Tag: ಗುದದ್ವಾರ

  • ವಿದ್ಯಾರ್ಥಿ ಮೇಲೆ ಹಲ್ಲೆಗೈದು ಗುದದ್ವಾರಕ್ಕೆ ಮರದ ಕೋಲು ತುರುಕಿದ ಸ್ನೇಹಿತರು!

    ವಿದ್ಯಾರ್ಥಿ ಮೇಲೆ ಹಲ್ಲೆಗೈದು ಗುದದ್ವಾರಕ್ಕೆ ಮರದ ಕೋಲು ತುರುಕಿದ ಸ್ನೇಹಿತರು!

    -ವಿಚಾರ ಬಯಲು ಮಾಡಿದ್ರೆ ಸಹೋದರಿಗೆ ತೊಂದರೆ ಬೆದರಿಕೆ

    ನವದೆಹಲಿ: ಎಂಟನೇ ತರಗತಿ ವಿದ್ಯಾರ್ಥಿಯೊಬ್ಬನ ಮೇಲೆ ಆತನ ಸ್ನೇಹಿತರೇ ಹಲ್ಲೆ ಮಾಡಿ ಬಳಿಕ ಅವರಲ್ಲಿ ಓರ್ವ ಆತನ ಗುದದ್ವಾರಕ್ಕೆ ಮರದ ಕೋಲನ್ನು ತುರುಕಿದ ವಿಲಕ್ಷಣ ಘಟನೆಯೊಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (NewDelhi) ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಈ ಘಟನೆ ಮಾರ್ಚ್‌ 18 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.

    ನಡೆದಿದ್ದೇನು..?: 14 ವರ್ಷದ ಬಾಲಕ ಶಾಲೆಯಲ್ಲಿ (School Boy) ತನ್ನ ಸ್ನೇಹಿತರ ಜೊತೆ ವಿಚಾರವೊಂದಕ್ಕೆ ಜಗಳವಾಡಿದ್ದಾನೆ. ಈ ಗಲಾಟೆಯು ತಾರಕಕ್ಕೇರಿದ್ದು, ನಾಲ್ವರು ಸ್ನೇಹಿತರು ಬಾಲಕನನ್ನು ಮೂಲೆಗೆ ತಳ್ಳಿ ಮನಬಂದಂತೆ ಥಳಿಸಿದ್ದಾರೆ. ಅಲ್ಲದೇ ನಾಲ್ವರಲ್ಲಿ ಓರ್ವ ಮರದ ತುಂಡಿನಿಂದ ಬಾಲಕನ ಗುದದ್ವಾರಕ್ಕೆ (Anal Region) ಹಾನಿ ಮಾಡಿದ್ದಾನೆ. ಈ ಸಂಬಂಧ ವಿದ್ಯಾರ್ಥಿಯ ಪೋಷಕರು, ಪೊಲೀಸರು ಮತ್ತು ಶಾಲಾ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.

    ಘಟನೆಯನ್ನು ಯಾರಿಗೂ ಹೇಳದಂತೆ ವಿದ್ಯಾರ್ಥಿಗೆ ಆತನ ಗೆಳೆಯರು ಬೆದರಿಕೆ ಹಾಕಿದ್ದಾರೆ. ಒಂದು ವೇಳೆ ವಿಚಾರವನ್ನು ಬಯಲು ಮಾಡಿದರೆ ಅದೇ ಶಾಲೆಯಲ್ಲಿ ಓದುತ್ತಿರುವ ತನ್ನ ಸಹೋದರಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಬೆದರಿಸಿರುವುದಾಗಿ ವಿದ್ಯಾರ್ಥಿ ಹೇಳಿದ್ದಾನೆ.

    ದೂರಿನ ಪ್ರಕಾರ, ಮಾರ್ಚ್ 13 ರಂದು ತನ್ನ ಸಹಪಾಠಿಯೊಂದಿಗೆ ವಿದ್ಯಾರ್ಥಿ ಜಗಳವಾಡಿದ್ದಾನೆ. ಇದೇ ವಿಚಾರಕ್ಕೆ ಮಾರ್ಚ್ 18 ರಂದು ಆರೋಪಿಗಳು ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದಾರೆ. ಆದರೆ ಪ್ರತೀಕಾರದ ಭಯದಿಂದ ವಿದ್ಯಾರ್ಥಿ, ಮೊದಲು ಘಟನೆಯ ಬಗ್ಗೆ ಯಾರಿಗೂ ಹೇಳಲಿಲ್ಲ. ಇತ್ತ ಮಾರ್ಚ್ 20 ರಂದು ವಿದ್ಯಾರ್ಥಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಪೋಷಕರು ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ವಿದ್ಯಾರ್ಥಿ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿಲ್ಲ.

    ಮಾರ್ಚ್ 28 ರಂದು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆಪರೇಷನ್ ಮಾಡಬೇಕು. ಯಾವುದೋ ಅಹಿತಕರ ಘಟನೆಗೆ ಮಗು ಬಲಿಯಾಗಿರಬಹುದು ಎಂದು ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಅಂತೆಯೇ ಆತನಿಗೆ ಆಪರೇಷನ್‌ ಕೂಡ ಮಾಡಲಾಗಿದೆ. ಏಪ್ರಿಲ್ 2 ರಂದು ವಿದ್ಯಾರ್ಥಿಗೆ ಪ್ರಜ್ಞೆ ಬಂದಾಗ, ಅವನು ತನ್ನ ಕುಟುಂಬಕ್ಕೆ ನಡೆದ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದ್ದಾನೆ. ನಂತರ ಪೊಲೀಸ್ ದೂರು ದಾಖಲಿಸಲಾಗಿದೆ.

    ವಿದ್ಯಾರ್ಥಿಯ ಗುದದ್ವಾರದಲ್ಲಿ ಮರದ ಕೋಲನ್ನು ತೂರಿಸಲು ಪ್ರಯತ್ನಿಸಿದ್ದರಿಂದ ಅಲ್ಲಿ ತೀವ್ರ ಗಾಯಗಳಾಗಿವೆ ಎಂದು ವೈದ್ಯಕೀಯ ವರದಿಯು ಬಹಿರಂಗಪಡಿಸಿತು. ಅಂತೆಯೇ ವಿದ್ಯಾರ್ಥಿ ಕೂಡ ಇದನ್ನು ಒಪ್ಪಿಕೊಂಡಿದ್ದಾನೆ. ತನ್ನ ಗೆಳೆಯ ಮರದ ಕೋಲನ್ನು ತುರುಕಿಸಲು ಪ್ರಯತ್ನಿಸಿದ್ದಾನೆ ಎಂದು ಬಾಯ್ಬಿಟ್ಟಿದ್ದಾನೆ. ಅಲ್ಲದೇ ಘಟನೆಯನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಲಾಗಿದೆ ಎಂದು ತಿಳಿಸಿದ್ದು, ಇದನ್ನು ಪೊಲೀಸರು ಎಫ್‌ಐಆರ್‌ ನಲ್ಲಿ ದಾಖಲಿಸಿಕೊಂಡಿದ್ದಾರೆ.

    ಸದ್ಯ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 341 (ತಪ್ಪು ಸಂಯಮ), 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಮತ್ತು 377 (ಅಸ್ವಾಭಾವಿಕ ಅಪರಾಧಗಳು), ಜೊತೆಗೆ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಮತ್ತು ಪೋಕ್ಸೊ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

  • ಸಹೋದ್ಯೋಗಿಯ ತಮಾಷೆಯಿಂದಾಗಿ ಪ್ರಾಣವನ್ನೇ ಕಳೆದುಕೊಂಡ! ಸುದ್ದಿ ಓದಿ ನಕ್ಕರೂ ಯಾರೂ ಈ ರೀತಿ ಮಾಡ್ಬೇಡಿ

    ಸಹೋದ್ಯೋಗಿಯ ತಮಾಷೆಯಿಂದಾಗಿ ಪ್ರಾಣವನ್ನೇ ಕಳೆದುಕೊಂಡ! ಸುದ್ದಿ ಓದಿ ನಕ್ಕರೂ ಯಾರೂ ಈ ರೀತಿ ಮಾಡ್ಬೇಡಿ

    ನವದೆಹಲಿ: ಫ್ಯಾಕ್ಟರಿಯಲ್ಲಿ ಸಹೋದ್ಯೋಗಿಯ ತಮಾಷೆಯಿಂದಾಗಿ 40 ವರ್ಷದ ವ್ಯಕ್ತಿಯೊಬ್ಬರು ತನ್ನ ಪ್ರಾಣವನ್ನೇ ಕಳೆದುಕೊಂಡ ಆಘಾತಕಾರಿ ಘಟನೆಯೊಂದು ದೆಹಲಿಯ ನಂಗೋಲಿ ಎಂಬಲ್ಲಿ ನಡೆದಿದೆ.

    ಮೃತ ದುರ್ದೈವಿ ವ್ಯಕ್ತಿಯನ್ನು ರವೀಂದ್ರ ಎಂದು ಗುರುತಿಸಲಾಗಿದೆ. ಈ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಪಂಡಿತ್ ಪ್ರಕರಣದ ಆರೋಪಿಯಾಗಿದ್ದು, ಸದ್ಯ ಈತನನ್ನು ನಂಗೋಲಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

    ಏನಿದು ಘಟನೆ?: ನಂಗೋಲಿಯ ಸ್ವರ್ಣ್ ಪಾರ್ಕ್ ಪ್ರದೇಶದಲ್ಲಿ ತನ್ನ ಕುಟುಂಬದ ಜೊತೆ ವಾಸವಾಗಿರೋ ರವೀಂದ್ರ ಅವರು ಹತ್ತಿರದ ಪ್ಲೈವುಡ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಬುಧವಾರ ಬೆಳಗ್ಗೆ ಕೆಲಸಕ್ಕೆಂದು ರವೀಂದ್ರ ಬಂದಿದ್ದರು. ಈ ವೇಳೆ ಅವರ ಹಿಂಬದಿಯಲ್ಲಿ ಪ್ಯಾಂಟ್ ಹರಿದಿರುವುದನ್ನು ಸಹೋದ್ಯೋಗಿ ಪಂಡಿತ್ ಗಮನಿಸಿದ್ದಾನೆ. ಅಲ್ಲದೇ ತಮಾಷೆಗೆಂದು ಪ್ಯಾಂಟ್ ತೂತಾಗಿರುವ ಗುದದ್ವಾರದ ಜಾಗದಲ್ಲಿ ಏರ್ ಜೆಟ್ ಪೈಪ್ ಇಟ್ಟು ಬಲವಾಗಿ ಗಾಳಿ ನಿರ್ದೇಶಿಸಿದ್ದಾನೆ. ಪರಿಣಾಮ ಬಲವಾದ ಗಾಳಿಯು ರವೀಂದ್ರ ಅವರ ದೇಹಕ್ಕೆ ಹೊಕ್ಕಿ ಕರುಳಿಗೆ ಗಂಭೀರ ಸ್ವರೂಪದ ಘಾಸಿಯಾಗಿದೆ. ಇದರಿಂದ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಯಿಸಿತಾದ್ರೂ, ಕರುಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದರಿಂದ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಅಂತ ಅಲ್ಲಿನ ಡಿಸಿಪಿ ಘಟನೆಯ ಬಗ್ಗೆ ಮಾಧ್ಯಮಕ್ಕೆ ವಿವರಿಸಿದ್ದಾರೆ.

    ರವೀಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಕೂಡಲೇ ವೈದ್ಯರು ಚಿಕಿತ್ಸೆ ನೀಡಲಿಲ್ಲ. ಅಲ್ಲದೇ ಈ ಘಟನೆ ತುಂಬಾನೇ ಸೂಕ್ಷ್ಮವಾಗಿದ್ದು, ತಕ್ಷಣವೇ ಶಸ್ತ್ರಚಿಕಿತ್ಸೆಗೆ ಒಳಪಡಿಸದಿರುವುದರಿಂದ ಅವರು ಸಾವನ್ನಪ್ಪಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ ಎಂದು ಅವರು ತಿಳಿಸಿದ್ದಾರೆ.

    ಪ್ರಕರಣ ಸಂಬಂಧ ಆರೋಪಿ ಪಂಡಿತ್ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ತಮಾಷೆ ಮಾಡಲು ಹೋಗಿ ಈ ಅವಘಡ ಸಂಭವಿಸಿದೆ ಅಂತ ತನ್ನ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೇ ಈ ಸಂಬಂಧ ಫ್ಯಾಕ್ಡರಿಯಲ್ಲಿ ಕೆಲಸ ಮಾಡುತ್ತಿರುವ ಇತರರನ್ನು ಕೂಡ ವಿಚಾರಣೆ ನಡೆಸಿದ್ದಾರೆ.