೆಯನ್ನೇ ಇಟ್ಟುಕೊಂಡು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಹೌದು ನಾನು, ಕೆಳ ವರ್ಗದಲ್ಲಿ ಜನಿಸಿದ ವ್ಯಕ್ತಿ. ನನ್ನ ಜೀವನದ ಪ್ರತಿಕ್ಷಣವನ್ನು ಬಡವರ ಏಳಿಗೆಗಾಗಿ ಮುಡುಪಾಗಿಟ್ಟಿದ್ದೇನೆ. ಬಡವರು, ದಲಿತರು, ಬುಡಕಟ್ಟು ಜನಾಂಗ ಮತ್ತು ಹಿಂದೂಳಿದ ವರ್ಗಗಳ ಅಭಿವೃದ್ಧಿಗಾಗಿ ನಾನು ಕೆಲಸ ಮಾಡುತ್ತಿದ್ದೇನೆ. ಅವರು ತನ್ನ ಬಗ್ಗೆ ಏನು ಬೇಕಾದರೂ ಹೇಳಲಿ ನಾನು ನನ್ನ ಕೆಲಸವನ್ನು ಮಾಡುತ್ತಿರುತ್ತೇನೆ. ನನ್ನ ಕೆಲಸ ಮೇಲ್ಮಟ್ಟ(ಉಂಚ್)ದಲ್ಲಿದೆ. ಅಯ್ಯರ್ ಹೇಳಿಕೆ ಗುಜರಾತ್ ಜನತೆಗೆ ಮಾಡಿದ ಅವಮಾನ. ಇದಕ್ಕೆ ಜನ ಬ್ಯಾಲೆಟ್ ಬಾಕ್ಸ್ ನಲ್ಲಿ ಸರಿಯಾದ ಪಾಠವನ್ನು ಕಲಿಸಲಿದ್ದಾರೆ ಎಂದು ಹೇಳಿ ವಾಗ್ದಾಳಿ ನಡೆಸಿದರು.

    ಪಾಠ ಕಲಿಯದ ಕಾಂಗ್ರೆಸ್:
    ಒಮ್ಮೆ ಇತಿಹಾಸವನ್ನು ನೋಡಿದಾಗ ಯಾವ ಪದ ಬಳಸಿ ಲೇವಡಿ ಮಾಡಲಾಗುತ್ತದೋ ಆ ಪದ ಮೋದಿ ಅವರ ಯಶಸ್ಸಿಗೆ ಕಾರಣವಾಗುತ್ತದೆ. ಮೋದಿ ವಿರುದ್ಧ ವೈಯಕ್ತಿಕವಾಗಿ ದಾಳಿ ಮಾಡಿದಾಗ ಆ ದಾಳಿಗಳು ಮೋದಿ ಪರ ಅಲೆಯನ್ನು ಸೃಷ್ಟಿ ಮಾಡಿರುವುದು ನಮ್ಮ ಕಣ್ಣ ಮುಂದಿದೆ. 2007ರಲ್ಲಿ ಸೋನಿಯಾ ಗಾಂಧಿ ಮೌತ್ ಕಾ ಸೌದ್ಗಾರ್ (ಸಾವಿನ ಏಜೆಂಟ್) ಎಂದು ಮೋದಿಯನ್ನು ಟೀಕಿಸಿದ್ದರು. ಇದನ್ನೇ ಬಳಸಿಕೊಂಡಿದ್ದ ಮೋದಿ ಅಂದು ಗುಜರಾತ್ ವಿಧಾನಸಭೆ ಚುನಾವಣೆ ಹಿಂದೂ ಮತಗಳನ್ನು ಧ್ರುವೀಕರಣ ಮಾಡಿಕೊಂಡು ಗೆಲವು ಸಾಧಿಸಿ ಸಿಎಂ ಆಗಿದ್ದರು.

    2014ರ ಲೋಕಸಭೆ ಚುನಾವಣೆಯಲ್ಲಿ ಮಣಿ ಶಂಕರ್ ಅಯ್ಯರ್ ಚಾಯ್ ವಾಲಾ ಎಂದು ಟೀಕೆ ಮಾಡಿದ್ದರು. ಮೋದಿ ಪ್ರಧಾನಿ ಅಭ್ಯರ್ಥಿಯೇ ಅಲ್ಲ. ಚಹಾ ಮಾರುವುದಕ್ಕೆ ಸೂಕ್ತ ವ್ಯಕ್ತಿ ಎಂದಿದ್ದರು. ಇದನ್ನು ಬಳಸಿಕೊಂಡಿದ್ದ ಬಿಜೆಪಿ `ಚಾಯ್ ಪೇ ಚರ್ಚಾ’ ಹೆಸರಿನಲ್ಲಿ ಹೊಸ ಅಭಿಯಾನ ಹುಟ್ಟು ಹಾಕಿತ್ತು. ಈ ಅಭಿಯಾನ ದೊಡ್ಡಮಟ್ಟದಲ್ಲಿ ಜನ ಮಾನಸದಲ್ಲಿ ಉಳಿದುಕೊಳ್ಳುವ ಮೂಲಕ ಯಶಸ್ವಿಯಾಗಿತ್ತು.

    ಈ ಚುನಾವಣೆಯಲ್ಲೇ ಯುವ ಕಾಂಗ್ರೆಸ್ ಕೆಲ ದಿನಗಳ ಹಿಂದೆ ಚಾಯ್‍ವಾಲಾ ಎಂದು ಬಿಂಬಿಸಿ ಗ್ರಾಫಿಕ್ಸ್ ಮಾಡಿದ ಫೋಟೋ ಒಂದನ್ನು ಟ್ವೀಟ್ ಮಾಡಿತ್ತು. ಈ ಟ್ವೀಟ್ ಗೆ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಅದನ್ನು ಡಿಲೀಟ್ ಮಾಡಿತ್ತು. ಆದರೆ ಇದನ್ನೆ ಬಳಸಿಕೊಂಡ ಮೋದಿ ಹೌದು ನಾನು ಚಾಯ್‍ವಾಲ. ಚಹಾ ಮಾರಾಟ ಮಾಡಿದ್ದೇನೆ. ಆದರೆ ನಿಮ್ಮಂತೆ ನಾನು ದೇಶ ಮಾರಾಟ ಮಾಡಿಲ್ಲ. ಬೇಕಾದ್ರೆ ನೀವು ಚಹಾ ಮಾರಾಟ ಮಾಡಿ ದೇಶ ಮಾತ್ರ ಮಾರಬೇಡಿ ಎಂದು ಹೇಳಿ ವಾಗ್ದಾಳಿ ನಡೆಸಿದ್ದರು. ಅಷ್ಟೇ ಅಲ್ಲದೇ ಈ ಚುನಾವಣೆ ಸಂದರ್ಭದಲ್ಲಿ ನಡೆದ ಮನ್ ಕೀ ಬಾತ್ ಕಾರ್ಯಕ್ರಮವನ್ನು ಗುಜರಾತ್ ಬಿಜೆಪಿ ನಾಯಕರು ಚಹಾ ಕುಡಿಯುತ್ತಾ ಕೇಳಿ ಕಾಂಗ್ರೆಸ್ ತಿರುಗೇಟು ನೀಡಿದ್ದರು.

     

     

  • ಆಯಾಗಳು ಪಾಠ ಮಾಡ್ತಿರೋದು ಯಾಕೆ ಎಂದು ಕೇಳಿದ್ದಕ್ಕೆ, ಟೀ ಮಾರೋ ವ್ಯಕ್ತಿ ದೇಶದ ಪ್ರಧಾನಿ ಆಗಿಲ್ವೇ ಎಂದು ಉತ್ತರಿಸಿದ ಪ್ರಿನ್ಸಿಪಾಲ್

    ಆಯಾಗಳು ಪಾಠ ಮಾಡ್ತಿರೋದು ಯಾಕೆ ಎಂದು ಕೇಳಿದ್ದಕ್ಕೆ, ಟೀ ಮಾರೋ ವ್ಯಕ್ತಿ ದೇಶದ ಪ್ರಧಾನಿ ಆಗಿಲ್ವೇ ಎಂದು ಉತ್ತರಿಸಿದ ಪ್ರಿನ್ಸಿಪಾಲ್

    – ಬ್ರಿಗೇಡ್ ಮಿಲೇನಿಯಂ ಸ್ಕೂಲ್‍ನಲ್ಲಿ ಪೋಷಕರ ಪ್ರತಿಭಟನೆ
    – ಆರ್‍ಟಿಇ ವಿದ್ಯಾರ್ಥಿಗಳಿಗೆ ಪಾಠ ಮಾಡ್ತಿದ್ದಾರೆ ಆಯಾಗಳು

    ಬೆಂಗಳೂರು: ಗರಬಡಿದವರಂತೆ ಕೂತ ಪುಟಾಣಿ ಮಕ್ಕಳು, ಇನ್ನೊಂದಡೆ ಧಿಕ್ಕಾರದ ಕೂಗು, ಪೋಷಕರ ಆಕ್ರೋಶ. ಆರ್‍ಟಿಇ ಮಕ್ಕಳಿಗೆ ತಾರತಮ್ಯ, ದುಡ್ಡಿನ ಹಮ್ಮಿನಲ್ಲಿ ಮಕ್ಕಳ ಬದುಕಿನೊಂದಿಗೆ ಚೆಲ್ಲಾಟ. ಇದು ನಗರದ ಖಾಸಗಿ ಶಾಲೆಯ ಕರ್ಮಕಾಂಡದ ಸ್ಟೋರಿ.

    ಜೆಪಿನಗರದಲ್ಲಿರುವ ಬ್ರಿಗೇಡ್ ಮಿಲೇನಿಯಂ ಶಾಲೆಯಲ್ಲಿ ಆರ್‍ಟಿಇ ಮಕ್ಕಳಿಗೆ ಬೇಕಾಬಿಟ್ಟಿ ಚೇರ್ ನೀಡಿದರೆ, ಡೊನೇಶನ್ ನೀಡಿ ಸೇರ್ಪಡೆಯಾದ ಶ್ರೀಮಂತರ ಮಕ್ಕಳಿಗೆ ಹೈ ಫೈ ಚೇರ್ ನೀಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.

    ಮಕ್ಕಳಿಗೆ ಶಾಲೆಯಿಂದ ಬೇಧಭಾವ ಆಗುತ್ತಿರುವ ಬಗ್ಗೆ ಪೋಷಕರು ದೂರು ನೀಡಿದ ಹಿನ್ನೆಲೆಯಲ್ಲಿ ಗುರುವಾರ ಬಿಇಓ ಪರವಾಗಿ ಕ್ಲಸ್ಟರ್ ರೀಸೋರ್ಸ್ ಪರ್ಸನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಮೋದಿ ಪ್ರಧಾನಿ ಆಗಿಲ್ವೇ?: ಆರ್‍ಟಿಇ ಅಡಿ ಮಕ್ಕಳಿಗೆ ಆಯಾಗಳ ಕೈಯಲ್ಲಿ ಪಾಠ ಮಾಡಿಸುತ್ತಿರುವುದು ಯಾಕೆ ಎಂದು ಪ್ರಶ್ನೆ ಮಾಡಿದ್ದಕ್ಕೆ, ಪ್ರಾಂಶುಪಾಲೆ ಸ್ಟೆಲ್ಲಾ ಪಾರ್ಥ ಸಾರಥಿ, ಅಯ್ಯೋ ಚಾ ಮಾರುವ ವ್ಯಕ್ತಿ ದೇಶದ ಪ್ರಧಾನಿಯಾಗಿಲ್ವೇ? ಹಾಗೆ ಆಯಾ ಕೈಯಿಂದ ಪಾಠ ಮಾಡಿಸಿದ್ರೆ ತಪ್ಪೇನು ಎಂದು ಹಾಸ್ಯಾಸ್ಪದ ಉತ್ತರ ನೀಡಿದ್ದಾರೆ.

    ಗುರುವಾರ ಶಾಲೆಯನ್ನು ಪ್ರವೇಶಿಸಲು ಪೋಷಕರು ಮುಂದಾಗಿದ್ದರು. ಆದರೆ ಪ್ರವೇಶಕ್ಕೆ ಭದ್ರತಾ ಸಿಬ್ಬಂದಿ ಅನುಮತಿ ನೀಡಲು ನಿರಾಕರಿಸಿದ್ದಕ್ಕೆ ಆಡಳಿತ ಮಂಡಳಿಯ ಜೊತೆ ಮಾತಿನ ಚಕಮಕಿ ನಡೆಯಿತು. ಶಾಲೆಯ ಸಿಸಿಟಿವಿ ದೃಶ್ಯವನ್ನು ತೋರಿಸುವಂತೆ ಪೋಷಕರು ಆಗ್ರಹಿಸಿದ್ದಾರೆ.

    ಬುಧವಾರ ಏನಾಗಿತ್ತು?
    ಪಠ್ಯ ಸರಿಯಾಗಿ ಮಾಡದೇ ಇರುವುದು, ಮಕ್ಕಳಿಗೆ ಕುಳಿತುಕೊಳ್ಳಲು ಸರಿಯಾದ ಬೆಂಚ್ ವ್ಯವಸ್ಥೆ ಮಾಡದಿರುವ ಬಗ್ಗೆ ಪೋಷಕರು ಬಿಇಓ ಕಚೇರಿಗೆ ಸಾಕಷ್ಟು ಬಾರಿ ದೂರು ನೀಡಿದ್ದರು. ಪ್ರತಿಭಟನೆಯ ವೇಳೆ ಆಡಳಿತ ಮಂಡಳಿಯವರ ಜೊತೆ ವಾಕ್ಸಮರ ನಡೆದಿತ್ತು. ಸ್ಥಳಕ್ಕೆ ಬಂದ ನೋಡಲ್ ಆಫೀಸರ್ ಕ್ಲಾಸ್ ರೂಂನೊಳಗೆ ಹೋದಾಗ ಬ್ರಿಗೇಡ್ ಮಿಲೇನಿಯಂ ಶಾಲೆಯ ಕರಾಳ ಮುಖ ಬಯಲಾಗಿತ್ತು. ಆರ್‍ಟಿಇ ಅಡಿಯಲ್ಲಿ ದಾಖಲಾದ ಅಷ್ಟು ಮಕ್ಕಳನ್ನು ಒಂದೇ ಕ್ಲಾಸ್ ರೂಂನೊಳಗೆ, ತುಕ್ಕು ಹಿಡಿದ ಬೇಂಚ್ ಕೊಟ್ಟು ಕೂರಿಸಿದ ಶಾಲೆಯ ಅಮಾನವೀಯ ಮುಖ ಬಯಲಾಗಿತ್ತು.

    ಈ ಬಗ್ಗೆ ಸ್ಪಷ್ಟನೆ ನೀಡಿದ ಪ್ರಾಂಶುಪಾಲೆ ಆರ್‍ಟಿಇ ಅಡಿಯಲ್ಲಿ ದಾಖಲಾದ ಮಕ್ಕಳು ಬುದ್ಧಿವಂತರಲ್ಲ, ಅದಕ್ಕೆ ಅವರಿಗೆ ಪ್ರತ್ಯೇಕ ಕ್ಲಾಸ್ ನಲ್ಲಿ ಇರಿಸಿದ್ದೇವೆ. ಅಷ್ಟೇ ಅಲ್ಲದೇ ಶಾಲೆಯಲ್ಲಿ ಪೀಠೋಪಕರಣ ಕೊರತೆ ಇದೆ ಎಂದು ಅಹಂಕಾರದ ಉತ್ತರ ನೀಡಿದ್ದರು.

    ಈ ಸಂಬಂರ್ಧದಲ್ಲಿ ಶಿಕ್ಷಕರೊಬ್ಬರು ಪೋಷಕರ ಜೊತೆ ಗಲಾಟೆ ಮಾಡಿದ್ದರು. ಪ್ರಾಂಶುಪಾಲರ ಉತ್ತರದಿಂದ ಸಿಟ್ಟಾಗಿದ್ದ ಪೋಷಕರು ಈ ಮಾತುಗಳನ್ನು ಕೇಳಿ ಅಲ್ಲೇ ಶಿಕ್ಷಕನಿಗೆ ಕಪಾಳಮೋಕ್ಷ ಮಾಡಿದ್ದರು.

    https://www.youtube.com/watch?v=7Lfnd0Hg9-c