Tag: ಗೋವುಗಳು

  • ಮೂಕ ಗೋವುಗಳಿಗೂ ತಟ್ಟಿದ ಕೊರೊನಾ ಎಫೆಕ್ಟ್

    ಮೂಕ ಗೋವುಗಳಿಗೂ ತಟ್ಟಿದ ಕೊರೊನಾ ಎಫೆಕ್ಟ್

    ಮಡಿಕೇರಿ: ಕೊರೊನಾ ವೈರಸ್ ವಿಶ್ವದೆಲ್ಲೆಡೆ ಹಬ್ಬಿ, ದೇಶವೇ ಲಾಕ್‍ಡೌನ್ ಆಗಿತ್ತು. ಅದರ ಎಫೆಕ್ಟ್ ಕೇವಲ ಮಾನವನಿಗೆ ಅಷ್ಟೇ ಅಲ್ಲ, ಮೂಕ ಗೋವುಗಳಿಗೆ ತಟ್ಟಿದೆ. ಎರಡು ವರ್ಷ ಕೊಡಗಿನಲ್ಲಿ ಸಂಭವಿಸಿದ ಭೀಕರ ಪ್ರಾಕೃತಿಕ ದುರಂತದಲ್ಲಿ ನರಳಿದ್ದ ಮುಗ್ಧ ಹಸುಗಳು ಈ ಬಾರಿಯೂ ಮಳೆಯಲ್ಲೇ ನೆನೆಯಬೇಕಾದ ಸ್ಥಿತಿ ಎದುರಾಗಿದೆ.

    ಹೌದು ಕೊಡಗು ಎರಡು ವರ್ಷವೂ ಪ್ರಾಕೃತಿಕ ದುರಂತಕ್ಕೆ ಇನ್ನಿಲ್ಲದಷ್ಟು ನಲಿಗಿ ಹೋಗಿತ್ತು. ಎಷ್ಟೋ ಮನೆಗಳು, ತೋಟ ಗದ್ದೆಗಳು ಕೊಚ್ಚಿ ಹೋದವು. ಹೀಗಾಗಿ ಕೊಡಗಿನ ಹಲವು ರೈತರು ತಮ್ಮ ದನಗಳನ್ನು ಕೂಡಿಹಾಕಲು ಜಾಗವಿಲ್ಲದೆ ಬೀದಿಗೆ ಬಿಟ್ಟರು. ಈ ವೇಳೆ ಹರೀಶ್ ಆಚಾರ್ಯ ಎಂಬುವರು ಗೋವುಗಳ ರೋಧನೆ ನೋಡಲು ಸಾಧ್ಯವಾಗದೆ, ತಾವೇ ಗೋವುಗಳನ್ನು ಸಾಕಲು ಮುಂದಾದರು. ಅದಕ್ಕಾಗಿ ಆರು ತಿಂಗಳ ಹಿಂದೆಯೇ ಮಡಿಕೇರಿ ತಾಲೂಕಿನ ಬಾಗಮಂಡಲ ಸಮೀಪದ ಚೆಟ್ಟಿಮಾನಿಯಲ್ಲಿ 6 ಎಕರೆ ಪ್ರದೇಶದಲ್ಲಿ ಗೋಶಾಲೆಯನ್ನು ಆರಂಭಿಸಿದರು.

    ಶಾಲೆ ಆರಂಭವಾಗುತ್ತಿದ್ದಂತೆ 55 ದನ, ಕರು ಮತ್ತು ಎಮ್ಮೆಗಳನ್ನು ಜನರು ತಂದು ಬಿಟ್ಟರು. ಗೋ ಶಾಲೆ ಆರಂಭವಾದಾಗ ಸಾಕಷ್ಟು ದಾನಿಗಳು ದನಗಳಿಗಾಗಿ ಕಟ್ಟಡ ನಿರ್ಮಿಸಲು ಮತ್ತು ಅವುಗಳಿಗೆ ಮೇವು ಜೊತೆಗೆ ಔಷಧಿ ಕೊಳ್ಳಲು ಧನ ಸಹಾಯ ಮಾಡುವ ಭರವಸೆ ನೀಡಿದ್ದರು. ಆ ಧೈರ್ಯದಿಂದಲೇ ಹರೀಶ್ ಆಚಾರ್ಯ ಅವರು ಗೋವುಗಳನ್ನು ಲಾಲಾನೆ, ಪೋಷಣೆ ಮಾಡಲು ಆರಂಭಿಸಿದರು. ಅದಕ್ಕಾಗಿ 6 ಜನರನ್ನು ಕೆಲಸಕ್ಕಾಗಿ ನೇಮಿಸಿಕೊಂಡರು. ಹೇಗೋ ನಡೆಯುತ್ತಿದೆಯಲ್ಲಾ ಎಂದುಕೊಳ್ಳುತ್ತಿದ್ದಂತೆ ದೇಶಕ್ಕೆ ವಕ್ಕರಿಸಿದ ಕೊರೊನಾ ಮಹಾಮಾರಿಯಿಂದ ದೇಶವೇ ಲಾಕ್‍ಡೌನ್ ಆಯಿತು. ಅಂದಿನಿಂದ ಗೋಶಾಲೆ ನಿರ್ಮಿಸಲು ಸಹಾಯ ಮಾಡುವುದಾಗಿ ಹೇಳಿದ್ದ ದಾನಿಗಳು ಹಿಂದೆ ಸರಿದಿದ್ದಾರೆ.

    ಸದ್ಯ 55 ಗೋವುಗಳಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿದ್ದು, ಮಳೆ ಗಾಳಿಯಲ್ಲಿ ನೆನೆಯಬೇಕಾಗಿದೆ. ಕೊಡಗಿನಲ್ಲಿ ನಿರಂತರವಾಗಿ ಮೂರು ತಿಂಗಳು ಮಳೆ ಸುರಿಯುವುದರಿಂದ ಇನ್ನೇನು ಮಳೆ ಆರಂಭವಾಗಲಿದ್ದು, ಮೂಕ ಪ್ರಾಣಿಗಳು ಮಳೆಯಲ್ಲೇ ನೆನೆಯಬೇಕಾಗಿದೆ. 55 ಜಾನುವಾರುಗಳಿಗೆ ಕೇವಲ ಇದೊಂದು ತಿಂಗಳು ಮಾತ್ರವೇ ಸಾಕಾಗುವಷ್ಟು ಮಾತ್ರವೇ ಹುಲ್ಲು ಇದ್ದು, ಇದೊಂದು ತಿಂಗಳು ಕಳೆದಲ್ಲಿ ಅವುಗಳಿಗೆ ಮೇವು ಕೂಡ ಇಲ್ಲದಂತೆ ಆಗಲಿದೆ. ಜೊತೆಗೆ ಅವುಗಳಿಗೆ ಯಾವುದಾದರು ರೋಗ ಬಂದಲ್ಲಿ ಚಿಕಿತ್ಸೆಗೂ ಹಣವಿಲ್ಲದಂತೆ ಆಗಿದೆ.

    ಹೀಗಾಗಿ ದಾನಿಗಳು ಮನಸ್ಸು ಮಾಡಿ ಸಹಾಯ ಮಾಡಿದಲ್ಲಿ ಮೂಕ ಗೋವುಗಳ ರೋಧನೆಯನ್ನು ತಪ್ಪಿಸಬಹುದು. ಆದ್ದರಿಂದ ದಾನಿಗಳು ದೊಡ್ಡ ಮನಸ್ಸು ಮಾಡಿದರೆ ಗೋಶಾಲೆ ನಿರ್ಮಿಸಬಹುದು ಎನ್ನೋದು ಅಲ್ಲಿಯ ನಿರ್ವಾಹಕರ ಮಾತು. ಒಟ್ಟಿನಲ್ಲಿ ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪಕದಲ್ಲಿ ನಲುಗಿದ್ದ ಗೋವುಗಳು ಗೋಶಾಲೆಯಲ್ಲಿ ಹೇಗೋ ನೆಮ್ಮದಿ ನೆಲೆ ಕಾಣದೆ ಎಂದುಕೊಂಡಿದ್ದವು. ಆದರೆ ಗೋಶಾಲೆ ನಿರ್ಮಿಸಲು ಸಹಾಯ ಮಾಡುತ್ತೇವೆ ಎಂದಿದ್ದ ದಾನಿಗಳು ಇದೀಗ ಕೊರೊನಾದಿಂದ ಹಿಂದೆ ಸರಿದಿರುವುದರಿಂದ ಜಾನುವಾರುಗಳು ಮತ್ತೆ ಸಂಕಷ್ಟ ಎದುರಿಸುವಂತಾಗಿದೆ.

  • ಹಳ್ಳಿಯಲ್ಲಿ ಬಡ ಜನರಿಗೆ ಚಿಕಿತ್ಸೆ ಜೊತೆ ಗೋವುಗಳ ರಕ್ಷಣೆ

    ಹಳ್ಳಿಯಲ್ಲಿ ಬಡ ಜನರಿಗೆ ಚಿಕಿತ್ಸೆ ಜೊತೆ ಗೋವುಗಳ ರಕ್ಷಣೆ

    ದಾವಣಗೆರೆ: ವೈದ್ಯರು ಅಂದರೆ ಸಾಕು ಯಾವಾಗಲೂ ಆಸ್ಪತ್ರೆ, ಕ್ಲಿನಿಕ್, ರೋಗಿ ಅಂತನೇ ಇರುತ್ತಾರೆ. ಆದರೆ ದಾವಣಗೆರೆಯ ಈ ವೈದ್ಯರು ಎಲ್ಲಾ ವೈದ್ಯರಿಗಿಂತ ವಿಭಿನ್ನವಾಗಿದ್ದು, ರೋಗಿಗಳಿಗೆ ಚಿಕಿತ್ಸೆ ಕೊಡುವುದರ ಜೊತೆಗೆ ಗೋವುಗಳ ರಕ್ಷಣೆ ಮಾಡುತ್ತಿದ್ದಾರೆ.

    ಹೊನ್ನಾಳಿ ತಾಲೂಕಿನ ಬಸವಪಟ್ಟಣದಲ್ಲಿ ನೆಲಸಿರುವ ವೈದ್ಯ ಬಸವನಗೌಡ ಕುಸನೂರು ಮತ್ತು ವಿಜಯಲಕ್ಷ್ಮಿ ದಂಪತಿ. ವೈದ್ಯಕೀಯ ವೃತ್ತಿ ಜೊತೆಗೆ ಗೋವುಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿದ್ದಾರೆ. ಮೂಲತಃ ರಾಣೆಬೆನ್ನೂರು ಮೂಲದವರಾದ ಈ ದಂಪತಿ ಹೊನ್ನಾಳಿಯಲ್ಲಿ ಸಾಕಷ್ಟು ವರ್ಷಗಳಿಂದ ನೆಲೆಸಿದ್ದು, ಇಲ್ಲಿಯೇ ಒಂದು ಕ್ಲಿನಿಕ್ ನಡೆಸುತ್ತಾ ಅತಿ ಕಡಿಮೆ ದರದಲ್ಲಿ ಉತ್ತಮ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ. ಜೊತೆಗೆ ಗೋ ರಕ್ಷಣೆ, ಗೋ ಸಾಕಣೆಯಲ್ಲಿ ನಿರತರಾಗಿದ್ದಾರೆ.

    ಯಾರಾದರೂ ಹಸು, ಎತ್ತುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದರೆ ಅವರಿಗೆ ಹೇಳಿ ತಂದು ತಮ್ಮ ಹೊಲದಲ್ಲಿ ಕಟ್ಟಿ ಸಾಕುತ್ತಿದ್ದಾರೆ. ಕೇವಲ ಸಾಕುವುದಷ್ಟೇ ಅಲ್ಲ, ರೈತರಿಗೆ ಭೂಮಿ ಉಳುಮೆ ಮಾಡಲು ಉಚಿತವಾಗಿ ರಾಸುಗಳನ್ನು ಕೊಡುತ್ತಾರೆ. ಇಲ್ಲಿಯವರೆಗೂ 20 ಜೊತೆ ಎತ್ತುಗಳನ್ನು ರೈತರಿಗೆ ಉಚಿತವಾಗಿ ನೀಡಿದ್ದಾರೆ. ಸದ್ಯ 50ಕ್ಕೂ ಹೆಚ್ಚು ಗೋವುಗಳ ಪಾಲನೆಯಲ್ಲಿ ನಿರತರಾಗಿದ್ದಾರೆ. ಇದರಿಂದ ತಮ್ಮ ಮನಸ್ಸಿಗೆ ನೆಮ್ಮದಿ ಎಂದು ವೈದ್ಯರಾದ ಬಸನಗೌಡ ಕುಸನೂರು ಅವರು ಹೇಳಿದ್ದಾರೆ.

    ಬಸವನಗೌಡರಿಗೆ ಗೋವುಗಳು ಎಂದರೆ ಎಲ್ಲಿಲ್ಲದ ಪ್ರೀತಿ. ಚಿಕ್ಕ ವಯಸ್ಸಿನಲ್ಲಿ ಬಸವನಗೌಡರ ಮನೆಯಲ್ಲಿದ್ದ ಮೂರು ಹಸುಗಳನ್ನು ಮನೆಯವರು ಮಾರಲು ಮುಂದಾದ್ದರು. ಆದರೆ ಬಸವನಗೌಡರು ಪಟ್ಟು ಹಿಡಿದು ಮಾರಲು ಬಿಟ್ಟಿರಲಿಲ್ಲ. ಅಂದು ಗೋವುಗಳ ಮೇಲೆ ಹುಟ್ಟಿದ ಪ್ರೀತಿ ಇಂದಿಗೂ ಮುಂದುವರಿದಿದೆ. ಬಸವನಗೌಡರ ಗೋ ಪ್ರೀತಿಗೆ ಅವರ ಪತ್ನಿ ಡಾ.ವಿಜಯಲಕ್ಷ್ಮಿಯ ಬೆಂಬಲವೂ ಇದೆ.

  • ಚಳಿಯಿಂದ ಗೋವುಗಳನ್ನು ರಕ್ಷಿಸಲು ಕೋಟು ಖರೀದಿಸಲು ಮುಂದಾದ ಅಯೋಧ್ಯಾ ಪಾಲಿಕೆ

    ಚಳಿಯಿಂದ ಗೋವುಗಳನ್ನು ರಕ್ಷಿಸಲು ಕೋಟು ಖರೀದಿಸಲು ಮುಂದಾದ ಅಯೋಧ್ಯಾ ಪಾಲಿಕೆ

    ಅಯೋಧ್ಯೆ: ನಗರದ ಗೋವುಗಳ ಆಶ್ರಯ ತಾಣದಲ್ಲಿ ಇರುವ ಗೋವುಗಳನ್ನು ಚಳಿಯಿಂದ ರಕ್ಷಿಸಲು ಅಯೋಧ್ಯೆ ಮಹಾನಗರ ಪಾಲಿಕೆ ಹೊಸ ಉಪಾಯ ಕಂಡುಕೊಂಡಿದೆ. ಗೋವುಗಳಿಗಾಗಿ ಸೆಣಬಿನ ಕೋಟುಗಳನ್ನು ಖರೀದಿಸಲು ಪಾಲಿಕೆ ಮುಂದಾಗಿದೆ.

    ನಗರ ನಿಗಮ ಆಯುಕ್ತರಾದ ನೀರಜ್ ಶುಕ್ಲಾ ಈ ಬಗ್ಗೆ ಮಾತನಾಡಿ, ನಾವು ಗೋವುಗಳ ಕೋಟುಗಳನ್ನು ತಯಾರಿಸುವ ಪ್ರಕ್ರಿಯೆಯಲ್ಲಿದ್ದೇವೆ. ಈ ಯೋಜನೆಯನ್ನು ಮೂರು-ನಾಲ್ಕು ಹಂತಗಳಲ್ಲಿ ಜಾರಿಗೆ ತರಲಾಗುವುದು. ಮೊದಲು ನಾವು ಬೈಶಿಂಗ್‍ಪುರ ಗೋವುಗಳ ಆಶ್ರಯ ತಾಣದಿಂದ ಪ್ರಾರಂಭಿಸುತ್ತಿದ್ದೇವೆ. ಇಲ್ಲಿ 700 ಎತ್ತುಗಳು ಮತ್ತು ಸುಮಾರು 1,200 ಹಸುಗಳು, ಕರುಗಳು ಇವೆ. ನಾವು ಮೊದಲಿಗೆ ಕರುಗಳಿಗೆ 100 ಕೋಟುಗಳನ್ನು ನೀಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

    ನವೆಂಬರ್ ಅಂತ್ಯದಲ್ಲಿ ಮೊದಲ ಹಂತದ ಕೋಟು ವಿತರಣೆ ಯೋಜನೆ ನಡೆಯಲಿದೆ. ಈ ಕೋಟುಗಳಿಗೆ ಒಂದಕ್ಕೆ 250ರಿಂದ 300 ರೂ. ಬೆಲೆ ಇದೆ. ಕರುಗಳಿಗಾಗಿ 3 ಪದರದ ಕೋಟುಗಳನ್ನು ತಯಾರಿಸಲಾಗುತ್ತಿದೆ. ಸೆಣಬನ್ನು ಹೊರತುಪಡಿಸಿ ಈ ಕೋಟುಗಳ ಒಳಗಿನ ಪದರದಲ್ಲಿ ಮೃದು ಬಟ್ಟೆಯಿಟ್ಟು ಹೊಲಿಯಲು ಹೇಳಿದ್ದೇವೆ. ಇದರಿಂದ ಕರುಗಳಿಗೆ ಬೆಚ್ಚಗಾಗುತ್ತದೆ ಎಂದು ಶುಕ್ಲಾ ಅವರು ಹೇಳಿದರು.

    ಹಸು ಹಾಗೂ ಹೋರಿಗಳಿಗೆ ಬೇರೆ ಬೇರೆ ಡಿಸೈನ್‍ನ ಕೋಟುಗಳನ್ನು ತಯಾರಿಸಲಾಗುತ್ತದೆ. ಹೋರಿಗಳಿಗೆ ಕೇವಲ ಸೆಣಬಿನಿಂದ ತಯಾರಿಸಿದ ಕೋಟುಗಳನ್ನು ನೀಡಲಾಗುತ್ತದೆ. ಆದರೆ ಹಸುಗಳಿಗೆ 2 ಪದರದ ಸೆಣಬಿನ ಕೋಟು ನೀಡಲಾಗುತ್ತದೆ. ಅಲ್ಲದೆ ಹೆಚ್ಚು ಚಳಿ ಇದ್ದಾಗ ಆಶ್ರಯ ತಾಣದ ನೆಲದ ಮೇಲೆ ಭತ್ತದ ಹುಲ್ಲಿಗೆ ಬೆಂಕಿ ಹಾಕಿ ಗೋವುಗಳಿಗೆ ಬೆಚ್ಚಗೆ ಆಗುವಂತೆ ಮಾಡಲು ಯೋಚಿಸಿದ್ದೇವೆ ಎಂದರು.

    ನಾವು ಗೋವುಗಳ ರಕ್ಷಣೆ, ಸೇವೆಗೆ ಹೆಚ್ಚು ಗಮನ ಕೊಡುತ್ತೇವೆ. ನಗರದ ಹಲವೆಡೆ ಗೋವುಗಳ ಆಶ್ರಯ ತಾಣಗಳನ್ನು ನಿರ್ಮಿಸಲು ಯೋಜನೆ ರೂಪಿಸಿದ್ದೇವೆ. ಅವುಗಳನ್ನು ರಾಜ್ಯದಲ್ಲೇ ಉತ್ತಮ ಗೋವು ಆಶ್ರಯ ತಾಣಗಳನ್ನಾಗಿ ಮಾಡುತ್ತೇವೆ ಎಂದು ಮೇಯರ್ ರಿಷಿಕೇಶ್ ಉಪಧ್ಯಾಯ ಹೇಳಿದರು.