Tag: ಗವಿಸಿದ್ದೇಶ್ವರ ಸ್ವಾಮೀಜಿ

  • ಎಷ್ಟೇ ತಂತ್ರಜ್ಞಾನ ಬೆಳೆದರೂ ಗೂಗಲ್‌ನಿಂದ ರೊಟ್ಟಿ ಡೌನ್‌ಲೋಡ್ ಮಾಡಲಾಗುವುದಿಲ್ಲ – ಗವಿಶ್ರೀ

    ಎಷ್ಟೇ ತಂತ್ರಜ್ಞಾನ ಬೆಳೆದರೂ ಗೂಗಲ್‌ನಿಂದ ರೊಟ್ಟಿ ಡೌನ್‌ಲೋಡ್ ಮಾಡಲಾಗುವುದಿಲ್ಲ – ಗವಿಶ್ರೀ

    – ನಮ್ಮೂರು ಜಪಾನ್ ಮಾಡೋದು ಬೇಡ. ನಮ್ಮನ್ನು ಜೋಪಾನ ಮಾಡಿ ಎಂದ ಸ್ವಾಮೀಜಿ

    ಕೊಪ್ಪಳ: ಬಲ್ಡೋಟಾ ಕಾರ್ಖಾನೆಗೆ (Baldota Factory) ಇತಿಶ್ರೀ ಇಡುವುದು ನನಗೆ ಗೊತ್ತು, ಎಷ್ಟೇ ತಂತ್ರಜ್ಞಾನ ಬೆಳೆದರೂ ಗೂಗಲ್‌ನಿಂದ ರೊಟ್ಟಿ ಡೌನ್‌ಲೋಡ್ ಮಾಡಲಾಗುವುದಿಲ್ಲ. ನನ್ನದು ಇದೇ ಮೊದಲು, ಇದೇ ಕೊನೆಯ ಹೋರಾಟವಾಗಬೇಕು ಎಂದು ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

    ಕೊಪ್ಪಳದ ತಾಲೂಕು ಕ್ರೀಡಾಂಗಣದಲ್ಲಿ ಕೊಪ್ಪಳ ಬಂದ್ ಹಿನ್ನೆಲೆ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಮಠದ ಭಕ್ತರಿಗಾಗಿ ನನ್ನ ಎಲ್ಲ ಇತಿ-ಮಿತಿ ಬದಿಗಿಟ್ಟು ಹೋರಾಟಕ್ಕೆ ಬಂದಿದ್ದೇನೆ. ನಮ್ಮ ಸಮಸ್ಯೆಯನ್ನು ತಾತ್ವಿಕವಾಗಿ, ಸಾತ್ವಿಕವಾಗಿ ಹಾಗೂ ಪ್ರೇಮದಿಂದ ಸರ್ಕಾರಕ್ಕೆ ತಿಳಿಸುವುದು ನನ್ನ ಕರ್ತವ್ಯ. ಅದನ್ನು ನಾನು ಮಾಡಿದ್ದೇನೆ. ಜೊತೆಗೆ ಮುಂದೆ ಏನು ಮಾಡಬೇಕು ಎಂಬುವುದು ನನಗೆ ಗೊತ್ತಿದೆ. ಗವಿಸಿದ್ದೇಶ್ವರನ ಇಚ್ಛೆಯಂತೆ ನಾನು ಮುಂದುವರೆಯುತ್ತೇನೆ ಎಂದು ಹೇಳಿದರು.ಇದನ್ನೂ ಓದಿ: ಹಾಸನದಲ್ಲಿ ನಿಲ್ಲದ ಕಾಡಾನೆ, ಮಾನವನ ಸಂಘರ್ಷ – ಆನೆ ದಾಳಿಗೆ ಯುವಕ ಬಲಿ

    ಮಠದ ಜಾತ್ರೆ, ದಾಸೋಹ ಭಕ್ತರಿಂದಲೇ ನಡೆಯುತ್ತದೆ. ಇಂತಹ ಭಕ್ತರು ಸಮಸ್ಯೆಗೆ ಸಿಲುಕಿದ್ದರಿಂದ ನಾನು ಹೊರಗೆ ಬರಲೇಬೇಕಾಯಿತು. ನನ್ನ ಆತ್ಮಸಾಕ್ಷಿಗೆ ಕೇಳಿ ಹೋರಾಟಕ್ಕೆ ಬಂದಿದ್ದೇನೆ. ನಮ್ಮ ಮಕ್ಕಳ ಭವಿಷ್ಯಕ್ಕಾಗಿ ನಾನು ನನ್ನ ಎಲ್ಲ ಗಡಿ ದಾಡಿ, ಇಲ್ಲಿಗೆ ಬಂದಿದ್ದೇನೆ. ಈಗಲೂ ನಾನು ಜಾತ್ರೆಯಲ್ಲಿ ಹೇಳಿದೆ ಮಾತಿಗೆ ಬದ್ಧನಾಗಿದ್ದೇನೆ. ನಾನು ಯಾವುದೇ ಕಾರಣಕ್ಕೂ ನೇತೃತ್ವ ವಹಿಸುವುದಿಲ್ಲ. ಇದು ನನ್ನ ಮೊದಲ ಮತ್ತು ಕೊನೆಯ ಹೋರಾಟ ಎಂದು ಸ್ಪಷ್ಟಪಡಿಸಿದರು.

    ಸರ್ಕಾರದ ವಿರುದ್ಧ ನಾವು ಧ್ವನಿ ಎತ್ತಿದ್ದೇವೆ. ನಾನು ಮುಂದೆ ಎಲ್ಲಿಯೂ ಬರುವುದಿಲ್ಲ. ಸರ್ಕಾರ ನಮಗೆ ತಾಯಿ ಇದ್ದಂತೆ. ನಮಗೆ ಆರೋಗ್ಯಯುತವಾದ ಕೊಪ್ಪಳ ಕೊಡಿ ಎಂದು ಕೇಳಿಕೊಳ್ಳುತ್ತೇವೆ. ಇದರ ಹೊರತಾಗಿ ದುಡಿಯುವುದನ್ನು ಬಿಟ್ಟು ಹೊಡೆದಾಡುವುದನ್ನು ನಾನು ಕಲಿಸುವುದಿಲ್ಲ. ನಾವು ಯಾವ ಸರ್ಕಾರದ ವಿರುದ್ಧವೂ ಗುಡುಗುವುದಿಲ್ಲ. ನಮ್ಮೂರು ಜಪಾನ್ ಮಾಡುವುದು ಬೇಡ. ನಮ್ಮನ್ನು ಜೋಪಾನ ಮಾಡಿ ಅಂತಾ ನಾನು ಕೇಳಿಕೊಳ್ಳಬಲ್ಲೆ ಎಂದು ಮುಂದಿನ ಹೋರಾಟದಿಂದ ವಿಮುಕ್ತರಾದರು. ಸಚಿವ ಶಿವರಾಜ ತಂಗಡಗಿ, ಸೋಲಿಲ್ಲದ ಸರದಾರ ರಾಘವೇಂದ್ರ ಹಿಟ್ನಾಳ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಕೊಪ್ಪಳ ಜಿಲ್ಲೆಯವರು. ನಿಮ್ಮ ಒಂದು ಪತ್ರವಿಲ್ಲದೇ ಒಬ್ಬ ಸಣ್ಣ ಆಫೀಸರ್ ಕೂಡ ಬದಲಾಗುವುದಿಲ್ಲ. ಆದರೆ ಇಂತಹ ದೊಡ್ಡ ಫ್ಯಾಕ್ಟರಿ ಬಂದರೂ ಸುಮ್ಮನೇ ಕೂತಿರುವುದು ಸರಿಯಲ್ಲ. ನೀವು ಮೂವರು ಸೇರಿ ಏನು ಮಾಡುತ್ತೀರಿ ಗೊತ್ತಿಲ್ಲ. ಕಾರ್ಖಾನೆ ಆರಂಭ ರದ್ದು ಆದೇಶ ತೆಗೆದುಕೊಂಡು ಕೊಪ್ಪಳಕ್ಕೆ ಬರಬೇಕು ಎಂದು ರಾಘವೇಂದ್ರ ಹಿಟ್ನಾಳ, ರಾಜಶೇಖರ ಹಿಟ್ನಾಳ ಸೇರಿ ಆಡಳಿತ ಪಕ್ಷದ ಜನಪ್ರತಿನಿಧಿಗಳಿಗೆ ತಾಕೀತು ಮಾಡಿದರು. ಇನ್ನು ಉಳಿದವರೆಲ್ಲ ಅವರಿಗೆ ಸಹಕಾರ ನೀಡಬೇಕು ಎಂದು ಸೂಚಿಸಿದರು.

    ಒಂದು ದೇಶದ ಪ್ರಗತಿಯಲ್ಲಿ ಕಾರ್ಖಾನೆಗಳು ಬೇಕು. ಆದರೆ, ಎಷ್ಟು ಬೇಕು? ಯಾವ ಭಾಗಕ್ಕೆ ಎಷ್ಟು ಬೇಕು? ಎಂಬುದು ಮುಖ್ಯ. ಈಗಾಗಲೇ ಕೇವಲ ಕೊಪ್ಪಳ ತಾಲೂಕಿನಲ್ಲಿ 202 ಕಾರ್ಖಾನೆ ಇವೆ. ಇದರಲ್ಲಿ 20ಕ್ಕೂ ಹೆಚ್ಚು ದೂಳು ಉಗುಳುವ ಕಾರ್ಖಾನೆ ಇವೆ. ಕೊಪ್ಪಳ ತಾಲೂಕಿನ ಸುತ್ತಲೂ ಕಾರ್ಖಾನೆ ಆಗುತ್ತಿವೆ. ಇದರಿಂದ ಇಲ್ಲಿನ ಜನರು ಕೊಪ್ಪಳ ಬಿಟ್ಟು ಎಲ್ಲಿಗೆ ಹೋಗಬೇಕು. ಮಗುವಿನ ಮುಖದ ಮೇಲೆ ಒಂದು ಕಾಡಿಗೆ ಇದ್ದರೆ ಚಂದ. ಆದರೆ, ಮುಖದ ತುಂಬೆಲ್ಲ ಕಾಡಿಗೆ ಇದ್ದರೆ ಹೇಗೆ ಎಂದು ಮಾರ್ಮಿಕವಾಗಿ ನುಡಿದರು.

    ನಾನು ಗವಿಸಿದ್ದೇಶ್ವರ ಅಜ್ಜನನ್ನು ಪ್ರೀತಿಸಿದಷ್ಟೇ ನಿಮ್ಮನ್ನೂ ಪ್ರೀತಿಸುತ್ತೇನೆ. ರಾಜ್ಯದ ಮುಖ್ಯಮಂತ್ರಿ ವಿರುದ್ಧ ಗವಿಶ್ರೀ ಗುಡುಗು ಎಂದು ಬರೆದಿದ್ದಾರೆ. ನಾನು ಗುಡುಗು ಹಾಕುವವನಲ್ಲ. ನನ್ನ ಮೇಲೆಯೇ ಗುಡುಗಿ ಹೋಗಿದ್ದಾರೆ. ಗುಡುಗಿದವ ಹುಡುಗಿ ಹೋಗುತ್ತಾನೆ ಎಂದು ಸುಮ್ಮನಾಗಿದ್ದೇನೆ. ನಾನು ಸಿಎಂ ಸ್ಥಾನಕ್ಕೆ ಗೌರವ ನೀಡುತ್ತೇನೆ. ನಾನು ಬಂದ್ ಮಾಡುವುದು, ಹೋರಾಟ ಮಾಡುವುದನ್ನು ನಾನು ಕಲಿಸಲ್ಲ. ನಾನು ಭಕ್ತರಿಗೆ ಬಡಿದಾಟ ಕಲಿಸುವುದಿಲ್ಲ. ನಿಮ್ಮ ಭಕ್ತಿಯನ್ನು ನಾನು ಬೇರೆ ವಿಚಾರಕ್ಕೆ ಬಳಕೆ ಮಾಡಿಕೊಳ್ಳುವಷ್ಟು ಅಜ್ಞಾನ ನನ್ನಲ್ಲಿ ಇಲ್ಲ ಎಂದರು.

    ಜರ್ಮನ್ ತಂತ್ರಜ್ಞಾನ ಬಳಸಿ, ಕಾರ್ಖಾನೆ ನಿರ್ಮಾಣ ಮಾಡುತ್ತೇವೆ ಎಂದು ಬಲ್ದೋಟಾ ಸಂಸ್ಥೆ ಹೇಳಿಕೊಂಡಿದೆ. ಸರ್ಕಾರ ಮೊದಲು ಇರುವ ಕಾರ್ಖಾನೆಗೆ ಈ ಟೆಕ್ನಾಲಜಿ ಬಳಸಿ, ಮಾಲಿನ್ಯ ಕಡಿಮೆ ಮಾಡಲಿ. ಹುಟ್ಟುವ ಮಕ್ಕಳು ನಪುಂಸಕರಾಗುತ್ತಿದ್ದಾರೆ. ಕ್ಯಾನ್ಸರ್, ಅಸ್ತಮಾಕ್ಕೆ ತುತ್ತಾಗುತ್ತಿದ್ದಾರೆ. ಎಷ್ಟೇ ತಂತ್ರಜ್ಞಾನ ಬೆಳೆದರೂ ಗೂಗಲ್‌ನಿಂದ ರೊಟ್ಟಿ ಡೌನ್‌ಲೋಡ್ ಮಾಡಲು ಆಗುವುದಿಲ್ಲ. ರೊಟ್ಟಿಗಾಗಿ ಭೂಮಿ ತಾಯಿ ಬೇಕು. ಕೊಪ್ಪಳಕ್ಕೆ ಒಂದು ವಿಶೇಷ ಕೈಗಾರಿಕೆ ನೀತಿ ಬೇಕಿದೆ. ಇಲ್ಲಿಗೆ ಬಂದ ಕಾರ್ಖಾನೆ ಎಷ್ಟು? ಆಗಿರುವ ಸಮಸ್ಯೆ ಎಷ್ಟು? ಎಂಬುದರ ಬಗ್ಗೆ ಅಧ್ಯಯನ ಆಗಬೇಕು. ಕಿರ್ಲೋಸ್ಕರ್ ಇಲ್ಲಿಗೆ ಬಂದು 20-30 ವರ್ಷ ಆಯ್ತು. ಇವರಿಗೆಲ್ಲ ಗಿಣಿಗೇರದಲ್ಲಿ ಒಂದು ಸಿಬಿಎಸ್‌ಸಿ ಶಾಲಾ, ಆಸ್ಪತ್ರೆ ಮಾಡುವಷ್ಟು ಬಡತನ ಇದೆಯಾ? ಎಂದು ಪ್ರಶ್ನಿಸಿದರು.ಇದನ್ನೂ ಓದಿ: ಪತ್ನಿ ನೀಡಿದ ಅರ್ಜಿಯಲ್ಲಿ ವೈಟ್ನರ್‌ ಬಳಕೆ ಮಾಡಿದ್ದು ತಿಳಿದಿಲ್ಲ: ಲೋಕಾ ಪೊಲೀಸರಿಗೆ ಸಿಎಂ ನೀಡಿದ ಉತ್ತರದಲ್ಲಿ ಏನಿದೆ?

  • ಮಸೀದಿಗೆ ಭೇಟಿ ನೀಡಿ ಭಾವೈಕ್ಯತೆ ಮೆರೆದ ಕೊಪ್ಪಳ ಗವಿಶ್ರೀ

    ಮಸೀದಿಗೆ ಭೇಟಿ ನೀಡಿ ಭಾವೈಕ್ಯತೆ ಮೆರೆದ ಕೊಪ್ಪಳ ಗವಿಶ್ರೀ

    ಕೊಪ್ಪಳ: ಗವಿಮಠದ ಪೀಠಾಧಿಪತಿ ಶ್ರೀಗವಿಸಿದ್ದೇಶ್ವರ ಸ್ವಾಮೀಜಿ ಯಾವಾಗಲೂ ಇತರ ಸ್ವಾಮೀಜಿಯವರಿಗಿಂತ ಭಿನ್ನವಾಗಿಯೇ ಕೆಲಸ ಮಾಡುತ್ತಾರೆ. ಇದೀಗ ಅಂತಹುದೇ ವಿಭಿನ್ನ ಕೆಲಸವೊಂದನ್ನು ಮಾಡಿದ್ದಾರೆ.

    ಈ ಬಾರಿ ಗವಿಸಿದ್ದೇಶ್ವರ ಸ್ವಾಮೀಜಿ ಮಸೀದಿಗೆ ಭೇಟಿ ನೀಡುವ ಮೂಲಕ ತಾವು ಇತರರಿಗಿಂತ ಭಿನ್ನ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇದು ಒಂದು ರೀತಿಯಲ್ಲಿ ಇಡೀ ಸಮಾಜಕ್ಕೆ ಮಾದರಿ ಹಾಗೂ ಭಾವೈಕ್ಯತೆ ಸಾರುವಂತಹ ಕೆಲಸವಾಗಿದೆ. ಇದನ್ನೂ ಓದಿ: ಅಮ್ಮನ ಬಗ್ಗೆ ಅಪ್ಪು ಮಾತನಾಡಿದ್ದ ಸ್ಫೂರ್ತಿದಾಯಕ ಮಾತುಗಳು ವೈರಲ್

    ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇವಂಕಲ ಕುಂಟಾ ಗ್ರಾಮದಲ್ಲಿ ಗವಿಸಿದ್ದೇಶ್ವರ ಸ್ವಾಮೀಜಿಗಳ ಪ್ರವಚನ ಕಾರ್ಯಕ್ರಮ ನಡೆಯುತ್ತಿದೆ. ಈ ಮಧ್ಯೆ ಪ್ರತಿದಿನ ಒಂದೊಂದು ಹಳ್ಳಿಯಲ್ಲಿ ಗವಿಸಿದ್ದೇಶ್ವರ ಸ್ವಾಮೀಜಿ ಪಾದಯಾತ್ರೆ ಮಾಡುತ್ತಿದ್ದಾರೆ. ಇಂದು ಗವಿಸಿದ್ದೇಶ್ವರ ಸ್ವಾಮೀಜಿ ಹಿರೇವಂಕಲ ಕುಂಟಾ ಗ್ರಾಮದ ಜುಮ್ಮಾ ಮಸೀದಿಗೆ ಭೇಟಿ ನೀಡಿ ಸೌಹಾರ್ದತೆ ಮೆರೆದಿದ್ದಾರೆ.

    ಮಸೀದಿಗೆ ಭೇಟಿ ನೀಡಿದ್ದ ವೇಳೆ ಗವಿಸಿದ್ದೇಶ್ವರ ಸ್ವಾಮೀಜಿಗೆ ಮುಸ್ಲಿಂ ಸಮುದಾಯದವರು ಗೌರವ ಸಲ್ಲಿಸಿದರು. ಬಳಿಕ ಮಾತನಾಡಿದ ಗವಿಸಿದ್ದೇಶ್ವರ ಸ್ವಾಮೀಜಿ, ಭೂಮಿಯ ಮೇಲೆ ಬದುಕಿರುವ ಜೀವರಾಶಿಗಳಲ್ಲಿ ಮಾನವೀಯತೆ ಅತ್ಯಂತ ಶ್ರೇಷ್ಠವಾದದ್ದು. ಮನುಷ್ಯನಲ್ಲಿ ಭೇದ-ಭಾವ ಇರಬಾರದು. ಸದಾ ಒಳ್ಳೆಯ ಕಾರ್ಯಗಳಲ್ಲಿ ತೊಡಗಬೇಕು ಎಂದರು.

    ಮನುಷ್ಯರಾದವರು ಸದಾ ತ್ಯಾಗದಲ್ಲಿ ತೊಡಗಿರಬೇಕು. ದಯಾ-ಕರುಣೆಯಿಂದ ಬಾಳಿದರೆ ಅದುವೇ ಸ್ವರ್ಗ. ಕೆಲವು ದಿನಗಳ ಹಿಂದೆ ದೇಶದಲ್ಲಿ ಭೇದ-ಭಾವ ಹರಡುವ ವಾತಾವರಣ ಇತ್ತು. ಈ ರೀತಿಯ ಬೆಳವಣಿಗೆಗೆ ಅವಕಾಶ ಕೊಡದೇ ಪ್ರತಿಯೊಬ್ಬರೂ ಸಹೋದರರಂತೆ ಜೀವಿಸಬೇಕೆಂದು ಕರೆ ನೀಡಿದರು. ಇದನ್ನೂ ಓದಿ:  88 ವರ್ಷಗಳ ಕನ್ನಡ ಚಿತ್ರರಂಗದ ಎಲ್ಲ ದಾಖಲೆ ಮುರಿದ ಜೇಮ್ಸ್ : 100 ಕೋಟಿ, ಅಧಿಕೃತ ಹೇಳಿಕೆ

    ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಧರ್ಮಗಳ ವಿಚಾರವಾಗಿ ಗಲಭೆಗಳಾಗುತ್ತಿದ್ದು, ಇದೇ ಸಂದರ್ಭದಲ್ಲಿ ಗವಿಸಿದ್ದೇಶ್ವರ ಸ್ವಾಮೀಜಿ ಹಿರೇವಂಕಲ ಕುಂಟಾದ ಜುಮ್ಮಾ ಮಸೀದಿಗೆ ಭೇಟಿ ನೀಡುವ ಮೂಲಕ ಸೌಹಾರ್ದತೆ ಮೆರೆದಿರುವುದು ನಿಜಕ್ಕೂ ಅನುಕರಣಿಯವೇ ಸರಿ.

  • ಮಸೀದಿ ಸಂದರ್ಶನ ಕಾರ್ಯಕ್ರಮಕ್ಕೆ ಗವಿಮಠದ ಸ್ವಾಮೀಜಿ ಚಾಲನೆ

    ಮಸೀದಿ ಸಂದರ್ಶನ ಕಾರ್ಯಕ್ರಮಕ್ಕೆ ಗವಿಮಠದ ಸ್ವಾಮೀಜಿ ಚಾಲನೆ

    – ಕೋಮು ಸೌಹಾರ್ದತೆ ಮೂಡಿಸಲು ಮುಂದಾದ ಮುಸ್ಲಿಂ ಬಾಂಧವರ

    ಕೊಪ್ಪಳ: ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಕೋಮು ಸೌಹಾರ್ದತೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಧರ್ಮ ಧರ್ಮಗಳ ನಡುವೆ ಕೋಮು ಸೌಹಾರ್ದತೆ ಮೂಡಿಸುವ ನಿಟ್ಟಿನಲ್ಲಿ ಜಮಾತ್-ಎ-ಇಸ್ಲಾಂ ಹಿಂದ್ ಸಂಘಟನೆ ಮಸೀದಿ ಸಂದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದೆ. ನೂರಾರು ಹಿಂದೂಗಳು ಮಸೀದಿಗೆ ಭೇಟಿ ನೀಡಿ ಇಸ್ಲಾಂ ಧರ್ಮ ಹಾಗೂ ಮಸೀದಿ ಬಗ್ಗೆ ತಿಳಿದುಕೊಂಡರು.

    ಕೊಪ್ಪಳದ ನಗರದ ಸ್ಟೇಷನ್ ರಸ್ತೆಯಲ್ಲಿರುವ ಮಸ್ಜಿದ್-ಎ-ಅಲ್ಲಾದಲ್ಲಿ ಇಂದು ವಿಭಿನ್ನ ಕಾರ್ಯಕ್ರಮವೊಂದು ನಡೆಯಿತು. ಕೊಪ್ಪಳದ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿಗಳು ಮಸೀದಿಗೆ ಭೇಟಿ ನೀಡಿದರು. ಈ ವೇಳೆ ಸ್ವಾಮೀಜಿಗಳಿಗೆ ಮುಸ್ಲಿಂ ಬಾಂಧವರ ಮಸೀದಿಯ ಬಗ್ಗೆ ವಿವರಿಸಿದರು.

    ಮಸೀದಿ ಸಂದರ್ಶನ ಕಾರ್ಯಕ್ರಮಕ್ಕೆ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ಮಸೀದಿಗೆ ಭೇಟಿ ನೀಡಿದ ಗವಿಸಿದ್ದೇಶ್ವರ ಸ್ವಾಮೀಜಿ ಅಲ್ಲಿನ ವ್ಯವಸ್ಥೆ ಹಾಗೂ ಪ್ರಾರ್ಥನೆ ಮಾಡುವ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು. ಜೊತೆಗೆ ಮುಸ್ಲಿಂ ಬಾಂಧವರು ಹಿಂದೂ ಸಮಾಜದ ಎಲ್ಲ ಸಮುದಾಯದವರಿಗೂ ಸಹ ಮಸೀದಿಗೆ ಆಹ್ವಾನ ನೀಡಿದ್ದರು. ಮುಸ್ಲಿಂ ಬಾಂಧವರ ಕರೆಗೆ ಓಗೊಟ್ಟು ಬಂದಿದ್ದ ನೂರಾರು ಹಿಂದೂಗಳಿಗೂ ಸಹ ಮಸೀದಿ ಹಾಗೂ ಇಸ್ಲಾಂ ಧರ್ಮದ ಕುರಿತು ಮಾಹಿತಿ ನೀಡಿಲಾಯಿತು. ಹಿಂದೂ ಪುರಷರಷ್ಟೇ ಅಲ್ಲದೆ ಮಹಿಳೆಯರೂ ಸಹ ಮಸೀದಿ ಸಂದರ್ಶನದಲ್ಲಿ ಭಾಗಿಯಾಗಿದ್ದು ವಿಶೇಷವಾಗಿದೆ.

    ಈ ಕಾರ್ಯಕ್ರಮವು ಬೆಳಗ್ಗೆ 11 ಗಂಟೆಗೆ ಆರಂಭವಾಗಿ ಸಂಜೆ 5 ಗಂಟೆವರೆಗೂ ನಡೆಯಿತು. ಈ ವೇಳೆ ಸಾವಿರಾರು ಹಿಂದೂಗಳು ಮಸೀದಿಗೆ ಭೇಟಿ ನೀಡಿದರು. ಒಟ್ಟಿನಲ್ಲಿ ಸಮಾಜದಲ್ಲಿ ಧರ್ಮ, ಧರ್ಮಗಳ ನಡುವೆ ಸಾಮರಸ್ಯ ಮೂಡಿಸುವ ಉದ್ದೇಶದಿಂದ ಕೊಪ್ಪಳದಲ್ಲಿ ಮಸೀದಿ ಸಂದರ್ಶನ ಹಮ್ಮಿಕೊಂಡಿದ್ದು ನಿಜಕ್ಕೂ ಪ್ರಶಂಸನಿಯ ಕೆಲಸವಾಗಿದೆ.