ಕೋಲಾರ: ರಾತ್ರಿ ಮನೆ ಮುಂದೆ ಮಲಗಿದ್ದ ವೇಳೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಆಲಗಾನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಹರೀಶ್(32) ಕೊಲೆಯಾದ ವ್ಯಕ್ತಿ, ಹೊಡೆತದ ರಭಸಕ್ಕೆ ತಲೆ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಆರೋಪಿಗಳು ಬೃಹತ್ ಕಲ್ಲನ್ನು ಎತ್ತಿ ಹಾಕಿದ್ದಾರೆ. ಅಲ್ಲದೆ ಘಟನೆ ನಂತರ ಕಲ್ಲನ್ನು ಸ್ಥಳದಲ್ಲಿ ಬಿಡದೆ ಅದನ್ನೂ ಎತ್ತಿಕೊಂಡು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಆರೋಪಿಗಳು ಹಾಗೂ ಕಲ್ಲಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಕೋಲಾರ: ಇವಿಎಂ ಮೇಲೆ ನಮಗೆ ನಂಬಿಕೆ ಇಲ್ಲ, ತನಿಖೆಯಾಗಬೇಕು ಎಂದು ಸಂಸದ ಕೆ.ಎಚ್ ಮುನಿಯಪ್ಪ ಆಗ್ರಹಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೇಂದ್ರ ಸರ್ಕಾರ ಧಕ್ಕೆ ತಂದಿದೆ. ಮೋದಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಇವಿಎಂ ಮೇಲೆ ನಮಗೆ ನಂಬಿಕೆ ಇಲ್ಲ. ಈ ಕುರಿತು ಚುನಾವಣಾ ಆಯೋಗ ತನಿಖೆ ನಡೆಸಬೇಕು. ಎಲ್ಲಾ ಪ್ರತಿಪಕ್ಷ ನಾಯಕರೂ ಕೂಡ ಇವಿಎಂ ವಿರುದ್ಧ ತನಿಖೆ ನಡೆಸುವಂತೆ ಕೇಳಿಕೊಳ್ಳುತ್ತಿದ್ದಾರೆ ಎಂದು ಚುನಾವಣಾ ಆಯೋಗ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿದರು.
ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಈ ಸಂಬಂಧ ಮನವಿ ಮಾಡಿದ್ದೇವೆ. ಶೇ.50 ರಷ್ಟು ವಿವಿ ಪ್ಯಾಟ್ ಎಣಿಕೆಯಾಗಲಿ ಎಂದು ಕೋರಿದ್ದೇವೆ. ಈ ಹಿಂದೆಯೇ ಎಲ್ಲಾ 17 ವಿರೋಧ ಪಕ್ಷದ ಒಕ್ಕೂಟಗಳು ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದೇವೆ. ಮಂಗಳವಾರ ಕೂಡ 21 ಪಕ್ಷಗಳು ಇವಿಎಂ ವಿರುದ್ಧ ತನಿಖೆ ಆಗಬೇಕು ಎಂದು ಮನವಿ ಮಾಡಿದೆ. ಇವಿಎಂ ವ್ಯವಸ್ಥೆಯಲ್ಲಿ ನಮಗೆ ನಂಬಿಕೆ ಇಲ್ಲದಾಗಿದೆ. ಬ್ಯಾಲೆಟ್ ಪೇಪರ್ ಮುಖಾಂತರವೇ ಚುನಾವಣೆ ನಡೆಯಬೇಕು ಎಂದು ಕೋರಿದ್ದೇವೆ. ಚುನಾವಣಾ ಆಯೋಗಕ್ಕೆ ಭೇಟಿ ನೀಡಿ, ಶೇ.50 ರಷ್ಟು ವಿವಿ ಪ್ಯಾಟ್ ಎಣಿಕೆಯಾಗಬೇಕು, ಆ ಮುಖಾಂತರ ನಿಜಾಂಶ ಹೊರಬರುತ್ತದೆ ಎಂದು ಹೇಳಿದ್ದೇವೆ. ಆದರೆ ಯಾವುದಕ್ಕೂ ಸರಿಯಾದ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಹರಿಹಾಯ್ದರು.
ಈಗ ಬಂದಿರುವುದು ಎಕ್ಸಿಟ್ ಪೋಲ್ ಸಮೀಕ್ಷೆ, ಎಕ್ಸಾಕ್ಟ್ ಪೋಲ್ ಅಲ್ಲ. ಎಕ್ಸಿಟ್ ಪೋಲ್ಗೆ ತದ್ವಿರುದ್ಧವಾದ ಫಲಿತಾಂಶ ಈ ಬಾರಿ ದೇಶದಲ್ಲಿ ಬರಲಿದೆ. ರಾಜಸ್ಥಾನ, ಮಧ್ಯಪ್ರದೇಶ ಮುಖ್ಯಸ್ಥರು ಹಾಗೂ ಎಐಸಿಸಿ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಕೋಲಾರದಲ್ಲಿ ಕಾಂಗ್ರೆಸ್ ಗೆಲ್ಲುತ್ತೆ, ಆದರೆ ಲೀಡ್ ಬಗ್ಗೆ ಮಾತನಾಡಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಅವರು ತಮ್ಮ ನೋವನ್ನ ಹೇಳಿಕೊಂಡಿದ್ದಾರೆ. ಪಕ್ಷ ಇದೆ ಪಕ್ಷದ ನಾಯಕರ ಬಳಿ ತಮ್ಮ ಅಸಮಾಧಾನವನ್ನು ಹೇಳಿಕೊಳ್ಳಬೇಕಾಗಿತ್ತು. ಅದನ್ನು ಬಿಟ್ಟು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಮುನಿಯಪ್ಪ ಅವರು ಪ್ರತಿಕ್ರಿಯಿಸಿದರು.
ಕೋಲಾರ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಮತ್ತು ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಮಾದರಿಯಲ್ಲಿ ಕೋಲಾರದಲ್ಲಿ ಇ-ಜೋನ್ ಪ್ರೀಮಿಯರ್ ಲೀಗ್(ಇಪಿಎಲ್) ಕ್ರಿಕೆಟ್ ಬಿಡ್ಡಿಂಗ್ ಇಂದು ನಡೆಯಿತು.
ಜಿಲ್ಲೆಯ ಪತ್ರಕರ್ತರ ಭವನದಲ್ಲಿ 2ನೇ ಅವೃತ್ತಿಯ ಇಪಿಎಲ್ ಕ್ರಿಕೆಟ್ ಬಿಡ್ ಇಂದು ಹಮ್ಮಿಕೊಳ್ಳಲಾಗಿತ್ತು. ಈ ಬಿಡ್ ನಲ್ಲಿ ಬೆಂಗಳೂರು, ಕೋಲಾರ ಸೇರಿದಂತೆ ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದ 15 ಟೀಮ್ ಮಾಲೀಕರು ಭಾಗವಹಿಸಿದ್ದರು. ಹಾಗೆಯೇ ಈ ವೇಳೆ ವಿವಿಧ ರಾಜ್ಯಗಳ ಸುಮಾರು 275 ಕ್ರಿಕೆಟ್ ಪಟುಗಳು ಹರಾಜು ಪ್ರಕ್ರಿಯೆಗೆ ಒಳಪಟ್ಟರು. ಅದರಲ್ಲಿ ರಣಜಿ ಆಟಗಾರ ಕೌಶಿಕ್ ಅತಿ ಹೆಚ್ಚು ಅಂದರೆ 2.50 ಲಕ್ಷಕ್ಕೆ ಬೆಂಗಳೂರು ತಂಡಕ್ಕೆ ಮಾರಾಟವಾಗಿದ್ದಾರೆ. ಪ್ರತಿ ತಂಡ 5 ಲಕ್ಷ ರೂ. ವೆಚ್ಚ ಮಾಡಿ ಆಟಗಾರರನ್ನು ಖರೀದಿ ಮಾಡಲು ಇಲ್ಲಿ ಅವಕಾಶವಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಇಪಿಎಲ್ ಆಯೋಜಕರಾದ ಮಂಜುನಾಥ್, ಕೋಲಾರದಲ್ಲಿ ಎರಡನೇ ಬಾರಿಗೆ ಇಪಿಎಲ್ ಆಯೋಜನೆ ಮಾಡಲಾಗಿದೆ. ಬಿಡ್ ನಲ್ಲಿ ಆಯ್ಕೆಯಾದವರು ಮಾರ್ಚ್ ತಿಂಗಳಲ್ಲಿ ನಡೆಯುವ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ಭಾಗವಹಿಸಲಿದ್ದಾರೆ. ಕೋಲಾರದಲ್ಲಿ ಕ್ರೀಡಾಪಟುಗಳಿದ್ದರೂ ಸಹ ಸ್ಥಳೀಯವಾಗಿ ಆಟಗಾರರಿಗೆ ಬೇಕಾದ ಸವಲತ್ತುಗಳು, ಸೌಲಭ್ಯಗಳು ಪ್ರೋತ್ಸಾಹ ಸಿಗುತ್ತಿಲ್ಲ, ಕ್ರಿಕೆಟ್ ಆಡಬೇಕಾದರೆ ಬೆಂಗಳೂರಿಗೆ ಹೋಗಬೇಕಾಗಿದೆ. ಈ ನಿಟ್ಟಿನಲ್ಲಿ ಕೋಲಾರದಲ್ಲಿ ಕಳೆದ ಎರಡು ವರ್ಷಗಳಿಂದ ಇಪಿಎಲ್ ಕ್ರಿಕೆಟ್ ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಕೋಲಾರ: ಬುಸುಗುಟ್ಟಿದ ನಾಗರಹಾವನ್ನು ಸಲೀಸಾಗಿ ಹುಂಜ ನುಂಗಿದ ಘಟನೆಯೊಂದು ವಕ್ಕಲೇರಿ ಗ್ರಾಮದಲ್ಲಿ ನಡೆದಿದ್ದು ವಿಡಿಯೋ ವೈರಲ್ ಆಗಿದೆ.
ಮಂಜುನಾಥ್ ಎಂಬುವವರ ಮನೆಯಲ್ಲಿರುವ ಹುಂಜ ಈ ಸಾಹಸ ಮಾಡಿದೆ. ಮನೆಯ ಹತ್ತಿರ ತಿರುಗಾಡುತ್ತಿದ್ದಾಗ ಅಲ್ಲಿ ನಾಗರಹಾವಿನ ಮರಿಯೊಂದು ಕಾಣಿಸಿಕೊಂಡಿತ್ತು. ತನ್ನ ಮೇಲೆ ಬುಸುಗುಟ್ಟಿದ ನಾಗರಹಾವನ್ನು ಕಂಡು ಅದನ್ನು ಹಿಡಿಯಲು ಹುಂಜ ನಾಗರಹಾವಿನ ಜೊತೆ ಸೆಣಸಾಡಿದೆ.
ನಾಗರಹಾವು ಹಾಗೂ ಹುಂಜ ಸೆಣಸಾಡಿ ಕೊನೆಯಲ್ಲಿ ನಾಗರಹಾವುವನ್ನೇ ಸಲಿಸಾಗಿ ನುಂಗಿ ನೀರು ಕುಡಿದಿದೆ. ಹುಂಜ ಹಾಗೂ ನಾಗರಹಾವಿನ ನಡುವಿನ ಕಾಳಗದ ಭಯಾನಕ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು ವೈರಲ್ ಆಗುತ್ತಿದೆ.