Tag: ಕೋವಿಡ್ ರಿಪೋರ್ಟ್

  • ಕೋವಿಡ್ ಸೋಂಕಿತೆ ಸತ್ತು 6 ತಿಂಗಳ ಬಳಿಕ ಬಂತು ನೆಗೆಟಿವ್ ವರದಿ

    ಕೋವಿಡ್ ಸೋಂಕಿತೆ ಸತ್ತು 6 ತಿಂಗಳ ಬಳಿಕ ಬಂತು ನೆಗೆಟಿವ್ ವರದಿ

    -ಆರೋಗ್ಯ ಇಲಾಖೆ ಹಾಗೂ ಖಾಸಗಿ ಆಸ್ಪತ್ರೆ ಸಿಬ್ಬಂದಿ ಯಡವಟ್ಟು

    ರಾಯಚೂರು: ಜಿಲ್ಲೆಯ ಸಿಂಧನೂರಿನಲ್ಲಿ ಕೋವಿಡ್ ಅಂತಲೇ 14 ದಿನಕಾಲ ಚಿಕಿತ್ಸೆ ಪಡೆದು ಕೊನೆಗೆ ಸಾವನ್ನಪ್ಪಿದ ಮಹಿಳೆಯ ಕೋವಿಡ್ ರಿಪೋರ್ಟ್ 6 ತಿಂಗಳ ನಂತರ ನೆಗೆಟಿವ್ ಬಂದಿದೆ. ಕೋವಿಡ್ ಸಾವಿನ ಪರಿಹಾರಕ್ಕಾಗಿ ಮೃತಳ ಮಕ್ಕಳು ಓಡಾಡಿದ್ದಕ್ಕೆ ವರದಿಯೇ ಬದಲಾಗಿದೆ. ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಅಂತ ಮೃತಳ ಮಕ್ಕಳು ಈಗ ಹೋರಾಟ ನಡೆಸಿದ್ದಾರೆ.

    ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದ 54 ವರ್ಷದ ಪಾರ್ವತಮ್ಮ ಜ್ವರ ಅಂತ ಸಿಂಧನೂರಿನ ಖಾಸಗಿ ಆಸ್ಪತ್ರೆಗೆ ಕಳೆದ ಮೇ 25ರಂದು ದಾಖಲಾಗಿದ್ದರು. ಮಹಿಳೆಯಲ್ಲಿ ಕೋವಿಡ್ ಲಕ್ಷಣಗಳು ಕಂಡು ಬಂದಿದ್ದರಿಂದ ವೈದ್ಯರು ಸಿಟಿ ಸ್ಕ್ಯಾನ್ ಮಾಡಿಸಿದ್ದರು. ಸಿಟಿ ಸ್ಕ್ಯಾನ್ ವರದಿ ಪ್ರಕಾರ ಕೋವಿಡ್ ಎಂದು ವೈದ್ಯರು ಪರಿಗಣಿಸಿ, ಮಹಿಳೆಯ ಗಂಟಲು ಮಾದರಿ ಸಂಗ್ರಹಿಸಿ ಎಸ್‌ಆರ್‌ಎಫ್‌ಐಡಿ ನೀಡಿ 14 ದಿನಗಳ ಕಾಲ ಚಿಕಿತ್ಸೆ ನೀಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಮಹಿಳೆಯ ಅಂತ್ಯಕ್ರಿಯೆಯೂ ಸಹ ಕೋವಿಡ್ ನಿಯಮದಂತೆ ನೆರವೇರಿಸಲಾಯಿತು. ಇದನ್ನೂ ಓದಿ: ಓಮಿಕ್ರಾನ್ ರೋಗಿಗಳ ಚಿಕಿತ್ಸೆಗೆ ಕೊಟ್ಟಿದ್ದು ವಿಟಮಿನ್, ಪ್ಯಾರಾಸಿಟಮಾಲ್ ಮಾತ್ರೆ

    ಆ ಬಳಿಕ ಮೃತ ಮಹಿಳೆಯ ಮಕ್ಕಳಾದ ಪ್ರಭು ಮತ್ತು ನಾಗರಾಜ್ ಸರ್ಕಾರದ ಪರಿಹಾರ ಹಣಕ್ಕಾಗಿ ಅರ್ಜಿ ಸಲ್ಲಿಕೆ ಮಾಡಲು ಮುಂದಾಗಿದ್ದರು. ಆ ವೇಳೆ ಮೃತ ಮಹಿಳೆಗೆ ಪರಿಹಾರ ಬರಬೇಕಾದರೇ ಕೋವಿಡ್ ರಿಪೋರ್ಟ್ ಕಡ್ಡಾಯವಾಗಿ ತೆಗೆದುಕೊಂಡು ಬರಲು ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಸೂಚನೆ ನೀಡಿದರು. ಹೀಗಾಗಿ ಮೃತ ಮಹಿಳೆಯ ಮಕ್ಕಳು ಕೋವಿಡ್ ರಿಪೋರ್ಟ್ ಪಡೆಯಲು ಎಸ್‌ಆರ್‌ಎಫ್‌ಐಡಿ ಹಿಡಿದು ರಾಯಚೂರಿನ ಡಿಚ್‍ಒ ಕಚೇರಿ, ಇತ್ತ ಸಿಂಧನೂರಿನ ಖಾಸಗಿ ಆಸ್ಪತ್ರೆ ಹಾಗೂ ಟಿಎಚ್‍ಒ ಕಚೇರಿಗೆ ಅಲೆದರೂ 6 ತಿಂಗಳ ಕಾಲ ಕೋವಿಡ್ ರಿಪೋರ್ಟ್ ಮಾತ್ರ ಮೃತಳ ಮಕ್ಕಳಿಗೆ ಸಿಗಲೇ ಇಲ್ಲ.

    ಅತ್ತ ತಾಯಿಯೂ ಇಲ್ಲ, ಇತ್ತ ಸರ್ಕಾರದ ಪರಿಹಾರ ಹಣವೂ ಇಲ್ಲದೆ ಮೃತ ಮಹಿಳೆಯ ಮಕ್ಕಳು ಪರದಾಟ ನಡೆಸಿದ್ದಾರೆ. ಸಿಂಧನೂರಿನ ಟಿಎಚ್‍ಒ ಕಚೇರಿಗೆ ಮೃತ ಮಹಿಳೆಯ ಮಕ್ಕಳು ಹಾಗೂ ಸ್ಥಳೀಯರು ಹೋಗಿ ಒತ್ತಡ ಹಾಕಿದಾಗ ಆರೋಗ್ಯ ಇಲಾಖೆ ಸಿಬ್ಬಂದಿಗಳ ಲೋಪದೊಷ ಕಂಡು ಬಂದಿದೆ. ಸಿಂಧನೂರು ಟಿಎಚ್‍ಒ ಅಯ್ಯಣ್ಣ ಗೌಡ ಖಾಸಗಿ ಆಸ್ಪತ್ರೆ ಸಿಬ್ಬಂದಿ ಹಾಗೂ ಸಿಂಧನೂರು ತಾಲೂಕು ಆಸ್ಪತ್ರೆಯ ಲ್ಯಾಬ್ ಟೆಕ್ನಿಷನ್ ಜೊತೆಗೆ ಸಂಧಾನ ಸಭೆ ನಡೆಸಿ ಪರಿಹಾರದ ಹಣ ಇಬ್ಬರು ಭರಿಸಬೇಕೆಂದು ಸೂಚನೆ ನೀಡಿದ್ದರು. ಅಷ್ಟೇ ಅಲ್ಲದೆ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಈಗ ಅಧಿಕಾರಿಗಳು ಎಸ್‌ಆರ್‌ಎಫ್‌ಐಡಿ ಆಧಾರದ ಸ್ಯಾಂಪಲ್‍ಗೆ ನೆಗೆಟಿವ್ ಎಂದು ರಿಪೋರ್ಟ್ ನೀಡಿದ್ದಾರೆ. ರಿಪೋರ್ಟ್ ನೀಡಲು ವಿಳಂಬ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಆಗಬೇಕು ಅಂತ ಮೃತರ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕೊರೊನಾ ವಾರಿಯರ್ಸ್‍ಗೆ 4 ತಿಂಗಳಿನಿಂದ ಸಿಕ್ಕಿಲ್ಲ ಸಂಬಳ

    ಒಟ್ಟಿನಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಮಾಡಿದ ಯಡವಟ್ಟಿನಿಂದ ಮಹಿಳೆ ಸತ್ತು 6 ತಿಂಗಳ ಬಳಿಕ ಈಗ ಕೋವಿಡ್ ವರದಿ ನೆಗೆಟಿವ್ ಅಂತ ಬಂದಿದೆ. ಆದರೆ ಕೋವಿಡ್ ರಿಪೋರ್ಟ್ ಇಲ್ಲದೆ ವೈದ್ಯರು ಮಹಿಳೆಗೆ ಕೋವಿಡ್ ಚಿಕಿತ್ಸೆ ಏಕೆ ನೀಡಿದ್ದು, ಅನ್ನೋದು ಮೃತರ ಕುಟುಂಬಸ್ಥರ ಪ್ರಶ್ನೆ? ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಪರಿಹಾರ ನೀಡುವಂತೆ ಮೃತರ ಸಂಬಂಧಿಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ವಿಶ್ವದಲ್ಲೇ ಮೊದಲು – ಈಕ್ವೆಡಾರ್‌ನಲ್ಲಿ 5 ವರ್ಷದ ಮೇಲ್ಪಟ್ಟ ಮಕ್ಕಳಿಗೂ ಲಸಿಕೆ ಕಡ್ಡಾಯ

  • 1 ಲಕ್ಷ ಪರಿಹಾರಕ್ಕಾಗಿ ನಕಲಿ ಕೊರೊನಾ ರಿಪೋರ್ಟ್ – ಇಬ್ಬರ ಅರೆಸ್ಟ್

    1 ಲಕ್ಷ ಪರಿಹಾರಕ್ಕಾಗಿ ನಕಲಿ ಕೊರೊನಾ ರಿಪೋರ್ಟ್ – ಇಬ್ಬರ ಅರೆಸ್ಟ್

    ಬಾಗಲಕೋಟೆ: ಕೋವಿಡ್ ನಿಂದ ಮೃತಪಟ್ಟವರಿಗೆ ಸರ್ಕಾರ ಒಂದು ಲಕ್ಷ ರೂ. ಪರಿಹಾರ ಘೋಷಣೆ ಹಿನ್ನೆಲೆ ಬಾಗಲಕೋಟೆಯಲ್ಲಿ ನಕಲಿ ಆರ್‍ಟಿಪಿಸಿಆರ್ ವರದಿ ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲಾಸ್ಪತ್ರೆ ಇಬ್ಬರು ಹೊರಗುತ್ತಿಗೆ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿ, ಇದೀಗ ತನಿಖೆ ಕೈಗೊಂಡಿದ್ದಾರೆ.

    ಬಾಗಲಕೋಟೆ ಜಿಲ್ಲಾಸ್ಪತ್ರೆಯ ಡಾಟಾ ಎಂಟ್ರಿ ಆಪರೇಟರ್ ಹಾಗೂ ಸಿಟಿ ಸ್ಕ್ಯಾನ್ ಸ್ಟಾಪ್ ನರ್ಸ್ ಸೇರಿ ಪಾಸ್ ವರ್ಡ್ ದುರ್ಬಳಕೆ ಮಾಡಿಕೊಂಡು ನಕಲಿ ಕೋವಿಡ್ ರಿಪೋರ್ಟ್ ತಯಾರಿಸಿದ್ದಾರೆ.

    ಎರಡು ತಿಂಗಳು ಹಿಂದೆ ಸತ್ತ ಮಹಿಳೆಗೆ ಇದೀಗ ಆರ್ ಟಿಪಿಸಿಆರ್ ಪಾಸಿಟಿವ್ ರಿಪೋರ್ಟ್ ತಯಾರಿಸಿ ಗೋಲ್ ಮಾಲ್ ಮಾಡಿ ಸಿಕ್ಕು ಬಿದ್ದಿದ್ದಾರೆ. ಸಿಟಿ ಸ್ಕ್ಯಾನ್ ಸೆಂಟರ್ ನ ಸ್ಟಾಪ್ ನರ್ಸ್ ಬಸವರಾಜ್ ಬಿಲಕೇರಿ ಹಾಗೂ ಡಾಟಾ ಎಂಟ್ರಿ ಆಪರೇಟರ್ ಬಸನಗೌಡ ಗಿರಿಯಪ್ಪಗೌಡರ ಸಿಕ್ಕಿಬಿದ್ದ ಆರೋಪಿಗಳಾಗಿದ್ದು, ಇಬ್ಬರ ವಿರುದ್ಧ ಬಾಗಲಕೋಟೆ ನವನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

    ಮೇ 2 ರಂದು ಮುಧೋಳ ತಾಲೂಕಿನ ಬಿದರಿ ಗ್ರಾಮದ 53 ವರ್ಷದ ಶೇಖವ್ವ ರೂಗಿ ಉಸಿರಾಟದ ತೊಂದರೆಯಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಸಿಟಿ ಸ್ಕ್ಯಾನ್ ನಲ್ಲಿ ನ್ಯೂಮೋನಿಯಾ ಜೊತೆಗೆ ಕೋವಿಡ್ ಲಕ್ಷಣವಿತ್ತು. ಈ ವೇಳೆ ಆರ್ ಟಿಪಿಸಿಆರ್ ಪರೀಕ್ಷೆ ಮಾಡಿರಲಿಲ್ಲ. ಇದೀಗ ಸರ್ಕಾರ ಕೋವಿಡ್ ನಿಂದ ಸತ್ತ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದು, ಆರ್ ಟಿಸಿ ಆರ್ ರಿಪೋರ್ಟ್ ಕಡ್ಡಾಯವಿದೆ. ಹೀಗಾಗಿ ಸರ್ಕಾರದ ಪರಿಹಾರ ಪಡೆಯಲು ನಕಲಿ ದಾಖಲೆ ಸೃಷ್ಟಿಸಿದ್ದಾರೆ.

    ಮೇ 1 ರಂದು ಗಂಟಲು ದ್ರವ ಮಾದರಿ ಸಂಗ್ರಹಣೆ ಎಂದು ದಾಖಲೆ ಸೃಷ್ಟಿಸಿದ್ದು, ಅದರ ಆರ್ ಟಿಪಿಸಿಆರ್ ವರದಿ ಜುಲೈ 15 ರಂದು ಪಾಸಿಟಿವ್ ಎಂದು ನಮೂದಿಸಿದ್ದರಿಂದ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿಗಳಿಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಆಸ್ಪತ್ರೆ ಹಿರಿಯ ಅಧಿಕಾರಿಗಳು ತಪಾಸಣೆ ಮಾಡಿದಾಗ ಗೋಲ್ ಮಾಲ್ ಬಹಿರಂಗವಾಗಿದ್ದು, ಡಾಟಾ ಎಂಟ್ರಿ ಆಪರೇಟರ್ ಯೂಜರ್ ಐಡಿ, ಪಾಸ್ ವರ್ಡ್ ದುರುಪಯೋಗ ಪಡಿಸಿಕೊಂಡು ಕೋವಿಡ್ ಪಾಸಿಟಿವ್ ಎಂದು ಎಂಟ್ರಿ ಮಾಡಿದ್ದೇವೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.

    ಇದೀಗ ಪೊಲೀಸರು ಸರ್ಕಾರಕ್ಕೆ ಮೋಸ ಮಾಡಿದ ಆರೋಪದ ಮೇಲೆ ಇಬ್ಬರು ಆರೋಪಿಗಳ ವಿರುದ್ಧ ಠಾಣೆ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿರುವುದಾಗಿ ಜಿಲ್ಲಾಸ್ಪತ್ರೆ ಸರ್ಜನ್ ಡಾ.ಪ್ರಕಾಶ್ ಬಿರಾದಾರ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ಭಾರೀ ಮಳೆ – ಗೋಡೆ ಕುಸಿದು 11 ಮಂದಿ ಸಾವು