Tag: ಗಡಿ

  • ಲಡಾಖನ್ನು ಕಾನೂನು ಬಾಹಿರವಾಗಿ ಕೇಂದ್ರಾಡಳಿತ ಪ್ರದೇಶವನ್ನಾಗಿಸಲಾಗಿದೆ- ಮತ್ತೆ ಚೀನಾ ಕ್ಯಾತೆ

    ಲಡಾಖನ್ನು ಕಾನೂನು ಬಾಹಿರವಾಗಿ ಕೇಂದ್ರಾಡಳಿತ ಪ್ರದೇಶವನ್ನಾಗಿಸಲಾಗಿದೆ- ಮತ್ತೆ ಚೀನಾ ಕ್ಯಾತೆ

    ನವದೆಹಲಿ: ಗಡಿ ಪ್ರದೇಶದಲ್ಲಿ 44 ಹೊಸ ಸೇತುವೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಚಾರಕ್ಕೆ ಮುಕ್ತಗೊಳಿಸಿದ ಬೆನ್ನಲ್ಲೇ ಇದೀಗ ಚೀನಾ ಲಡಾಖ್ ವಿಚಾರದಲ್ಲಿ ಮೂಗು ತೂರಿಸುತ್ತಿದೆ.

    ಭಾರತ ಅಕ್ರಮವಾಗಿ ಮಾಡಿರುವ ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನು ಪರಿಗಣಿಸುವುದಿಲ್ಲ. ಆದರೆ ಆ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸುವುದನ್ನು ಚೀನಾ ವಿರೋಧಿಸುತ್ತದೆ ಎಂದು ಚೀನಾ ಹೇಳಿದೆ. ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಈ ಕುರಿತು ಹೇಳಿಕೆ ನೀಡಿದ್ದು, ಗಡಿಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಎರಡೂ ಕಡೆಯ ಉದ್ವಿಗ್ನತೆಗೆ ಮೂಲ ಕಾರಣವಾಗಿದೆ. ಉದ್ವಿಗ್ನತೆ ಹೆಚ್ಚಿಸುವ ರೀತಿ ಯಾವುದೇ ದೇಶ ಕ್ರಮ ಕೈಗೊಳ್ಳಬಾರದು ಎಂದು ಹೇಳಿದ್ದಾರೆ.

    ಲಡಾಖ್‍ನಲ್ಲಿ 8 ಹಾಗೂ ಅರುಣಾಚಲ ಪ್ರದೇಶದಲ್ಲಿ 8 ಸೇತುವೆ ಸೇರಿದಂತೆ ಭಾರತದಲ್ಲಿ ಉದ್ಘಾಟಿಸಲಾಗಿರುವ ಹಲವು ಸೇತುವೆಗಳ ಕುರಿತು ಪ್ರತಿಕ್ರಿಯಿಸುವಂತೆ ಅವರು ಕೇಳಿದ್ದಾರೆ. ಕಾನೂನು ಬಾಹಿರವಾಗಿ ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನಾಗಿಸಿರುವುದನ್ನು ಚೀನಾ ಪರಿಗಣಿಸುವುದಿಲ್ಲ. ಆದರೆ ಗಡಿಯುದ್ದಕ್ಕೂ ಸೇನೆ ಜಮಾವಣೆಗೊಳಿಸುವುದು ಹಾಗೂ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದನ್ನು ವಿರೋಧಿಸುತ್ತೇವೆ. ಪರಿಸ್ಥಿತಿ ಉದ್ವಿಗ್ನಗೊಳಿಸುವಂತೆ ಗಡಿಯಲ್ಲಿ ಕ್ರಮ ಕೈಗೊಳ್ಳಬಾರದು. ಈ ಮೂಲಕ ಗಡಿಯಲ್ಲಿ ಪರಿಸ್ಥಿತಿ ತಿಳಿಗೊಳಿಸುವ ಎರಡೂ ಕಡೆಯ ಪ್ರಯತ್ನಗಳನ್ನು ದುರ್ಬಲಗೊಳಿಸಬಾರದು ಎಂದು ಹೇಳಿದ್ದಾರೆ.

    ಗಡಿಯಲ್ಲಿ ಮೂಲಭುತ ಸೌಕರ್ಯ ನಿರ್ಮಿಸುವುದು ಹಾಗೂ ಗಡಿಯುದ್ದಕ್ಕೂ ಸೇನೆಯನ್ನು ಹಾಕುವುದರಿಂದ ಎರಡೂ ಕಡೆ ಒತ್ತಡ ಹೆಚ್ಚುತ್ತದೆ. ಒಮ್ಮತದ ಶ್ರದ್ಧೆಯನ್ನು ಕಾರ್ಯಗತಗೊಳಿಸಿ, ಪರಿಸ್ಥಿತಿ ಉಲ್ಬಣಿಸಬಹುದಾದ ಕ್ರಮಗಳಿಂದ ದೂರವಿರುವ ಮೂಲಕ ಗಡಿಯಲ್ಲಿ ಶಾಂತಿ ಕಾಪಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಝಾವೋ ಹೇಳಿದ್ದಾರೆ.

    ಹೊಸ ಸೇತುವೆಗಳ ನಿರ್ಮಾಣದಿಂದ ಸೇನೆ ಹಾಗೂ ಶಸ್ತ್ರಾಸ್ತ್ರಗಳನ್ನು ವೇಗವಾಗಿ ಗಡಿ ಬಳಿಗೆ ಕೊಂಡೊಯ್ಯಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಗಾಂಜಾ ಗಮ್ಮತ್ತಿಗೆ ಬ್ರೇಕ್ ಹಾಕಲು ಕರ್ನಾಟಕ ಆಂಧ್ರ ಗಡಿಯಲ್ಲಿ ಹದ್ದಿನ ಕಣ್ಣು

    ಗಾಂಜಾ ಗಮ್ಮತ್ತಿಗೆ ಬ್ರೇಕ್ ಹಾಕಲು ಕರ್ನಾಟಕ ಆಂಧ್ರ ಗಡಿಯಲ್ಲಿ ಹದ್ದಿನ ಕಣ್ಣು

    – ಚಿಕ್ಕಬಳ್ಳಾಪುರ ಪೊಲೀಸರಿಂದ ಗಡಿಯಲ್ಲಿ ಅಲರ್ಟ್

    ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಗಾಂಜಾ ಮತ್ತಿನ ಗಮ್ಮತ್ತು ಜೋರಾಗಿ ಸದ್ದು ಮಾಡುತ್ತಿರುವುದರಿಂದ ಜಿಲ್ಲೆಯ ಆಂಧ್ರ ಪ್ರದೇಶದ ಗಡಿಭಾಗಗಳಲ್ಲಿ ಪೊಲೀಸ್ ಕಣ್ಗಾವಲು ಹಾಕಿದ್ದು, ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಾಹನಗಳನ್ನು ತಪಾಸಣೆ ನಡೆಸುವ ಕಾರ್ಯ ನಡೆಸುತ್ತಿದ್ದೇವೆ ಎಂದು ಚಿಕ್ಕಬಳ್ಳಾಪುರ ಎಸ್‍ಪಿ ಮಿಥುನ್‍ಕುಮಾರ್ ಹೇಳಿದ್ದಾರೆ.

    ಇತ್ತೀಚೆಗೆ ಚಿಂತಾಮಣಿ ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮನೆ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಲಾಗಿದೆ. ಘಟನೆಯಿಂದ ಎಚ್ಚೆತ್ತಿರುವ ಜಿಲ್ಲೆಯ ಪೊಲೀಸರು ಅಕ್ರಮ ಗಾಂಜಾ ಸಾಗಾಣಿಕೆ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳ ಮೇಲೆ ಸೂಕ್ಷ್ಮ ನಿಗಾ ವಹಿಸಿದ್ದು ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಸಂಪರ್ಕಿತ ರಸ್ತೆಗಳಲ್ಲಿ ಚೆಕ್ ಪೋಸ್ಟ್ ಗಳನ್ನ ಅಳವಡಿಸಿ ತಪಾಸಣೆ ನಡೆಸುತ್ತಿದ್ದಾರೆ. ಅಲ್ಲದೇ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆಂಧ್ರಪ್ರದೇಶದ ಅನಂತಪುರ, ಚಿತ್ತೂರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಸಂಪರ್ಕ ಹೊಂದಿದ್ದು, ಗಾಂಜಾ ಸೇರಿದಂತೆ ಅಕ್ರಮ ಚಟುವಟಿಕೆಗಳ ಮೇಲೆ ಜಿಲ್ಲಾ ಪೊಲೀಸ್ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ ಎಂದರು. ಇದನ್ನೂ ಓದಿ: ನಂದಿಗಿರಿಧಾಮ ಲಾಕ್‍ಡೌನ್ ಮುಕ್ತಾಯ – ಸೆ.7ರಿಂದ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ

    ಸದ್ಯ ಗಾಂಜಾ, ಶ್ರೀಗಂಧ, ರಕ್ತ ಚಂದನ ಸೇರಿದಂತೆ ಮತ್ತಿತರ ಅಕ್ರಮ ಚಟುವಟಿಕೆಗಳ ಆರೋಪಿಗಳ ಚಲನವಲನಗಳನ್ನು ಗಮನಿಸುತ್ತಿದ್ದು, ಈಗಾಗಲೇ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಗಾಂಜಾ ಪ್ರಕರಣಗಳನ್ನ ಪತ್ತೆ ಹಚ್ಚುವಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ವೇಳೆ ಕರ್ತವ್ಯ ಲೋಪ ಕಂಡು ಬಂದರೆ ಸಂಬಂಧಿಸಿದವರ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.

  • ಚೀನಾ ಪಾಕಿಸ್ತಾನದ ಜೊತೆ ಸೇರಿ ಬೇರೆಯದೇ ಪ್ಲಾನ್ ಮಾಡಬಹುದು: ರಾಹುಲ್ ಗಾಂಧಿ

    ಚೀನಾ ಪಾಕಿಸ್ತಾನದ ಜೊತೆ ಸೇರಿ ಬೇರೆಯದೇ ಪ್ಲಾನ್ ಮಾಡಬಹುದು: ರಾಹುಲ್ ಗಾಂಧಿ

    – ನರೇಂದ್ರ ಮೋದಿ ನಕಲಿ ಸ್ಟ್ರಾಂಗ್ ಮ್ಯಾನ್
    – ಚೀನಾ ದೊಡ್ಡ ಮಟ್ಟದಲ್ಲಿ ಯೋಚಿಸುತ್ತಿದೆ

    ನವದೆಹಲಿ: ಕಾಂಗ್ರೆಸ್ ನಾಯಕ ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೊರೊನಾ ವೈರಸ್ ನಿಯಂತ್ರಣ, ಚೀನಾ ಗಲಾಟೆ ಹಾಗೂ ಜಿಡಿಪಿ ಕುರಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದು, ಪ್ರಧಾನಿಗಳ ನಕಲಿ ಪ್ರಬಲ ನಾಯಕ ಎಂಬ ಇಮೇಜ್ ಭಾರತದ ಬಹುದೊಡ್ಡ ದೌರ್ಬಲ್ಯವಾಗಿದೆ ಎಂದು ಕಿಡಿಕಾರಿದ್ದಾರೆ.

    ವಿಡಿಯೋ ಟ್ವೀಟ್ ಮಾಡಿ, ಭಾರತ-ಚೀನಾ ಗಡಿ ವಿವಾದದ ಕುರಿತು ಮಾತನಾಡಿದ್ದಾರೆ. ಚೀನಾ ಜಗತ್ತನ್ನು ರೂಪಿಸಲು ಪ್ರಯತ್ನಿಸುತ್ತಿದೆ. ಚೀನಾ ಯುದ್ಧ ತಂತ್ರದ ಬಗ್ಗೆ ಯೋಜನೆ ರೂಪಿಸುತ್ತಿದೆ ಎಂಬುದರ ಕುರಿತು ಅವರ ಮಾತನಾಡಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರಲು ನಕಲಿ ಸ್ಟ್ರಾಂಗ್ ಮ್ಯಾನ್ ಎಂಬ ಚಿತ್ರಣವನ್ನು ರೂಪಿಸಿದಿದ್ದಾರೆ. ಇದೇ ಅವರ ದೊಡ್ಡ ಶಕ್ತಿಯಾಗಿದೆ, ಆಟದ ತಂತ್ರವಾಗಿದೆ ಎಂದು ಆರೋಪಿಸಿದ್ದಾರೆ.

    ಲಡಾಖ್‍ನಲ್ಲಿ ಚೀನಾ ಪಡೆ ಭಾರತದ ಭೂ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಿದೆ. ಆದರೆ ಇದು ಕೇವಲ ಗಡಿ ವಿಚಾರ ಮಾತ್ರವಲ್ಲ ಚೀನಾ ಜಗತ್ತನ್ನು ರೂಪಿಸಲು ಯತ್ನಿಸುತ್ತಿದೆ. ಇಂದು ಚೀನಾದವರು ನಮ್ಮ ಗಡಿ ಪ್ರದೇಶದಲ್ಲಿ ಮೊಕ್ಕಾಂ ಹೂಡಿರುವ ಕುರಿತು ಚಿಂತೆ ಕಾಡುತ್ತಿದೆ. ಕಾರ್ಯತಂತ್ರ ರೂಪಿಸದೆ ಚೀನಾ ಏನನ್ನೂ ಮಾಡುವುದಿಲ್ಲ. ವಿಶ್ವದ ಬಗ್ಗೆ ಈಗಾಗಲೇ ಅವರು ನಕ್ಷೆ ರೂಪಿಸಿದ್ದು, ಜಗತ್ತನ್ನು ರೂಪಿಸಲು ಹೊರಟಿದ್ದಾರೆ. ಹೀಗಾಗಿ ನೀವು ಚೀನಾದ ಬಗ್ಗೆ ಯೋಚಿಸುವ ಮೋದಲು ಅವರ ಯೋಚನಾ ಮಟ್ಟವನ್ನು ಅರಿಯಬೇಕಿದೆ ಎಂದು ಚೀನಾದ ಕಾರ್ಯತಂತ್ರ ಹಾಗೂ ಯುದ್ಧ ತಂತ್ರದ ಕುರಿತು ಮಾತನಾಡಿದ್ದಾರೆ.

    ಚೀನಾ ಗಲ್ವಾನ್ ವ್ಯಾಲಿ ಸೇರಿದಂತೆ ಲಡಾಖ್‍ನ ವಿವಿಧ ಪ್ರದೇಶಗಳಲ್ಲಿ ಎಲ್‍ಎಸಿ ಉದ್ದಕ್ಕೂ ತನ್ನ ಸೇನೆಯನ್ನು ಶಸ್ತ್ರಸಜ್ಜಿತವಾಗಿರಿಸಿದೆ. ಅಲ್ಲದೆ ನಾವು ಹೈವೇ ನಿರ್ಮಾಣ ಮಾಡಿದ್ದಕ್ಕೆ ಚೀನಾ ವಿಚಲಿತವಾಗಿದೆ. ಹೀಗಾಗಿ ನಮ್ಮ ಹೆದ್ದಾರಿಯ ಮೇಲೆ ಹಿಡಿತ ಸಾಧಿಸಬಹುದು. ಚೀನಾ ಏನಾದರೂ ದೊಡ್ಡ ಮಟ್ಟದಲ್ಲಿ ಯೋಚಿಸಿದರೆ. ಪಾಕಿಸ್ತಾನದೊಂದಿಗೆ ಸೇರಿಕೊಂಡು ಕಾಶ್ಮೀರದಲ್ಲಿ ಕಿತಾಪತಿ ನಡೆಸಿರೆ, ಇದು ಕೇವಲ ಗಡಿ ವಿಚಾರವಲ್ಲ. ಭಾರತದ ಪ್ರಧಾನಿ ಮೇಲೆ ಒತ್ತಡ ಹೇರುವ ತಂತ್ರವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಚೀನಾ ದಾಳಿ ನಡೆಸುವ ನೈಜ ತಂತ್ರ ಇದೇ ಆಗಿದ್ದು, ನರೇಂದ್ರ ಮೋದಿ ನಾವು ಹೇಳಿದ ರೀತಿ ಮಾಡದಿದ್ದರೆ, ಬಲಶಾಲಿ ನಾಯಕ ಮೋದಿಯವರ ಐಡಿಯಾಗಳನ್ನು ನಾವು ನಾಶಪಡಿಸುತ್ತೇವೆ ಎಂದು ಚೀನಾ ಎಚ್ಚರಿಸಿದೆ ಎಂದು ರಾಹುಲ್ ಗಾಂಧಿ ವಿಡಿಯೋದಲ್ಲಿ ಹೇಳಿದ್ದಾರೆ.

  • 14 ದಿನಗಳ ಕಾಲ ಉಡುಪಿ ಗಡಿಗಳು ಸೀಲ್‍ಡೌನ್- ಜಿಲ್ಲಾಧಿಕಾರಿ ಆದೇಶ

    14 ದಿನಗಳ ಕಾಲ ಉಡುಪಿ ಗಡಿಗಳು ಸೀಲ್‍ಡೌನ್- ಜಿಲ್ಲಾಧಿಕಾರಿ ಆದೇಶ

    – ನಾಳೆ ರಾತ್ರಿ 8ರ ವರೆಗೆ ಮಾತ್ರ ಅಂತರ್ ಜಿಲ್ಲಾ ಓಡಾಟಕ್ಕೆ ಅವಕಾಶ

    ಉಡುಪಿ: ಇಂದು ರಾತ್ರಿಯಿಂದ ಜಿಲ್ಲೆಯ ಎಲ್ಲ ಗಡಿಗಳು ಸೀಲ್‍ಡೌನ್ ಆಗಲಿದ್ದು, ಜೆಲ್ಲೆಯೊಳಗೆ ಜನಜೀವನ ಯಥಾಸ್ಥಿತಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯದ ಎಲ್ಲ ಜಿಲ್ಲೆಗಳು ಪರಿಸ್ಥಿತಿಗನುಣವಾಗಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಕೆಲ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‍ಡೌನ್ ಘೋಷಿಸಿದರೆ, ಇನ್ನೂ ಕೆಲ ಗಡಿಗಳನ್ನು ಸೀಲ್ ಮಾಡಲಾಗುತ್ತಿದೆ. ಇನ್ನೂ ಹಲವು ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳಿರುವ ತಾಲೂಕುಗಳನ್ನಷ್ಟೇ ಲಾಕ್ ಮಾಡಲಾಗುತ್ತಿದೆ. ಹೀಗಾಗಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಉಡುಪಿಗೆ ಸಂಪರ್ಕ ಕಲ್ಪಿಸುವ ಎಲ್ಲ ಗಡಿಗಳನ್ನು ಸೀಲ್ ಮಾಡಲು ಆದೇಶಿಸಿದ್ದಾರೆ.

    ಮಂಗಳವಾರ ರಾತ್ರಿಯಿಂದ ಉಡುಪಿ ಗಡಿ ಸೀಲ್‍ಡೌನ್ ಆಗಲಿದ್ದು, ಜಿಲ್ಲೆಯೊಳಗೆ ಕೆಲ ನಿರ್ಬಂಧ ವಿಧಿಸಿಲಾಗಿದೆ. ಆದರೆ ಜನ ಜೀವನ ಯಥಾಸ್ಥಿತಿ ಇರಲಿದೆ. 14 ದಿನಗಳ ಕಾಲ ಉಡುಪಿಯಲ್ಲಿ ಯಾವುದೇ ಬಸ್ ಸಂಚಾರ ಇರುವುದಿಲ್ಲ. ಸಂತೆ ಮಾರುಕಟ್ಟೆಗಳನ್ನು ನಡೆಸುವಂತಿಲ್ಲ, ಸಭೆ ಸಮಾರಂಭಕ್ಕೆ ಜಿಲ್ಲೆಯಲ್ಲಿ ಅವಕಾಶ ಇಲ್ಲ, ಮದುವೆಯಲ್ಲಿ 50 ಜನ ಸೇರಿಸಬಹುದು, ಸಾರ್ವಜನಿಕ ಹಬ್ಬ ಆಚರಣೆಗೆ ಅವಕಾಶ ಇಲ್ಲ, ದೇವಸ್ಥಾನ, ಚರ್ಚ್, ಮಸೀದಿಯೊಳಗೆ 20 ಜನಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಅಲ್ಲದೆ ವಿಶೇಷ ಪೂಜೆಗೆ ಅವಕಾಶ ಇಲ್ಲ. ಸ್ವಯಂ ನಿರ್ಬಂಧಗಳಿಗೆ ಜಿಲ್ಲಾಡಳಿತ ಹೊಣೆಯಲ್ಲ. ಭಾನುವಾರ ಸಂಪೂರ್ಣ ಲಾಕ್‍ಡೌನ್ ಇರಲಿದೆ. ಹೋಟೆಲ್‍ಗಳಲ್ಲಿ ಪಾರ್ಸೆಲ್‍ಗೆ ಅವಕಾಶ ಇದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

    ಗಡಿಗಳನ್ನು ಸೀಲ್‍ಡೌನ್ ಮಾಡುವುದರಿಂದಾಗಿ ತುರ್ತು ವೈದ್ಯಕೀಯ ವಾಹನಗಳಿಗೆ ಮಾತ್ರ ವಿನಾಯಿತಿ ಇದೆ. ಉಳಿದೆಲ್ಲ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಜಿಲ್ಲೆಯ ಎಲ್ಲ ಶಾಸಕರು, ಅಧಿಕಾರಗಳು, ಎಸ್‍ಪಿ ಸಭೆಯಲ್ಲಿ ಭಾಗಿಯಾಗಿದ್ದರು. ಅಂತರ್ ಜಿಲ್ಲೆಗೆ ಹೋಗುವವರಿಗೆ, ಬರುವವರಿಗೆ ನಾಳೆ ರಾತ್ರಿ ಎಂಟು ಗಂಟೆಯವರೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

  • ಚೀನಾ ಪುಂಡಾಟಕ್ಕೆ ಭಾರತ ತಕ್ಕ ಉತ್ತರ ನೀಡಿದೆ- ಅಮೆರಿಕ ವಿದೇಶಾಂಗ ಕಾರ್ಯದರ್ಶಿ

    ಚೀನಾ ಪುಂಡಾಟಕ್ಕೆ ಭಾರತ ತಕ್ಕ ಉತ್ತರ ನೀಡಿದೆ- ಅಮೆರಿಕ ವಿದೇಶಾಂಗ ಕಾರ್ಯದರ್ಶಿ

    ನವದೆಹಲಿ: ಚೀನಾದ ಆಕ್ರಮಣಕಾರಿ ಕ್ರಮಗಳಿಗೆ ಭಾರತ ತಕ್ಕ ಉತ್ತರ ನೀಡಿದ್ದು, ಇಂತಹ ಗೊಡ್ಡು ಬೆದರಿಕೆಗಳಿಗೆ ಜಗತ್ತು ಆಸ್ಪದ ಕೊಡಬಾರದು ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೋ ಭಾರತದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಚೀನಾ ಗಡಿ ವಿವಾದಗಳನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದು ವಿಶ್ವ ಇದಕ್ಕೆ ಆಸ್ಪದ ಕೊಡಬಾರದು. ಅಲ್ಲದೆ ಚೀನಾದ ಆಕ್ರಮಣಕಾರಿ ಕ್ರಮಗಳಿಗೆ ಭಾರತ ತಕ್ಕ ಉತ್ತರ ನೀಡಿದೆ ಎಂದು ಶ್ಲಾಘಿಸಿದ್ದಾರೆ.

    ಚೀನಾದ ಆಕ್ರಮಣಕಾರಿ ಕ್ರಮಗಳ ಕುರಿತು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಬಳಿ ಹಲವು ಬಾರಿ ಚರ್ಚಿಸಿದ್ದೇನೆ. ಚೀನಿಯರು ನಂಬಲಾಗದಷ್ಟು ಆಕ್ರಮಣಕಾರಿ ಕ್ರಮಗಳನ್ನು ಕೈಗೊಂಡರು. ಭಾರತ ಅದಕ್ಕೆ ತಕ್ಕ ಉತ್ತರ ನೀಡಿದೆ. ಚೀನಾದ ಪ್ರಧಾನ ಕಾರ್ಯದರ್ಶಿ ಕ್ಸಿ ಜಿನ್‍ಪಿಂಗ್ ನಡೆ ಹಾಗೂ ಗಡಿ ಪ್ರದೇಶದಲ್ಲಿನ ಅವರ ವರ್ತನೆ ಪ್ರಪಂಚದಾದ್ಯಂತ ವಿಸ್ತರಿಸಿದೆ. ಚೀನೀಯ ಕಮ್ಯೂನಿಸ್ಟ್ ಪಾರ್ಟಿಯ ಆಕ್ರಮಣಶೀಲತೆಯನ್ನು ನಾವು ಪ್ರತ್ಯೇಕವಾಗಿ ನೋಡುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಇದನ್ನು ನೀವು ದೊಡ್ಡ ಸನ್ನಿವೇಶದಲ್ಲಿ ಚರ್ಚಿಸಬೇಕು ಎಂದು ಭಾರತಕ್ಕೆ ಸಲಹೆ ನೀಡಿದ್ದಾರೆ.

    ಜಗತ್ತು ಇಂತಹ ಬೆದರಿಕೆಗಳನ್ನು ಹೆದರಬಾರದು. ಅಲ್ಲದೆ ಇಂತಹ ಕೃತ್ಯವನ್ನು ಮುಂದುವರಿಸಲು ಬಿಡಬಾರದು. ಚೀನಾದ ಕಮ್ಯುನಿಸ್ಟ್ ಪಕ್ಷ ಈ ಕೃತ್ಯಗಳಿಗೆ ತಕ್ಕ ಪ್ರತಿಕ್ರಿಯೆ ನೀಡಲು ಜಗತ್ತು ಒಟ್ಟಾಗಬೇಕು. ಇದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ತಿಳಿಸಿದ್ದಾರೆ.

    ಲಡಾಕ್‍ನ ಗಲ್ವಾನ್ ವ್ಯಾಲಿಯಲ್ಲಿ ನಡೆದ ಭಾರತೀಯ ಸೇನೆ ಹಾಗೂ ಚೀನಾ ಮಧ್ಯೆ ನಡೆದ ಗುಂಡಿನ ಚಕಮಕಿ ವೇಳೆ ಭಾರತೀಯ ಸೇನೆಯ 20 ಯೋಧರು ಹುತಾತ್ಮರಾಗಿದ್ದಾರೆ. ಇದಾದ ಬಳಿಕ ಎರಡೂ ದೇಶಗಳು ತಮ್ಮ ಗಡಿ ಪ್ರದೇಶದಲ್ಲಿ ಅಪಾರ ಸಂಖ್ಯೆಯಲ್ಲಿ ಸೇನೆಯನ್ನು ಜಮಾವಣೆ ಮಾಡಿದ್ದವು. ಎಲ್‍ಎಸಿ ಸುತ್ತ ಅಪಾರ ಪ್ರಮಾಣದ ಸೇನೆಯನ್ನು ಜಮಾವಣೆ ಮಾಡಲಾಗಿತ್ತು. ಹೀಗಾಗಿ ಯುದ್ಧದ ಭೀತಿ ಎದುರಾಗಿತ್ತು.

    ಇದಾದ ಬಳಿಕ ಭಾನುವಾರವಷ್ಟೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ಉನ್ನತ ಮಟ್ಟದ ಸುದೀರ್ಘ ಮಾತುಕತೆ ನಡೆದಿತ್ತು. ಅಲ್ಲದೆ ದೋವಲ್ ಹಾಗೂ ವಾಂಗ್ ಭಾರತ ಹಾಗೂ ಚೀನಾದ ವಿಶೇಷ ಪ್ರತಿನಿಧಿಗಳಾಗಿ ಸಭೆ ನಡೆಸಿದ್ದರು. ಇದಾದ ಬಳಿಕ ಇದೀಗ ಚೀನಾ ಸೇನೆ ಗಡಿಯಿಂದ ಹಿಂದೆ ಸರಿಯುತ್ತಿದೆ.

  • ಪಾಯಿಂಟ್ ನಂ 15ನಿಂದಲೂ ಕಾಲ್ಕಿತ್ತ ಚೀನಾ

    ಪಾಯಿಂಟ್ ನಂ 15ನಿಂದಲೂ ಕಾಲ್ಕಿತ್ತ ಚೀನಾ

    ನವದೆಹಲಿ: ಪೂರ್ವ ಲಡಾಕ್‍ನ ಗಾಲ್ವಾನ್ ನದಿ ಕಣಿವೆ ಗಡಿಯಲ್ಲಿ ಸೃಷ್ಟಿಯಾಗಿದ್ದ ಉದ್ವಿಗ್ನ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಗಡಿ ಪ್ರದೇಶದಲ್ಲಿರುವ ಪಾಯಿಂಟ್ 15 ರಿಂದ ಇಂದು ಚೀನಾ ಸೇನೆ ಎರಡು ಕಿ.ಮೀ ಹಿಂದೆ ಸರಿದಿದೆ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ.

    ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಜೊತೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವೇಲ್ ಮಾತುಕತೆ ಬಳಿಕ ಉಭಯ ಸೇನೆಗಳು ಜಾಗದಿಂದ ಹಿಂದಕ್ಕೆ ಸರಿಯಲು ಒಪ್ಪಿಗೆ ಸೂಚಿಸಿದ್ದವು. ಸೋಮವಾರ ಪಾಯಿಂಟ್ 14, ಬಿಸಿ ನೀರಿನ ಬುಗ್ಗೆ ಹಾಗೂ ಗೋರ್ಗಾ ಪ್ರದೇಶದಿಂದ ಚೀನಾ 1.5 ಕಿಮೀ ಹಿಂದೆ ಸರಿದಿತ್ತು. ಇಂದು ಪಾಯಿಂಟ್ ನಂ 15ರಿಂದಲೂ ಚೀನಾ ಖಾಲಿ ಮಾಡಿದೆ.

    ಚೀನಾ ಸೈನ್ಯದ ಚಲನವಲನಗಳ ಬಗ್ಗೆ ಭಾರತೀಯ ಸೇನೆ ಎಚ್ಚರಿಕೆ ವಹಿಸಿದೆ. ಚೀನಾ ಸೇನೆ ಪ್ರಮಾಣಿಕವಾಗಿ ಹಿಂದಕ್ಕೆ ಹೋಗುತ್ತಿದೆಯೇ ಎಂಬುದನ್ನು ಭಾರತ ಪರಿಶೀಲನೆ ನಡೆಸಲಾಗುತ್ತಿದೆ.

    ಈ ಮಧ್ಯೆ ಐಎಎಫ್ ತನ್ನ ಮುಂಚೂಣಿಯ ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ಹಗಲು ಮತ್ತು ರಾತ್ರಿ ಕಾರ್ಯಾಚರಣೆ ಮಾಡುವ ಮೂಲಕ ಚೀನಾದ ಮೇಲೆ ಒತ್ತಡ ಹೇರುತ್ತಲೇ ಇದೆ ಎಂದು ಮೂಲಗಳು ತಿಳಿಸಿವೆ.

  • ಭಾರತಕ್ಕೆ ಭಯೋತ್ಪಾದಕರ ಭೀತಿ- ಗಡಿಯಲ್ಲಿ ಭದ್ರತೆ ಹೆಚ್ಚಿಸಿದ ಸೇನೆ

    ಭಾರತಕ್ಕೆ ಭಯೋತ್ಪಾದಕರ ಭೀತಿ- ಗಡಿಯಲ್ಲಿ ಭದ್ರತೆ ಹೆಚ್ಚಿಸಿದ ಸೇನೆ

    ನವದೆಹಲಿ: ಭಾರತ-ಚೀನಾ ಗಡಿ ಸಂಘರ್ಷ ಬೆನ್ನಲೆ ದೇಶಕ್ಕೆ ಭಯೋತ್ಪಾದಕರ ಭೀತಿ ಆರಂಭವಾಗಿದೆ. ದೇಶದಲ್ಲಿ ದುಷ್ಕೃತ್ಯ ಎಸೆಗಲು ಸಂಚು ನಡೆದಿದ್ದು, ಇದಕ್ಕಾಗಿ ಉಗ್ರರರು ಗಡಿ ನುಸುಳಲು ಪ್ರಯತ್ನಿಸುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

    ಪಾಕ್ ಆಕ್ರಮಿತ ಗಡಿ ಅಥವಾ ಬಿಹಾರ ಮಾರ್ಗವಾಗಿ ಭಾರತ-ನೇಪಾಳ ಗಡಿ ಮೂಲಕ ಉಗ್ರರು ಭಾರತಕ್ಕೆ ನುಸುಳಬಹುದು ಎಂದು ಜೂನ್ 22 ರಂದು ಭದ್ರತಾ ಪಡೆಗಳಿಗೆ ಎಚ್ಚರಿಕೆ ನೀಡಲಾಗಿತ್ತು. ಇದೀಗ ಗಡಿಯಲ್ಲಿ ಭದ್ರತೆ ಹೆಚ್ಚು ಮಾಡಲಾಗಿದೆ.

    ಗುಪ್ತಚರ ಮೂಲಗಳ ಪ್ರಕಾರ, ಪಾಕಿಸ್ತಾನದ ಐಎಸ್‍ಐ ತಾಲಿಬಾನ್ ಮತ್ತು ಜೈಶ್ ಭಯೋತ್ಪಾದಕರ ಸಹಾಯದಿಂದ ಉಗ್ರರು ಭಾರತದಲ್ಲಿ ದೊಡ್ಡ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದೆ. ಅವರ ಗುರಿ ದೆಹಲಿ ಮತ್ತು ಪ್ರಮುಖ ರಾಜಕೀಯ ವ್ಯಕ್ತಿಗಳು ಆಗಿರಬಹುದು ಎಂದು ಊಹಿಸಿದೆ.

    ಈ ಹಿನ್ನೆಲೆಯಲ್ಲಿ ಕಾಶ್ಮೀರ ಮತ್ತು ಭಾರತ ನೇಪಾಳ ಗಡಿಯಲ್ಲಿ ಹೆಚ್ಚು ಭದ್ರತೆಯನ್ನು ನಿಯೋಜನೆ ಮಾಡಿದ್ದು, ಹದ್ದಿನ ಕಣ್ಣಿಡಲಾಗಿದೆ. ಚೀನಾ-ಭಾರತ ನಡುವಿನ ಸಂಘರ್ಷ ಹೊತ್ತಲ್ಲಿ ಗುಪ್ತಚರ ಇಲಾಖೆ ಮಾಹಿತಿ ಆತಂಕ ಮೂಡಿಸಿದೆ.

  • ನೇಪಾಳದ 10 ಪ್ರದೇಶಗಳನ್ನು ಅತಿಕ್ರಮಿಸಿಕೊಂಡಿದೆ ಚೀನಾ- ನೇಪಾಳ ಸರ್ಕಾರದ ವರದಿ

    ನೇಪಾಳದ 10 ಪ್ರದೇಶಗಳನ್ನು ಅತಿಕ್ರಮಿಸಿಕೊಂಡಿದೆ ಚೀನಾ- ನೇಪಾಳ ಸರ್ಕಾರದ ವರದಿ

    – ನದಿಗಳ ಹರಿವು ಬದಲಿಸಿ, 33 ಹೆಕ್ಟೇರ್ ಅತಿಕ್ರಮಣ
    – ಈಗಾಗಲೇ ರಸ್ತೆ ನಿರ್ಮಿಸುತ್ತಿದೆ ಪಾಪಿ ಚೀನಾ

    ಕಠ್ಮಂಡು: ಚೀನಾ ತನ್ನ ನೆರೆಯ ಎಲ್ಲ ದೇಶಗಳ ಗಡಿಯನ್ನು ಅತಿಕ್ರಮಣ ಮಾಡಿಕೊಳ್ಳುತ್ತಿರುವುದು ತಿಳಿದ ವಿಚಾರ. ಇತ್ತೀಚೆಗೆ ಭಾರತದೊಂದಿಗೆ ತಂಟೆ ತೆಗೆದಿದೆ. ಇದೀಗ ಇನ್ನೊಂದು ಭಯಾನಕ ಅಂಶವನ್ನು ನೇಪಾಳ ಸರ್ಕಾರ ಬಹಿರಂಗಪಡಿಸಿದೆ. ನೇಪಾಳದ ಬರೋಬ್ಬರಿ 10 ಪ್ರದೇಶಗಳನ್ನು ಚೀನಾ ಈಗಾಗಲೇ ಆಕ್ರಮಿಸಿಕೊಂಡಿದೆ ಎಂದು ನೇಪಾಳ ಸರ್ಕಾರ ತನ್ನ ವರದಿಯಲ್ಲಿ ತಿಳಿಸಿದೆ.

    ಲಡಾಖ್‍ನ ಗಲ್ವಾನ್ ವ್ಯಾಲಿಯಲ್ಲಿ ಭಾರತದ-ಚೀನಾದ ಗಡಿ ತಂಟೆ ನಡೆದ ಕೆಲವೇ ದಿನಗಳ ನಂತರ ನೇಪಾಳ ಈ ಕುರಿತು ಸರ್ವೇ ವರದಿಯನ್ನು ಬಿಡುಗಡೆ ಮಾಡಿದ್ದು, ಈ ವೇಳೆ 10 ಪ್ರದೇಶಗಳನ್ನು ವಶಪಡಿಸಿಕೊಂಡಿರುವ ಕುರಿತು ಬಹಿರಂಗವಾಗಿದೆ. ನೇಪಾಳದ ಜಾಗವನ್ನು ಅತಿಕ್ರಮಣ ಮಾಡಿಕೊಳ್ಳಲೆಂದೇ ಟಿಬೆಟ್‍ನಲ್ಲಿ ಚೀನಾ ರಸ್ತೆ ನಿರ್ಮಾಣ ಮಾಡುತ್ತಿದ್ದು, ನಂತರ ಮುಂದಿನ ದಿನಗಳಲ್ಲಿ ತನ್ನ ಗಡಿಯಲ್ಲಿ ಚೆಕ್ ಪೋಸ್ಟ್ ನಿರ್ಮಿಸಲು ಉದ್ದೇಶಿಸಿದೆ.

    ನೇಪಾಳದ ಕೃಷಿ ಸಚಿವಾಲಯದ ಸರ್ವೇ ಇಲಾಖೆ ಒಟ್ಟು 11 ಸ್ಥಳಗಳನ್ನು ಪಟ್ಟಿ ಮಾಡಿದ್ದು, ಇದರಲ್ಲಿ 10 ಪ್ರದೇಶಗಳನ್ನು ಚೀನಾ ವಶಪಡಿಸಿಕೊಂಡಿದೆ. ಸುಮಾರು 33 ಹೆಕ್ಟೇರ್‍ನಷ್ಟು ಪ್ರದೇಶವನ್ನು ಚೀನಾ ಅತಿಕ್ರಮಣ ಮಾಡಿಕೊಂಡಿದೆ. ಇನ್ನೂ ಅಚ್ಚರಿಯ ಸಂಗತಿ ಎಂದರೆ ತನ್ನ ಪ್ರದೇಶವನ್ನು ಹೆಚ್ಚಳ ಮಾಡಿಕೊಳ್ಳಲು ನದಿಗಳ ಹರಿವಿನ ದಿಕ್ಕನ್ನೂ ಬದಲಿಸಿದೆಯಂತೆ.

    ಹುಮ್ಲಾ ಜಿಲ್ಲೆಯಲ್ಲಿ ಬಗ್ದಾರೆ ಖೊಲಾ ಹಾಗೂ ಕರ್ನಾಲಿ ನದಿಗಳನ್ನು ತಿರುಗಿಸಿ ಚೀನಾ ನಿರ್ಮಾಣ ಕಾರ್ಯ ನಡೆಸುತ್ತಿದ್ದು, ಒಟ್ಟು 10 ಹೆಕ್ಟೇರ್ ಪ್ರದೇಶವನ್ನು ಅತಿಕ್ರಮಿಸಿಕೊಂಡಿದೆ. ಅಲ್ಲದೆ ಟಿಬೆಟ್‍ನಲ್ಲಿ ನಡೆಯುತ್ತಿದ್ದ ನಿರ್ಮಾಣ ಕಾರ್ಯವನ್ನು ರಸುವಾ ಜಿಲ್ಲೆಯ ಸಿಂಜೆನ್, ಭುರ್ಜುಕ್ ಜಾಗೂ ಜಂಬು ಖೊಲಾ ಪ್ರದೇಶಗಳ ಮಾಡಿದ್ದು, ಇದರಿಂದಾಗಿ ಆರು ಹೆಕ್ಟೇರ್ ಪ್ರದೇಶವನ್ನು ಚೀನಾ ವಶಪಡಿಸಿಕೊಂಡಿದೆ.

    ಚೀನಾ ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ತನ್ನ ರಸ್ತೆ ಸಂಪರ್ಕವನ್ನು ಭಾರೀ ಪ್ರಮಾಣದಲ್ಲಿ ವಿಸ್ತರಿಸುತ್ತಿದ್ದು, ಈ ಮೂಲಕ ನೇಪಾಳದ ಕಡೆ ಹರಿಯುತ್ತಿದ್ದ ಕೆಲ ನದಿಗಳ ದಿಕ್ಕನ್ನು ಬದಲಿಸುತ್ತಿದೆ. ನದಿಗಳು ಕ್ರಮೇಣವಾಗಿ ನೇಪಾಳಿ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಿದ್ದು, ಹೀಗೆ ಮುಂದುವರಿದರೆ ನದಿಗಳು ನೇಪಾಳದ ಭೂಮಿಯ ಗರಿಷ್ಟ ಭಾಗ ಚೀನಾದ ಟೆಬೆಟ್ ವಶವಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ನದಿಗಳ ಹರಿವನ್ನು ಹೀಗೆ ಬದಲಿಸಿದರೆ ನೇಪಾಳದ ನೂರಾರು ಹೆಕ್ಟೇರ್ ಭೂಮಿ ಸ್ವಾಭಾವಿಕವಾಗಿ ಟೆಬೆಟ್‍ಗೆ ಒಳಪಡುತ್ತದೆ. ಕಾಲಾನಂತರದಲ್ಲಿ ಚೀನಾ ತನ್ನ ಸಶಸ್ತ್ರ ಪೊಲೀಸ್ ಪಡೆಗಳ ಮೂಲಕ ಬಾರ್ಡರ್ ಅಬ್ಸರ್ವೇಶನ್ ಪೋಸ್ಟ್ ನಿರ್ಮಿಸುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

    ಲಡಾಖ್‍ನ ಕಲ್ವಾನ್ ವ್ಯಾಲಿಯಲ್ಲಿ ನಡೆದ ಭಾರತ-ಚೀನಾ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ನೇಪಾಳ ಈ ವರದಿಯನ್ನು ಬಿಡುಗಡೆ ಮಾಡಿರುವುದು ಅಚ್ಚರಿ ಮೂಡಿಸಿದೆ. ಚೀನಾದ ಪುಂಡಾಟಿಕೆ ಇಲ್ಲಿಗೇ ನಿಲ್ಲುವುದಲ್ಲ ವಿಯಟ್ನಾಂ, ಮಲೇಶಿಯಾ, ತೈವಾನ್ ದೇಶಗಳ ಗಡಿ ವಿಚಾರದಲ್ಲಿ ಸಹ ವಿವಾದ ಹೊಂದಿದೆ.

  • ನೇಪಾಳದ ಗಡಿಯನ್ನು ವಶಪಡಿಸಿಕೊಂಡಿದೆ ಚೀನಾ- ಬುದ್ಧಿ ಕಲಿಯದ ನೇಪಾಳ

    ನೇಪಾಳದ ಗಡಿಯನ್ನು ವಶಪಡಿಸಿಕೊಂಡಿದೆ ಚೀನಾ- ಬುದ್ಧಿ ಕಲಿಯದ ನೇಪಾಳ

    – ಭಾರತದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ನೇಪಾಳ

    ನವದೆಹಲಿ: ಚೀನಾ ಕೇವಲ ಭಾರತ ಮಾತ್ರವಲ್ಲ ಇತರೆ ನೆರೆ ದೇಶಗಳ ಗಡಿಗಳನ್ನು ಅತಿಕ್ರಮಿಸಿಕೊಳ್ಳುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ನೇಪಾಳದ ಗೂರ್ಖಾದ ಪ್ರದೇಶವನ್ನು ಚೀನಾ ಅತಿಕ್ರಮಿಸಿಕೊಂಡಿರುವ ಕುರಿತು ವರದಿಯಾಗಿದೆ. ಆದರೆ ಇದೆಲ್ಲವನ್ನು ಬಿಟ್ಟು ನೇಪಾಳ ಭಾರತದ ಗಡಿ ಕುರಿತು ಇದೀಗ ಹೆಚ್ಚು ಚರ್ಚೆ ನಡೆಸುತ್ತಿದೆ. ಅಲ್ಲದೆ ನೇಪಾಳದ ಜನರಲ್ಲಿ ಭಾರತ ವಿರೋಧಿ ಅಲೆಯನ್ನು ಎಬ್ಬಿಸುತ್ತಿದೆ.

    ಮ್ಯಾಪ್‍ನಲ್ಲಿ ರುಯಿ ಗೌನ್ ಪ್ರದೇಶ ನೇಪಾಳಕ್ಕೆ ಒಳಪಟ್ಟಿದೆ. ಆದರೆ ಗೂರ್ಖಾದ ರುಯಿ ಭೋಟ್ ಅಧೀನದಲ್ಲಿದ್ದ ರುಯಿ ಗೌನ್ ಪ್ರದೇಶವನ್ನು ಚೀನಾ ಸ್ವಾಯತ್ತ ಪ್ರದೇಶಕ್ಕೆ ಒಳಪಡಿಸಿದೆ. 60ಕ್ಕೂ ಹೆಚ್ಚು ವರ್ಷಗಳಿಂದ ಇದನ್ನು ಟಿಬೆಟ್ ಅಧೀನಕ್ಕೆ ಒಳಪಡಿಸಲಾಗಿದೆ. ಸರ್ಕಾರಗಳ ದಿವ್ಯ ನಿರ್ಲಕ್ಷ್ಯ ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳ ಅಸಡ್ಡೆಯಿಂದಾಗಿ 72 ಮನೆಗಳಿರುವ ಹಳ್ಳಿಗೆ ಚೀನಾ ಒಳ ನುಸುಳಲು ಅವಕಾಶ ಮಾಡಿಕೊಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

    ಈ ಪ್ರದೇಶವೀಗ ಸಂಪೂರ್ಣವಾಗಿ ಚೀನಾ ಹಿಡಿತದಲ್ಲಿದ್ದು, ಗಡಿ ಕಂಬಗಳನ್ನು ಸಹ ಸ್ಥಳಾಂತರಿಸುವ ಮೂಲಕ ಚೀನಾ ಒತ್ತುವರಿ ಮಾಡಿಕೊಂಡಿದೆ. ಆದರೆ ಗೂರ್ಖಾ ಭೂ ಕಂದಾಯ ಅಧಿಕಾರಿಗಳ ಮಾಹಿತಿ ಪ್ರಕಾರ, ರುಯಿ ಗ್ರಾಮದ ನಿವಾಸಿಗಳಿಂದ ಕಂದಾಯ ಸಂಗ್ರಹಿಸಿದ ಕುರಿತು ಈಗಲೂ ದಾಖಲೆಗಳಿವೆ ಎಂದು ತಿಳಿಸಿದ್ದಾರೆ.

    ಇತಿಹಾಸ ತಜ್ಞ ರಮೇಶ್ ಧುಂಗಲ್ ಸಹ ಈ ಕುರಿತು ಸ್ಪಷ್ಟಪಡಿಸಿದ್ದು, ರುಯಿ ಹಾಗೂ ಟೈಘಾ ಗ್ರಾಮಗಳು ಗೂರ್ಖಾ ಜಿಲ್ಲೆಯ ಉತ್ತರ ಭಾಗಗಳು. ರುಯಿ ಗೌನ್ ಸಹ ನೇಪಾಳದ ಭಾಗ ಎಂದು ಹೇಳಿದ್ದಾರೆ. ಅಲ್ಲದೆ ಚೀನಾ ಗಡಿ ಕಂಬಗಳನ್ನು ನೆಡುವಾಗ ನೇಪಾಳ ಸರ್ಕಾರ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಹೀಗಾಗಿ ನೇಪಾಳ ರುಯಿ ಹಾಗೂ ಟೆಘಾ ಗ್ರಾಮಗಳನ್ನು ಕಳೆದುಕೊಂಡಿದೆ. ಇದೀಗ ಇವು ಟಿಬೆಟ್‍ಗೆ ಒಳಪಟ್ಟಿವೆ ಎಂದು ವಿವರಿಸಿದ್ದಾರೆ.

    ಕೆಲ ಭ್ರಷ್ಠ ನೇಪಾಳಿ ಅಧಿಕಾರಿಗಳ ಕೃತ್ಯದಿಂದಾಗಿ ಚೀನಾ 35ನೇ ನಂಬರ್ ಪಿಲ್ಲರ್‍ನ್ನು ಸ್ಯಾಂಬೋ ಹಾಗೂ ರುಯಿ ಗೌನ್ ಪ್ರದೇಶದಲ್ಲಿ ನೆಟ್ಟಿದೆ. ಇದರಿಂದಾಗಿ ಈ ಪ್ರದೇಶಗಳು ಚೀನಾ ನಿಯಂತ್ರಣದಲ್ಲಿವೆ. ಅಲ್ಲದೆ ಗೌನ್, ಸ್ಯಾಂಬ್ಡೊ, ರುಯಿ ಪ್ರದೇಶಗಳ ಭಾಷೆ, ಸಂಸ್ಕøತಿ, ಸಂಪ್ರದಾಯ ಹಾಗೂ ಆಚರಣೆಗಳು ಒಂದೇಯಾಗಿವೆ. ಪ್ರಾರ್ಥನಾ ಮಂದಿರಗಳು ಸಹ ಒಂದೇ ರೀತಿ ಇವೆ ಎಂದು ಚುಮನುಬ್ರಿ ಗ್ರಾಮೀಣ ಮುನ್ಸಿಪಾಲಿಟಿ ವಾರ್ಡ್ ನಂ.1ರ ಅಧ್ಯಕ್ಷ ಬಿರ್ ಬಹದ್ದೂರ್ ಲಾಮಾ ತಿಳಿಸಿದ್ದಾರೆ.

    ಟಿಬೆಟ್ ಜೊತೆಗೆ ಸೇರಿಕೊಳ್ಳಲು ಇಷ್ಟವಾಗದವರು ಸ್ಯಾಂಬ್ಡೊಗೆ ವಲಸೆ ಹೋದರು. ಅವರೆಲ್ಲರೂ ನಮ್ಮೊಂದಿಗೆ ಸಾವಿರಾರು ವರ್ಷಗಳ ಐತಿಹಾಸಿಕ ಹಾಗೂ ಸಾಂಸ್ಕøತಿಕ ದಾಖಲೆಗಳನ್ನು ಹೊಂದಿದ್ದಾರೆ ಎಂದು ಬಿರ್ ಬಹದ್ದೂರ್ ಲಾಮಾ ವಿವರಿಸಿದ್ದಾರೆ.

    ಚೀನಾದೊಂದಿಗೆ ಇಷ್ಟೆಲ್ಲ ಗಡಿ ವಿವಾದಗಳಿದ್ದರೂ ಹೊಸ ಭೂಪಟದ ಸಂಬಂಧ ನೇಪಾಳ ವಿವಾದ ಹೆಚ್ಚಿಸುತ್ತಿದೆ. ಅಲ್ಲದೆ ಸರ್ಕಾರ ನೇಪಾಳದ ಜನರಲ್ಲಿ ಭಾರತದ ವಿರುದ್ಧ ದ್ವೇಷವನ್ನು ಹೆಚ್ಚಿಸಲು ರೇಡಿಯೋಗಳಲ್ಲಿ ಭಾರತ ವಿರೋಧಿ ಹಾಡುಗಳನ್ನು ಪ್ರಸಾರ ಮಾಡುತ್ತಿದೆ ಎಂದು ವರದಿಯಾಗಿತ್ತು. ಗಡಿ ಪ್ರದೇಶದಲ್ಲಿರುವ ಭಾರತದ ಉತ್ತರಾಖಂಡ ರಾಜ್ಯದ ಹಳ್ಳಿಗಳಲ್ಲಿ ನೇಪಾಳ ರೇಡಿಯೋ ಸಿಗ್ನಲ್ ಲಭ್ಯವಾಗುತ್ತವೆ. ಈ ವೇಳೆ ಭಾರತ ವಿರೋಧಿ ಹಾಡುಗಳು ಪ್ರಸಾರವಾಗುತ್ತಿರುವುದು ಖಚಿತವಾಗಿತ್ತು. ಈ ಮೂಲಕ ಭಾರತದ ವಿರುದ್ಧ ವ್ಯವಸ್ಥಿತವಾಗಿ ಜನರಿಗೆ ಅಪಪ್ರಚಾರ ನಡೆಸುವತ್ತ ನೇಪಾಳ ಸರ್ಕಾರ ಮುಂದಾಗಿದೆ.

  • ಚೀನಾದಿಂದ ಪೂರ್ವನಿಯೋಜಿತ ದಾಳಿ – ಭಾರತದ ಖಡಕ್‌ ಮಾತು

    ಚೀನಾದಿಂದ ಪೂರ್ವನಿಯೋಜಿತ ದಾಳಿ – ಭಾರತದ ಖಡಕ್‌ ಮಾತು

    – ಭಾರತ ಚೀನಾ ನಡುವೆ ದೂರವಾಣಿ ಮಾತುಕತೆ
    – ಮಾತುಕತೆಯ ಮೂಲಕ ಸಮಸ್ಯೆ ಪರಿಹಾರಕ್ಕೆ  ದೇಶಗಳ ಒಪ್ಪಿಗೆ

    ನವದೆಹಲಿ: ಗಾಲ್ವಾನ್‌ ಕಣಿವೆಯಲ್ಲಿ ಚೀನಾ ಸೈನಿಕರು ಪೂರ್ವನಿಯೋಜಿತವಾಗಿ ನಮ್ಮ ಸೈನಿಕರ ಮೇಲೆ ದಾಳಿ ನಡೆಸಿದ್ದಾರೆ ಎಂದು ಭಾರತ ಚೀನಾಗೆ ಖಡಕ್‌ ಆಗಿ ತಿಳಿಸಿದೆ.

    ಸೋಮವಾರ ರಾತ್ರಿ ಗಡಿಯಲ್ಲಿ ಎರಡು ರಾಷ್ಟ್ರಗಳ ಸೈನಿಕರ ಮಧ್ಯೆ ಘರ್ಷಣೆ ನಡೆದ ಬಳಿಕ ಬುಧವಾರ ಭಾರತದ ವಿದೇಶಾಂಗ ಇಲಾಖೆ ಸಚಿವ ಜೈಶಂಕರ್‌ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್‌ ವೈ ಮಧ್ಯೆ ದೂರವಾಣಿ ಮಾತುಕತೆ ನಡೆಯಿತು.

    ಭಾರತ ಹೇಳಿದ್ದು ಏನು?
    ಜೂನ್‌ 6 ರಂದು ನಡೆದ ಮಿಲಿಟರಿ ಕಮಾಂಡರ್‌ ಮಟ್ಟದ ಮಾತುಕತೆಯ ವೇಳೆ ಎಲ್‌ಎಸಿಯಿಂದ ಸೇನೆ ಹಿಂದಕ್ಕೆ ಬರುವ ಸಂಬಂಧ ಮಾತುಕತೆ ನಡೆದಿತ್ತು. ಆದರೆ ಚೀನಾ ಸೇನೆ ಭಾರತದ ಎಲ್‌ಎಸಿ ಬಳಿ ಟೆಂಟ್‌ ನಿರ್ಮಿಸಿತ್ತು. ವಿವಾದಕ್ಕೆ ಕಾರಣವಾದ ಈ ಟೆಂಟ್‌ ಅನ್ನು ಚೀನಾ ತೆರವು ಮಾಡಬೇಕಿತ್ತು. ಈ ವಿಚಾರದ ಬಗ್ಗೆ ಮಾತುಕತೆ ನಡೆಯುತ್ತಿದ್ದಾಗ ಚೀನಾ ಸೇನೆ ಪೂರ್ವ ನಿಗದಿಯಂತೆ ದಾಳಿ ನಡೆಸಿದೆ. ಇದರಿಂದಾಗಿ ಸಾವು ನೋವು ಸಂಭವಿಸಿದೆ. ಈ ಘಟನೆಗೆ ಚೀನಾವೇ ನೇರ ಕಾರಣ.

    ಈ ಘಟನೆಯಿಂದ ದ್ವಿಪಕ್ಷೀಯ ಮಾತುಕತೆಯ ಮೇಲೆ ಭಾರೀ ಪರಿಣಾಮ ಬೀರಿದೆ. ಜೂನ್‌ 6 ರಂದು ಕಮಾಂಡರ್‌ ಮಟ್ಟ ಮಾತುಕತೆಯ ವೇಳೆ ಏನು ನಿರ್ಧಾರ ಮಾಡಲಾಗಿದೆಯೋ ಅದನ್ನು ಎರಡು ದೇಶಗಳು ಪಾಲಿಸಬೇಕು. ಎರಡು ಕಡೆಯ ಸೈನಿಕರು ದ್ವಿಪಕ್ಷೀಯ ಒಪ್ಪಂದವನ್ನು ಪಾಲಿಸಬೇಕು ಎಂದು ಭಾರತ ಹೇಳಿದೆ.

    ಚೀನಾ ಹೇಳಿದ್ದು ಏನು?
    ಭಾರತದ ಸೇನೆ ಎಲ್‌ಎಸಿ ದಾಟಿ ನಮ್ಮ ಸೈನಿಕರ ಮೇಲೆ ದಾಳಿ ನಡೆಸಿದೆ. ಭಾರತ ಎಲ್ಲ ಒಪ್ಪಂದಗಳನ್ನು ಉಲ್ಲಂಘಿಸಿ ಈ ಕೃತ್ಯ ಎಸಗಿದೆ. ಚೀನಾ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಚೀನಿ ಸೈನಿಕರ ಮೇಲೆ ಹಲ್ಲೆ ಎಸಗಿದವರ ವಿರುದ್ಧ ಭಾರತ ಕ್ರಮ ಕೈಗೊಳ್ಳಬೇಕು. ಇನ್ನು ಮುಂದೆ ಈ ರೀತಿಯ ಘಟನೆ ಮರುಕಳಿಸಬಾರದು. ನೂರು ಕೋಟಿ ಜನಸಂಖ್ಯೆ ಇರುವ ದೇಶಗಳಾದ ನಾವು ಅಭಿವೃದ್ಧಿ ವಿಚಾರಗಳಿಗೆ ಮನ್ನಣೆ ನೀಡಬೇಕು.

    ಕೊನೆಯಲ್ಲಿ ಏನಾಯ್ತು?
    ಎರಡು ದೇಶಗಳು ಯಾಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಒಪ್ಪಿಕೊಂಡಿದ್ದು, ಸಮಸ್ಯೆಯನ್ನು ಮಾತುಕತೆಯಿಂದ ಬಗೆಹರಿಸಿಕೊಳ್ಳುವ ತೀರ್ಮಾನಕ್ಕೆ ಬರಲಾಗಿದೆ..