* ಕ್ರೀಡಾಪಟುಗಳಿಗೆ ವಿವಿಧ ಇಲಾಖೆಗಳ ನೇಮಕಾತಿಯಲ್ಲಿ ಶೇ.2 ರಷ್ಟು ಹುದ್ದೆ ಮೀಸಲು.
* ಬೆಂಗಳೂರಿನ ಉತ್ತರ ತಾಲ್ಲೂಕಿನಲ್ಲಿ 70 ಎಕರೆ ಪ್ರದೇಶದಲ್ಲಿ ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಕ್ರೀಡಾ ನಗರ (Sports City) ಸ್ಥಾಪನೆ ಹಾಗೂ 4 ಅತ್ಯಾಧುನಿಕ ಕ್ರೀಡಾ ಸಂಕೀರ್ಣಗಳ ನಿರ್ಮಾಣ.
* ರಾಜ್ಯದ ವಿವಿಧ ಕ್ರೀಡಾ ಸಂಘ ಸಂಸ್ಥೆಗಳಿಗೆ 12 ಕೋಟಿ ರೂ. ಅನುದಾನ
* ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗಳಿಸುವ ಕ್ರೀಡಾಪಟುಗಳಿಗೆ 6 ಕೋಟಿ ರೂ., ಬೆಳ್ಳಿ ಪದಕ ಪಡೆಯುವ ಕ್ರೀಡಾಪಟುಗಳಿಗೆ 4 ಕೋಟಿ ರೂ. ಹಾಗೂ ಕಂಚಿನ ಪದಕ ಪಡೆಯುವ ಕ್ರೀಡಾಪಟುಗಳಿಗೆ 03 ಕೋಟಿ ರೂ. ಪ್ರೋತ್ಸಾಹಧನ ಘೋಷಣೆ.
• ಏಷ್ಯನ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ವಿಜೇತ ಕ್ರೀಡಾಪಟುಗಳಿಗೆ 35 ಲಕ್ಷ ರೂ., ಬೆಳ್ಳಿ ಪದಕ ವಿಜೇತ ಕ್ರೀಡಾಪಟುಗಳಿಗೆ 25 ಲಕ್ಷ ರೂ. ಹಾಗೂ ಕಂಚಿನ ಪದಕ ವಿಜೇತ ಕ್ರೀಡಾಪಟುಗಳಿಗೆ 15 ಲಕ್ಷ ರೂ. ಪ್ರೋತ್ಸಾಹಧನ ನೀಡಲು ಕ್ರಮ.
* ರಾಜ್ಯದ 14 ಸ್ಥಳಗಳಲ್ಲಿ ಮುಂದಿನ ಎರಡು ವರ್ಷದೊಳಗೆ 35 ಕೋಟಿ ರೂ. ವೆಚ್ಚದಲ್ಲಿ ಮಹಿಳಾ ಕ್ರೀಡಾ ವಸತಿ ನಿಲಯ, ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾ ವಸತಿ ನಿಲಯ ಕಟ್ಟಡ ನಿರ್ಮಾಣ ಹಾಗೂ 10 ಕೋಟಿ ರೂ. ವೆಚ್ಚದಲ್ಲಿ ಬಳ್ಳಾರಿಯಲ್ಲಿ ಕ್ರೀಡಾ ವಸತಿ ನಿಲಯದ ಉನ್ನತೀಕರಣ ಹಾಗೂ ಕ್ರೀಡಾ ಸೌಕರ್ಯಗಳ ಅಭಿವೃದ್ಧಿಗೆ ಕ್ರಮ.
ಚಿಕ್ಕಬಳ್ಳಾಪುರ: ತಾಲೂಕಿನ ಮುದ್ದೇನಹಳ್ಳಿಯ (Muddenahalli) ಶ್ರೀ ಸತ್ಯಸಾಯಿ ಗ್ರಾಮದಲ್ಲಿ ಗುರುವಾರ ಅಂತಾರಾಷ್ಟ್ರೀಯ ಕ್ರಿಕೆಟ್ ದಿಗ್ಗಜರ ಸಮಾಗಮ ಆಗಲಿದೆ.
ಸತ್ಯಸಾಯಿ ಗ್ರಾಮದಲ್ಲಿ ನಿರ್ಮಾಣವಾಗಿರುವ ಅಂತರಾಷ್ಟ್ರೀಯ ಮಟ್ಟದ ಸಾಯಿಕೃಷ್ಣನ್ ಕ್ರಿಕೆಟ್ ಸ್ಟೇಡಿಯಂನಲ್ಲಿ (Saikrishnan Cricket Stadium) ಗುರುವಾರ (ಜ.18) ಟಿ20 ಕ್ರಿಕೆಟ್ (T20 Cricket) ಟೂರ್ನಿಯನ್ನು ಆಯೋಜನೆ ಮಾಡಲಾಗಿದೆ. ಈ ಸೌಹಾರ್ದಯುತ ಪಂದ್ಯಾವಳಿಯಲ್ಲಿ 8 ದೇಶಗಳ 24 ದಿಗ್ಗಜ ಆಟಗಾರರು ಎರಡು ತಂಡಗಳಾಗಿ ಪಂದ್ಯವಾಡಲಿದ್ದಾರೆ. ಭಾರತದ ಮೂಲ ಧ್ಯೇಯ ವ್ಯಾಕ್ಯ ವಸುಧೈವ ಕುಟುಂಬಕಂ ಎಂಬ ಮಾತಿಗೆ ಪ್ರತಿರೂಪವೆಂಬಂತೆ ಒಂದು ಪ್ರಪಂಚ ಒಂದು ಕುಟುಂಬ ಕಪ್ ಎಂಬ ಹೆಸರಿನಡಿ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಕ್ಲೀನ್ ಸ್ವೀಪ್ ಉತ್ಸಾಹದಲ್ಲಿ ಭಾರತ – ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಂದು ಪಂದ್ಯ ವೀಕ್ಷಿಸುವ ಕ್ರಿಕೆಟ್ ಫ್ಯಾನ್ಸ್ಗೆ ಗುಡ್ನ್ಯೂಸ್
ನೂತನ ಹೊಸ ಸಾಯಿಕೃಷ್ಣನ್ ಸ್ಟೇಡಿಯಂ ಉದ್ಘಾಟನಾ ಅಂಗವಾಗಿ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ. ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ನೇತೃತ್ವದಲ್ಲಿ ಪಂದ್ಯಾವಳಿಗೆ ಬೇಕಾದ ಎಲ್ಲಾ ತಯಾರಿಗಳು ನಡೆದಿವೆ. ಇನ್ನೂ ಈ ಒಂದು ಪಂದ್ಯಾವಳಿಯಲ್ಲಿ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್, ಇರ್ಫಾನ್ ಪಠಾಣ್, ಸನತ್ ಜಯಸೂರ್ಯ, ಮುತ್ತಯ್ಯ ಮುರಳೀಧರನ್, ಚಮಿಂಡಾ ವಾಸ್ ಸೇರಿದಂತೆ 24 ಮಂದಿ ಮಾಜಿ ಕ್ರಿಕೆಟ್ ಆಟಗಾರರು ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ vs ಅಫ್ಘಾನಿಸ್ತಾನ ಮೂರನೇ ಟಿ20 – ಧೋನಿ ದಾಖಲೆ ಮುರಿತಾರಾ ರೋಹಿತ್?
ಗುರುವಾರ ಬೆಳಗ್ಗೆ 09:00 ಗಂಟೆಗೆ ಸ್ಟೇಡಿಯಂನ ಉದ್ಘಾಟನೆಯಾಗಲಿದ್ದು, 10 ಗಂಟೆಗೆ ಟಾಸ್ ನಡೆಯಲಿದೆ. 10:30ರಿಂದ 12:30ರ ವರೆಗೆ ಮೊದಲ ಇನ್ನಿಂಗ್ಸ್ ಹಾಗೂ 1 ಗಂಟೆಯಿಂದ 3 ಗಂಟೆಯವೆರಗೆ ಸೆಕೆಂಡ್ ಇನ್ನಿಂಗ್ಸ್ ನಡೆಯಲಿದೆ. ತದನಂತರ 4 ಗಂಟೆಗೆ ಸಾಯಿ ಸಿಂಪೋನಿ ಆರ್ಕೆಸ್ಟ್ರಾ ತಂಡದಿಂದ ವಾದ್ಯಗೋಷ್ಠಿ ನಡೆಯಲಿದ್ದು, ಕಪ್ ಬಹುಮಾನ ವಿತರಣೆ ನಂತರ ಕಾರ್ಯಕ್ರಮ ಮುಕ್ತಾಯವಾಗಲಿದೆ. ಇದನ್ನೂ ಓದಿ: ಕೂಚ್ ಬೆಹಾರ್ ಟ್ರೋಫಿ ಫೈನಲ್ನಲ್ಲಿ ಯುವಿ ದಾಖಲೆ ಮುರಿದ ಕರ್ನಾಟಕದ ಓಪನರ್ ಪ್ರಖರ್ ಚತುರ್ವೇದಿ
ಇನ್ನೂ ಈ ಪಂದ್ಯಾವಳಿಗೆ ಕೇವಲ ಆಮಂತ್ರಿತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, 10 ಸಾವಿರ ಮಂದಿಗೆ ಅಮಂತ್ರಣ ನೀಡಲಾಗಿದೆ ಎನ್ನಲಾಗಿದೆ. ಉಳಿದಂತೆ ಸತ್ಯಸಾಯಿ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು, ಉದ್ಯೋಗಿಗಳು, ಭಕ್ತರು ಭಾಗಿಯಾಗಲಿದ್ದಾರೆ. ಇನ್ನೂ ಪಂದ್ಯಾವಳಿಯ ನೇರಪ್ರಸಾರವನ್ನು ಟಿವಿ ಮೂಲಕ ವೀಕ್ಷಣೆ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಇದನ್ನೂ ಓದಿ: ಯಶಸ್ಸಿನ ಶ್ರೇಯಸ್ಸು ಮಹಿ ಅಣ್ಣನಿಗೆ, CSKಗೆ ಸಲ್ಲಬೇಕು – ಚೆನ್ನೈಗೆ ಕ್ರೆಡಿಟ್ ಕೊಟ್ಟ ಶಿವಂ ದುಬೆ
ಮಡಿಕೇರಿ: ಹಾಂಗ್ಕಾಂಗ್ನಲ್ಲಿ ಇದೇ ಜನವರಿ 21ರಂದು ನಡೆಯಲಿರುವ 19ನೇ ಏಷ್ಯನ್ ಮ್ಯಾರಥಾನ್ ಚಾಂಪಿಯನ್ಶಿಪ್ನಲ್ಲಿ (Asian Marathon Championships) ಭಾರತವನ್ನು ಕೊಡಗಿನ ಟಿ. ಶೆಟ್ಟಿಗೇರಿಯ ಬಿ.ಬೆಳ್ಳಿಯಪ್ಪ ಅವರು ಪ್ರತಿನಿಧಿಸಲಿದ್ದಾರೆ.
ಕಳೆದ ವರ್ಷ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಮ್ಯಾರಥಾನ್ನಲ್ಲಿ (National Marathon) ಬೆಳ್ಳಿಯಪ್ಪ ಬೆಳ್ಳಿ ಪದಕ ಪಡೆದು ಏಷ್ಯನ್ ಮ್ಯಾರಥಾನ್ ಚಾಂಪಿಯನ್ ಷಿಪ್ನಲ್ಲಿ ಭಾಗವಹಿಸಲು ಅರ್ಹತೆ ಪಡೆದುಕೊಂಡಿದ್ದರು. ಭಾರತೀಯ ಸೇನೆಯಲ್ಲಿರುವ ಈವರು ಸ್ಪೋರ್ಟ್ಸ್ ಇನ್ಸ್ಟಿಟ್ಯೂಟ್ನಲ್ಲಿದ್ದು ಊಟಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಮುಂಬೈ: ವಿಶ್ವ ಕ್ರಿಕೆಟ್ನಲ್ಲಿ ಸದ್ದು ಮಾಡಿ ಸುದ್ದಿಯಾಗಿರುವ ಐಪಿಎಲ್ ಬ್ರ್ಯಾಂಡ್ ಮೌಲ್ಯ (IPL Brand Value) ಭಾರೀ ಏರಿಕೆಯಾಗಿದೆ. 2023ರ ಆವೃತ್ತಿಯ ನಂತರ 23% ಏರಿಕೆಯಾಗಿ ಈಗ 10.7 ಶತಕೋಟಿ ಡಾಲರ್ಗೆ (ಅಂದಾಜು 89,232 ಕೋಟಿ ರೂ.) ಏರಿಕೆಯಾಗಿದೆ.
ಬ್ರ್ಯಾಂಡ್ ಕನ್ಸಲ್ಟೆನ್ಸಿ ಕಂಪನಿ ಬ್ರ್ಯಾಂಡ್ ಫೈನಾನ್ಸ್ ವರದಿ ಪ್ರಕಾರ 2008ರಲ್ಲಿ ಐಪಿಎಲ್ ಆರಂಭಗೊಂಡ ಬಳಿಕ ಅದರ ಮೌಲ್ಯ 433% ಏರಿಕೆಯಾಗಿದೆ.
ಸ್ಟೇಡಿಯಂ ಸಾಮರ್ಥ್ಯ, ಇಂಟರ್ನೆಟ್ನಲ್ಲಿ ಐಪಿಎಲ್ ವೀಕ್ಷಣೆ, ತಂಡಗಳ ಮೀಡಿಯಾ ಪ್ರಾಯೋಜಕತ್ವ ಇತ್ಯಾದಿ ವಿಚಾರಗಳನ್ನು ಅಧ್ಯಯನ ಮಾಡಿ ಬ್ರ್ಯಾಂಡ್ ಮೌಲ್ಯಮಾಪನ ಮಾಡಲಾಗಿದೆ.
ತಂಡಗಳ ಪೈಕಿ ಮುಂಬೈ ಇಂಡಿಯನ್ಸ್ (MI) ಮೊದಲ ಸ್ಥಾನದಲ್ಲಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ (CSK) ಎರಡನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ಮೌಲ್ಯ 87 ದಶಲಕ್ಷ ಡಾಲರ್ (725 ಕೋಟಿ ರೂ.), ಚೆನ್ನೈ ಸೂಪರ್ ಕಿಂಗ್ಸ್ 81 ದಶಲಕ್ಷ ಡಾಲರ್ (674 ಕೋಟಿ ರೂ.) ಇದೆ.
ಕೋಲ್ಕತ್ತಾ ನೈಟ್ ರೈಡರ್ಸ್ (KKR) 78.6 ದಶಲಕ್ಷ ಡಾಲರ್ (ಅಂದಾಜು 655 ಕೋಟಿ ರೂ.) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 69.8 ದಶಲಕ್ಷ ಡಾಲರ್ (581 ಕೋಟಿ ರೂ.) ಬ್ರ್ಯಾಂಡ್ ಮೌಲ್ಯವನ್ನು ಹೊಂದಿದೆ.
ಮಹಿಳಾ ಪ್ರೀಮಿಯರ್ ಲೀಗ್ (WPL) ಪರಿಚಯಿಸಿದ ನಂತರ ತಂಡಗಳ ಜೊತೆ ಐಪಿಎಲ್ ಬ್ರ್ಯಾಂಡ್ ಮೌಲ್ಯ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಅರ್ಜುನ ಪ್ರಶಸ್ತಿಗೆ ಶಮಿ ಹೆಸರು ಶಿಫಾರಸು
ಯಾವ ತಂಡ ಮೌಲ್ಯ ಎಷ್ಟು?
1. ಮುಂಬೈ ಇಂಡಿಯನ್ಸ್ – 725 ಕೋಟಿ ರೂ.
2. ಚೆನ್ನೈ ಸೂಪರ್ ಕಿಂಗ್ಸ್ – 674 ಕೋಟಿ ರೂ.
3. ಕೋಲ್ಕತ್ತಾ ನೈಟ್ ರೈಡರ್ಸ್ – 655 ಕೋಟಿ ರೂ.
4. ರಾಯಲ್ ಚಾಲೆಂಜರ್ಸ್ ಬೆಂಗಳೂರು – 581 ಕೋಟಿ ರೂ.
5. ಗುಜರಾತ್ ಟೈಟಾನ್ಸ್ – 545 ಕೋಟಿ ರೂ.
6. ಡೆಲ್ಲಿ ಕ್ಯಾಪಿಟಲ್ಸ್ – 534 ಕೋಟಿ ರೂ.
7. ರಾಜಸ್ಥಾನ ರಾಯಲ್ಸ್ – 520 ಕೋಟಿ ರೂ.
8 ಸನ್ರೈಸರ್ಸ್ ಹೈದರಾಬಾದ್- 401 ಕೋಟಿ ರೂ.
9. ಲಕ್ನೋ ಸೂಪರ್ ಜೈಂಟ್ಸ್ – 392 ಕೋಟಿ ರೂ.
10. ಪಂಜಾಬ್ ಕಿಂಗ್ಸ್ – 377 ಕೋಟಿ ರೂ.
ಹೈದರಾಬಾದ್: ವಿಶ್ವಕಪ್ ಟೂರ್ನಿಯಲ್ಲಿ (ICC World Cup) ನೆದರ್ಲ್ಯಾಂಡ್ (Netherlands) ವಿರುದ್ಧ 99 ರನ್ಗಳ ಭರ್ಜರಿ ಜಯ ಸಾಧಿಸಿದ ನ್ಯೂಜಿಲೆಂಡ್ (New Zealand) ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 322 ರನ್ ಗಳಿಸಿತು. ನೆದರ್ಲ್ಯಾಂಡ್ ಹೋರಾಟ ನಡೆಸಿ ಕೊನೆಗೆ 46.3 ಓವರ್ಗಳಲ್ಲಿ 223 ರನ್ಗಳಿಗೆ ಸರ್ವಪತನ ಕಂಡಿತು. ಇದನ್ನೂ ಓದಿ: ಭಾರತ, ಹಿಂದೂ ಧರ್ಮ ಅವಹೇಳನ – ಪಾಕ್ ನಿರೂಪಕಿ ಗಡೀಪಾರು
ನ್ಯೂಜಿಲೆಂಡ್ ಪರವಾಗಿ ವಿಲ್ ಯಂಗ್ 70 ರನ್ (80 ಎಸೆತ, 7 ಬೌಂಡರಿ, 2 ಸಿಕ್ಸರ್), ರಚಿನ್ ರವೀಂದ್ರ 51 ರನ್(51 ಎಸೆತ, 3 ಬೌಂಡರಿ, 1 ಸಿಕ್ಸರ್) ಡ್ಯಾರೆಲ್ ಮಿಷೆಲ್ 48 ರನ್ (47 ಎಸೆತ, 5 ಬೌಂಡರಿ, 2 ಸಿಕ್ಸರ್), ನಾಯಕ ಟಾಮ್ ಲ್ಯಾಥಮ್ 53 ರನ್ (46 ಎಸೆತ, 6 ಬೌಂಡರಿ, 1 ಸಿಕ್ಸರ್) ಕೊನೆಯಲ್ಲಿ ಮಿಚೆಲ್ ಸ್ಯಾಂಟ್ನರ್ ಔಟಾಗದೇ 36 ರನ್ (17 ಎಸೆತ, 3 ಬೌಂಡರಿ, 2 ಸಿಕ್ಸರ್) ಹೊಡೆದ ಪರಿಣಾಮ ನ್ಯೂಜಿಲೆಂಡ್ ಮೊತ್ತ 300 ರನ್ಗಳ ಗಡಿ ದಾಟಿತು.
Netherlands players reading paper of plans for each New Zealand batsman.
This team is amazing, and everyone is underrating them but they have some quality players to execute this. Power of data analytics 👏#NZvsNEDpic.twitter.com/nru4CjIb0W
ನೆದರ್ಲ್ಯಾಂಡ್ ಪರವಾಗಿ ಕಾಲಿನ್ ಅಕರ್ಮನ್ 69 ರನ್ (73 ಎಸೆತ, 5 ಬೌಂಡರಿ), ಸ್ಕಾಟ್ ಎಡ್ವರ್ಡ್ಸ್ 30 ರನ್ (27 ಎಸೆತ, 2 ಬೌಂಡರಿ, 1 ಸಿಕ್ಸರ್), ಸೈಬ್ರಾಂಡ್ ಎಂಗಲ್ಬ್ರೆಕ್ಟ್ 29 ರನ್(34 ಎಸೆತ, 3 ಬೌಂಡರಿ) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು. ಚೆಲ್ ಸ್ಯಾಂಟ್ನರ್ 5 ವಿಕೆಟ್, ಮ್ಯಾಟ್ ಹೆನ್ತಿ 3 ವಿಕೆಟ್, ರಚಿನ್ ರವೀಂದ್ರ 1 ವಿಕೆಟ್ ಪಡೆದರು.
ಪೇಪರ್ ತಂದ ಡಚ್ಚರು:
ಈ ಪಂದ್ಯವನ್ನು ಗೆಲ್ಲಬೇಕೆಂದು ನೆದರ್ಲ್ಯಾಂಡ್ ಆಟಗಾರರು ಫೀಲ್ಡಿಂಗ್ ವೇಳೆ ಪೇಪರ್ ನೋಡಿಕೊಂಡು ನ್ಯೂಜಿಲೆಂಡ್ ಬ್ಯಾಟ್ಸ್ಮನ್ಗಳ ವಿರುದ್ಧ ಗೇಮ್ ಪ್ಲ್ಯಾನ್ ಮಾಡುತ್ತಿದ್ದರು. ಪಂದ್ಯದ ಮೇಲಿನ ಡಚ್ ಆಟಗಾರರ ಈ ಶ್ರದ್ಧೆಯ ಬಗ್ಗೆ ಕ್ರಿಕೆಟ್ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕಲಬುರಗಿ (ಅಫಜಲಪುರ): ಥೈಲ್ಯಾಂಡ್ (Thailand) ರಾಜಧಾನಿ ಬ್ಯಾಂಕಾಕ್ನ ಮನುಡ್ಟಿಡ್ಲೋರ್ ಅಕಾಡೆಮಿ ವತಿಯಿಂದ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಸ್ಕೇಟಿಂಗ್ (International Skating Competition) ಸ್ಪರ್ಧೆಯಲ್ಲಿ ಭಾರತದಿಂದ ಪ್ರತಿನಿಧಿಸಿದ್ದ ಕಲಬುರಗಿ ಜಿಲ್ಲೆಯ ಬಾಲಕ ಚಂದ್ರಕಾಂತ ಬಡದಾಳ ಚಿನ್ನದ ಪದಕ ಗೆದ್ದು ಕೀರ್ತಿ ಪತಾಕೆ ಹಾರಿಸಿದ್ದಾರೆ.
ಕಲಬುರಗಿ (Kalabiragi) ಜಿಲ್ಲೆಯ ಅಫಜಲಪುರ ತಾಲೂಕಿನ ಉಡಚಾಣಹಟ್ಟಿ ಗ್ರಾಮದ ಬಾಲಕ ಇದೀಗ ದೇಶಕ್ಕೆ ಕೀರ್ತಿ ತಂದಿದ್ದಾರೆ. ಬಾಲಕನ ತಂದೆ ರಾಜು ಬಡದಾಳ ಮಹಾರಾಷ್ಟ್ರದ ಪುಣೆ ಪಟ್ಟಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಅಲ್ಲಿಯೇ ವಾಸವಾಗಿದ್ದಾರೆ. ಮನೆಯಲ್ಲಿ ಬಡತನವಿದ್ದರೂ ಮಗನಿಗೆ ಉತ್ತಮ ಶಿಕ್ಷಣ ಸಿಗಬೇಕೆಂಬ ಹಂಬಲದಿಂದ ಪೋಷಕರು ಸ್ಥಳೀಯ ಖಾಸಗಿ ಶಾಲೆಯೊಂದಕ್ಕೆ ಸೇರಿಸಿದ್ದರು. ಅಲ್ಲಿ ಚಂದ್ರಕಾಂತನ ಕ್ರೀಡಾಪ್ರತಿಭೆ ಗುರುತಿಸಿದ ಶಿಕ್ಷಕರು ಸ್ಕೇಟಿಂಗ್ ತರಬೇತುದಾರ ಅಬ್ದುಲ್ ಶೇಖ್ ಬಳಿ ತರಬೇತಿ ಕೊಡಿಸಿದ್ದಾರೆ.
ಕಳೆದ 2023ರ ಮೇ 23 ರಿಂದ 31ರ ವರೆಗೆ ಬೆಳಗಾವಿಯ ಶಿವಗಂಗಾ ರೋಲರ್ ಸ್ಕೇಟಿಂಗ್ ಕ್ಲಬ್ ವತಿಯಿಂದ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಚಂದ್ರಕಾಂತ ಕೇವಲ 11.21 ಸೆಕೆಂಡುಗಳಲ್ಲೇ 100 ಮೀಟರ್ ಕ್ರಮಿಸಿ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದರು. ಇದರಿಂದ ಬ್ಯಾಂಕಾಕ್ನ ಅಂತಾರಾಷ್ಟ್ರೀಯ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಇದನ್ನೂ ಓದಿ: World Cup 2023: 102 ರನ್ ಜಯದೊಂದಿಗೆ ದಕ್ಷಿಣ ಆಫ್ರಿಕಾ ಶುಭಾರಂಭ – ಹೋರಾಡಿ ಸೋತ ಲಂಕಾ
ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆಯೂ ಇಲ್ಲದ ಪುಟ್ಟ ಗ್ರಾಮದಿಂದ ಬಂದ 5ನೇ ತರಗತಿ ಬಾಲಕ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ಅಕ್ಟೋಬರ್ 1ರಂದು ಬ್ಯಾಂಕಾಕ್ ನಲ್ಲಿ ನಡೆದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾರತ, ಹಾಂಕಾಂಗ್, ಮಲೇಷ್ಯಾ, ಥೈಲ್ಯಾಂಡ್ ಸೇರಿದಂತೆ ಅನೇಕ ದೇಶಗಳಿಂದ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಆದ್ರೆ ಪ್ರತಿಸ್ಪರ್ಧಿಗಳನ್ನು ಸಮರ್ಥವಾಗಿ ಎದುರಿಸಿದ ಚಂದ್ರಕಾಂತ ಬಡದಾಳ 1,000 ಮೀಟರ್ ಸ್ಪೀಡ್ ರಿಂಗ್ ಸ್ಕೇಟಿಂಗ್ನಲ್ಲಿ ಚಿನ್ನದ ಪದಕ, 500 ಮೀಟರ್ ಸ್ಪೀಡ್ ರಿಂಗ್ ಸ್ಕೇಟಿಂಗ್ನಲ್ಲಿ ಕಂಚಿನ ಪದಕ, 300 ಮೀಟರ್ ಸ್ಪೀಡ್ ರಿಂಗ್ ಸ್ಕೇಟಿಂಗ್ನಲ್ಲಿ ಕಂಚಿನ ಪದಕ, ರಿಲೇ ಓಟದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಕೀರ್ತಿ ತಂದಿದ್ದಾರೆ. ಬಾಲಕನ ಪ್ರತಿಭೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹ್ಯಾಂಗ್ಝೌ:ಚೀನಾದಲ್ಲಿ (China) ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ (Asian Games) ಭಾರತ (India) ದಾಖಲೆ ಬರೆದಿದೆ. ಒಟ್ಟು 71 ಪದಕಗಳನ್ನು ಗೆಲ್ಲುವ ಮೂಲಕ 2018ರ ದಾಖಲೆಯನ್ನು ಬ್ರೇಕ್ ಮಾಡಿದೆ.
ಇಂಡೋನೇಷ್ಯಾದಲ್ಲಿ ನಡೆದ ಈ ಹಿಂದಿನ ಏಷ್ಯನ್ ಗೇಮ್ಸ್ನಲ್ಲಿ ಭಾರತ 16 ಚಿನ್ನ, 23 ಬೆಳ್ಳಿ, 31 ಕಂಚಿನ ಪದಕ ಸೇರಿ ಒಟ್ಟು 70 ಪದಕಗಳನ್ನು ಗೆದ್ದುಕೊಂಡಿತ್ತು. ಇದು ಇಲ್ಲಿಯವರೆಗೆ ನಡೆದಿದ್ದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಅತ್ಯುತ್ತಮ ಸಾಧನೆಯಾಗಿತ್ತು. ಆದರೆ ಭಾರತ ಇಂದು ಈ ಗಡಿಯನ್ನು ದಾಟಿದ್ದು ಇನ್ನೂ 4 ದಿನ ಕ್ರೀಡಾಕೂಟ ನಡೆಯಲಿರುವ ಕಾರಣ ಹಲವು ಪದಕಗಳು ಬರುವ ನಿರೀಕ್ಷೆಯಿದೆ.
🇮🇳🔥 𝗛𝗜𝗦𝗧𝗢𝗥𝗬 𝗛𝗔𝗦 𝗕𝗘𝗘𝗡 𝗖𝗥𝗘𝗔𝗧𝗘𝗗! Hangzhou 2022 now stands as India's most triumphant Asian Games in history.
Congratulations to all the athletes and the dedicated support teams behind them! You have all made India proud! 💙
ಇಲ್ಲಿಯವರೆಗೆ ಚೀನಾ 164 ಚಿನ್ನ, 90 ಬೆಳ್ಳಿ, 46 ಕಂಚು ಸೇರಿ 300 ಪದಕ ಗೆಲ್ಲುವ ಮೂಲಕ ಮೊದಲ ಸ್ಥಾನ ಪಡೆದರೆ 33 ಚಿನ್ನ, 48 ಬೆಳ್ಳಿ, 50 ಕಂಚು ಸೇರಿ 131 ಪದಕ ಗೆದ್ದಿರುವ ಜಪಾನ್ ಎರಡನೇ ಸ್ಥಾನದಲ್ಲಿದೆ. 32 ಚಿನ್ನ, 43 ಬೆಳ್ಳಿ, 65 ಕಂಚಿನ ಪದಕ ಸೇರಿ ಒಟ್ಟು 140 ಪದಕ ಗೆದ್ದಿರುವ ದಕ್ಷಿಣ ಕೊರಿಯಾ ಮೂರನೇ ಸ್ಥಾನದಲ್ಲಿ ಮುಂದುವರಿದಿದೆ.
ಇಂದು ನಡೆದ ಮಿಶ್ರ ಅರ್ಚರಿ ಸ್ಪರ್ಧೆಯಲ್ಲಿ ಜ್ಯೋತಿ ವೆನ್ನಮ್ ಮತ್ತು ಓಜಸ್ ಡಿಯೋಟಾಲೆ ಚಿನ್ನ ಗೆದ್ದಿದ್ದಾರೆ. ಮಂಜು ರಾಣಿ ಮತ್ತು ರಾಮ್ ಬಾಬೂ ಅವರಿದ್ದ ಮಿಶ್ರ ತಂಡ 35 ಕಿಮೀ ನಡಿಗೆ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದರು.
ಹ್ಯಾಂಗ್ಝೌ: ಚೀನಾದಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್ನಲ್ಲಿ (Asian Games) ಪುರುಷರ 10 ಮೀಟರ್ ಏರ್ ಪಿಸ್ತೂಲ್ (Men’s 10m Air Pistol Team) ಸ್ಪರ್ಧೆಯಲ್ಲಿ ಭಾರತ (India) ತಂಡ ಚಿನ್ನದ ಪದಕ (Gold Medal) ಗೆದ್ದಿದೆ.
ಸರಬ್ಜೋತ್ ಸಿಂಗ್, ಅರ್ಜುನ್ ಸಿಂಗ್ ಚೀಮಾ ಮತ್ತು ಶಿವ ನರ್ವಾಲ್ ತಂಡ 1734 ಅಂಕಗಳಿಸಿ ಮೊದಲ ಸ್ಥಾನ ಪಡೆಯಿತು. ಚೀನಾದ 1733 ಅಂಕ ಪಡೆದರೆ ವಿಯೆಟ್ನಾಂನ 1730 ಅಂಕಗಳಿಸಿತು.
ಭಾರತ 6 ಚಿನ್ನ, 8 ಬೆಳ್ಳಿ, 10 ಕಂಚಿನ ಪದಕವನ್ನು ಗೆಲ್ಲುವುದರೊಂದಿಗೆ ಒಟ್ಟು 24 ಪದಕವನ್ನು ಪಡೆಯುವುದರ ಮೂಲಕ ಪದಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. 80 ಚಿನ್ನದ ಪದಕ ಸೇರಿ ಒಟ್ಟು145 ಪದಕ ಗೆದ್ದಿರುವ ಚೀನಾ ಮೊದಲ ಸ್ಥಾನದಲ್ಲಿದ್ದರೆ 19 ಚಿನ್ನ ಸೇರಿ ಒಟ್ಟು 70 ಪದಕ ಗೆದ್ದಿರುವ ದಕ್ಷಿಣ ಕೊರಿಯಾ ಎರಡನೇ ಸ್ಥಾನದಲ್ಲಿದೆ.
ಬೆಳಗಾವಿ: ಬಡ್ಡಿಗೆ ಸಾಲ ಪಡೆದು ಜರ್ಮನಿಯಲ್ಲಿ (Germany) ನಡೆದ 8ನೇ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ (World Dwarf Games) ಭಾಗವಹಿಸಿದ್ದ ಬೆಳಗಾವಿಯ (Belagavi) ಯುವತಿ ಮೂರು ಪದಕ ಗೆದ್ದು ವಿಶೇಷ ಸಾಧನೆ ಮಾಡಿದ್ದಾರೆ.
ಹೌದು. ಗೋಕಾಕ್ ತಾಲೂಕಿನ ಚಿಕ್ಕನಂದಿ ಗ್ರಾಮದ ಯುವತಿ ಮಂಜುಳಾ ಶಿವಾನಂದ ಗೊರಗುದ್ದಿ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಸಾಧನೆ ಮಾಡಿ ತೋರಿಸಿದ್ದಾರೆ. ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ, ಚಕ್ರ ಎಸೆತದಲ್ಲಿ 2ನೇ ಸ್ಥಾನ ಪಡೆದು ಬೆಳ್ಳಿ ಪದಕ ಹಾಗೂ ಜಾವೆಲಿನ್ ಥ್ರೋದಲ್ಲಿ (Javelin Throw) 3ನೇ ಸ್ಥಾನ ಪಡೆದು ಕಂಚಿನ ಪದಕ ಬಾಚಿಕೊಂಡಿದ್ದಾರೆ. ಇದನ್ನೂ ಓದಿ: ಹೊಸ ಕೋಚ್ ನೇಮಿಸಿದ RCB – ಮುಂದಿನ ಸಲ ಕಪ್ ನಮ್ದೆ ಅಂತಿದ್ದಾರೆ ಫ್ಯಾನ್ಸ್
ಜುಲೈ 28ರಿಂದ ಆಗಸ್ಟ್ 4ರ ವರೆಗೆ ಆಯೋಜನೆಗೊಂಡಿದ್ದ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ತನ್ನ ಸಾಮರ್ಥ್ಯ ಸಾಬೀತು ಮಾಡಿರುವ ಮಂಜುಳಾ ಅವರು ಮೂರು ದಿನಗಳಲ್ಲಿ ಪದಕಗಳೊಂದಿಗೆ ತವರಿಗೆ ಮರಳಲಿದ್ದಾರೆ. ಸುಮಾರು 2.5 ಲಕ್ಷ ರೂ. ಹಣ ಹೊಂದಿಸಿ ದೂರದ ಜರ್ಮನಿಗೆ ಹೋಗಿದ್ದ ಮಂಜುಳಾ ಪದಕ ಗೆಲ್ಲುವ ತನ್ನ ಕನಸು-ನನಸು ಮಾಡಿಕೊಳ್ಳುವ ಮೂಲಕ ವಿದೇಶದಲ್ಲೂ ಬೆಳಗಾವಿ ಜಿಲ್ಲೆಯ ಕೀರ್ತಿ ಹೆಚ್ಚುವಂತೆ ಮಾಡಿದ್ದಾರೆ. ಇದನ್ನೂ ಓದಿ: T20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಸೋಲಿಗೆ ಕಾರಣವಾಗಿದ್ದ ಇಂಗ್ಲೆಂಡ್ ಬ್ಯಾಟರ್ ನಿವೃತ್ತಿ ಘೋಷಣೆ
ಈ ಬಗ್ಗೆ ವೀಡಿಯೋದಲ್ಲಿ ಹೇಳಿಕೆ ನೀಡಿರುವ ಮಂಜುಳಾ, ವಿದೇಶಿ ನೆಲದಲ್ಲಿ ಮೂರು ಪದಕ ಗೆದ್ದಿರುವುದು ತುಂಬಾ ಖುಷಿ ಕೊಟ್ಟಿದೆ. ಈ ಪದಕಗಳನ್ನ ಭಾರತ ದೇಶಕ್ಕೆ ಮತ್ತು ನನ್ನ ತಾಯಿಗೆ ಅರ್ಪಿಸುತ್ತೇನೆ. ಮುಂದೆ ಇನ್ನೂ ಹೆಚ್ಚಿನ ಸಾಧನೆ ಮಾಡುವ ಹುಮ್ಮಸ್ಸು ನನಗೆ ಬಂದಿದೆ ಎಂದಿದ್ದಾರೆ.
ಒಟ್ಟಿನಲ್ಲಿ ಸಾಧಿಸುವ ಛಲವೊಂದಿದ್ದರೆ ಏನೂ ಬೇಕಾದ್ರೂ ಮಾಡಬಹುದು ಅನ್ನೋದಕ್ಕೆ ಮಂಜುಳಾ ಉದಾಹರಣೆಯಾಗಿದ್ದಾರೆ.
ಫ್ರಾನ್ಸ್ ಖ್ಯಾತ ಫುಟ್ಬಾಲ್ ಆಟಗಾರ ಕಿಲಿಯಾನ್ ಎಂಬಾಪೆಗೆ (Kylian Mbappe) ಇತ್ತೀಚೆಗೆ ಸೌದಿ ಅರೇಬಿಯಾದ (Saudi Arabia) ಫುಟ್ಬಾಲ್ ಕ್ಲಬ್ ಒಂದು 332 ಮಿಲಿಯನ್ ಡಾಲರ್ ಅಂದರೆ ಅಂದಾಜು 2,720 ಕೋಟಿ ರೂ. ಸಂಭಾವನೆ ನೀಡಲು ಮುಂದಾಗಿತ್ತು. ಇಷ್ಟೊಂದು ಮೊತ್ತ ಮೂರು, ನಾಲ್ಕು ವರ್ಷಕ್ಕೆ ಅಲ್ಲ. ಕೇವಲ ಒಂದು ಸೀಸನ್ಗೆ ಮಾತ್ರ. ಈ ದಾಖಲೆಯ ಡೀಲ್ ವಿಷಯ ವಿಶ್ವಾದ್ಯಂತ ಸುದ್ದಿಯಾಯಿತು. ಆದರೆ ಎಂಬಾಪೆ ಇಲ್ಲಿಯವರೆಗೆ ಈ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಮುಂದೆ ಸಹಿ ಹಾಕುತ್ತಾರೋ ಗೊತ್ತಿಲ್ಲ. ಡೀಲ್ಗಿಂತಲೂ ಮುಖ್ಯವಾಗಿ ಸೌದಿ ಇಷ್ಟೊಂದು ಹಣವನ್ನು ಎಂಬಾಪೆಗೆ ನೀಡಲು ಮುಂದಾಗಿದ್ದು ಯಾಕೆ ಎಂದು ಓದುಗರಾದ ನೀವು ಕೇಳಬಹುದು. ಈ ಪ್ರಶ್ನೆಗೆ ಉತ್ತರ ಸೇರಿದಂತೆ ಕ್ರೀಡೆಗೆ ಇಷ್ಟೊಂದು ಹಣವನ್ನು ಸೌದಿ ಹೂಡಿಕೆ ಮಾಡುತ್ತಿರುವುದು ಯಾಕೆ? ಯಾವ ರೀತಿ ಹೂಡಿಕೆ ಮಾಡುತ್ತಿದೆ? ಹೂಡಿಕೆ ಮಾಡಿದ್ದರಿಂದ ಸೌದಿಗೆ ಏನು ಲಾಭವಾಗಿದೆ? ಮತ್ತು ಭಾರತಕ್ಕೆ ಏನು ಸಂದೇಶ ಈ ವಿಷಯಗಳ ಬಗ್ಗೆ ಕಿರು ವಿವರ ಇಲ್ಲಿದೆ.
ಸೌದಿ ಶ್ರೀಮಂತ ದೇಶವಾಗಿದ್ದು ಹೇಗೆ?
ಕಚ್ಚಾ ತೈಲ ಉತ್ಪಾದನೆಯೇ ಸೌದಿಯ ಆರ್ಥಿಕ ಶಕ್ತಿ. ವಿಶ್ವದಲ್ಲೇ ಅತಿ ಹೆಚ್ಚು ತೈಲ (Crude Oil) ಉತ್ಪಾದನೆ ಮಾಡುವ ದೇಶಗಳ ಪೈಕಿ ಸೌದಿ ಅರೇಬಿಯಾ ಎರಡನೇ ಸ್ಥಾನದಲ್ಲಿದೆ. ವಿಶ್ವದ ತೈಲ ನಿಕ್ಷೇಪಗಳು ಪೈಕಿ ವೆನೆಜುವೆಲಾ ಮೊದಲ ಸ್ಥಾನದಲ್ಲಿ ಇದ್ದರೆ ಸೌದಿ ಅರೇಬಿಯಾ ಎರಡನೇ ಸ್ಥಾನದಲ್ಲಿದೆ. ಒಪೆಕ್ ರಾಷ್ಟ್ರಗಳು ಅಂದರೆ ತೈಲ ಉತ್ಪಾದನೆ ಮಾಡುವ ದೇಶಗಳ ಪೈಕಿ ಸೌದಿಯೇ ಲೀಡರ್. ಯಾಕೆಂದರೆ ಸೌದಿ ಅತಿ ಹೆಚ್ಚು ಪ್ರಮಾಣದಲ್ಲಿ ತೈಲ ಉತ್ಪಾದನೆ ಮಾಡುತ್ತಿದೆ. ಸೌದಿ ಅರೇಬಿಯಾದ ಒಟ್ಟು ಆಂತರಿಕ ಉತ್ಪನ್ನ ಅಂದರೆ ಜಿಡಿಪಿಯಲ್ಲಿ ಕಚ್ಚಾ ತೈಲದ ಪಾಲು 39%.
ತೈಲದ ಆದಾಯದಿಂದ ಶ್ರೀಮಂತ ದೇಶವಾಗಿ ಹೊರಹೊಮ್ಮಿದರೂ ಸೌದಿ ಅರೇಬಿಯಾ ಈಗ ಸಂಕಷ್ಟದಲ್ಲಿ ಸಿಲುಕಿದೆ. ಸಂಕಷ್ಟಕ್ಕೆ ಸಿಲುಕಲು ಮುಖ್ಯ ಕಾರಣ ಯಾವುದು ಎಂದರೆ ಅದು ತೈಲ ಬೆಲೆ. ಒಪೆಕ್ ರಾಷ್ಟ್ರಗಳು ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆಯನ್ನು 80-90 ಡಾಲರ್ ಬೆಲೆಯಲ್ಲೇ ಸ್ಥಿರವಾಗಿಸಲು ಪ್ರಯತ್ನಿಸುತ್ತಿವೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಈ ಹಿಂದೆ 2008ರಲ್ಲಿ ಆರ್ಥಿಕ ಹಿಂಜರಿತವಾದಾಗ ತೈಲ ಬೆಲೆ ಭಾರೀ ಏರಿಕೆಯಾಗಿತ್ತು. ಕೋವಿಡ್ ಸಮಯದಲ್ಲಿ ಭಾರೀ ಇಳಿಕೆಯಾಗಿತ್ತು. ನಂತರ ರಷ್ಯಾ ಉಕ್ರೇನ್ (Russia-Ukraine) ಯುದ್ಧದ ಸಮಯದಲ್ಲಿ ತೈಲ ಬೆಲೆ ಭಾರೀ ಏರಿಕೆಯಾಗಿತ್ತು. ಆದರೆ ಈಗ ತೈಲ ಬೆಲೆ ಕಡಿಮೆ ಆಗುತ್ತಿದೆ. ತೈಲ ಬೆಲೆ ಕಡಿಮೆಯಾದರೆ ತೈಲ ಆಮದು ಮಾಡುವ ಭಾರತಕ್ಕೆ ಲಾಭ. ಆದರೆ ಸೌದಿಗೆ ಸಮಸ್ಯೆ ಆಗುತ್ತದೆ. ಯಾಕೆಂದರೆ ಅವರ ಜಿಡಿಪಿಯಲ್ಲಿ ತೈಲದ ಪಾಲು 39%. ತೈಲದ ಪಾಲು 39% ಇದ್ದರೂ ಇದು ವರ್ಷದಿಂದ ವರ್ಷಕ್ಕೆ ಇದರ ಪ್ರಮಾಣ ಕಡಿಮೆ ಆಗುತ್ತಿದೆ. ಎಷ್ಟು ಕಡಿಮೆ ಆಗುತ್ತಿದೆ ಎಂದರೆ 2011 ರಲ್ಲಿ ಇದು 45.2% ಇದ್ದರೆ 2016ರಲ್ಲಿ ಇದು 43.7% ಇಳಿಕೆಯಾಗಿತ್ತು. 2021 ರಲ್ಲಿ ಇದು 38.8%ಗೆ ಇಳಿಕೆಯಾಗಿದೆ.
ತೈಲದ ಬೇಡಿಕೆ ಕಡಿಮೆ ಯಾಕೆ ಆಗುತ್ತಿದೆ ಎನ್ನುವುದಕ್ಕೂ ಕಾರಣವಿದೆ. ವಿಶ್ವದ ಹಲವು ದೇಶಗಳು ಈಗ ಶೂನ್ಯ ಇಂಗಾಲ ಹೊರಸೂಸುವಿಕೆಯ ಗುರಿಯನ್ನು ಹಾಕಿಕೊಂಡಿದೆ. ಜರ್ಮನಿ 2045, ದಕ್ಷಿಣ ಕೊರಿಯಾ 2050, ಅಮೆರಿಕ 2050, ಚೀನಾ 2060, ಮುಖ್ಯವಾಗಿ ಭಾರತ 2070ಕ್ಕೆ ಗುರಿಯನ್ನು ಹಾಕಿಕೊಂಡಿದೆ. ವಿಶ್ವದಲ್ಲೇ ಅತಿ ಹೆಚ್ಚು ತೈಲ ಆಮದು ಮಾಡುವ ದೇಶಗಳಾದ ಭಾರತ, ಚೀನಾ, ಅಮೆರಿಕ ಈಗಾಗಲೇ ಈ ಗುರಿಯನ್ನು ತಲುಪಲು ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡುವ ಮೂಲಕ ಕೆಲಸ ಆರಂಭಿಸಿದೆ. ಇದು ತೈಲ ಉತ್ಪಾದನೆ ಮಾಡುವ ದೇಶಗಳ ಆತಂಕಕ್ಕೆ ಕಾರಣವಾಗಿದೆ. ಈ ಕಾರಣಕ್ಕೆ ಈಗ ಸೌದಿ ಬೇರೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಮುಂದಾಗಿದೆ.
ಇಲ್ಲಿಯವರೆಗೆ ಎಷ್ಟು ಹೂಡಿಕೆ ಮಾಡಿದೆ?
ಕಚ್ಚಾ ತೈಲವನ್ನು ನಂಬಿದರೆ ಭವಿಷ್ಯದಲ್ಲಿ ನಮಗೆ ಭವಿಷ್ಯವಿಲ್ಲ ಎಂಬುದನ್ನು ಈಗಲೇ ಅರಿತ ಸೌದಿ ಕ್ರೀಡೆಗೆ ಈಗ ಭಾರೀ ಪ್ರಮಾಣದಲ್ಲಿ ಪ್ರೋತ್ಸಾಹ ನೀಡಲು ಮುಂದಾಗಿದೆ. ಮೊದಲಿನಿಂದಲೂ ಕ್ರೀಡೆಗೆ ಉತ್ತೇಜನ ನೀಡುತ್ತಿದ್ದ ಸೌದಿ ಈಗ ಯಾರು ನಿರೀಕ್ಷೆ ಮಾಡದ ದೊಡ್ಡ ಪ್ರಮಾಣದ ಹೂಡಿಕೆ ಮಾಡುತ್ತಿದೆ. ಅರಲ್ಲೂ 2018 ರಿಂದ ಬಹಳ ಆಕ್ರಮಣಕಾರಿಯಾಗಿ ಹೂಡಿಕೆ ಮಾಡಲು ಆರಂಭಿಸಿದೆ.
ಫೆಬ್ರವರಿ 2020: ಮೊದಲ ಬಾರಿಗೆ ರಿಯಾದ್ನಲ್ಲಿ ಸೌದಿ ಕಪ್ ಹೆಸರಿನಲ್ಲಿ ಕುದುರೆ ರೇಸ್ ಆರಂಭವಾಗಿದೆ. ವಿಜೇತರಿಗೆ ಸಿಗುವ ಬಹುಮಾನದ ಮೊತ್ತ ಬರೋಬ್ಬರಿ 20 ಮಿಲಿಯನ್ ಡಾಲರ್. ಇದು ಸಾರ್ವಕಾಲಿಕ ದಾಖಲೆಯ ಬಹುಮಾನ. ಅತಿ ಹೆಚ್ಚು ಸಂಭಾವನೆ ಪಡೆಯುವ ಕುದುರೆ ರೇಸ್ ಇದಾಗಿದೆ.
ಜನವರಿ 2021 : ಪ್ರವಾಸೋದ್ಯಮವೇ ಸೌದಿಯ ಮುಖ್ಯ ಆದಾಯಗಳಲ್ಲಿ ಒಂದು. ಈ ಕಾರಣಕ್ಕೆ 3 ವರ್ಷಗಳ ಕಾಲ ಸೌದಿ ಪ್ರವಾಸೋದ್ಯಮವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನಡೆಸಲು ಅರ್ಜೆಂಟೀನಾದ ಖ್ಯಾತ ಫುಟ್ಬಾಲ್ ಆಟಗಾರ ಲಿಯೋನಲ್ ಮೆಸ್ಸಿ ಜೊತೆ 25 ಮಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಅಕ್ಟೋಬರ್ 2021 : ಸೌದಿ ಅರೇಬಿಯಾದ ಪಬ್ಲಿಕ್ ಇನ್ವೆಸ್ಟ್ಮೆಂಟ್ ಫಂಡ್ 400 ಮಿಲಿಯನ್ ಡಾಲರ್ಗೆ ಇಂಗ್ಲೆಂಡಿನ ಪ್ರಸಿದ್ಧ ನ್ಯೂ ಕಾಸಲ್ ಯುನೈಟೆಡ್ ಫುಟ್ಬಾಲ್ ತಂಡವನ್ನು ಖರೀದಿಸಿದೆ.
ಡಿಸೆಂಬರ್ 2021: ಸೌದಿ ಅರೇಬಿಯಾದ ಮೊದಲ ಫಾರ್ಮುಲಾ 1 ಕಾರ್ ರೇಸ್ ಜೆಡ್ಡಾದಲ್ಲಿ ನಡೆಯಿತು. ಸೌದಿ ಅರೇಬಿಯಾದ ರಾಷ್ಟ್ರೀಯ ತೈಲ ಕಂಪನಿ ಸೌದಿ ಅರಾಮ್ಕೋ ಇದರ ಮುಖ್ಯ ಪ್ರಾಯೋಜಕತ್ವ ವಹಿಸಿತ್ತು. ಈಗ ಇದು ಸೌದಿ ಗ್ರಾಂಡ್ ಪ್ರಿಕ್ಸ್ ಎಂದೇ ಪ್ರಸಿದ್ಧಿ ಪಡಿದಿದೆ.
ಜುಲೈ 2022: ಫಾರ್ಮುಲಾ 1 ಆಯೋಜನೆ ಮಾಡುತ್ತಿರುವ ಸೌದಿ ಒಂದು ಫ್ರಾಂಚೈಸಿಯನ್ನೇ ಖರೀದಿಸಿದೆ. ಫಾರ್ಮುಲಾ 1 ಫ್ರಾಂಚೈಸಿಯಾಗಿರುವ ಆಸ್ಟನ್ ಮಾರ್ಟಿನ್ ನಿಂದ 17% ಪಾಲನ್ನು ಸೌದಿಯ ಪಬ್ಲಿಕ್ ಇನ್ವೆಸ್ಟ್ಮೆಂಟ್ ಫಂಡ್ ಖರೀದಿಸಿದೆ.
ಡಿಸೆಂಬರ್ 2022: ಜಾಗತಿಕ ಫುಟ್ಬಾಲ್ ಸೂಪರ್ಸ್ಟಾರ್, ಪೋರ್ಚುಗಲ್ನ ಕ್ರಿಸ್ಟಿಯನ್ ರೊನಾಲ್ಡೋ ಇಂಗ್ಲೆಂಡಿನ ಮ್ಯಾಂಚೆಸ್ಟರ್ ಯುನೈಟೆಡ್ ತೊರೆದು ಸೌದಿಯ ಅಲ್-ನಾಸ್ರ್ ತಂಡವನ್ನು ಸೇರಿದ್ದಾರೆ. ಈ ಡೀಲ್ ಎಷ್ಟು ಗೊತ್ತೆ ಬರೋಬ್ಬರಿ 600 ಮಿಲಿಯನ್ ಡಾಲರ್. ರೂಪಾಯಿಯಲ್ಲಿ ಹೇಳುವುದಾದರೆ ಅಂದಾಜು 1,800 ಕೋಟಿ ರೂ. ಇದು ಕ್ರೀಡಾ ಇತಿಹಾಸದಲ್ಲಿ ದಾಖಲೆ ಬರೆದಿದ್ದು ಅತಿ ದೊಡ್ಡ ಡೀಲ್ ಎನಿಸಿಕೊಂಡಿದೆ. ಇದನ್ನೂ ಓದಿ: ಭೂಮಿಗೆ ಅಪ್ಪಳಿಸಿದ ‘ಫೈರ್ಬಾಲ್’; ಇದು ಅನ್ಯಗ್ರಹ ತಂತ್ರಜ್ಞಾನವೇ? – ಅಮೆರಿಕ ವಿಜ್ಞಾನಿ ಹೇಳಿದ್ದೇನು?
ಜೂನ್ 2023: ಅರ್ಜೆಂಟೀನಾ ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಗೆ ಬರೋಬ್ಬರಿ 4,100 ಕೋಟಿ ರೂ. ನೀಡಲು ಸೌದಿಯ ಆಲ್-ಹಿಲಾಲ್ ಮುಂದೆ ಬಂದಿತ್ತು. ಆದರೆ ಮೆಸ್ಸಿಯೂ ಈ ಆಫರ್ ತಿರಸ್ಕರಿಸಿದ್ದರು.
ಏಪ್ರಿಲ್, 2023: WWE, ಕುದುರೆ ರೇಸ್, ಫಾರ್ಮುಲಾ 1, ಫುಟ್ಬಾಲ್ ಮೇಲೆ ಕೋಟಿಗಟ್ಟಲೇ ಹಣವನ್ನು ಸುರಿದಿರುವ ಸೌದಿ ಕ್ರಿಕೆಟ್ ಮೇಲೂ ಕಣ್ಣು ಹಾಕಿತ್ತು. ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆರಂಭಿಸಲು ಮುಂದಾಗಿತ್ತು. ಈ ಸಂಬಂಧ ಭಾರತದ ಬಿಸಿಸಿಐ ಜೊತೆಯೂ ಮಾತುಕತೆ ನಡೆಸಿತ್ತು. ಭಾರತ ಮತ್ತು ಪಾಕಿಸ್ತಾನ ಆಟಗಾರರನ್ನು ಸೇರಿಸಿ ಲೀಗ್ ಮಾಡಿದರೆ ಸೂಪರ್ ಹಿಟ್ ಆಗಬಹುದು ಎಂಬ ಲೆಕ್ಕಾಚಾರವನ್ನು ಹಾಕಿತ್ತು. ಆದರೆ ಬಿಸಿಸಿಐ ಭಾರತದ ಆಟಗಾರರನ್ನು ಈ ಲೀಗ್ಗೆ ಕಳುಹಿಸಲು ಅನುಮತಿ ನೀಡಲಿಲ್ಲ. ಈ ಕಾರಣಕ್ಕೆ ಸದ್ಯ ಸೌದಿಯ ಈ ಒಂದು ಕನಸು ಈಗಲೂ ಕನಸಾಗಿಯೇ ಉಳಿದಿದೆ.
ಕ್ರೀಡೆಯ ಮೇಲೆ ಹೂಡಿಕೆ ಹೇಗೆ?
ಸೌದಿಯ ಕ್ಲಬ್ಗಳ ಬಗ್ಗೆ ತಿಳಿದುಕೊಳ್ಳುವ ಮೊದಲು ಭಾರತದಲ್ಲಿ ನಡೆಯುವ ಐಪಿಎಲ್ ಬಗ್ಗೆ ತಿಳಿದುಕೊಳ್ಳೋಣ. ಐಪಿಎಲ್ ಫ್ರಾಂಚೈಸಿಯಲ್ಲಿ ಸರ್ಕಾರದ ಪಾಲು ಇರುವುದಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ , ಚೆನ್ನೈ ಸೂಪರ್ ಕಿಂಗ್ಸ್ ಸೇರಿದಂತೆ ಎಲ್ಲಾ ತಂಡಗಳ ಮಾಲೀಕತ್ವ ಇರುವುದು ಖಾಸಗಿ ವ್ಯಕ್ತಿಗಳ ಕೈಗಳಲ್ಲಿ. ಆದರೆ ಸೌದಿಯಲ್ಲಿ ಹೀಗಿಲ್ಲ. ಉದಾಹರಣೆಗೆ ಎಂಬಾಪೆಗೆ 2,720 ಕೋಟಿ ರೂ ಡೀಲ್ಗೆ ಮುಂದಾಗಿದ್ದ ಅಲ್-ಹಿಲಾಲ್ ಕ್ಲಬ್ನಲ್ಲಿ ಪಬ್ಲಿಕ್ ಇನ್ವೆಸ್ಟ್ಮೆಂಟ್ ಫಂಡ್ 75% ಷೇರನ್ನು ಹೊಂದಿದರೆ ಉಳಿದವರ ಪಾಲು 25% ಅಷ್ಟೇ. ಇದನ್ನೂ ಓದಿ: 6 ತಿಂಗಳಲ್ಲಿ ದೇಶ ತೊರೆದಿದ್ದಾರೆ 8 ಲಕ್ಷಕ್ಕೂ ಅಧಿಕ ಮಂದಿ – ಪಾಕಿಸ್ತಾನದಲ್ಲಿ ನಿಜಕ್ಕೂ ಏನಾಗ್ತಿದೆ?
ಈ ಫಂಡ್ ಅನ್ನು ಸ್ಥಾಪಿಸಿದವರು ಯಾರು ಅಂದರೆ ಸೌದಿಯ ಹಿಂದಿನ ರಾಜ ಫೈಸಲ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್. ಸೌದಿ ಅರೇಬಿಯಾ ಸರ್ಕಾರದ ಪರವಾಗಿ ಹಣವನ್ನು ಹೂಡಿಕೆ ಮಾಡುವ ಉದ್ದೇಶದಿಂದ 1971ರಲ್ಲಿ ಈ ಫಂಡ್ ಸ್ಥಾಪಿಸಲಾಗಿದೆ. ರಾಷ್ಟ್ರದ ಆರ್ಥಿಕತೆಗೆ ಪೂರಕವಾಗುವ ಯೋಜನೆಗಳಿಗೆ ಹಣಕಾಸಿನ ಬೆಂಬಲವನ್ನು ಈ ನಿಧಿ ಒದಗಿಸುತ್ತದೆ. ಸದ್ಯ ಒಟ್ಟು 700 ಶತಕೋಟಿ ಡಾಲರ್ ಅಂದಾಜು ಆಸ್ತಿಯನ್ನು ಹೊಂದುವ ಮೂಲಕ ವಿಶ್ವದ ಅತಿದೊಡ್ಡ ಸಾರ್ವಭೌಮ ಸಂಪತ್ತಿನ ನಿಧಿಗಳಲ್ಲಿ ಇದು ಒಂದಾಗಿದೆ. ಈಗ ನಿಧಿಯ ಸಂಪೂರ್ಣ ನಿಯಂತ್ರಣವನ್ನು ಸೌದಿ ರಾಜಮೊಹಮ್ಮದ್ ಬಿನ್ ಸಲ್ಮಾನ್ ಹೊಂದಿದ್ದಾರೆ.
ಸೌದಿಗೆ ಏನು ಲಾಭ?
ಎಲ್ಲರಿಗೂ ಸರ್ಕಾರಿ ಕೆಲಸ ನೀಡುವುದು ಸರ್ಕಾರದ ಕೆಲಸವಲ್ಲ. ಉದ್ಯೋಗ ಸೃಷ್ಟಿಗೆ ಅವಕಾಶ ನೀಡುವುದು ಸರ್ಕಾರದ ಕೆಲಸ. ಈ ಕಾರಣಕ್ಕೆ ತೈಲವನ್ನು ಹೊರತು ಪಡಿಸಿ ದೇಶದ ಆರ್ಥಿಕತೆಯನ್ನು ವೈವಿಧ್ಯಗೊಳಿಸಲು ಸರ್ಕಾರ ವಿಷನ್ 2030 ರೂಪಿಸಿದ್ದು ಇದರ ಭಾಗವಾಗಿ ಸೌದಿ ಕ್ರೀಡೆಯ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡಲು ಮುಂದಾಗಿದೆ. ಇದರಿಂದಾಗಿ ದೇಶದಲ್ಲಿ ಉದ್ಯೋಗ, ಪ್ರವಾಸೋದ್ಯಮವನ್ನು ಉತ್ತೇಜನ ಸಿಗುತ್ತದೆ. ಸೌದಿ ಅರೇಬಿಯಾದ ಒಟ್ಟು ಆಂತರಿಕ ಉತ್ಪನ್ನಕ್ಕೆ (GDP) ಕ್ರೀಡೆಗಳ ಕೊಡುಗೆಯು 2016 ಮತ್ತು 2019 ರ ನಡುವೆ ಸುಮಾರು ಮೂರು ಪಟ್ಟು ಹೆಚ್ಚಾಗಿದೆ.
ವರ್ಷಪೂರ್ತಿ ಒಂದೊಂದು ದೊಡ್ಡ ಕ್ರೀಡಾಕೂಟವನ್ನು ಆಯೋಜನೆ ಮಾಡಿದರೆ ಲಕ್ಷಾಂತರ ಮಂದಿ ವಿದೇಶಿ ಪ್ರವಾಸಿಗರು ಬರುತ್ತಲೇ ಇರುತ್ತಾರೆ. ಕೇವಲ ಒಂದು ದಿನಕ್ಕೆ ಮಾತ್ರ ವಿದೇಶಿಗರು ಬರುವುದಿಲ್ಲ. ಪ್ರವಾಸ ಮಾಡಲೆಂದೇ ಬರುತ್ತಾರೆ. ಇದರಿಂದಾಗಿ ವಿಮಾನ ಕ್ಷೇತ್ರಕ್ಕೆ ಮಾತ್ರವಲ್ಲದೇ ಟೂರಿಸಂ ಅಭಿವೃದ್ಧಿಯಾಗುತ್ತದೆ. ಹೋಟೆಲ್, ಟ್ಯಾಕ್ಸಿ, ಹೀಗೆ ಪ್ರತಿಯೊಬ್ಬರಿಗೂ ಉದ್ಯೋಗ ಸಿಗುತ್ತದೆ. ಹಣದ ವ್ಯವಹಾರ ಹೆಚ್ಚಾದರೆ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಆದಾಯ ಬರುತ್ತದೆ.
ಭಾರತಕ್ಕೆ ಏನು ಸಂದೇಶ?
ಸೌದಿಯಂತೆ ಭಾರತವೂ ಕ್ರೀಡೆಯ ಮೇಲೆ ಹೂಡಿಕೆ ಮಾಡಬಹುದು. ಸದ್ಯ ಕ್ರಿಕೆಟ್ ಒಂದೇ ಭಾರತದಲ್ಲಿ ಫೇಮಸ್ ಆಗಿದೆ. ಆದರೆ ಕ್ರಿಕೆಟಿನಷ್ಟೇ ಫುಟ್ಬಾಲ್ ಮತ್ತು ಇತರ ಕ್ರೀಡೆಗಳಿಗೆ ಅಭಿಮಾನಿಗಳು ಇದ್ದಾರೆ. ಇತರ ಕ್ರೀಡೆಗಳಿಗೆ ಪ್ರೋತ್ಸಾಹದ ಕೊರತೆ ಕಾಣುತ್ತಿದೆ. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಇತರ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿದರೆ ಖಂಡಿತವಾಗಿಯೂ ವಿದೇಶಿ ಆಟಗಾರರು ಭಾರತಕ್ಕೆ ಬರಬಹುದು. ಹೇಗೆ ಸೌದಿ ಸರ್ಕಾರ ಕ್ರೀಡೆಗೆ ಉತ್ತೇಜನ ನೀಡುವ ಟೂರಿಸಂ ಅಭಿವೃದ್ಧಿ ಮಾಡುತ್ತದೋ ಅದೇ ರೀತಿ ಭಾರತದಲ್ಲೂ ರಾಜ್ಯಗಳು ಉತ್ತೇಜನ ನೀಡಿದರೆ ವಿದೇಶಿ ಪ್ರವಾಸಿಗರು ಭಾರತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಯುರೋಪ್ ದೇಶಗಗಳು ಬಿಡಿ ನಮ್ಮ ಸಮೀಪದ ಶ್ರೀಲಂಕಾ, ಥಾಯ್ಲೆಂಡ್ಗೆ ಪ್ರವಾಸೋದ್ಯಮವೇ ಅವರ ಆದಾಯದ ಮೂಲ. ಕ್ರೀಡೆಯ ಜೊತೆ ಪ್ರವಾಸಿ ಸ್ಥಳಗಳನ್ನು ನಾವು ಅಭಿವೃದ್ಧೀ ಮಾಡಿದರೆ ಹೋಟೆಲ್, ಟ್ಯಾಕ್ಸಿ, ಮೆಟ್ರೋ, ಅಂಗಡಿಗಳಿಗೆ ಆದಾಯ ಬರುತ್ತದೆ. ಜನರಿಗೆ ಉದ್ಯೋಗ ಸಿಗುತ್ತದೆ. ಎಲ್ಲದರ ಪರಿಣಾಮ ಸರ್ಕಾರದ ಬೊಕ್ಕಸ ತುಂಬುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಷನ್ ಪ್ಲ್ಯಾನ್ ಮಾಡಿ ಕೆಲಸ ಮಾಡಬೇಕಿದೆ.