Tag: ಕ್ವಾರಂಟೈನ್ ನಿಯಮ

  • ಸಿದ್ದರಾಮಯ್ಯ, ಐವಾನ್ ಡಿಸೋಜಾ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ರೂ ಕ್ವಾರಂಟೈನ್ ಆಗದ ಡಿಕೆಶಿ

    ಸಿದ್ದರಾಮಯ್ಯ, ಐವಾನ್ ಡಿಸೋಜಾ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ರೂ ಕ್ವಾರಂಟೈನ್ ಆಗದ ಡಿಕೆಶಿ

    – ಸಾಮಾಜಿಕ ಅಂತರ ಪಾಲಿಸದೆ ಬೇಕಾಬಿಟ್ಟಿ ತಿರುಗಾಟ
    – ಕಲಬುರಗಿ ಪ್ರವಾಸದಲ್ಲಿ ಸಾಮಾಜಿಕ ಅಂತರ ಮರೆತ ಕಾಂಗ್ರೆಸ್ ಕಾರ್ಯಕರ್ತರು

    ಕಲಬುರಗಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕ್ವಾರಂಟೈನ್ ನಿಯಮ ಪಾಲಿಸದರೆ ಬೇಕಾಬಿಟ್ಟಿಯಾಗಿ ತಿರುಗಾಡಿದ್ದು, ಕಲಬುರಗಿ ಪ್ರವಾಸದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಅಂತರ ಮರೆತು ಡಿಕೆಶಿಗಾಗಿ ಮುಗಿಬಿದ್ದಿದ್ದಾರೆ.

    ಜಿಲ್ಲೆಯ ಅಫಜಲಪುರ ತಾಲೂಕಿನ ದೇವಲ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದ ಬಳಿ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಅಂತರ ಮರೆತು ಡಿ.ಕೆ.ಶಿವಕುಮಾರ್ ಅವರನ್ನು ಸ್ವಾಗತಿಸಿದ್ದಾರೆ. ಕೊರೊನಾ ತಾಂಡವಾಡುತ್ತಿರುವುದನ್ನೂ ಲೆಕ್ಕಿಸದೆ ಒಬ್ಬರ ಮೇಲೊಬ್ಬರು ಬಿದ್ದು, ಶಾಲು, ಹೂವಿನ ಹಾರ ಹಾಕಲು ಮುಗಿಬಿದ್ದಿದ್ದಾರೆ. ನೂಕುನುಗ್ಗಲಿನಲ್ಲೇ ಡಿಕೆಶಿಗೆ ಸನ್ಮಾನ ಮಾಡಿದ್ದಾರೆ. ಆದರೆ ಡಿಕೆಶಿ ಕೊರೊನಾ ಸೋಂಕಿತರಾದ ಸಿದ್ದರಾಮಯ್ಯ ಹಾಗೂ ಐವಾನ್ ಡಿಸೋಜಾ ಅವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ.

    ಡಿ.ಕೆ.ಶಿವಕುಮಾರ್ ಕೊರೊನಾ ಸೋಂಕಿತ ಮಾಜಿ ಎಂಎಲ್‍ಸಿ ಐವಾನ್ ಡಿಸೋಜಾ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದರು. ಈ ಹಿಂದೆ ಮಂಗಳೂರಿನಲ್ಲಿ ಇಬ್ಬರೂ ಒಟ್ಟಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ಐವಾನ್ ಡಿಸೋಜಾ ಕೊರೊನಾ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿತ್ತು. ಇಷ್ಟಾದರೂ ಕ್ವಾರಂಟೈನ್‍ಗೆ ಒಳಗಾಗದೆ ಡಿ.ಕೆ.ಶಿವಕುಮಾರ್ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದು, ಜಿಲ್ಲೆಗಳ ಪ್ರವಾಸದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.

    ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೂ ಕೊರೊನಾ ಸೋಂಕು ತಗುಲಿದ್ದು, ಇವರೊಂದಿಗೂ ಡಿಕೆಶಿ ಪ್ರಾಥಮಿಕ ಸಂಪರ್ಕ ಹೊಂದಿದ್ದರು. ಇಬ್ಬರು ಕೊರೊನಾ ಸೋಂಕಿತರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದರೂ, ಡೋಂಟ್ ಕೇರ್ ಎಂದು ಡಿಕೆಶಿ ಜಿಲ್ಲೆಗಳ ಪ್ರವಾಸ ಮಾಡುತ್ತಿದ್ದಾರೆ. ಜನ ಗುಂಪಾಗಿ ಸೇರಿದರೆ ಕೊರೊನಾ ವ್ಯಾಪಿಸಲಿದೆ ಎಂಬುದನ್ನೂ ಲೆಕ್ಕಿಸದೆ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಕಾರ್ಯಕರ್ತರು ಸಹ ಯಾವುದೇ ಭಯವಿಲ್ಲದೆ ಭಾಗವಹಿಸುತ್ತಿದ್ದಾರೆ.

    ಕೊರೊನಾ ಲೆಕ್ಕಿಸದ ಕಲಬುರಗಿ ಕಾಂಗ್ರೆಸ್ ಕಾರ್ಯಕರ್ತರು ಮುಗಿಬಿದ್ದು ಡಿಕೆಶಿಯವರಿಗೆ ಸನ್ಮಾನ ಮಾಡಿದ್ದಾರೆ. ಇದಕ್ಕೂ ಮೊದಲು ಬೆಂಗಳೂರಿನಿಂದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಡಿ.ಕೆ.ಶಿವಕುಮಾರ್ ಬಂದಿಳಿಯುತ್ತಿದ್ದಂತೆ ಮಂಗಳಮುಖಿಯರು ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ. ಈ ವೇಳೆ ಮಂಗಳಮುಖಿಯರು ಸಹ ನೂಕುನುಗ್ಗಲು ಮಾಡಿಕೊಂಡಿದ್ದಾರೆ. ಸಾಮಾಜಿಕ ಅಂತರ ಪಾಲಿಸಿಲ್ಲ.

  • ಕ್ವಾರಂಟೈನ್ ನಿಯಮ ಉಲ್ಲಂಘಿಸಬಾರದೆಂದು ಕರ್ನಾಟಕ-ಕೇರಳ ಗಡಿಯ ರಸ್ತೆಯಲ್ಲೇ ತಾಳಿ ಕಟ್ಟಿದ ವರ

    ಕ್ವಾರಂಟೈನ್ ನಿಯಮ ಉಲ್ಲಂಘಿಸಬಾರದೆಂದು ಕರ್ನಾಟಕ-ಕೇರಳ ಗಡಿಯ ರಸ್ತೆಯಲ್ಲೇ ತಾಳಿ ಕಟ್ಟಿದ ವರ

    ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿಯೇ ಇಂದು ಕೇರಳ ಮೂಲದ ಯುವಕ ಹಾಗೂ ಶಿವಮೊಗ್ಗ ಜಿಲ್ಲೆಯ ಯುವತಿ ವಿವಾಹವಾಗಿದ್ದಾರೆ.

    ಚಾಮರಾಜನಗರ-ಕೇರಳ ಗಡಿಯ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಕರ್ನಾಟಕ ಗಡಿ ಮೂಲೆಹೊಳೆಯಲ್ಲಿ ಮಧ್ಯಾಹ್ನ ಕೇರಳ ಮೂಲದ ಯುವಕನೊಂದಿಗೆ ಶಿವಮೊಗ್ಗ ಮೂಲದ ಯುವತಿ ಪರಸ್ಪರ ಹಾರ ಬದಲಾಯಿಸಿ, ವರ ತಾಳಿ ಕಟ್ಟುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊರೊನಾ ನಿಯಮ ಉಲ್ಲಂಘಿಸಬಾರದೆಂಬ ಉದ್ದೇಶದಿಂದ ದಂಪತಿ ಈ ನಿರ್ಧಾರ ಮಾಡಿದ್ದಾರೆ. ಅಲ್ಲದೆ ಅಂತರಾಜ್ಯ ಪ್ರಯಾಣ ಮಾಡಿದರೆ ಕ್ವಾರಂಟೈನ್ ಆಗಬೇಕು ಹೀಗಾಗಿ ಜೋಡಿ ಈ ಪ್ಲಾನ್ ಮಾಡಿದೆ.

    ಕಳೆದ ತಿಂಗಳು ಕೊರೊನಾ ನಡುವೆ ಇಬ್ಬರಿಗೂ ನಿಶ್ಚಿತಾರ್ಥವಾಗಿತ್ತು. ಇದೀಗ ಮನೆಯವರ ಸಮ್ಮತಿಯೊಂದಿಗೆ ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ, ರಸ್ತೆಯಲ್ಲೇ ವಿವಾಹವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಂಧು ಮಿತ್ರರು ಹಾಗೂ ಗಡಿಯಲ್ಲಿದ್ದ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.

  • ಡ್ರೋನ್ ಪ್ರತಾಪ್‍ ಪೊಲೀಸರ ವಶಕ್ಕೆ

    ಡ್ರೋನ್ ಪ್ರತಾಪ್‍ ಪೊಲೀಸರ ವಶಕ್ಕೆ

    – ಬೆಂಗಳೂರಿನ ಹೋಟೆಲ್‍ನಲ್ಲಿ ಕ್ವಾರಂಟೈನ್‍ಗೆ ಸೂಚನೆ
    – ಕ್ವಾರಂಟೈನ್ ಅವಧಿ ನಂತರ ಕಾನೂನು ಕ್ರಮ

    ಬೆಂಗಳೂರು: ಎಫ್‍ಐಆರ್ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಡ್ರೋನ್ ಪ್ರತಾಪ್‍ನನ್ನು ಬಿಬಿಎಂಪಿ ಅಧಿಕಾರಿಗಳು ಮತ್ತು ತಲಘಟ್ಟಪುರ ಪೊಲೀಸರು ಮೈಸೂರಿನಲ್ಲಿ ವಶಕ್ಕೆ ಪಡೆದಿದ್ದಾರೆ.

    ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಹಿನ್ನೆಲೆ ಡ್ರೋನ್ ಪ್ರತಾಪ್ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಡ್ರೋನ್ ಪ್ರತಾಪ್ ತಲೆಮರೆಸಿಕೊಂಡಿದ್ದ. ಅಧಿಕಾರಿಗಳು ಅವನ ಹುಡುಕಾಟದಲ್ಲಿ ತೊಡಗಿದ್ದರು. ಇದೀಗ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಪ್ರತಾಪ್‍ನನ್ನು ಮೈಸೂರಿನಿಂದ ಬೆಂಗಳೂರಿಗೆ ಕರೆತಂದಿದ್ದಾರೆ. ಕೆಂಗೇರಿ ಬಳಿಯ ಖಾಸಗಿ ಹೋಟೆಲ್‍ನಲ್ಲಿ ಸಾಂಸ್ಥಿಕ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ವಶಕ್ಕೂ ಮುನ್ನ ಮೈಸೂರಿನಲ್ಲಿ ಕ್ವಾರಂಟೈನ್ ಆಗುತ್ತೇನೆ ಎಂದು ಪ್ರತಾಪ್ ಪಟ್ಟು ಹಿಡಿದಿದ್ದ. ಆದರೆ ಬೆಂಗಳೂರಿನಲ್ಲೇ ಕ್ವಾರಂಟೈನ್ ಆಗುವಂತೆ ಸೂಚನೆ ನೀಡಿ ಅಧಿಕಾರಿಗಳು ಕರೆತಂದಿದ್ದಾರೆ.

    ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದಕ್ಕೆ ಎಫ್‍ಐಆರ್ ದಾಖಲಾಗುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪ್ರತಾಪ್ ನಾಪತ್ತೆಯಾಗಿದ್ದ. ಕೆಲ ದಿನಗಳ ಹಿಂದಷ್ಟೇ ಹೊರ ಜಿಲ್ಲೆಗೆ ಹೋಗಿದ್ದ ಪ್ರತಾಪ್, ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ. ಅಲ್ಲದೆ ಆತ ವಾಸವಿದ್ದ ಅಂಜನಾಪುರದ ಎಸ್‍ಎಸ್‍ಎಂಐಎಂಜಿ ವಿಂಡ್ ಪಾಲ್ ಅಪಾರ್ಟ್‍ಮೆಂಟ್‍ನಲ್ಲಿ ಕ್ವಾರಂಟೈನ್ ಆಗುವಂತೆ ಬಿಬಿಎಂಪಿ ಅಧಿಕಾರಿಗಳು ಸೂಚಿಸಿದ್ದರು. ಆದರೆ ಇದಾವುದನ್ನು ಲೆಕ್ಕಿಸದ ಪ್ರತಾಪ್, ಜುಲೈ 16ರಂದು ಹೊರಗೆ ಬಂದಿದ್ದ. ಹೀಗಾಗಿ ಪಶುವೈದ್ಯ ಹಾಗೂ ವಿಧಿ ವಿಜ್ಞಾನ ತಜ್ಞ ಡಾ.ಎಚ್.ಎಸ್.ಪ್ರಯಾಗ್ ತಲಘಟ್ಟಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಕೋವಿಡ್-19 ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದಕ್ಕೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದರು. ನಂತರ ಪ್ರತಾಪ್ ಮೈಸೂರಿನಲ್ಲಿರುವುದನ್ನು ತಿಳಿದು ವಿಶೇಷ ತಂಡ ಮೈಸೂರಿಗೆ ತೆರಳಿತ್ತು. ಇದೀಗ ಪ್ರತಾಪ್‍ನನ್ನು ಬೆಂಗಳೂರಿಗೆ ಕರೆ ತಂದಿದ್ದು, ಸಾಂಸ್ಥಿಕ ಕ್ವಾರಂಟೈಗೆ ಒಳಪಡಿಸಿದ್ದಾರೆ. ಕ್ವಾರಂಟೈನ್ ಅವಧಿ ಮುಗಿದ ನಂತರ ಕಾನೂನು ಕ್ರಮ ಕೈಗೊಳ್ಳುವ ಕುರಿತು ತಿಳಿಸಿದ್ದಾರೆ.

  • ಕ್ವಾರಂಟೈನ್ ನಿಯಮ ಸಡಿಲಿಕೆ- ಬೇಸರ ಹೊರಹಾಕಿದ ಶಿವಲಿಂಗೇಗೌಡ, ಬಾಲಕೃಷ್ಣ

    ಕ್ವಾರಂಟೈನ್ ನಿಯಮ ಸಡಿಲಿಕೆ- ಬೇಸರ ಹೊರಹಾಕಿದ ಶಿವಲಿಂಗೇಗೌಡ, ಬಾಲಕೃಷ್ಣ

    ಹಾಸನ: ಮಹಾರಾಷ್ಟ್ರದಿಂದ ಆಗಮಿಸುವವರು ಸೇರಿದಂತೆ ಹೊರರಾಜ್ಯದಿಂದ ಬರುವವರನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇಡುವ ಬಗ್ಗೆ ಸರ್ಕಾರ ನೀತಿ, ನಿಯಮಗಳನ್ನು ಸಡಿಲಿಸಿರುವ ಬಗ್ಗೆ ಶಾಸಕರಾದ ಶಿವಲಿಂಗೇಗೌಡ ಮತ್ತು ಬಾಲಕೃಷ್ಣ ಆತಂಕ ಹೊರಹಾಕಿದ್ದಾರೆ.

    ಈ ಬಗ್ಗೆ ಹಾಸನದಲ್ಲಿ ಮಾತನಾಡಿದ ಶಾಸಕ ಬಾಲಕೃಷ್ಣ, ಏಳು ದಿನಕ್ಕೆ ಇಳಿಸಿರುವುದು ಸೂಕ್ತವಲ್ಲ. ಮನೆಗೆ ಕಳುಹಿಸಿದವರಲ್ಲೂ ಪಾಸಿಟಿವ್ ಬರುವ ಸಂದರ್ಭ ಬಂದಿದೆ. ಅಷ್ಟೇ ಅಲ್ಲದೆ ರೋಗ ಲಕ್ಷಣ ಇಲ್ಲದಿದ್ದರೆ ಟೆಸ್ಟ್ ಮಾಡಬೇಡಿ ಎಂಬ ಹೊಸ ಪಾಲಿಸಿ ಆತಂಕ ತಂದಿದೆ. ಇದರಿಂದ ಹಳ್ಳಿಗಳಲ್ಲಿ ಆತಂಕ ಹೆಚ್ಚಾಗುತ್ತಿದೆ. ಕೆಲವೊಬ್ಬರಿಗೆ ರೋಗ ಲಕ್ಷಣ ಇಲ್ಲದಿದ್ದರೂ ಕೊರೊನಾ ಇದೆ. ಹೀಗಾಗಿ ಹೊರರಾಜ್ಯದಿಂದ ಬಂದವರಿಗೆ ಕನಿಷ್ಟ 14 ದಿನ ಕ್ವಾರಂಟೈನ್ ಮಾಡಬೇಕು ಎಂದು ಆಗ್ರಹಿಸಿದರು.

    ಇದೇ ವೇಳೆ ಮಾತನಾಡಿದ ಶಾಸಕ ಶಿವಲಿಂಗೇಗೌಡ, ಕೊರೊನಾ ಬಗ್ಗೆ ಏಕ್‍ದಂ ಈ ರೀತಿ ನಿರ್ಧಾರಕ್ಕೆ ಬರಬಾರದಿತ್ತು. ಕೊರೊನಾಗೆ ಈಗ ಹರಡೋ ಶಕ್ತಿ ಇಲ್ಲ ಅಂದ್ರೆ ಒಂದು ಹೇಳಿಕೆ ಕೊಟ್ಟುಬಿಡಿ. ಎಲ್ಲವನ್ನೂ ಓಪನ್ ಮಾಡಿಬಿಡಿ. ಇಷ್ಟೊಂದು ದಿನ ಯಾಕೆ ಕಷ್ಟ ಪಡಬೇಕಿತ್ತು. ಈ ವೈರಾಣುಗೆ ಹೆದರಿ ನಾವು ಇವರು ಹೇಳಿದಂತೆ ಕೇಳಿದ್ದೇವೆ. ಪ್ರಧಾನಿಗಳು ಅವರು ಮನೆಯಲ್ಲೇ ಮಾಸ್ಕ್ ಹಾಕಿದ್ದಾರೆ ಎಂಬ ರೀತಿ ತೋರಿಸಿದರು ಎಂದು ಕಿಡಿಕಾರಿದರು.

    ಈಗ ಸರ್ಕಾರ ಅದೊಂದು ಸಾಮಾನ್ಯ ವೈರಾಣು ಅದಕ್ಕೆ ಹೆದರುವ ಅವಶ್ಯಕತೆಯಿಲ್ಲ ಎಂಬ ಭಾವನೆ ವ್ಯಕ್ತಮಾಡುತ್ತಿದೆ. ಇನ್ನೂ ಸ್ವಲ್ಪ ದಿನ ಈ ಬಗ್ಗೆ ಎಚ್ಚರ ವಹಿಸಬೇಕಿತ್ತು. ಈಗ ಸಾಮಾಜಿಕ ಅಂತರ ಎಲ್ಲ ಮರೆತು ನೇರವಾಗಿ ಹೋಂ ಕ್ವಾರಂಟೈನ್‍ಗೆ ಕಳುಹಿಸಿದರೆ ಹೇಗೆ? ಶಾಲೆಗಳನ್ನು ಯಾವುದೇ ಕಾರಣಕ್ಕೂ ಓಪನ್ ಮಾಡಬಾರದು. ಈ ವಿಚಾರದಲ್ಲಿ ದುಡುಕಬಾರದು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.