Tag: ಗಡಿ

  • ತಂಟೆಕೋರ ಚೀನಾಗೆ ತಕ್ಕ ಉತ್ತರ – ಐವರು ಚೀನಿ ಸೈನಿಕರ ಹತ್ಯೆ

    ತಂಟೆಕೋರ ಚೀನಾಗೆ ತಕ್ಕ ಉತ್ತರ – ಐವರು ಚೀನಿ ಸೈನಿಕರ ಹತ್ಯೆ

    ನವದೆಹಲಿ: ಭಾರತ ಚೀನಾದ ನಡುವಿನ ಲಡಾಖ್‌ ಗಡಿಯಲ್ಲಿ ಸಂಘರ್ಷ ತೀವ್ರಗೊಂಡಿದ್ದು ಮೂವರು ಭಾರತದ ಯೋಧರು ಹುತಾತ್ಮರಾಗಿದ್ದರೆ ಅತ್ತ ಚೀನಾದ 5 ಮಂದಿ ಸೈನಿಕರನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ಲಡಾಖ್‌ ಗಡಿಯಲ್ಲಿರುವ ಗಲ್ವಾನ್‌ ಕಣಿವೆಯಲ್ಲಿ ಸೋಮವಾರ ರಾತ್ರಿ ಗುಂಡಿನ ದಾಳಿ ನಡೆದಿದೆ ಎಂದು ಆರಂಭದಲ್ಲಿ ವರದಿಯಾಗಿತ್ತು. ಆದರೆ ಭಾರತೀಯ ಸೇನೆ ಗುಂಡಿನ ದಾಳಿ ನಡೆದಿರುವ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಮಾಧ್ಯಮಗಳಿಗೆ ತಿಳಿಸಿದ ಹೇಳಿಕೆಯಲ್ಲಿ ಎರಡು ಕಡೆ ಸಂಘರ್ಷ ನಡೆದಿದ್ದು ಒಬ್ಬರು ಕರ್ನಲ್‌ ಮತ್ತು ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ ಎಂದು ತಿಳಿಸಿದೆ. ಅಷ್ಟೇ ಅಲ್ಲದೇ ಚೀನಾ ಕಡೆಯೂ ಪ್ರಾಣ ಹಾನಿ ಸಂಭವಿಸಿದೆ ತಿಳಿಸಿತ್ತು.

    ಚೀನಾ ಸರ್ಕಾರ ಅಧಿಕೃತವಾಗಿ ಸಾವಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಚೀನಾದ ಗ್ಲೋಬಲ್‌ ಟೈಮ್ಸ್‌ ಪತ್ರಕರ್ತೆಯೊಬ್ಬರು ಭಾರತೀಯ ಸುದ್ದಿ ಮಾಧ್ಯಮಗಳನ್ನು ಉಲ್ಲೇಖಿಸಿ ಐದು ಮಂದಿ ಚೀನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

    5 ಮಂದಿ ಚೀನಾ ಚೈನಿಕರು ಸಾವನ್ನಪ್ಪಿದ್ದು, 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಬಡಿದಾಟಕ್ಕೆ ಕಾರಣ ಏನು ಎನ್ನುವುದು ಇನ್ನೂ ಅಧಿಕೃತವಾಗಿ ತಿಳಿದು ಬಂದಿಲ್ಲ. ಕಲ್ಲು, ದೊಣ್ಣೆಗಳಿಂದ ಎರಡು ಕಡೆಯ ಸೈನಿಕರು ಹೊಡೆದಾಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

    ಸೋಮವಾರ ರಾತ್ರಿ ಸಂಘರ್ಷ ನಡೆದಿದೆ ಎನ್ನುವುದನ್ನು ಚೀನಾ ಒಪ್ಪಿಕೊಂಡಿದೆ. ಎರಡೂ ಬಾರಿ ನಮ್ಮ ದೇಶದ ಗಡಿಗೆ ನುಗ್ಗಿ ಭಾರತದ ಸೈನಿಕರು ದಾಳಿ ನಡೆಸಿದ್ದಾರೆ. ಆದರೆ ನಾವು ನಮ್ಮ ಗಡಿಯನ್ನು ದಾಟಿಲ್ಲ ಎಂದು ಚೀನಾ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ.

     ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್‌ ಟೈಮ್ಸ್‌ ನಾವು ಇಲ್ಲಿಯವರೆಗೆ ಯಾವುದೇ ಸಾವು ನೋವುಗಳ ಸಂಖ್ಯೆಯನ್ನು ವರದಿ ಮಾಡಿಲ್ಲ ಎಂದು ಟ್ವೀಟ್‌ ಮಾಡಿದೆ. ಇದಕ್ಕೆ ಜನ ತರಾಟೆಗೆ ತೆಗೆದುಕೊಳ್ಳುತ್ತಿದ್ದು. ಭಾರತ ಸರ್ಕಾರ ಈಗಾಗಲೇ ಅಧಿಕೃತವಾಗಿ ಮೂವರು ಯೋಧರು ಹುತಾತ್ಮರಾಗಿದ್ದಾರೆ ಎಂದು ತಿಳಿಸಿದೆ. ನೀವು ಯಾಕೆ ಇನ್ನೂ ಹೇಳುತ್ತಿಲ್ಲ. ನಿಮ್ಮ ಟ್ವೀಟ್‌ ಪ್ರಕಾರ ಸಾವು ಸಂಭವಿಸಿದೆ ಎನ್ನುವುದು ದೃಢವಾಗುತ್ತದೆ ಎಂದು ಟ್ವೀಟ್‌ ಮಾಡುತ್ತಿದ್ದಾರೆ.


    ಗಡಿಯಲ್ಲಿ ಸಂಘರ್ಷ ಕಡಿಮೆ ಮಾಡುವ ನಿಟ್ಟಿನಲ್ಲಿ ಎರಡು ಕಡೆಯ ಮೇಜರ್‌ ಜನರಲ್‌ ಮಟ್ಟದ ಮಾತುಕತೆ ಆರಂಭವಾಗಿದೆ. ಲಡಾಖ್‌ ಗಡಿ ಬಳಿ ಭಾರತ ಅಭಿವೃದ್ಧಿ ಕಾರ್ಯ ನಡೆಸುತ್ತಿರುವುದು ಚೀನಾಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಚೀನಾ ಗಡಿಯಲ್ಲಿ ಕಿರಿಕ್‌ ಮಾಡಲು ಆರಂಭಿಸಿದೆ. ಮಾತುಕತೆಯ ಮೂಲಕ ಸಮಸ್ಯೆ ಬಗೆ ಹರಿಸಿಕೊಳ್ಳಲು ಭಾರತ ಮುಂದಾಗಿದ್ದರೂ ಚೀನಾದ ಬೇಡಿಕೆಗೆ ಮಣಿದಿರಲಿಲ್ಲ. ಅಷ್ಟೇ ಅಲ್ಲದೇ ಯಾವುದೇ ಕಾರ್ಯಕ್ಕೂ ಅಭಿವೃದ್ಧಿ ಕೆಲಸ ನಿಲ್ಲಿಸುವುದಿಲ್ಲ ಎಂದು ಭಾರತ ಹೇಳಿದೆ.

  • ಭಾರತದಿಂದ ನನ್ನ ಎಳೆದೊಯ್ದು ಸುಳ್ಳು ಹೇಳಲು ಒತ್ತಾಯಿಸಿದ್ರು: ನೇಪಾಳದ ವಶದಲ್ಲಿದ್ದ ವ್ಯಕ್ತಿ

    ಭಾರತದಿಂದ ನನ್ನ ಎಳೆದೊಯ್ದು ಸುಳ್ಳು ಹೇಳಲು ಒತ್ತಾಯಿಸಿದ್ರು: ನೇಪಾಳದ ವಶದಲ್ಲಿದ್ದ ವ್ಯಕ್ತಿ

    – ನನ್ನ ಕೊಂದ್ರೂ ಸರಿ ಭಾರತದ ವಿರುದ್ಧ ಸುಳ್ಳು ಹೇಳಲ್ಲ

    ನವದೆಹಲಿ: ಅಕ್ರಮವಾಗಿ ನಮ್ಮ ಗಡಿಯೊಳಗೆ ಪ್ರವೇಶ ಮಾಡಿದ್ದಾನೆ ಎಂದು ನೇಪಾಳ ಸೇನೆ ಎಳೆದುಕೊಂಡು ಹೋಗಿದ್ದ ಭಾರತದ ಪ್ರಜೆಯನ್ನು ನೇಪಾಳ ಸರ್ಕಾರ ಬಿಡುಗಡೆ ಮಾಡಿದೆ.

    ಬಿಡುಗಡೆ ಮಾಡಿದ ವ್ಯಕ್ತಿಯನ್ನು ಲಗಾನ್ ಕಿಶೋರ್ ಎಂದು ಗುರುತಿಸಲಾಗಿದ್ದು, ನೇಪಾಳದಿಂದ ಬಿಡುಗಡೆಯಾಗಿ ಭಾರತೀಯ ಸೇನೆಯ ನೆರವಿನಿಂದ ತನ್ನ ಸ್ವಂತ ಊರು ಬಿಹಾರಕ್ಕೆ ವಾಪಸ್ ಬಂದಿದ್ದಾರೆ. ಶುಕ್ರವಾರ ಭಾರತ ಮತ್ತು ನೇಪಾಳ ಗಡಿ ಭಾಗದಲ್ಲಿ ಗುಂಡಿನ ದಾಳಿಯಾಗಿತ್ತು. ಇದಾದ ನಂತರ ನೇಪಾಳ ಸೇನೆ ಭಾರತೀಯ ಪ್ರಜೆಯನ್ನು ಬಂಧಿಸಿತ್ತು.

    https://twitter.com/ANI/status/1271673105207853056

    ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಕಿಶೋರ್, ನಾನು ಮತ್ತು ನನ್ನ ಮಗ ನೇಪಾಳಿ ಪ್ರಜೆಯಾಗಿರುವ ನಮ್ಮ ಸೊಸೆಯನ್ನು ಭೇಟಿಯಾಗಲು ನೇಪಾಳ ಮತ್ತು ಭಾರತದ ಗಡಿ ಭಾಗಕ್ಕೆ ಹೋಗಿದ್ದವು. ಈ ವೇಳೆ ನೇಪಾಳದ ಕಡೆಯಿಂದ ಬಂದ ಭದ್ರತಾ ಸಿಬ್ಬಂದಿ ನನ್ನ ಮಗನಿಗೆ ಸುಖಾಸುಮ್ಮನೆ ಹೊಡೆದರು. ಯಾಕೆ ಈ ರೀತಿ ಮಾಡುತ್ತಿದ್ದೀರಾ ಎಂದು ಕೇಳಿದಾಗ ನನ್ನ ಸುಮ್ಮನಿರು ಎಂದು ಹೆದರಿಸಿದರು. ಜೊತೆಗೆ ಇನ್ನೂ ಹತ್ತು ಸಿಬ್ಬಂದಿಯನ್ನು ಕರೆಸಿ ಗಾಳಿಯಲ್ಲಿ ಗುಂಡಿ ಹಾರಿಸಿದರು ಎಂದು ಹೇಳಿದ್ದಾರೆ.

    ಗುಂಡು ಹಾರಿಸಿದ ತಕ್ಷಣ ನಾವು ಭಾರತದ ಕಡೆ ಓಡಿ ಬಂದೆವು. ಆಗ ಅವರು ನಮ್ಮನ್ನು ಭಾರತದ ಕಡೆಯಿಂದ ನೇಪಾಳದ ಕಡೆಗೆ ಎಳೆದುಕೊಂಡು ಹೋದರು. ಅಲ್ಲಿ ನಮ್ಮ ಮೇಲೆ ಬಂದೂಕುಗಳಿಂದ ಹಲ್ಲೆ ಮಾಡಿ ನೇಪಾಳದ ಸಂಗ್ರಂಪುರಕ್ಕೆ ಕರೆದುಕೊಂಡು ಹೋದರು. ಅಲ್ಲಿ ನಾವು ನಿಮ್ಮನ್ನು ನೇಪಾಳ ಗಡಿಯಿಂದ ಕರೆದುಕೊಂಡು ಬಂದಿದ್ದೇವೆ ಎಂದು ತಪ್ಪೊಪ್ಪಿಕೊಳ್ಳಿ ಎಂದು ಒತ್ತಾಯ ಮಾಡಿದರು. ಆದರೆ ನಾನು, ನೀವು ನನ್ನನ್ನು ಕೊಂದರು ಆ ರೀತಿ ಹೇಳುವುದಿಲ್ಲ ಎಂದು ಹೇಳಿದ್ದೆ ಎಂದು ತಿಳಿಸಿದ್ದಾರೆ.

    ಶುಕ್ರವಾರ ನೇಪಾಳದಲ್ಲಿ ಇದ್ದ ತಮ್ಮ ಸೊಸೆಯನ್ನು ನೋಡಲು ಹೋದ ಸ್ಥಳೀಯರ ಮೇಲೆ ನೇಪಾಳ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದರು. ವರದಿಗಳ ಪ್ರಕಾರ ಓರ್ವ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿತ್ತು. ಈ ಬಗ್ಗೆ ಮಾತನಾಡಿರುವ ಡಿಜಿ ಎಸ್‍ಎಸ್‍ಬಿ ಕುಮಾರ್ ರಾಜೇಶ್ ಚಂದ್ರ ಅವರು, ಘಟನೆಯಲ್ಲಿ ಒಟ್ಟು ಮೂವರು ಗಾಯಗೊಂಡಿದ್ದು, ಅವರನ್ನು ವಿಕೇಶ್ ಯಾದವ್, ಉಮೇಶ್ ರಾಮ್ ಮತ್ತು ಉದಯ್ ಠಾಕೂರ್ ಎಂದು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.

    ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾನೆ, ಭಾರತವು ನೇಪಾಳದೊಂದಿಗೆ ಅತ್ಯಂತ ಬಲವಾದ ಸಂಬಂಧವನ್ನು ಹೊಂದಿದೆ. ಜೊತೆಗೆ ದೃಢವಾದ ಭೌಗೋಳಿಕ, ಸಾಂಸ್ಕೃತಿಕ, ಐತಿಹಾಸಿಕ, ಧಾರ್ಮಿಕ ಸಂಬಂಧಗಳನ್ನು ಹೊಂದಿದೆ. ನೇಪಾಳದೊಂದಿಗೆ ನಮ್ಮ ಸಂಬಂಧ ಯಾವಾಗಲೂ ಪ್ರಬಲವಾಗಿರುತ್ತದೆ ಮತ್ತು ಭವಿಷ್ಯದಲ್ಲಿ ಸದೃಢವಾಗಿರುತ್ತದೆ ಎಂದು ಹೇಳಿದ್ದಾರೆ.

  • ಬಗೆಹರಿಯದ ಭಾರತ, ಚೀನಾ ಗಡಿ ಕಗ್ಗಂಟು- ಸಭೆ ವಿಫಲ

    ಬಗೆಹರಿಯದ ಭಾರತ, ಚೀನಾ ಗಡಿ ಕಗ್ಗಂಟು- ಸಭೆ ವಿಫಲ

    ನವದೆಹಲಿ: ಪೂರ್ವ ಲಡಾಖ್ ಗಡಿ ವಿಚಾರದಲ್ಲಿ ಭುಗಿಲೆದ್ದಿರುವ ವಿವಾದ ಸಂಬಂಧ ಭಾರತ-ಚೀನಾ ಮಿಲಿಟರಿ ಕಮಾಂಡರ್‍ಗಳ ನಡುವೆ ನೈಜ ನಿಯಂತ್ರಣ ರೇಖೆ ಆಚೆ ಚೀನಾದ ಮೋಲ್ಡೋದಲ್ಲಿ ನಡೆದ ಸಭೆ ವಿಫಲಗೊಂಡಿದೆ.

    ಶನಿವಾರ ಬೆಳಗ್ಗೆ 8.30ಕ್ಕೆ ನಿಗದಿಯಾಗಿದ್ದ ಸಭೆ ಕಾರಣಾಂತರಗಳಿಂದ ಬೆಳಗ್ಗೆ 11.30ಕ್ಕೆ ಶುರುವಾಯ್ತು. ಭಾರತದ ಪರ 14 ಕಾಪ್ರ್ಸ್ ಪಡೆಗಳ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಪ್ರತಿನಿಧಿಸಿದ್ದರು. ಪೂರ್ವ ಲಡಾಖ್‍ನ ಪಾಂಗಾಂಗ್ ಸರೋವರ, ಗಾಲ್ವಾನ್ ಕಣಿವೆ ಮತ್ತು ಡೆಮ್‍ಚಾಕ್‍ನಲ್ಲಿ ಉಂಟಾಗಿರುವ ಉದ್ವಿಗ್ನತೆ ಶಮನ ಸಂಬಂಧ ಚರ್ಚೆಗಳು ನಡೆದವು.

    ಚೀನಾಗೆ ಸೇನೆ ವಾಪಸ್ ಪಡೆಯುವಂತೆ ಆಗ್ರಹಿಸಿತು. ಆದರೆ ಇದಕ್ಕೆ ಒಪ್ಪದ ಚೀನಾ ತನ್ನ ನಿಲುವಿನಿಂದ ಹಿಂದೆ ಸರಿಯದೇ, ಬೇಕಿದ್ದರೆ ಯಥಾಸ್ಥಿತಿ ಕಾಯ್ದುಕೊಳ್ಳೋದಾಗಿ ತಿಳಿಸಿತು. ಹೀಗಾಗಿ ಮಾತುಕತೆ ಅಪೂರ್ಣವಾಯಿತು. ಈ ನಡುವೆ ಚೀನಾದ ಪ್ರಮುಖ ಪತ್ರಿಕೆಯೊಂದು ಅಮೆರಿಕ ಜೊತೆ ಭಾರತ ಉತ್ತಮ ಸಂಬಂಧ ಹೊಂದಿರೋದಕ್ಕೆ ಕಿಡಿಕಾರಿದೆ.

    ಚೀನಾ ಎಂದಿಗೂ ನೆರೆಯ ದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುತ್ತದೆ. ಭಾರತವನ್ನು ಶತ್ರುವಿವಂತೆ ನೋಡಲು ಕಾರಣಗಳಿಲ್ಲ. ಆದರೆ ತಮ್ಮ ದೇಶದ ಭೂಭಾಗದ ಒಂದಿಂಚೂ ಕೂಡ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದೆ. ಅಮೆರಿಕವನ್ನು ನಂಬಿ ಭಾರತ ಮೋಸ ಹೋಗಬಾರದು. ಎಚ್ಚರಿಕೆಯಿಂದ ಇರಬೇಕು ಅಂತ ಬಿಟ್ಟಿ ಸಲಹೆ ನೀಡಿದೆ.

    ಭಾರತದ `ಬೆರಳ್’ಗೆ ಚೀನಾ ಪಟ್ಟು!
    ಲಡಾಖ್ ಬಳಿಯ ಪಾಂಗಾಂಗ್ ಸರೋವರದ ಬಳಿ ಗಡಿ ವಿವಾದವಿದ್ದು, ಗಡಿ ಭಾಗ ಅಧಿಕೃತವಾಗಿ ಹಂಚಿಕೆಯಾಗಿಲ್ಲ. ಪಾಂಗಾಂಗ್ ಸರೋವರದ ಉತ್ತರ ದಿಕ್ಕಿನಲ್ಲಿ ಬಂಜರು ಪರ್ವತ ಪ್ರದೇಶಗಳಿವೆ. ಈ ಪರ್ವತ ಪ್ರದೇಶಗಳನ್ನು ಎರಡು ಸೇನೆಗಳು ಫಿಂಗರ್ಸ್ ಎಂದು ಕರೆಯುತ್ತವೆ.

    ಈ ಬೆರಳುಗಳ ಲೆಕ್ಕದ ವಿಚಾರದಲ್ಲಿ 2 ದೇಶಗಳ ನಡುವೆ ವಿವಾದ ಏರ್ಪಟ್ಟಿದೆ. ಫಿಂಗರ್ 8ರ ಮೇಲೆ ನೈಜ ನಿಯಂತ್ರಣ ರೇಖೆ ಹಾದು ಹೋಗುತ್ತದೆ ಎಂಬುದು ಭಾರತದ ವಾದವಾಗಿದೆ. ವಾಸ್ತವದಲ್ಲಿ, ಭೌತಿಕವಾಗಿ ಫಿಂಗರ್ 4ರವರೆಗೂ ಭಾರತ ಹಿಡಿತ ಇದೆ. ಫಿಂಗರ್ 8ರ ಬುಡದಲ್ಲಿ ಚೀನಾ ಸೇನಾ ಪೋಸ್ಟ್ ಹೊಂದಿದೆ. ಪ್ರಸ್ತುತ ಫಿಂಗರ್ 2ರ ವರೆಗೂ ಚೀನಾ ಸೇನೆ ನುಗ್ಗಿ ಬಂದಿದೆ.

    ಫಿಂಗರ್ 4 ಪರ್ವತದ ಮೇಲೆ ನಿಂತರೇ ಪಾಂಗಾಂಗ್‍ನಲ್ಲಿ ಭಾರತದ ಸೇನೆ ಚಟುವಟಿಕೆಯೆಲ್ಲಾ ಸ್ಪಷ್ಟವಾಗಿ ಕಾಣುತ್ತವೆ. ರಕ್ಷಣಾ ದೃಷ್ಟಿಯಿಂದ ಪ್ರಾಮುಖ್ಯತೆ ಹೊಂದಿರುವ ಕಾರಣ ಭಾರತ ತನ್ನ ಫಿಂಗರ್ 4ಗಾಗಿ ಪಟ್ಟು ಹಿಡಿದಿದೆ. ಆದರೆ ಚೀನಾ ಹಿಂದೆ ಸರಿಯಲು ಒಪ್ಪುತ್ತಿಲ್ಲ.

  • ಮಹಾರಾಷ್ಟ್ರ- ಕರ್ನಾಟಕ ಗಡಿಯಲ್ಲಿ ಏಳು ತಿಂಗಳ ಗರ್ಭಿಣಿ ನರಳಾಟ

    ಮಹಾರಾಷ್ಟ್ರ- ಕರ್ನಾಟಕ ಗಡಿಯಲ್ಲಿ ಏಳು ತಿಂಗಳ ಗರ್ಭಿಣಿ ನರಳಾಟ

    – ಉಡುಪಿಯ ಕುಕ್ಕೆಹಳ್ಳಿಯ ನಿವಾಸಿಗೆ ಬೇಕಿದೆ ಸಹಾಯ

    ಉಡುಪಿ: ಮಹಾರಾಷ್ಟ್ರದಿಂದ ಉಡುಪಿಗೆ ಹೊರಟ 7 ತಿಂಗಳ ಗರ್ಭಿಣಿ ಕಳೆದ ಎರಡು ದಿನದಿಂದ ಕರ್ನಾಟಕದ ಗಡಿಯಲ್ಲಿ ನರಳಾಟ ನಡೆಸುತ್ತಿದ್ದಾರೆ. ಉಡುಪಿ ಜಿಲ್ಲಾಧಿಕಾರಿಯ ಅನುಮತಿಗಾಗಿ ಬೆಳಗಾವಿ ಪೊಲೀಸರು ಕಾಯುತ್ತಿದ್ದಾರೆ.

    ಮಹಾರಾಷ್ಟ್ರದಿಂದ ಮೂರು ದಿನದ ಹಿಂದೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 30 ಜನ ಹೊರಟಿದ್ದರು. ಮಹಾರಾಷ್ಟ್ರದ ಪಾಸ್ ಪಡೆದಿದ್ದ ಈ ಗುಂಪು, ಕರ್ನಾಟಕ ಪ್ರವೇಶದ ಸೇವಾಸಿಂಧು ಪಾಸ್ ಪಡೆದಿರಲಿಲ್ಲ. ಹಾಗಾಗಿ ರಾಜ್ಯದೊಳಗೆ ಪ್ರವೇಶ ಸಾಧ್ಯವಾಗುತ್ತಿಲ್ಲ. ನಿಪ್ಪಾಣಿಯಲ್ಲಿ ಕಳೆದ ಎರಡು ದಿನಗಳಿಂದ ಬಸ್ಸಿನಲ್ಲೇ ತಂಗಿರುವ ಏಳು ತಿಂಗಳ ಗರ್ಭಿಣಿ ದೀಪಿಕಾ ಶೆಟ್ಟಿ, ಉಡುಪಿಯ ಕುಕ್ಕೆಹಳ್ಳಿ ನಿವಾಸಿ. ಅವರು ಕೂಡ ಕೊಲ್ಲಾಪುರ ಪೆಟ್ರೋಲ್ ಪಂಪ್ ನಲ್ಲಿ ಎರಡು ದಿನ ಕಳೆದಿದ್ದಾರೆ.

    ಸ್ಥಳೀಯ ಹೋಟೆಲ್ ಉದ್ಯಮಿ ಊಟ-ತಿಂಡಿ ವ್ಯವಸ್ಥೆ ಮಾಡಿದ್ದಾರೆ. ನಂತರ ಕೊಲ್ಲಾಪುರ ಲಾಡ್ಜ್ ನಲ್ಲಿ ರೂಂ ವ್ಯವಸ್ಥೆಯಾಗಿತ್ತು. ಆದರೆ ಕಳೆದ ರಾತ್ರಿ 1.30ಕ್ಕೆ ಕೊಲ್ಲಾಪುರ ಪೊಲೀಸರು ರೂಮ್ ಖಾಲಿ ಮಾಡಿಸಿದ್ದಾರೆ. ಗರ್ಭಿಣಿಯೂ ಬಸ್ಸಲ್ಲಿ ಎರಡು ದಿನ ಕಳೆಯುವಂತಾಗಿದೆ. ಗರ್ಭಿಣಿ ಮತ್ತು ಆಕೆಯ ತಮ್ಮನನ್ನು ಉಡುಪಿಗೆ ಕಳುಹಿಸಿಕೊಡಿ ಎಂದು ಜೊತೆಗಿದ್ದವರು ಗೋಗರೆಯುತ್ತಿದ್ದಾರೆ. ಉಡುಪಿ ಜಿಲ್ಲಾಧಿಕಾರಿಗಳು, ಕರ್ನಾಟಕದ ಕರಾವಳಿಯ ಜನಪ್ರತಿನಿಧಿಗಳು ಇತ್ತ ಗಮನ ಕೊಡಬೇಕಾಗಿದೆ.

  • ಗಡಿಯಲ್ಲಿ ಸುಳ್ಳು ಮಾಹಿತಿ ನೀಡಿ ರಾಜ್ಯ ಪ್ರವೇಶಿಸಿದ್ದ ಕಾರವಾರದ ವ್ಯಕ್ತಿಗೆ ಸೋಂಕು

    ಗಡಿಯಲ್ಲಿ ಸುಳ್ಳು ಮಾಹಿತಿ ನೀಡಿ ರಾಜ್ಯ ಪ್ರವೇಶಿಸಿದ್ದ ಕಾರವಾರದ ವ್ಯಕ್ತಿಗೆ ಸೋಂಕು

    ಕಾರವಾರ: ಸುಳ್ಳು ಮಾಹಿತಿ ನೀಡಿ ಮಹಾರಾಷ್ಟ್ರದಿಂದ ಕಾರವಾರಕ್ಕೆ ಬಂದಿದ್ದ ಮತ್ತೋರ್ವನಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

    ಮಹಾರಾಷ್ಟ್ರದಿಂದ ಗೋವಾಕ್ಕೆ ಬೋಟ್ ನಲ್ಲಿ ತನ್ನ ಸ್ನೇಹಿತನೋರ್ವನ ಜೊತೆ ಬಂದಿದ್ದ 37 ವರ್ಷದ ಸೋಂಕಿತ ವ್ಯಕ್ತಿ, ಗೋವಾದಿಂದ ಹನ್ನೆರಡು ಜನರ ಜೊತೆ ನಡೆದುಕೊಂಡು ಕಾರವಾರದ ಮಾಜಾಳಿ ಗಡಿಗೆ ಮೇ 14ರಂದು ಬಂದಿದ್ದ.

    ಮಹಾರಾಷ್ಟ್ರದಿಂದ ಬಂದಿದ್ದೇನೆ ಎಂದು ಹೇಳಿದರೆ ಕ್ವಾರಂಟೈನ್ ಆಗಬೇಕು ಎನ್ನುವ ಕಾರಣಕ್ಕೆ ಗೋವಾದಿಂದ ಬಂದಿರುವುದಾಗಿ ಅಧಿಕಾರಿಗಳಿಗೆ ಸುಳ್ಳು ಹೇಳಿ ಹೋಮ್ ಕ್ವಾರಂಟೈನ್‍ಗೆ ಒಳಗಾಗಿದ್ದ.

    ಈ ಯುವಕನ ಬಗ್ಗೆ ತಿಳಿದಿದ್ದ ಗ್ರಾಮಸ್ಥರು ಈತ ಮಹಾರಾಷ್ಟ್ರದಿಂದ ಬಂದಿದ್ದಾನೆ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳ ವಿಚಾರಣೆ ವೇಳೆ ಸತ್ಯ ಬಾಯಿಬಿಟ್ಟು ಪರೀಕ್ಷೆಗೆ ಒಳಗಾಗಿದ್ದ. ಕೂಡಲೇ ಈತನನ್ನು ಕಾರವಾರದ ಸರ್ಕಾರಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದ್ದು ಗಂಟಲು ದ್ರವ ಪರೀಕ್ಷೆಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

    ಈತನ ಜೊತೆ ಮಹಾರಾಷ್ಟ್ರದಿಂದ ಬಂದಿದ್ದ ಮತ್ತೋರ್ವ ಸ್ನೇಹಿತ ಹಾಗೂ ಗೋವಾದಿಂದ ಜೊತೆಯಲ್ಲಿ ನಡೆದುಕೊಂಡು ಬಂದವರ ಗಂಟಲು ದ್ರವವನ್ನೂ ಪರೀಕ್ಷೆಗೆ ಕಳುಹಿಸಲಾಗಿದೆ. ಈಗಾಗಲೇ ಸೋಂಕಿತನ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದ್ದು ಈತನ ಟ್ರಾವೆಲ್ ಹಿಸ್ಟರಿ ಕಲೆಹಾಕಲಾಗುತ್ತಿದೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಒಟ್ಟು 9 ಮಂದಿಗೆ ಸೋಂಕು ಬಂದಿದ್ದು, ಸೋಂಕಿತರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ. ಈ ಪೈಕಿ ಒಟ್ಟು 11 ಮಂದಿ ಬಿಡುಗಡೆಯಾಗಿದ್ದು, 40 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ನಿಮಗೆ ಹಣ ಬೇಕಾದ್ರೆ ಗಡಿಯಲ್ಲಿ ಪುಂಡಾಟ ನಿಲ್ಲಿಸಿ: ಅಖ್ತರ್‌ನನ್ನ ಕುಟುಕಿದ ಕಪಿಲ್

    ನಿಮಗೆ ಹಣ ಬೇಕಾದ್ರೆ ಗಡಿಯಲ್ಲಿ ಪುಂಡಾಟ ನಿಲ್ಲಿಸಿ: ಅಖ್ತರ್‌ನನ್ನ ಕುಟುಕಿದ ಕಪಿಲ್

    ನವದೆಹಲಿ: ನಿಮಗೆ ಹಣ ಬೇಕಾದ್ರೆ ಗಡಿಯಲ್ಲಿ ಪುಂಡಾಟ ನಿಲ್ಲಿಸಿ ಎಂದು ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಅವರು ಇಂಡೋ-ಪಾಕ್ ಕ್ರಿಕೆಟ್ ಬಗ್ಗೆ ನಿಲುವನ್ನು ಪುನರುಚ್ಚರಿಸಿದ್ದಾರೆ.

    ಇಂಡೋ-ಪಾಕ್ ನಡುವಿನ ಕ್ರಿಕೆಟ್ ಪಂದ್ಯದ ವಿಚಾರವಾಗಿ ಭಾರೀ ಚರ್ಚೆ ನಡೆದಿದೆ. ಉಭಯ ದೇಶಗಳ ನಡುವಿನ ರಾಜಕೀಯ, ಗಡಿ ಸಂಬಂಧದಿಂದಾಗಿ ದ್ವಿಪಕ್ಷೀಯ ಕ್ರಿಕೆಟ್ ಆಡುವ ಯಾವುದೇ ಅವಕಾಶವಿಲ್ಲ. ಹಾಗಿದ್ದರೂ ಅಭಿಮಾನಿಗಳು ಐಸಿಸಿ ನಡೆಸುವ ಏಕದಿನ, ಟಿ20 ಎರಡೂ ಮಾದರಿಯ ವಿಶ್ವಕಪ್ ಹಾಗೂ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ-ಪಾಕ್ ನಡುವ ಪಂದ್ಯ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ.

    ಕೋವಿಡ್-19 ಸಾಂಕ್ರಾಮಿಕವು ಆರ್ಥಿಕತೆಯ ಮೇಲೆ ಭಾರೀ ಹೊಡೆತ ಕೊಟ್ಟಿದೆ. ಹೀಗಾಗಿ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರು ಹಣವನ್ನು ಸಂಗ್ರಹಿಸಲು ಇಂಡೋ-ಪಾಕ್ ಸರಣಿಯನ್ನು ಪ್ರಸ್ತಾಪಿಸಿದ್ದರು. ಆದರೆ ಕಪಿಲ್ ದೇವ್ ಅವರು ನಮಗೆ ಹಣದ ಅವಶ್ಯಕತೆ ಇಲ್ಲ. ನಾವು ಏಕೆ ಕ್ರಿಕೆಟಿಗರ ಜೀವನವನ್ನು ಅಪಾಯಕ್ಕೆ ದೂಡಬೇಕು ಎಂದು ಈ ಹಿಂದೆ ತಿರುಗೇಟು ನೀಡಿದ್ದರು.

    ಇದೇ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ ಕಪಿಲ್ ದೇವ್, ”ನೀವು ಭಾವನಾತ್ಮಕವಾಗಿರಬಹುದು. ಈ ನಿಟ್ಟಿನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸರಣಿ ನಡೆಯಬೇಕೆಂದು ಹೇಳಬಹುದು. ಆದರೆ ಪಂದ್ಯವನ್ನು ಆಡುವುದು ಈ ಸಮಯದಲ್ಲಿ ಆದ್ಯತೆಯಾಗಿಲ್ಲ. ನಿಮಗೆ ಹಣದ ಅಗತ್ಯವಿದ್ದರೆ ನೀವು ಗಡಿಯಲ್ಲಿ ನಡೆಸುತ್ತಿರುವ ಚಟುವಟಿಕೆಗಳನ್ನು ನಿಲ್ಲಿಸಬೇಕು. ಈ ಮೂಲಕ ಅಲ್ಲಿ ಖರ್ಚು ಮಾಡುವ ಹಣವನ್ನು ಆಸ್ಪತ್ರೆ ಮತ್ತು ಶಾಲೆಗಳ ನಿರ್ಮಾಣಕ್ಕೆ ಬಳಸಬಹುದು” ಎಂದು ಕಪಿಲ್ ದೇವ್ ಅವರು ಶೋಯೆಬ್ ಅಖ್ತರ್ ಅವರನ್ನು ಕುಟುಕಿದ್ದಾರೆ.

    ”ನಾನು ದೊಡ್ಡ ಚಿತ್ರಣವನ್ನು ನೋಡುತ್ತಿದ್ದೇನೆ. ನಾವು ಮಾತನಾಡಬಹುದಾದ ಏಕೈಕ ವಿಷಯವೆಂದರೆ ಕ್ರಿಕೆಟ್ ಎಂದು ನೀವು ಭಾವಿಸುತ್ತೀರಾ? ಅದರಾಚೆಗೂ ಮಾತನಾಡುವುದಿದೆ. ಕೊರೊನಾ ಭೀತಿಯಿಂದಾಗಿ ಶಾಲೆ ಮತ್ತು ಕಾಲೇಜುಗಳಿಗೆ ಹೋಗಲು ಸಾಧ್ಯವಾಗದ ಮಕ್ಕಳ ಬಗ್ಗೆ ನಾನು ಹೆಚ್ಚು ಚಿಂತಿಸುತ್ತಿದ್ದೇನೆ. ಏಕೆಂದರೆ ಅವರು ನಮ್ಮ ಯುವ ಪೀಳಿಗೆ. ಆದ್ದರಿಂದ ಶಾಲೆಗಳು ಮೊದಲು ತೆರೆಯಬೇಕೆಂದು ನಾನು ಬಯಸುತ್ತೇನೆ. ಕ್ರಿಕೆಟ್, ಫುಟ್ಬಾಲ್ ತಡವಾಗಿ ಆರಂಭವಾದರೂ ಪರವಾಗಿಲ್ಲ” ಎಂದು ಹೇಳಿದರು.

    ಜಾಗತಿಕವಾಗಿ ಕೊರೊನಾ ವೈರಸ್ ಪರಿಸ್ಥಿತಿಯ ಬಗ್ಗೆ ಅಖ್ತರ್ ನಿರಂತರವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ರೋಗಿಗಳಿಗೆ 10,000 ವೆಂಟಿಲೇಟರ್ ತಯಾರಿಸಲು ಪಾಕಿಸ್ತಾನಕ್ಕೆ ಸಹಾಯ ಮಾಡುವಂತೆ ಅವರು ಈ ಹಿಂದೆ ಭಾರತವನ್ನು ಕೇಳಿದ್ದರು.

  • ಆಂಧ್ರದಿಂದ ಕರುನಾಡಿಗೆ ನುಸುಳುತ್ತಿದ್ದಾರೆ ಜನ – ಗಡಿ ಗ್ರಾಮಗಳಲ್ಲಿ ಆತಂಕ

    ಆಂಧ್ರದಿಂದ ಕರುನಾಡಿಗೆ ನುಸುಳುತ್ತಿದ್ದಾರೆ ಜನ – ಗಡಿ ಗ್ರಾಮಗಳಲ್ಲಿ ಆತಂಕ

    ತುಮಕೂರು: ಲಾಕ್‍ಡೌನ್ ನಿಂದ ಇಡೀ ದೇಶವೇ ಲಾಕ್ ಆಗಿದ್ದರೂ ವಿವಿಧ ಗಡಿಗಳಿಂದ ಕರ್ನಾಟಕಕ್ಕೆ ಬರುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.

    ಅದರಲ್ಲೂ ಆಂಧ್ರ ಪ್ರದೇಶದ ಗಡಿಯಿಂದ ತುಮಕೂರು ಜಿಲ್ಲೆಯ ಪಾವಗಡದ ಮೂಲಕ ಪೊಲೀಸರ ಕಣ್ಣು ತಪ್ಪಿಸಿ ನುಸುಳಿಕೊಂಡು ಜನರು ಕರ್ನಾಟಕಕ್ಕೆ ಬರುತ್ತಿದ್ದಾರೆ. ಆಂಧ್ರಪ್ರದೇಶದಲ್ಲಿ ಸೋಂಕು ಹೆಚ್ಚಾದ ಕಾರಣ ಅಲ್ಲಿಂದ ಕರ್ನಾಟಕಕ್ಕೆ ಜನರು ಬರುತ್ತಿದ್ದಾರೆ.

    ವೈ.ಎನ್.ಹೊಸಕೋಟೆ, ಭೀಮನಹಳ್ಳಿ, ದಳವಾಯಿಹಳ್ಳಿ, ಗೌಡತಿಮ್ಮನಹಳ್ಳಿ, ಜಾಲೋಡು, ಮಾರಮ್ಮನಹಳ್ಳಿಯ ಮೂಲಕ ಆಂಧ್ರದಿಂದ ಜನರು ಆಗಮಿಸುತ್ತಿದ್ದಾರೆ. ಪರಿಣಾಮ ಪಾವಗಡ ತಾಲೂಕಿನ ಜನರಲ್ಲಿ ಆತಂಕ ಮನೆಮಾಡಿದೆ. ಪೊಲೀಸ್ ಇಲಾಖೆ ಟ್ರಂಚ್ ಹೊಡೆಸಿ, ಬೇಲಿ ಹಾಕಿದ್ದರೂ ನುಸುಳುಕೋರರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ.

  • ಮಂಗಳವಾರದವರೆಗೂ ಕರ್ನಾಟಕ-ಕೇರಳ ಗಡಿ ಬಂದ್ ತೆರವಿಲ್ಲ: ಸುಪ್ರೀಂ

    ಮಂಗಳವಾರದವರೆಗೂ ಕರ್ನಾಟಕ-ಕೇರಳ ಗಡಿ ಬಂದ್ ತೆರವಿಲ್ಲ: ಸುಪ್ರೀಂ

    – ಮಾತುಕತೆ ಮೂಲಕವೇ ಸಮಸ್ಯೆ ಇತ್ಯರ್ಥವಾಗಲಿ

    ನವದೆಹಲಿ: ಕರ್ನಾಟಕ- ಕೇರಳ ಗಡಿ ಬಂದ್ ವಿವಾದವನ್ನು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಜೊತೆಗೆ ಎರಡು ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಮಾತುಕತೆ ನಡೆಸಿ ಬಗೆಹರಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಎರಡು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ.

    ಲಾಕ್‍ಡೌನ್ ಹಿನ್ನೆಲೆ ಹಾಗೂ ಕೊರೊನಾ ಸೋಂಕು ಹರಡಂತೆ ತಡೆಯುವ ನಿಟ್ಟಿನಲ್ಲಿ ಮುಚ್ಚಲ್ಪಟ್ಟಿರುವ ಕೇರಳ -ಕರ್ನಾಟಕ ಗಡಿಯನ್ನು ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಸರ್ಕಾರವು ಸಲ್ಲಿಸಿದ್ದ ಅರ್ಜಿಯನ್ನು ಇಂದು ಸುಪ್ರೀಂಕೋರ್ಟ್ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿತು. ಇದನ್ನೂ ಓದಿ: ಮಂಗ್ಳೂರು-ಕಾಸರಗೋಡು ಗಡಿ ದಿಗ್ಬಂಧನ ತೆರವುಗೊಳಿಸಿ: ಕೇಂದ್ರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ

    ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವಕೇಟ್ ಜನರಲ್ ಉದಯ್ ಹೊಳ್ಳ, ಕೊರೊನಾ ವೈರಸ್ ಭೀತಿ ಹಿನ್ನೆಲೆ ಕರ್ನಾಟಕವು ಕೇರಳ ಗಡಿ ಬಂದ್ ಮಾಡಿದೆ. ಜೊತೆಗೆ ಕೇಂದ್ರ ಸರ್ಕಾರದ ನಿರ್ದೇಶನ ಮೇರೆಗೆ ಗಡಿ ಬಂದ್ ಮಾಡಲಾಗಿದೆ. ಗಡಿ ತೆರವುಗೊಳಿಸುವುದರಿಂದ ವಾಹನಗಳ ಸಂಚಾರ ಆರಂಭವಾಗುವ ಸಾಧ್ಯತೆ ಇದೆ. ಈ ವೇಳೆ ಸೋಂಕಿತರ ಸಂಚರಿಸಲು ಆರಂಭಿಸಿದರೆ ವೈರಸ್ ಹರಡುವ ಭೀತಿ ಇದೆ. ಹೀಗಾಗಿ ಗಡಿ ತೆರವು ಸಾಧ್ಯವಿಲ್ಲ ಎಂದರು.

    ಆದರೆ ಗಡಿ ಬಂದ್ ನಿಂದ ಕೇರಳಕ್ಕೆ ಸಂಕಷ್ಟ ಎದುರಾಗಲಿದೆ. ತುರ್ತು ಆರೋಗ್ಯ ಸೇವೆಗಳಿಗೆ ತೊಂದರೆ ಆಗಲಿದೆ. ವೈದ್ಯಕೀಯ ಸಾಮಗ್ರಿಗಳನ್ನು ಹೊತ್ತು ಬರುವ ಟ್ರಕ್‍ಗಳ ಸಂಚಾರಕ್ಕೆ ಗಡಿಯಲ್ಲಿ ತೊಂದರೆಯಾಗಲಿದ್ದು, ಆಂಬುಲೆನ್ಸ್ ಮತ್ತು ಮೂಲ ಅವಶ್ಯಕತೆ ವಸ್ತುಗಳನ್ನು ಸಾಗಿರುವ ವಾಹನಗಳ ಸಂಚಾರಕ್ಕೆ ತೊಂದರೆ ಆಗಲಿದೆ ಎಂದು ಕೇರಳ ವಾದ ಮಂಡಿಸಿತು.

    ಎರಡು ಬದಿಯ ವಾದ ಆಲಿಸಿದ ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರ, ಕರ್ನಾಟಕ ಮತ್ತು ಕೇರಳ ರಾಜ್ಯ ಸರ್ಕಾರಗಳಿಗೆ ಮತ್ತಷ್ಟು ಮಾಹಿತಿ ಕೋರಿ ನೋಟಿಸ್ ನೀಡಿ ಎಪ್ರೀಲ್ ಏಳಕ್ಕೆ ವಿಚಾರಣೆ ಮುಂದೂಡಿಕೆ ಮಾಡಿತು. ಈ ವೇಳೆ ಏಪ್ರಿಲ್ 7ರವರೆಗೂ ಗಡಿ ತೆರವು ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು.

    ಆರೋಗ್ಯ ಸಂಬಂಧಿ ತುರ್ತು ಪರಿಸ್ಥಿತಿಗಳಿದ್ದರೇ ಎರಡು ಸರ್ಕಾರದ ಕಾರ್ಯದರ್ಶಿಗಳ ಮಾತುಕತೆ ಮೇಲೆ ಕ್ರಮ ತೆಗೆದುಕೊಳ್ಳಬಹುದು ಮತ್ತು ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಜೊತೆಗೆ ಮಾತುಕತೆ ಮೂಲಕವೂ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

  • ಈ ಬಾರಿಯೂ ಗಡಿಯಲ್ಲಿಯೇ ಯೋಧರೊಂದಿಗೆ ‘ನಮೋ’ ದೀಪಾವಳಿ

    ಈ ಬಾರಿಯೂ ಗಡಿಯಲ್ಲಿಯೇ ಯೋಧರೊಂದಿಗೆ ‘ನಮೋ’ ದೀಪಾವಳಿ

    ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿ ಪಟ್ಟ ಅಲಂಕರಿಸಿದ ವರ್ಷದಿಂದಲೂ ಗಡಿಯಲ್ಲಿ ಯೋಧರ ಜೊತೆಯೇ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದಾರೆ. ಈ ಬಾರಿಯೂ ಗಡಿಯಲ್ಲಿ ಹೆಮ್ಮೆಯ ಯೋಧರೊಂದಿಗೆ ಬೆಳಕಿನ ಹಬ್ಬವನ್ನು ಆಚರಿಸಲಿದ್ದಾರೆ ಎಂದು ವರದಿಯಾಗಿದೆ.

    ದೀಪಾವಳಿ ಹಬ್ಬವನ್ನು ಖುಷಿಯಿಂದ ಆಚರಿಸಿದ ಬಳಿಕ ಯೋಧರೊಂದಿಗೆ ಗಡಿಯಲ್ಲಿನ ಪರಿಸ್ಥಿತಿ ಬಗ್ಗೆ ಪ್ರಧಾನಿ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಈ ವರ್ಷ ನಮೋ ದೀಪಾವಳಿ ಆಚರಿಸಲು ಜಮ್ಮು ಕಾಶ್ಮೀರದ ರಾಜೌರಿಯಲ್ಲಿ ಆಚರಿಸಲಿದ್ದಾರೆ. ಹೀಗಾಗಿ ಅವರು ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ  ದೀಪಾವಳಿ ಆಚರಿಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

    ದೇಶ ಹಾಗೂ ದೇಶ ವಾಸಿಗಳು ಸುಖವಾಗಿರಲಿ ಎಂದು ನಿಸ್ವಾರ್ಥ ಸೇವೆ ಸಲ್ಲಿಸುವ ಯೋಧರನ್ನು ಹುರಿದುಂಬಿಸಿ, ಅವರಿಗೆ ಪ್ರೋತ್ಸಾಹಿಸಲು ಮೋದಿ ಅವರು ಗಡಿಯಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸುತ್ತಾರೆ. 2014ರಲ್ಲಿ ಮೊದಲ ಬಾರಿಗೆ ಸಿಯಾಚಿನ್ ಪ್ರದೇಶದಲ್ಲಿ ದೀಪಾವಳಿ ಆಚರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

    2015ರಲ್ಲಿ ಭಾರತ-ಪಾಕ್ ಯುದ್ಧದ 50ನೇ ವರ್ಷಾಚರಣೆ ಅಂಗವಾಗಿ ಪಂಜಾಬ್ ಗಡಿಯಲ್ಲಿ ಯೋಧರೊಂದಿಗೆ ಮೋದಿ ಸಮಯ ಕಳೆದಿದ್ದರು. ಹಾಗೆಯೇ 2016ರಲ್ಲಿ ಹಿಮಾಚಲಪ್ರದೇಶದಲ್ಲಿ ಮತ್ತು 2017ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಮೋದಿ ದೀಪಾವಳಿ ಆಚರಿಸಿ ಖುಷಿ ಪಟ್ಟಿದ್ದರು.

    ಹಾಗೆಯೇ ಕಳೆದ ವರ್ಷ ಉತ್ತರಾಖಂಡದ ಭಾರತ-ಚೀನಾ ಗಡಿಯಲ್ಲಿ ಮೋದಿ ಯೋಧರು ಹಾಗೂ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿ ಜೊತೆ ಬೆಳಕಿನ ಹಬ್ಬ ಆಚರಿಸಿ ಸಂಭ್ರಮಿಸಿದ್ದರು.

    ಆದ್ದರಿಂದ ಈ ಬಾರಿ ದೀಪಾವಳಿಯನ್ನು ಕೂಡ ತಾವು ರೂಡಿಸಿಕೊಂಡು ಬಂದಂತೆ ಯೋಧರೊಂದಿಗೆ ಗಡಿಯಲ್ಲಿ ಆಚರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಈ ವರ್ಷ ಮೋದಿ ಅವರು ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ರಾಜೌರಿಯಲ್ಲಿ ದೀಪಾವಳಿ ಆಚರಿಸಲು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.

    ಕಣಿವೆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ಆಗಸ್ಟ್ 5ರಂದು ರದ್ದುಗೊಳಿಸಿದ ಬಳಿಕ ರಾಜ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಕಳೆದೆರಡು ತಿಂಗಳುಗಳಿಂದ ಜಮ್ಮು-ಕಾಶ್ಮೀರಕ್ಕೆ ಹೆಚ್ಚಿನ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ. ಅಲ್ಲದೆ ಇತ್ತೀಚೆಗೆ ಕಣಿವೆ ರಾಜ್ಯದಲ್ಲಿ ಉಗ್ರರ ಅಟ್ಟಹಾಸ ಕೂಡ ಹೆಚ್ಚಾಗುತ್ತಿರುವ ಬಗ್ಗೆ ವರದಿಯಾಗಿದೆ.

  • ನಮ್ಮನ್ನು ನಂಬಿ ದೇಶ ಭಯವಿಲ್ಲದೆ ಮಲಗುತ್ತೆ, ತಾಪಮಾನಕ್ಕೆಲ್ಲ ನಾವು ಹೆದರಲ್ಲ: ಬಿಎಸ್‍ಎಫ್ ಯೋಧ

    ನಮ್ಮನ್ನು ನಂಬಿ ದೇಶ ಭಯವಿಲ್ಲದೆ ಮಲಗುತ್ತೆ, ತಾಪಮಾನಕ್ಕೆಲ್ಲ ನಾವು ಹೆದರಲ್ಲ: ಬಿಎಸ್‍ಎಫ್ ಯೋಧ

    ನವದೆಹಲಿ: ಗಡಿಯಲ್ಲಿ ನಾವಿದ್ದೇವೆ ಎಂದು ಜನ ಆರಾಮಾಗಿ ನೆಮ್ಮದಿಯಿಂದ ನಿದ್ರೆ ಮಾಡುತ್ತಾರೆ. ದೇಶದ ಕಾಯುವ ಯೋಧರು ತಾಪಮಾನಕ್ಕೆ ಹೆದರಲ್ಲ ಎಂಬ ಭಾರತೀಯ ಸೈನಿಕರೊಬ್ಬರ ಹೇಳಿಕೆಗೆ ಇಡೀ ದೇಶವೇ ಸಲಾಂ ಎನ್ನುತ್ತಿದೆ.

    ಬೇಸಿಗೆ ಧಗೆಗೆ ಉತ್ತರ ಭಾರತ ತತ್ತರಿಸಿ ಹೋಗಿದ್ದು, ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲೂ ಕೂಡ ಬಿಸಿಲ ಝಳ ಹೆಚ್ಚಿದೆ. ಹೀಗಾಗಿ ಅಲ್ಲಿನ ಜನರಿಗೆ ಮಾತ್ರವಲ್ಲದೇ ಅಲ್ಲಿ ಗಡಿ ಕಾಯುವ ಸೈನಿಕರೂ ಕೂಡ ಬಿಸಿಲಿನ ಧಗೆಗೆ ಹೈರಾಣಾಗಿದ್ದಾರೆ. ಆದರೂ ಪಟ್ಟು ಬಿಡದೆ ದೇಶಕ್ಕಾಗಿ ವೀರಯೋಧರು ಗಡಿ ಕಾಯುತ್ತಿದ್ದು, ಬಿಸಿಲಿನಲ್ಲಿ ಕೆಲಸ ಮಾಡುವುದು ಕಷ್ಟವಾಗಲ್ಲವಾ? ಎಂದು ಕೇಳಿದರೆ, ನಾವು ಯೋಧರು ದೇಶವನ್ನು ಕಾಯುವವರು. ನಾವು ಈ ತಾಪಮಾನಕ್ಕೆಲ್ಲಾ ಹೆದರಲ್ಲ ಎಂದು ಹೇಳಿ ಎಲ್ಲರ ಮನ ಗೆದ್ದಿದ್ದಾರೆ.

    ನಾವು ಗಡಿಯಲ್ಲಿ ಕಾಯುತ್ತಿದ್ದೇವೆ ಎಂಬ ನಂಬಿಕೆಯಿಂದ ದೇಶದ ಪ್ರಜೆಗಳು ನೆಮ್ಮದಿಯಿಂದ ನಿದ್ರೆ ಮಾಡುತ್ತಿದ್ದಾರೆ. ಆದ್ದರಿಂದ ತಾಪಮಾನ ಹೇಗೆ ಇರಲಿ ನಾವು ಅದನ್ನು ಎದುರಿಸುತ್ತೇವೆ. ಸದಾ ಎಚ್ಚರಿಕೆಯಿಂದ ಕೆಲಸ ಮಾಡುತ್ತೇವೆ ಎಂದು ಸುದ್ದಿಸಂಸ್ಥೆಯೊಂದಕ್ಕೆ ಸೈನಿಕರೊಬ್ಬರು ನೀಡಿರುವ ಹೇಳಿಕೆಗೆ ಎಲ್ಲರು ಸೆಲ್ಯೂಟ್ ಹೊಡೆಯುತ್ತಿದ್ದಾರೆ.

    ರಾಜಸ್ಥಾನ ಹಾಗೂ ಗುಜರಾತ್‍ನಲ್ಲಿ ಬಿಸಿಲಿನ ಬೇಗೆಗೆ ಜನರು ತತ್ತರಿಸಿ ಹೋಗಿದ್ದಾರೆ. ಈ ರಣ ಬಿಸಿಲಿನಲ್ಲೂ ನಮ್ಮ ಭಾರತೀಯ ಯೋಧರು ಮಾತ್ರ ತಾಪಮಾನಕ್ಕೆ ಹೆದರದೆ, ಬಿಸಿಲನ್ನು ಎದುರಿಸಿಕೊಂಡು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ. ಸದ್ಯ ರಾಜಸ್ಥಾನದಲ್ಲಿ 46 ಡಿಗ್ರಿ ಸೆಲ್ಸಿಯಸ್‍ಗಿಂತ ಹೆಚ್ಚು ತಾಪಮಾನ ದಾಖಲಾಗಿದೆ. ಅದರಲ್ಲೂ ಇಲ್ಲಿನ ಚುರು ಪ್ರದೇಶದಲ್ಲಿ ಕೆಲವು ದಿನಗಳಿಂದ 50 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.