Tag: ಕೋಲಾರ

  • ಸ್ಮಶಾನಕ್ಕೆ ಹೋಗಿ ಪೂರ್ವಜರ ಅಸ್ಥಿಪಂಜರ ತಿಂತಾರೆ ಮಕ್ಕಳು, ಮೊಮ್ಮಕ್ಕಳು- ಕೋಲಾರದ ಗಡಿಯಲ್ಲಿ ವಿಚಿತ್ರ ಆಚರಣೆ

    ಸ್ಮಶಾನಕ್ಕೆ ಹೋಗಿ ಪೂರ್ವಜರ ಅಸ್ಥಿಪಂಜರ ತಿಂತಾರೆ ಮಕ್ಕಳು, ಮೊಮ್ಮಕ್ಕಳು- ಕೋಲಾರದ ಗಡಿಯಲ್ಲಿ ವಿಚಿತ್ರ ಆಚರಣೆ

    ಕೋಲಾರ: ಇದು ಜನ ಮರಳೋ ಜಾತ್ರೆ ಮರಳೋ ಗೊತ್ತಿಲ್ಲ. ಮಕ್ಕಳು, ಮರಿ ಮಕ್ಕಳು ಸ್ಮಶಾನಕ್ಕೆ ತೆರಳಿ ಪೂರ್ವಜರ ಅಸ್ಥಿಪಂಜರ ತಿನ್ನುವ ವಿಚಿತ್ರ ಆಚರಣೆ ಕೋಲಾರ ಜಿಲ್ಲೆಯ ಗಡಿಯಲ್ಲಿ ನಡೀತಿದೆ.

    ಪ್ರತಿ ವರ್ಷ ಶಿವರಾತ್ರಿ ಅಮವಾಸ್ಯೆ ದಿನ ಗಡಿಯಲ್ಲಿ ಈ ಆಚರಣೆ ನಡೀತಿದೆ. ತಮಿಳುನಾಡು ಕೃಷ್ಣಗಿರಿ ಜಿಲ್ಲೆಯ ಕೊಲ್ಲಂ ಗ್ರಾಮದಲ್ಲಿ ಅಮವಾಸ್ಯೆ ದಿನ ಕುಟುಂಬಸ್ಥರೆಲ್ಲ ತೆರಳಿ ಪೂರ್ವಜರ ಸಮಾಧಿಗೆ ಪೂಜೆ ಸಲ್ಲಿಸಿ, ನಂತರ ಸಮಾಧಿಯಲ್ಲಿರುವ ಹಿರಿಯರ ಅಸ್ಥಿಪಂಜರ ತೆಗೆದು ಮೂಳೆ ಬುರಡೆ ತಿನ್ನುತ್ತಾರೆ.

    ಯಾವುದೇ ದುಷ್ಟ ಶಕ್ತಿಗಳು ಬರದಂತೆ ಹಾಗೂ ಹಿರಿಯರು ಸದಾ ಕಾಪಾಡುತ್ತಾರೆ ಎಂಬುದು ಇವರ ನಂಬಿಕೆಯಾಗಿದ್ದು, ಪ್ರತಿವರ್ಷ ನಡೆಯುವ ಒಂದು ವಿಶಿಷ್ಟ ಜಾತ್ರೆಯಲ್ಲಿ ಹೀಗೊಂದು ಆಚರಣೆ ಮಾಡ್ತಿದ್ದಾರೆ.

     

  • ದೇವಾಲಯದಲ್ಲಿ ಪಾಠ ಕೇಳುತ್ತಿರೋ ಕೋಲಾರದ ಪುಟ್ಟ ಮಕ್ಕಳಿಗೆ ಬೇಕಿದೆ ಶಿಶು ವಿಹಾರ

    ದೇವಾಲಯದಲ್ಲಿ ಪಾಠ ಕೇಳುತ್ತಿರೋ ಕೋಲಾರದ ಪುಟ್ಟ ಮಕ್ಕಳಿಗೆ ಬೇಕಿದೆ ಶಿಶು ವಿಹಾರ

    ಕೋಲಾರ: ಆ ಊರಲ್ಲಿರೋ ಅಂಗನವಾಡಿಯ ಮಕ್ಕಳಿಗೆ ಗಂಗಮ್ಮ ದೇವಿಯೇ ಆಶ್ರಯ. ಪಾಠ ಕಲಿಸೋ ಶಿಕ್ಷಕಿ, ಅಡುಗೆ ಮಾಡೋ ಅಡುಗೆಯವರನ್ನೂ ಗಂಗಮ್ಮ ತಾಯಿ ಕಾಪಾಡುತ್ತಿದ್ದಾಳೆ.

    ಕೋಲಾರ ನಗರಕ್ಕೆ ಕೂಗಳತೆ ದೂರದಲ್ಲಿರುವ ವರದೇನಹಳ್ಳಿಯಲ್ಲಿ ಬಿದ್ದು ಹೋಗುವ ಕಟ್ಟಡದಲ್ಲಿ ಹತ್ತಾರು ಮಕ್ಕಳು ಪಾಠ ಕೇಳುತ್ತಿದ್ದರು. ಬಡವರು-ಶ್ರೀಮಂತರು ಅಂತಾ ಈ ಊರಲ್ಲಿರೋ 85 ಮನೆಗಳ ಪೈಕಿ ಯಾವ ಮನೆಗಳೂ ಬಿದ್ದೋಗೋ ಸ್ಥಿತಿಯಲ್ಲಿಲ್ಲ. ಆದ್ರೆ ಗ್ರಾಮದ ಮಕ್ಕಳು ಕಲಿಯೋ ಅಂಗನವಾಡಿ ಕೇಂದ್ರದ ಕಟ್ಟಡ ಮಾತ್ರ ಇನ್ನೇನು ಆ ಪಟ್ಟ ಮಕ್ಕಳ ತಲೆ ಮೇಲೆ ಬಿದ್ದೋಯ್ತೇನೋ ಅನ್ನೋ ಸ್ಥಿತಿಯಲ್ಲಿದೆ. ಕಟ್ಟಡ ಶಿಥಿಲವಾಗಿರುವ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರ ಇದೀಗ ಗಂಗಮ್ಮ ದೇವಾಲಯಕ್ಕೆ ಶಿಫ್ಟ್ ಆಗಿದೆ. ಗಂಗಮ್ಮನ ದೇವಾಲಯದಲ್ಲೇ ಪಾಠ ಪ್ರವಚನ ಮಾಡುವ ದುಸ್ಥಿತಿ ಶಿಕ್ಷಕಿಯದ್ದಾದ್ರೆ, ಇಲ್ಲೆ ಕುಳಿತು ಪಾಠ ಕೇಳಬೇಕಾದ ಅನಿವಾರ್ಯ ಮಕ್ಕಳದ್ದು. ವಿಪರ್ಯಾಸ ಎಂದರೆ ಗ್ರಾಮದಲ್ಲಿ ಪೂಜೆ ಪುನಸ್ಕಾರ ಮಾಡಬೇಕಾದ್ರೆ ಅಂದು ಮಕ್ಕಳಿಗೆ ಅಂಗನವಾಡಿ ಸೂರಿಲ್ಲ. ಅಷ್ಟು ಮಾತ್ರವಲ್ಲದೇ ಅಂಗನವಾಡಿ ಶಿಕ್ಷಕಿಯ ಮುಟ್ಟಿನ ಸಂದರ್ಭದಲ್ಲಿ ಮೂರು ದಿನ ಅಂಗನವಾಡಿಗೆ ರಜೆ.

    ವರದನೇಹಳ್ಳಿಯಲ್ಲಿನ ಈ ಅಂಗನವಾಡಿ ಕಟ್ಟಡವನ್ನು ಹದಿನೈದು ವರ್ಷಗಳ ಹಿಂದಷ್ಟೇ ನಿರ್ಮಿಸಲಾಗಿದೆ. ಗುತ್ತಿಗೆದಾರನ ದುರಾಸೆಯಿಂದ, ಗುಣಮಟ್ಟ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ ಕಟ್ಟಡದ ಮೇಲ್ಛಾವಣಿ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಈ ಮಧ್ಯೆ ಸೆಂಟ್ರಿಂಗ್ ಕಂಬಿಗಳು ಕಿತ್ತು ಬಂದಿದ್ದು, ಗೋಡೆಗಳೂ ಬಿರುಕು ಬಿಟ್ಟಿವೆ. ಅಂಗನವಾಡಿಯ ಕಟ್ಟಡ ಹಾಳು ಬಿದ್ದಿರುವುದರಿಂದ ಮಕ್ಕಳ ಜೀವಕ್ಕೆ ಅಪಾಯವಾಗುವುದನ್ನರಿತ ಗ್ರಾಮಸ್ಥರು ಸರಿ ಮಾಡಿಕೊಡಿ ಅಂತಾ ಅಧಿಕಾರಿಗಳನ್ನು ಈ ಹಿಂದೆ ಹಲವು ಬಾರಿ ಮನವಿ ಮಾಡಿದ್ದಾರೆ. ಇದರಿಂದ ಕಟ್ಟಡ ರಿಪೇರಿ ಆಗೋವರೆಗೂ ಗಂಗಮ್ಮನ ದೇವಸ್ಥಾನದಲ್ಲಿ ಮಕ್ಕಳಿಗೆ ಕಲಿಸಲು ಅವಕಾಶ ಮಾಡಲಾಗಿದೆ. ಅಡುಗೆ ಮಾತ್ರ ಅದೇ ಹಾಳು ಬಿದ್ದಿರೋ ಕಟ್ಟಡದಲ್ಲಿ ಮಾಡ್ಕೊಳ್ಳಿ ಅಂತಾ ಅಧಿಕಾರಿಗಳು ಹೇಳಿ ಹೋಗಿದ್ದಾರೆ. ಆದ್ರೆ ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಕಳುಹಿಸಲು ಗ್ರಾಮಸ್ಥರು ಇದೀಗ ಹಿಂದು-ಮುಂದು ನೋಡುತ್ತಾ ಇದ್ದಾರೆ.

    ಒಟ್ಟಿನಲ್ಲಿ ಅಂಗನವಾಡಿ ಮಕ್ಕಳಿಗೆ ಆಗ್ತಿರೋ ತೊಂದರೆಯನ್ನು ಪರಿಹರಿಸಲು ಕೋಲಾರ ಜಿಲ್ಲಾಡಳಿತ ತುರ್ತು ಕ್ರಮವನ್ನು ಜರುಗಿಸಬೇಕಾಗಿದೆ. ಭವ್ಯ ಭಾರತವನ್ನ ಕಟ್ಟುವ ಮಕ್ಕಳ ಭವಿಷ್ಯವು ಇಲ್ಲಿನ ಹಾಳು ಬಿದ್ದ ಕಟ್ಟಡಗಳಲ್ಲಿ ತಯಾರಾಗ್ತಾ ಇರೋ ದುಃಸ್ಥಿತಿ ಒದಗಿ ಬಂದಿರೋದು ವಿಪರ್ಯಾಸ.

    https://www.youtube.com/watch?v=Eb9ghgQWVVM

  • ಶಾಲಾ ಬಸ್ ಡಿಕ್ಕಿ ಹೊಡೆದು ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕ ಸಾವು

    ಶಾಲಾ ಬಸ್ ಡಿಕ್ಕಿ ಹೊಡೆದು ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕ ಸಾವು

    ಕೋಲಾರ: 6 ವರ್ಷದ ಬಾಲಕನಿಗೆ ಶಾಲಾ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಮಾಲೂರಿನ ನಂಬಿಗೇನಹಳ್ಳಿಯಲ್ಲಿ ನಡೆದಿದೆ.

    ಮೃತ ದುರ್ಧೈವಿ ಬಾಲಕನನ್ನು ಸಂತೋಷ್(6) ಎಂಬುವುದಾಗಿ ಗುರುತಿಸಲಾಗಿದೆ. ಈತ ರಸ್ತೆಬದಿಯಲ್ಲಿ ನಡೆದು ಹೋಗುತ್ತಿದ್ದ ವೇಳೆ ವ್ಕಕಲೇರಿ ಶ್ರೀರಾಮಕೃಷ್ಣ ವಿದ್ಯಾ ಸಂಸ್ಥಗೆ ಸೇರಿದ ಶಾಲಾ ಬಸ್ ಬಾಲಕನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ಬಳಿಕ ಬಸ್ ಚಾಲಕ ಅಲ್ಲಿಂದ ಕಾಲ್ಕಿತ್ತಿದ್ದಾನೆ.

    ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹಸಿವು ಅಂತ ಬಂದೋರಿಗೆ ಹೊಟ್ಟೆ ತುಂಬಾ ಊಟ ಹಾಕ್ತಾರೆ ಕೋಲಾರದ ಅಪ್ಸರ್ ಪಾಷಾ

    ಹಸಿವು ಅಂತ ಬಂದೋರಿಗೆ ಹೊಟ್ಟೆ ತುಂಬಾ ಊಟ ಹಾಕ್ತಾರೆ ಕೋಲಾರದ ಅಪ್ಸರ್ ಪಾಷಾ

    – ಮಂಗಳವಾರ, ಶುಕ್ರವಾರ ಬಿರಿಯಾನಿ ಊಟ
    – 6 ಜನ ಅನಾಥರಿಗೆ ಮನೆಯಲ್ಲೇ ಆಶ್ರಯ

    ಕೋಲಾರ: ಜಿಲ್ಲೆಯ ಸೈಯದ್ ಅಪ್ಸರ್ ಪಾಷಾ ಎಂಬವರು ಹಸಿವಿನಿಂದ ನೊಂದು ಅನ್ನದ ಬೆಲೆ ತಿಳಿದವರು. ಮದರ್ ತೆರೇಸಾರಿಂದ ಆಕರ್ಷಿತರಾಗಿ ಅವರಂತೆಯೇ ನಡೆಯುವವರು. ಹಗಲು ರಾತ್ರಿಯೆನ್ನದೇ ಹಸಿದವರ ಹೊಟ್ಟೆ ತುಂಬಿಸುವವರು. ಜೊತೆಗೆ ತಮ್ಮ ಮನೆಯಲ್ಲೇ 6 ಮಂದಿ ಅನಾಥರಿಗೆ ಆಶ್ರಯದಾತರಾಗಿದ್ದಾರೆ.

    ಇವರು ಹೊಟೇಲ್ ಆರಂಭಿಸಿ ಅನಾಥರಿಗೆ ಊಟ ಹಾಕುತ್ತಿಲ್ಲ. ಬದಲಾಗಿ ಪುಟ್ಟ ಧರ್ಮಛತ್ರವನ್ನು ಸ್ಥಾಪಿಸಿ ಈ ಮೂಲಕ ಅನಾಥರು, ಬಡವರು, ವಯಸ್ಸಾದವರು, ಅಂಗವಿಕರು, ವಿದ್ಯಾರ್ಥಿಗಳು ಹೀಗೆ ಯಾರೇ ಹಸಿವು ಅಂತಾ ಬಂದರೂ ಅವರ ಹೊಟ್ಟೆ ತುಂಬಾ ಊಟ ಹಾಕುತ್ತಾರೆ. ಪ್ರತಿದಿನ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆ ತನಕ ಇವರಿಗೆ ಇದೇ ಕಾಯಕ.

    ಕೋಲಾರದ ಬಂಗಾರಪೇಟೆಯ ಈ ಪಬ್ಲಿಕ್ ಹೀರೋಗೆ 2 ಹೊಟೇಲ್‍ಗಳಿವೆ. ಅದರಲ್ಲಿ ಬಂದ ಶೇ.50 ರಷ್ಟು ಹಣವನ್ನು ಹೀಗೆ ಸಮಾಜಸೇವೆಗೆ ಬಳಸ್ತಾರೆ. ವಿಶೇಷತೆ ಅಂದ್ರೆ ಮಂಗಳವಾರ ಹಾಗೂ ಶುಕ್ರವಾರ ಬಿರಿಯಾನಿ ಊಟ ಮಾಡಿ ಬಡಿಸ್ತಾರೆ. ಈ ಸೇವೆಯಲ್ಲೇ ನೆಮ್ಮದಿ ಕಂಡುಕೊಂಡಿದ್ದಾರೆ.

    ಪಾಷಾ ಅವರ ಸಮಾಜಸೇವೆ ಇಷ್ಟೇ ಅಲ್ಲ. 6 ಜನ ಅನಾಥ ಮಕ್ಕಳನ್ನ ತಮ್ಮ ಮನೆಯಲ್ಲಿಯೇ ಸಾಕುತ್ತಿದ್ದಾರೆ. ರಾತ್ರಿ ನಿದ್ದೆ ಬರದಿದ್ದಾಗ ಪಟ್ಟಣದಲ್ಲಿ ಸಂಚಾರ ಮಾಡಿ ಬೀದಿ ಬದಿ ಮಲಗಿರುವ ನಿರ್ಗತಿಕರಿಗೆ ಕಂಬಳಿ ಕೊಡೋದರ ಜೊತೆ ತಮ್ಮ ಕೈಲಾದ ಸಹಾಯ ಮಾಡ್ತಾರೆ.

    ಎಲ್ಲಾ ಇರೋರಿಗೆ ದಾನ ಮಾಡುವ ಮನಸ್ಸಿರಲ್ಲ. ಕೆಲವರಿಗೆ ದಾನ ಮಾಡುವ ಮನಸ್ಸಿದ್ರೆ ದುಡ್ಡಿರಲ್ಲ. ಇಂತಹ ಕಾಲದಲ್ಲೂ ಹಸಿದ ಹೊಟ್ಟೆಗೆ ಅನ್ನ ಹಾಕೋ ಪಾಷಾ ಅವರಿಗೆ ದೊಡ್ಡ ಸಲಾಂ.

    https://www.youtube.com/watch?v=W_feeyDHo-k

  • ಬೆಂಗ್ಳೂರಿಗೆ ಮಂಗ್ಳೂರು ಸಮುದ್ರದ ನೀರು- ಸರ್ಕಾರದಿಂದ ಸಿಹಿನೀರಿನ ಪ್ಲಾನ್

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿಗೆ ಈಗಾಗಲೇ ಕುಡಿಯುವ ನೀರಿಗೆ ಬರ ಬಂದಿದೆ. ಬೆಂಗಳೂರಿಗರ ನೀರಿನ ಸಮಸ್ಯೆ ನೀಗಿಸಲು ಸರ್ಕಾರ ನಾನಾ ಕಸರತ್ತು ನಡೆಸುತ್ತಿದೆ. ಈ ನಡುವೆ ಕರಾವಳಿಯ ಸಮುದ್ರದ ನೀರನ್ನೇ ಬೆಂಗಳೂರಿಗರಿಗೆ ಕುಡಿಯಲು ಸರಬರಾಜು ಮಾಡುವ ಪ್ಲಾನ್ ಫಿಕ್ಸ್ ಆಗಿದೆ. ಇದಕ್ಕಾಗಿ ಈಗಾಗಲೇ ಬಂದರು ನಗರಿ ಮಂಗಳೂರಿನಲ್ಲಿ ಪ್ಲಾನ್ ರೆಡಿಯಾಗ್ತಿದೆ.

    ಎತ್ತಿನಹೊಳೆ ಯೋಜನೆಗೆ ಕೈ ಹಾಕಿದಾಗಿನಿಂದಲೂ ಒಂದಲ್ಲ ಒಂದು ವಿವಾದಗಳು ಸರ್ಕಾರದ ಸುತ್ತಾ ಗಿರಕಿ ಹೊಡೆಯುತ್ತಿವೆ. ಕರಾವಳಿಯವರು ಕೊಡಲ್ಲ, ಕೋಲಾರ ಭಾಗದವರು ಬಿಡಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿ ಇರುವಾಗ ಸರ್ಕಾರ ಹೊಸ ಪ್ಲಾನ್ ರೂಪಿಸಿದೆ. ಅದೇ ಸಮುದ್ರದ ನೀರನ್ನ ಸಿಹಿ ಮಾಡಿ ಹರಿಸುವ ಯೋಜನೆ.

    ಹೌದು. ಸೌದಿ ಅರೇಬಿಯಾ, ಕುವೈತ್ ಸೇರಿದಂತೆ ಪೆಟ್ರೋಲ್ ಉತ್ಪಾದಿಸುವ ಬಹುತೇಕ ರಾಷ್ಟ್ರಗಳು ಸಮುದ್ರದ ಉಪ್ಪು ನೀರನ್ನ ಸಿಹಿ ನೀರಾಗಿಸಿ ಬಳಕೆ ಮಾಡುತ್ತಿವೆ. ಮುಂಬೈ, ವಿಶಾಖಪಟ್ಟಣದಲ್ಲಿ ಯೋಜನೆ ರೆಡಿಯಾಗಿದೆ. ಚೆನ್ನೈನಲ್ಲಿ ಈಗಾಗಲೇ ಪ್ಲಾಂಟ್ ಶುರುವಾಗಿದೆ. ಇದೇ ಮಾದರಿಯಲ್ಲಿ ಮಂಗಳೂರಿನ ತಣ್ಣೀರುಬಾವಿ ಭಾಗದಲ್ಲಿ ಪ್ಲಾಂಟ್ ನಿರ್ಮಿಸಿ ಬೆಂಗಳೂರು, ಕೋಲಾರ ಭಾಗಕ್ಕೆ ನೀರು ಹರಿಸಲು ಸರ್ಕಾರ ಚಿಂತನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಹೈದ್ರಾಬಾದ್‍ನ ಅಧಿಕಾರಿಗಳ ತಂಡವೂ ಭೇಟಿ ಕೊಟ್ಟು ಅಧ್ಯಯನ ನಡೆಸಿದೆ.

    ಈ ಅಧ್ಯಯನ ತಂಡದ ತಜ್ಞರ ಪ್ರಕಾರ, ಈ ಯೋಜನೆಯಡಿ 100 ಎಂಎಲ್‍ಡಿ ನೀರು ಉತ್ಪಾದಿಸಲು 600 ಕೋಟಿ ರೂ. ಖರ್ಚಾಗುತ್ತೆ. 18 ರಿಂದ 20 ಎಕರೆ ಭೂಮಿ ಬೇಕಾಗುತ್ತೆ. ಖುಷಿ ವಿಷಯ ಅಂದ್ರೆ ಮಂಗಳೂರಿನ ಎಂಆರ್‍ಪಿಎಲ್ ಮತ್ತು ಎಂಸಿಎಫ್ ಕೈಗಾರಿಕೆಗಳು ಈ ಯೋಜನೆಗೆ ಕೈ ಜೋಡಿಸಲಿವೆ.

  • ಕೋಲಾರದ ಬರಡು ಭೂಮಿಯಲ್ಲೊಂದು ಸುಂದರ ಶೋ ಪ್ಲಾಂಟ್

    -ಯುವಕರಿಗೆ ಮಾದರಿಯಾಗಲಿದೆ ಶೋ ಪ್ಲಾಂಟ್ ಉದ್ಯಮ

    ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಯಲ್ದೂರು ಗ್ರಾಮದ ನಿವೃತ್ತ ತೋಟಗಾರಿಕಾ ಇಲಾಖೆಯ ಅಧಿಕಾರಿ ಜಯರಾಮಪ್ಪರವರು ಬರದ ನಾಡು ಕೋಲಾರ ಜಿಲ್ಲೆಯಲ್ಲಿ ತಮ್ಮ ಕನಸಿನ ಸುಂದರ ಶೋ ಪ್ಲಾಂಟ್ ನಿರ್ಮಾಣ ಮಾಡಿದ್ದಾರೆ.

    ಬೃಹತ್ ನಗರಗಳಲ್ಲಿ ಸಿರಿವಂತರ ಮನೆಯ ಸೌಂದರ್ಯವನ್ನು ಹೆಚ್ಚಿಸುವ ಅಂದದ ಗಿಡಗಳು, ಪಾರ್ಕ್‍ಗೆ ಹೋದಾಗ ಮನಸ್ಸಿಗೆ ನೆಮ್ಮದಿ ನೀಡುವ ಅಪರೂಪದ ಸಸ್ಯರಾಶಿಗಳನ್ನು ಜಯರಾಮಪ್ಪ ಅವರು ಮೂರು ದಶಕಗಳಿಂದಲೂ ಬೆಳೆಸುತ್ತಾ ಬಂದಿದ್ದಾರೆ. ಜಯರಾಮಪ್ಪರವರು ಕಳೆದ 28 ವರ್ಷಗಳ ಹಿಂದೆ ತಮ್ಮ 13 ಎಕರೆ ಭೂಮಿಯಲ್ಲಿ ನಗರಗಳಲ್ಲಿ ಬಹು ಬೇಡಿಕೆಯ ಅಲಂಕಾರಿಕ ಗಿಡಗಳನ್ನು ಬೆಳೆಸಲು ಆರಂಭಿಸಿದ್ದರು.

    ಅಲಂಕಾರಿಕ ಗಿಡಗಳಾದ ಕ್ರೋಟಾನ್, ಡೈಪನ್‍ಬೈಕ್ಯಾ, ಅಲ್ಯೂಮಿನಿಯಂ ಪ್ಲಾಂಟ್, ಎಲಿಫೆಂಟ್ ಹಿಯರ್, ಹೀಗೆ ಐವತ್ತಕ್ಕೂ ಹೆಚ್ಚು ಬಗೆಯ ಅಲಂಕಾರಿಕಾ ಗಿಡಗಳನ್ನ ತಮ್ಮ ನರ್ಸರಿ ಯಲ್ಲಿ ಬೆಳೆಯುತ್ತಿದ್ದಾರೆ. ಇಲ್ಲಿಯ ಅಲಂಕಾರಿಕ ಗಿಡಗಳನ್ನು ಬೆಂಗಳೂರು, ಚೆನೈ, ಹೈದರಾಬಾದ್, ನಾಸಿಕ್, ಬಾಂಬೆ, ದೆಹಲಿ ಸೇರಿದಂತೆ ಹಲವೆಡೆ ಈ ಶೋ ಪ್ಲಾಂಟ್‍ಗಳನ್ನು ಕಳಿಸಿಕೊಡಲಾಗುತ್ತದೆ.

    ಇಂತಹ ಅಲಂಕಾರಿಕ ಗಿಡಗಳಿಗೆ ಕೇವಲ ಮನೆಗಳಲ್ಲಷ್ಟೇ ಅಲ್ಲಾ, ಪಾರ್ಕ್‍ಗಳಲ್ಲಷ್ಟೇ ಅಲ್ಲಾ, ದೊಡ್ಡ ದೊಡ್ಡ ಕಂಪನಿಗಳಲ್ಲೂ ಕೂಡಾ ಬೇಡಿಕೆ ಇದೆ. ಕೇವಲ ದೇಶದಲ್ಲಷ್ಟೇ ಅಲ್ಲ ವಿದೇಶಗಳಲ್ಲೂ ಹೆಚ್ಚಿನ ಬೇಡಿಕೆ ಇದೆ. ಪರಿಸರ ನಾಶವಾಗಿ ಎಲ್ಲೆಲ್ಲೂ ಕಾಂಕ್ರೀಟ್ ಕಾಡು ನಿರ್ಮಾಣವಾಗಿರುವ ಈ ಕಾಲದಲ್ಲಿ ಇವುಗು ನೆಮ್ಮದಿಯ ಉಸಿರು ನೀಡಬಲ್ಲವು. ಈ ಅಲಂಕಾರಿಕ ಗಿಡಗಳನ್ನು ಬೆಳೆಸುವ ಉದ್ಯಮ ನಿಜಕ್ಕೂ ಅದಾಯ ತರುವಂತದ್ದಾಗಿದೆ.