Tag: ಗಂಗಾವತಿ

  • ಕೊಪ್ಪಳ | ವಿದೇಶಿ, ದೇಶಿ ಪ್ರವಾಸಿಗರ ಮೇಲೆ ಹಲ್ಲೆ

    ಕೊಪ್ಪಳ | ವಿದೇಶಿ, ದೇಶಿ ಪ್ರವಾಸಿಗರ ಮೇಲೆ ಹಲ್ಲೆ

    ಕೊಪ್ಪಳ: ವಿದೇಶಿ ಮತ್ತು ದೇಶಿ ಪ್ರವಾಸಿಗರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಗಂಗಾವತಿ (Gangavathi) ತಾಲೂಕಿನ ಸಾಣಾಪುರ ಕೆರೆ (Sanapura Lake) ಬಳಿಯ ಎಡದಂಡೆ ಕಾಲುವೆಯಲ್ಲಿ ನಡೆದಿದೆ.

    ಇಸ್ರೇಲ್, ಜರ್ಮನಿ ದೇಶದ ಇಬ್ಬರು, ಮಹಾರಾಷ್ಟ್ರ, ಓರಿಸ್ಸಾದ ಇಬ್ಬರು ಹಾಗೂ ಓರ್ವ ಸ್ಥಳೀಯ ಮಹಿಳೆಯ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಇದನ್ನೂ ಓದಿ: ಸದ್ಯಕ್ಕೆ ಹೊಸ ರೇಷನ್ ಕಾರ್ಡ್ ಇಲ್ಲ – ಆಹಾರ ಸಚಿವ ಮುನಿಯಪ್ಪ ಹೇಳಿದ್ದೇನು?

    ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಗಿಟಾರ್ ಬಾರಿಸುತ್ತಾ ಎಡದಂಡೆ ಕಾಲುವೆ ಮೇಲೆ ಪ್ರವಾಸಿಗರು ಕೂತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಲು ಪ್ರವಾಸಿಗರ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆಗೊಳಗಾದವರನ್ನು ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಇಂದು ರಾಜ್ಯ ಬಜೆಟ್‌ ಮಂಡನೆ – ಬಜೆಟ್‌ಗೂ ಮುನ್ನ ಬಿಜೆಪಿ, ಜೆಡಿಎಸ್‌ ಪ್ರತಿಭಟನೆ

    ಗಂಗಾವತಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಅಂಜನಾದ್ರಿ ಬೆಟ್ಟ ಹತ್ತುವಾಗ ಹೃದಯಾಘಾತದಿಂದ ಯುವಕ ಸಾವು

    ಅಂಜನಾದ್ರಿ ಬೆಟ್ಟ ಹತ್ತುವಾಗ ಹೃದಯಾಘಾತದಿಂದ ಯುವಕ ಸಾವು

    ಕೊಪ್ಪಳ: ಆಂಜನೇಯನ ದರ್ಶನಕ್ಕಾಗಿ ಅಂಜನಾದ್ರಿ ಬೆಟ್ಟ (Anjanadri Hill) ಹತ್ತುವಾಗ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗಂಗಾವತಿ (Gangavathi) ತಾಲೂಕಿನಲ್ಲಿ ನಡೆದಿದೆ.

    ಮೃತ ಯುವಕನನ್ನು ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದ ನಿವಾಸಿ ಜಯೇಶ ಯಾದವ್ (17) ಎಂದು ಗುರುತಿಸಲಾಗಿದ್ದು, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಾಲಿಬಾಲ್ ತರಬೇತುದಾರ ಸುರೇಶ ಯಾದವ್ ಅವರ ಪುತ್ರ ಎಂದು ತಿಳಿಯಲಾಗಿದೆ.ಇದನ್ನೂ ಓದಿ:‌’ಬಿಗ್‌ ಬಾಸ್’ ಗೆಲ್ಲುತ್ತೇನೆ ಎಂದಿದ್ದ ಗೆದ್ದೇ ಬಿಟ್ಟ: ಹನುಮಂತನ ತಾಯಿ ಸಂತಸ

    ಅಂಜನಾದ್ರಿ ಬೆಟ್ಟದ ಆಂಜನೇಯನ ದರ್ಶನ ಪಡೆಯಲು ಯುವಕನೊಬ್ಬ ಸ್ನೇಹಿತರೊಂದಿಗೆ ತೆರಳಿದ್ದ. ಇನ್ನೇನು ಬೆಟ್ಟ ಹತ್ತುವುದು ಮುಗಿದಿದೆ ಎಂದು ಬೆಟ್ಟದ ಅಂತ್ಯ ಭಾಗಕ್ಕೆ ಹೋಗಿದ್ದಾನೆ. ಈ ವೇಳೆ ಏಕಾಏಕಿ ಸುಸ್ತು ಕಾಣಿಸಿಕೊಂಡು, ಅಸ್ವಸ್ಥನಾಗಿದ್ದ. ಕೂಡಲೇ ಅಂಬುಲೆನ್ಸ್‌ಗೆ ಕರೆ ಮಾಡಿದ್ದು, ಗಂಗಾವತಿ ವಾಹನ ಸಿಬ್ಬಂದಿ ಅಂಬುಲೆನ್ಸ್ನಲ್ಲಿ ಆಕ್ಸಿಜನ್ ಕೊರತೆಯಿದೆ ಎಂದು ತಿಳಿಸಿದ್ದಾನೆ.

    ನಂತರ ಅಂಜನಾದ್ರಿ ದೇವಸ್ಥಾನದ ಸಿಬ್ಬಂದಿ ಆನೆಗುಂದಿ ಪ್ರಾಥಮಿಕ ಚಿಕಿತ್ಸಾ ಕೇಂದ್ರದ ಅಂಬುಲೆನ್ಸ್‌ಗೆ ಕರೆ ಮಾಡಿ, ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಅಲ್ಲಿನ ಸಿಬ್ಬಂದಿ ಯುವಕನನ್ನು ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ಕರೆದೊಯ್ಯುವಂತೆ ಶಿಫಾರಸ್ಸು ಮಾಡಿದ್ದಾರೆ.

    ಬಳಿಕ ಗಂಗಾವತಿ ವೈದ್ಯರು ಯುವಕನನ್ನು ಪರೀಕ್ಷೆಗೊಳಪಡಿಸಿದಾಗ, ಯುವಕ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಆಸ್ಪತ್ರೆಗೆ ಪೊಲೀಸರು ಭೇಟಿ ನೀಡಿ, ಮಾಹಿತಿ ಪಡೆದಿದ್ದು, ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ 30 ಭಕ್ತರು ಸಾವು – 60ಕ್ಕೂ ಹೆಚ್ಚು ಜನರಿಗೆ ಗಾಯ

  • ಲಾರಿ, ಕಾರು ಮುಖಾಮುಖಿ ಡಿಕ್ಕಿ – ಸ್ಥಳದಲ್ಲೇ ಜೆಸ್ಕಾಂ ಸಿಬ್ಬಂದಿ ಸಾವು

    ಲಾರಿ, ಕಾರು ಮುಖಾಮುಖಿ ಡಿಕ್ಕಿ – ಸ್ಥಳದಲ್ಲೇ ಜೆಸ್ಕಾಂ ಸಿಬ್ಬಂದಿ ಸಾವು

    ರಾಯಚೂರು: ಲಾರಿ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಜೆಸ್ಕಾಂ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರು (Raichuru) ಜಿಲ್ಲೆಯ ಮಾನ್ವಿಯ (Manvi) ಬೊಮ್ಮನಾಳ ಕ್ರಾಸ್ ಬಳಿ ನಡೆದಿದೆ.

    ಮೃತ ವ್ಯಕ್ತಿಯನ್ನು ಕೊಪ್ಪಳದ (Koppal) ಗಂಗಾವತಿ ಮೂಲದ ವೆಂಕಟಾಚಲಪತಿ (45) ಎಂದು ಗುರುತಿಸಲಾಗಿದೆ.ಇದನ್ನೂ ಓದಿ:ದಾವಣಗೆರೆ | ಪ್ರೀತಿಸುವಂತೆ ಯುವತಿಗೆ ಪೀಡಿಸಿದ ಯುವಕನಿಗೆ 3 ತಿಂಗಳ ಜೈಲು!

    ಮೃತ ವೆಂಕಟಾಚಲಪತಿ ಗಂಗಾವತಿಯ ಜೆಸ್ಕಾಂನಲ್ಲಿ ಹಿರಿಯ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಾರಿನಲ್ಲಿ ರಾಯಚೂರಿನಿಂದ ಗಂಗಾವತಿಗೆ ತೆರಳುತ್ತಿದ್ದರು. ಇದೇ ವೇಳೆ ಲಾರಿಯೊಂದು ರಾಯಚೂರಿಗೆ ಹೊರಟಿತ್ತು. ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

    ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಭಾರತವನ್ನು ಸ್ವತಂತ್ರಗೊಳಿಸಲು ಹೋರಾಡಿದ ಅಪ್ರತಿಮ ದೇಶಭಕ್ತ: ಸಿದ್ದರಾಮಯ್ಯ

  • ಗಂಗಾವತಿಯಲ್ಲಿ ಬೆಂಕಿ ಅವಘಡ – ನಾಲ್ವರ ಜೀವ ಉಳಿಸಿದ ಸಾಕು ನಾಯಿ

    ಗಂಗಾವತಿಯಲ್ಲಿ ಬೆಂಕಿ ಅವಘಡ – ನಾಲ್ವರ ಜೀವ ಉಳಿಸಿದ ಸಾಕು ನಾಯಿ

    ಕೊಪ್ಪಳ: ಇಲ್ಲಿನ ಗಂಗಾವತಿಯಲ್ಲಿ (Gangavathi) ಬೆಂಕಿ ಅವಘಡ ಸಂಭವಿಸಿದ್ದು, ಈ ವೇಳೆ ಸಾಕು ನಾಯಿ ನಾಲ್ವರ ಜೀವ ಉಳಿಸಿದ ಘಟನೆ ಮಹಾವೀರ ಸರ್ಕಲ್ ಸಮೀಪದ ಅಂಗಡಿಯಲ್ಲಿ ಸಂಭವಿಸಿದೆ.

    ಅಗ್ನಿ ಅವಘಡದಲ್ಲಿ ಇಬ್ಬರು ಗಾಯಗೊಂಡಿದ್ದು, ಸುತ್ತಮುತ್ತಲಿನ ನಾಲ್ಕೈದು ಅಂಗಡಿಗಳು ಬೆಂಕಿಗಾಹುತಿಯಾಗಿವೆ.ಇದನ್ನೂ ಓದಿ:  ರಿಯಲ್ ಎಸ್ಟೇಟ್ ಜೊತೆ ಪೊಲೀಸರು ಕೈ ಜೋಡಿಸಿದ್ರೆ ಸಹಿಸೊಲ್ಲ- ಸಿಎಂ ಎಚ್ಚರಿಕೆ

    ಚಿನಿವಾಲರ ಆಸ್ಪತ್ರೆಯ ಎದುರುಗಡೆ ಇರುವ ಹೋಟೆಲ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ರಾತ್ರಿ 2 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ರಾತ್ರಿ ವೇಳೆ ಬೆಂಕಿಯ ಪ್ರಮಾಣ ಹೆಚ್ಚಿದ್ದು, ನಂದಿಸಲು ಸಾಧ್ಯವಾಗಿಲ್ಲ. ಇದರಿಂದ ಹೋಟೆಲ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಪಕ್ಕದ ಮನೆಗೂ ಕೂಡ ಆವರಿಸಿದೆ. ಈ ವೇಳೆ ಸಾಕಿದ್ದ ನಾಯಿ ಜೋರಾಗಿ ಬೊಗಳುವ ಮೂಲಕ ಮಾಲೀಕರನ್ನು ಎಬ್ಬಿಸಿ ಪ್ರಾಣಾಪಾಯದಿಂದ ಪಾರು ಮಾಡಿದೆ.

    ಇದೇ ವೇಳೆ ಬೆಂಕಿಯಿಂದಾಗಿ ಹೋಟೆಲ್‌ನಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು ದೊಡ್ಡ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಹೋಟೆಲ್, ಮನೆಯಲ್ಲಿರುವ ಧಾನ್ಯಗಳು, ಬಟ್ಟೆಗಳು ಹಾಗೂ ಲಕ್ಷಾಂತರ ರೂಪಾಯಿ ಬೆಲೆಬಾಳುವ ವಸ್ತುಗಳು ಸುಟ್ಟು ಹೋಗಿವೆ. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಅಗ್ನಿ ನಂದಿಸಲು ಮುಂದಾಗಿದ್ದಾರೆ.

    ಸಿಲಿಂಡರ್ ಸ್ಫೋಟಗೊಂಡಿದ್ದ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಗಾವತಿ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇದನ್ನೂ ಓದಿ: ಅವಿವಾಹಿತ ಜೋಡಿಗೆ ಓಯೋ ರೂಮ್‌ ನಿರ್ಬಂಧ – ಬೆಂಗಳೂರಲ್ಲೂ ನಿಯಮ ಜಾರಿಗೆ ಬಜರಂಗದಳ ಮನವಿ

     

  • ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವು – ಗಂಗಾವತಿ ಆಸ್ಪತ್ರೆಗೆ ಮುಗಿಬಿದ್ದ ಮಹಿಳೆಯರು

    ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವು – ಗಂಗಾವತಿ ಆಸ್ಪತ್ರೆಗೆ ಮುಗಿಬಿದ್ದ ಮಹಿಳೆಯರು

    -1 ವರ್ಷದಲ್ಲಿ 4,790 ನಾರ್ಮಲ್, 1,000 ಸಿಸೇರಿಯನ್ ಹೆರಿಗೆ ಯಶಸ್ವಿ

    ಕೊಪ್ಪಳ: ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು (Maternal Death) ಕರಣ ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ಕೊಪ್ಪಳ (Koppal) ತಾಲೂಕೂ ಆಸ್ಪತ್ರೆಗೆ ಮಹಿಳೆಯರು ಮುಗಿಬಿದ್ದಿದ್ದಾರೆ.

    ಹೌದು, ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣಗಳು ಬೆಳಕಿಗೆ ಬಂದಿದ್ದೇ ತಡ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಮಹಿಳೆಯರು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ.ಇದನ್ನೂ ಓದಿ: ನಾಯಿಗಳ ಕಾದಾಟದ ಮೇಲೆ ಬೆಟ್ಟಿಂಗ್‌ – 81 ಮಂದಿ ಅರೆಸ್ಟ್‌, 19 ವಿದೇಶಿ ತಳಿ ಶ್ವಾನಗಳು ವಶಕ್ಕೆ

    ಕಳೆದ ಕೆಲವು ದಿನಗಳ ಹಿಂದೆಯಷ್ಟೆ ಬಳ್ಳಾರಿಯ ಬಾಣಂತಿಯರ ಸರಣಿ ಸಾವು ಪ್ರಕರಣ ಇಡಿ ರಾಜ್ಯದಲ್ಲಿ ಸದ್ದು ಮಾಡುವುದರ ಜೊತೆಗೆ ಭಯದ ವಾತಾವರಣ ನಿರ್ಮಿಸಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆ ಹೋದರೆ ತಾಯಿ ಮಗು ವಾಪಸ್ ಬರುವುದು ಗ್ಯಾರಂಟಿ ಇಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳುವುದು ಎಂದರೆ ಜನರು ಹಿಡಿಶಾಪ ಹಾಕುವಂತಾಗಿದೆ. ಈ ಬೆನ್ನಲ್ಲೇ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಾಸ್ಪತ್ರೆಗೆ ಹೆರಿಗೆ ಬರುವವರ ಸಂಖ್ಯೆ ಹೆಚ್ಚಾಗಿದ್ದು, ಆ ಜಿಲ್ಲೆಯವರು ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆಯ ಜನರು ಅದೇ ಆಸ್ಪತ್ರೆಗೆ ಹೋಗುತ್ತಿದ್ದಾರೆ.

    ತಾಲೂಕು ಕೇಂದ್ರದಲ್ಲಿರುವ 60 ಬೆಡ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಮಹಿಳೆಯರು ಮುಗಿಬೀಳುತ್ತಿದ್ದಾರೆ. ಇದಕ್ಕೆ ಕಾರಣ ಈ ಆಸ್ಪತ್ರೆಯಲ್ಲಿ ನಡೆಯುವ ಸುರಕ್ಷಿತ ಹೆರಿಗೆ. ಈ ಆಸ್ಪತ್ರೆಯಲ್ಲಿ ಹೆರಿಗೆಗೆ ಬರುವ ಎಲ್ಲ ಮಹಿಳೆಯರಿಗೆ ಸುರಕ್ಷಿತ ಹಾಗೂ ನಾರ್ಮಲ್ ಹೆರಿಗೆ ಆಗುತ್ತದೆ ಎನ್ನುವುದು ಜನರ ಭಾವನೆಯಾಗಿದೆ. ಇದು ಕೇವಲ ಜನರ ನಂಬಿಕೆ ಅಷ್ಟೆ ಅಲ್ಲ, ಅಂಕಿ ಅಂಶಗಳನ್ನು ಪರಿಶೀಲನೆ ಅದು ಸತ್ಯ ಎನ್ನುವುದು ತಿಳಿದು ಬಂದಿದೆ.

    ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಈಶ್ವರ ಸವಡಿ ಮಾತನಾಡಿ, ಕಳೆದ ಒಂದು ವರ್ಷದ ಅಂಕಿ ಅಂಶಗಳನ್ನು ಲೆಕ್ಕ ಹಾಕಿದಾಗ 4,790 ನಾರ್ಮಲ್ ಹೆರಿಗೆ ಹಾಗೂ 1 ಸಾವಿರ ಸಿಜೇರಿಯನ್ ಹೆರಿಗೆಗಳಾಗಿವೆ. ಈ ಆಸ್ಪತ್ರೆಯಲ್ಲಿ ಇದುವರೆಗೂ ಒಂದೇ ಒಂದು ಬಾಣಂತಿಯ ಸಾವು ಕೂಡ ದಾಖಲಾಗಿಲ್ಲ. ಬದಲಾಗಿ ಬೇರೆ ಕಾರಣದಿಂದ ಒಬ್ಬ ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

    ಆಸ್ಪತ್ರೆಗೆ ಪ್ರತಿ ದಿನ ನೂರಾರು ಮಹಿಳೆಯರು ಹೆರಿಗೆಗೆ ಬರುತ್ತಾರೆ. ಸಕಲ ಸೌಲಭ್ಯಗಳನ್ನು ಹೊಂದಿರುವ ಈ ಆಸ್ಪತ್ರೆಗೆ ಕೇವಲ ಗಂಗಾವತಿ, ಕೊಪ್ಪಳ ಅಷ್ಟೆ ಅಲ್ಲದೇ, ರಾಯಚೂರು, ಬಳ್ಳಾರಿ, ವಿಜಯನಗರ, ಬಾಗಲಕೋಟೆ ಜಿಲ್ಲೆಗಳಿಂದಲೂ ಜನ ಬರುತ್ತಾರೆ. ಯಾವುದೇ ಭಯ ಇಲ್ಲದೆ ಜನರು ಉಚಿತವಾಗಿ ಹೆರಿಗೆ ಮಾಡಿಸಿಕೊಳ್ಳುತ್ತಿದ್ದಾರೆ. ಈ ಆಸ್ಪತ್ರೆ 2018 ರಿಂದ 2023ರ ವರೆಗೆ ಮೂರು ಬಾರಿ ಕಾಯಕಲ್ಪ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇದರಿಂದ ಜನರು ಉಚಿತ ಹಾಗೂ ಸುರಕ್ಷಿತ ಹೆರಿಗೆಗೆ ಗಂಗಾವತಿ ಆಸ್ಪತ್ರೆ ಬೆಸ್ಟ್ ಎಂದಿದ್ದಾರೆ. ಈ ಕಾರಣಕ್ಕೆ ಇಲ್ಲಿ ಹೆರಿಗೆಗೆ ಬರುವವರ ಸಂಖ್ಯೆ ಕೂಡಾ ಹೆಚ್ಚಾಗ್ತಿದೆ.

    ಇದರಿಂದ ಜನರು ಯಾವುದೇ ಕಾರಣಕ್ಕೂ ಭಯಪಡುವುದು ಬೇಡ, ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳಿ. ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಹಣ ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ.ಇದನ್ನೂ ಓದಿ:ಯಶವಂತಪುರ ಫ್ಲೈಓವರ್ ಮೇಲೆ ಟಯರ್ ಬ್ಲಾಸ್ಟ್‌ಗೊಂಡು ಗೆಣಸು ತುಂಬಿದ್ದ ಬೊಲೆರೋ ಪಲ್ಟಿ

     

  • ಅಂಜನಾದ್ರಿಯಲ್ಲಿ ಇಂದು ಹನುಮಮಾಲಾ ವಿಸರ್ಜನೆ – ದೇಶದ ನಾನಾ ಭಾಗಗಳಿಂದ ಭಕ್ತರ ದಂಡು

    ಅಂಜನಾದ್ರಿಯಲ್ಲಿ ಇಂದು ಹನುಮಮಾಲಾ ವಿಸರ್ಜನೆ – ದೇಶದ ನಾನಾ ಭಾಗಗಳಿಂದ ಭಕ್ತರ ದಂಡು

    ಕೊಪ್ಪಳ: ಅಂಜನಾದ್ರಿ ಬೆಟ್ಟದಲ್ಲಿ (Anjanadri Hill) ಇಂದು ಐತಿಹಾಸಿಕ ಹನುಮಮಾಲಾ ವಿಸರ್ಜನೆ ನಡೆಯಲಿದ್ದು, ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದಾರೆ.

    ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ (Gangavathi) ತಾಲೂಕಿನ ಅಂಜನಾದ್ರಿ ಬೆಟ್ಟದ ಆಂಜನೇಯ ದೇವಸ್ಥಾನದಲ್ಲಿ (Anjaneyaswamy Temple) ಇಂದು (ಡಿ.13) ಹನುಮಮಾಲಾ ವಿಸರ್ಜನೆ ನಡೆಯಲಿದೆ. ಬೆಳಗಿನ ಜಾವ ಏಕಕಾಲಕ್ಕೆ ಮಾಲಾಧಾರಿಗಳು ಆಗಮಿಸಿದ್ದು, 575 ಮೆಟ್ಟಿಲು ಹತ್ತಿ ಆಂಜನೇಯ ಸ್ವಾಮಿ ದರ್ಶನದ ಬಳಿಕ ಹನುಮಮಾಲೆಯನ್ನು ವಿಸರ್ಜನೆ ಮಾಡಲಿದ್ದಾರೆ. ಬೆಟ್ಟದ ಮುಂಭಾಗದಲ್ಲಿ ಭಕ್ತರ ಆಗಮನದಿಂದ ನೂಕು ನುಗ್ಗಲು ಉಂಟಾಗುತ್ತಿದ್ದು, ನಿಯಂತ್ರಣಕ್ಕಾಗಿ ಪೊಲೀಸ್ ಹಾಗೂ ದೇವಸ್ಥಾನದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.ಇದನ್ನೂ ಓದಿ: ರಾಜ್ಯದಲ್ಲಿ ಅಪರಾಧಿಗಳಿಗೆ ಜಾಗವಿಲ್ಲ – ಹರಿಯಾಣ ಸಿಎಂ ಖಡಕ್ ವಾರ್ನಿಂಗ್

    ವಿಸರ್ಜನೆಗೆ ಸಿಂಗಾರಗೊಂಡ ಅಂಜನಾದ್ರಿ:
    ರಾಮಾಯಣ ಕಾಲದ ಪೌರಾಣಿಕ ಇತಿಹಾಸವನ್ನು ಹೊಂದಿರುವ ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟವು ಹನುಮಮಾಲಾ ವಿಸರ್ಜನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತಳಿರು, ತೋರಣ, ವಿದ್ಯುತ್ ದೀಪಾಲಂಕಾರದಿಂದ, ಕೇಸರಿ ಧ್ವಜಗಳಿಂದ ಸಿಂಗಾರಗೊಂಡು ಮಾಲಾಧಾರಿಗಳನ್ನು ಸ್ವಾಗತಿಸುತ್ತಿದೆ.

    ಪ್ರತಿ ವರ್ಷದಂತೆ ಈ ಬಾರಿಯು ಸಹ ಚತುರ್ಮಾಸದಲ್ಲಿ ಹನುಮಮಾಲೆಯನ್ನು ಧಾರಣೆ ಮಾಡಿದ ಹನುಮನ ಭಕ್ತರು ಕಠಿಣ ವ್ರತವನ್ನು ಕೈಕೊಂಡು ಹನುಮಮಾಲಾ ವಿಸರ್ಜನೆಗಾಗಿ ಇಂದು (ಡಿ.13) ಅಂಜನಾದ್ರಿಗೆ ಆಗಮಿಸಿದ್ದಾರೆ. ರಾಜ್ಯದ ನಾನಾ ಜಿಲ್ಲೆಗಳಿಂದ ಲಕ್ಷಕ್ಕೂ ಅಧಿಕ ಮಾಲಾಧಾರಿಗಳು ಬರುವ ನಿರೀಕ್ಷೆಯಿದ್ದು, ಜಿಲ್ಲಾಡಳಿತ ಈಗಾಗಲೇ ಸಕಲ ತಯಾರಿ ಮಾಡಿಕೊಂಡಿದೆ. ಅಂಜನಾದ್ರಿ ಬೆಟ್ಟವನ್ನು ದೀಪಗಳಿಂದ, ಬೆಟ್ಟದ ಕೆಳಗಡೆ ಇರುವ ಪಾದಗಟ್ಟಿಯನ್ನು ಬಾಳೆಕಂಬ, ತೆಂಗಿನಗರಿ, ಹೂವಿನಿಂದ ಸಿಂಗಾರಗೊಳಿಸಲಾಗಿದೆ. ಇನ್ನೂ ಬೆಟ್ಟದ ಮೇಲಿರುವ ಹನುಮನ ದೇವಸ್ಥಾನದ ಗರ್ಭಗುಡಿಯಲ್ಲಿ ಹೂವಿನ ಅಲಂಕಾರ, ಕೇಸರಿ ಧ್ವಜಗಳನ್ನು ಕಟ್ಟುವ ಮೂಲಕ ದೇವಸ್ಥಾನವನ್ನು ಸಿಂಗಾರ ಗೊಳಿಸಲಾಗಿದೆ.

    ರಸ್ತೆಯುದ್ದಕ್ಕೂ ಕೇಸರಿಮಯ:
    ಹನುಮಮಾಲಾ ವಿಸರ್ಜನೆಗೆ ರಾಜ್ಯದ ನಾನಾ ಜಿಲ್ಲೆಗಳಿಂದ ಭಕ್ತರು ಬರುವುದರಿಂದ ಅವರ ಸ್ವಾಗತಕ್ಕಾಗಿ ಜಿಲ್ಲಾಡಳಿತ ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೇಸರಿ ಧ್ವಜ, ರಸ್ತೆ ಉದ್ದಕ್ಕೂ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಇನ್ನೂ ಧ್ವನಿವರ್ಧಕದ ಮೂಲಕ ದಿನದ 24 ಗಂಟೆಗಳ ಕಾಲ ರಾಮ ನಾಮಜಪದ ಆಡಿಯೋ ಹಾಕಲಾಗುತ್ತಿದೆ. ಪಾದಯಾತ್ರೆ ಬರುವ ಭಕ್ತರು ರಾಮನ ಜಪ ಮಾಡಿಕೊಂಡು ಬರಲು ಅನುಕೂಲವಾಗಲು ರಸ್ತೆಯುದ್ದಕ್ಕೂ ದೀಪ ಹಾಕಲಾಗಿದೆ.

    ಪಾದಯಾತ್ರೆ ಬಂದಿರುವ ಭಕ್ತರು:
    ಡಿ.13 ರಂದು ಹನುಮಮಾಲಾ ವಿಸರ್ಜನೆಗಾಗಿ ಕೊಪ್ಪಳ, ಹುಲಗಿ, ಕಂಪ್ಲಿ, ಕಮಲಾಪೂರ, ಬಳ್ಳಾರಿ, ಸಿಂಧನೂರ, ಹೊಸಪೇಟೆ, ಕನಕಗಿರಿ, ಕಾರಟಗಿ ಸೇರಿದಂತೆ ಸಮೀಪದ ತಾಲೂಕುಗಳ ಮಾಲಾಧಾರಿಗಳು ಪಾದಯಾತ್ರೆಯ ಮೂಲಕ ಅಂಜನಾದ್ರಿಗೆ ಆಗಮಿಸಿದ್ದಾರೆ.ಇದನ್ನೂ ಓದಿ: ಇಂದಿನಿಂದ ಮಹಾಕುಂಭ ಮೇಳ – 5,500 ಕೋಟಿ ಮೊತ್ತದ ಯೋಜನೆಗಳಿಗೆ ಪ್ರಧಾನಿ ಮೋದಿಯಿಂದ ಚಾಲನೆ

     

  • ಬೈಕ್‌ಗೆ ಲಾರಿ ಡಿಕ್ಕಿ – ಕೂಲಿ ಕೆಲಸಕ್ಕೆ ಹೊರಟಿದ್ದ ದಂಪತಿ ಸಾವು

    ಬೈಕ್‌ಗೆ ಲಾರಿ ಡಿಕ್ಕಿ – ಕೂಲಿ ಕೆಲಸಕ್ಕೆ ಹೊರಟಿದ್ದ ದಂಪತಿ ಸಾವು

    ಕೊಪ್ಪಳ: ಕೂಲಿ ಕೆಲಸಕ್ಕೆ ಹೊರಟಿದ್ದ ದಂಪತಿಯ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದಿದ್ದು, ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ (Gangavathi) ತಾಲೂಕಿನ ಕೆಸರಟ್ಟಿ ಗ್ರಾಮದ ಬಳಿ ನಡೆದಿದೆ.ಇದನ್ನೂ ಓದಿ: ಮುಂದಿನ 5 ವರ್ಷದಲ್ಲಿ ಅಟೋಮೊಬೈಲ್ ಉದ್ಯಮದಲ್ಲಿ ವಿಶ್ವದಲ್ಲೇ ಭಾರತ ನಂಬರ್‌ 1: ಗಡ್ಕರಿ ಭವಿಷ್ಯ

    ಮೃತ ದಂಪತಿಯನ್ನು ಮರಕುಂಬಿ (Marakumbi) ಗ್ರಾಮದ ನಿವಾಸಿಗಳಾದ ಪತಿ ಮಂಜುನಾಥ ನಾಯಕ್(38) ಹಾಗೂ ಪತ್ನಿ ನೇತ್ರಾವತಿ ನಾಯಕ್(33) ಎಂದು ಗುರುತಿಸಲಾಗಿದೆ.

    ಕೂಲಿ ಕೆಲಸಕ್ಕಾಗಿ ದಂಪತಿ ಗಂಗಾವತಿಗೆ ಹೊರಟಿದ್ದರು. ಈ ವೇಳೆ ಲಾರಿ ಡಿಕ್ಕಿ ಹೊಡೆದಿದ್ದು, ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಗಂಗಾವತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇದನ್ನೂ ಓದಿ: ಮನೀಶ್ ಸಿಸೋಡಿಯಾ ಜಾಮೀನು ನಿಯಮ ಸಡಿಲಿಸಿದ ಸುಪ್ರೀಂ

  • ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 98 ಮಂದಿ ಸೇರಿ ಮರಕುಂಬಿಯ 99 ಅಪರಾಧಿಗಳಿಗೆ ಜಾಮೀನು

    ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 98 ಮಂದಿ ಸೇರಿ ಮರಕುಂಬಿಯ 99 ಅಪರಾಧಿಗಳಿಗೆ ಜಾಮೀನು

    ಧಾರವಾಡ/ಕೊಪ್ಪಳ: ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ (Gangavati) ತಾಲೂಕಿನ ಮರಕುಂಬಿ ಗ್ರಾಮದಲ್ಲಿ ದಲಿತರು ಮತ್ತು ಸವರ್ಣೀಯರ ನಡುವೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಅಪರಾಧಿಗಳಿಗೆ ಕೊಪ್ಪಳ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೀಗ ಧಾರವಾಡದ (Dharwad) ಹೈಕೋರ್ಟ್ (High Court) ವಿಭಾಗೀಯ ಪೀಠ ಅಪರಾಧಿಗಳಿಗೆ ಜಾಮೀನು ನೀಡಿದೆ.

    ಕೊಪ್ಪಳ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 98 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿತ್ತು. ಆದರೆ ಇದೀಗ 99 ಜನ ಅಪರಾಧಿಗಳ ಪೈಕಿ 98 ಜನರಿಗೆ ಧಾರವಾಡದ ಹೈಕೋರ್ಟ್ ಜಾಮೀನು ನೀಡಿದೆ.ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ 5.2 ತೀವ್ರತೆಯ ಭೂಕಂಪ ದಾಖಲು

    ಕೊಪ್ಪಳದ ಜಿಲ್ಲಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ 98 ಜನ ಅಪರಾಧಿಗಳು ಅ.28 ರಂದು ಧಾರವಾಡ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಕುರಿತಂತೆ ವಿಚಾರಣೆ ನಡೆಸಿದ ಇಬ್ಬರು ನ್ಯಾಯಮೂರ್ತಿಗಳಿದ್ದ ವಿಭಾಗೀಯ ಪೀಠವು 98 ಜನ ಅಪರಾಧಿಗಳಿಗೆ ಜಾಮೀನು ಮಂಜೂರು ಮಾಡಿದೆ.

    ಇದಕ್ಕೆ ಸಂಬಂಧಿಸಿದಂತೆ ವಕೀಲರು ಮಾತನಾಡಿ, ಕೊಪ್ಪಳದ ಜಿಲ್ಲಾ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ತಡೆ ನೀಡಿರುವ ಧಾರವಾಡ ಹೈಕೋರ್ಟ್, ಪ್ರಕರಣದ ಎ1 ಆರೋಪಿ ಮಂಜುನಾಥ ಎಂಬುವವರನ್ನು ಹೊರತುಪಡಿಸಿ, ಉಳಿದ ಎಲ್ಲ ಅಪರಾಧಿಗಳಿಗೆ ಜಾಮೀನು ನೀಡಿದೆ. ಮಂಜುನಾಥ ಜಾಮೀನಿಗೆ ಅರ್ಜಿ ಹಾಕದೇ ಇದ್ದಿದ್ದರಿಂದ ಆತನಿಗೆ ಜಾಮೀನು ದೊರೆತಿಲ್ಲ ಎಂದು ಹೇಳಿದರು.

    ಪ್ರಕರಣದ ಆರೋಪಿಗಳು ಹತ್ತು ವರ್ಷಗಳಿಂದ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿಲ್ಲ. ಘಟನೆ ಹಾಗೂ ಎಫ್‌ಐಆರ್ ದಾಖಲಾದ ಸಮಯದ ವ್ಯತ್ಯಾಸ ಮತ್ತು ಆರೋಪಿಗಳ ಗುರುತು ಪತ್ತೆ ಮಾಡಿಲ್ಲ ಎಂಬ ಅಂಶಗಳನ್ನು ಹೈಕೋರ್ಟ್ ಪ್ರಮುಖವಾಗಿ ಪರಿಗಣಿಸಿದೆ. ಪ್ರತಿಯೊಬ್ಬರಿಗೂ 50 ಸಾವಿರ ರೂ. ಬಾಂಡ್ ಹಾಗೂ ಒಬ್ಬರ ಶ್ಯೂರಿಟಿ ನೀಡುವಂತೆ ಹೈಕೋರ್ಟ್ ಷರತ್ತು ವಿಧಿಸಿದೆ ಎಂದು ತಿಳಿಸಿದರು.ಇದನ್ನೂ ಓದಿ: ಹಿಪ್ಪರಗಿ ಕಬಡ್ಡಿ ವೈಭವ – ಕಣ್ಮನ ಸೆಳೆದ ಅಂತರ್ ರಾಜ್ಯ ಮಹಿಳಾ ಟೂರ್ನಿ

  • ತುಂಗಭದ್ರಾ ನದಿಗೆ 1 ಲಕ್ಷ ಕ್ಯುಸೆಕ್ ನೀರು ಬಿಡುಗಡೆ – ಮುಳುಗಡೆ ಹಂತ ತಲುಪಿದ ಕಂಪ್ಲಿ ಸೇತುವೆ

    ತುಂಗಭದ್ರಾ ನದಿಗೆ 1 ಲಕ್ಷ ಕ್ಯುಸೆಕ್ ನೀರು ಬಿಡುಗಡೆ – ಮುಳುಗಡೆ ಹಂತ ತಲುಪಿದ ಕಂಪ್ಲಿ ಸೇತುವೆ

    – ಸೇತುವೆ ಮೇಲೆ ವಾಹನ ಸವಾರರಿಗೆ ನಿರ್ಬಂಧ

    ಕೊಪ್ಪಳ: ತುಂಗಭದ್ರಾ ನದಿಗೆ (Tungabhadra River) 1 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡಿದ ಹಿನ್ನೆಲೆ ಗಂಗಾವತಿ (Gangavati) ತಾಲೂಕಿನ ಚಿಕ್ಕಜಂತಕಲ್ ಬಳಿಯ ಕಂಪ್ಲಿ ಸೇತುವೆ (Kampli Bridge) ಮುಳುಗಡೆ ಹಂತ ತಲುಪಿದೆ.

    ಸೇತುವೆ ಮುಳುಗಡೆ ಹಂತ ತಲುಪಿದ ಹಿನ್ನೆಲೆ ಸೇತುವೆ ಮೇಲೆ ವಾಹನ ಸವಾರರಿಗೆ ನಿರ್ಬಂಧ ಹೇರಲಾಗಿದೆ. ಬ್ಯಾರಿಕೇಡ್ ಅಳವಡಿಸಿ ಪೊಲೀಸರು ಪ್ರವೇಶ ನಿರ್ಬಂಧಿಸಿದ್ದಾರೆ. ಈ ವರ್ಷ ಐದನೆ ಬಾರಿಗೆ ಕಂಪ್ಲಿ ಸೇತುವೆ ಮೇಲೆ ಸಂಚಾರ ನಿರ್ಬಂಧ ಹೇರಲಾಗಿದೆ. ಇದನ್ನೂ ಓದಿ: ಉತ್ತರ ಪ್ರದೇಶ| ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 12.5 ಕೆಜಿ ಚಿನ್ನ ಸೀಜ್

    ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆಯಾಗುವುದರಿಂದ ಪ್ರತಿ ಬಾರಿ ಈ ಸೇತುವೆ ಮುಳುಗಡೆಯಾಗುತ್ತದೆ. ಈ ಹಿನ್ನೆಲೆ ಸೇತುವೆ ಮೇಲ್ದರ್ಜೆಗೆ ಏರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸೇತುವೆ ಮುಳುಗಡೆಯಾದರೆ ಜನರು 25 ಕಿ.ಮೀ ಸುತ್ತುವರೆದು ಕಂಪ್ಲಿಗೆ ತೆರಳುತ್ತಾರೆ. ಇದನ್ನೂ ಓದಿ: Cyclone Dana |ಒಡಿಶಾ, ಪಶ್ಚಿಮ ಬಂಗಾಳ ಕಡೆ ಹೋಗುವ 150ಕ್ಕೂ ಹೆಚ್ಚು ರೈಲುಗಳ ಸೇವೆ ರದ್ದು

  • ಪಬ್ಲಿಕ್ ಟಿವಿಯ `ಬೆಳಕು’ ಇಂಪ್ಯಾಕ್ಟ್: ಜಂಗ್ಲಿ ಗ್ರಾಮದ ವಿದ್ಯಾರ್ಥಿಗಳಿಗೆ ಸ್ವಂತ ಹಣದಲ್ಲಿ ಬಸ್ ಕೊಡಿಸಿದ ರೆಡ್ಡಿ

    ಪಬ್ಲಿಕ್ ಟಿವಿಯ `ಬೆಳಕು’ ಇಂಪ್ಯಾಕ್ಟ್: ಜಂಗ್ಲಿ ಗ್ರಾಮದ ವಿದ್ಯಾರ್ಥಿಗಳಿಗೆ ಸ್ವಂತ ಹಣದಲ್ಲಿ ಬಸ್ ಕೊಡಿಸಿದ ರೆಡ್ಡಿ

    ಕೊಪ್ಪಳ: ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಅಂಜನಾದ್ರಿ ಬೆಟ್ಟದ (Anjanadri Betta) ನೆರಳಿನಲ್ಲೇ ಇದ್ದ ಗ್ರಾಮವದು. ಆದರೂ, ಸಾರಿಗೆ ಸೌಲಭ್ಯದ ಕೊರತೆಯಿಂದ ಗ್ರಾಮದ ನೂರಾರು ವಿದ್ಯಾರ್ಥಿಗಳು ಹೈಸ್ಕೂಲ್ ಶಿಕ್ಷಣಕ್ಕೂ 5 ಕಿ.ಮೀ ನಡೆಯಬೇಕಿತ್ತು. ಸಾರಿಗೆ ಸೌಲಭ್ಯದ ಕೊರತೆಯಿಂದ ಹತ್ತಾರು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ಇದೀಗ ಈ ವಿದ್ಯಾರ್ಥಿಗಳಿಗೆ ಆಶಾಕಿರಣ ಮೂಡಿದ್ದು, ಶಾಸಕ ಜನಾರ್ದನ ರೆಡ್ಡಿ ಹೊಸ ಬಸ್ ಖರೀದಿಸಿ ಕೊಟ್ಟಿದ್ದಾರೆ. ಇದು `ಪಬ್ಲಿಕ್ ಟಿವಿ’ಯ ಬೆಳಕು (PUBLiC TV Belaku Impact) ಕಾರ್ಯಕ್ರಮದ ಬಿಗ್ ಇಂಪ್ಯಾಕ್ಟ್ ಆಗಿದೆ.

    ಹೌದು. ಜಿಲ್ಲೆಯ ಗಂಗಾವತಿ ತಾಲೂಕಿನ ಜಂಗ್ಲಿ ಗ್ರಾಮದ ಜನರಿಗೆ ಸಾರಿಗೆ ಸೌಲಭ್ಯದ ಕೊರತೆಯಿತ್ತು. ಈ ಕುರಿತು `ಪಬ್ಲಿಕ್ ಟಿವಿ’ಯ ಬೆಳಕು ಕಾರ್ಯಕ್ರಮದಲ್ಲಿ ಪ್ರಸಾರವಾಗಿತ್ತು. ಈ ವರದಿಗೆ ಓಗೊಟ್ಟ ಶಾಸಕ ಜನಾರ್ದನ ರೆಡ್ಡಿ, ಹೊಸ ಬಸ್ ಖರೀದಿಸಿ ಕೊಟ್ಟಿದ್ದಾರೆ. ಶಾಸಕ ಜನಾರ್ದನ ರೆಡ್ಡಿಯವರ (Janardhana Reddy) ಪತ್ನಿ ಅರುಣಾ ಲಕ್ಷ್ಮೀ ಶಾಲಾ ವಾಹನವನ್ನು ಗ್ರಾಮಸ್ಥರಿಗೆ ಹಸ್ತಾಂತರಿಸಿದ್ದು, ಹೊಸ ಶಾಲಾ ವಾಹನವನ್ನು ಖುಷಿಯಿಂದ ಪೂಜೆ ಮಾಡಿ ಗ್ರಾಮಸ್ಥರು ಬರಮಾಡಿಕೊಂಡಿದ್ದಾರೆ. ಜೊತೆಗೆ ಶಾಲಾ ವಾಹನವನ್ನು ಕಂಡು ಮಕ್ಕಳಲ್ಲಿ ಸಂತೋಷ ಮನೆಮಾಡಿದೆ.ಇದನ್ನೂ ಓದಿ:ದೇವೇಗೌಡರ ತುರ್ತು ಬುಲಾವ್‌ – ಚನ್ನಪಟ್ಟಣದಲ್ಲಿ ಅಖಾಡಕ್ಕಿಳಿಯುತ್ತಾರಾ ನಿಖಿಲ್‌ ಕುಮಾರಸ್ವಾಮಿ?

    ಜಂಗ್ಲಿ ಮತ್ತು ರಂಗಾಪುರ ಗ್ರಾಮದ ವಿದ್ಯಾರ್ಥಿಗಳು ಈ ಕಾಲದಲ್ಲೂ ಹೈಸ್ಕೂಲ್ ಶಿಕ್ಷಣ ಪಡೆಯಲು ಬರೋಬ್ಬರಿ 5 ಕಿ.ಮೀ. ನಡೆದುಕೊಂಡು ಹೋಗಬೇಕಿದೆ. ಪ್ರತಿದಿನ ನೂರಾರು ವಿದ್ಯಾರ್ಥಿಗಳು ಬರೋಬ್ಬರಿ 5 ಕಿ.ಮೀ. ನಡೆದು ನಂತರ ಬಸ್ ಏರಿ ಶಾಲೆ ತಲುಪಬೇಕಿತ್ತು. ಇದರಿಂದ ಈ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಶಾಲೆ- ಕಾಲೇಜ್ ತಲುಪಲು ಸಾಧ್ಯವಾಗುತ್ತಿರಲಿಲ್ಲ. ನಿಗದಿತ ಸಮಯಕ್ಕೆ ಶಾಲೆಗೆ ತಲುಪದ ಕಾರಣಕ್ಕೆ ಶಿಕ್ಷಣದಿಂದ ವಂಚಿತರಾಗುತ್ತಿದ್ದರು.

    ಇಡೀ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದ ಪ್ರಚಾರ ವಸ್ತುವಾಗಿರುವ ಅಂಜನಾದ್ರಿ ಸಮೀಪದಲ್ಲಿ ಇಂತಹ ಅವ್ಯವಸ್ಥೆಯಿರುವ ಕುರಿತು ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ವೀಕ್ಷಕರ ಮುಂದೆ ಇಟ್ಟಿತ್ತು. ವರದಿ ನೋಡಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ತಮ್ಮ ಸ್ವಂತ ಹಣದಲ್ಲಿ ಈ ಗ್ರಾಮಕ್ಕೆ ಶಾಲಾ ವಾಹನ ನೀಡಿದ್ದು, ಶಾಲಾ ವಾಹನವನ್ನು ಅರುಣಾ ಲಕ್ಷ್ಮೀ ಜಂಗ್ಲಿ, ರಂಗಪುರ, ಅಂಜನಳ್ಳಿ ಗ್ರಾಮಸ್ಥರಿಗೆ ಹಸ್ತಾಂತರಿಸಿದ್ದಾರೆ.

    ಈ ಶಾಲಾ ವಾಹನದಿಂದ ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಗಂಗಾವತಿ ಮತ್ತು ಆನೆಗೊಂದಿ ಗ್ರಾಮದ ಶಾಲೆ-ಕಾಲೇಜಿಗೆ ತೆರಳುವ ಪ್ರಾಥಮಿಕ ಶಾಲೆಯಿಂದ ಪದವಿ ವಿದ್ಯಾರ್ಥಿಗಳಿಗೆ ವಾಹನ ಅನುಕೂಲವಾಗಲಿದೆ. ಸಾರಿಗೆ ಸೌಲಭ್ಯ ಇಲ್ಲದ್ದರಿಂದ ಸಾಕಷ್ಟು ಪಾಲಕರು ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನು ಬಿಡಿಸಿದ್ದರು. ಇನ್ನು ಗರ್ಭಿಣಿಯರು, ಬಾಣಂತಿಯರು ಹಾಗೂ ಕಾಯಿಲೆಗೆ ತುತ್ತಾದ ರೋಗಿಗಳು ತಾಲೂಕು ಕೇಂದ್ರ ತಲುಪಲು ಸಂಕಷ್ಟ ಪಡಬೇಕಿತ್ತು. ಆದರೆ

    ಗ್ರಾಮಕ್ಕೆ ಸಾರಿಗೆ ಸೌಲಭ್ಯ ಪಡೆಯಲು ಈ ಗ್ರಾಮಸ್ಥರು ಎಲ್ಲ ರೀತಿಯಲ್ಲೂ ಪ್ರಯತ್ನ ಮಾಡಿದ್ದರು. ಮತದಾನ ಬಹಿಷ್ಕಾರ, ರಸ್ತೆ ತಡೆ, ತಾಲೂಕು ಕೇಂದ್ರದಲ್ಲಿ ಹಂತ-ಹಂತವಾಗಿ ಹೋರಾಟ ಮಾಡಿದ್ದರೂ, ಪ್ರಯೋಜನ ಆಗಿರಲಿಲ್ಲ. ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದಲ್ಲಿ ಪ್ರಸಾರವಾದ ಬೆನ್ನಲ್ಲೇ ಇದೀಗ ಜಂಗ್ಲಿ ಗ್ರಾಮದ ಜನರಿಗೆ ಹಾಗೂ ಶಾಲಾ ಮಕ್ಕಳಿಗೆ ಸಾರಿಗೆ ಸೌಲಭ್ಯ ಒದಗಿದ್ದು, ಬಹು ವರ್ಷದ ಸಮಸ್ಯೆಗೆ ಪರಿಹಾರ ಸಿಕ್ಕಿದೆ.ಇದನ್ನೂ ಓದಿ:ಅಜ್ಜಿಯ ನೆನೆದು ಭಾವನಾತ್ಮಕ ಪತ್ರ ಬರೆದ ಸುದೀಪ್ ಪುತ್ರಿ