Tag: ಗ್ಯಾಂಗ್

  • ವಾಹನಗಳ ಸುಳ್ಳು ದಾಖಲಾತಿ ಸೃಷ್ಟಿಸಿ ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಅಂದರ್

    ವಾಹನಗಳ ಸುಳ್ಳು ದಾಖಲಾತಿ ಸೃಷ್ಟಿಸಿ ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಅಂದರ್

    – 2 ಕೋಟಿ 60 ಲಕ್ಷದ ಮೌಲ್ಯದ ವಾಹನಗಳು ಜಪ್ತಿ

    ಚಿಕ್ಕೋಡಿ: ಅಂತರರಾಜ್ಯಗಳಲ್ಲಿ ವಾಹನ ಮಾರಾಟ ಮಾಡುತ್ತಿದ್ದ ಗ್ಯಾಂಗ್‍ವೊಂದನ್ನು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ.

    ಬಂಧಿತರಿಂದ ಒಟ್ಟು 2 ಕೋಟಿ 60 ಲಕ್ಷ ಮೌಲ್ಯದ 9 ಟಿಪ್ಪರ್ ವಾಹನ, 1 ಜೆಸಿಬಿ, 2 ಟ್ರಕ್ ವಶಪಡಿಸಿಕೊಳ್ಳಲಾಗಿದೆ. ಮಹಾರಾಷ್ಟ್ರ ಮೂಲದ ಫಯಾಜ ದಾಲಾಯತ ಎಂಬವರು ನೀಡಿದ ದೂರಿನ ಹಿನ್ನಲೆ ತನಿಖೆ ನಡೆಸಿದ ಪೊಲೀಸರು ಪ್ರಮುಖ ಆರೋಪಿ ಯೂಸುಫ್ ಸೈಯದ್‍ನನ್ನು ಬಂಧಿಸಿ ಮೋಸದ ಜಾಲವನ್ನು ಭೇದಿಸಿದ್ದಾರೆ.

    ಪ್ರಕರಣ ಪ್ರಮುಖ ಆರೋಪಿ ಯೂಸುಫ್ ತನ್ನ ಸಹಚರೊಂದಿಗೆ ಸೇರಿಕೊಂಡು ಫೈನಾನ್ಸ್ ಕಂಪನಿಗಳಿಂದ ಲೋನ್ ಪಡೆದು ಹಣ ಮರುಪಾವತಿ ಮಾಡಲು ಆಗದೇ ವಾಹನಗಳನ್ನು ಮಾರಾಟ ಮಾಡುವವರನ್ನು ಹುಡುಕುತ್ತಿದ್ದರು. ಅಂತವರನ್ನ ಗುರುತಿಸಿ ನಿಮ್ಮ ವಾಹನವನ್ನು ಮಾರಾಟ ಮಾಡಿ ಕೊಡುತ್ತೇವೆ ಜೊತೆಗೆ ವಿಮಾ ಕಂಪನಿಯಿಂದ ನಿಮಗೆ ಹಣ ಕೂಡ ಕೊಡಿಸುತ್ತೇವೆ ಎಂದು ನಂಬಿಸಿ ಕಡಿಮೆ ಬೆಲೆಗೆ ವಾಹನ ಪಡೆದು, ಬಳಿಕ ಅದೇ ವಾಹನಗಳನ್ನು ಪ್ರಕರಣದ ಎರಡನೇ ಆರೋಪಿಯಾದ ದಾಂಡೇಲಿಯ ದಿಲಾವರ ಕಾಕರ ಎಂಬವರಿಂದ ವಾಹನದ ಚೆಸ್ಸಿ ನಂಬರ್ ಹಾಗೂ ನಂಬರ್ ಪ್ಲೇಟ್ ಬದಲಾಯಿಸಿ ಅದಕ್ಕೆ ಬೇರೆ ಆರ್.ಸಿ ತಯಾರಿಸಿ ಬೇರೆ ಬೇರೆ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದರು.

    ದೂರುದಾರ ಫಯಾಜ ಧಾಲಾಯತ್ ಎಂಬವರಿಗೆ ಕೂಡ ಆರೋಪಿ ಯೂಸುಫ್ ಒಂದು ಜೆಸಿಬಿಯನ್ನು ನೀಡಿದ್ದ 30 ಲಕ್ಷ ಮೌಲ್ಯದ ಜೆಸಿಬಿಯನ್ನ 12 ಲಕ್ಷಕ್ಕೆ ಮಾರಾಟ ಮಾಡಿ 6 ಲಕ್ಷ ರೂಪಾಯಿಗಳನ್ನ ಮುಂಗಡವಾಗಿ ಪಡೆದಿದ್ದ, ಕೆಲ ದಿನಗಳು ಕಳೆದರೂ ವಾಹನದ ಆರ್.ಸಿ ಪತ್ರಗಳನ್ನ ನೀಡದೇ ಸತಾಯಿಸಿದ್ದ ಹಿನ್ನೆಲೆಯಲ್ಲಿ ಫಯಾಜ್ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಇಡೀ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕಡಿಮೆ ಬೆಲೆ, ಭರ್ಜರಿ ಆಫರ್ – ಅಜಿಯೋದಲ್ಲಿ ಜು.5ರವರೆಗೆ ಬಿಗ್ ಬೋಲ್ಡ್ ಸೇಲ್‍

  • ಶಾಲಾ-ಕಾಲೇಜು ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಬಳಸಿಕೊಳ್ತಿದ್ದ ಗ್ಯಾಂಗ್ ಅರೆಸ್ಟ್

    ಶಾಲಾ-ಕಾಲೇಜು ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಬಳಸಿಕೊಳ್ತಿದ್ದ ಗ್ಯಾಂಗ್ ಅರೆಸ್ಟ್

    ಮಂಗಳೂರು: ಶಾಲಾ-ಕಾಲೇಜು ವಿದ್ಯಾರ್ಥಿನಿಯರನ್ನು ಬಲೆಗೆ ಬೀಳಿಸಿ ಲೈಂಗಿಕವಾಗಿ ಬಳಸಿಕೊಂಡು ನಂತರ ಬ್ಲಾಕ್ ಮೇಲ್ ಮಾಡುತ್ತಿದ್ದ ಗ್ಯಾಂಗ್ ಒಂದನ್ನು ಮಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ನಗರದ ಅಪ್ರಾಪ್ತ ಬಾಲಕಿಯರು ಮತ್ತು ಯುವತಿಯರಿಗೆ ಲೈಂಗಿಕ ದೌರ್ಜನ್ಯ ಮಾಡುತ್ತಿದ್ದ ನಟೋರಿಯಸ್ ತಂಡ ಇದಾಗಿದ್ದು, ಮಂಗಳೂರಲ್ಲಿ ಶಾಲೆ, ಧಾರ್ಮಿಕ ಕೇಂದ್ರಗಳು, ಒಂಟಿ ಮನೆಗಳು ಹೀಗೆ ವಿವಿಧ ಕಡೆ ಹೋಗಿ ಅಪ್ರಾಪ್ತ ಬಾಲಕಿಯರನ್ನು ಪ್ರೀತಿ ಪ್ರೇಮ ಅಂತ ಪುಸಲಾಯಿಸಿ ಅವರ ಖಾಸಗಿ ಫೋಟೋಗಳು ಮತ್ತು ವೀಡಿಯೋಗಳನ್ನು ಸಂಗ್ರಹಿಸಿ ಬಳಿಕ ಅದನ್ನು ಇಟ್ಟುಕೊಂಡು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು. ಇದೀಗ ಈ ಗ್ಯಾಂಗ್ ಪೊಲೀಸ್ ಬಲೆಗೆ ಬಿದ್ದಿದೆ.

    ಮಂಗಳೂರಿನ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 14 ವರ್ಷದ ಬಾಲಕಿಯೊಬ್ಬಳು ಕುರಾನ್ ಕಲಿಯಲು ಮದರಸ ಒಂದಕ್ಕೆ ಹೋಗುತ್ತಿದ್ದಳು. ಈ ವೇಳೆ ಆಕೆಯನ್ನು ಈ ಗ್ಯಾಂಗ್ ತಮ್ಮ ಬಲೆಗೆ ಬೀಳಿಸಿತ್ತು. ಆಕೆಯ ನಗ್ನ ಫೋಟೋ ವೀಡಿಯೋಗಳನ್ನು ಕಳಿಸಿಕೊಂಡು ನಂತರ ಆಕೆಗೆ ಬ್ಲಾಕ್ ಮೇಲ್ ಮಾಡಿ ಲೈಂಗಿಕ ಕಿರುಕುಳ ಕೊಡಲಾಗಿತ್ತು. ಮನೆಯವರಿಗೆ ವಿಚಾರ ಗೊತ್ತಾಗಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆಗಿಳಿದ ಪೊಲೀಸರು ಮಹಮ್ಮದ್ ಮುನೀರ್, ತಸ್ಲೀಮ್ ಮತ್ತು ಮಹಮ್ಮದ್ ಸಾಬೀಲ್ ನನ್ನು ಬಂಧಿಸಿದ್ದಾರೆ. ಇವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಕಾಮುಕ ಗ್ಯಾಂಗ್ ನ ರಹಸ್ಯ ಹೊರಬಿದ್ದಿದೆ.

    ಅಪ್ರಾಪ್ತ ಬಾಲಕಿಯರು ತಮ್ಮ ಬಲೆಗೆ ಬಿದ್ದಾಗ ಈ ಗ್ಯಾಂಗ್ ನ ಕಾಮಪಿಶಾಚಿಗಳು ಬಾಲಕಿಯರಿಗೆ ಬ್ಲಾಕ್ ಮೇಲ್ ಮಾಡಿ, ತಾವು ಕರೆದ ಕಡೆ ಬರಬೇಕು. ಹೇಳಿದ ಹಾಗೆ ಮಾಡಬೇಕು. ಇಲ್ಲದಿದ್ದರೆ. ನಿಮ್ಮ ಖಾಸಗಿ ಫೋಟೋ ವೀಡಿಯೋಗಳನ್ನು ಮನೆಯವರಿಗೆ ಕೊಟ್ಟು, ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡೋದಾಗಿ ಬೆದರಿಕೆ ಒಡ್ಡುತ್ತಿದ್ದರು. ಬಾಲಕಿಯರಿಗೆ ಈ ಗ್ಯಾಂಗ್ ಹೇಳಿದ ಹಾಗೆ ಕೇಳಿದ್ರೆ ಅವರ ಮೇಲೆ ದೌರ್ಜನ್ಯ ಎಸಗೋದು ಇವರ ದಂಧೆಯಾಗಿದೆ. ಇದೀಗ ಗ್ಯಾಂಗ್‍ನ್ನು ಪೊಲೀಸರು ಬಂಧಿಸಿದ್ದು, ಇನ್ನು ಉಳಿದ ಈ ಗ್ಯಾಂಗ್‍ನವರಿಗಾಗಿ ಪೊಲೀಸರು ತಲಾಶ್ ಮಾಡುತ್ತಿದ್ದಾರೆ.

  • ವಿಡಿಯೋ ರೆಕಾರ್ಡ್‌ ಮಾಡಿದ ಗ್ಯಾಂಗ್‌ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಈಗ ಗೆಳೆಯನ ವಿರುದ್ಧ ಗೆಳತಿ ದೂರು

    ವಿಡಿಯೋ ರೆಕಾರ್ಡ್‌ ಮಾಡಿದ ಗ್ಯಾಂಗ್‌ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಈಗ ಗೆಳೆಯನ ವಿರುದ್ಧ ಗೆಳತಿ ದೂರು

    ಹುಬ್ಬಳ್ಳಿ: ಪ್ರೇಮಿಗಳಿಬ್ಬರ ಖಾಸಗಿ ವೀಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡಿದಲ್ಲದೇ ಯುವಕನನ್ನ ಥಳಿಸಿದ ದುಷ್ಕರ್ಮಿಗಳ ಗ್ಯಾಂಗ್ ವಿರುದ್ಧ ಹುಬ್ಬಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಬೆನ್ನಲ್ಲೇ ಸಂತ್ರಸ್ತೆ ಸಹ ಪ್ರತಿದೂರು ದಾಖಲಿಸಿದ್ದಾಳೆ.

    ಪ್ರೇಯಸಿಯೊಂದಿಗೆ ಪಾರ್ಕ್‍ನಲ್ಲಿದ್ದ ವೀಡಿಯೋವನ್ನು ಗ್ಯಾಂಗ್‍ವೊಂದು ಶೂಟ್ ಮಾಡಿ, ಬಳಿಕ ವೀಡಿಯೋವನ್ನು ಯುವಕ ಕುಮಾರಸ್ವಾಮಿಗೆ ತೋರಿಸಿ 5 ಲಕ್ಷ ರೂ. ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದರು. ಯುವಕ ಹಣ ನೀಡಲು ಒಪ್ಪದಿದ್ದಾಗ ದುಷ್ಕರ್ಮಿಗಳು ಕುಮಾರಸ್ವಾಮಿಗೆ ಹಿಗ್ಗಾಮುಗ್ಗಾ ಥಳಿಸಿದ್ದರು. ಈ ಕುರಿತಂತೆ ಯುವಕನ ತಾಯಿ ಹುಬ್ಬಳ್ಳಿಯ ಗೋಕುಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಈ ಪ್ರಕರಣದ ವಿಚಾರಣೆ ಆರಂಭವಾಗುತ್ತಿದ್ದಂತೆ ಪ್ರಕರಣದ ಪ್ರಮುಖ ರೂವಾರಿಯಾಗಿರುವ ಯುವತಿ ಸಹ ಇಂದು ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾಳೆ.

    ದೂರಿನಲ್ಲಿ ಏನಿದೆ?
    ದೂರಿನಲ್ಲಿ ಸಂತ್ರಸ್ತ ಯುವತಿ ನಾನು ನರ್ಸ್ ಕೋರ್ಸ್ ಮಾಡುವ ವೇಳೆ ಬಿಸಿಎಂ ಹಾಸ್ಟೆಲ್‍ನಲ್ಲಿ ರೂಮ್ ಹುಡುಕಾಟದಲ್ಲಿದ್ದಾಗ ಆರೋಪಿ ಕುಮಾರಸ್ವಾಮಿ ಪರಿಚಯವಾಗಿತ್ತು. ಕುಮಾರಸ್ವಾಮಿ ತನಗೆ ಬಿಸಿಎಂ ಹಾಸ್ಟೆಲ್‍ನಲ್ಲಿರುವ ಅಧಿಕಾರಿಗಳು ಪರಿಚಯ ಇದ್ದಾರೆ ಎಂದು ನಂಬಿಸಿದ್ದನು. ನಂತರ ಹಾಸ್ಟೆಲ್ ವಿಚಾರ ಮಾತನಾಡುವುದು ಇದೆ ಎಂದು ಹೇಳಿ ತನ್ನ ಅಂಗಡಿಗೆ ಕರೆಯಿಸಿಕೊಂಡು ಪ್ರೀತಿ ಮಾಡುವುದಾಗಿ ಹೇಳಿದ್ದ. ಆದರೆ ನಾನು ಒಪ್ಪದಿದ್ದಾಗ ಕೆಲವು ದಿನಗಳ ಬಳಿಕ ತನ್ನ ಮನೆಯಲ್ಲಿ ನಮ್ಮಿಬ್ಬರ ಮದುವೆ ವಿಷಯ ಮಾತನಾಡುವುದು ಇದೆ. ಮನೆಗೆ ಬಾ ಎಂದು ಕರೆಯಿಸಿಕೊಂಡು ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ, ಲೈಂಗಿಕ ಚಟುವಟಿಕೆಯ ವೀಡಿಯೋ ರೆರ್ಕಾಡ್ ಮಾಡಿಕೊಂಡಿದ್ದಾನೆ.

    ನಂತರ ಮದುವೆಯ ವಿಷಯದ ಬಗ್ಗೆ ಯಾರಿಗಾದರೂ ತಿಳಿಸಿದರೆ, ನಿನ್ನ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಅಶ್ಲೀಲ ವೆಬ್‍ಸೈಟ್‍ಗಳಲ್ಲಿ ಅಪ್‍ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ವೇಳೆ ನಮ್ಮಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ಆದ ವೇಳೆ ಕಾಲು ಜಾರಿ ಬಿದ್ದು ಕುಮಾರಸ್ವಾಮಿ ತಲೆಗೆ ಪೆಟ್ಟಾಗಿತ್ತು. ಅದನ್ನೇ ಬಳಸಿಕೊಂಡು ಇದೀಗ ಮಧ್ಯಸ್ಥಿಕೆ ಮಾಡಲು ಬಂದವರ ವಿರುದ್ಧ ದೂರು ನೀಡಿದ್ದಾನೆ. ಹೀಗಾಗಿ ನನಗೆ ನ್ಯಾಯ ಕೊಡಿಸಬೇಕೆಂದು ಸಂತ್ರಸ್ತ ಯುವತಿ ವಿದ್ಯಾನಗರ ಠಾಣೆಯಲ್ಲಿ ದೂರು ನೀಡಿದ್ದಾಳೆ.

    ಈ ಸಿಡಿ ಪ್ರಕರಣದಲ್ಲಿ ಈಗಾಗಲೇ ಕುಮಾರಸ್ವಾಮಿ ತಾಯಿಯ ದೂರಿನ ಮೇರೆಗೆ ಹತ್ತು ಜನರ ವಿರುದ್ಧ ಗೋಕುಲ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.

    ಇದೀಗ ಸಂತ್ರಸ್ತ ಯುವತಿ ಪ್ರತಿ ದೂರು ಸಲ್ಲಿಸಿದ್ದು, ವಿದ್ಯಾನಗರ ಪೊಲೀಸರು ಪ್ರೇಮಿ ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

  • ಅಟ್ಟಹಾಸ ಮೆರೆದ ಗ್ಯಾಂಗ್ – ನಡು ಬೀದಿಯಲ್ಲಿ ಬರ್ಬರ ಕೊಲೆ

    ಅಟ್ಟಹಾಸ ಮೆರೆದ ಗ್ಯಾಂಗ್ – ನಡು ಬೀದಿಯಲ್ಲಿ ಬರ್ಬರ ಕೊಲೆ

    ಚೆನ್ನೈ: ಕೋರ್ಟಿಗೆ ಹಾಜರಾಗಿ ಮನೆಗೆ ಹಿಂದಿರುಗುತ್ತಿದ್ದ ಆರೋಪಿಗಳಿಬ್ಬರನ್ನು ಹಗಲು ಹೊತ್ತಿನಲ್ಲಿಯೇ ನಡು ರಸ್ತೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬುಧವಾರ ತಮಿಳುನಾಡಿನ ಈರೋಡ್‍ನಲ್ಲಿ ನಡೆದಿದೆ.

    ಈ ಕುರಿತಂತೆ ಮಾತನಾಡಿದ ಪೊಲೀಸರು, ಮೃತಪಟ್ಟವರು 30 ಮತ್ತು 38 ವರ್ಷದವರಾಗಿದ್ದು, ವೀರಪ್ಪನ್‍ಚತ್ರಂ ಪ್ರದೇಶದ ಬೀದಿವೊಂದರಲ್ಲಿ ಮಧ್ಯಾಹ್ನ 2 ಗಂಟೆ ಹೊತ್ತಿಗೆ ನಡೆದುಕೊಂಡು ಹೋಗುತ್ತಿದ್ದಾಗ ಸ್ಥಳಕ್ಕೆ ಬಂದ ಸುಮಾರು 7-8 ಜನರ ಗುಂಪು ಮಾರಕಾಸ್ತ್ರಗಳಿಂದ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಇಬ್ಬರು ಆರೋಪಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

    ಇಬ್ಬರು 2018ರಲ್ಲಿ ನಡೆದ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದು, ಸೆಷನ್ ನ್ಯಾಯಾಲಯ ವಿಚಾರಣೆಗೆಂದು ಹಾಜರಾಗಿ ನಂತರ ಮನೆಗೆ ಹಿಂದಿರುಗುತ್ತಿದ್ದ ವೇಳೆ ಗ್ಯಾಂಗ್‍ವೊಂದು ಇವರ ಮೇಲೆ ದಾಳಿ ನಡೆಸಿದೆ ಎಂದು ತಿಳಿಸಿದರು.

    ಹಿಂದಿನ ಘಟನೆಗೆ ಪ್ರತೀಕರ ತೀರಿಸಿಕೊಳ್ಳುವ ಸಲುವಾಗಿ ಗ್ಯಾಂಗ್ ಹಲ್ಲೆ ನಡೆಸಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ಈ ಕುರಿತಂತೆ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

  • ರೆಡ್ ಮರ್ಕ್ಯೂರಿ ಟ್ಯೂಬ್ ಹೆಸರಿನಲ್ಲಿ 22 ಲಕ್ಷ ವಂಚಿಸಿದ್ದ ಗ್ಯಾಂಗ್ ಬಂಧನ

    ರೆಡ್ ಮರ್ಕ್ಯೂರಿ ಟ್ಯೂಬ್ ಹೆಸರಿನಲ್ಲಿ 22 ಲಕ್ಷ ವಂಚಿಸಿದ್ದ ಗ್ಯಾಂಗ್ ಬಂಧನ

    – ಸೇವೆಯಿಂದ ವಜಾಗೊಂಡಿದ್ದ ಪೇದೆಯೂ ಅರೆಸ್ಟ್

    ಮಂಡ್ಯ: ಹಳೇ ಟಿವಿಯ ರೆಡ್ ಮರ್ಕ್ಯೂರಿ ಟ್ಯೂಬ್ ಹೆಸರಿನಲ್ಲಿ 22 ಲಕ್ಷ ವಂಚಿಸಿದ್ದ ಗ್ಯಾಂಗ್‍ವೊಂದನ್ನು ಮಂಡ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಮಂಡ್ಯದ ಮಳವಳ್ಳಿ ಪೊಲೀಸರು ಭರ್ಜರಿ ಬೇಟೆಯಾಡಿದ್ದು, ಸೇವೆಯಿಂದ ವಜಾಗೊಂಡಿದ್ದ ಪೊಲೀಸ್ ಪೇದೆ ಸೇರಿ 8 ಮಂದಿ ಖತರ್ನಾಕ್ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ 1 ಕಾರ್, 2 ಬೈಕ್, 10.36 ಲಕ್ಷ ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಕಳೆದ ಜೂನ್ 22ರಂದು ಬೆಂಗಳೂರಿನಲ್ಲಿ ಎಂಜಿನಿಯರ್ ಕೆಲಸ ಮಾಡುತ್ತಿದ್ದ ನೀತನ್ ರಾಜ್‍ಗೆ ಕರೆ ಮಾಡಿದ ಗ್ಯಾಂಗ್, ರೆಡ್ ಮರ್ಕ್ಯೂರಿ ಟ್ಯೂಬ್ ಕೊಡುವುದಾಗಿ ಹೇಳಿ ಮಂಡ್ಯದ ಮಳವಳ್ಳಿಗೆ ಕರೆಸಿಕೊಂಡಿದ್ದಾರೆ. ನಂತರ ಮಾತುಕತೆ ವೇಳೆ ಇಬ್ಬರು ಪೊಲೀಸರ ಸೋಗಿನಲ್ಲಿ ಬಂದು ನೀತನ್ ರಾಜ್‍ನನ್ನು ಹೆದರಿಸಿದ್ದಾರೆ. ನಂತರ ಆತ ತಂದಿದ್ದ 22 ಲಕ್ಷ ಹಣವನ್ನು ಅವನಿಂದ ಕಿತ್ತುಕೊಂಡು ಅಲ್ಲಿಂದ ಕಳುಹಿಸಿದ್ದಾರೆ.

    ಘಟನೆಯಾದ 20 ದಿನದ ನಂತರ ನೀತನ್ ರಾಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆ ಕಾರ್ಯಾಚರಣೆಗೆ ಇಳಿದ ಡಿವೈಎಸ್ಪಿ ಪೃಥ್ವಿ, ಸಿಪಿಐ ಧನಂಜಯ ನೇತೃತ್ವದ ತಂಡ ಸವಾಲಿನ ಪ್ರಕರಣದಲ್ಲಿ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹಳೆ ಬ್ಲಾಕ್ ಆ್ಯಂಡ್ ವೈಟ್ ಟಿವಿ, ಹಳೇ ರೇಡಿಯೋ ಕೊಟ್ಟರೆ ಲಕ್ಷ ಲಕ್ಷ ಹಣ ಕೊಡುವುದಾಗಿ ಪೋಸ್ಟ್ ಗಳು ಹರಿದಾಡುತ್ತಿವೆ. ಟಿವಿ, ರೆಡಿಯೋಗೆ ಹಿಂದೆ ಬಳಸುತ್ತಿದ್ದ ರೆಡ್ ಮರ್ಕ್ಯೂರಿ ಟ್ಯೂಬ್ ಕೋಟಿ ಕೋಟಿ ರೂ. ಬೆಲೆ ಬಾಳುತ್ತದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬಂದ ಪೋಸ್ಟ್ ನಂಬಿ ಎಂಜಿನಿಯರ್ ವಂಚನೆಗೊಳಗಾಗಿದ್ದಾರೆ.

  • ತನ್ನಿಬ್ಬರು ಹೆಣ್ಣು ಮಕ್ಕಳ ಎದುರೇ ಪತ್ರಕರ್ತನಿಗೆ ಥಳಿಸಿ, ಗುಂಡಿಕ್ಕಿದ್ರು!

    ತನ್ನಿಬ್ಬರು ಹೆಣ್ಣು ಮಕ್ಕಳ ಎದುರೇ ಪತ್ರಕರ್ತನಿಗೆ ಥಳಿಸಿ, ಗುಂಡಿಕ್ಕಿದ್ರು!

    – ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನ
    – ಕುಟುಂಬಕ್ಕೆ ಸರ್ಕಾರದಿಂದ 10 ಲಕ್ಷ ಘೋಷಣೆ

    ಲಕ್ನೋ: ದೆಹಲಿ ಸಮೀಪದ ಗಾಜಿಯಾಬಾದ್ ನಲ್ಲಿ ಉತ್ತರ ಪ್ರದೇಶ ಮೂಲದ ಪತ್ರಕರ್ತರೊಬ್ಬರಿಗೆ ಅವರ ಇಬ್ಬರು ಪುತ್ರಿಯರ ಎದುರೇ ಅಪರಿಚಿತ ತಂಡವೊಂದು ಗುಂಡಿಕ್ಕಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ಘಟನೆಯ ಸಂಪೂರ್ಣ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಪತ್ರಕರ್ತ ವಿಕ್ರಮ್ ಜೋಶಿ ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ನರಳಾಡುತ್ತಿದ್ದಾರೆ. ಈ ವೇಳೆ ಜೋಶಿ ಪುತ್ರಿಯರು ಅಳುತ್ತಾ, ಕಿರುಚಾಡುತ್ತಾ ಸಹಾಯಕ್ಕಾಗಿ ಅಂಗಲಾಚುತ್ತಿರುವುದನ್ನು ಕಾಣಬಹುದಾಗಿದೆ.

    ನಡೆದಿದ್ದೇನು..?
    ಸೋಮವಾರ ರಾತ್ರಿ ವಿಕ್ರಮ್ ಜೋಶಿ ಅವರು ತನ್ನಿಬ್ಬರು ಹೆಣ್ಣು ಮಕ್ಕಳನ್ನು ಬೈಕಿನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದರು. 10.30ರ ಸುಮಾರಿಗೆ ತಂಡವೊಂದು ನೇರವಾಗಿ ವಿಕ್ರಮ್ ಮೇಲೆ ದಾಳಿ ಮಾಡಿದೆ. ಅಲ್ಲದೆ ಗುಂಡಿನ ಮಳೆ ಸುರಿಸಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ರವಿ ಹಾಗೂ ಚೋಟು ಸೇರಿದಂತೆ 9 ಮಂದಿಯನ್ನು ಬಂಧಿಸಲಾಗಿದೆ. ಓರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಆಯುಧಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕಲಾನಿಧಿ ನೈತಾನಿ ಮಾಹಿತಿ ನೀಡಿದ್ದಾರೆ.

    ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಪತ್ರಕರ್ತ ಸಂಬಂಧಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತ ಮೃತನ ಕುಟುಂಬಕ್ಕೆ ಸರ್ಕಾರ 10 ಲಕ್ಷ ಪರಿಹಾರ ಘೋಷಿಸಿದೆ. ಪೊಲೀಸರ ಮೇಲೆ ಆರೋಪ ಹೊರಿಸಿರುವ ಮೃತನ ಕುಟುಂಬ, ಜೋಶಿ ಮೇಲೆ ದಾಳಿ ಮಾಡುವ 4 ದಿನಕ್ಕೆ ಮುಂಚೆ ಆತ ತನ್ನ ಸೊಸೆಯ ಮೇಲೆ ಯುವಕರ ತಂಡವೊಂದು ದೌರ್ಜನ್ಯ ನಡೆಸಿದೆ ಎಂದು ದೂರು ನೀಡಿದ್ದನು ಎಂದು ಹೇಳಿದೆ.

    ಸಿಸಿಟಿವಿ ವಿಡಿಯೋದಲ್ಲಿ ಯುವಕರ ಗುಂಪೊಂದು ಮನೆಯ ಬಳಿಯೇ ಜೋಶಿಯನ್ನು ತಡೆದು ಈ ಕೃತ್ಯ ಎಸಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಜೋಶಿ ತನ್ನ ಬೈಕ್ ತೆಗೆದು ಮನೆಯಿಂದ ಹೊರಡುತ್ತಿದಂತೆಯೇ ಏಕಾಏಕಿ ತಂಡ ಬಂದು ಜೋಶಿ ಸುತ್ತುವರಿದಿದೆ. ನೋಡನೋಡುತ್ತಿದ್ದಂತೆಯೇ ತಂಡ ಹಿಗ್ಗಾಮುಗ್ಗ ಥಳಿಸಲು ಆರಂಭಿಸಿದೆ. ಇತ್ತ ಘಟನೆಯಿಂದ ಬೆದರಿದ ಜೋಶಿ ಇಬ್ಬರು ಹೆಣ್ಣು ಮಕ್ಕಳು ಓಡಿ ಹೋಗಿ ಗ್ಯಾಂಗ್ ಕೈಯಿಂದ ತಪ್ಪಿಸಿಕೊಂಡಿದ್ದಾರೆ.

    ಗುಂಪು ಜೋಶಿಯನ್ನು ಎಳೆದಾಡಿ ಕಾರು ಬಳಿ ಕರೆತಂದು ಮತ್ತೆ ಹೊಡೆಯಲು ಆರಂಭಿಸಿದೆ. ಕೊನೆಗೆ ಹೇಗೋ ಜೋಶಿ ಅವರಿಂದ ತಪ್ಪಿಸಿಕೊಂಡಿದ್ದಾರೆ. ಆ ನಂತರ ನೆಲಕ್ಕೆ ಬಿದ್ದು ನೋವಿನಿಂದ ಒದ್ದಾಡಿದ್ದಾರೆ. ಈ ವೇಳೆ ಅವಿತು ಕುಳಿತಿದ್ದ ಮಕ್ಕಳ, ತಂದೆಯ ಬಳಿ ಬಂದು, ಅಳುತ್ತಾ ಸಹಾಯಕ್ಕಾಗಿ ಕೂಗಾಡಿದ್ದಾರೆ.

    ಸದ್ಯ ವಿಕ್ರಮ್ ಜೋಶಿ ನಿಧನಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಹೇಳಿದ್ದು ರಾಮ ರಾಜ್ಯ, ತಂದಿದ್ದು ಗೂಂಡಾ ರಾಜ್ಯ- ಯೋಗಿ ಸರ್ಕಾರದ ವಿರುದ್ಧ ‘ರಾಗಾ’ ಕಿಡಿ

  • ಸಿಲಿಕಾನ್ ಸಿಟಿಯಲ್ಲಿ ರೌಡಿಯ ಲೈವ್ ಮರ್ಡರ್ ದೃಶ್ಯ ಸೆರೆ

    ಸಿಲಿಕಾನ್ ಸಿಟಿಯಲ್ಲಿ ರೌಡಿಯ ಲೈವ್ ಮರ್ಡರ್ ದೃಶ್ಯ ಸೆರೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ 10 ಜನರ ಗ್ಯಾಂಗ್ ಅಟ್ಯಾಕ್ ಮಾಡಿ ರೌಡಿಯನ್ನು ಕೊಲೆ ಮಾಡಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.

    ಭಟ್ಟಿ ಅಮ್ಜದ್ ಕೊಲೆಯಾದ ರೌಡಿ. ಶನಿವಾರ ಬೆಂಗಳೂರಿನ ಡಿ.ಜೆ ಹಳ್ಳಿಯಲ್ಲಿ ನಡೆದ ರೌಡಿ ಭಟ್ಟಿ ಅಮ್ಜದ್ ಕೊಲೆಯ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿವೆ. 10 ಜನ ದುಷ್ಕರ್ಮಿಗಳಿಂದ ಭೀಕರ ಅಟ್ಯಾಕ್ ನಡೆದಿದ್ದು, ಮಚ್ಚು ಲಾಂಗ್‍ಗಳಲ್ಲಿ ಮನಸೋ ಇಚ್ಛೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. 10 ಜನರಿಂದ ಓರ್ವನ ಮೇಲೆ ಮಚ್ಚುಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಅಮ್ಜದ್ ನನ್ನ ಕೊಲೆ ಮಾಡಿ ಹಂತಕರು ಬೈಕ್‍ಗಳಲ್ಲಿ ಎಸ್ಕೇಪ್ ಆಗಿದ್ದಾರೆ.

    ಮೃತ ರೌಡಿ ಅಮ್ಜದ್ ಪರ್ನಿಚರ್ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದನು. ಆದರೆ 2016 ರಲ್ಲಿ ಇದ್ರೀಸ್ ಎಂಬವನ ಕೊಲೆ ಆರೋಪದಲ್ಲಿ ಅಮ್ಜದ್ ಭಾಗಿಯಾಗಿದ್ದ. ಅಲ್ಲದೇ ಶಿವಾಜಿನಗರ ಮತ್ತೊಬ್ಬ ರೌಡಿಶೀಟರ್ ಕೊಲೆ ಪ್ರಕರಣದಲ್ಲಿ ಕೂಡ ಭಾಗಿಯಾಗಿದ್ದನು. ಹೀಗಾಗಿ ಹಳೆಯ ದ್ವೇಷಕ್ಕೆ ಅಮ್ಜದ್ ಕೊಲೆ ನಡೆದಿದೆ ಎನ್ನಲಾಗಿದೆ.

    ಅಮ್ಜದ್ ನನ್ನ ಯೂನಿಸ್ ಹಾಗೂ ಶಾಹಿದ್ ಇಬ್ಬರ ತಂಡ ಕರೆದುಕೊಂಡು ಹೋಗಿ ಅಟ್ಯಾಕ್ ಮಾಡಿಸಿದ್ದಾರೆ ಎನ್ನಲಾಗಿದೆ. ನಾಲ್ಕು ವರ್ಷಗಳಿಂದ ಹೊಂಚು ಹಾಕಿದ್ದು, ಇದ್ರೀಸ್ ಕೊಲೆಗೆ ಪ್ರತಿಕಾರ ತೆಗೆದುಕೊಳ್ಳಲು ಅಮ್ಜದ್ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಡಿಜೆ ಹಳ್ಳಿ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ಯುವಕನ ಎಳೆದೊಯ್ದು ಹೊಟ್ಟೆ ಸೇರಿದಂತೆ ಇತರೆಡೆ ಚಾಕು ಇರಿದ್ರು

    ಯುವಕನ ಎಳೆದೊಯ್ದು ಹೊಟ್ಟೆ ಸೇರಿದಂತೆ ಇತರೆಡೆ ಚಾಕು ಇರಿದ್ರು

    – ಮೀಸೆ ಮೂಡೋ ವಯಸ್ಸಲ್ಲಿ ಗ್ಯಾಂಗ್‍ವಾರ್

    ಚಿಕ್ಕಬಳ್ಳಾಪುರ: ಮೀಸೆ ಮೂಡೋ ವಯಸ್ಸು ಏರಿಯಾದಲ್ಲೇ ತಮ್ಮದೇ ಹವಾ ಇರಬೇಕು ಅಂತ ಯುವಕರ ಗುಂಪೊಂದು ತಡರಾತ್ರಿ ಯುವಕನ ಮೇಲೆ ಅಟ್ಯಾಕ್ ಮಾಡಿ ಚಾಕುವಿನಿಂದ ಮನಸ್ಸೋ ಇಚ್ಚೆ ಇರಿದಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಎಚ್‍ಎಸ್ ಗಾರ್ಡನ್ ನಲ್ಲಿ ನಡೆದಿದೆ.

    ಸ್ನೇಹಿತನ ಮನೆಗೆ ತೆರಳಿ ವಾಪಸ್ಸಾಗುತ್ತಿದ್ದ ಯುವಕ ಮಧು ಎಂಬಾತನ ಮೇಲೆ ದಾಳಿ ಮಾಡಿರುವ ಗ್ಯಾಂಗ್ ಅವನನ್ನು ಎಳೆದುಕೊಂಡು ಹೋಗಿ ಹೊಟ್ಟೆ ಸೇರಿದಂತೆ ಮೂರ್ನಾಲ್ಕು ಕಡೆ ಚಾಕುವಿನಿಂದ ಇರಿದಿದೆ. ಘಟನೆಯಲ್ಲಿ ಗಾಯಗೊಂಡಿರುವ ಮಧು ಸದ್ಯ ಬೆಂಗಳೂರಿನ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಗಾಯಾಳು ತನ್ನ ಸ್ನೇಹಿತರ ಬಳಿ, ಮತ್ತೊಂದು ಗ್ಯಾಂಗಿನ ಮಂಜುನಾಥ್, ಮುನಿರಾಜು, ಆನಂದ್, ರವಿ, ಸುಹಾಸ್ ಹಾಗೂ ಮೋಹನ್ ಎಂಬವವರು ಕೃತ್ಯ ನಡೆಸಿರುವುದಾಗಿ ತಿಳಿಸಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಬಳ್ಳಾಪುರ ನಗರ ಪೊಲೀಸರು, ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಘಟನೆಗೆ ಮೂರ್ನಾಲ್ಕು ತಿಂಗಳ ಹಿಂದೆ ಹಲ್ಲೆಗೊಳಾಗಾದ ಮಧು ಹಾಗೂ ಆತನ ಕಡೆಯವರ ಬೈಕ್ ಅಪಘಾತಕ್ಕೀಡಾಗಿತ್ತಂತೆ. ಈ ವಿಚಾರದಲ್ಲಿ ಮತ್ತೊಂದು ಗ್ಯಾಂಗ್ ಕಡೆಯವರು, ಮಗಾ ಅವನು ಮೊನ್ನೆನೇ ಹೊಗೆ ಹಾಕಿಸ್ಕೋಬೇಕಿತ್ತು, ಏರಿಯಾದಲ್ಲಿ ಶ್ರದ್ಧಾಂಜಲಿ ಕಟೌಟ್ ಹಾಕಬೇಕಿತ್ತು ಅಂತ ಮಾತಾಡಿದ್ದರಂತೆ. ಈ ವಿಚಾರಕ್ಕೆ ಎರಡು ಗ್ಯಾಂಗ್ ಮಧ್ಯೆ ಮಾತಿಗೆ ಮಾತು ಬೆಳೆದಿತ್ತಂತೆ. ಇದೇ ಹಳೆ ದ್ವೇಷ ಇಟ್ಟುಕೊಂಡ ಯುವಕರು ಮೀಸೆ ಮೂಡೋ ವಯಸ್ಸಲ್ಲಿ ರೌಡಿಸಂಗೆ ಇಳಿದಿದ್ದು ಈ ಕೃತ್ಯ ನಡೆಸಿದ್ದಾರೆ ಅಂತ ಮಧು ಕಡೆಯವರು ತಿಳಿಸಿದ್ದಾರೆ.

  • ಬೆಂಗಳೂರು ಪೊಲೀಸರಿಗೆ ತಲೆ ನೋವಾದ ಚಿತ್ರ ವಿಚಿತ್ರ ಗ್ಯಾಂಗ್ ಹಾವಳಿ

    ಬೆಂಗಳೂರು ಪೊಲೀಸರಿಗೆ ತಲೆ ನೋವಾದ ಚಿತ್ರ ವಿಚಿತ್ರ ಗ್ಯಾಂಗ್ ಹಾವಳಿ

    ಬೆಂಗಳೂರು: ಹೊಸ ವರ್ಷದ ಭದ್ರತೆ ಬಗ್ಗೆ ತಲೆಕೆಡಿಸಿಕೊಂಡಿರುವ ಬೆಂಗಳೂರು ಪೊಲೀಸರಿಗೆ ಹೊಸದೊಂದು ಸವಾಲು ಎದುರಾಗಿದೆ. ಹೊಸ ವರ್ಷ ಸಂಭ್ರಮಾಚರಣೆಯ ಹಾಟ್ ಸ್ಪಾಟ್ ಬಿಗ್ರೇಡ್ ರೋಡ್, ಚರ್ಚ್ ಸ್ಟ್ರಿಟ್ ಸುತ್ತಮುತ್ತ ವಿಚಿತ್ರ ಗ್ಯಾಂಗ್ ಹುಟ್ಟಿಕೊಂಡಿದೆ.

    ಬೆಂಗಳೂರು ಪೊಲೀಸರು ಹೊಸ ವರ್ಷಕ್ಕೆ ಆಗುವ ಅನಾಹುತಗಳನ್ನು ತಪ್ಪಿಸುವುದಕ್ಕೆ ಮುಂಜಾಗ್ರತಾ ಕ್ರಮಕೈಗೊಳ್ಳುವ ತಯಾರಿಯಲ್ಲಿದ್ದಾರೆ. ಹೊಸ ವರ್ಷ ಸಂಭ್ರಮಾಚರಣೆಯ ಹಾಟ್ ಸ್ಪಾಟ್ ಆದ ಬ್ರಿಗೇಡ್ ರೋಡ್, ಎಂಜಿ ರೋಡ್, ಚರ್ಚ್ ಸ್ಟ್ರೀಟ್ ಸುತ್ತಮುತ್ತ ಹದ್ದಿನ ಕಣ್ಣಿಡಲು ಪೊಲೀಸರು ಭರ್ಜರಿ ತಯಾರಿ ಮಾಡಲು ಮುಂದಾಗಿದ್ದಾರೆ. ಈ ನಡುವೆ ಹೊಸ ವರ್ಷ ಸಂಭ್ರಮಾಚರಣೆಯ ಹಾಟ್ ಸ್ಪಾಟ್ ಏರಿಯಾದ ಸುತ್ತ ಹುಟ್ಟಿಕೊಂಡಿರುವ ವಿಚಿತ್ರ ಗ್ಯಾಂಗ್ ಬೆಂಗಳೂರು ಪೊಲೀಸರ ನಿದ್ದೆಗೇಡಿಸಿದೆ.

    ಯುಬಿ ಸಿಟಿ, ಎಂಜಿ ರೋಡ್, ಪಬ್ ಬಾರ್‍ಗಳಲ್ಲಿ ಪುಂಡ ಕಂಠಪೂರ್ತಿ ಕುಡಿದು ಹಾವಳಿ ಇಡುತ್ತಿದ್ದಾರೆ. ಕುಡಿದ ಅಮಲಿನಲ್ಲಿ ಕಿರಾತಕರ ಗ್ಯಾಂಗ್ ಲೇಟ್ ನೈಟ್ ಮಾಲ್‍ಗಳ ಬಾಗಿಲ ಮೇಲೆ, ಖಾಸಗಿ ಗೋಡೆಗಳ ಮೇಲೆ ಚಿತ್ರ ವಿಚಿತ್ರವಾಗಿ ಪೈಂಟ್ ಬಳಿಯುವುದು, ಪೊಲೀಸರ ವಿರುದ್ಧ ಕೆಟ್ಟ ಪದಗಳನ್ನು ಬರೆಯುತ್ತಿದ್ದಾರೆ.

    ನಗರದ ಎಣ್ಣೆ ಪ್ರಿಯರ ಹಾಗೂ ಪಬ್ ಪ್ರಿಯರ ಹಾಟ್ ಸ್ಪಾಟ್ ಚರ್ಚ್ ಸ್ಟ್ರೀಟ್, ಬ್ರಿಗೇಡ್ ರೋಡ್ ಶಾಪಿಂಗ್ ಮಾಲ್‍ಗಳ ಬಾಗಿಲ ಮೇಲೆ ವಿಚಿತ್ರವಾಗಿ ಬರೆದು ವಿಕೃತಿ ಮೆರೆಯುತ್ತಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಣಿಸಿರುವ ಕಬ್ಬನ್ ಪಾರ್ಕ್ ಪೊಲೀಸರು ಚಿತ್ರ ವಿಚಿತ್ರ ಗ್ಯಾಂಗ್ ವಿರುದ್ಧ ಸಮೋಟೊ ಕೇಸ್ ದಾಖಲಿಕೊಂಡಿದ್ದಾರೆ.

    ಪಬ್ಲಿಕ್ ಪ್ರಾಪರ್ಟಿ ಹಾಗೂ ಖಾಸಗಿ ಸ್ವತ್ತನ್ನ ವಿಕೃತಿಗೋಳಿಸುವ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಸಿಸಿಟಿವಿ ಆಧಾರದ ಮೇಲೆ ಆರೋಪಿಗಳನ್ನ ಬಂಧಿಸಿರುವ ಪೊಲೀಸರು ಮತ್ತಷ್ಟು ವಿಕೃತ ಮನಸ್ಸುಗಳನ್ನು ಎಡೆಮುರಿ ಕಟ್ಟಲು ಮುಂದಾಗಿದ್ದಾರೆ.

  • ಮಂಗಳಮುಖಿ ಆ್ಯಂಡ್ ಗ್ಯಾಂಗ್‍ನಿಂದ ಯುವಕನ ಬರ್ಬರ ಹತ್ಯೆ

    ಮಂಗಳಮುಖಿ ಆ್ಯಂಡ್ ಗ್ಯಾಂಗ್‍ನಿಂದ ಯುವಕನ ಬರ್ಬರ ಹತ್ಯೆ

    – ಪೊಲೀಸರಿಂದ ಶೂಟೌಟ್

    ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಮಂಗಳಮುಖಿ ಸೇರಿದಂತೆ ನಾಲ್ವರ ಗುಂಪು ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಬೆಂಗಳೂರಿನ ತಿಲಕ್ ನಗರದ ಬಾರೊಂದರಲ್ಲಿ ನಡೆದಿದೆ.

    ಕೊಲೆ ಮಾಡಿದ ಆರೋಪಿಗಳನ್ನು ತಬರೇಜ್, ಆನಂದ್, ಮಧು ಹಾಗೂ ಮಂಗಳಮುಖಿಯನ್ನು ಅರ್ಪಿತ ಎಂದು ಗುರುತಿಸಲಾಗಿದೆ. ಕಿಶೋರ್ ಕೊಲೆಯಾದ ದುರ್ದೈವಿ. ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಕಿಶೋರ್ ಬೈರಸಂದ್ರದ ನಿವಾಸಿಯಾಗಿದ್ದು, ಭಾನುವಾರ ಮಧ್ಯಾಹ್ನ ಗೆಳೆಯನ ಜೊತೆ ಕುಡಿಯಲು ಜಯನಗರದ ಈಸ್ಟ್ ಎಂಡ್ ಬಾರ್ ಗೆ ಹೋಗಿದ್ದಾನೆ.

    ಇದೇ ಸಮಯದಲ್ಲಿ ಪಕ್ಕದ ಟೇಬಲ್‍ನಲ್ಲಿ ಕುಳಿತಿದ್ದ ನಾಲ್ವರ ಗ್ಯಾಂಗ್ ಕುಡಿದು ಜೋರಾಗಿ ಕೇಕೆ ಹಾಕಿದ್ದಾರೆ. ಈ ನಡುವೆ ಕಿಶೋರ್ ಜೋರಾಗಿ ಮಾತನಾಡಬೇಡಿ ಎಂದು ಸ್ವಲ್ಪ ನಿಧಾನಕ್ಕೆ ಮಾತನಾಡಿಕೊಳ್ಳಿ ಎಂದಿದ್ದಾನೆ. ಇಷ್ಟಕ್ಕೇ ಕ್ಯಾತೆ ತೆಗೆದ ಗ್ಯಾಂಗ್ ನಮ್ಮ ದುಡ್ಡು ನಮ್ಮ ಇಷ್ಟ ನೀನು ಯಾರು ಕೇಳೊಕೆ ಎಂದು ಗಲಾಟೆ ಶುರು ಮಾಡಿದೆ. ಹೀಗಿರುವಾಗಲೇ ನಾಲ್ವರ ಗ್ಯಾಂಗ್ ಕಿಶೋರ್ ಮೇಲೆ ದಾಳಿ ಮಾಡಿ, ಚಾಕುವಿನಿಂದ ಇರಿದು ಎಸ್ಕೇಪ್ ಆಗಿದೆ.

    ವಿಶೇಷ ಅಂದರೆ ಆ ಗ್ಯಾಂಗ್‍ನಲ್ಲಿ ಮಂಗಳಮುಖಿ ಇದ್ದು, ಆಕೆ ಕೂಡ ಹಂತಕರಿಗೆ ಸಹಾಯ ಮಾಡಿದ್ದಾಳೆ. ಇದು ಬಾರ್‍ನ ಸಿಟಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಈ ಬಗ್ಗೆ ತಿಲಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಬಲೆ ಬೀಸಲಾಗಿದೆ.

    ಆರೋಪಿ ಮೇಲೆ ಶೂಟೌಟ್
    ಈ ಪ್ರಕರಣ ಸಂಬಂಧ ಆರೋಪಿ ತಬರೇಜ್ ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಿದಕ್ಕೆ ತಿಲಕನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಆರೋಪಿ ತಬರೇಜ್ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ ಪೇದೆ ಆನಂದ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ಆರೋಪಿ ತಬರೇಜ್ ವಿರುದ್ಧ ಚಾಮರಾಜಪೇಟೆ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ಕೆಲ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ್ದ ಆರೋಪಿ, ಬಿಡುಗಡೆ ಬಳಿಕ ಮತ್ತದೇ ಚಾಳಿ ಮುಂದುವರಿಸಿದ್ದ ಎಂದು ಹೇಳಲಾಗಿದೆ.