Tag: ಗಣಿ ಅಕ್ರಮ

  • 1 ಲಕ್ಷ ಕೋಟಿ ಮೊತ್ತದ ಗಣಿ ಅಕ್ರಮ – ತನಿಖೆಗೆ SIT ರಚಿಸುವಂತೆ ʻಕೈʼ ನಾಯಕರಿಂದಲೇ ಸಿಎಂಗೆ ಪತ್ರ

    1 ಲಕ್ಷ ಕೋಟಿ ಮೊತ್ತದ ಗಣಿ ಅಕ್ರಮ – ತನಿಖೆಗೆ SIT ರಚಿಸುವಂತೆ ʻಕೈʼ ನಾಯಕರಿಂದಲೇ ಸಿಎಂಗೆ ಪತ್ರ

    ಬೆಂಗಳೂರು: ರಾಜ್ಯದ ಭೋವಿ ನಿಗಮದಲ್ಲಿ ಭ್ರಷ್ಟಾಚಾರ (Corruption) ಆರೋಪ ಪ್ರಕರಣ ತಣ್ಣಗಾಗುವ ಮುನ್ನವೇ ಮತ್ತೊಂದು ಭಾರೀ ಅಕ್ರಮ ಬೆಳಕಿಗೆ ಬಂದಿದೆ. ಖುದ್ದು ಕಾಂಗ್ರೆಸ್‌ನ ಹಿರಿಯ ನಾಯಕರೇ ಅಕ್ರಮದ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ತನಿಖೆಗೆ (Investigation) ಒತ್ತಾಯಿಸಿದ್ದಾರೆ.

    ರಾಜ್ಯದಲ್ಲಿ 1 ಲಕ್ಷ ಕೋಟಿ ಮೊತ್ತದ ಗಣಿ ಹಗರಣ ನಡೆದಿದೆ. ಈ ಸಂಬಂಧ ತನಿಖೆ ನಡೆಸಲು ವಿಶೇಷ ತನಿಖಾ ತಂಡ (SIT) ರಚಿಸಬೇಕು ಎಂದು ಮಾಜಿ ಸಂಸದರು, ಮಾಜಿ ಎಂಎಲ್‌ಸಿಗಳು ಹಾಗೂ ಮಾಜಿ ಸಚಿವರು ಸೇರಿ 20ಕ್ಕೂ ಹೆಚ್ಚು ನಾಯಕರು ಪತ್ರ ಬರೆದಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್‌, ಹೆಚ್‌.ಕೆ ಪಾಟೀಲ್‌, ಎಸ್‌ಎಸ್‌ ಮಲ್ಲಿಕಾರ್ಜುನ್‌ ಅವರಿಗೂ ಪತ್ರದಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಚಾ.ನಗರ ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಕೊನೆಗೂ ಭರವಸೆಯ ಬೆಳಕು; ಸರ್ಕಾರಿ ನೌಕರಿ ಕೊಡಲು ಸಚಿವ ಸಂಪುಟ ಅಸ್ತು

    ರಾಜ್ಯದಲ್ಲಿ ಬಳ್ಳಾರಿ (Ballari), ತುಮಕೂರು ಹಾಗೂ ಚಿತ್ರದುರ್ಗದಲ್ಲಿ ಗಣಿಗಾರಿಕೆಯಲ್ಲಿ ಭಾರೀ ಅಕ್ರಮ ನಡೆದಿರುವ ವರದಿ ಕೊಟ್ಟಿದೆ. ವರದಿ ಅನ್ವಯ 1 ಲಕ್ಷ ಕೋಟಿ ಗಣಿ ಅಕ್ರಮ ನಡೆದಿದೆ. ಈ ಬಗ್ಗೆ ಎಸ್‌ಐಟಿ ರಚನೆ ಮಾಡಿ ತನಿಖೆ ನಡೆಸಬೇಕೆಂದು ಸಿಎಂಗೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಜಾತಿ ಜನಗಣತಿ | ದುಡ್ಡು ಹೊಡಿಯೋಕೆ ಇಂತಹ ಸ್ಕೀಮ್ ಹುಡುಕ್ತೀರಾ? – ಸಿ.ಟಿ ರವಿ ಕಿಡಿ

    ಪತ್ರದಲ್ಲಿ ಏನಿದೆ?
    ರಾಜ್ಯದ ಬಳ್ಳಾರಿ, ತುಮಕೂರು, ಚಿತ್ರದುರ್ಗ ಮತ್ತು ಇನ್ನಿತರ ಭಾಗಗಳಲ್ಲಿ ಅತ್ಯಂತ ಉತ್ಕೃಷ್ಟವಾದ ಕಬ್ಬಿಣದ ಅದಿರು ಲಭ್ಯವಾಗುತ್ತಿರುವುದನ್ನು ಗಮನಿಸಿದ ಕೆಲವು ಗಣಿ ಮಾಲೀಕರು 2000 ಇಸವಿಯಿಂದ ಅಕ್ರಮವಾಗಿ ಗಣಿ ಲೂಟಿ ಮಾಡುತ್ತಿದ್ದರು. ಇದನ್ನು ಗಮನಿಸಿದ ಕಾಂಗ್ರೆಸ್‌ ಪಕ್ಷದ ನಾಯಕತ್ವವು ವಿಧಾನ ಪರಿಷತ್‌ನಲ್ಲಿ ಹೋರಾಟ ಮಾಡಿ ಹಗರಣವನ್ನು ನ್ಯಾ. ಮೂರ್ತಿ ಯು.ಎಲ್‌ ಭಟ್‌ ಆಯೋಗಕ್ಕೆ ತನಿಖೆ ಮಾಡಲು ಒಪ್ಪಿಸಲಾಗಿತ್ತು. ಭಟ್‌ ಅವರ ಆಯೋಗವು ಒದೊಂದು ಅಂತರರಾಜ್ಯ ಮತ್ತು ಅಂತಾರಾಷ್ಟ್ರೀಯ ಹಗರಣವಾಗಿರುವುದರಿಂದ ಸಿಬಿಐ ತನಿಖೆಗೆ ವಹಿಸುವುದು ಸೂಕ್ತವೆಂದು ಆದೇಶ ಮಾಡಿತ್ತು. ಆದ್ರೆ ಅದನ್ನ ಅಂದಿನ ರಾಜ್ಯ ಸರ್ಕಾರ ಒಪ್ಪಿರಲಿಲ್ಲ. ಅದನ್ನು ವಿರೋಧಿಸಿ ವಿಧಾನ ಪರಿಷತ್ತಿನಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದ ನಾಯಕತ್ವ ಮಾಡಿದ ಹೋರಾಟದಿಂದ ಅಂದಿನ ಸರ್ಕಾರ ಈ ಹಗರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಲಾಗಿತ್ತು.

    ಆ ಮಧ್ಯೆ ಕಾಂಗ್ರೆಸ್ ಪಕ್ಷದಿಂದ ‘ಸತ್ಯ ಶೋಧನಾ ಸಮಿತಿ’ಯನ್ನು ವಿ.ಎಸ್. ಉಗ್ರಪ್ಪನವರ ನೇತೃತ್ವದಲ್ಲಿ ಬಸವರಾಜ ರಾಯರೆಡ್ಡಿ, ಅಮರೇಗೌಡ ಬಯ್ಯಾಮರ, ವಿ.ಮುನಿಯಪ್ಪ, ಕೆ. ಶಿವಮೂರ್ತಿ ನಾಯಕ್‌ ಅವರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಯಿತು. ಆ ಸಮಿತಿಯು ಅಕ್ರಮ ಗಣಿಗಾರಿಕೆಯ ಪೂರ್ಣ ಮಾಹಿತಿಯನ್ನು ಸಂಗ್ರಹಿಸಿ. 2008ರ ನವೆಂಬರ್‌ 16ರಂದು ವರದಿ ನೀಡಿ. ಹತ್ತಾರು ಸಾವಿರ ಕೋಟಿ ಮೌಲ್ಯದ ಕಬ್ಬಿಣದ ಅದಿರನ್ನು ಕೆಲವರು ಲೂಟಿ ಮಾಡಿ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ. ಆದ್ದರಿಂದ ಅಕ್ರಮ ಗಣಿಗಾರಿಕೆ ವಿಷಯವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಿ ರಾಜ್ಯದ ಸಂಪತ್ತನ್ನು ಉಳಿಸಬೇಕು ಎಂದು ಸಮಿತಿಯು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಯಿತು. ಇದಾದ ಬಳಿಕ ಅನೇಕ ಬೆಳವಣಿಗೆ ನಡೆದಿದೆ.

    ಈ ಎಲ್ಲಾ ವರದಿಗಳಿಂದ ಸ್ಪಷ್ಟಪಡಿಸುವುದೇನೆಂದ್ರೆ ರಾಜ್ಯದ ಕಬ್ಬಿಣ ಅದಿರು ಸಂಪತ್ತನ್ನು ಕೆಲವು ವ್ಯಕ್ತಿಗಳು/ ಸಂಘ ಸಂಸ್ಥೆಗಳು, ರಾಜಕಾರಣಿಗಳ ಮತ್ತು ಅಧಿಕಾರಿಗಳ ಸಹಕಾರದಿಂದ ಅಕ್ರಮವಾಗಿ 1 ಲಕ್ಷ ಕೋಟಿಗೂ ಅಧಿಕ ಸಂಪತ್ತನ್ನು ಲೂಟಿ ಮಾಡಿ, ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ್ದಾರೆ. ಇದನ್ನೂ ಓದಿ: ಹಾಸನ| ಗಣೇಶ ಮೆರವಣಿಗೆ ವೇಳೆ ಭೀಕರ ಅಪಘಾತ – ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

    ಆದ್ದರಿಂದ ರಾಜ್ಯ ಸರ್ಕಾರ ಹೆಚ್‌.ಕೆ ಪಾಟೀಲ್‌ ಅವರ ನೇತೃತ್ವದ ಉಪಸಮಿತಿ ನೀಡಿರುವ ವರದಿ ಆಧಾರದ ಮೇಲೆ ತಪ್ಪಿತಸ್ಥರು ಯಾವುದೇ ಪಕ್ಷದವರಾಗಲಿ, ಯಾವುದೇ ಅಧಿಕಾರಿಗಳಾಗಲಿ, ಯಾವುದೇ ಸಂಘ ಸಂಸ್ಥೆಗೆ ಸೇರಿದವರಾಗಿರಲಿ, ಎಸ್‌ಐಟಿ ರಚಿಸಿ ತನಿಖೆ ನಡೆಸಬೇಕು. ಲೂಟಿಕೋರರ ವಿರುದ್ಧ ಕ್ರಮ ಆಗಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

  • ಸಿಎಂ ಮೇಲೆ ಗಣಿ ಕಳಂಕ- 2 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಎಚ್‍ಡಿಕೆ ಆರೋಪ

    ಸಿಎಂ ಮೇಲೆ ಗಣಿ ಕಳಂಕ- 2 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಎಚ್‍ಡಿಕೆ ಆರೋಪ

    ಬೆಂಗಳೂರು: ಅಸೆಂಬ್ಲಿ ಎಲೆಕ್ಷನ್ ಹೊತ್ತಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಗಣಿ ಅಕ್ರಮದ ಆರೋಪ ಕೇಳಿ ಬಂದಿದೆ.

    ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ, ಸರ್ಕಾರದ ಗಣಿ ಇಲಾಖೆಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಒಂದು ತಿಂಗಳಲ್ಲಿ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದಿದ್ದೆ. ಆ ಸಮಯ ಈಗ ಬಂದಿದೆ. ಭ್ರಷ್ಟಾಚಾರ ವಿಷಯದ ಬಗ್ಗೆ ಇತ್ತೀಚೆಗೆ ಮಾತನಾಡಲು, ಅಕ್ರಮಗಳ ಬಗ್ಗೆ ನಾವು ಎಷ್ಟು ದಾಖಲೆ ಕೊಟ್ಟರೂ ಹಾಗೂ ತಾರ್ಕಿಕ ಅಂತ್ಯ ಮುಟ್ಟಿಸಲು ಆಗುತ್ತಿಲ್ಲ ಅನ್ನೋ ಬೇಸರ ಇದೆ ಎಂದು ಹೇಳಿದ್ರು.

    ಗಣಿ ಇಲಾಖೆ ಮಂತ್ರಿ ನೆಪ ಮಾತ್ರಕ್ಕೆ ಅಷ್ಟೇ. ಸಿಎಂ ಕಚೇರಿಯಲ್ಲೇ ಇಲಾಖೆ ನಿರ್ವಹಣೆ ಆಗುತ್ತಿದೆ. ರಾಮನ ಲೆಕ್ಕ ಕೃಷ್ಣನ ಲೆಕ್ಕ ಆಗುತ್ತಿರೋದು ಅಲ್ಲಿಂದಲೇ. ಗಣಿ ಮಂತ್ರಿ ವಿನಯ್ ಕುಲಕರ್ಣಿ ಅವರನ್ನ ಸಮಾಜ ಒಡೆಯುವ ಕೆಲಸಕ್ಕೆ ನೇಮಿಸಿದ್ದಾರೆ. ಸಿಎಂ ಧರ್ಮ ಪ್ರಚಾರಕ್ಕೆ ವಿನಯ್ ಕುಲಕರ್ಣಿ ಅವರನ್ನ ನೇಮಿಸಿದ್ದಾರೆ ಎಂದು ಸಿಎಂ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ರು.

    ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕು ಬಳಿ ಸುಬ್ಬರಾಯನ ಹಳ್ಳಿ, ತಿಮ್ಮಪ್ಪನ ಗುಡಿ ಬಳಿ ಎಂ.ಎಂ. ಹಿಲ್ಸ್ ಗೆ ಗಣಿ ಗುತ್ತಿಗೆ ನೀಡಲಾಗಿದೆ. ಮುಚ್ಚಂಡಿ ಎಂಟರ್ ಪ್ರೈಸಸ್‍ನಿಂದ ಅಕ್ರಮ ನಡೆದಿದೆ. ಸಿದ್ದರಾಮಯ್ಯ ಅವರ ಸರ್ಕಾರ ಮೂರು ಕಂಪನಿಗಳಿಗೆ ರೈಸಿಂಗ್ ಕಾಂಟ್ರಾಕ್ಟ್ ನೀಡಿದ್ದಾರೆ. ಸುಬ್ಬರಾಯನ ಹಳ್ಳಿ ಬಳಿ 30 ಲಕ್ಷ ಮೆಟ್ರಿಕ್ ಟನ್ ಉತ್ಖನನ ಮಾಡಲು ಅವಕಾಶ ನೀಡಲಿದೆ. ಟೆಂಡರ್ ಕೊಡುವುದಕ್ಕೆ, ಅಗ್ರಿಮೆಂಟ್ ಮಾಡಿಕೊಳ್ಳುವುದಕ್ಕೆ ಮುಂಚೆ ಆ ಕಂಪನಿ ಮೈನಿಂಗ್ ಶುರು ಮಾಡಿದ್ದಾರೆ ಎಂದು ಹೇಳಿದ್ರು.

    2014-15 ನೇ ಸಾಲಿನಲ್ಲೇ 2062 ಕೋಟಿ ರೂಪಾಯಿ ಅಕ್ರಮ ನಡೆದಿದೆ. ಈವರೆಗಿನ ಲೆಕ್ಕ ತೆಗೆದರೆ ಇದು ಇನ್ನೂ ದೊಡ್ಡ ಮೊತ್ತವಾಗಲಿದೆ. ಹೇಮಲತಾ ಎಂಬ ಅಧಿಕಾರಿ ಅಕ್ರಮದ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದರು. ಆದರೆ ತಕ್ಷಣ ಅವರನ್ನು ಎತ್ತಂಗಡಿ ಮಾಡಿದರು. ಮೂರು ವರ್ಷಗಳಲ್ಲಿ 8 ಜನ ಅಧಿಕಾರಿಗಳು ಬದಲಾಗಿದ್ದಾರೆ. ತುಷಾರ್ ಗಿರಿನಾಥ್ ಅವರ ಅವಧಿಯಲ್ಲೇ ಇಷ್ಟೆಲ್ಲ ಅಕ್ರಮ ನಡೆದಿದೆ. ಈ ಕಾರಣಕ್ಕಾಗಿಯೇ ತುಷಾರ್ ಅವರನ್ನು ಸಿಎಂ ಕಚೇರಿಯಲ್ಲಿ ಉಳಿಸಿಕೊಂಡಿದ್ದಾರೆ. ತೋರಿಕೆಗೆ ಅಕ್ರಮದ ತನಿಖೆಗೆ ಸಮಿತಿ ರಚಿಸುತ್ತಾರೆ. ಜೊತೆಗೆ ಹಿರಿಯ ಅಧಿಕಾರಿಗಳ ಸಮಿತಿ ರಚಿಸಿ, ಅಕ್ರಮ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ. ಅಷ್ಟೇ ಅಲ್ಲದೇ ಬಿಎಸ್‍ವೈ ಗೊತ್ತಾಗದೆ ಚೆಕ್ ಮೂಲಕ ಹಣ ಪಡೆದಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಬೇರೆ ಮಾರ್ಗದ ಮುಖಾಂತರ ವ್ಯವಹಾರ ನಡೆಸಿದ್ದರು ಎಂದು ಹೇಳಿದರು.

    ಮುಚ್ಚಂಡಿ ಕಂಪನಿಯಿಂದ ಭಾರಿ ಅಕ್ರಮ ನಡೆದಿದ್ದು, 2014-15 ರಲ್ಲಿ ಅದಿರು ಉತ್ಪಾದನೆ ಮಾಡಿರುವುದು 22,90,715 ಮೆಟ್ರಿಕ್ ಟನ್. ಆದರೆ ವರದಿ ಮಾಡಿರುವುದು  13,94,715 ಮೆ. ಟನ್. ಇವುಗಳ ಬಗ್ಗೆ ಮಾಡಿದ ಮೈನ್ಸ್ ಪ್ರೊಡಕ್ಷನ್ ರಿಜಿಸ್ಟರ್ ದಾಖಲೆಗಳೇ ಮಾಯವಾಗಿದೆ. 2015-16 ರಲ್ಲಿ ರೈಸಿಂಗ್ ಕಾಂಟ್ರಾಕ್ಟರ್ ಕೂಡಾ ರಿಜಿಸ್ಟರ್ ಗೆ ಸಹಿ ಮಾಡಿಲ್ಲ. ಉಸ್ತುವಾರಿ ಅಧಿಕಾರಿ ಕೂಡಾ ಸಹಿ ಮಾಡಿಲ್ಲ. 2015-16 ರಲ್ಲಿ ಕೂಡಾ ಇಷ್ಟೇ ಪ್ರಮಾಣದ ಅಕ್ರಮ ನಡೆದಿದೆ. 2014 ರಿಂದ 17 ರವರೆಗೆ ಅಧಿಕೃತವಾಗಿ ಇಂಡಿಯನ್ ಬ್ಯೂರೋ ಆಫ್ ಮೈನ್ಸ್ ಗೆ 60,56,440 ಮೆ. ಟನ್ ಅದಿರನ್ನು ಗಣಿಗಾರಿಕೆ ಮಾಡಿದ ಬಗ್ಗೆ ವರದಿ ನೀಡಲಾಗಿದೆ. ಇದರ ಮೌಲ್ಯ ಟನ್‍ಗೆ ಮೂರು ಸಾವಿರದಂತೆ ಲೆಕ್ಕ ಹಾಕಿದರೂ 5,450 ಕೋಟಿ ಆಗುತ್ತದೆ. ಆದರೆ ಇದರ ಎರಡು ಪಟ್ಟು ಅಕ್ರಮ ನಡೆದಿದೆ. ಆದ್ದರಿಂದ ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

    ಮುಚ್ಚಂಡಿ ಸಂಸ್ಥೆಯ ಬಳಿ ಗಣಿಗಾರಿಕೆ ಯಂತ್ರಗಳೇ ಇರಲಿಲ್ಲ. ಮುಚ್ಚಂಡಿ ಹೆಸರಲ್ಲಿ ಸೌತ್ ವೆಸ್ಟ್ ಮೈನಿಂಗ್ ಕಾರ್ಪೊರೇಷನ್ ಕಂಪನಿ ಗಣಿಗಾರಿಕೆ ಮಾಡಿದೆ. ಯಡಿಯೂರಪ್ಪ ಅವರೊಂದಿಗೆ ಇದ್ದ ಸೌತ್‍ವೆಸ್ಟ್ ಮೈನಿಂಗ್ ಸಂಸ್ಥೆಯ ಸಂಬಂಧ ಈ ಸರ್ಕಾರದಲ್ಲೂ ಮುಂದುವರಿದೆ ಎಂದು ಹೇಳಿದ್ರು

    ಈ ಕಂಪನಿಗಳ ಮಾಲೀಕರು ಯಾರು ಎಂದು ನನಗೆ ಗೊತ್ತಿಲ್ಲ. ನನಗೆ ದುಡ್ಡು ಕೊಡುವುದಕ್ಕೂ ಯಾರೂ ಬರೋದಿಲ್ಲ. ಆದರೆ ನನ್ನ ಮನೆಗೆ ಬರುವವರೆಲ್ಲಾ ನನ್ನ ಹತ್ತಿರವೇ ದುಡ್ಡು ಕಿತ್ತುಕೊಂಡು ಹೋಗುತ್ತಾರೆ. ರಾಜ್ಯದ ಆಸ್ತಿ ಹೊಡೆಯುವವರ ಬಳಿ ಕಿಕ್ ಬ್ಯಾಕ್ ಪಡೆಯುವ ವ್ಯಕ್ತಿ ನಾನಲ್ಲ. ರಾಜ್ಯದ ಆಸ್ತಿ ಉಳಿಯಬೇಕು. ಇವತ್ತೂ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಖ್ಯ ಮಂತ್ರಿಗಳು ರಾಜ್ಯದ ಜನರಿಗೆ ಯಾವ್ಯಾವುದೋ ಭಾಗ್ಯ ಕೊಟ್ಟಿದ್ದಾರಲ್ಲಾ ಹಾಗೆ ರೈತರಿಗೆ ಆತ್ಮಹತ್ಯೆ ಭಾಗ್ಯ ಕರುಣಿಸಿದ್ದಾರೆ ಎಂದು ಸಿಎಂ ವಿರುದ್ಧ ಕಿಡಿ ಕಾರಿದರು.