Tag: ಗುರು ನಂದನ್

  • ಮನಸಿಗೆ ಮುತ್ತಿಕ್ಕುವ ಮಿಸ್ಸಿಂಗ್ ಬಾಯ್!

    ಮನಸಿಗೆ ಮುತ್ತಿಕ್ಕುವ ಮಿಸ್ಸಿಂಗ್ ಬಾಯ್!

    ಬೆಂಗಳೂರು: ರಘುರಾಮ್ ನಿರ್ದೇಶನದ ಮಿಸ್ಸಿಂಗ್ ಬಾಯ್ ಚಿತ್ರ ತೆರೆ ಕಂಡಿದೆ. ಮನಮಿಡಿಯುವ ಸತ್ಯ ಕಥೆಯಾಧಾರಿತ ಚಿತ್ರವೆಂಬ ಕಾರಣದಿಂದ ಮಿಸ್ಸಿಂಗ್ ಬಾಯ್ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿತ್ತು. ಆ ನಂತರದಲ್ಲಿ ನಿರ್ದೇಶಕರು ಪ್ರತಿಯೊಂದು ಹಂತದಲ್ಲಿಯೂ ಈ ಸಿನಿಮಾವನ್ನು ಕುತೂಹಲದ ಉತ್ತುಂಗದಲ್ಲಿಯೇ ಕಾಪಾಡಿಕೊಂಡು ಬಂದಿದ್ದರು. ಬಿಡುಗಡೆಯಾಗೋದು ತಡವಾದರೂ ಪ್ರೇಕ್ಷಕರ ಗಮನ ಅತ್ತಿತ್ತ ಸರಿಯದಂತೆ ನೋಡಿಕೊಂಡಿದ್ದ ಮಿಸ್ಸಿಂಗ್ ಬಾಯ್ ನ ಭಾವುಕ ಕಥೆಯನ್ನು ಕಣ್ತುಂಬಿಕೊಂಡ ಪ್ರತಿಯೊಬ್ಬರೂ ಮೆಚ್ಚಿಕೊಂಡಿದ್ದಾರೆ.

    ಕೊಲ್ಲ ಪ್ರವೀಣ್ ನಿರ್ಮಾಣ ಮಾಡಿರೋ ಮಿಸ್ಸಿಂಗ್ ಬಾಯ್ ಚಿತ್ರ ತೊಂಬತ್ತರ ದಶಕದಲ್ಲಿ ಇದೇ ಕರ್ನಾಟಕದಲ್ಲಿ ನಡೆದಿದ್ದ ಕಥೆಯಾಧಾರಿತ ಚಿತ್ರ. ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆದಿದ್ದ ಈ ಕಥೆಯನ್ನು ರಘುರಾಮ್ ಕೈಗೆತ್ತಿಕೊಂಡಾಗ ಎಲ್ಲರೂ ಬೆರಗಾಗಿದ್ದದ್ದು ನಿಜ. ಆದರೆ ಇಂಥಾ ಬೆರಗನ್ನು ಸತ್ಯ ಘಟನೆಯೊಂದರ ಸುತ್ತಾ ದೃಶ್ಯ ಕಟ್ಟಿದ ನಂತರವೂ ಜೀವಂತವಾಗಿಡೋದು ಕಷ್ಟ. ನಿರ್ದೇಶಕ ಕಥೆಯ ಪಾತ್ರಗಳನ್ನೇ ಉಸಿರಾಡದಿದ್ದರೆ ಅದು ಖಂಡಿತಾ ಸಾಧ್ಯವಾಗೋದಿಲ್ಲ. ಆದರೆ ರಘುರಾಮ್ ನೈಜ ಘಟನೆಯ ಎಲ್ಲ ಭಾವಗಳನ್ನೂ ಬೊಗಸೆಯಲ್ಲಿ ಹಿಡಿದು ತಾಜಾತನದಿಂದಲೇ ಪ್ರೇಕ್ಷಕರ ಮನಸಿಗೆ ಸೋಕಿಸುವಲ್ಲಿ ಗೆದ್ದಿದ್ದಾರೆ. ಮಿಸ್ಸಿಂಗ್ ಬಾಯ್ ಚಿತ್ರ ಆಪ್ತ ಅನ್ನಿಸೋದು ಈ ಕಾರಣದಿಂದಲೇ.

    ಸತ್ಯ ಘಟನೆಗೆ ಬದ್ಧವಾಗಿಯೇ ಹುಬ್ಬಳ್ಳಿಯ ನೆಲದಿಂದಲೇ ಈ ಚಿತ್ರದ ದೃಶ್ಯಾವಳಿಗಳು ಬಿಚ್ಚಿಕೊಳ್ಳುತ್ತವೆ. ಅಲ್ಲಿನ ರೈಲ್ವೇ ನಿಲ್ದಾಣದಲ್ಲಿ ಹೆತ್ತವರ ಕೈ ತಪ್ಪಿಸಿಕೊಂಡು ರೈಲಿನಲ್ಲಿ ಕಾಣೆಯಾಗೋ ಹುಡುಗನ ಆರ್ತಸ್ಥಿತಿಯನ್ನು ಎಲ್ಲರ ಮನಸಿಗೂ ಅಂಟಿಕೊಳ್ಳುವಂಥಾ ಭಾವ ತೀವ್ರತೆಯೊಂದಿಗೆ ನಿರ್ದೇಶಕರು ಕಟ್ಟಿ ಕೊಟ್ಟಿದ್ದಾರೆ. ಅದೇ ಬಿಗಿಯಲ್ಲಿಯೇ ಕಥೆ ವಿದೇಶಕ್ಕೂ ಸಂಚರಿಸುತ್ತೆ. ಮಗುವನ್ನು ಕಳೆದುಕೊಂಡ ಹೆತ್ತವರ ಸಂಕಟ ಮತ್ತು ಕರುಳ ಬಂಧದ ಸ್ವಪ್ನ ಬಿದ್ದಂತೆ ದೂರದ ದೇಶದಲ್ಲಿ ತಲ್ಲಣಿಸೋ ನಾಯಕನ ಮಿಡಿತಗಳನ್ನು ಪ್ರೇಕ್ಷಕರು ಅತ್ತಿತ್ತ ಹಂದಾಡಲೂ ಆಸ್ಪದ ಕೊಡದ ರೀತಿಯಲ್ಲಿ ನಿರೂಪಿಸಲಾಗಿದೆ.

    ನಾಯಕ ಗುರುನಂದನ್ ಇದೇ ಮೊದಲ ಸಾರಿ ಅವರ ಇಮೇಜಿನಾಚೆಗಿನ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಭಾವಪ್ರಧಾನ ಸನ್ನಿವೇಶಗಳಲ್ಲಿಯಂತೂ ನೋಡುಗರು ತಲ್ಲಣಿಸುವಂತೆ ಪರಿಣಾಮಕಾರಿಯಾದ ನಟನೆ ನೀಡಿದ್ದಾರೆ. ಈ ಚಿತ್ರದ ಮೂಲಕವೇ ಗುರುನಂದನ್ ಚಿತ್ರ ಜೀವನದಲ್ಲಿ ಹೊಸ ಅಧ್ಯಾಯವೊಂದು ಶುರುವಾಗೋ ಎಲ್ಲ ಲಕ್ಷಣಗಳೂ ದಟ್ಟವಾಗಿಯೇ ಗೋಚರಿಸಿದೆ. ಇನ್ನುಳಿದಂತೆ ರಂಗಾಯಣ ರಘು ನಟನೆ ಎಂದಿನಂತೆ ಸೊಗಸಾಗಿದೆ. ನಾಯಕನ ತಾಯಿ ಸೇರಿದಂತೆ ಪ್ರತೀ ಪಾತ್ರಗಳೂ ಕಾಡುವಂತೆ ಮೂಡಿ ಬಂದಿದೆ. ರವಿಶಂಕರ್ ಗೌಡ ಕೂಡಾ ಪರಿಣಾಮಕಾರಿಯಾಗಿ ನಟಿಸಿದ್ದಾರೆ. ನಾಯಕನ ತಾಯಿಯಾಗಿ ಭಾಗೀರಥಿ ಬಾಯಿ ಕದಂ ನಟನೆ ನಿಜಕ್ಕೂ ಅದ್ಭುತ.

    ಒಟ್ಟಾರೆಯಾಗಿ ಮಿಸ್ಸಿಂಗ್ ಬಾಯ್ ಭಿನ್ನ ಪಥದ ಚಿತ್ರ. ತುಂಬಾ ಕಾಲದ ನಂತರ ಮನಮಿಡಿಯುವ ಕಥಾ ಹಂದರದ ವಿಶಿಷ್ಟ ಸಿನಿಮಾ ನೋಡಿದ ಅನುಭವಕ್ಕಾಗಿ ಒಮ್ಮೆ ಮಿಸ್ಸಿಂಗ್ ಬಾಯ್ ಚಿತ್ರವನ್ನು ನೋಡಲೇಬೇಕಿದೆ.

    ರೇಟಿಂಗ್: 4/5

  • ಶಾಸಕ ಸಿ.ಟಿ ರವಿ ಮನೆಗೆ ನಟ ಗುರು ನಂದನ್ ಭೇಟಿ

    ಶಾಸಕ ಸಿ.ಟಿ ರವಿ ಮನೆಗೆ ನಟ ಗುರು ನಂದನ್ ಭೇಟಿ

    ಬೆಂಗಳೂರು: ಶಾಸಕ ಸಿಟಿ ರವಿ ಕಾರು ಅಪಘಾತದ ಹಿನ್ನೆಲೆಯಲ್ಲಿ ನಟ ಫಸ್ಟ್ ರ್‍ಯಾಂಕ್ ರಾಜು ಖ್ಯಾತಿಯ ನಟ ಗುರು ನಂದನ್ ಆರೋಗ್ಯ ವಿಚಾರಿಸಲು ರವಿ ಮನೆಗೆ ಭೇಟಿ ನೀಡಿದ್ದರು.

    ಅಪಘಾತದಲ್ಲಿ ಗಾಯಗೊಂಡಿದ್ದ ಶಾಸಕ ಸಿ.ಟಿ ರವಿ ಅವರನ್ನು ಭೇಟಿ ಮಾಡಲು ನಟ ಗುರು ನಂದನ್ ಮನೆಗೆ ಹೋಗಿದ್ದಾರೆ. ಆದರೆ ರವಿ ಅವರು ವಿಶಾಂತ್ರಿ ಪಡೆಯುತ್ತಿದ್ದ ಹಿನ್ನೆಲೆಯಲ್ಲಿ ಮಾತನಾಡಲು ಸಾಧ್ಯವಾಗದೇ ಮನೆಯಿಂದ ವಾಪಸ್ಸು ಹೋಗಿದ್ದಾರೆ. ಇದನ್ನೂ ಓದಿ: ಅಪಘಾತದ ಬಗ್ಗೆ ಶಾಸಕ ಸಿ.ಟಿ ರವಿ ಸ್ಪಷ್ಟನೆ

    ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ನಟ ಗುರು ನಂದನ್, ನನಗೆ ಇದರ ಬಗ್ಗೆ ಏನು ಗೊತ್ತಿಲ್ಲ. ಮಾಧ್ಯಮಗಳ ಮೂಲಕ ಅಪಘಾತದ ಬಗ್ಗೆ ತಿಳಿದುಕೊಂಡು ಅಣ್ಣನನ್ನು ಮತನಾಡಿಸಲು ಬಂದೆ. ಆದರೆ ಮಾತನಾಡಿಸಲು ಅವರು ಸಿಗಲಿಲ್ಲ. ಸಿಟಿ ರವಿ ಅವರು ನನಗೆ ದೂರದ ಸಂಬಂಧಿ. ಸೋಮವಾರ ಬೆಳಗಿನ ಜಾವ ಸುಮಾರು 3 ಗಂಟೆಯಲ್ಲಿ ಅಪಘಾತವಾಗಿದೆ ಎಂದು ಮಾಹಿತಿ ತಿಳಿದಿದೆ. ಸದ್ಯಕ್ಕೆ ಅವರು ಇಂಜೆಕ್ಷನ್ ತೆಗೆದುಕೊಂಡು ಮಲಗಿದ್ದಾರೆ. ಅವರು ರೆಸ್ಟ್ ಮಾಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.

    ನಾನು ಬೆಳಗ್ಗೆ ಜಿಮ್‍ನಲ್ಲಿ ಇದ್ದೆ. ಆಗ ಟಿವಿಯಲ್ಲಿ ಈ ಬಗ್ಗೆ ಗೊತ್ತಾಯಿತು. ಫೋನ್ ಮಾಡುವುದು ಬೇಡ ಅಂತ ಮನೆಗೆ ನೇರವಾಗಿ ಬಂದೆ. ಆದರೆ ಅವರ ಮನೆಯಲ್ಲಿ ಯಾರು ಇಲ್ಲ. ಅವರ ಪತ್ನಿಯೂ ಕೂಡ ಇಲ್ಲ, ಈಗ ಅವರು ಚಿಕ್ಕಮಗಳೂರಿನಿಂದ ಬರುತ್ತಿದ್ದಾರೆ. ಅಪಘಾತ ನಡೆದಾಗ ಡ್ರೈವರ್ ಕಾರು ಓಡಿಸುತ್ತಿದ್ದು, ರವಿ ಅವರು ಮಲಗಿದ್ದರು. ಅಪಘಾತವಾದ ಬಳಿಕ ವಿಕ್ರಂ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ರೆಸ್ಟ್ ಮಾಡುತ್ತಿದ್ದಾರೆ. ನನಗೂ ಮಾತನಾಡಿಸಲು ಸಿಗಲಿಲ್ಲ. ಅವರ ಗನ್ ಮ್ಯಾನ್ ಇದ್ದರು ಅಷ್ಟೆ ಎಂದು ಗುರು ತಿಳಿಸಿದರು.

    https://www.youtube.com/watch?v=YPEOa75NnvQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv