Tag: ಗೊರವಯ್ಯ

  • ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ – ಕಾರ್ಣಿಕ ನುಡಿದ ಗೊರವಯ್ಯ

    ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ – ಕಾರ್ಣಿಕ ನುಡಿದ ಗೊರವಯ್ಯ

    ಹಾವೇರಿ: ಮಾಲತೇಶ ದೇವರ (Malatesh Temple) ಕಾರ್ಣಿಕ ಎಂದರೆ ವರ್ಷದ ಭವಿಷ್ಯವಾಣಿ ಅಂತಲೆ ಫೇಮಸ್. ದಸರಾ (Dasara) ಹಬ್ಬದ ಸಮಯದಲ್ಲಿ ನಡೆಯುವ ಕಾರ್ಣಿಕವಾಣಿಯ ಆಧಾರದ ಮೇಲೆ ರೈತರ ಮಳೆ, ಬೆಳೆ ನಿರ್ಧರಿಸುತ್ತಾರೆ. ರಾಜಕೀಯವಾಗಿಯೂ ಕಾರ್ಣಿಕವನ್ನು ವಿಶ್ಲೇಷಿಸಲಾಗುತ್ತದೆ. ಈ ವರ್ಷದ ಭವಿಷ್ಯವಾಣಿ ಕೇಳಿ, ನೆರೆದಿದ್ದ ಸಾವಿರಾರು ಸಂಖ್ಯೆಯ ಜನರು ಖುಷಿ ಖುಷಿಯಿಂದಲೇ ಮನೆಯತ್ತ ಹೆಜ್ಜೆ ಹಾಕಿದ್ದಾರೆ.

    ಹೌದು, ಹಾವೇರಿ (Haveri) ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಇಂದು ಕಂಡುಬಂದ ದೃಶ್ಯಗಳಿವು. ಈ ಬಾರಿ ಸಣ್ಣ ಸಣ್ಣ ರೈತರಿಗೂ ಒಳ್ಳೆಯದಾಗಲಿದೆ, ರಾಜಕೀಯವಾಗಿ ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಯುವಕನಿಗೆ ರಾಜ್ಯದ ಮುಖ್ಯಮಂತ್ರಿಸ್ಥಾನ ದೊರೆಯಲಿದೆ ಎಂದು ಗೊರವಯ್ಯ (Goravayya) ಕಾರ್ಣಿಕ ನುಡಿದಿದ್ದಾರೆ.

    ದೇವರಗುಡ್ಡದ ಮಾಲತೇಶ ದೇವಸ್ಥಾನ ಸುಮಾರು ವರ್ಷಗಳ ಇತಿಹಾಸ ಹೊಂದಿದೆ. ದಸರಾ ಹಬ್ಬದ ಸಮಯದಲ್ಲಿ ದೇವರಗುಡ್ಡದ ಕರಿಯಾಲ ಪ್ರದೇಶದಲ್ಲಿ ನಡೆಯೋ ಮಾಲತೇಶ ದೇವರ ಕಾರ್ಣಿಕ ಕೇಳಲು ಜನರ ದಂಡೆ ನೆರೆದಿರುತ್ತೆ. 9 ದಿನಗಳ ಕಾಲ ಕಠಿಣ ಉಪವಾಸ ವೃತ ಮಾಡಿ ಗೊರವಪ್ಪ ನಾಗಪ್ಪ ಉರ್ಮಿ ಕಾರ್ಣಿಕ ನುಡಿಯುತ್ತಾರೆ. ಇದನ್ನೂ ಓದಿ: ದಸರಾ ಪೆಂಡಾಲ್ ಸೌಂಡ್ ಸಿಸ್ಟಮ್ ವಯರ್ ಕಿತ್ತು ದರ್ಪ ಮೆರೆದ KAS ಅಧಿಕಾರಿ

    ಪ್ರತಿ ಬಾರಿ ಕರಿಯಾಲ ಪ್ರದೇಶಕ್ಕೆ ಡಮರುಗ, ಚಾಟಿ ಏಟಿನ ಸದ್ದಿನ ಮೂಲಕ ಗೊರವಪ್ಪಗಳು ಕಾರ್ಣಿಕದ ಗೊರವಪ್ಪನನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಬರುತ್ತಾರೆ. ಸರಿಯಾಗಿ 6 ಗಂಟೆ ಆಗುತ್ತಿದ್ದಂತೆ ಕಾರ್ಣಿಕ ಸ್ಥಳಕ್ಕೆ ಬರುವ ಗೊರವಯ್ಯ 21 ಅಡಿ ಎತ್ತರದ ಬಿಲ್ಲನ್ನೇರಿ ಸದ್ದಲೆ ಎನ್ನುತ್ತಲೆ ಕಿಕ್ಕಿರಿದು ಸೇರಿದ ಜನರ ನಡುವೆ ಕಾರ್ಣಿಕ ನುಡಿಯುತ್ತಾರೆ. ವರ್ಷದ ಭವಿಷ್ಯವಾಣಿ ನುಡಿದ ಬಳಿಕ ಬಿಲ್ಲಿನಿಂದ ಕೆಳಕ್ಕೆ ಬೀಳುತ್ತಾರೆ.

    ಈ ವರ್ಷ ಬಿಲ್ಲನ್ನೇರಿದ ಗೊರವಪ್ಪ ನಾಗಪ್ಪ ಉರ್ಮಿ “ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್” ಎಂದು ಕಾರ್ಣಿಕ ನುಡಿದಿದ್ದಾರೆ. ಬಳಿಕ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ್ ಭಟ್ ಕಾರ್ಣಿಕ ವಾಣಿಯ ವಿಶ್ಲೇಷಣೆ ಮಾಡಿದ್ದಾರೆ. ಸಣ್ಣಸಣ್ಣ ರೈತರಿಗೂ ಈ ವರ್ಷ ಉತ್ತಮ ಆಗಲಿದೆ. ರಾಜಕೀಯವಾಗಿ ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ದೊರೆಯಲಿದೆ. ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ದೊರೆಯಲಿದೆ ಎಂದು ಅವರು ವಿಶ್ಲೇಷಿಸಿದ್ದಾರೆ. ಇದನ್ನೂ ಓದಿ: ನೈಜೀರಿಯಾದಿಂದ ತಂದ ಚೀತಾಗಳಿಂದ ದೇಶಾದ್ಯಂತ ಲಂಪಿ ವೈರಸ್‌ ಹರಡುತ್ತಿದೆ: ನಾಲಿಗೆ ಹರಿಬಿಟ್ಟ ಕೈ ನಾಯಕ ನಾನಾ ಪಾಟೋಲೆ

    ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಮಾಲತೇಶ ದೇವರ ಕಾರ್ಣಿಕ ವರ್ಷದ ಭವಿಷ್ಯವಾಣಿ ಎಂತಲೇ ಪ್ರಸಿದ್ಧಿ ಪಡೆದಿದೆ. ಸಾಕ್ಷಾತ್ ಮಾಲತೇಶ ದೇವರೆ ಗೊರವಪ್ಪನ ಮೈಮೇಲೆ ಅವತರಿಸಿ, ವರ್ಷದ ಭವಿಷ್ಯವಾಣಿ ನುಡಿಸುತ್ತಾನೆ ಎನ್ನುವುದು ಕಾರ್ಣಿಕವಾಣಿಯ ವಿಶಿಷ್ಟತೆಗೆ ಸಾಕ್ಷಿಯಾಗಿದೆ. ಒಟ್ಟಿನಲ್ಲಿ ಈ ವರ್ಷದ ಕಾರ್ಣಿಕವಾಣಿ ಆಲಿಸಿದ ಜನರು ಸಣ್ಣ ಸಣ್ಣ ರೈತರಿಗೆ ಉತ್ತಮವಾಗಲಿದೆ ಎನ್ನುವ ಸಂದೇಶ ಕೇಳಿ ತಮ್ಮ ತಮ್ಮ ಊರುಗಳತ್ತ ಖುಷಿಯಿಂದ ಹೆಜ್ಜೆ ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಂಕಷ್ಟದಲ್ಲಿರುವ ಗೊರವಯ್ಯನಿಗೆ ದೇವರಗುಡ್ಡ ಗ್ರಾಮಸ್ಥರಿಂದ ಧನ ಸಹಾಯ

    ಸಂಕಷ್ಟದಲ್ಲಿರುವ ಗೊರವಯ್ಯನಿಗೆ ದೇವರಗುಡ್ಡ ಗ್ರಾಮಸ್ಥರಿಂದ ಧನ ಸಹಾಯ

    ಹಾವೇರಿ: ಸಂಕಷ್ಟದಲ್ಲಿರುವ ಮೈಲಾರದ ಕಾರ್ಣಿಕದ ಗೊರವಯ್ಯ ಮಾಲತೇಶಪ್ಪನವರಿಗೆ ರಾಣೆಬೆನ್ನೂರು ತಾಲೂಕು ಸುಕ್ಷೇತ್ರ ದೇವರಗುಡ್ಡದ ಗ್ರಾಮಸ್ಥರು ಧನ ಸಹಾಯ ಮಾಡಿದ್ದಾರೆ.

    ಶ್ರೀಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಸಂತೋಷ ಭಟ್ ನೇತೃತ್ವದಲ್ಲಿ ಗ್ರಾಮದ ಮುಖ್ಯಸ್ಥರು ಭೇಟಿ ನೀಡಿ, ನೊಂದ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿ ದೇವರಗುಡ್ಡ ಗ್ರಾಮದ ವತಿಯಿಂದ 50 ಸಾವಿರ ರೂ. ಧನ ಸಹಾಯ ನೀಡುವ ಮೂಲಕ ಧನ್ಯತೆ ಮೆರೆದರು. ಶ್ರೀಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ ಮಾತನಾಡಿ, ಅತ್ಯಂತ ಶಿಸ್ತು ಹಾಗೂ ನಿಷ್ಠೆಯಿಂದ ಸ್ಪಷ್ಟವಾಗಿ ಶ್ರೀಮೈಲಾರಲಿಂಗೇಶ್ವರ ಸ್ವಾಮಿಯ ದೈವವಾಣಿ ನುಡಿಯುವ ಮೂಲಕ ಮಾಲತೇಶ್ ಗೊರವಯ್ಯನವರು ನಾಡಿನ ಸಿರಿ, ಸಂಪತ್ತು ಸಂಮೃದ್ಧಿಗೆ ಕಾರಣಿಭೂತರಾಗಿದ್ದಾರೆ ಎಂದರು.

    ಕಳೆದ 9 ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವುದು ಬಹಳ ದು:ಖದ ವಿಚಾರ. ಇಂತಹ ಸಮಯದಲ್ಲಿ ಅವರ ಸಂಕಷ್ಟಕ್ಕೆ ಸ್ಪಂದಿಸಿ ನಮ್ಮ ದೇವರಗುಡ್ಡ ಗ್ರಾಮದ ವತಿಯಿಂದ 50 ಸಾವಿರ ಸಹಾಯ ಧನವನ್ನು ನೀಡುತ್ತಿದ್ದೇವೆ. ಅವರು ಬೇಗನೆ ಗುಣಮುಖರಾಗಿ ಮತ್ತೆ ಕಾರ್ಯಪ್ರವೃತ್ತರಾಗಲಿ ಎಂದು ಆ ಭಗವಂತ ಮೈಲಾರಲಿಂಗೇಶ್ವರ ಹಾಗೂ ಮಾಲತೇಶನಲ್ಲಿ ಬೇಡಿಕೊಳ್ಳುವೆ. ಕೂಡಲೇ ಸರ್ಕಾರ ಹಾಗೂ ಕ್ಷೇತ್ರದ ಶಾಸಕರು ಮತ್ತು ಸಂಸದರು ಇವರಿಗೆ ಗೃಹ ನಿರ್ಮಾಣ ಮಾಡಿಕೊಡುವ ಮೂಲಕ ಧನ್ಯತೆ ಮೆರೆಯಬೇಕಾಗಿದೆ ಎಂದು ಆಗ್ರಹಿಸಿದರು.

    ಈ ಸಂದರ್ಭದಲ್ಲಿ ದೇವರಗುಡ್ಡ ಗ್ರಾಮದ ಮುಖಂಡರಾದ ಮಲ್ಲಯ್ಯ ಒಡೆಯರ್, ಹನುಮಂತಪ್ಪ ನಾಯರ್, ಡಿಳ್ಳೆಪ್ಪ ಐಗೂಳ, ರುದ್ರಪ್ಪ ಜಜ್ಜೂರಿ, ಪಕ್ಕೀರಪ್ಪ ಐಗೂಳ, ನಿಂಗಪ್ಪ ದ್ಯಾಮಣ್ಣನವರ, ದೇವಪ್ಪ ವಾಸರದ, ಚಿಕ್ಕಪ್ಪ ಬಡಿಗೇರ ಹಾಗೂ ನಿಂಗಪ್ಪ ಹುಲ್ಲಾಳ ಹಾಜರಿದ್ದರು.