Tag: ಕೋವಿಡ್ ವಾರ್ಡ್

  • ಪಿಪಿಇ ಕಿಟ್ ಧರಿಸಿ ಕೋವಿಡ್ ವಾರ್ಡ್ ಗೆ ನಿರ್ಮಲಾನಂದನಾಥ ಶ್ರೀಗಳ ಭೇಟಿ

    ಪಿಪಿಇ ಕಿಟ್ ಧರಿಸಿ ಕೋವಿಡ್ ವಾರ್ಡ್ ಗೆ ನಿರ್ಮಲಾನಂದನಾಥ ಶ್ರೀಗಳ ಭೇಟಿ

    – ಸೋಂಕಿತರಿಗೆ ಧೈರ್ಯ ತುಂಬಿದ ಶ್ರೀಗಳು

    ಮಂಡ್ಯ: ಕೋವಿಡ್ ವಾರ್ಡ್‍ನ್ನು ಪರಿಶೀಲನೆ ಮಾಡುವ ದೃಷ್ಟಿಯಿಂದ ಚುಂಚನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಪಿಪಿಇ ಕಿಟ್ ಧರಿಸಿ ಶ್ರೀ ಆದಿಚುಂಚನಗಿರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

    ಶ್ರೀ ಆದಿಚುಂಚನಗಿರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿದ, ಶ್ರೀ ನಿರ್ಮಲಾನಂದನಾಥ ಸ್ಚಾಮೀಜಿ ಪಿಪಿಇ ಕಿಟ್ ಧರಿಸಿ ಕೊರೋನಾ ಸೋಂಕಿತರ ವಾರ್ಡ್‍ಗೆ ತೆರಳಿದರು. ಅಲ್ಲಿನ ಮೂಲಭೂತ ಸೌಕರ್ಯ ಮತ್ತು ಚಿಕಿತ್ಸೆಯ ಕುರಿತು ಪರಿಶೀಲನೆ ನಡೆಸಿದರು. ನಂತರ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಬಳಿ ಬಂದು ಆಸ್ಪತ್ರೆಯಲ್ಲಿ ನೀಡುತ್ತಿರುವ ಚಿಕಿತ್ಸೆ ಹಾಗೂ ಆಹಾರದ ಕುರಿತು ವಿಚಾರಿಸಿದರು.

    ಸೋಂಕಿತರಿಗೆ ಕೊರೊನಾ ವಿರುದ್ಧ ಹೋರಾಟ ಮಾಡುವ ಅನಿವಾರ್ಯ ಸ್ಥಿತಿ ನಮಗೆ ಎದುರಾಗಿದೆ. ಅದರ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ನಾವೆಲ್ಲಾ ಇದ್ದೀವಿ, ನೀವು ಧೃತಿಗೆಡುವ ಅವಶ್ಯಕತೆ ಇಲ್ಲ ಎಂದು ಧೈರ್ಯ- ಸ್ಥೈರ್ಯ ತುಂಬಿ ಶ್ರೀಘ್ರ ಗುಣಮುಖರಾಗಿ ಎಂದು ಆಶೀರ್ವಾದ ಮಾಡಿದರು. ಇದೇ ವೇಳೆ ಸೋಂಕಿತರಿಗೆ ಹಣ್ಣು-ಹಂಪಲನ್ನು ನೀಡಿದರು.

  • ಕೊರೊನಾ ವಾರ್ಡಿನಿಂದ ಸೋಂಕಿತ ಗಂಧದ ಕಳ್ಳ ಪರಾರಿ

    ಕೊರೊನಾ ವಾರ್ಡಿನಿಂದ ಸೋಂಕಿತ ಗಂಧದ ಕಳ್ಳ ಪರಾರಿ

    ಕಾರವಾರ: ಕೊರೊನಾ ಸೋಂಕಿತ ಗಂಧದ ಕಳ್ಳ ಕೋವಿಡ್ ವಾರ್ಡಿನಿಂದ ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕ್ರಿಮ್ಸ್ ಕೋವಿಡ್ ವಾರ್ಡಿನಲ್ಲಿ ನಡೆದಿದೆ.

    ಮುಂಡಗೋಡಿನ ನಿವಾಸಿ ಸೈಯದ್ ಇಸ್ರಾಲ್ ಕರೀಮ್ ಕಾನ್ ಕೊರೊನಾ ವಾರ್ಡಿನಿಂದ ತಪ್ಪಿಸಿಕೊಂಡ ಕೋವಿಡ್ ಸೋಂಕಿತ ಕಳ್ಳನಾಗಿದ್ದಾನೆ. ಎರಡು ದಿನದ ಹಿಂದೆ ಮುಂಡಗೋಡಿನಲ್ಲಿ ಗಂಧ ಕಳ್ಳತನ ಮಾಡಿದ ಹಿನ್ನೆಲೆಯಲ್ಲಿ ಈತನನ್ನು ಬಂಧಿಸಲಾಗಿತ್ತು.

    ಬಂಧನದ ನಂತರ ಕೊರೊನಾ ಟೆಸ್ಟ್ ಮಾಡಿಸಿದ್ದು, ವರದಿಯಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕೋವಿಡ್ ವಾರ್ಡಿಗೆ ದಾಖಲು ಮಾಡಲಾಗಿತ್ತು. ಆದರೆ ಇಂದು ರಾತ್ರಿ ವಾರ್ಡಿನಿಂದ ಪರಾರಿಯಾಗಿದ್ದು, ಆರೋಪಿಗಾಗಿ ಶೋಧ ನಡೆಸಲಾಗುತಿದೆ. ಈ ಸಂಬಂಧ ಕಾರವಾರನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಇದೇ ಮೊದಲ ಬಾರಿಗೆ ಕೋವಿಡ್ ವಾರ್ಡಿನಲ್ಲಿ ಗ್ರಂಥಾಲಯದ ಸೌಲಭ್ಯ

    ಇದೇ ಮೊದಲ ಬಾರಿಗೆ ಕೋವಿಡ್ ವಾರ್ಡಿನಲ್ಲಿ ಗ್ರಂಥಾಲಯದ ಸೌಲಭ್ಯ

    – ಸಾಗರದಲ್ಲಿ ವಿಶಿಷ್ಟ ಪ್ರಯೋಗ

    ಶಿವಮೊಗ್ಗ: ಕೊರೊನಾ ಸೋಂಕಿತರು ಮಾನಸಿಕ ಖಿನ್ನತೆ ಹಾಗೂ ಒಂಟಿತನದಿಂದ ಹೊರ ಬರುವ ಸಲುವಾಗಿ ಶಿವಮೊಗ್ಗ ಜಿಲ್ಲೆ ಸಾಗರದ ಕೋವಿಡ್ ವಾರ್ಡಿನಲ್ಲಿ ಆರೋಗ್ಯ ಸಿಬ್ಬಂದಿ ಸೋಂಕಿತರಿಗಾಗಿ ಗ್ರಂಥಾಲಯ ತೆರೆದಿದ್ದಾರೆ.

    ಕೊರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಹಲವು ಮಂದಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಕೊರೊನಾ ತುತ್ತಾಗಿ ಚಿಕಿತ್ಸೆ ಪಡೆಯಬೇಕಾದರೆ ತಮ್ಮವರಿಂದ ದೂರವಿದ್ದು ಚಿಕಿತ್ಸೆ ಪಡೆಯುವ ಅನಿವಾರ್ಯತೆ ಇದೆ. ಹೀಗಾಗಿ ಸೋಂಕಿತರಿಗೆ ಒಂಟಿತನ ಕಾಡುತ್ತಿದೆ.

    ಈ ಮಾನಸಿಕ ಖಿನ್ನತೆ ಹಾಗೂ ಒಂಟಿತನದಿಂದ ಸೋಂಕಿತರು ಹೊರ ಬರುವ ಸಲುವಾಗಿ ಗ್ರಂಥಾಲಯ ತೆರೆಯಲಾಗಿದೆ. ಈ ಗ್ರಂಥಾಲಯದಲ್ಲಿ ದಿನಪತ್ರಿಕೆಗಳು, ಮಾಸಿಕಗಳು ಜೊತೆಗೆ ದೊಡ್ಡ ದೊಡ್ಡ ಲೇಖಕರ ಜನಪ್ರಿಯ ಕಾದಂಬರಿಗಳನ್ನು ಸಹ ಇಡಲಾಗಿದೆ.

    ಸದ್ಯ 500 ಪುಸ್ತಕಗಳನ್ನು ಕೋವಿಡ್ ವಾರ್ಡ್ ನಲ್ಲಿ ಇಟ್ಟಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪುಸ್ತಕಗಳನ್ನು ಖರೀದಿಸಲಾಗುವುದು ಎಂದಿದ್ದಾರೆ. ಜೊತೆಗೆ ಸಾಹಿತಿಗಳು ಹಾಗೂ ಲೇಖಕರು ಯಾರಾದರೂ ಉಚಿತವಾಗಿ ತಾವು ಬರೆದಿರುವ ಪುಸ್ತಕವನ್ನು ನೀಡುವುದಾದರೆ ನೀಡಬಹುದು ಎಂಬ ಮನವಿಯನ್ನು ಸಹ ಮಾಡಿದ್ದಾರೆ.

    ಅಲ್ಲದೇ ರಾಜ್ಯದಲ್ಲಿಯೇ ಇದೇ ಪ್ರಥಮವಾದ ಕೋವಿಡ್ ವಾರ್ಡ್ ನಲ್ಲಿ ತೆರೆದಿರುವ ಗ್ರಂಥಾಲಯ ಇದಾಗಿದ್ದು, ಜಿಲ್ಲಾ ಕೇಂದ್ರದ ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ ಸಹ ಗ್ರಂಥಾಲಯ ತೆರೆಯಲು ಆರೋಗ್ಯ ಸಿಬ್ಬಂದಿ ಚಿಂತನೆ ನಡೆಸಿದ್ದಾರೆ.

  • ಕೋವಿಡ್ ವಾರ್ಡ್ ನಲ್ಲಿ ಸೋಂಕಿತನ ಬರ್ತ್ ಡೇ – ವೈರಲ್ ಆಯ್ತು ವಿಡಿಯೋ

    ಕೋವಿಡ್ ವಾರ್ಡ್ ನಲ್ಲಿ ಸೋಂಕಿತನ ಬರ್ತ್ ಡೇ – ವೈರಲ್ ಆಯ್ತು ವಿಡಿಯೋ

    ಲಕ್ನೋ: ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಹುಟ್ಟುಹಬ್ಬ ಆಚರಿಸುವ ಮೂಲಕ ವೈದ್ಯಕೀಯ ಸಿಬ್ಬಂದಿ ರೋಗಿಗಳನ್ನ ಮಾನಸಿಕವಾಗಿ ಸದೃಢ ಮಾಡಿದ್ದಾರೆ. ಕೊರೊನಾ ರೋಗಿ ಬರ್ತ್ ಡೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆಸ್ಪತ್ರೆಯ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

    ಮೀರಥ್ ನಗರದ ಗಢ ರಸ್ತೆಯಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತನ ಹುಟ್ಟುಹಬ್ಬವನ್ನ ಆಚರಿಸಲಾಗಿದೆ. ವಾರ್ಡ್ ನಲ್ಲಿ ಮ್ಯೂಸಿಕ್ ಹಾಕಿದ್ದು, ರೋಗಿಗಳು ಹೆಜ್ಜೆ ಹಾಕಿ ಸಂತೋಷಪಟ್ಟಿದ್ದಾರೆ.

    ಸೋಂಕಿತರನ್ನ ಮಾನಸಿಕವಾಗಿ ಸದೃಢರನ್ನಾಗಿ ಮಾಡಲು ಹುಟ್ಟು ಹಬ್ಬ ಆಚರಿಸಲಾಗಿತ್ತು. ಕುಟುಂಬದಿಂದ ದೂರವಿರುವ ಸೋಂಕಿತರ ಮನೋರಂಜನೆಗಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ರೋಗಿಗಳಿಗೆ ಆಯುರ್ವೇದದ ಚಿಕಿತ್ಸೆ ಜೊತೆಗೆ ಪ್ರತಿದಿನ ಯೋಗ ಹೇಳಿ ಕೊಡಲಾಗ್ತಿದೆ ಎಂದು ಆಸ್ಪತ್ರೆಯ ನಿರ್ದೇಶಕರು ಹೇಳಿದ್ದಾರೆ.

  • ರಾಯಚೂರಿನಲ್ಲಿ ಊಟ, ನೀರಿಗಾಗಿ ಹೊರಬರುತ್ತಿರುವ ಕೊರೊನಾ ಸೋಂಕಿತರು

    ರಾಯಚೂರಿನಲ್ಲಿ ಊಟ, ನೀರಿಗಾಗಿ ಹೊರಬರುತ್ತಿರುವ ಕೊರೊನಾ ಸೋಂಕಿತರು

    ರಾಯಚೂರು: ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಾದ ರಿಮ್ಸ್ ಹಾಗೂ ಓಪೆಕ್ ನಲ್ಲಿನ ಸಮಸ್ಯೆಗಳು ಬಗೆಹರಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಸ್ವಚ್ಛತೆ ಕೊರತೆ, ಊಟ, ನೀರಿನ ಸೌಲಭ್ಯ ಸರಿಯಾಗಿ ಇಲ್ಲದಿರುವುದು, ಮುಖ್ಯವಾಗಿ ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲ ಅನ್ನೋ ಸೋಂಕಿತರ ಆರೋಪ ಈಗಲೂ ಮುಂದುವರೆದಿದೆ.

    ಊಟ, ತಿಂಡಿ, ನೀರಿಗಾಗಿ ರೋಗಿಗಳ ಜೊತೆಗೆ ಇರುವವರು ಹಾಗೂ ರೋಗಿಗಳು ಸಹ ಹೊರಗೆ ಬಂದು ಹೋಟೆಲ್‍ಗಳಲ್ಲಿ ತೆಗೆದುಕೊಂಡು ಆಸ್ಪತ್ರೆಗೆ ವಾಪಸ್ ಮರಳುತ್ತಿದ್ದಾರೆ. ಟೀ ಕೊಡುತ್ತಿಲ್ಲ, ಕುಡಿಯುವ ನೀರಿನ ಸೌಲಭ್ಯವಿಲ್ಲ, ಹೊರಗಡೆಯಿಂದಲೇ ನೀರು ತರಬೇಕಾಗಿದೆ. ವೈದ್ಯರು ಸಕಾಲಕ್ಕೆ ಬಂದು ಚಿಕಿತ್ಸೆ ನೀಡುತ್ತಿಲ್ಲ ಎಂದು ಸೋಂಕಿತರ ಅಟೆಂಡರ್‌ಗಳು ಆರೋಪಿಸಿದ್ದಾರೆ.

    ಕೋವಿಡ್ ರೋಗಿಗಳು ಇರುವ ವಾರ್ಡುಗಳಲ್ಲಿ ಸ್ವಚ್ಛತೆ ಇಲ್ಲ. ವಾರ್ಡ್‌ಗಳ ಶೌಚಾಲಯಗಳು ಗಬ್ಬುನಾರುತ್ತಿವೆ. ವಾರ್ಡಗಳಲ್ಲಿ ಸ್ವಚ್ಛ ಮಾಡಲು ಸಿಬ್ಬಂದಿ ಬರುತ್ತಿಲ್ಲ. ಹೀಗಾಗಿ ಸೋಂಕಿತರೇ ವಾರ್ಡ್ ಸ್ವಚ್ಛ ಮಾಡಿಕೊಳ್ಳುತ್ತಿದ್ದಾರೆ. ರಿಮ್ಸ್‌ನಲ್ಲಿ ಕೋವಿಡ್ ರೋಗಿಗಳಿಗಾಗಿ ಪ್ರತ್ಯೇಕ ವಾರ್ಡ ಆರಂಭಿಸಲಾಗಿದೆ. ಆದರೆ ನಾವೇ ಸ್ವಚ್ಛ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಸೋಂಕಿತರು ಅಳಲು ತೊಡಿಕೊಂಡಿದ್ದಾರೆ. ಇಲ್ಲಿಯ ಅವ್ಯವಸ್ಥೆಯ ಬಗ್ಗೆ ಸೋಂಕಿತರೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

    ಇತ್ತೀಚಿಗೆ ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಕೋವಿಡ್ ಆಸ್ಪತ್ರೆಗಳ ಅವ್ಯವಸ್ಥೆ ಸರಿಪಡಿಸುವಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರೂ ಇಲ್ಲಿನ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ.