Tag: ಗ್ರಾಮ ವಾಸ್ತವ್ಯ

  • ಸಿಎಂ ಒಂದು ಹಳ್ಳಿಯಲ್ಲಿ ಮಲ್ಕೊಂಡು ಬಂದ್ರೆ ಏನು ಪ್ರಯೋಜನ – ಶಾಸಕ ಕಾರಜೋಳ

    ಸಿಎಂ ಒಂದು ಹಳ್ಳಿಯಲ್ಲಿ ಮಲ್ಕೊಂಡು ಬಂದ್ರೆ ಏನು ಪ್ರಯೋಜನ – ಶಾಸಕ ಕಾರಜೋಳ

    – ಗ್ರಾಮ ವಾಸ್ತವ್ಯ ಜನರನನ್ನು ಡೈವರ್ಟ್ ಮಾಡೋ ಗಿಮಿಕ್

    ಬಾಗಲಕೋಟೆ: ರಾಜ್ಯದಲ್ಲಿ 166 ತಾಲೂಕುಗಳಲ್ಲಿ ಬರ ತಾಂಡವಾಡುತ್ತಿದೆ. ದನಕರುಗಳಿಗೆ ನೀರಿಲ್ಲ, ಜಾನುವಾರುಗಳಿಗೆ ಮೇವಿಲ್ಲ, ಜನರು ಗುಳೆ ಹೊರಟಿದ್ದಾರೆ. ಈ ರೀತಿಯ ಸಂದರ್ಭದಲ್ಲಿ ನಮ್ಮ ಸಿಎಂ ಯಾವುದೋ ಒಂದು ಹಳ್ಳಿಯಲ್ಲಿ ಮಲಗಿ ಎದ್ದು ಬಂದರೆ ಏನು ಪ್ರಯೋಜನ ಎಂದು ಮುಧೋಳ ಶಾಸಕ ಗೋವಿಂದ ಕಾರಜೋಳ ಸಿಎಂ ಗ್ರಾಮ ವಾಸ್ತವ್ಯಕ್ಕೆ ಲೇವಡಿ ಮಾಡಿದ್ದಾರೆ.

    ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮ ವಾಸ್ತವ್ಯ ಒಂದು ಗಿಮಿಕ್ ಅಷ್ಟೇ. ಒಂದೊಂದು ಜಿಲ್ಲೆಯ ಒಂದು ಹಳ್ಳಿಗೆ ಹೋಗಿ ಮಲಗಿಕೊಂಡ ಬಂದರೆ ಯಾರಿಗೂ ಪ್ರಯೋಜನವಿಲ್ಲ ಎಂದು ಸಿಎಂಗೆ ಟಾಂಗ್ ನೀಡಿದರು.

    ರಾಜ್ಯದಲ್ಲಿ 39,407 ಕಂದಾಯ ಗ್ರಾಮಗಳಿದ್ದಾವೆ. 58,648 ಜನ ವಸತಿ ಪ್ರದೇಶಗಳಿವೆ, ನಾವು ಎಲ್ಲಕಡೆ ಹೋಗಿ ಗ್ರಾಮ ವಾಸ್ತವ್ಯ ಮಾಡೋಕೆ ಆಗುತ್ತಾ ಎಂದು ಪ್ರಶ್ನೆ ಮಾಡಿದ್ದಲ್ಲದೇ, ನಾವು ಮಾಡುವ ಕೆಲಸ ಇಡೀ ರಾಜ್ಯಕ್ಕೆ ಸಾರ್ವತ್ರಿಕವಾಗಿ ಪ್ರಯೋಜನವಾಗಬೇಕು ಎಂದರು. ಸಿಎಂ ರಾಜ್ಯದ ಜನರ ಬಗ್ಗೆ ಕಾಳಜಿ ಇದ್ದಿದ್ರೆ ಬೆಳಗಾವಿ, ಕಲಬುರ್ಗಿ, ಮೈಸೂರು, ಬೆಂಗಳೂರು ಭಾಗದಲ್ಲಿ ಸಭೆ ಮಾಡಿ, ಅಧಿಕಾರಿಗಳಿಗೆ ಚಾಟಿ ಬೀಸಿ ಕೆಲಸ ಮಾಡೋಕೆ ಹೇಳಿದ್ದರೆ ಉಪಯೋಗ ಆಗುತಿತ್ತು ಎಂದು ಹೇಳಿದರು.

    ಇನ್ನೂ ರಾಜ್ಯದಲ್ಲಿ ಜೆಡಿಎಸ್ ಜನಪ್ರಿಯತೆ ಗಳಿಸಿಕೊಂಡಿದ್ದರೆ, 37 ಸೀಟ್ ಅಷ್ಟೇ ಯಾಕೆ ಗೆಲ್ಲುತ್ತಿತ್ತು, 124 ಸೀಟ್ ಗೆಲ್ಲುತ್ತಿತ್ತು. ಅಲ್ಲದೆ ಸಿಎಂ ಆಡಳಿತ ನಡೆಸಲು ಕಾಂಗ್ರೆಸ್‍ನವರು ಸಹಕಾರ ಕೊಡುತ್ತಿಲ್ಲ. ಅದಕ್ಕೆ ಸಿಎಂ ಜನರ ಗಮನವನ್ನು ಬೇರೆ ಕಡೆ ಸೆಳೆಯಲು ಗ್ರಾಮ ವಾಸ್ತವ್ಯದ ಗಿಮಿಕ್ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

  • ರಾಜ್ಯದ ಆರೋಗ್ಯ ದೃಷ್ಟಿಯಿಂದ ಸಿಎಂ ರಾಜೀನಾಮೆ ನೀಡಲಿ – ಸಿಟಿ ರವಿ

    ರಾಜ್ಯದ ಆರೋಗ್ಯ ದೃಷ್ಟಿಯಿಂದ ಸಿಎಂ ರಾಜೀನಾಮೆ ನೀಡಲಿ – ಸಿಟಿ ರವಿ

    – ಲೋಕಸಭೆ ಫಲಿತಾಂಶದಿಂದ ಸಿಎಂ ಪಾಠ ಕಲಿತಿಲ್ಲ
    – ಅನುದಾನ ಹಂಚಿಕೆಯಲ್ಲಿ ತಾರತಮ್ಯ ಬೇಡ

    ಬೆಂಗಳೂರು: ನೀವು ಹತಾಶರಾಗಿ ಈ ರೀತಿ ವರ್ತನೆ ಮಾಡುತ್ತಿರುವಿರಿ. ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ನಿಮ್ಮ ಹಾಗೂ ರಾಜ್ಯದ ಆರೋಗ್ಯ ದೃಷ್ಟಿಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ ಎಂದು ಬಿಜೆಪಿ ಶಾಸಕ ಸಿಟಿ ರವಿ ಹೇಳಿದ್ದಾರೆ.

    ಪ್ರತಿಭಟನಾಕಾರರ ಮೇಲೆ ಆಕ್ರೋಷ ವ್ಯಕ್ತಪಡಿಸಿದ ವಿಚಾರವಾಗಿ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕರು, ಲೋಕಸಭೆ ಫಲಿತಾಂಶದಿಂದ ಸಿಎಂ ಪಾಠ ಕಲಿತಿಲ್ಲ. ಸಿಂಗಲ್ ನಂಬರ್ ಕೂಡ ಅವರಿಗೆ ಬೇಕಾಗಿಲ್ಲ ಅಂತ ಅನ್ನಿಸುತ್ತದೆ. ಹೀಗಾಗಿ ಸಿಎಂ ಹೀಗೆಲ್ಲ ಮಾತಾಡಿದ್ದಾರೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ತಮ್ಮ ಮಗನಿಗೆ ರಾಜೀನಾಮೆ ನೀಡುವ ಸಲಹೆ ನೀಡಲಿ. ಈ ಮೂಲಕ ಸಿಎಂ ರಾಜ್ಯದ ಜನರ ಹಿತ ಕಾಪಾಡಲಿ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕದ ಮುಖ್ಯಮಂತ್ರಿ ನೀವಾ, ಇಲ್ಲ ಮೋದಿನಾ? – ಸಿಎಂಗೆ ಪ್ರಶ್ನೆ

    ಸಿಎಂ ಅವರಿಗೆ ಅಧಿಕಾರಲ್ಲಿ ಮುಂದುವರೆಯುವ ಯೋಗ್ಯತೆ, ಅರ್ಹತೆ ಏನಿದೆ? ಈ ಬಗ್ಗೆ ರಾಜ್ಯದ ಜನರಿಗೆ ಉತ್ತರ ಕೊಡಲಿ. ಇದು ಕರ್ನಾಟಕ ಸರ್ಕಾರ. ಬಿಜೆಪಿ, ಜೆಡಿಎಸ್ ಸರ್ಕಾರ ಅಂತ ಇರುವುದಿಲ್ಲ. ಸಂವಿಧಾನದತ್ತವಾಗಿ ಸಿಎಂ ಅಧಿಕಾರ ನಿಮಗೆ ನೀಡಲಾಗಿದೆ. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಬೇಡಿ ಎಂದು ಕಿಡಿಕಾರಿದರು.

    ಸಿಎಂ ಇಂದು ಸಣ್ಣತನದ ಮಾತುಗಳನ್ನು ಆಡಿದ್ದಾರೆ. ಶಾಸಕ ಶಿವನಗೌಡ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿರುವ ಹಿನ್ನೆಲೆ ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ ಅವರ ಬಗ್ಗೆಯೂ ಸಿಎಂ ಏಕವಚನದಲ್ಲಿ ಮಾತಾಡಿದ್ದಾರೆ. ಅವರು ರಾಜ್ಯದ ಮುಖ್ಯಮಂತ್ರಿಯೋ ಅಥವಾ ಜೆಡಿಎಸ್ ಮುಖ್ಯಮಂತ್ರಿಯೋ? ಸಂವಿಧಾನದ ಹೆಸರಲ್ಲಿ ಪ್ರಮಾಣ ಸ್ವೀಕಾರ ಮಾಡಿದ್ದಾರಾ? ಅಥವಾ ಜೆಡಿಎಸ್ ಹೆಸರಲ್ಲಿ ಪ್ರಮಾಣ ಸ್ವೀಕಾರ ಮಾಡಿದ್ದಾರಾ ಎಂದು ಪ್ರಶ್ನಿಸಿದರು.

    ಹೋರಾಟಗಾರರು ನಿಮ್ಮ ತಂದೆಯ ಆಸ್ತಿ ಕೇಳಿಲ್ಲ. ರಾಜ್ಯದ ಮುಖ್ಯಮಂತ್ರಿ ಆಗಲು ನಿಮಗೆ ಯೋಗ್ಯತೆ ಇಲ್ಲ. ನೀವು ಜೆಡಿಎಸ್ ಮುಖ್ಯಮಂತ್ರಿಗಳಾಗಿದ್ದರೆ ನಿಮಗೆ ನೀಡುತ್ತಿರುವ ಸೌಲಭ್ಯಗಳನ್ನು ರಾಜ್ಯಪಾಲರು ವಾಪಸ್ ಪಡೆಯಲಿ. ನಿಮ್ಮ ಮಾತು ಅಸಂವಿಧಾನಿಕ ಮಾತು. ಜನರನ್ನ ಕೆರಳಿಸುವ ಮಾತುಗಳನ್ನು ಆಡುತ್ತಿರುವಿರಿ ಎಂದು ಸಿಎಂ ವಿರುದ್ಧ ಗುಡುಗಿದರು.

    ಎಚ್‍ಆರ್ ಬಿಆರ್ ಲೇಔಟ್‍ನಲ್ಲಿ 2006ರಂದು ಬಿಡಿಎ ನಿಂದ ನಿವೇಶನ ಪಡೆದಿದ್ದೆ. ಆದರೆ ಈಗ ಅದನ್ನು ಬೇರೆಯವರಿಗೆ ಮಾರಾಟ ಮಾಡಲಾಗಿದೆ. ಬಳಿಕ ಬದಲಿ ನಿವೇಶನಕ್ಕೆ ಮನವಿ ಸಲ್ಲಿಸಿದ್ದೆ. ಆದರೆ ಇಲ್ಲಿಯವರೆಗೂ ನಿವೇಶನ ನೀಡಿಲ್ಲ. ಒಂದು ವಾರದಲ್ಲಿ ಬದಲಿ ನಿವೇಶನ ಕೊಡಿ, ಇಲ್ಲವೇ ನನ್ನ ಹಳೆಯ ನಿವೇಶನ ಕೊಡಿ. ಒಂದು ವೇಳೆ ನೀವು ನಿವೇಶನ ನೀಡದಿದ್ದರೆ ಬಿಡಿಎ ಮುಂದೆ ಧರಣಿ ಮಾಡುತ್ತೇನೆ ಎಂದು ಶಾಸಕರು ಎಚ್ಚರಿಕೆ ಕೊಟ್ಟಿದ್ದಾರೆ.

    ಬಿಡಿಎಯಲ್ಲಿ ದಂಧೆ ನಡೆಯುತ್ತಿದೆ. ಸಿಬ್ಬಂದಿ, ಅಧಿಕಾರಿಗಳು ಶ್ರೀಮಂತರಾಗುತ್ತಿದ್ದಾರೆ. ಬಿಡಿಎ ಮಾತ್ರ ಸಾಲದಲ್ಲಿ ಇದೆ. ಈ ದಂಧೆ ನಿಲ್ಲಿಸುವ ಅಧಿಕಾರಿಯೊಬ್ಬನ್ನು ನೇಮಕವಾಗಬೇಕಿದೆ ಎಂದು ಒತ್ತಾಯಿಸಿದರು.

  • ಸಾಲಮನ್ನಾಕ್ಕೆ ಹಣದ ಕೊರತೆಯೇ ಇಲ್ಲ, ಅಧಿಕಾರಿಗಳು ನನ್ನ ವೇಗಕ್ಕಿಲ್ಲ: ಸಿಎಂ

    ಸಾಲಮನ್ನಾಕ್ಕೆ ಹಣದ ಕೊರತೆಯೇ ಇಲ್ಲ, ಅಧಿಕಾರಿಗಳು ನನ್ನ ವೇಗಕ್ಕಿಲ್ಲ: ಸಿಎಂ

    ರಾಯಚೂರು: ರೈತರ ಸಾಲಮನ್ನಾ ಮಾಡಿದ್ದರಿಂದ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ನನ್ನ ವೇಗಕ್ಕೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

    ಗ್ರಾಮವಾಸ್ತವ್ಯ ಮಾಡಲಿರುವ ಕರೇಗುಡ್ಡಕ್ಕೆ ತೆರಳುವ ಮೊದಲು ರಾಯಚೂರಿನ ಸರ್ಕಿಟ್ ಹೌಸ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಗೆ 3 ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದ್ದೇವೆ. ಜಿಲ್ಲೆಯ ಬಸ್ಸಿನ ಸಮಸ್ಯೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಅದಕ್ಕೆ ಬೇಕಾದ ಸೂಕ್ತ ಕ್ರಮವನ್ನು 15 ದಿನದ ಒಳಗೆ ಸರಿ ಪಡಿಸುತ್ತೇನೆ. ರೈತರ ಸಾಲ ಮನ್ನಾಕ್ಕೆ ಹಣದ ಕೊರತೆ ಇಲ್ಲ. ಆದರೆ ನನ್ನ ಸ್ಪೀಡಿಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಹೇಳಿದ್ದಾರೆ.

    ಜಿಲ್ಲಾಧಿಕಾರಿ ಹಾಗೂ ಸಿಇಓ ಜೊತೆ ಚರ್ಚೆ ಮಾಡಿ ಇಲ್ಲಿ ಆಗಬೇಕಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ರಾಯಚೂರು ಜಿಲ್ಲೆಗೆ ಆಗಬೇಕಿರುವ ಯೋಜನೆಗಳ ಬಗ್ಗೆ ಜನಪ್ರತಿನಿಧಿಗಳು ಚರ್ಚಿಸಿದ್ದಾರೆ. ಕೇವಲ ಗ್ರಾಮ ವಾಸ್ತವ್ಯಕ್ಕಾಗಿ ಬಂದಿಲ್ಲ. ಜಿಲ್ಲೆಯ ಸಮಗ್ರ ಯೋಜನೆ ಬಗ್ಗೆ ಕಾರ್ಯಕ್ರಮ ರೂಪಿಸಲು ಬಂದಿದ್ದೇನೆ. ವೈದ್ಯಕೀಯ ವಿವಿ ನೀಡುವ ಸಂಬಂಧ ರಾಜ್ಯಪಾಲರಿಗೆ ಶಿಫಾರಸು ಮಾಡಲಾಗಿದೆ ಎಂದರು.

    ಕೃಷ್ಣ ಭಾಗ್ಯ ಜಲನಿಗಮದ ಯೋಜನೆಗೆ ಸಾಕಷ್ಟು ಹಣ ನೀಡಿದ್ದೇವೆ. ಸಾರಿಗೆ ನಿಗಮದ ನಷ್ಟದ ಬಗ್ಗೆಯೂ ಚರ್ಚೆ ನಡೆಸಿದ್ದು ಅದಕ್ಕೆ ಮತ್ತೆ ಪುನಶ್ಚೇತನಗೊಳಿಸಲು ನಿರ್ಧರಿಸಿದ್ದೇವೆ. ಬಿಎಂಟಿಸಿಯನ್ನು ಲಾಭದಾಯಕ ಮಾಡಬೇಕಿದೆ. ವೊಲ್ವೋ ನಗರ ಸಾರಿಗೆ ಲಾಭದಾಯಕವಾಗಿಲ್ಲ. 200 ಕಿ.ಮೀ ಒಳಗೆ ಸಂಚರಿಸುವ ವೋಲ್ವೋದಿಂದ ನಷ್ಟವಾಗುತ್ತಿದೆ ಎಂದು ತಿಳಿಸಿದರು.

    ದೇವದುರ್ಗ ಬಿಜೆಪಿ ಶಾಸಕರು ಪಾದಯಾತ್ರೆ ಮಾಡುತ್ತಿದ್ದು ಇದಕ್ಕೆಲ್ಲ ನಾನು ಹೆದರಲ್ಲ. ಅಣ್ತಮ್ಮ ಎಂದು ಮನವಿ ಕೊಟ್ಟಿದ್ದಾರೆ. ನನಗೆ 6 ಕೋಟಿ ಜನರು ಅಣ್ಣ-ತಮ್ಮರೆ ಆಗಿದ್ದಾರೆ. ನನಗೆ ನನ್ನ ಒಡ ಹುಟ್ಟಿದವರು ಮಾತ್ರ ಅಣ್ತಮ್ಮ ಅಲ್ಲ. ಈ ಶಾಸಕ ಯುದ್ಧಕ್ಕೆ ಬರ್ತಾರಾ ಎಂದು ಪ್ರಶ್ನಿಸಿದ ಸಿಎಂ, ನಮ್ಮ ಕುಟುಂಬ ಸೋಲು-ಗೆಲುವು ಎರಡನ್ನೂ ನೋಡಿದೆ. ದೇವೇಗೌಡರು ನೀರಿನ ಯೋಜನೆ ಮಾಡುವಾಗ ಇವರು ಹುಟ್ಟಿದ್ದರೋ ಇಲ್ವೋ ಗೊತ್ತಿಲ್ಲ. ದೇವದುರ್ಗ ಐಬಿಗೆ ಯಡಿಯೂರಪ್ಪನ ಕರೆತಂದು ಡ್ರಾಮ ಮಾಡಿದ್ರಲ್ಲ ಎಲ್ಲಾ ಗೊತ್ತಿದೆ. ಯಡಿಯೂರಪ್ಪನ ಬೈದರು, ನನ್ನನ್ನು ಹೊಗಳಿದ್ರು ಎಲ್ಲಾ ಗೊತ್ತಿದೆ ಎಂದರು.

    ಯಡಿಯೂರಪ್ಪನನ್ನ ಖೆಡ್ಡಾಕ್ಕೆ ಕೆಡವಿದರು. ಜಿಲ್ಲೆಯಲ್ಲಿ ಹಲವಾರು ಇಲಾಖೆಯಲ್ಲಿ 61 ಕಾರ್ಯಕ್ರಮಗಳು ಚಾಲ್ತಿಯಲ್ಲಿವೆ. ಮೈತ್ರಿ ಸರ್ಕಾರ ತೆಗೆದುಕೊಂಡ ನಿರ್ಣಯ, ಯೋಜನೆ ಜನರಿಗೆ ಗೊತ್ತಾಗಲು ಐದಾರು ತಿಂಗಳು ಬೇಕಾಗಿದೆ. ಶಿಕಾರಿಪುರಕ್ಕೆ ನೀರಾವರಿಗಾಗಿ 500 ಕೋಟಿ ಕೊಟ್ಟಿದ್ದೇನೆ. ಇವರು ಮಂಡ್ಯ, ರಾಮನಗರದ ಬಗ್ಗೆ ಚರ್ಚೆ ಮಾಡಲಿ. ಹೃದಯ ವೈಶಾಲ್ಯತೆ ಇರಬೇಕು ಎಂದು ವಾಗ್ದಾಳಿ ನಡೆಸಿದರು.

    ಗ್ರಾಮವಾಸ್ತವ್ಯಕ್ಕೆ ಸ್ಕೂಲ್ ನಲ್ಲಿ ಶೌಚಾಲಯ ಕಟ್ಟಿದ್ದಾರೆ. ಇದು ಮಕ್ಕಳಿಗೆ ಅನುಕೂಲ ಆಗುತ್ತದೆ. ನನಗಾಗಿ ಮಲಗಲು ಮಂಚವೂ ಬೇಡ ಎಂದಿದ್ದೇನೆ. ವಾಸ್ತವ್ಯಕ್ಕೆ ಒಂದು ಚಾಪೆ-ದಿಂಬು ಸಾಕು ಎಂದಿದ್ದೇನೆ. ಇಲಾಖೆ ಕಾರ್ಯಕ್ರಮಕ್ಕೆ ಇಲಾಖೆಯಿಂದ ಹಣ ಖರ್ಚು ಮಾಡುತ್ತಾರೆ. ಅದಕ್ಕೂ ನನಗೂ ಸಂಬಂಧ ಇಲ್ಲ ಎಂದು ಹೇಳಿದರು.

    ಇದೇ ವೇಳೆ ಸಿಎಂಗೆ ಸಚಿವರಾದ ಸಾ.ರಾ ಮಹೇಶ್, ವೆಂಕಟರಾವ್ ನಾಡಗೌಡ ಮತ್ತು ಮಾಜಿ ಶಾಸಕ ಕೋನರೆಡ್ಡಿ ಸಾಥ್ ನೀಡಿದರು.

  • ಸಿಎಂ ಗ್ರಾಮ ವಾಸ್ತವ್ಯ- ಅವಸರದ ಅಭಿವೃದ್ಧಿಯಲ್ಲಿ ರಾಯಚೂರಿನ ಕರೇಗುಡ್ಡ

    ಸಿಎಂ ಗ್ರಾಮ ವಾಸ್ತವ್ಯ- ಅವಸರದ ಅಭಿವೃದ್ಧಿಯಲ್ಲಿ ರಾಯಚೂರಿನ ಕರೇಗುಡ್ಡ

    ರಾಯಚೂರು: ಸಿಎಂ ಅವರು ಗ್ರಾಮ ವಾಸ್ತವ್ಯ ಮಾಡಲಿರುವ ರಾಯಚೂರಿನ ಕರೇಗುಡ್ಡ ಈಗ ಅವಸರದ ಅಭಿವೃದ್ದಿಯಲ್ಲಿದೆ. ನಾಡಿನ ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ಶರವೇಗದಲ್ಲಿ ಸಿದ್ಧತೆಗಳು ನಡೆದಿದೆ. ಇಲ್ಲಿನ ಸರ್ಕಾರಿ ಶಾಲೆ ಸುಣ್ಣಬಣ್ಣವನ್ನ ಕಂಡು ಕಂಗೊಳಿಸುತ್ತಿದೆ.

    ಗ್ರಾಮದ ನೀರಿನ ಸಮಸ್ಯೆ ಬಗೆಹರಿಯಿತು. ಯಾರೂ ಕಿವಿಗೆ ಹಾಕಿಕೊಳ್ಳದ ರಸ್ತೆಯ ಸಮಸ್ಯೆಯೂ ತೀರಿತು. ವಿದ್ಯುತ್ ಸಮಸ್ಯೆಯಂತೂ ಇಲ್ಲವೇ ಇಲ್ಲ. ಗ್ರಾಮ ಎಂದೂ ಕಾಣದ ಚರಂಡಿಯೂ ನಿರ್ಮಾಣವಾಯ್ತು. ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಂತೂ ಹೊಳೆಯುತ್ತಿದೆ. ಇದು ರಾಜ್ಯದ ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯಕ್ಕೆ ಸಜ್ಜಾಗಿರೋ ರಾಯಚೂರಿನ ಮಾನ್ವಿ ತಾಲೂಕಿನ ಕರೇಗುಡ್ಡ ಗ್ರಾಮ.

    ಸಿಎಂ ಆಗಮನ ಹಿನ್ನೆಲೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಗ್ರಾಮದ ಚಿತ್ರಣವನ್ನೇ ಬದಲಿಸಲಾಗಿದೆ. ಸುಮಾರು 22 ಎಕರೆ ಜಾಗದಲ್ಲಿ ಮುಖ್ಯಮಂತ್ರಿ ಜನ ಸಂಪರ್ಕ ಸಭೆಗೆ ವೇದಿಕೆ ಸಜ್ಜಾಗಿದೆ. ಸಾರ್ವಜನಿಕರಿಗೆ ಊಟದ ವ್ಯವಸ್ಥೆ, ವಿಐಪಿಗಳಿಗೆ ಪ್ರತ್ಯೇಕ ವ್ಯವಸ್ಥೆ, ವೇದಿಕೆ ಕೆಳಗೆ ಮನವಿ ಕೊಡಲು ಬರುವವರಿಗೆ ಯಾವುದೇ ತೊಂದರೆಯಾಗದಂತೆ ಒಟ್ಟು 14 ಕೌಂಟರ್ ತೆರೆಯಲಾಗಿದೆ. ಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸಿಎಂ ವಾಸ್ತವ್ಯ ಮಾಡಲಿರುವ ಶಾಲೆಗೆ ಸುಣ್ಣ ಬಣ್ಣ ಬಳಿದು ಸಕಲ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

    ಮಂಗಳವಾರ ರಾತ್ರಿ 8.45ಕ್ಕೆ ಬೆಂಗಳೂರಿನಿಂದ ಉದ್ಯಾನ ಎಕ್ಸ್‍ಪ್ರೆಸ್‍ನಲ್ಲಿ ಹೊರಟಿರೋ ಸಿಎಂ ಇಂದು ಬೆಳಗ್ಗೆ ರಾಯಚೂರು ತಲುಪಿದ್ದಾರೆ. 8 ಗಂಟೆಗೆ ರಸ್ತೆಯ ಮೂಲಕ ಮಾನ್ವಿ ತಾಲೂಕಿನ ಕರೇಗುಡ್ಡ ಗ್ರಾಮಕ್ಕೆ ಆಗಮಿಸಲಿದ್ದಾರೆ. ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಜನತಾದರ್ಶನದಲ್ಲಿ ಜನರ ಕುಂದು ಕೊರತೆಗಳನ್ನು ಆಲಿಸಲಿದ್ದಾರೆ. ಸಂಜೆ 6.30ರಿಂದ 8.30 ಗಂಟೆವರೆಗೆ ರೈತರೊಂದಿಗೆ ಮಾತನಾಡಲಿದ್ದು, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನಂತರ ಮಕ್ಕಳೊಂದಿಗೆ ಊಟ ಮಾಡಿ, ಶಾಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಗ್ಗೆ 5 ಗಂಟೆಗೆ ಹೆಲಿಕಾಪ್ಟರ್ ಮೂಲಕ ಬೀದರ್‍ನ ಉಜಿಳಾಂಬ ಗ್ರಾಮಕ್ಕೆ ತೆರಳಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ.

    ರಾಯಚೂರಿನಲ್ಲಿ ಮುಖ್ಯಮಂತ್ರಿಗಳಿಗೆ ಪ್ರತಿಭಟನೆ ಬಿಸಿ ತಾಗೋ ಸಾಧ್ಯತೆ ಇದೆ. ದೇವದುರ್ಗ ಶಾಸಕ ಶಿವನಗೌಡ ನಾಯಕ್ ಪಾದಯಾತ್ರೆ ಮೂಲಕ ಕರೇಗುಡ್ಡಕ್ಕೆ ಬಂದು ಹೋರಾಟ ನಡೆಸಲು ಸಜ್ಜಾಗಿದ್ದಾರೆ. ಒಟ್ಟಿನಲ್ಲಿ ಸಿಎಂ ಗ್ರಾಮ ವಾಸ್ತವ್ಯಕ್ಕೆ ಒಂದೆಡೆ ಸಿದ್ಧತೆ ನಡೆದಿದ್ದರೆ, ಮತ್ತೊಂದೆಡೆ ಸಮಸ್ಯೆಗಳನ್ನು ಮುಂದಿಟ್ಟು ಹೋರಾಟ ನಡೆಸಲು ವಿವಿಧ ಸಂಘಟನೆಗಳು ಹಾಗೂ ಬಿಜೆಪಿ ಸಿದ್ಧವಾಗಿದೆ.

  • ಸಿಎಂಗೆ ಸೊಳ್ಳೆ ಕಚ್ಚಬಾರದೆಂದು ಸಿಬ್ಬಂದಿಯಿಂದ 7 ದಿನ ನಿರಂತರ ಫಾಗಿಂಗ್

    ಸಿಎಂಗೆ ಸೊಳ್ಳೆ ಕಚ್ಚಬಾರದೆಂದು ಸಿಬ್ಬಂದಿಯಿಂದ 7 ದಿನ ನಿರಂತರ ಫಾಗಿಂಗ್

    ರಾಯಚೂರು: ಗ್ರಾಮ ವಾಸ್ತವ್ಯ ಹೂಡಲಿರುವ ಸಿಎಂ ಅವರಿಗೆ ಸೊಳ್ಳೆ ಕಚ್ಚಬಾರದೆಂದು ಶಾಲೆಯ ಸುತ್ತ ಕಳೆದ ಏಳು ದಿನಗಳಿಂದ ಫಾಗಿಂಗ್ ಮಾಡಲಾಗುತ್ತಿದೆ.

    ಗ್ರಾಮವಾಸ್ತವ್ಯ ಮುಂದುವರಿಸಿರುವ ಮುಖ್ಯಮಂತ್ರಿಗಳು ಬುಧವಾರ ರಾಯಚೂರಿನ ಮಾನ್ವಿ ತಾಲೂಕಿನ ಕರೇಗುಡ್ಡ ಗ್ರಾಮದಲ್ಲಿ ಜನತಾದರ್ಶನ ಹಾಗೂ ಗ್ರಾಮ ವಾಸ್ತವ್ಯ ನಡೆಸಲಿದ್ದಾರೆ. ಹೀಗಾಗಿ ಇಂದು ಸಂಜೆ ಕೂಡ ಗ್ರಾಮ ಪಂಚಾಯತಿ ಸಿಬ್ಬಂದಿಯು ಶಾಲೆಯ ಕೊಠಡಿಗಳು ಹಾಗೂ ಆವರಣದಲ್ಲಿ ಫಾಗಿಂಗ್ ಮಾಡಿದೆ.

    ಬೆಂಗಳೂರು ಕಂಟೋನ್ಮೆಂಟ್‍ನಿಂದ ರಾತ್ರಿ 8.45ಕ್ಕೆ ಈಗಾಗಲೇ ಉದ್ಯಾನ ಎಕ್ಸ್‍ಪ್ರೆಸ್ ಟ್ರೈನ್ ಮೂಲಕ ಪ್ರಯಾಣ ಬೆಳೆಸಿರುವ ಸಿಎಂ ಬೆಳಗ್ಗೆ ರಾಯಚೂರು ರೈಲ್ವೇ ನಿಲ್ದಾಣ ತಲುಪಲಿದ್ದಾರೆ. ಅಲ್ಲಿಂದ ನೇರವಾಗಿ ಯರಮರಸ್ ಸರ್ಕೀಟ್ ಹೌಸ್‍ಗೆ ಹೋಗಿ ವಿಶ್ರಾಂತಿ ಪಡೆಯಲಿದ್ದಾರೆ. ನಂತರ ಬೆಳಗ್ಗೆ 8:30ಕ್ಕೆ ಕೆಎಸ್‍ಆರ್ ಟಿಸಿ ಬಸ್‍ನಲ್ಲಿ ಪ್ರಯಾಣಿಸಿ ವಾಸ್ತವ್ಯ  ಹೂಡಲಿರುವ ಕರೇಗುಡ್ಡ ಗ್ರಾಮಕ್ಕೆ ಬರಲಿದ್ದಾರೆ.

    ಮುಖ್ಯಮಂತ್ರಿಗಳು ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಉದ್ಘಾಟಿಸಿದ ಮೇಲೆ ವೇದಿಕೆ ಕಾರ್ಯಕ್ರಮ ಮುಗಿಸಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. ರಾತ್ರಿ 8 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 10 ಗಂಟೆಗೆ ಊಟ ಮಾಡಿ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ. ನೀರಾವರಿಗಾಗಿ ಆಗ್ರಹಿಸಿ ಜಿಲ್ಲೆಯ 25ಕ್ಕೂ ಹೆಚ್ಚು ಸ್ವಾಮೀಜಿಗಳು ಮನವಿ ಸಲ್ಲಿಸಲಿದ್ದಾರೆ.

    ಮಳೆಯಾಗಿದ್ದರಿಂದ ಕಲಬುರಗಿಯ ಹೆರೂರು ಬಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ರದ್ದಾಗಿತ್ತು. ಹೀಗಾಗಿ, 600*300 ಅಡಿ ವಿಸ್ತೀರ್ಣದ ವಾಟರ್ ಪ್ರೂಫ್ ಬೃಹತ್ ಪೆಂಡಾಲ್ ಹಾಕಲಾಗಿದೆ. ಪೊಲೀಸ್ ಭದ್ರತೆ ಹಾಗೂ ವಿವಿಧ ಅಧಿಕಾರಿಗಳು ಈಗಾಗಲೇ ಕರೇಗುಡ್ಡ ಗ್ರಾಮಕ್ಕೆ ಆಗಮಿಸಿದ್ದಾರೆ.

  • ಗ್ರಾಮ ವಾಸ್ತವ್ಯ ರದ್ದಾಗಿದ್ದಕ್ಕೆ ಕ್ಷಮೆ – ಮಳೆ ಬಂದಿದ್ದಕ್ಕೆ ಸಿಎಂ ಸಂತಸ

    ಗ್ರಾಮ ವಾಸ್ತವ್ಯ ರದ್ದಾಗಿದ್ದಕ್ಕೆ ಕ್ಷಮೆ – ಮಳೆ ಬಂದಿದ್ದಕ್ಕೆ ಸಿಎಂ ಸಂತಸ

    ಯಾದಗಿರಿ: ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಹೇರೂರಲ್ಲಿ ನಿಗದಿಯಾಗಿದ್ದ ಗ್ರಾಮ ವಾಸ್ತವ್ಯ ರದ್ದಾಗಿದ್ದಕ್ಕೆ ಸಿಎಂ ಕ್ಷಮೆ ಕೇಳಿದ್ದಾರೆ.

    ಇಂದು ನಡೆಯಬೇಕಿದ್ದ ಕಲಬುರಗಿ ಜಿಲ್ಲೆಯ ಹೇರೂರು ಬಿ ಗ್ರಾಮದ ಗ್ರಾಮ ವಾಸ್ತವ್ಯ ಸ್ಥಗಿತಗೊಂಡ ಬಗ್ಗೆ ನಗರದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಸಿಎಂ, ನಾನು ಬರುತ್ತೇನೆಂದು ಕಲಬುರಗಿ ಜಿಲ್ಲೆಯ ಜನ ತುಂಬಾ ನಿರೀಕ್ಷೆ ಇಟ್ಟಿದ್ದರು. ಆದರೆ ಅಲ್ಲಿ ಭಾರೀ ಮಳೆಯ ಕಾರಣ ಕಾರ್ಯಕ್ರಮ ನಡೆಸಲು ಸಾಧ್ಯವಾಗುತ್ತಿಲ್ಲ. ಮಧ್ಯರಾತ್ರಿ 2 ಗಂಟೆಯ ತನಕ ಡಿ.ಸಿ ಮತ್ತು ಸಚಿವರಿಂದ ಈ ಬಗ್ಗೆ ಮಾಹಿತಿ ಪಡೆದಿದ್ದೇನೆ. ಎಷ್ಟೇ ಪ್ರಯತ್ನ ಪಟ್ಟರೂ ಕಾರ್ಯಕ್ರಮ ನಡೆಸಲು ಸಾಧ್ಯವಾಗಲಿಲ್ಲ. ಇದರಿಂದ ಮೊದಲಿಗೆ ನಾನು ಹೇರೂರು ಗ್ರಾಮ ಜನರಿಗೆ ಕ್ಷಮೆ ಕೇಳುತ್ತೆನೆ. ಆದರೆ ಮಳೆ ಬಂದಿರುವುದು ಖುಷಿಯಾಗಿದೆ ಎಂದು ಹೇಳಿದ್ದಾರೆ.

    ಜುಲೈ ತಿಂಗಳಲ್ಲಿ ನಡೆಯುವ ಅಧಿವೇಶನ ಸಮಯ ನೋಡಿಕೊಂಡು ದಿನಾಂಕ ತಿಳಿಸುತ್ತೇನೆ. ಯಾದಗಿರಿ ಜಿಲ್ಲೆಯ ಗ್ರಾಮ ವಾಸ್ತವ್ಯದಲ್ಲಿ ಸಾಕಷ್ಟು ಸಮಸ್ಯೆಗಳು ನನ್ನ ಗಮನಕ್ಕೆ ಬಂದಿವೆ. ಶುಕ್ರವಾರದ ಜನತಾದರ್ಶನದಲ್ಲಿ ಕೆಲವನ್ನು ಬಗೆಹರಿಸಿದ್ದೇನೆ ಎಂದರು. ಇದನ್ನೂ ಓದಿ: ಗ್ರಾಮವಾಸ್ತವ್ಯಕ್ಕೆ ವರುಣನ ಅಡ್ಡಿ – ಸಿಎಂರ ಹಳ್ಳಿವಾಸ ಮುಂದೂಡಿಕೆ

    ನಿನ್ನೆ ಸ್ವೀಕರಿಸಿದ ಅರ್ಜಿಗಳ ವರ್ಗಿಕರಣ ಮಾಡಲಾಗಿದೆ. ಕಂದಾಯ ಇಲಾಖೆ ವ್ಯಾಪ್ತಿಯ ಅರ್ಜಿಗಳನ್ನ ಡಿಸಿ, ಸಿಇಒ ವಿಲೇವಾರಿ ಮಾಡಲಿದ್ದಾರೆ. ಉದ್ಯೋಗ ಅವಕಾಶ ನೀಡಬೇಕೆಂದು ಬೇಡಿಕೆ ಇರೋ 100 ಮನವಿಗಳಿವೆ. ಖಾಸಗಿ ವ್ಯಕ್ತಿಗಳೊಂದಿಗೆ ಚರ್ಚಿಸಿ ಉದ್ಯೋಗ ಕಲ್ಪಿಸಲಾಗುತ್ತದೆ. ದೀರ್ಘಾವಧಿಯ ಕಾರ್ಯಕ್ರಮಗಳಿಗೆ ಶೀಘ್ರವೇ ಚಾಲನೆ ನೀಡಲಾಗುತ್ತದೆ. ಶಾಲೆಗೆ ಹೋಗಲು ಬಸ್ ಕೇಳಿದ್ದಾರೆ. ಬಸ್ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೆ ಶಿಕ್ಷಕರ ಕೊರತೆ ನೀಗಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಸಿಎಂ ತಿಳಿಸಿದ್ದಾರೆ.

    ಇದೇ ವೇಳೆ ಅಪಘಾತದಲ್ಲಿ ದೇಹದ ಸ್ವಾಧೀನ ಕಳೆದುಕೊಂಡ ಭೀಮಾರೆಡ್ಡಿಗೆ 5 ಲಕ್ಷ ರೂ. ಪರಿಹಾರವನ್ನು ಸಿಎಂ ವಿತರಿಸಿದ್ದಾರೆ. ಈ ಪರಿಹಾರದ ಚೆಕ್ ಅನ್ನು ಸಿಎಂ ಅವರು ಭೀಮಾರೆಡ್ಡಿ ಪೋಷಕರ ಕೈಗೆ ನೀಡಿದ್ದಾರೆ. ನಂತರ ಚಂಡರಕಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಅರಳಿ ಸಸಿ ನೆಟ್ಟು ಸಿಎಂ ನೀರು ಹಾಕಿದರು. ಇದೇ ವೇಳೆ ಗಾರ್ಡ್ ಆಫ್ ಆನರ್ ಮೂಲಕ ಸಿಎಂಗೆ ಯಾದಗಿರಿ ಜಿಲ್ಲಾಡಳಿತ ಗೌರವ ಸಮರ್ಪಣೆ ಮಾಡಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಗ್ರಾಮವಾಸ್ತವ್ಯಕ್ಕೆ ವರುಣನ ಅಡ್ಡಿ – ಸಿಎಂರ ಹಳ್ಳಿವಾಸ ಮುಂದೂಡಿಕೆ

    ಗ್ರಾಮವಾಸ್ತವ್ಯಕ್ಕೆ ವರುಣನ ಅಡ್ಡಿ – ಸಿಎಂರ ಹಳ್ಳಿವಾಸ ಮುಂದೂಡಿಕೆ

    ಕಲಬುರಗಿ: ಮುಖ್ಯಮಂತ್ರಿಗಳ ಎರಡನೇ ದಿನದ ಗ್ರಾಮ ವಾಸ್ತವ್ಯಕ್ಕೆ ವರುಣನ ಅಡ್ಡಿಯಾಗಿದೆ. ಹೀಗಾಗಿ ಕಲಬುರಗಿಯ ಅಫಜಲಪುರ ತಾಲೂಕಿನ ಹೆರೂರು(ಬಿ) ಗ್ರಾಮ ಇಂದಿನ ವಾಸ್ತವ್ಯ ಭಾರೀ ಮಳೆಯಿಂದ ರದ್ದಾಗಿದೆ.

    ಸುಮಾರು 13 ವರ್ಷಗಳ ಬಳಿಕ ಸಿಎಂ ಕೈಗೊಂಡ ಮೊದಲ ದಿನದ ಗ್ರಾಮವಾಸ್ತವ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸಿಎಂ ಗ್ರಾಮವಾಸ್ತವ್ಯದ ಕಾರಣ ಇಡೀ ಚಂಡರಕಿ ಗ್ರಾಮ ಮದುವಣಗಿತ್ತಿಯಂತೆ ಸಿಂಗರಿಸಲಾಗಿತ್ತು. ಚಂಡರಕಿಯಲ್ಲಿ ಜನತಾದರ್ಶನ 3 ಗಂಟೆ ತಡವಾಗಿ ಆರಂಭವಾಗಿದ್ದು, ರಾತ್ರಿ 8 ಗಂಟೆ ತನಕವೂ ಸಿಎಂ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.

    ಬಳಿಕ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಿದರು. ನಂತರ ಮಕ್ಕಳೊಂದಿಗೆ ರಾತ್ರಿಯ ಭೋಜನ ಸವಿದರು. ರಾತ್ರಿಯ ಭೋಜನದ ಬಳಿಕ ಗ್ರಾಮಸ್ಥರು, ಶಾಲಾ ಮಕ್ಕಳ ಜೊತೆಗೆ ಫೋಟೋ ಸೆಷನ್ ಕೂಡ ನಡೆಯಿತು. ಸಿಎಂಗೆ ಶಾಲೆಯ ಕೊಠಡಿಯಲ್ಲಿ ಯಾವುದೇ ಹಾಸಿಗೆ ಇಲ್ಲದೆ ಚಾಪೆ, ದಿಂಬು, ಹೊದಿಕೆಗಳ ವ್ಯವಸ್ಥೆ ಕಲ್ಪಿಸಲಾಗಿತ್ತು.

    ಮುಖ್ಯಮಂತ್ರಿಗಳ 2ನೇ ದಿನದ ಗ್ರಾಮವಾಸ್ತವ್ಯ ಕಲಬುರಗಿ ಜಿಲ್ಲೆ ಅಫ್ಜಲಪುರದ ಬಿ.ಹೇರೂರು ಗ್ರಾಮದಲ್ಲಿ ಏರ್ಪಡಿಸಲಾಗಿತ್ತು. ಆದರೆ ರಾತ್ರಿಯಿಡೀ ಹೆರೂರಿನಲ್ಲಿ ಭಾರೀ ಮಳೆಯಾಗಿದ್ದು, ಸಿಎಂ ಜನತಾದರ್ಶನಕ್ಕಾಗಿ ಹಾಕಿದ್ದ ಪೆಂಡಾಲ್ ಹಾಳಾಗಿದೆ. ಇಂದು ಕೂಡ ಭಾರೀ ಮಳೆಯ ಮುನ್ಸೂಚನೆ ಇರೋದ್ರಿಂದ ಜಿಲ್ಲಾಡಳಿತ ಸಿಎಂ ಅವರ ಹಳ್ಳಿ ವಾಸವನ್ನು ಮುಂದೂಡಿದೆ.

    ಅಲ್ಲದೆ ಮುಂದಿನ ಹೆರೂರು ಗ್ರಾಮದ ವಾಸ್ತವ್ಯದ ದಿನಾಂಕವನ್ನು ಸಿಎಂ ನಿಗದಿಪಡಿಸಲಿದ್ದಾರೆ. ಸದ್ಯ ಯಾದಿಗಿರಿಯ ಚಂಡರಕಿಯಲ್ಲಿರುವ ಸಿಎಂ 8 ಗಂಟೆ ಸುಮಾರಿಗೆ ಹೈದರಾಬಾದ್‍ಗೆ ತೆರಳಿ ಅಲ್ಲಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣ ಬೆಳಸಲಿದ್ದಾರೆ. ಒಟ್ಟಿನಲ್ಲಿ ದಿಢೀರನೇ ಸಿಎಂ ಗ್ರಾಮವಾಸ್ತವ್ಯ ರದ್ದಿನಿಂದಾಗಿ ಕಲಬುರಗಿಯ ಹೇರೂರು ಗ್ರಾಮಸ್ಥರಿಗೆ ನಿರಾಸೆಯಾಗಿದೆ. ಸಿಎಂ ಮುಂದಿನ ಗ್ರಾಮವಾಸ್ತವ್ಯದ ದಿನಾಂಕ ಯಾವಾಗ ನಿಗದಿಯಾಗುತ್ತೋ ಕಾದು ನೋಡಬೇಕಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಗ್ರಾಮವಾಸ್ತವ್ಯ ಮಾಡಿ ನಮ್ಮೂರಿನ ಯುವಕರಿಗೆ ಕಂಕಣ ಭಾಗ್ಯ ಕರುಣಿಸಿ – ಸಿಎಂ ಸ್ಪಂದನೆ

    ಗ್ರಾಮವಾಸ್ತವ್ಯ ಮಾಡಿ ನಮ್ಮೂರಿನ ಯುವಕರಿಗೆ ಕಂಕಣ ಭಾಗ್ಯ ಕರುಣಿಸಿ – ಸಿಎಂ ಸ್ಪಂದನೆ

    ಕಾರವಾರ: ತಮ್ಮ ಗ್ರಾಮಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮಿಸಿ ವಾಸ್ತವ್ಯ ಮಾಡಿ ಇಲ್ಲಿನ ರಸ್ತೆ ಸಮಸ್ಯೆ ಬಗೆಹರಿಸಿ ತಮ್ಮೂರಿನ ಯುವಕರಿಗೆ ಕಂಕಣಭಾಗ್ಯ ಕರುಣಿಸಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೇದಿನಿ ಗ್ರಾಮ ಜನರು ಮನವಿ ಮಾಡಿದ್ದರು.

    ಪಬ್ಲಿಕ್ ಟಿವಿ ಈ ವರದಿಯನ್ನು ಪ್ರಸಾರ ಮಾಡಿ ಗ್ರಾಮದ ಜನರ ಮನವಿಯನ್ನು ಮುಖ್ಯಮಂತ್ರಿಗಳಿಗೆ ತಲುಪಿಸಿತ್ತು. ಈ ವರದಿಯನ್ನು ಗಮನಸಿದ್ದ ಸಿಎಂ ಅವರು ವಾಸ್ತವ ಸ್ಥಿತಿ ತಿಳಿಯಲು ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡಿದ್ದರು.

    ಸಿಎಂ ಆದೇಶ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್, ಜಿಲ್ಲಾ ಪಂಚಾಯಿತಿ ಸಿ.ಐ.ಓ ರೋಷನ್ ರವರು ಏಳು ಕಿಲೋಮೀಟರ್ ರಸ್ತೆಯಲ್ಲಿ ನಡೆದು ಕುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಗ್ರಾಮ ಸಮಸ್ಯೆಗಳ ಬಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಗ್ರಾಮಸ್ಥರ ಬಹುದಿನಗಳ ಬೇಡಿಕೆ ಆಗಿರುವ ರಸ್ತೆ ಕಾಮಗಾರಿ ನಡೆಸಲು ಕೂಡ ಕ್ರಮಕೈಗೊಳ್ಳಲಾಗುವುದು. ತಕ್ಷಣದಲ್ಲಿ ರಸ್ತೆ ಮಾಡಿಕೊಡುವ ಬಗ್ಗೆ ಸರ್ಕಾರಕ್ಕೆ ವರಿದಿ ಸಲ್ಲಿಸುತ್ತೇವೆ. ಅಲ್ಲದೇ ವಿದ್ಯುತ್ ಸಮಸ್ಯೆಗೂ ಶೀಘ್ರ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಅರ್ಜಿ ತೆಗೆದುಕೊಂಡು ಬಂದರೆ ಏನೂ ಅಗಲ್ಲ – ಗ್ರಾಮ ವಾಸ್ತವ್ಯಕ್ಕೆ ಶೆಟ್ಟರ್ ವ್ಯಂಗ್ಯ

    ಅರ್ಜಿ ತೆಗೆದುಕೊಂಡು ಬಂದರೆ ಏನೂ ಅಗಲ್ಲ – ಗ್ರಾಮ ವಾಸ್ತವ್ಯಕ್ಕೆ ಶೆಟ್ಟರ್ ವ್ಯಂಗ್ಯ

    – ಗ್ರಾಮಕ್ಕೆ ಹೋಗಿ ವಾಸ್ತವ್ಯ ಮಾಡುವುದರಿಂದ ಅಭಿವೃದ್ಧಿಯಾಗಲ್ಲ

    ಹುಬ್ಬಳ್ಳಿ: ಸಿಎಂ ಗ್ರಾಮ ವಾಸ್ತವ್ಯ ಮಾಡಿ ಕೇವಲ ಅರ್ಜಿ ತೆಗೆದುಕೊಂಡು ಬಂದರೆ ಅಭಿವೃದ್ಧಿಯಾಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.

    ಇಂದು ಹುಬ್ಬಳ್ಳಿ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಮಾಡೋ ಕೆಲಸವನ್ನು ಸಿಎಂ ಮಾಡುತ್ತಿದ್ದಾರೆ. ಒಂದು ಗ್ರಾಮಕ್ಕೆ ಹೋಗಿ ವಾಸ್ತವ್ಯ ಮಾಡಿದರೆ ಅಭಿವೃದ್ಧಿಯಾಗಲ್ಲ ಎಂದು ಕಿಡಿಕಾರಿದ್ದಾರೆ.

    ಒಂದು ಗ್ರಾಮಕ್ಕೆ ಹೋಗಿ ಒಂದು ದಿನ ಇದ್ದು ಕೇವಲ ಅರ್ಜಿಗಳನ್ನು ತೆಗೆದುಕೊಂಡು ಬಂದರೆ ಏನ್ ಅಭಿವೃದ್ಧಿ ಆಗತ್ತೆ, ಅದು ಅಧಿಕಾರಿಗಳು ಮಾಡೋ ಕೆಲಸ. ಮೊದಲು ಸಿಎಂ ಕಟ್ಟುನಿಟ್ಟಿನ ಆಡಳಿತ ನಡೆಸಲಿ. ತಮ್ಮಲ್ಲಿನ ಒಳ ಜಗಳವನ್ನು ಬಗೆಹರಿಸಲಿ. ಅದು ಬಿಟ್ಟು ಗ್ರಾಮ ವಾಸ್ತವ್ಯ ಎಂದು ನಾಟಕ ಮಾಡಿದರೆ ಏನು ಅಭಿವೃದ್ಧಿ ಆಗಲ್ಲ ಎಂದು ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಗಳ ವಿರುದ್ಧ ಹರಿಹಾಯ್ದಿದ್ದಾರೆ.

    ಇದೇ ವೇಳೆ ಅಂತಾರಾಷ್ಟ್ರೀಯ ಯೋಗ ದಿನದ ಬಗ್ಗೆ ಮಾತನಾಡಿ, ಈ ಯೋಗ ಡೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆಯಲು ಭಾರತದ ಪ್ರಧಾನಿ ಮೋದಿ ಅವರು ಕಾರಣ. 2015 ರಲ್ಲಿ ವಿಶ್ವಸಂಸ್ಥೆಯಲ್ಲಿ ಯೋಗ ದಿನದ ಬಗ್ಗೆ ಮೊದಲು ಪ್ರಸ್ತಾಪಿಸಿದ್ದು ಮೋದಿ ಅವರು ಇದಕ್ಕೆ ಪ್ರಪಂಚದ 170 ರಾಷ್ಟ್ರಗಳು ಒಪ್ಪಿಗೆ ಸೂಚಿಸಿದ್ದವು. ಅದ್ದರಿಂದ ಜೂನ್ 21 ರಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ದಿನ ಆಚರಿಸಲಾಗುತ್ತದೆ ಎಂದು ಹೇಳಿದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಗ್ರಾಮವಾಸ್ತವ್ಯ ಸಂಪರ್ಕ ಸಭೆಯಾಗಿ ಪರಿವರ್ತನೆಯಾಗಲಿ: ಡಾ. ವೀರೇಂದ್ರ ಹೆಗ್ಗಡೆ

    ಗ್ರಾಮವಾಸ್ತವ್ಯ ಸಂಪರ್ಕ ಸಭೆಯಾಗಿ ಪರಿವರ್ತನೆಯಾಗಲಿ: ಡಾ. ವೀರೇಂದ್ರ ಹೆಗ್ಗಡೆ

    ಮಂಗಳೂರು: ಗ್ರಾಮ ವಾಸ್ತವ್ಯದಲ್ಲಿ ಇರುವ ಸಿಎಂ ಕನಿಷ್ಠ ಒಂದು ಗಂಟೆ ಕಾಲ ಜನರ ಸಮಸ್ಯೆ ಆಲಿಸಬೇಕು. ಸಾಧ್ಯವಾದರೆ ಸ್ಥಳದಲ್ಲೇ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸಲಹೆ ನೀಡಿದ್ದಾರೆ.

    ಈ ಬಗ್ಗೆ ಮಾತನಾಡಿದ ವೀರೇಂದ್ರ ಹೆಗ್ಗಡೆ ಅವರು, ಕೆಲವು ಬಾರಿ ಅಧಿಕಾರಿಗಳು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕೊಡುತ್ತಾರೆ. ಆದರೆ ಬಹುತೇಕರಿಗೆ ಸಮಸ್ಯೆಗಳ ಬಗ್ಗೆ ಗೊತ್ತಿರಲ್ಲ. ಗ್ರಾಮ ವಾಸ್ತವ್ಯ ಸಂಪರ್ಕ ಸಭೆಯಾಗಿಯೂ ಪರಿವರ್ತನೆಯಾದರೆ ಹಳ್ಳಿಗಳ ಸಮಸ್ಯೆ ತಿಳಿಯುತ್ತೆ. ಗ್ರಾಮ ವಾಸ್ತವ್ಯದ ಮೂಲಕ ಈ ರೀತಿ ಮಾಹಿತಿ ಸಂಗ್ರಹಿಸುವುದು ಒಂದು ಉತ್ತಮ ನಡೆ ಎಂದರು.

    ಈ ಹಿಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕೂಡ ಇಂತಹ ಜನಸಂಪರ್ಕವನ್ನು ಆರಂಭಿಸಿದ್ದರು. ಅಲ್ಲದೆ ಆತ್ಮಹತ್ಯೆಯಂತಹ ಪ್ರಕರಣಗಳು ನಡೆದ ಬಳಿಕ ಪರಿಹಾರ ನೀಡುವ ಬದಲು ಮೊದಲೇ ಸಮಸ್ಯೆ ತಿಳಿದುಕೊಳ್ಳಬೇಕು. ಅಲ್ಲದೆ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಅಧಿಕಾರಿಗಳು ಸಿಎಂ ಅವರನ್ನು ಸುತ್ತುವರಿಯಬಾರದು. ಜನರೊಂದಿಗೆ ಮುಕ್ತವಾಗಿ ಮಾತನಾಡಲು ಅವಕಾಶ ಕೊಡಬೇಕು. ಜನರೊಂದಿಗೆ ನೇರವಾಗಿ ಮಾತುಕತೆ ನಡೆಸಿದರೆ ಜ್ವಲಂತ ಸಮಸ್ಯೆ ಅರಿವಿಗೆ ಬರುತ್ತೆ ಎಂದು ಸಲಹೆ ನೀಡಿದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]