Tag: ಕ್ರೀಡೆ

  • ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದವರಿಗೆ 5 ಕೋಟಿ: ಸಿಎಂ ಸಿದ್ದರಾಮಯ್ಯ ಘೋಷಣೆ

    ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದವರಿಗೆ 5 ಕೋಟಿ: ಸಿಎಂ ಸಿದ್ದರಾಮಯ್ಯ ಘೋಷಣೆ

    – ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಚಿನ್ನ ಗೆದ್ದರೆ 7 ಲಕ್ಷ ರೂ. ಬಹುಮಾನ

    ಬೆಂಗಳೂರು: ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದವರಿಗೆ 5 ಕೋಟಿ ರೂ. ನೀಡಲಾಗುವುದು. ಬೆಳ್ಳಿ ಗೆದ್ದರೆ 3 ಕೋಟಿ ಹಾಗೂ ಕಂಚು ಗೆದ್ದವರಿಗೆ 2 ಕೋಟಿ ಹಣ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಘೋಷಿಸಿದರು.

    ಉತ್ತರಾಖಂಡದಲ್ಲಿ 38 ರಾಷ್ಟ್ರೀಯ ಕ್ರೀಡಾಕೂಟ ನೆರವೇರಿತ್ತು. ಈ ಕ್ರೀಡಾಕೂಟದಲ್ಲಿ ನಮ್ಮ ರಾಜ್ಯ ಐದನೇ ಸ್ಥಾನ ಗಳಿಸಿದೆ. 34 ಚಿನ್ನ, 18 ಬೆಳ್ಳಿ, 28 ಕಂಚಿನ ಪದಕಗಳು ಬಂದಿವೆ. ರಾಜ್ಯದ ವತಿಯಿಂದ ಸಿಎಂ ಆಗಿ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ಕ್ರೀಡಾಕೂಟದಲ್ಲಿ ನಮ್ಮ ರಾಜ್ಯ ಒಂದನೇ ಸ್ಥಾನಕ್ಕೆ ಬರಲಿ ಎಂದು ಆಶಿಸಿದರು. ಇದನ್ನೂ ಓದಿ: ಡಿಕೆಶಿ ಗಾಂಧಿ ಕುಟುಂಬವನ್ನ ಖುಷಿಪಡಿಸಲು ಹಿಂದೂಗಳಿಗೆ ಅಪಮಾನ ಮಾಡಿದ್ದಾರೆ: ಬಿವೈವಿ ಟಾಂಗ್

    2015 ರಲ್ಲಿ ಸಿಎಂ ಆಗಿದ್ದಾಗ ಚಿನ್ನ ಪದಕ ವಿಜೇತರಿಗೆ 5 ಲಕ್ಷ, ಬೆಳ್ಳಿ ವಿಜೇತರಿಗೆ 3 ಲಕ್ಷ, ಕಂಚು ಪದಕ ವಿಜೇತರಿಗೆ 2 ಲಕ್ಷ ರೂಪಾಯಿ ಕೊಡಲು ಘೋಷಿಸಿದ್ದೆ. ಮುಂದಿನ ಬಾರಿಯಿಂದ ಚಿನ್ನ ಗೆದ್ದವರಿಗೆ 7 ಲಕ್ಷ ರೂಪಾಯಿ‌ ಕೊಡ್ತೇವೆ. ಬೆಳ್ಳಿ ಗೆದ್ದವರಿಗೆ 5 ಲಕ್ಷ ರೂಪಾಯಿ ಕೊಡ್ತೇವೆ. ಕಂಚು ಗೆದ್ದವರಿಗೆ 3 ಲಕ್ಷ ರೂಪಾಯಿ ಕೊಡ್ತೇವೆ ಎಂದು ತಿಳಿಸಿದರು.

    ಪ್ರತಿ ಮೆಡಲಿಸ್ಟ್‌, ಕೋಚ್, ಮ್ಯಾನೇಜರ್‌ಗೂ ನಗದು ಬಹುಮಾನ ಕೊಡ್ತೇನೆ. ಕ್ರೀಡಾ ಇಲಾಖೆ ಏನು ಕೇಳಿದ್ರೂ ಕೊಟ್ಟಿದ್ದೇನೆ. ಮುಂದೆಯೂ ಕೊಡ್ತೇನೆ. ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಜೊತೆಗೆ ಓದಲೂ ಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಚಾಮುಂಡೇಶ್ವರಿ ದೇವಸ್ಥಾನ ಎಲ್ಲರ ಆಸ್ತಿ ಅನ್ನೋದು ಸರಿ ಅಲ್ಲ, ಡಿಕೆಶಿ ಕ್ಷಮೆ ಕೇಳ್ಬೇಕು: ಆರ್.ಅಶೋಕ್

    ಒಲಂಪಿಕ್ಸ್‌ನಲ್ಲಿ ಭಾಗವಹಿಸುವವರಿಗೆ ಟ್ರೇನಿಂಗ್ ಕೊಡ್ತೇವೆ. 60 ಕ್ರೀಡಾಪಟುಗಳಿಗೆ ತರಬೇತಿಗಾಗಿ 10 ಲಕ್ಷ ರೂಪಾಯಿ ಕೊಡ್ತೇವೆ. ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದವರಿಗೆ ಐದು ಕೋಟಿ, ಬೆಳ್ಳಿ ಗೆದ್ದರೆ ಮೂರು ಕೋಟಿ, ಕಂಚು ಗೆದ್ದರೆ ಎರಡು ಕೋಟಿ‌ ಕೊಡ್ತೇವೆ. ಕ್ರೀಡಾಪಟುಗಳಿಗೆ ನೇರವಾಗಿ ಅವರ ಅಕೌಂಟ್‌ಗೆ ವರ್ಗಾವಣೆ ಮಾಡ್ತೇವೆ. ಗೆದ್ದ ಖುಷಿ ಮುಂದೆ ಯಾವುದೂ ಇಲ್ಲ. ನಾನು ಇವತ್ತಿನ ವರೆಗೂ ಕ್ರೀಡಾಪಟುಗಳಿಗೆ ಏನು ಕೇಳಿದ್ರೂ ಕೊಟ್ಟಿದ್ದೇನೆ. ಮುಂದೆಯೂ ಕೊಡ್ತೀನಿ ಎಂದು ತಿಳಿಸಿದರು.

  • ಚಿಕ್ಕಬಳ್ಳಾಪುರ | 70 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣ ಹೈಟೆಕ್ ಮಾಡಲು ಕ್ರಮ: ಎಂ.ಸಿ ಸುಧಾಕರ್

    ಚಿಕ್ಕಬಳ್ಳಾಪುರ | 70 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣ ಹೈಟೆಕ್ ಮಾಡಲು ಕ್ರಮ: ಎಂ.ಸಿ ಸುಧಾಕರ್

    ಚಿಕ್ಕಬಳ್ಳಾಪುರ: ಇಲ್ಲಿನ ಸರ್ ಎಂ.ವಿ ಕ್ರೀಡಾಂಗಣವನ್ನು (Sir M.V. Stadium) ಸುಮಾರು 70 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ‌ ಕ್ರೀಡಾ ವ್ಯವಸ್ಥೆಗಳೊಂದಿಗೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಈಗಾಗಲೇ ನೀಲಿನಕ್ಷೆಯನ್ನೂ ಸಿದ್ಧಪಡಿಸಿ ಸಂಪನ್ಮೂಲ ಕ್ರೋಢೀಕರಣದತ್ತ ಚಿಂತನೆ ನಡೆಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ ಸುಧಾಕರ್ (MC Sudhakar) ಅವರು ತಿಳಿಸಿದರು.

    ಇಂದು ಬೆಳಗ್ಗೆ ಜಿಲ್ಲಾ ಕೇಂದ್ರದಲ್ಲಿನ ಸರ್.ಎಂ.ವಿ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದ ಸಚಿವರು, ಯುವಜನ ಸೇವೆ ಮತ್ತು ಯುವ ಸಬಲೀಕರಣ ಇಲಾಖೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಇದನ್ನೂ ಓದಿ: Photo Gallery | IPL ಉದ್ಘಾಟನಾ ವೇದಿಕೆಯಲ್ಲಿ ಬೆಡಗು ಬಿನ್ನಾಣ; ಬಳ್ಳಿಯಂತೆ ಬಳುಕಿದ ದಿಶಾ!

    ಜಿಲ್ಲಾ ಕ್ರೀಡಾಂಗಣವನ್ನು ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳೊಂದಿಗೆ ಸುಮಾರು 70 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ವಿವಿಧ ಮೂಲಗಳಿಂದ ಸಂಪನ್ಮೂಲ ಕ್ರೋಢೀಕರಣ ಸಾಧ್ಯತೆಗಳತ್ತ ಚಿಂತನೆ ನಡೆಸಲಾಗುತ್ತಿದೆ. ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಬೇಕೇ? ಅಥವಾ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ನಂತಹ ಸಂಸ್ಥೆಗಳಿಗೇ ಜವಾಬ್ದಾರಿ ನೀಡಿ ಅಭಿವೃದ್ಧಿಪಡಿಸಬೇಕೇ? ಇಲ್ಲವೇ ಸರ್ಕಾರದ ಅನುದಾನದಲ್ಲೇ ಅಭಿವೃದ್ಧಿಪಡಿಸಬೇಕೇ? ಎಂಬೆಲ್ಲಾ ದೃಷ್ಟಿಕೋನಗಳಲ್ಲಿ ಚರ್ಚೆ ನಡೆಸಲಾಗುತ್ತಿದೆ.

    ಸಿಂಥೆಟಿಕ್ ಟ್ರಾಕ್ ಸೇರಿದಂತೆ ಕ್ರೀಡಾಂಗಣದಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸಿ ಹಂತ-ಹಂತವಾಗಿ ಅಭಿವೃದ್ಧಿಪಡಿಸಲಾಗುವುದು. ಸದ್ಯದಲ್ಲೇ ಕ್ರೀಡಾ ವಸತಿ ನಿಲಯವನ್ನು ಉದ್ಘಾಟಿಸಲಾಗುವುದು ಎಂದರು. ಇದನ್ನೂ ಓದಿ: IPL 2025: ಕೊಹ್ಲಿ, ಸಾಲ್ಟ್‌ ಫಿಫ್ಟಿ ಆಟ – 7 ವಿಕೆಟ್‌ ಜಯದೊಂದಿಗೆ ಆರ್‌ಸಿಬಿಗೆ ಶುಭಾರಂಭ; ತವರಲ್ಲಿ ಕೆಕೆಆರ್‌ಗೆ ಮುಖಭಂಗ

  • Year 2024 – ಸೋಲು – ಗೆಲುವಿನ ʻಆಟʼ

    Year 2024 – ಸೋಲು – ಗೆಲುವಿನ ʻಆಟʼ

    2025ರ ಹೊಸವರ್ಷಕ್ಕೆ ಕ್ಷಣಗಣನೆ ಬಾಕಿಯಿದೆ. ಹೊಸ ವರ್ಷ ಅಂದ್ರೆ ಹೊಸ ವಿಷಯಗಳೇ ನೆನಪಿಗೆ ಬರುತ್ತವೆ. ಹೊಸ ಸಂಕಲ್ಪಗಳು, ಹೊಸ ಹವ್ಯಾಸಗಳು, ಹೀಗೆ ಬದುಕನ್ನು ಬದಲಾಯಿಸಲು ಹೊಸ ನಿರ್ಧಾರ ತೆಗೆದುಕೊಳ್ಳಲು ಹೊಸ ವರ್ಷ ಒಳ್ಳೆಯ ಅವಕಾಶ. ಸಕಾರಾತ್ಮಕ ವಿಷಯ ಸಂಕಲ್ಪ ಮಾಡುವುದರಿಂದ ಬದುಕಿನಲ್ಲಿ ಒಳ್ಳೆಯ ಪರಿಣಾಮಗಳನ್ನು ಕಾಣಬಹುದು. ಹಾಗಾಗಿ ಮುಂಬರುವ ಹೊಸವರ್ಷದಲ್ಲಾದರೂ ಭಾರತೀಯ ಕ್ರೀಡಾಪಟುಗಳು ಇನ್ನಷ್ಟು ದಾಖಲೆಗಳನ್ನು ಬರೆದು ಇತಿಹಾಸ ನಿರ್ಮಿಸಲಿ ಎನ್ನುವುದು ಆಶಯ. ಅದಕ್ಕೂ ಮುನ್ನ 2024ರ ವರ್ಷದಲ್ಲಿ ಕಂಡ ಅವಿಸ್ಮರಣೀಯ ದಿನಗಳನ್ನು ನಾವು ನೆನಪಿಸಿಕೊಳ್ಳಲೇಬೇಕು. ಕಹಿ ಘಟನೆಗಳನ್ನು ಮರೆಯುತ್ತಾ, ಸಿಹಿ ನೆನಪುಗಳನ್ನು ಹೊತ್ತು ಮುಂದೆ ಸಾಗಬೇಕು. ಈ ವರ್ಷ ಕ್ರೀಡಾಲೋಕ ಏನೆಲ್ಲಾ ಏಳು-ಬೀಳುಗಳನ್ನು ಕಂಡಿದೆ? ಅವುಗಳಲ್ಲಿ ಇಣುಕುನೋಟ ಇಲ್ಲಿದೆ…..

    ʻವಿಶ್ವಗುರುʼವಾದ ಭಾರತ

    ಕಳೆದ ಜೂನ್‌ ತಿಂಗಳಲ್ಲಿ ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ನ ಆತಿಥ್ಯದಲ್ಲಿ 2024ರ ಟಿ20 ವಿಶ್ವಕಪ್‌ ಟೂರ್ನಿ ನಡೆಯಿತು. ಬಾರ್ಬಡೋಸ್‌ನ ಕೆನ್ಸಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್‌ ಪಂದ್ಯದಲ್ಲಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳಿಂದ ರೋಚಕ ಗೆಲುವು ಸಾಧಿಸಿತು. ಗೆಲುವಿನೊಂದಿಗೆ ಭಾರತ ಚಾಂಪಿಯನ್‌ ಆಗಿ ಹೊರಹೊಮ್ಮಿತು. 11 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಬರ ನೀಗಿಸಿಕೊಂಡ ಟೀಮ್‌ ಇಂಡಿಯಾ, 2007ರ ಬಳಿಕ 2ನೇ ಟಿ20 ವಿಶ್ವಕಪ್‌ ಅನ್ನು ಮುಡಿಗೇರಿಸಿಕೊಂಡಿತು. ಇದು ಒಂದು ಹೆಮ್ಮೆಯಾದರೆ ಟ್ರೋಫಿ ಎತ್ತಿ ಹಿಡಿಯುತ್ತಿದ್ದಂತೆ ಕ್ರಿಕೆಟ್‌ ದಿಗ್ಗಜರಾದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿ, ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

    ಒಲಿಂಪಿಕ್ಸ್‌ನಲ್ಲಿ ಸೋಲು-ಗೆಲುವು

    2024ರ ಪ್ಯಾರಿಸ್‌ ಒಲಿಂಪಿಕ್ಸ್‌ ಭಾರತೀಯ ಕ್ರೀಡಾಜಗತ್ತಿಗೆ ಅವಿಸ್ಮರಣೀಯವಾಗಿತ್ತು. ಪ್ರವೇಶಿಸಿದ ಚೊಚ್ಚಲ ಒಲಿಂಪಿಕ್ಸ್‌ನಲ್ಲೇ ಶೂಟರ್‌ ಮನು ಭಾಕರ್‌ ಎರಡು ಕಂಚಿನ ಪದಕ ಗೆದ್ದು ಐತಿಹಾಸಿಕ ದಾಖಲೆ ಬರೆದರು. ಮತ್ತೊಂದೆಡೆ ಒಲಿಂಪಿಕ್ಸ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರ ಫ್ರೀ ಸ್ಟೈಲ್ ಕುಸ್ತಿ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ್ದ ವಿನೇಶ್‌ ಫೋಗಟ್‌ ಅಧಿಕ ತೂಕದಿಂದಾಗಿ ಅನರ್ಹಗೊಂಡರು. ಈ ಘಟನೆ ದೇಶಾದ್ಯಂತ ಸದ್ದು ಮಾಡಿತ್ತು. ಅಲ್ಲದೇ ಬ್ಯಾಡ್ಮಿಂಟನ್‌ ಪುರುಷರ ಸಿಂಗಲ್ಸ್‌ನಲ್ಲಿ ಕಂಚುಗೆಲ್ಲುವ ಭರವಸೆ ಮೂಡಿಸಿದ್ದ ಲಕ್ಷ್ಯಸೇನ್‌ ಮೊಣಕೈ ಗಾಯದಿಂದಾಗಿ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾದರು. ನೀರಜ್‌ ಚೋಪ್ರಾ ಬೆಳ್ಳಿ ಪದಕ್ಕೆ ತೃಪ್ತಿಪಟ್ಟುಕೊಂಡರು.

    ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಶ್ವಿನ್‌ ಗುಡ್‌ಬೈ

    ವರ್ಷದ ಕೊನೆಯಲ್ಲಿ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟಿಗೆ 38 ವರ್ಷದ ಹಿರಿಯ ಆಟಗಾರ, ಸ್ಪಿನ್‌ ಮಾಂತ್ರಿಕ ಆರ್‌. ಅಶ್ವಿನ್‌ ನಿವೃತ್ತಿ ಘೋಷಿಸಿದರು. ಭಾರತದ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಎರಡನೇ ಬೌಲರ್‌ ಅಶ್ವಿನ್‌ ಆಗಿದ್ದಾರೆ. ಅನಿಲ್‌ ಕುಂಬ್ಳೆ 619 ವಿಕೆಟ್‌ ಪಡೆದು ಮೊದಲ ಸ್ಥಾನದಲ್ಲಿದ್ದರೆ ಅಶ್ವಿನ್‌ 537 ವಿಕೆಟ್‌ ಪಡೆದಿದ್ದರು.

    ಗುಕೇಶ್ ವಿಶ್ವ ಚೆಸ್ ಚಾಂಪಿಯನ್

    ಇದೇ ಡಿಸೆಂಬರ್‌ 12ರಂದು ಸಿಂಗಾಪುರದಲ್ಲಿ ನಡೆದ ಚೆಸ್‌ ಟೂರ್ನಿಯಲ್ಲಿ ಭಾರತದ ಗುಕೇಶ್ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಚೀನಾದ ಪ್ರಶಸ್ತಿ ವಿಜೇತ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಭಾರತದ ಗ್ರ್ಯಾಂಡ್‌ಮಾಸ್ಟರ್ ಡಿ ಗುಕೇಶ್ 18ನೇ ವಯಸ್ಸಿನಲ್ಲೇ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗಿ ಇತಿಹಾಸ ಸೃಷ್ಟಿಸಿದರು.

    ಕೆಕೆಆರ್‌ಗೆ 3ನೇ ಬಾರಿಗೆ ಚಾಂಪಿಯನ್‌ ಕಿರೀಟ

    2024ರ ಐಪಿಎಲ್‌ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡವು 3ನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಶ್ರೇಯಸ್ ಅಯ್ಯರ್ ನಾಯಕತ್ವ ಮತ್ತು ಗೌತಮ್ ಗಂಭೀರ್ ಮಾರ್ಗದರ್ಶನದ ಕೆಕೆಆರ್ ತಂಡ 2016ರ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ ಟ್ರೋಫಿ ಗೆದ್ದುಕೊಂಡಿತು. 2012-14ರಲ್ಲಿ ಗೌತಮ್‌ ಗಂಭೀರ್‌ ನಾಯಕತ್ವದಲ್ಲಿ ಚಾಂಪಿಯನ್‌ ಆಗಿದ್ದ ಕೆಕೆಆರ್‌ ತಂಡ ಈ ಬಾರಿ ಗಂಭೀರ್‌ ಅವರ ಮಾರ್ಗದರ್ಶನದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಇನ್ನೂ 2025ರ ಐಪಿಎಲ್‌ ಆವೃತ್ತಿಗೆ ಕಳೆದ ನವೆಂಬರ್‌ನಲ್ಲಿ ನಡೆದ ಮೆಗಾಹರಾಜಿನಲ್ಲಿ ರಿಷಭ್‌ ಪಂತ್‌ ದಾಖಲೆಯ 27 ಕೋಟಿ ರೂ.ಗಳಿಗೆ ಲಕ್ನೋ ಸೂಪರ್‌ ಜೈಂಟ್ಸ್‌ ತಂಡಕ್ಕೆ ಬಿಕರಿಯಾದರು.

    ವಿಶ್ವದಾಖಲೆ ಬರೆದ ಜಿಂಬಾಬ್ವೆ

    2026ರ ಟಿ20 ವಿಶ್ವಕಪ್‌ ಟೂರ್ನಿಗೆ ನಡೆದ ಪ್ರಾದೇಶಿಕ ಅರ್ಹತಾ ಸುತ್ತಿನಲ್ಲಿ ಜಿಂಬಾಬ್ವೆ ತಂಡವು ಗ್ಯಾಂಬಿಯಾ ವಿರುದ್ಧ 20 ಓವರ್‌ಗಳಲ್ಲಿ ಬರೋಬ್ಬರಿ 344 ರನ್ ಚಚ್ಚಿತು. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಇನ್ನಿಂಗ್ಸ್‌ವೊಂದರಲ್ಲೇ ಅತ್ಯಧಿಕ ರನ್‌ ಕಲೆಹಾಕಿದ ವಿಶ್ವ ದಾಖಲೆ ಬರೆಯಿತು. ಇದಕ್ಕೂ ಮುನ್ನ ಮಂಗೋಲಿಯಾ ವಿರುದ್ಧ 314 ರನ್ ಗಳಿಸಿದ್ದ ನೇಪಾಳ ಹೆಸರಿನಲ್ಲಿ ಈ ದಾಖಲೆ ದಾಖಲಾಗಿತ್ತು. ಇನ್ನು ಕೆಲವೇ ದಿನಗಳ ಹಿಂದೆ ಬಾಂಗ್ಲಾದೇಶ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 297 ರನ್ ಕಲೆಹಾಕುವ ಮೂಲಕ ಈ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತ್ತು. ಇದೀಗ ಜಿಂಬಾಬ್ವೆಯ ತ್ರಿಶತಕದ ಇನ್ನಿಂಗ್ಸ್‌ನಿಂದಾಗಿ ಭಾರತ 3ನೇ ಸ್ಥಾನಕ್ಕೆ ಕುಸಿಯಿತು.

    ವರ್ಷದ ಕೊನೆಯಲ್ಲಿ ಒಂದು ಶತಕ, ಹಲವು ದಾಖಲೆ

    ಆಸ್ಟ್ರೇಲಿಯಾ ವಿರುದ್ಧ ನಡೆದ ಬಾಕ್ಸಿಂಗ್‌ ಡೇ ಟೆಸ್ಟ್‌ ಕ್ರಿಕೆಟ್‌ನಲ್ಲಿ ನಿತೀಶ್‌ ರೆಡ್ಡಿ ವರ್ಷದ ಕೊನೆಯಲ್ಲಿ ತಮ್ಮ ಚೊಚ್ಚಲ ಶತಕ ಸಿಡಿಸಿ ಹಲವು ದಾಖಲೆ ಬರೆದರು. ಆಸ್ಟ್ರೇಲಿಯಾದಲ್ಲಿ ಶತಕ ಭಾರಿಸಿದ ಭಾರತದ 3ನೇ ಕಿರಿಯ ಆಟಗಾರ, 2020ರ ಬಳಿಕ ಮೆಲ್ಬೋರ್ನ್‌ನಲ್ಲಿ ಶತಕ ಬಾರಿಸಿದ ಏಕೈಕ ಭಾರತೀಯ ಎಂಬ ಖ್ಯಾತಿ ಪಡೆದರಲ್ಲದೇ 8ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವಾಗ ಅತಿಹೆಚ್ಚು ರನ್‌ ಗಳಿಸಿದ ದಿಗ್ಗಜ ಅನಿಲ್‌ ಕುಂಬ್ಳೆ ಅವರ ದಾಖಲೆಯನ್ನೂ ಉಡೀಸ್‌ ಮಾಡಿದರು.

    ಅತಿಹೆಚ್ಚು ರನ್‌ ಬಾರಿಸಿದ ಭಾರತದ ಟಾಪ್‌-5 ಬ್ಯಾಟರ್ಸ್‌

    ಏಕದಿನ ಹಾಗೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ನಿರಾಸೆ ಅನುಭವಿಸಿದ ಟೀಂ ಇಂಡಿಯಾ ಟಿ20 ಕ್ರಿಕೆಟ್‌ನಲ್ಲಿ ಅದ್ಭುತ ಸಾಧನೆ ಮಾಡಿತು. ಟೀಂ ಇಂಡಿಯಾ ಪ್ರಸಕ್ತ ವರ್ಷದಲ್ಲಿ ಒಟ್ಟು 26 ಪಂದ್ಯಗಳನ್ನಾಡಿ, 22ರಲ್ಲಿ ಜಯ ಸಾಧಿಸಿತು. ಈ ವರ್ಷ ಹಲವು ಯುವ ಆಟಗಾರರು ಅಮೋಘ ಪ್ರದರ್ಶನ ನೀಡಿದರು. ಈ ಪೈಕಿ ಸಂಜು ಸ್ಯಾಮ್ಸನ್‌ (436 ರನ್‌), ಸೂರ್ಯಕುಮಾರ್‌ ಯಾದವ್‌ (429 ರನ್‌), ರೋಹಿತ್‌ ಶರ್ಮಾ (378 ರಮ್‌), ತಿಲಕ್‌ ವರ್ಮಾ (306 ರನ್‌) ಅತಿಹೆಚ್ಚು ರನ್‌ ಸಿಡಿಸಿದ ಟಾಪ್‌-5 ಬ್ಯಾರ್‌ಗಳಾಗಿ ಹೊರಹೊಮ್ಮಿದರು.

    ಕಿವೀಸ್‌ ವನಿತೆಯರಿಗೆ ಚೊಚ್ಚಲ ಚಾಂಪಿಯನ್‌ ಕಿರೀಟ

    ಅಕ್ಟೋಬರ್‌ ತಿಂಗಳು ದುಬೈನಲ್ಲಿ ನಡೆದ ಐಸಿಸಿ ಮಹಿಳೆಯರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ನ್ಯೂಜಿಲೆಂಡ್‌ ಮಹಿಳೆಯರ ತಂಡ ಟ್ರೋಫಿ ಮುಡಿಗೇರಿಸಿಕೊಂಡಿತು. 14 ವರ್ಷಗಳ ಬಳಿಕ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಫೈನಲ್‌ ತಲುಪಿದ್ದ ನ್ಯೂಜಿಲೆಂಡ್‌ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿತು. ದಕ್ಷಿಣ ಆಫ್ರಿಕಾ ತಂಡ 2ನೇ ಬಾರಿಗೆ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.

    ಟೀಂ ಇಂಡಿಯಾಕ್ಕೆ ಸೋಲಿನ ಕಹಿ

    2024ರ ವರ್ಷಾರಂಭದಲ್ಲಿ ಟೆಸ್ಟ್‌, ಏಕದಿನ ಹಾಗೂ ಟಿ20 ಕ್ರಿಕೆಟ್‌ ಮಾದರಿಯಲ್ಲಿ ನಂ.1 ಸ್ಥಾನದಲ್ಲಿದ್ದ ಭಾರತ, ವರ್ಷದ ಕೊನೇ ದಿನಗಳಲ್ಲಿ ಸಾಲು-ಸಾಲು ಸೋಲುಗಳನ್ನು ಎದುರಿಸಿತು. 2024ರ ಟಿ20 ವಿಶ್ವಕಪ್‌ ಗೆದ್ದ ಬಳಿಕ ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದಲ್ಲಿ ಸೋಲುಕಂಡಿತು. ನ್ಯೂಜಿಲೆಂಡ್‌ ವಿರುದ್ಧ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲೂ ವೈಟ್‌ವಾಶ್‌ ಆಗಿ ಕೆಟ್ಟ ದಾಖಲೆ ಹೆಗಲಿಗೇರಿಸಿಕೊಂಡಿತು. ಈ ಬೆನ್ನಲ್ಲೇ ಬಾರ್ಡರ್‌ ಗವಾಸ್ಕರ್‌ ಟ್ರೋಫಿಯ 5 ಪಂದ್ಯಗಳ ಸರಣಿಯ ಪೈಕಿ ಮೊದಲ ನಾಲ್ಕು ಪಂದ್ಯಗಳಲ್ಲಿ 2-1 ಹಿನ್ನಡೆ ಅನುಭವಿಸಿತು. ಇದರಿಂದಾಗಿ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಭಾರೀ ಟೀಕೆಗೆ ಗುರಿಯಾದರು.

  • ಮಂಡ್ಯದಲ್ಲಿ ಶಾಲಾ ಹೆಣ್ಮಕ್ಕಳ ಬೆತ್ತಲೆ ಫೋಟೋ ಕ್ಲಿಕ್ಕಿಸಿ ಬ್ಲ್ಯಾಕ್‌ಮೇಲ್‌ – ವಿಕೃತ ಕಾಮಿ ಅಂದರ್‌!

    ಮಂಡ್ಯದಲ್ಲಿ ಶಾಲಾ ಹೆಣ್ಮಕ್ಕಳ ಬೆತ್ತಲೆ ಫೋಟೋ ಕ್ಲಿಕ್ಕಿಸಿ ಬ್ಲ್ಯಾಕ್‌ಮೇಲ್‌ – ವಿಕೃತ ಕಾಮಿ ಅಂದರ್‌!

    ಮಂಡ್ಯ: ತನ್ನ ಬಳಿ ಕ್ರೀಡೆ ಹಾಗೂ ಚಿತ್ರಕಲೆ (Sports, Painting) ಕಲಿಯಲು ಬರುತ್ತಿದ್ದ ಪ್ರೌಢ ಶಾಲೆಯೊಂದರ ವಿದ್ಯಾರ್ಥಿನಿಯರ ಬೆತ್ತಲೆ ಚಿತ್ರ ಕ್ಲಿಕ್ಕಿಸಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ವಿಕೃತ ಕಾಮುಕನೊಬ್ಬನನ್ನು ಪೊಲೀಸರು (Mandya Police) ಬಂಧಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಜಕ್ಕನಹಳ್ಳಿಯಲ್ಲಿ ಘಟನೆ ನಡೆದಿದೆ. ತಾಲೂಕಿನ ಅಮೃತಹಳ್ಳಿಯ ಯೋಗಿ ಬಂಧಿತ ಆರೋಪಿಯಾಗಿದ್ದಾನೆ. ಅಲ್ಲದೇ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯವೂ ಎಸಗಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಇದನ್ನೂ ಓದಿ: ಶಾಲೆಯಿಂದ ಹೊರಗೆ ಉಳಿದಿದ್ದ ನನ್ನನ್ನು ರಾಜಪ್ಪ ಮೇಸ್ಟ್ರು ಶಾಲೆಗೆ ಸೇರಿಸದಿದ್ದರೆ ನಾನು ಸಿಎಂ ಆಗ್ತಿರಲಿಲ್ಲ

    ಈ ಸಂಬಂಧ ನಾಲ್ವರು ವಿದ್ಯಾರ್ಥಿನಿಯರ ಹೇಳಿಕೆ ಆಧರಿಸಿ, ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕ (Child Rights Protection Unit) ಕಾನೂನು ಪರಿವೀಕ್ಷಣಾಧಿಕಾರಿ ಎಸ್‌.ಎಂ. ಶೈಲಜಾ ನೀಡಿದ ದೂರಿನ ಅನ್ವಯ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿಯರು 15 ರಿಂದ 17 ವರ್ಷ ವಯಸ್ಸಿನವರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಹತ್ರಾಸ್ ಸತ್ಸಂಗದಿಂದ ನಾಸಿಕ್‌ನ ಕುಂಭಮೇಳದವರೆಗೆ; ಭಾರತದಲ್ಲಿ ನಡೆದ ಕಾಲ್ತುಳಿತ ದುರಂತಗಳಿವು

    ಆಸಾಮಿ ತಗಲಾಕ್ಕೊಂಡಿದ್ದು ಹೇಗೆ?
    ಆರೋಪಿ ಯೋಗಿ ವಿದ್ಯಾರ್ಥಿನಿಯರು ಸಂತ್ರಸ್ತ ವಿದ್ಯಾರ್ಥಿನಿಯರು ಓದುತ್ತಿದ್ದ ಪ್ರೌಢಶಾಲೆಯಲ್ಲೇ ಹಳೆಯ ವಿದ್ಯಾರ್ಥಿಯಾಗಿದ್ದ. ಶಾಲೆ ಸಮೀಪದಲ್ಲೇ ಸ್ವಂತ ತರಬೇತಿ ಕೇಂದ್ರ ನಡೆಸುತ್ತಿದ್ದ. ಕೆಲ ವಿದ್ಯಾರ್ಥಿನಿಯರಿಗೆ ಕ್ರೀಡೆ, ಚಿತ್ರಕಲೆಯಲ್ಲಿ ಆಸಕ್ತಿ, ಇದ್ದ ಕಾರಣ, ತರಬೇತಿಗೆ ಸೇರಿಕೊಂಡಿದ್ದರು. ತನ್ನ ಬಳಿ ಬರುವ ವಿದ್ಯಾರ್ಥಿನಿಯರಿಗೆ ಮೊದಲು ಅಣ್ಣನಂತೆ ನಾಟಕವಾಡಿ ನಂಬಿಸುತ್ತಿದ್ದ.

    ತರಬೇತಿ ಕೇಂದ್ರದ ಪಿಟಿ ರೂಮಿನಲ್ಲೇ ಇರುತ್ತಿದ್ದ ಈತ ವಿದ್ಯಾರ್ಥಿನಿಯರು ಬಟ್ಟೆ ಬದಲಿಸುವಾಗ ತನ್ನ ಮೊಬೈಲ್‌ನಿಂದ ಬೆತ್ತಲೆ, ಅರೆಬೆತ್ತಲೆ ಫೋಟೋಗಳನ್ನು ತೆಗೆದು, ಪೋಷಕರಿಗೆ ಕಳುಹಿಸುವುದಾಗಿ ಬೆದರಿಕೆ ಒಡ್ಡುತ್ತಿದ್ದ. ತನ್ನೊಂದಿಗೆ ಮಲಗುವಂತೆ ಬಲವಂತ ಮಾಡುತ್ತಿದ್ದ. ತರಬೇತಿ ನೀಡುವ ವೇಳೆ ಕೆಟ್ಟದ್ದಾಗಿ ವರ್ತಿಸುತ್ತಿದ್ದ. ಒಂದೊಮ್ಮೆ ಅದೇ ಗ್ರಾಮದ ವಿದ್ಯಾರ್ಥಿನಿಯೋರ್ವಳಿಗೆ ಐಸ್‌ಕ್ರೀಮ್‌ ಕೊಡಿಸಿ, ಪ್ರಜ್ಞೆ ತಪ್ಪಿಸುವಂತೆ ಮಾಡಿದ್ದ. ಬಳಿಕ ಆಕೆಯ ಬೆತ್ತಲೆ ಫೋಟೋ ಕ್ಲಿಕ್ಕಿಸಿ, ನೀನು ನನ್ನೊಂದಿಗೆ ಮಲಗದಿದ್ದರೆ, ನಿಮ್ಮ ಪೋಷಕರಿಗೆ ಫೋಟೋ ತೋರಿಸುವುದಾಗಿ ಬೆದರಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

    ಈ ಸಂಬಂಧ ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕಕ್ಕೆ ವಿದ್ಯಾರ್ಥಿನಿಯರು ಪತ್ರ ಬರೆದು ಅಳಲು ತೋಡಿಕೊಂಡಿದ್ದಾರೆ. ಬಳಿಕ ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕದ ಅಧಿಕಾರಿಗಳು ಪೊಲೀಸ್‌ ಠಾಣೆಗೆ ನೀಡಿದ ದೂರಿನ ಮೇಲೆ ಯೋಗಿ ಎಂಬಾತನನ್ನ ಬಂಧಿಸಿ, ಎಫ್‌ಐಆರ್‌ ದಾಖಲಾಗಿದೆ. ಪೋಕ್ಸೋ ಕೇಸ್‌ ಜೊತೆಗೆ ಬಿಎನ್‌ಎಸ್ (ಭಾರತೀಯ ನ್ಯಾಯ ಸಂಹಿತೆ) ಸೆಕ್ಷನ್‌ 354 ಎ, 354 ಡಿ, 509 ಅಡಿಯಲ್ಲಿ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗ್ಯಾರಂಟಿಗಳ ಭಾರದಿಂದ ಕಂಗೆಟ್ಟ ಸರ್ಕಾರ -ಆಪರೇಷನ್ ಬಿಪಿಎಲ್ ಕಾರ್ಡ್‌ಗೆ ಪ್ಲಾನ್!

  • WWEಗೆ ನಿವೃತ್ತಿ ಹೇಳಿದ ಜಾನ್‌ ಸೀನಾ

    WWEಗೆ ನಿವೃತ್ತಿ ಹೇಳಿದ ಜಾನ್‌ ಸೀನಾ

    ಟೊರೊಂಟೊ: 16 ಬಾರಿ WWE ಚಾಂಪಿಯನ್ ಆಗಿರುವ 47 ವರ್ಷದ ಜಾನ್ ಸೀನಾ (John Cena) 2025 ರಿಂದ ನಾನು ಸ್ಪರ್ಧೆಗೆ ನಿವೃತ್ತಿ ಹೇಳುತ್ತೇನೆ ಎಂದು ಘೋಷಿಸಿದ್ದಾರೆ.

    ಟೊರೊಂಟೊದಲ್ಲಿ ನಡೆದ ‘ಮನಿ ಇನ್ ದಿ ಬ್ಯಾಂಕ್’ ಕಾರ್ಯಕ್ರಮದಲ್ಲಿ ಜಾನ್ ಸೀನಾ ಅವರು ತಮ್ಮ ನಿವೃತ್ತಿ ನಿರ್ಧಾರವನ್ನು ಘೋಷಿಸಿದರು.  ಇದನ್ನೂ ಓದಿ: ಓದಿದ್ದು 10ನೇ ತರಗತಿ ಮಾಡುವುದು ಡಾಕ್ಟರ್ ವೃತ್ತಿ- ಬಾಗಲಕೋಟೆಯಲ್ಲಿದ್ದಾರೆ 384 ನಕಲಿ ವೈದ್ಯರು

    ಇಂದು ರಾತ್ರಿ ನಾನು WWE ಗೆ ನನ್ನ ನಿವೃತ್ತಿಯನ್ನು ಅಧಿಕೃತವಾಗಿ ಘೋಷಿಸುತ್ತೇನೆ ಎಂದು ಜಾನ್ ಸೀನಾ ಹೇಳಿದರು. ಮುಂದುವರಿಸಿ ನಾನು ತಕ್ಷಣವೇ ನಿವೃತ್ತಿ ಹೇಳುವುದಿಲ್ಲ. 2025 ರ ರಾಯಲ್ ರಂಬಲ್, ಎಲಿಮಿನೇಷನ್ ಚೇಂಬರ್, ಲಾಸ್ ವೇಗಾಸ್‌ನಲ್ಲಿ ರೆಸಲ್ಮೇನಿಯಾ 41 ರಲ್ಲಿ ಅಲೆಜಿಯಂಟ್ ಸ್ಟೇಡಿಯಂನಲ್ಲಿ ಸ್ಪರ್ಧಿಸುವುದಾಗಿ ಹೇಳಿದರು. ಇದನ್ನೂ ಓದಿ: ಬಬಲೇಶ್ವರ | ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಬಾಯ್ಲರ್ ಸ್ಫೋಟ

    2002 ರಲ್ಲಿ WWE ಗೆ ಜಾನ್ ಸೀನಾ ಪಾದಾರ್ಪಣೆ ಮಾಡಿದ್ದರು. ಕುಸ್ತಿಯ ಜೊತೆಗೆ ಜಾನ್ ಸೀನಾ ಫಾಸ್ಟ್ ಎಕ್ಸ್, ದಿ ಇಂಡಿಪೆಂಡೆಂಟ್, ದಿ ಸೂಸೈಡ್ ಸ್ಕ್ವಾಡ್‌ನಂತಹ ಚಲನ ಚಿತ್ರಗಳಲ್ಲಿ ಜಾನ್ ಸೀನಾ ಅಭಿನಯಿಸಿದ್ದಾರೆ.

     

  • ಫುಟ್‌ಬಾಲ್‌ಗೆ ವಿದಾಯ ಹೇಳಿದ ಸುನಿಲ್ ಛೆಟ್ರಿ

    ಫುಟ್‌ಬಾಲ್‌ಗೆ ವಿದಾಯ ಹೇಳಿದ ಸುನಿಲ್ ಛೆಟ್ರಿ

    ನವದೆಹಲಿ: ಟೀಂ ಇಂಡಿಯಾದ ಖ್ಯಾತ ಆಟಗಾರ ಸುನಿಲ್‌ ಛೆಟ್ರಿ (Sunil Chhetri) ಅಂತಾರಾಷ್ಟ್ರೀಯ ಪುಟ್‌ಬಾಲ್‌ಗೆ (International Football) ವಿದಾಯ ಹೇಳಿದ್ದಾರೆ. ಜೂನ್‌ 6 ರಂದು ಕುವೈತ್‌ (Kuwait) ವಿರುದ್ಧ ಫಿಫಾ ವಿಶ್ವಕಪ್‌ ಅರ್ಹತಾ ಪಂದ್ಯ ತನ್ನ ಕೊನೆಯ ಪಂದ್ಯವಾಗಲಿದೆ ಎಂದು ತಿಳಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್‌ ಮೂಲಕ 39 ವರ್ಷದ ಛೆಟ್ರಿ ವಿದಾಯದ ನಿರ್ಧಾರವನ್ನುತಿಳಿಸಿದರು.

    ಛೆಟ್ರಿ ಮಾರ್ಚ್‌ನಲ್ಲಿ ಭಾರತಕ್ಕಾಗಿ (India) ತಮ್ಮ 150 ನೇ ಪಂದ್ಯ ಆಡಿದ್ದರು. ಗುವಾಹಟಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಗೋಲು ಗಳಿಸಿದ್ದರು. ಆದರೆ ಆ ಪಂದ್ಯವನ್ನು ಭಾರತ 1-2 ಅಂತರದಲ್ಲಿ ಸೋಲನುಭವಿಸಿತ್ತು.

    ನಾನು ವೈಯಕ್ತಿಕವಾಗಿ ಆಡಿಲ್ಲ. ದೇಶಕ್ಕಾಗಿ ಆಡಿದ್ದೇನೆ. ನಾನು ರಾಷ್ಟ್ರೀಯ ತಂಡದೊಂದಿಗಿನ ಪ್ರತಿಯೊಂದು ತರಬೇತಿಯನ್ನು ನಾನು ಆನಂದಿಸಲು ಬಯಸುತ್ತೇನೆ. ಕುವೈತ್ ವಿರುದ್ಧದ ಪಂದ್ಯಕ್ಕೆ ಒತ್ತಡವಿದೆ. ಮುಂದಿನ ಸುತ್ತಿಗೆ ಅರ್ಹತೆ ಪಡೆಯಲು ನಮಗೆ ಮೂರು ಅಂಕಗಳ ಅಗತ್ಯವಿದೆ. ಇದು ನಮಗೆ ಬಹಳ ಮುಖ್ಯವಾಗಿದೆ ಎಂದು ಛೆಟ್ರಿ ಹೇಳಿದರು.

     

  • Olympic 2024: ಕ್ರೀಡೆಗಳ ಮಹಾಸಂಗಮಕ್ಕೆ ಕೆಲವೇ ದಿನ ಬಾಕಿ – ಕೈಬೀಸಿ ಕರೆಯುತ್ತಿದೆ ಪ್ಯಾರಿಸ್‌!

    Olympic 2024: ಕ್ರೀಡೆಗಳ ಮಹಾಸಂಗಮಕ್ಕೆ ಕೆಲವೇ ದಿನ ಬಾಕಿ – ಕೈಬೀಸಿ ಕರೆಯುತ್ತಿದೆ ಪ್ಯಾರಿಸ್‌!

    – ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ನೂರಾರು ವಿಶೇಷ

    ಕ್ರೀಡೆಗಳ ಮಹಾಸಂಗಮ ಒಲಿಂಪಿಕ್ಸ್‌ (Olympics 2024) ಈ ಬಾರಿ ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ (Paris) ನಡೆಯಲಿದೆ. ಮುಂದಿನ ಜುಲೈ 26 ರಂದು ಕ್ರೀಡಾ ಜಾತ್ರೆ ಉದ್ಘಾಟನೆಯಾಗಲಿದ್ದು, ಆಗಸ್ಟ್‌ 11ರಂದು ತೆರೆ ಬೀಳಲಿದೆ.

    ಈ ಬಾರಿಯಂತು ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭ ವಿಭಿನ್ನವಾಗಿರಲಿದೆ. ಪ್ರತಿ ವರ್ಷ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ದೇಶಗಳ ಅಥ್ಲೀಟ್‌ಗಳು ಕ್ರೀಡಾಂಗಣದಲ್ಲಿ ಪಥಸಂಚಲನದ ಮೂಲಕ ಸಾಗಿ ಸಮಾವೇಶಗೊಳ್ಳುವುದು ಸಂಪ್ರದಾಯ. ಆದ್ರೆ ಈ ಬಾರಿ ಸಾವಿರಾರು ಅಥ್ಲೀಟ್‌ಗಳು ಸೇನ್‌ ನದಿಯಲ್ಲಿ (Seine River) ದೋಣಿಗಳ ಮುಖಾಂತರ ಐಫೆಲ್‌ ಟವರ್‌ ದಿಕ್ಕಿನತ್ತ ಕೆಲವು ಮೈಲುಗಳ ದೂರ ಕ್ರಮಿಸಲಿದ್ದಾರೆ. 206 ರಾಷ್ಟ್ರಗಳಿಂದ ಒಟ್ಟು 10,500 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಕ್ರೀಡಾಜ್ಯೋತಿ ಸಹ ಬೆಳಗಿಸಲಾಗಿದೆ. ಉದ್ಘಾಟನೆಯ ರೋಚಕ ಕ್ಷಣವನ್ನು ಸೇನ್‌ ನದಿಯ ಎರಡೂ ಬದಿಗಳಲ್ಲಿ ನಿಂತು ವೀಕ್ಷಿಸಲು ಸುಮಾರು 6,000 ಕ್ರೀಡಾಭಿಮಾನಿಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಆದ್ರೆ ವಿವಿಧ ಭದ್ರತಾ ಕಾರಣಗಳಿಂದ 3 ಲಕ್ಷ ಮಂದಿಗೆ ಮಾತ್ರ ಕ್ರೀಡಾಕೂಟ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.

    ಒಟ್ಟು 35 ಸ್ಥಳಗಳಲ್ಲಿ ಕ್ರೀಡಾಕೂಟ ನಡೆಯಲಿದ್ದು, 10,500 ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಕಾದಾಟ ನಡೆಸಲಿದ್ದಾರೆ. ಕ್ರೀಡಾ ಗ್ರಾಮದಲ್ಲಿ ಪ್ರತಿದಿನ 6 ಲಕ್ಷಕ್ಕೂ ಅಧಿಕ ಮಂದಿಗೆ ಊಟದ ವ್ಯವಸ್ಥೆಯಿರಲಿದೆ. ಊಟದ ವ್ಯವಸ್ಥೆ ನಿರ್ವಹಣೆ ಮಾಡುವುದಕ್ಕಾಗಿಯೇ 31,500 ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಲಾಗಿದೆ.

    ಒಲಿಂಪಿಕ್ಸ್‌ ಇತಿಹಾಸ ಏನು?

    ಒಲಿಂಪಿಕ್ಸ್‌ ಕ್ರೀಡಾಕೂಟದ ಮೂಲ ಗ್ರೀಸ್‌ ದೇಶದ್ದಾಗಿದೆ. ಸುಮಾರು ಕ್ರಿ.ಪೂ. 776ರಲ್ಲಿ ಗ್ರೀಸ್‌ನ ಒಲಿಂಪಿಯಾದಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್‌ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿತ್ತು. 3-4 ಶತಮಾನದವರೆಗೆ ಈ ಕೂಟವನ್ನು ಆಯೋಜನೆ ಮಾಡಿಕೊಂಡು ಬರಲಾಗುತ್ತಿತ್ತು. ಕ್ರಮೇಣ ಈ ಕ್ರೀಡಾಕೂಟವನ್ನು ನಿಲ್ಲಿಸಲಾಯಿತು. ನಂತರ ಮತ್ತೆ ಈ ಕ್ರೀಡಾಕೂಟಕ್ಕೆ ಚಾಲನೆ ಸಿಕ್ಕಿದ್ದು, 1859 ರಲ್ಲಿ. ಇವಾಂಜೆಲಾಸ್ ಝಪ್ಪಾನ್ ಎಂಬಾತ ಪ್ರಪ್ರಥಮವಾಗಿ ಒಲಿಂಪಿಕ್ಸ್‌ ಕ್ರೀಡಾಕೂಟವನ್ನು ಪ್ರಾಯೋಜಿಸಿದರು. ಬಳಿಕ 1894ರಲ್ಲಿ ಫ್ರಾನ್ಸ್‌ನ ಪಿಯರೆ ಡಿ ಕ್ಯೂಬರ್ತಿನ್ ಎಂಬುವವರು ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ ಹುಟ್ಟುಹಾಕಿದರು. 1896 ರಲ್ಲಿ ಪ್ರಥಮ ಬಾರಿಗೆ ಗ್ರೀಸ್‌ನ ಈಗಿನ ರಾಜಾಧಾನಿ ಅಥೆನ್ಸ್ ನಗರದಲ್ಲಿ ಬೇಸಿಗೆ ಒಲಿಂಪಿಕ್ಸ್‌ ಕ್ರೀಡಾಕೂಟ ಆಯೋಜಿಸಲಾಯಿತು. ಇದು ಮೊದಲ ಆಧುನಿಕ ಒಲಿಂಪಿಕ್ಸ್‌ ಕ್ರೀಡಾಕೂಟವೂ ಆಗಿತ್ತು. 

    ಮೊದಲ ಒಲಿಂಪಿಕ್ಸ್‌ ದಿನ ನಡೆದಿದ್ದು ಯಾವಾಗ?:

    ಮೊದಲ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ದಿನವನ್ನು ಜೂನ್‌ 23, 1948 ರಂದು ಆಚರಿಸಲಾಯಿತು. ಇದರಲ್ಲಿ ಪೋರ್ಚಗಲ್, ಗ್ರೀಸ್‌, ಆಸ್ಟ್ರೀಯಾ, ಕೆನಡಾ, ಸ್ವಿಟ್ಜರ್ಲೆಂಡ್‌, ಗ್ರೇಟ್‌ ಬ್ರಿಟನ್, ಉರುಗ್ವೆ, ವೆನೆಜುವೆಲಾ, ಮತ್ತು ಬೆಲ್ಜಿಯಂ ಸೇರಿ ಒಟ್ಟು 9 ದೇಶಗಳು ಮೊದಲ ಬಾರಿಗೆ ಈ ಒಲಿಂಪಿಕ್ಸ್‌ ದಿನಾಚರಣೆಯಲ್ಲಿ ಭಾಗವಹಿಸಿದ್ದವು. 

    ಒಲಿಂಪಿಕ್ಸ್‌ನಲ್ಲಿ ಭಾರತದ ಆರಂಭ ಯಾವಾಗ?

    ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮೊದಲ ಬಾರಿ ಭಾರತ ಭಾಗವಹಿಸಿದ್ದು, 1900ರ ಪ್ಯಾರೀಸ್‌ ಒಲಿಂಪಿಕ್ಸ್‌ನಲ್ಲಿ. ಪ್ಯಾರಿಸ್‌ನಲ್ಲಿ ರಜೆ ಕಳೆಯಲೆಂದು ತೆರಳಿದ್ದ ಆಂಗ್ಲೋ-ಇಂಡಿಯನ್‌ ಅಥ್ಲೀಟ್‌ ನಾರ್ಮನ್‌ ಪಿಚರ್ಡ್‌ ಭಾರತವನ್ನು ಪ್ರತಿನಿಧಿಸಿ 200 ಮೀ. ಓಟ ಮತ್ತು 200 ಮೀ. ಹರ್ಡಲ್ಸ್‌ನಲ್ಲಿ ಚಿನ್ನ ಗೆದ್ದಿದ್ದರು. ಬಳಿಕ 1920ರಲ್ಲಿ ಬೆಲ್ಜಿಯಂನ ಆಂಟ್ವರ್ಪ್‌ನಲ್ಲಿ ನಡೆದ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಇಬ್ಬರು ಹಾಗೂ 1924ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 8 ಮಂದಿಯ ತಂಡ ಭಾಗವಹಿಸಿತ್ತು. 1928ರಲ್ಲಿ ನೆದರ್ಲೆಂಡ್‌ನ ಆಮ್‌ಸ್ಟರ್‌ಡಂ ಒಲಿಂಪಿಕ್ಸ್‌ ಕ್ರೀಡಾಕೂಟ ನಡೆಯುವ ವೇಳೆ ಭಾರತೀಯ ಒಲಿಂಪಿಕ್ಸ್‌ ಸಮಿತಿ ಅಸ್ತಿತ್ವಕ್ಕೆ ಬಂದಿತ್ತು. ಆಗ ಭಾರತದ ಅಧಿಕೃತ ಕ್ರೀಡಾತಂಡ ಪ್ರತಿನಿಧಿಸಿ ಮೊದಲ ಬಾರಿ ಗೆದ್ದು ಚಿನ್ನ (ಹಾಕಿ) ತಂದಿತ್ತು. 2020 ರಂದು ಜಪಾನ್‌ನಲ್ಲಿ ನಡೆದ ಟೋಕಿಯೋ ಒಲಿಂಪಿಕ್ಸ್‌ಗೆ ಭಾರತ 124 ಅಥ್ಲೀಟ್‌ಗಳನ್ನ ಕಳುಹಿಸಿತ್ತು. ಈ ಪೈಕಿ ಕೇವಲ 7 ಮಂದಿಯಷ್ಟೇ ಪದಕ ಗೆದ್ದಿದ್ದರು. ಒಂದೇ ಒಂದು ಚಿನ್ನದ ಪದಕವಷ್ಟೇ ಭಾರತದ ಪಾಲಾಗಿತ್ತು. ಇನ್ನು 2024ರ ಒಲಿಂಪಿಕ್ಸ್‌ಗೆ ಈಗಾಗಲೇ 49 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ.

    ರೇಸ್‌ನಲ್ಲಿ ಭಾರತ:

    ಒಲಿಂಪಿಕ್ಸ್‌ ಕ್ರೀಡಾಕೂಟವು ಪ್ರತಿ 4 ವರ್ಷಗಳಿಗೊಮ್ಮೆ ನಡೆಯುತ್ತದೆ. 2024ರ ಒಲಿಂಪಿಕ್ಸ್‌ ಪ್ಯಾರಿಸ್‌ನಲ್ಲಿ 2028ರ ಒಲಿಂಪಿಕ್ಸ್‌ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿವೆ. 2032ರ ಆತಿಥ್ಯ ಆಸ್ಟ್ರೇಲಿಯಾದ ಪಾಲಾಗಿದೆ. ಈಗ 2036, 2040ರ ಸರದಿ ಬಾಕಿಯಿದ್ದು, ಭಾರತ ಈ ವಿಚಾರದಲ್ಲಿ ಪ್ರಬಲ ಆಕಾಂಕ್ಷಿಯಾಗಿದೆ. ಏಕೆಂದರೆ ಯಾವುದೇ ರಾಷ್ಟ್ರಕ್ಕೆ ಒಲಿಂಪಿಕ್ಸ್‌ ಆತಿಥ್ಯ ಲಾಭ ತಂದುಕೊಡುತ್ತದೆ. ಒಲಿಂಪಿಕ್ಸ್‌ ಕ್ರೀಡಾಕೂಡ ಆಯೋಜನೆಯಿಂದ ಅಂತಾರಾಷ್ಟ್ರೀಯ ಸಂಬಂಧಗಳ ಸುಧಾರಣೆಯಾಗಲಿದೆ. ಜೊತೆಗೆ ಬಹುರಾಷ್ಟ್ರೀಯ ಸಂಸ್ಥೆಗಳ ಹೂಡಿಕೆಯಿಂದ ಭಾರೀ ಲಾಭ ಸಿಗುತ್ತದೆ. ಅನೇಕ ರಾಷ್ಟ್ರಗಳ ರಾಯಭಾರಿಗಳು ಆಗಮಿಸುವುದರಿಂದ ಕ್ರೀಡಾ ರಾಜತಾಂತ್ರಿಕ ಸಂಬಂಧಗಳು ಬಲಗೊಳ್ಳುತ್ತವೆ. ಸ್ಥಳೀಯ ಕ್ರೀಡೆಗಳಿಗೆ ಉತ್ತೇಜನ ಸಿಗುತ್ತದೆ, ಕ್ರೀಡಾ ಉದ್ಯಮಕ್ಕೆ ಬಲ ಸಿಗುತ್ತದೆ, ಮುಖ್ಯವಾಗಿ ಪ್ರವಾಸೋದ್ಯಮಕ್ಕೆ ಒಲಿಂಪಿಕ್ಸ್‌ ಬಹುದೊಡ್ಡ ಬೂಸ್ಟರ್ ಡೋಸ್‌ ಆಗಿದ್ದು, ಉದ್ಯೋಗಾವಕಾಶಗಳನ್ನೂ ಸೃಷ್ಟಿಸುತ್ತದೆ. 

    ಒಲಿಂಪಿಕ್ಸ್‌ ಆಯೋಜಿಸಲು ಭಾರತಕ್ಕೆಷ್ಟು ಹಣ ಬೇಕು?

    2008ರ ಬೀಜಿಂಗ್ ಒಲಿಂಪಿಕ್ಸ್ ಇದುವರೆಗಿನ ಅತ್ಯುತ್ತಮ ಆಯೋಜನೆ ಎಂದೇ ವಿಶ್ಲೇಷಿಸಲಾಗುತ್ತದೆ. ಚೀನಾ ಬರೋಬ್ಬರಿ 6.81 ಶತಕೋಟಿ ಡಾಲರ್ ವೆಚ್ಚಮಾಡಿತ್ತು. ಚೀನಾದಂತೆ ಸಕಲ ವ್ಯವಸ್ಥೆಗಳನ್ನು ನೀಡಿ ಒಲಿಂಪಿಕ್ಸ್‌ ಆಯೋಜಿಸಲು ಭಾರತಕ್ಕೆ ಕನಿಷ್ಠ 3-4 ಲಕ್ಷಕೋಟಿ ರೂ. ಮೀಸಲಿಡುವುದು ಅನಿವಾರ್ಯವಾಗಬಹುದು. ಆದರೆ, ಹಲವು ರಾಷ್ಟ್ರಗಳು ಐಒಸಿ ಅಂದಾಜಿಸುವ ವಾಸ್ತವಿಕ ವೆಚ್ಚಕ್ಕಿಂತ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿದ ನಿದರ್ಶನಗಳೂ ಇವೆ. ವಿಶೇಷವಾಗಿ ಈ ಸಂದರ್ಭದಲ್ಲಿ ಮೂಲ ಸೌಕರ್ಯಗಳಿಗೆ ಹೆಚ್ಚಿನ ವೆಚ್ಚ ಬೀಳುತ್ತದೆ ಎಂದು ಹೇಳಲಾಗಿದೆ.

    ಪ್ರಮುಖ ದಿನಾಂಕ – ಯಾವ ದಿನ ಯಾವ ಸ್ಪರ್ಧೆ? 

    • ಉದ್ಘಾಟನಾ ಸಮಾರಂಭ: ಜುಲೈ 26
    • ಸಮಾರೋಪ ಸಮಾರಂಭ: ಆಗಸ್ಟ್ 11
    • ಜಿಮ್ನಾಸ್ಟಿಕ್ಸ್ ಸ್ಪರ್ಧೆ: ಜುಲೈ 27, ಆಗಸ್ಟ್ 5
    • ಈಜು ಸ್ಪರ್ಧೆ: ಜುಲೈ 27, ಆಗಸ್ಟ್ 4
    • ಅಥ್ಲೆಟಿಕ್ಸ್ (ಟ್ರ್ಯಾಕ್ ಮತ್ತು ಫೀಲ್ಡ್): ಆಗಸ್ಟ್ 1, ಆಗಸ್ಟ್ 11
    • ಪುರುಷರ ಬಾಸ್ಕೆಟ್‌ಬಾಲ್: ಆಗಸ್ಟ್ 10
    • ಮಹಿಳೆಯರ ಬಾಸ್ಕೆಟ್‌ಬಾಲ್ – ಆಗಸ್ಟ್ 11
    • ಪುರುಷರ ಫುಟ್ಬಾಲ್‌ ಪಂದ್ಯ – ಆಗಸ್ಟ್ 9
    • ಮಹಿಳೆಯರ ಫುಟ್ಬಾಲ್‌ ಪಂದ್ಯ – ಆಗಸ್ಟ್ 10
    • ಪುರುಷರ ಗಾಲ್ಫ್ – ಆಗಸ್ಟ್ 4
    • ಮಹಿಳೆಯರ ಗಾಲ್ಫ್ – ಆಗಸ್ಟ್ 10
    • ಮಹಿಳೆಯರ ಟೆನ್ನಿಸ್‌ ಸಿಂಗಲ್ಸ್ – ಆಗಸ್ಟ್ 3
    • ಪುರುಷರ ಟೆನ್ನಿಸ್‌ ಸಿಂಗಲ್ಸ್ – ಆಗಸ್ಟ್ 4
    • ಮಹಿಳೆಯರ ಬೀಚ್ ವಾಲಿಬಾಲ್ ಪಂದ್ಯ – ಆಗಸ್ಟ್ 9
    • ಪುರುಷರ ಬೀಚ್ ವಾಲಿಬಾಲ್ ಪಂದ್ಯ- ಆಗಸ್ಟ್ 10
  • ದುಬೈನಲ್ಲಿ ಗೌಡರ ಗೌಜಿ ಗಮ್ಮತ್ತು-2024 – ಒಕ್ಕಲಿಗ ಸಮುದಾಯಗಳ ಕುಟುಂಬ ಸಮಾಗಮ

    ದುಬೈನಲ್ಲಿ ಗೌಡರ ಗೌಜಿ ಗಮ್ಮತ್ತು-2024 – ಒಕ್ಕಲಿಗ ಸಮುದಾಯಗಳ ಕುಟುಂಬ ಸಮಾಗಮ

    ಅಬುಧಾಬಿ: ದುಬೈನ ಒಕ್ಕಲಿಗ ಸಂಘದಿಂದ (Vokkaliga Organisation) ಇತ್ತೀಚೆಗೆ ನಡೆದ ಒಕ್ಕಲಿಗರ ವಿಶೇಷ ವಿಹಾರ ಕೂಟವು ಕಣ್ಮನ ಸೆಳೆಯಿತು.

    ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಒಕ್ಕಲಿಗ ಕುಟುಂಬಗಳ ಸಮಾಗಮವಾಯಿತು. ದುಬೈ (Dubai) ಒಕ್ಕಲಿಗ ಸಂಘದಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸಂಘದ ಅಧ್ಯಕ್ಷರಾದ ಕಿರಣ್ ಗೌಡ ಆವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 300ಕ್ಕೂ ಹೆಚ್ಚು ಒಕ್ಕಲಿಗ ಸಮುದಾಯದವರು (Vokkaliga Community) ಪಾಲ್ಗೊಂಡಿದ್ದರು.

    ಮಹಿಳೆಯರು ಮಕ್ಕಳು ಸೇರಿದಂತೆ ನೂರಾರು ಮಂದಿ ಒಂದೆಡೆ ಸೇರಿ ವಿವಿಧ ಆಟೋಟ ಸ್ಪರ್ಧೆಗಳಲ್ಲೂ ಪಾಲ್ಗೊಂಡಿದ್ದರು. ಮಕ್ಕಳು ಮತ್ತು ಹಿರಿಯರಿಗೆ ವಿಶೇಷ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದನ್ನೂ ಓದಿ: ಬ್ರಿಟನ್ ಲೇಖಕಿ ನಿತಾಶಾ ಕೌಲ್‌ಗೆ ನೋ ಎಂಟ್ರಿ – ಬೆಂಗಳೂರು ವಿಮಾನ ನಿಲ್ದಾಣದಿಂದಲೇ ವಾಪಸ್

    ಇದೇ ಸಂದರ್ಭದಲ್ಲಿ ಹೊಸದಾಗಿ ಆಯ್ಕೆಯಾದ ಸಮಿತಿಯ ಸದ್ಯಸರಿಗೆ ಅಭಿನಂದನೆ ಸಲ್ಲಿಸಲಾಯ್ತು. ಇದೇ ವೇಳೆ ಗೌಡರ ಶೈಲಿಯ ಊಟೋಪಚಾರಗಳೊಂದಿಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಕಣ್ಮನ ಸೆಳೆದವು. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ನವಾಜ್‌ ಷರೀಫ್‌ ಪುತ್ರಿ ಆಯ್ಕೆ

  • ತಾಯಿ ಆಸ್ಪತ್ರೆಯಲ್ಲಿದ್ದರೂ ದೇಶಕ್ಕಾಗಿ ಓಡೋಡಿ ಬಂದ ಅಶ್ವಿನ್‌!

    ತಾಯಿ ಆಸ್ಪತ್ರೆಯಲ್ಲಿದ್ದರೂ ದೇಶಕ್ಕಾಗಿ ಓಡೋಡಿ ಬಂದ ಅಶ್ವಿನ್‌!

    – ಟೀಂ ಇಂಡಿಯಾ ಅಭಿಮಾನಿಗಳಿಂದ ಮೆಚ್ಚುಗೆ

    ರಾಜ್‌ಕೋಟ್‌:‌ ಭಾರತ ಮತ್ತು ಇಂಗ್ಲೆಂಡ್‌ ನಡುವಿನ 3ನೇ ಟೆಸ್ಟ್​ ಪಂದ್ಯದ 2ನೇ ದಿನದಿಂದ ಅಲಭ್ಯರಾಗಿದ್ದ ಟೀಂ ಇಂಡಿಯಾ ಸ್ಪಿನ್‌ ಮಾಂತ್ರಿಕ ರವಿಚಂದ್ರನ್ ಅಶ್ವಿನ್ (Ravichandran Ashwin) 4ನೇ ದಿನದಂದು ತಂಡಕ್ಕೆ ಮರಳಿದ್ದಾರೆ.‌

    ಕುಟುಂಬದ ಕಾಳಜಿ ಒಂದುಕಡೆಯಾದ್ರೆ ದೇಶಕ್ಕಾಗಿ ಆಡಬೇಕು ಎನ್ನುವ ಬದ್ಧತೆ ಮತ್ತೊಂದು ಕಡೆ ಎಂಬುದನ್ನು ಅಶ್ವಿನ್‌ ಸಾಬೀತು ಮಾಡಿದ್ದಾರೆ. ಅಶ್ವಿನ್‌ ಅವರ ಈ ಬದ್ಧತೆಗೆ ಟೀಂ ಇಂಡಿಯಾ ಅಭಿಮಾನಿಗಳು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅವರು ಚಾರ್ಟರ್ಡ್ ಫ್ಲೈಟ್ ವ್ಯವಸ್ಥೆ ಮಾಡಿದ ನಂತರ ಅಶ್ವಿನ್‌ ಯಾವುದೇ ಅಡೆತಡೆಗಳಿಲ್ಲದೇ ರಾಜ್‌ಕೋಟ್‌ಗೆ ಬಂದು ಟೀಂ ಇಂಡಿಯಾ ಪ್ಲೇಯಿಂಗ್‌-11 ನಲ್ಲಿ ಸೇರಿಕೊಂಡಿದ್ದಾರೆ. ಫ್ಲೈಟ್‌ ವ್ಯವಸ್ಥೆ ಕಲ್ಪಿಸಿದ ಬಿಸಿಸಿಐಗೆ ಅಶ್ವಿನ್‌ ಧನ್ಯವಾದ ಸಲ್ಲಿಸಿದ್ದಾರೆ. ಸದ್ಯ ಅಶ್ಚಿನ್‌ ಅವರ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಏನಾಗಿತ್ತು?
    ಅನಾರೋಗ್ಯದ ಹಿನ್ನೆಲೆಯಲ್ಲಿ ಅಶ್ವಿನ್‌ ಅವರ ತಾಯಿ ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ಹಿನ್ನೆಲೆಯಲ್ಲಿ ಅಶ್ವಿನ್‌ ಟೀಂ ಇಂಡಿಯಾವನ್ನು ತೊರೆದಿದ್ದರು. ಅಶ್ವಿನ್‌ ಅವರ ಸೇವೆ ಇನ್ನುಮುಂದೆ ತಂಡಕ್ಕೆ ಸಿಗುವುದಿಲ್ಲ ಎಂದೇ ಭಾವಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಸಹ 10 ಆಟಗಾರರೊಂದಿಗೆ ಕಣಕ್ಕಿಳಿದಿತ್ತು. ಫೀಲ್ಡಿಂಗ್‌ನಲ್ಲಿ ಮಾತ್ರ ಬದಲಿ ಆಟಗಾರನಿಗೆ ಅವಕಾಶವಿದ್ದ ಕಾರಣ ಅಶ್ವಿನ್‌ ಬದಲಿಗೆ ದೇವದತ್‌ ಪಡಿಕಲ್‌ ಅವರನ್ನು ಫೀಲ್ಡಿಂಗ್‌ಗೆ ಬಳಸಿಕೊಳ್ಳಲಾಗಿತ್ತು. ಆದ್ರೆ ಇಂದು ಮೈದಾನಕ್ಕೆ ಆಗಮಿಸಿರುವ ಅಶ್ವಿನ್‌ ಟೀಂ ಇಂಡಿಯಾ ಸೇರಿಕೊಂಡು ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.

  • ದಿಢೀರ್‌ ಮನೆಗೆ ತೆರಳಿದ ಅಶ್ವಿನ್‌ – 10 ಮಂದಿಯೊಂದಿಗೆ ಕಣಕ್ಕೆ ಇಳಿಯಲಿದೆ ಭಾರತ

    ದಿಢೀರ್‌ ಮನೆಗೆ ತೆರಳಿದ ಅಶ್ವಿನ್‌ – 10 ಮಂದಿಯೊಂದಿಗೆ ಕಣಕ್ಕೆ ಇಳಿಯಲಿದೆ ಭಾರತ

    ರಾಜ್‌ಕೋಟ್‌: ಸ್ಪಿನ್ನರ್‌ ಆರ್‌ ಅಶ್ವಿನ್‌ ( R Ashwin) ಈಗ ನಡೆಯುತ್ತಿರುವ ಮೂರನೇ ಟೆಸ್ಟ್‌ ಪಂದ್ಯದಿಂದ (Test Match) ದಿಢೀರ್‌ ಮನೆಗೆ ತೆರಳಿದ್ದಾರೆ. ಇದರಿಂದಾಗಿ ಇಂಗ್ಲೆಂಡ್‌ (England) ವಿರುದ್ಧದ ಪಂದ್ಯದಲ್ಲಿ 10 ಆಟಗಾರರೊಂದಿಗೆ ಭಾರತ (Team India) ಪಂದ್ಯ ಆಡುತ್ತಿದೆ.

    ಅಶ್ವಿನ್‌ ಬದಲು ಫೀಲ್ಡಿಂಗ್‌ನಲ್ಲಿ ಬದಲಿ ಆಟಗಾರನನ್ನು ಮಾತ್ರವೇ ಭಾರತ ಆಡಿಸಲು ಅವಕಾಶವಿದೆ. ಇಂಗ್ಲೆಂಡ್‌ ವಿರುದ್ಧ ನಡೆಯತ್ತಿರುವ ಮೂರನೇ ಟೆಸ್ಟ್‌ ಪಂದ್ಯದ ಮುಂದಿನ ಭಾಗದಲ್ಲಿ ಅಶ್ವಿನ್‌ ಅವರ ಸೇವೆ ತಂಡಕ್ಕೆ ಸಿಗುವುದಿಲ್ಲ. ಕುಟುಂಬದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾದ ಕಾರಣಕ್ಕೆ ಅವರು ತಂಡವನ್ನು ತೊರೆದಿದ್ದಾರೆ ಬಿಸಿಸಿಐ (BCCI) ಹೇಳಿಕೆ ನೀಡಿದೆ.  ಇದನ್ನೂ ಓದಿ: ಟೆಸ್ಟ್‌ ಕ್ರಿಕೆಟ್‌ನಲ್ಲಿ 500 ವಿಕೆಟ್‌ – ಇತಿಹಾಸ ಬರೆದ ಸ್ಪಿನ್‌ ಮಾಂತ್ರಿಕ ಅಶ್ವಿನ್‌

    ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ (Rajeev Shukla) ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಕಾರಣ ತಿಳಿಸಿದ್ದಾರೆ. ಅಶ್ವಿನ್‌ ಅವರ ತಾಯಿ (Mother) ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಅವರು ರಾಜ್‌ಕೋಟ್‌ ತೊರೆದು ಶೀಘ್ರವೇ ತಾಯಿಯನ್ನು ನೋಡಲು ಚೆನ್ನೈಗೆ ತೆರಳಬೇಕು ಎಂದು ಹೇಳಿದ್ದಾರೆ.  ಇದನ್ನೂ ಓದಿ: ಪಂದ್ಯ ಆರಂಭಕ್ಕೂ ಮುನ್ನವೇ ಭಾರತಕ್ಕೆ 5 ರನ್‌ ದಂಡ!

    ಚಾಂಪಿಯನ್ ಕ್ರಿಕೆಟಿಗ ಮತ್ತು ಅವರ ಕುಟುಂಬಕ್ಕೆ ಬಿಸಿಸಿಐ ಅಗತ್ಯ ಬೆಂಬಲ ನೀಡುತ್ತದೆ. ಆಟಗಾರರು ಮತ್ತು ಅವರ ಪ್ರೀತಿಪಾತ್ರರ ಆರೋಗ್ಯ ಮತ್ತು ಯೋಗಕ್ಷೇಮವು ಅತ್ಯಂತ ಮಹತ್ವದ್ದಾಗಿದೆ. ಅಶ್ವಿನ್ ಮತ್ತು ಅವರ ಕುಟುಂಬದವರು ಈ ಸವಾಲಿನ ಸಮಯದಲ್ಲಿ ಅವರ ಖಾಸಗಿತನವನ್ನು ಮಂಡಳಿ ಗೌರವಿಸುತ್ತದೆ ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಮೂರನೇ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 445 ರನ್‌ಗಳಿಗೆ ಆಲೌಟ್‌ ಆಗಿದೆ. ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 2 ವಿಕೆಟ್‌ ನಷ್ಟಕ್ಕೆ 207 ರನ್‌ ಹೊಡೆದಿದೆ.

    ಮೊದಲ ಇನ್ನಿಂಗ್ಸ್‌ನಲ್ಲಿ ಅಶ್ವಿನ್‌ 37 ರನ್ ಹೊಡೆದಿದ್ದರೆ ಬೌಲಿಂಗ್‌ನಲ್ಲಿ 7 ಓವರ್‌ ಎಸೆದು 37 ರನ್‌ ನೀಡಿ 1 ವಿಕೆಟ್‌ ಪಡೆದಿದ್ದರು.