Tag: ಚನ್ನವೀರ ಕಣವಿ

  • ಗೋವಾ ರಸ್ತೆಯ ಸೃಷ್ಟಿ ಫಾರ್ಮ್‍ನಲ್ಲಿ ಚೆನ್ನವೀರ ಕಣವಿ ಅಂತ್ಯಕ್ರಿಯೆ

    ಗೋವಾ ರಸ್ತೆಯ ಸೃಷ್ಟಿ ಫಾರ್ಮ್‍ನಲ್ಲಿ ಚೆನ್ನವೀರ ಕಣವಿ ಅಂತ್ಯಕ್ರಿಯೆ

    ಧಾರವಾಡ: ಹಿರಿಯ ಕವಿ ನಾಡೋಜ ಡಾ. ಚೆನ್ನವೀರ ಕಣವಿ ವಿಧಿವಶ ಹಿನ್ನೆಲೆಯಲ್ಲಿ ಸಂಜೆ ತೋಟದ ಮನೆಯಲ್ಲಿ ಅಂತ್ಯಕ್ರಿಯೆ ಮಾಡುವುದಾಗಿ ಚೆನ್ನವೀರ ಕಣವಿ ಪುತ್ರ ಪ್ರಿಯದರ್ಶಿ ತಿಳಿಸಿದ್ದಾರೆ.

    ಕಳೆದ ಜನವರಿ 15 ರಂದು ಅನಾರೋಗ್ಯದ ಕಾರಣ ಚೆನ್ನವೀರ ಕಣವಿ ಧಾರವಾಡ ಎಸ್‍ಡಿಎಂ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ನಂತರ ಅವರಿಗೆ ಕೊರೊನಾ ಪಾಸಿಟಿವ್ ಕೂಡಾ ಬಂದಿತ್ತು. ಈ ಹಿನ್ನೆಲೆ ಅವರಿಗೆ ಐಸಿಯುದಲ್ಲಿ ಚಿಕಿತ್ಸೆ ಮುಂದುವರೆಸಲಾಗಿತ್ತು. ತದನಂತರ ಕೊರೊನಾ ನೆಗೆಟಿವ್ ಬಂದ ಮೇಲೂ ಉಸಿರಾಟದ ತೊಂದರೆ ಹಾಗೂ ಕಿಡ್ನಿ ಸಮಸ್ಯೆಯಿಂದ ಕಣವಿ ಆಸ್ಪತ್ರೆಯಲ್ಲೇ ದಾಖಲಾಗಿದ್ದರು. ಆದರೆ ಇಂದು ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಚೆಂಬೆಳಕಿನ ಕವಿಯನ್ನು ಸಿನಿಮಾ ರಂಗ ಅಪ್ಪಿಕೊಳ್ಳಲಿಲ್ಲ

    ಕುಟುಂಬದವರು ಎಲ್ಲರೂ ಚೆನ್ನವೀರ ಕಣವಿ ಅವರ ಅಂತ್ಯಕ್ರಿಯೆ ಸೃಷ್ಟಿ ತೋಟದಲ್ಲಿರುವ ಕಣವಿ ಅವರ ಪತ್ನಿ ಶಾಂತಾದೇವಿ ಕಣವಿ ಅವರ ಸಮಾಧಿ ಪಕ್ಕದಲ್ಲೇ ಮಾಡುವುದಾಗಿ ನಿರ್ಧಾರ ಮಾಡಿದ್ದಾರೆ. ಇನ್ನು ಆಸ್ಪತ್ರೆಯಿಂದ ಧಾರವಾಡ ಕಲ್ಯಾಣನಗರದ ಮನೆಗೆ ಪಾರ್ಥಿವ ಪೂಜೆ ಮಾಡಿದ ನಂತರ, ಕಣವಿ ಅವರ ಪಾರ್ಥಿವ ಶರೀರವನ್ನು ಕೆಸಿಡಿ ಮೈದಾನಕ್ಕೆ ತಂದು ಅಂತಿಮ ದರ್ಶನಕ್ಕೆ ಇಡಲಾಗಿದೆ. ಇದನ್ನೂ ಓದಿ: ಸುನೀತಗಳ ಸಾಮ್ರಾಟ್ ಚನ್ನವೀರ ಕಣವಿ ನಿಧನಕ್ಕೆ ಕಂಬನಿ ಮಿಡಿದ ಗಣ್ಯರು

  • ಸುನೀತಗಳ ಸಾಮ್ರಾಟ್ ಚನ್ನವೀರ ಕಣವಿ ನಿಧನಕ್ಕೆ ಕಂಬನಿ ಮಿಡಿದ ಗಣ್ಯರು

    ಸುನೀತಗಳ ಸಾಮ್ರಾಟ್ ಚನ್ನವೀರ ಕಣವಿ ನಿಧನಕ್ಕೆ ಕಂಬನಿ ಮಿಡಿದ ಗಣ್ಯರು

    ಬೆಂಗಳೂರು: ಕನ್ನಡದ ಸಮನ್ವಯ ಕವಿ, ಸುನೀತಗಳ ಸಾಮ್ರಾಟ್ ಎಂದು ಪ್ರಸಿದ್ಧರಾದ, ಚೆಂಬೆಳಕಿನ ಕವಿ ನಾಡೋಜ ಚನ್ನವೀರ ಕಣವಿ ಅವರ ನಿಧನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

    ಈ ಬಗ್ಗೆ ಪತ್ರಿಕಾ ಪ್ರಕಟನೆ ಹೊರಡಿಸಿದ ಟಿ.ಎಸ್.ನಾಗಾಭರಣ ಅವರು, ಕನ್ನಡದ ಖ್ಯಾತ ವಿದ್ವಾಂಸ ಮತ್ತು ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿದ್ದ ಚನ್ನವೀರ ಕಣವಿ ಅವರು ಧಾರವಾಡದ ಮಾಧ್ಯಮಿಕ ಹಾಗೂ ಕಾಲೇಜು ಶಿಕ್ಷಣ ಪೂರೈಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದು ಆಗ ತಾನೆ ಆರಂಭವಾಗಿದ್ದ ವಿಶ್ವವಿದ್ಯಾಲಯದ ಪ್ರಸಾರಂಗ ವಿಭಾಗದ ಕಾರ್ಯದರ್ಶಿಯಾಗಿದ್ದರು. ಕನ್ನಡ ಸಾಹಿತ್ಯ ಲೋಕದಲ್ಲಿ ಸ್ನೇಹ, ಪ್ರೀತಿ, ಸೌಜನ್ಯ, ಮಾನವೀಯ ಅಂತಃಕರಣದ ಕವಿಯಾಗಿ ಪ್ರಸಿದ್ಧರಾದ ನಾಡಿನ ಹಿರಿಯ ಸಾಹಿತಿ ನವೋದಯ ಮತ್ತು ನವ್ಯದ ಕೊಂಡಿಯಂತೆ ಚನ್ನವೀರ ಕಣವಿ ಅವರು ಸಾಹಿತ್ಯ ಲೋಕಕ್ಕೆ ಅನನ್ಯ ಸೇವೆ ಸಲ್ಲಿಸಿದ್ದರು. ಇದನ್ನೂ ಓದಿ: ಚೆಂಬೆಳಕಿನ ಕವಿಯನ್ನು ಸಿನಿಮಾ ರಂಗ ಅಪ್ಪಿಕೊಳ್ಳಲಿಲ್ಲ

    ಬೇಂದ್ರೆ, ಕುವೆಂಪು, ಪು.ತಿ.ನ ಮೊದಲಾದವರು ಹೊಸದಾಗಿ ಕಾವ್ಯ ರಚನೆಗೆ ತೊಡಗುವವರನ್ನು ಗಾಢವಾಗಿ ಪ್ರಭಾವಿಸುತ್ತಿದ್ದ ಕಾಲದಲ್ಲಿ ಚನ್ನವೀರ ಕಣವಿಯವರು ಬರವಣಿಗೆಯಲ್ಲಿ ತೊಡಗಿದ್ದರು. ನವೋದಯ ನಡುಹಗಲ ಕಾಲದಲ್ಲಿ ಕವಿಯಾಗಿ ಕಣವಿ ಪ್ರಕಟವಾಗಿದ್ದರು. ನವ್ಯ ಕಾವ್ಯದಿಂದಾಗಿ ರೂಪುಗೊಂಡ ಮುಕ್ತ ಛಂದಸ್ಸು, ವಾಸ್ತವ, ಸಾಮಾಜಿಕ ಎಚ್ಚರ, ವ್ಯಂಗ್ಯ ವಿಡಂಬನೆಗಳ ಬಗ್ಗೆ ಕಣವಿ ಅವರು ಬರೆದಿದ್ದರೂ ಅವರ ವ್ಯಕ್ತಿತ್ವದ ಮೂಲದ್ಯವ್ಯಗಳಾದ ನಿಸರ್ಗಪ್ರಿಯತೆ, ಅನುಭಾವಿಕ ದೃಷ್ಠಿ, ಮಾನವೀಯತೆ, ಮೌಲ್ಯಪ್ರಜ್ಞೆ ಇತ್ಯಾದಿಗಳನ್ನು ಅವರು ತಮ್ಮ ಬರವಣಿಗೆಯಲ್ಲಿ ಬಿಟ್ಟು ಕೊಟ್ಟಿರಲಿಲ್ಲ. ಇದನ್ನೂ ಓದಿ: ಹಿರಿಯ ಕವಿ, ನಾಡೋಜ ಚನ್ನವೀರ ಕಣವಿ ವಿಧಿವಶ

    ಗೀತ ಮಾಧುರಿಯಲ್ಲಿ ಚನ್ನವೀರ ಕಣವಿ ಕವಿ ಮತ್ತು ಕವನ ದೃಶ್ಯಿಕರಿಸಿದ್ದು ನನಗೆ ಸದಾ ಸ್ಪೂರ್ತಿಧಾಯಿ. ನನಗೆ ನಿರಂತರ ಪ್ರೇರಣೆಯಾಗಿರುವ ಕವಿ ಕಣವಿ ಅವರಿಗೆ ನಮ್ಮ ನುಡಿ ನಮನಗಳು ಎಂದು ಟಿ.ಎಸ್.ನಾಗಾಭರಣ ತಿಳಿಸಿದ್ದಾರೆ.

    ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ ಗೌರವ, 65ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಗೌರವ, ಆಳ್ವಾಸ್-ನುಡಿಸಿರಿ ಸಮ್ಮೇಳನಾಧ್ಯಕ್ಷರ ಗೌರವಗಳಿಗೆ ಭಾಜನರಾಗಿದ್ದ ಚನ್ನವೀರ ಕಣವಿ ಅವರ ನಿಧನ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಟಿ.ಎಸ್.ನಾಗಾಭರಣ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

     

    ಹೆಚ್.ಡಿ.ಕುಮಾರಸ್ವಾಮಿ ಕಂಬನಿ:
    ನಾಡೋಜ ಚನ್ನವೀರ ಕಣವಿ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕಂಬನಿ ಮಿಡಿದಿದ್ದಾರೆ. ಆಧುನಿಕ ಕನ್ನಡ ಕಾವ್ಯದ ಮೇರು ಪ್ರತಿಭೆಗಳಲ್ಲಿ ಒಬ್ಬರು, ಹೊಂಬೆಳಕಿನ ಕವಿ, ಸುನೀತಗಳ ಸಾಮ್ರಾಟರೆಂದೇ ಕನ್ನಡಿಗರ ಮನಸ್ಸುಗಳಲ್ಲಿ ತುಂಬಿಹೋಗಿರುವ ನಾಡೋಜ ಚನ್ನವೀರ ಕಣವಿ ಅವರ ನಿಧನದ ಸುದ್ದಿ ಕೇಳಿ ಆಘಾತ ಉಂಟಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಣವಿ ಅವರು ಚೇತರಿಸಿಕೊಂಡು ಕ್ಷೇಮವಾಗಿ ಮನೆಗೆ ಮರಳುತ್ತಾರೆಂಬ ನಮ್ಮೆಲ್ಲರ ನಿರೀಕ್ಷೆಯನ್ನು ಹುಸಿ ಮಾಡಿ ಅಗಲಿದ್ದಾರೆ. ಅವರಿಲ್ಲದಿರುವಿಕೆ ಕನ್ನಡ ಸಾರಸ್ವತ ಲೋಕದಲ್ಲಿ ದೊಡ್ಡ ಶೂನ್ಯವನ್ನೇ ಸೃಷ್ಟಿ ಮಾಡಿದೆ ಎನ್ನುವುದು ನನ್ನ ಅಭಿಪ್ರಾಯ.

    “ಹೂವು ಹೊರಳುವುವು ಸೂರ್ಯನ ಕಡೆಗೆ
    ನಮ್ಮ ದಾರಿ ಬರಿ ಚಂದ್ರನವರೆಗೆ
    ಇರುಳಿನ ಒಡಲಿಗೆ ದೂರದ ಕಡಲಿಗೆ
    ಮುಳುಗಿದಂತೆ ದಿನ ಬೆಳಗಿದಂತೆ
    ಹೊರ ಬರುವನು ಕೂಸಿನ ಹಾಗೆ”

    ಇಂಥ ಅನನ್ಯ ಕಾವ್ಯ ರಚಿಸಿದ ಅವರು ಅಜರಾಮರ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಕುಟುಂಬದವರು, ನಾಡಿನ ಜನರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥನೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

  • ಪ್ರಶಸ್ತಿಗಳಿಗೆ ಗೌರವ ಬರುವ ವ್ಯಕ್ತಿತ್ವ ಕಣವಿ ಅವರದ್ದು: ಬೊಮ್ಮಾಯಿ

    ಪ್ರಶಸ್ತಿಗಳಿಗೆ ಗೌರವ ಬರುವ ವ್ಯಕ್ತಿತ್ವ ಕಣವಿ ಅವರದ್ದು: ಬೊಮ್ಮಾಯಿ

    ಬೆಂಗಳೂರು: ಖ್ಯಾತ ಕವಿ ಚನ್ನವೀರ ಕಣವಿ ಅವರು ಕೋವಿಡ್ ಸೋಂಕಿಗೆ ತುತ್ತಾಗಿದ್ದರು. ಅವರನ್ನು ಜ.14ರಂದು ಧಾರವಾಡದ ಎಸ್‍ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ನಾಯಕರು ಸಂತಾಪವನ್ನು ಸೂಚಿಸಿದ್ದಾರೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ, ನಾಡು ಕಂಡಂತಹ ಅತ್ಯಂತ ಸೃಜನಶೀಲ ಸಾಹಿತ್ಯ ರಚನೆಕಾರರು, ಚಂಬೆಳಕಿನ ಕವಿ, ನಾಡೋಜ ಶ್ರೀ ಚೆನ್ನವೀರ ಕಣವಿ ಅವರು ನಿಧನರಾದ ವಿಷಯ ತಿಳಿದು ತುಂಬಾ ದುಃಖಿತನಾಗಿದ್ದೇನೆ. ಸಾಹಿತ್ಯದ ಮುಖಾಂತರ ಅವರು ತಮ್ಮ ಕಲ್ಪನೆ ಹಾಗೂ ವಾಸ್ತವಾಂಶವನ್ನು ಪರಿಣಾಮಕಾರಿಯಾಗಿ ಬಿಂಬಿಸಿದ ಕವಿ ಆಗಿದ್ದರು. ಪ್ರಶಸ್ತಿಗಳಿಗೆ ಗೌರವ ಬರುವ ವ್ಯಕ್ತಿತ್ವ ಅವರದಾಗಿತ್ತು. ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ಬಹುದೊಡ್ಡ ಹಾನಿಯಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗು ಅವರ ಕುಟುಂಬ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲಿಯೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.

    ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಂತಾಪವನ್ನು ಸೂಚಿಸಿದ್ದು, ಕನ್ನಡ ಕಾವ್ಯಲೋಕದ ಚೆಂಬೆಳಕಾಗಿದ್ದ, ಸೌಹಾರ್ದತೆಯನ್ನು ಸಾರುತ್ತಾ ಸಮನ್ವಯ ಕವಿ ಎಂದೇ ಖ್ಯಾತರಾಗಿದ್ದ ಕವಿ ಚೆನ್ನವೀರ ಕಣವಿ ಅವರ ನಿಧನದಿಂದ ಅತೀವ ದು:ಖಕ್ಕೀಡಾಗಿದ್ದೇನೆ. ಅವರ ಕುಟುಂಬ ವರ್ಗದ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಹಿರಿಯ ಕವಿ, ನಾಡೋಜ ಚನ್ನವೀರ ಕಣವಿ ವಿಧಿವಶ

    ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಕನ್ನಡದ ಸಾಹಿತ್ಯ ಲೋಕದ ನಕ್ಷತ್ರದಂತಿದ್ದ ಚನ್ನವೀರ ಕಣವಿ ಅವರ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ಅವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ಬಹು ದೊಡ್ಡ ನಷ್ಟ. ವಿಮರ್ಶೆಗಳ ಜೊತೆಗೆ ಕಾವ್ಯಗಳು, ಸುನೀತಗಳನ್ನು ಬರೆಯುತ್ತಿದ್ದ ಕಣವಿ ಅವರು ಕಾವ್ಯಾಕ್ಷಿ, ಆಕಾಶಬುಟ್ಟಿ, ಹೊಂಬೆಳಕು, ನೆಲ ಮುಗಿಲು ಸೇರಿದಂತೆ ಹತ್ತು ಹಲವು ಕಾವ್ಯ ಸಂಕಲನ ರಚಿಸಿದ್ದಾರೆ. 1996ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಕಣವಿ ಅವರು ಸಾಹಿತ್ಯ ಲೋಕದಲ್ಲಿ ಸಲ್ಲಿಸಿದ್ದ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಕವಿರತ್ನ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪುರಸ್ಕಾರಗಳು ಅವರ ಮುಕುಟ ಅಲಂಕರಿಸಿದ್ದವು. ಕಣವಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬ ಸದಸ್ಯರು, ಬಂಧುಗಳು ಹಾಗೂ ಸಾಹಿತ್ಯ ಅಭಿಮಾನಿಗಳಿಗೆ ಅವರ ಅಗಲಿಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ನೆಲಮಂಗಲ ಫ್ಲೈಓವರ್ ಬಗ್ಗೆ ಮಾಹಿತಿ ನೀಡಿ ಟ್ವೀಟ್ ಡಿಲೀಟ್ ಮಾಡಿದ ಸಿಎಂ

    ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಟ್ವೀಟ್ ಮಾಡಿ, ಆಧುನಿಕ ಕನ್ನಡ ಕಾವ್ಯದ ಮೇರು ಪ್ರತಿಭೆಗಳಲ್ಲಿ ಒಬ್ಬರು, ಹೊಂಬೆಳಕಿನ ಕವಿ, ಸುನೀತಗಳ ಸಾಮ್ರಾಟರೆಂದೇ ಕನ್ನಡಿಗರ ಮನಸ್ಸುಗಳಲ್ಲಿ ತುಂಬಿಹೋಗಿರುವ ನಾಡೋಜ ಚನ್ನವೀರ ಕಣವಿ ಅವರ ನಿಧನದ ಸುದ್ದಿ ಕೇಳಿ ತೀವ್ರ ಆಘಾತ ಉಂಟಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಣವಿ ಅವರು ಚೇತರಿಸಿಕೊಂಡು ಕ್ಷೇಮವಾಗಿ ಮನೆಗೆ ಮರಳುತ್ತಾರೆಂಬ ನಮ್ಮೆಲ್ಲರ ನಿರೀಕ್ಷೆಯನ್ನು ಹುಸಿ ಮಾಡಿ ಅಗಲಿದ್ದಾರೆ. ಅವರಿಲ್ಲದಿರುವಿಕೆ ಕನ್ನಡ ಸಾರಸ್ವತ ಲೋಕದಲ್ಲಿ ದೊಡ್ಡ ಶೂನ್ಯವನ್ನೇ ಸೃಷ್ಟಿ ಮಾಡಿದೆ ಎನ್ನುವುದು ನನ್ನ ಅಭಿಪ್ರಾಯ ಎಂದು ಸಂತಾಪವನ್ನು ವ್ಯಕ್ತಪಡಿಸಿದರು.

    ಸಚಿವ ಗೋವಿಂದ ಕಾರಜೋಳ ಮಾತನಾಡಿ, ನಾಡೋಜ ಚನ್ನವೀರಕಣವಿ ನಿಧನ ನೋವಾಗಿದೆ. ಒಬ್ಬ ಶ್ರೇಷ್ಟ ಸಾಹಿತಿಯಾಗಿದ್ದರು. ಮಹನೀಯರ ಅಗಲಿಕೆ ಕನ್ನಡ ನಾಡಿಗೆ ದೊಡ್ಡ ನಷ್ಟ ಎಂದರು. ಖ್ಯಾತ ಕವಿ ಚನ್ನವೀರ ಕಣವಿ ಅಂತ್ಯಕ್ರಿಯೆ ಪೋಲೀಸ್ ಗೌರವಗಳೊಂದಿಗೆ ನಡೆಸಲು ಸರ್ಕಾರ ತೀರ್ಮಾನ ನಡೆಸಿದೆ.

  • ಹಿರಿಯ ಕವಿ, ನಾಡೋಜ ಚನ್ನವೀರ ಕಣವಿ ವಿಧಿವಶ

    ಹಿರಿಯ ಕವಿ, ನಾಡೋಜ ಚನ್ನವೀರ ಕಣವಿ ವಿಧಿವಶ

    ಧಾರವಾಡ: ಕನ್ನಡದ ಜನಪ್ರಿಯ ಹಿರಿಯ ಕವಿ ನಾಡೋಜ ಡಾ. ಚನ್ನವೀರ ಕಣವಿ(93) ನಿಧನರಾಗಿದ್ದಾರೆ.

    ಕೋವಿಡ್‌ ಸೋಂಕಿಗೆ ತುತ್ತಾಗಿದ್ದ ಕಣವಿ ಅವರನ್ನು ಜ.14 ರಂದು ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

     

    ಜೂನ್ 28,1928ರಂದು ಧಾರವಾಡ ಜಿಲ್ಲೆಯ ಹೊಂಬಳದಲ್ಲಿ ಜನಿಸಿದ್ದ ಚನ್ನವೀರ ಕಣವಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿಎ ಮತ್ತು ಎಂಎ ಪದವಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಸಂಗ ಪ್ರಸರಣ ಮತ್ತು ಪ್ರಕಟಣಾ ವಿಭಾಗದ ಕಾರ್ಯದರ್ಶಿಯಾಗಿ, ಪ್ರಸಾರಾಂಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

    ಡಾ. ಚನ್ನವೀರ ಕಣವಿ ಮೊದಲ ಕವಲ ಸಂಕಲನ ಕಾವ್ಯಾಕ್ಷಿ 1949ರಲ್ಲಿ ಬಿಡುಗಡೆಯಾಗಿತ್ತು. ಭಾವಜೀವಿ, ಆಕಾಶಬುಟ್ಟಿ, ಮಣ್ಣಿನ ಮೆರವಣಿಗೆ, ನೆಲಮುಗಿಲು, ಜೀವಧ್ವನಿ ಮುಂತಾದ ಕವನ ಸಂಕಲನಗಳನ್ನು ಅವರು ರಚಿಸಿದ್ದಾರೆ.

  • ಹಿರಿಯ ಕವಿ, ನಾಡೋಜ ಚನ್ನವೀರ ಕಣವಿ ಶೀಘ್ರವೇ ಗುಣಮುಖರಾಗಲಿ: ಬೊಮ್ಮಾಯಿ

    ಹಿರಿಯ ಕವಿ, ನಾಡೋಜ ಚನ್ನವೀರ ಕಣವಿ ಶೀಘ್ರವೇ ಗುಣಮುಖರಾಗಲಿ: ಬೊಮ್ಮಾಯಿ

    ಧಾರವಾಡ: ಕನ್ನಡದ ಜನಪ್ರಿಯ ಹಿರಿಯ ಕವಿ ನಾಡೋಜ ಡಾ. ಚನ್ನವೀರ ಕಣವಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಚೆನ್ನವೀರ ಕಣವಿ ಅವರು ಬೇಗ ಗುಣಮುಖರಾಗಲಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಟ್ವೀಟ್ ಮಾಡುವ ಮೂಲಕ ಹಾರೈಸಿದ್ದಾರೆ.

    ಸದ್ಯ ಈ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ  ಅವರು, ನಾಡಿನ ಹಿರಿಯ ಸಾಹಿತಿ, ಕವಿ, ನಾಡೋಜ ಡಾ. ಚನ್ನವೀರ ಕಣವಿ ಅವರು ಉಸಿರಾಟದ ತೊಂದರೆಯಿಂದ ಧಾರವಾಡದ ಎಸ್‍ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಅವರ ಕುಟುಂಬದ ಸದಸ್ಯರೊಂದಿಗೆ ಮಾತನಾಡಿದೆ. ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಡಾ. ಚನ್ನವೀರ ಕಣವಿ ಅವರು ಶೀಘ್ರವಾಗಿ ಗುಣಮುಖರಾಗಲೆಂದು ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:  ಮಿಸೆಸ್ ವರ್ಲ್ಡ್ 2022 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ನವ್ದೀಪ್ ಕೌರ್

    ಮತ್ತೊಂದೆಡೆ ಜಗದೀಶ್ ಶೆಟ್ಟರ್ ಅವರು, ಹಿರಿಯ ಕವಿಗಳಾದ ನಾಡೋಜ ಡಾ. ಚನ್ನವೀರ ಕಣವಿ ಅವರಿಗೆ ಉಸಿರಾಟದ ಸಮಸ್ಯೆ ಹಾಗೂ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆ ಧಾರವಾಡದ ಎಸ್.ಡಿ.ಎಮ್. ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂಬುದು ಸಮಾಧಾನಕರ. ಅವರು ಶೀಘ್ರದಲ್ಲೇ ಸಂಪೂರ್ಣ ಗುಣಮುಖರಾಗಲಿ ಎಂದು ಪ್ರಾರ್ಥಿಸುವೆ ಎಂದು ಟ್ವೀಟ್ ಮಾಡಿದ್ದಾರೆ.

    ಕವಿ ನಾಡೋಜ ಡಾ. ಚನ್ನವೀರ ಕಣವಿ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಜನವರಿ 14ರಂದು ಧಾರವಾಡದ ಎಸ್‍ಡಿಎಂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಚನ್ನವೀರ ಕಣವಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಆರೋಗ್ಯ ಸ್ಥಿರವಾಗಿದೆ. ಹೆಚ್ಚಿನ ನಿಗಾವಹಿಸಲು ಐಸಿಯುಗೆ ವರ್ಗಾಯಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಮಗು ಪಡೆಯುವುದು ನಮ್ಮ ಜೀವನದ ಅತಿ ದೊಡ್ಡ ಕನಸು: ಪ್ರಿಯಾಂಕಾ ಚೋಪ್ರಾ

  • ನಾಡೋಜ ಚನ್ನವೀರ ಕಣವಿಗೆ ಕೊರೊನಾ ಪಾಸಿಟಿವ್

    ನಾಡೋಜ ಚನ್ನವೀರ ಕಣವಿಗೆ ಕೊರೊನಾ ಪಾಸಿಟಿವ್

    ಧಾರವಾಡ: ಹಿರಿಯ ಕವಿ ನಾಡೋಜ ಚನ್ನವೀರ‌ ಕಣವಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

    ಚೆಂಬೆಳಕಿನ ಕವಿ ಎಂದೇ ಖ್ಯಾತಿ‌ ಪಡೆದಿರುವ 93 ವರ್ಷದ ಕಣವಿ, ಅನಾರೋಗ್ಯದ ಕಾರಣ ಖಾಸಗಿ ಆಸ್ಪತ್ರೆಗೆ ತಪಾಸಣೆಗೆ ಹೋಗಿದ್ದರು. ಈ ವೇಳೆ ಕೊರೊನಾ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿದೆ. ಇದನ್ನೂ ಓದಿ: ರಾಜ್ಯದಲ್ಲಿ ಲಾಕ್‌ಡೌನ್‌ ಇಲ್ಲವೇ ಇಲ್ಲ: ಸಚಿವ ಸುಧಾಕರ್‌ ಸ್ಪಷ್ಟನೆ

    ಸದ್ಯ ಚನ್ನವೀರ ಕಣವಿ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಪ್ರತಿ ದಿನ 100 ಇದ್ದ ಕೊರೊನಾ ಕೇಸ್ ಈಗ 400ರ ಗಡಿಗೆ ಬಂದು ತಲುಪಿದೆ. ಇದನ್ನೂ ಓದಿ: ಬೂಸ್ಟರ್‌ ಡೋಸ್ ಪಡೆದ ರಾಜ್ಯಪಾಲ – ಲಸಿಕೆ ಪಡೆಯಲು ಜನತೆಗೆ ಕರೆ

    ಗುರುವಾರ ಧಾರವಾಡದಲ್ಲಿ 399 ಮಂದಿಗೆ ಸೋಂಕು ಬಂದಿತ್ತು. ಸದ್ಯ 1,097 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿದೆ.

  • ಹಿರಿಯ ಕವಿ ನಾಡೋಜ ಚನ್ನವೀರ ಕಣವಿಗೆ ಪತ್ನಿ ವಿಯೋಗ

    ಹಿರಿಯ ಕವಿ ನಾಡೋಜ ಚನ್ನವೀರ ಕಣವಿಗೆ ಪತ್ನಿ ವಿಯೋಗ

    -ಲೇಖಕಿ, ಕಥೆಗಾರ್ತಿ ಶಾಂತಾದೇವಿ ಇನ್ನಿಲ್ಲ

    ಧಾರವಾಡ: ಹಿರಿಯ ಕವಿ, ನಾಡೋಜ ಚನ್ನವೀರ ಕಣವಿ ಅವರ ಪತ್ನಿ ಶಾಂತಾದೇವಿ ಕಣವಿ ಇಂದು ನಿಧನರಾಗಿದ್ದಾರೆ.

    ಲೇಖಕಿ ಮತ್ತು ಕಥೆಗಾರ್ತಿಯಾಗಿದ್ದ ಶಾಂತಾದೇವಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅನಾರೋಗ್ಯ ಹಿನ್ನೆಲೆಯಲ್ಲಿ ಬೆಳಗಾವಿಯ ಕೆಎಲ್‍ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ವಿಧಿವಶರಾಗಿದ್ದಾರೆ.

    ಶನಿವಾರ ಧಾರವಾಡದಲ್ಲಿಯೇ ಶಾಂತಾದೇವಿಯವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಶಾಂತಾದೇವಿ ಅವರಿಗೆ 88 ವಯಸ್ಸಾಗಿತ್ತು.