Tag: ಕೋಡಿಹಳ್ಳಿ ಚಂದ್ರಶೇಖರ್

  • ಏಪ್ರಿಲ್ 7ಕ್ಕೆ ಸಾರಿಗೆ ನೌಕರರ ಮುಷ್ಕರ – ರಾಜ್ಯಾದ್ಯಂತ ಬಸ್ ಬಂದ್

    ಏಪ್ರಿಲ್ 7ಕ್ಕೆ ಸಾರಿಗೆ ನೌಕರರ ಮುಷ್ಕರ – ರಾಜ್ಯಾದ್ಯಂತ ಬಸ್ ಬಂದ್

    ಬೆಂಗಳೂರು: ಆರನೇ ವೇತನ ಜಾರಿಗೆ ಆಗ್ರಹಿಸಿ ಏಪ್ರಿಲ್ ಏಳರಂದು ಸಾರಿಗೆ ಬಂದ್ ಗೆ ಕರೆ ಕೊಡಲಾಗಿದೆ. ಇಡೀ ರಾಜ್ಯಾದ್ಯಂತ ಬಸ್ ಗಳು ರಸ್ತೆಗಿಳಿಯಲ್ಲ ಎಂದು ಸಾರಿಗೆ ನೌಕರರು ಸರ್ಕಾರಕ್ಕೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಇತ್ತ ನೌಕರರಿಗೆ ಸೆಡ್ಡು ಹೊಡೆಯಲು ಸಚಿವರು ಖಾಸಗಿ ವಾಹನಗಳನ್ನು ಇಳಿಸುವ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

    ಏಪ್ರಿಲ್ 6 ರೊಳಗೆ 6 ನೇ ವೇತನ ಆಯೋಗ ಜಾರಿ ಆಗಬೇಕು ಇಲ್ಲದಿದ್ರೆ ಏಪ್ರಿಲ್ 7ರಂದು ಮುಷ್ಕರ ನಡೆಸುವುದಾಗಿ ಸರ್ಕಾರಕ್ಕೆ ಸಾರಿಗೆ ನೌಕರರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇನ್ನೇನು ಪ್ರತಿಭಟನೆಗೆ ಒಂದು ದಿನವಷ್ಟೇ ಬಾಕಿ ಉಳಿದಿದ್ದು, ಈ ವಿಚಾರವಾಗಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಹತ್ವದ ಸುದ್ದಿಗೋಷ್ಟಿ ನಡೆಸಿದರು. ವೇತನ ಹೆಚ್ಚಳ ಮಾಡಲು ನೀತಿ ಸಂಹಿತೆ ಅಡ್ಡಿಯಿದೆ. ನೀತಿ ಸಂಹಿತೆ ಮುಗಿದ ಬಳಿಕ ವೇತನ ಹೆಚ್ಚಳ ಮಾಡುವ ಖಾತ್ರಿ ಕೊಡುತ್ತೇವೆ. ಚುನಾವಣಾ ಆಯೋಗ ಅದಕ್ಕೂ ಮುನ್ನ ಅನುಮತಿ ನೀಡಿದರೆ ಚರ್ಚಿಸಿ ಘೋಷಣೆ ಮಾಡ್ತೇವೆ. ಖಾಸಗಿ ಬಸ್ ನವರಿಗೆ ಸ್ಪಂದಿಸುವಂತೆ ಆಹ್ವಾನ ಕೊಟ್ಟಿದ್ದೇವೆ. ಮಿನಿ ಬಸ್, ಟೆಂಪೋ ಟ್ರಾವೆಲರ್ ಗಳನ್ನೂ ಬಳಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

    ಬಂದ್ ಬಗ್ಗೆ ಮಾತನಾಡಿದದ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ನಾವು ಸರ್ಕಾರಕ್ಕೆ ಮೂರೂವರೆ ತಿಂಗಳು ಗಡುವು ಕೊಟ್ಟಿದ್ದೇವು. ಅಂದಿನಿಂದ ಇಲ್ಲಿಯವರೆಗೂ ಸರ್ಕಾರಕ್ಕೆ ಕಾಲಾವಕಾಶ ಇತ್ತು. ಈಗ ಸರ್ಕಾರ ನೀತಿ ಸಂಹಿತೆ ನೆಪ ಹೇಳುತ್ತಿದೆ. ನಾಡಿದ್ದು ಬಸ್ ಬಂದ್ ಇದ್ದೇ ಇರುತ್ತೆ. ಕೊರೊನಾ ನಿಯಮಗಳನ್ನು ಮೀರಲ್ಲ. ಅಸಹಕಾರ ಚಳುವಳಿಯಂತೆ ಬಸ್ ನಿಲ್ಲಿಸಿ ಪ್ರತಿಭಟನೆ ನಡೆಸುತ್ತೇವೆ. ಕೊರೊನಾ ಕಡಿಮೆ ಇರೋ ಕಡೆ ಮುಷ್ಕರ ನಡೆಸಿ ಉಪವಾಸ ಕೈಗೊಳ್ಳತ್ತೇವೆ ಎಂದು ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.

    ಸಾರಿಗೆ ನೌಕರರ ಮುಷ್ಕರಕ್ಕೆ ಸೆಡ್ಡು ಹೊಡೆಯುವ ಸಲುವಾಗಿ ಖಾಸಗಿ ವಾಹನಗಳನ್ನ ರಸ್ತೆಗಿಳಿಸಲು ಸರ್ಕಾರ ಸಜ್ಜಾಗಿದೆ. ಹೀಗಾಗಿ ಇಂದು ಟ್ಯಾಕ್ಸಿ, ಮಿನಿ ಕ್ಯಾಬ್ ಮತ್ತು ಬಸ್ ಮಾಲೀಕರೊಂದಿಗೆ ಸಾರಿಗೆ ಸಚಿವರು ಚರ್ಚಿಸಿ ಸಭೆ ನಡೆಸಿದ್ದಾರೆ. ಈ ಹಿಂದೆ ಖಾಸಗಿ ವಾಹನಗಳ ಮಾಲೀಕರು ಸರ್ಕಾರದ ಮುಂದೆ ಇಟ್ಟಿದ್ದ ಆರು ಬೇಡಿಕೆಗಳನ್ನ ಈಡೇರಿಸುವ ಜೊತಗೆ ಒಂದು ತಿಂಗಳ ಟ್ಯಾಕ್ಸ್ ರಿಲ್ಯಾಕ್ಸ್ಲೇಷನ್ ನೀಡುವುದಾಗಿ ಭರವಸೆ ನೀಡಿದ್ದು, ಖಾಸಗಿ ವಾಹನಗಳನ್ನ ರಸ್ತೆಗೆ ಇಳಿಸುವಂತೆ ತಿಳಿಸಲಾಗಿದೆ. ಇದಕ್ಕೆ ಖಾಸಗಿ ವಾಹನಗಳ ಮಾಲೀಕರು ಒಪ್ಪಿಕೊಂಡಿದ್ದು ಮುಷ್ಕರದ ದಿನ ವಾಹನಗಳನ್ನ ರಸ್ತೆಗೆ ಇಳಿಸುವುದಾಗಿ ತಿಳಿಸಿದ್ದಾರೆ.

  • ಸರ್ಕಾರದಿಂದ 3 ತಿಂಗಳ ಕಾಲಹರಣ: ಕೋಡಿಹಳ್ಳಿ ಚಂದ್ರಶೇಖರ್

    ಸರ್ಕಾರದಿಂದ 3 ತಿಂಗಳ ಕಾಲಹರಣ: ಕೋಡಿಹಳ್ಳಿ ಚಂದ್ರಶೇಖರ್

    ಬೆಂಗಳೂರು: ಸರ್ಕಾರ ಮೂರು ತಿಂಗಳ ಕಾಲಹರಣ ಮಾಡಿದ್ದು, ಬಜೆಟ್ ನಲ್ಲಿ ಆರನೇ ವೇತನ ಆಯೋಗ ಜಾರಿಗೆ ಹಣ ಮೀಸಲಿಡಬೇಕು ಎಂದು ಸಾರಿಗೆ ನೌಕರರ ಮುಂದಾಳು ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಕೊಟ್ಟ ಮಾತು ಮರೆತಿರುವ ಸರ್ಕಾರಕ್ಕೆ ನೆನೆಪಿಸುವ ಕೆಲಸ ಇವತ್ತು ಆಗಲಿದೆ. ಸಾರಿಗೆ ನೌಕರರ ಬೇಡಿಕೆಗೆ ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ ಎಂಬುದರ ಕೇಳಲು ಈ ಸತ್ಯಾಗ್ರಹ ನಡೆಸಲಾಗುತ್ತಿದೆ. ಬಜೆಟ್ ನಲ್ಲಿ ಆರನೇ ವೇತನ ಆಯೋಗಕ್ಕೆ ಹಣವನ್ನ ಮೀಸಲಿಡಬೇಕಿದೆ. ಮೂರು ಕಾಸಿಗೆ ದುಡಿಯುವ ಜನರನ್ನ ದುಡಿಸಿಕೊಳ್ಳಬಾರದು. ಸಾರಿಗೆ ಇಲಾಖೆ ನಷ್ಟದಲ್ಲಿದ್ದು, ಬಜೆಟ್ ನಲ್ಲಿ ಏನು ಮಾಡಬೇಕು? ನಷ್ಟ ಸಮಸ್ಯೆಗೆ ಯಾವ ಪರಿಹಾರ ಕಂಡುಕೊಳ್ಳಬೇಕು ಎಂಬುದರ ಬಗ್ಗೆ ಮುಖ್ಯಮಂತ್ರಿಗಳು ಮುಂದಾಗಬೇಕಿದೆ ಎಂದರು.

    ಮಾರ್ಚ್ 15ಕ್ಕೆ ನೀಡಿದ ಗಡುವು ಮುಗಿಯಲಿದೆ. ನಷ್ಟದಲ್ಲಿರುವ ಸಾರಿಗೆ ಇಲಾಖೆಗೆ ಆರ್ಥಿಕ ಶಕ್ತಿ ತುಂಬಲು ಸರ್ಕಾರ ದಿಟ್ಟ ನಿರ್ಧಾರಕ್ಕೆ ಬರಬೇಕಿದೆ. ಸಾರಿಗೆ ಇಲಾಖೆಗೆ ಬಜೆಟ್ ನಲ್ಲಿ ವಿಶೇಷ ಹಂಚಿಕೆ ಅನಿವಾರ್ಯ ಎಂಬ ವಿಷಯವನ್ನು ನೆನಪಿಸಲು ಇಂದು ಮುಂದಾಗುತ್ತಿದ್ದೇವೆ. ಒಂದು ವೇಳೆ ಬೇಡಿಕೆ ಈಡೇರಿಸದಿದ್ರೆ ನಮ್ಮ ಗಡುವು ಮುಗಿದ ಕೂಡಲೇ ಸರ್ಕಾರದವರು ಮಾತಿಗೆ ತಪ್ಪಿದ ಮಕ್ಕಳು ಅಂತ ಹೇಳಿ ನಮ್ಮ ಹೋರಾಟವನ್ನ ಪ್ರಾರಂಭಿಸಲಾಗುವುದು ಎಂದು ಎಚ್ಚರಿಕೆ ಸಂದೇಶ ರವಾನಿಸಿದರು.

  • ಕೊಟ್ಟ ಗಡುವು ಮುಗಿಯಿತು, ಸಮಾಧಾನ ಮಾತುಗಳನ್ನು ಬಿಟ್ಟು, ಅಭಿವೃದ್ದಿ ಕಡೆಗೆ ಗಮನ ಕೊಡಿ: ಕೋಡಿಹಳ್ಳಿ

    ಕೊಟ್ಟ ಗಡುವು ಮುಗಿಯಿತು, ಸಮಾಧಾನ ಮಾತುಗಳನ್ನು ಬಿಟ್ಟು, ಅಭಿವೃದ್ದಿ ಕಡೆಗೆ ಗಮನ ಕೊಡಿ: ಕೋಡಿಹಳ್ಳಿ

    ಬೆಂಗಳೂರು: ಸಾರಿಗೆ ನೌಕರರ ಬೇಡಿಕೆ ವಿಚಾರ ಕುರಿತಂತೆ, ನಿಮಗೆ ಕೊಟ್ಟ ಗಡುವು ಮುಗಿಯಿತು. ಸಮಾಧಾನ ಪಡಿಸುವ ಮಾತುಗಳನ್ನು ಬಿಟ್ಟು, ಅಭಿವೃದ್ದಿ ಕಡೆಗೆ ಗಮನ ಕೊಡಿ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರ ಶೇಖರ್ ಹೇಳಿದ್ದಾರೆ

    ಈ ವಿಚಾರವಾಗಿ ಇಂದು ಪಬ್ಲಿಕ್ ಟಿವಿ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಸರ್ಕಾರದ ವಿರುದ್ಧ ಡಿಸೆಂಬರ್ 10 ರಿಂದ 14ರವರೆಗೂ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕೊನೆಗೂ ಸರ್ಕಾರ ಸಾರಿಗೆ ನೌಕರರ 9 ಬೇಡಿಕೆಗಳನ್ನು ಈಡೇರಿಸುವುದಾಗಿ ಪ್ರಕಟಿಸಿತ್ತು. ಅಲ್ಲದೆ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಮಾರ್ಚ್ 15 ರವರೆಗೂ ಅಂತಿಮ ಗಡುವು ನೀಡಲಾಗಿತ್ತು. ಆದರೆ ಇಲ್ಲಿಯವರೆಗೂ ಸರ್ಕಾರ ಒಂದೇ ಒಂದು ಬೇಡಿಕೆ ಪೂರ್ಣಗೊಳಿಸಿಲ್ಲ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    6ನೇ ವೇತನ ಆಯೋಗದ ವರದಿ ಏನಾಯ್ತು? ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿಯಂತೂ ಮಾಡಲಿಲ್ಲ. ಆದರೆ ಉಳಿದ 9 ಬೇಡಿಕೆಯಾದರೆ ಪೂರೈಸಬೇಕಿತ್ತು. ಕೇವಲ ಮಾಧ್ಯಮಗಳ ಮುಂದೆ ಬೇಡಿಕೆ ಪೂರೈಕೆಯ ಪ್ರಕಟಣೆಯಷ್ಟೇ ಮುಂದಿಟ್ಟಿದ್ದೀರಾ. ಸಾರಿಗೆ ನಿಗಮಗಳ ಪ್ರಕಟಣೆ ಜಾರಿಗೊಳಿಸುವ ಕೆಲಸವನ್ನು ಮಾಡಿಯೇ ಇಲ್ಲ. 7 ದಿನಗಳಲ್ಲಿ ಮುಗಿಸಬೇಕಾದ ಕೆಲಸಗಳು ಇನ್ನೂ ಕಾರ್ಯಗತವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನಿಮ್ಮ ರಾಜಕೀಯ ನಾಯಕರು ಮಂತ್ರಿಗಿರಿ ಸಿಗದಿದ್ದಾಗ ಅದಕ್ಕೆ ಸಮಾಧಾನ ಮಾಡಲು ನಿಗಮಗಳ ಮುಂದಿಟ್ಟು ಖರ್ಚು ಮಾಡುತ್ತಾ ಇದ್ದೀರಾ? ಇದು ಸರಿ ಇಲ್ಲ. ಅಲ್ಲದೆ ಸಾರಿಗೆ ನಷ್ಟ ಭರಿಸಲು ನೌಕರರ ಸಂಬಳ ಕಟ್ ಮಾಡುತ್ತಿರುವುದು ನ್ಯಾಯಬದ್ದವಲ್ಲ. ಸೇವಾ ಸಂಸ್ಥೆಗಳು ಉಚಿತವಾಗಿ ಸೇವೆ ನೀಡಲಿ. ಆದರೆ ನೌಕರನಿಗೆ ಹೊರೆ ಬೇಡ. ಕೋಟಿ ಗಟ್ಟಲೆ ಇರುವ ಸಂಸ್ಥೆ ನಷ್ಟಕ್ಕೆ ನೀವೇ ಹೊಣೆಯಾಗಲಿದ್ದೀರಿ ಎಂದು ಪ್ರತಿಭಟನೆ ಎಚ್ಚರಿಕೆ ನೀಡಿದರು

    ಸರ್ಕಾರಕ್ಕೆ ನೀಡಿದ ಗಡುವು ಅಂತಿಮಗೊಳ್ಳುತ್ತಿದೆ ಆದರೆ ಇಲ್ಲಿಯವರೆಗೂ ಈ ಕುರಿತಂತೆ ಯಾವುದೇ ಮಾತುಕತೆ ನಡೆಸಿಲ್ಲ. ಕೇವಲ ಘೋಷಣೆಗಳ ಪೂರೈಕೆ ಬಗ್ಗೆ ಭರವಸೆ ಮಾತ್ರ ಕೊಡುತ್ತಿದ್ದೀರಿ. ಇದು ಬೇಡ. ಸರ್ಕಾರ ಸಾರಿಗೆ ನೌಕರರ ವಿಚಾರವಾಗಿ ಗಮನ ಹರಿಸಿ ಬೇಡಿಕೆ ಈಡೇರಿಸಿ ಎಂದು ಹೇಳಿದರು.

  • ರೈತರು ಧ್ವಜಾರೋಹಣ ಮಾಡಬಾರದೆಂಬ ಸರ್ಕಾರದ ಧೋರಣೆಗೆ ನಾಚಿಕೆಯಾಗ್ಬೇಕು: ಚಂದ್ರಶೇಖರ್

    ರೈತರು ಧ್ವಜಾರೋಹಣ ಮಾಡಬಾರದೆಂಬ ಸರ್ಕಾರದ ಧೋರಣೆಗೆ ನಾಚಿಕೆಯಾಗ್ಬೇಕು: ಚಂದ್ರಶೇಖರ್

    ಬೆಂಗಳೂರು: ರೈತರು ಧ್ವಜಾರೋಹಣ ಮಾಡಬಾರದು ಎಂಬ ಸರ್ಕಾರದ ಧೋರಣೆಗೆ ನಾಚಿಕೆಯಾಗಬೇಕು. ನೈಸ್ ರೋಡ್ ಜಂಕ್ಷನ್ ನಿಂದ ರಾಷ್ಟ್ರ ಬಾವುಟವನ್ನು ಹಿಡಿದು ರ್ಯಾಲಿ ಆರಂಭ ಮಾಡುತ್ತೇವೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

    ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಕೃಷಿ ಕಾಯಿದೆಯನ್ನು ವಿರೋಧಿಸಿ ಇಂದು ಬೆಂಗಳೂರಿನಲ್ಲಿ ರೈತರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಈಗಾಗಲೇ ಮುಂಜಾನೆ ಕೋಲಾರದಿಂದ ಬೆಂಗಳೂರಿಗೆ ಬರುತ್ತಿದ್ದ ಟ್ರ್ಯಾಕ್ಟರ್‍ಗಳನ್ನು ಪೊಲೀಸರು ಅಡ್ಡ ಹಾಕಿ ವಶಪಡಿಸಿಕೊಂಡಿದ್ದಾರೆ. ಹೀಗಾಗಿ ರ್ಯಾಲಿಯಲ್ಲಿ ಕೆಲವು ರೈತರು ಭಾಗಿಯಾಗಿದ್ದರೆ, ಇನ್ನೂ ಕೆಲ ರೈತರು ಹೆದ್ದಾರಿ, ಟೋಲ್ ಗಳಲ್ಲಿಯೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.

    ಈ ಕುರಿತಂತೆ ಮಾತನಾಡಿದ ಕೋಡಿಹಳ್ಳಿ, ಸರ್ಕಾರ, ರೈತರ ಸ್ವಾಭಿಮಾನವನ್ನ ಕೆರಳಿಸುತ್ತಿದೆ. ರೈತರ ಚಳುವಳಿಯನ್ನು ಹತ್ತಿಕ್ಕುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ರೈತರು ಧ್ವಜಾರೋಹಣ ಮಾಡಬಾರದು ಎಂಬ ಸರ್ಕಾರದ ಧೋರಣೆಗೆ ನಾಚಿಕೆಯಾಗಬೇಕು. ನೈಸ್ ರೋಡ್ ಜಂಕ್ಷನ್ ನಿಂದ ರಾಷ್ಟ್ರ ಬಾವುಟವನ್ನು ಹಿಡಿದು ರ್ಯಾಲಿ ಆರಂಭ ಮಾಡುತ್ತೇವೆ. ಜೊತೆಗೆ ಟೋಲ್, ಹೆದ್ದಾರಿಗಳಲ್ಲಿಯೂ ಹೋರಾಟದ ತೀವ್ರತೆ ಹೆಚ್ಚಾಗಿರುತ್ತದೆ. ರೈತರ ವಾಹನಗಳನ್ನ ತಡೆಯಲು ಸರ್ಕಾರ ಪೊಲೀಸರ ಸರ್ಪಗಾವಲು ಹಾಕಿದೆ. ಎಲ್ಲಾ ಚೆಕ್ ಪೋಸ್ಟ್, ಟೋಲ್ ಗಳಲ್ಲಿ ರೈತರನ್ನ ಪೊಲೀಸರು ತಡೆಯುತ್ತಿದ್ದಾರೆ. ಆದರೆ ಟ್ರ್ಯಾಕ್ಟರ್, ಎತ್ತಿನ ಗಾಡಿಯನ್ನು ಪೊಲೀಸರು ತಡೆದರು ಇತರೆ ವಾಹನಗಳ ಮೂಲಕ ರೈತರು ಬೆಂಗಳೂರಿಗೆ ಬರುತ್ತಿದ್ದಾರೆ.

    ಇಂದು ರೈತರೆಲ್ಲರೂ ಸೇರಿ ವಿಧಾನಸೌಧಕ್ಕೆ ನುಗ್ಗುವ (ಮುತ್ತಿಗೆ) ಹಾಕುವ ಪ್ರಯತ್ನ ನಡೆಸಲಾಗುತ್ತದೆ. ಆದರೆ ಪ್ರಯತ್ನದಲ್ಲಿ ಕೆಲ ಬದಲಾವಣೆಗಳು ಆಗುತ್ತದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

  • ನೀನು ಎಷ್ಟು ವರ್ಷ ಆಯ್ತು ಉಳುಮೆ ಮಾಡಿ – ಕೋಡಿಹಳ್ಳಿಗೆ ರೇಣುಕಾಚಾರ್ಯ ಪ್ರಶ್ನೆ

    ನೀನು ಎಷ್ಟು ವರ್ಷ ಆಯ್ತು ಉಳುಮೆ ಮಾಡಿ – ಕೋಡಿಹಳ್ಳಿಗೆ ರೇಣುಕಾಚಾರ್ಯ ಪ್ರಶ್ನೆ

    – ನನ್ನ ಬಗ್ಗೆ ಮಾತಾಡಿದ್ರೆ ಸರಿ ಇರಲ್ಲ
    – ನಾವು ಬಿಜೆಪಿಯವರು ಸಭ್ಯಸ್ಥರು

    ಬೆಂಗಳೂರು: ಸಾರಿಗೆ ಸೌಕರರ ಹೋರಾಟಕ್ಕೆ ಕೈಜೋಡಿಸಿದ್ದ ರೈತ ಮುಖಂಡ ಕೋಡಿಹಳ್ಳಿ ವಿರುದ್ಧ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕೋಡಿಹಳ್ಳಿ ವಿರುದ್ಧ ಏಕವಚನ ಪ್ರಯೋಗ ಮಾಡಿದ ಶಾಸಕರು, ನೀನು ಯಾರಯ್ಯ ನನ್ ಬಗ್ಗೆ ಮಾತಾಡೋದಕ್ಕೆ. ನೀನು ಅಕ್ರಮ ಆಸ್ತಿ ಮಾಡಿದ್ದೀಯಾ, ಕೋಡಿಹಳ್ಳಿಯಲ್ಲಿದ್ದಾಗ ಎಷ್ಟಿತ್ತು ಆಸ್ತಿ?, ಐಷಾರಾಮಿ ಜೀವನ ಮಾಡ್ತಿದ್ದೀಯಾ, ಎಷ್ಟು ಐಷಾರಾಮಿ ಕಾರು ಇವೆ?. ಕೋಡಿಹಳ್ಳಿ ಚಂದ್ರಶೇಖರ್ ಒಬ್ಬ ಬ್ಲ್ಯಾಕ್ ಮೇಲರ್. ನನ್ನಲ್ಲಿ ಅವನ ಮನೆ ಬಂಗಲೆ ಫೋಟೋ ಇದೆ, ಐಷಾರಾಮಿ ಕಾರು ಇವೆ. ಎರಡೂವರೆ ಎಕರೆ ಇದ್ದ ಜಮೀನು ಈಗೆಷ್ಟು ಆಯ್ತು ಎಂದು ಪ್ರಶ್ನೆಗಳ ಸುರಿಮಳೆಗೈದ್ರು.

    ಕೋಡಿಹಳ್ಳಿ ಚಂದ್ರಶೇಖರ್ ವಿಭಿನ್ನ ಪಾತ್ರಗಳು ಮಾಡ್ತಾರೆ. ಹಸಿರು ಶಾಲು ಹಾಕಿ ರೈತ ಮುಖಂಡ ಅಂತಾರೆ. ಕೋಡಿಹಳ್ಳಿಗೂ ಸಾರಿಗೆ ನೌಕರರಿಗೂ ಏನು ಸಂಬಂಧ?, ನೀನು ಎಷ್ಟು ವರ್ಷ ಆಯ್ತು ಉಳುಮೆ ಮಾಡಿ. ಹಳ್ಳಿ ಬಿಟ್ಟು ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದಾರೆ. ಐಷಾರಾಮಿ ಬಂಗಲೆ, ಐಷಾರಾಮಿ ಕಾರಿನಲ್ಲಿ ಓಡಾಡುತ್ತಾರೆ. ನನ್ನ ವೈಯಕ್ತಿಕ ವಿಚಾರ ಮಾತನಾಡಲು ನೀನ್ಯಾರು?, ಬಿಟ್ಟಿ ಹೋರಾಟ, ಬಿಟ್ಟಿ ಪ್ರಚಾರ ತೆಗೆದುಕೊಳ್ಳುತ್ತಾರೆ. ಹೆಂಡತಿ, ಮಕ್ಕಳು ಎಲ್ಲರ ಹತ್ತಿರ ಐಷಾರಾಮಿ ಕಾರು ಇದೆ. ನನ್ನ ಬಗ್ಗೆ ಮಾತಾಡಿದ್ರೆ ಸರಿ ಇರಲ್ಲ ಎಂದು ಕಿಡಿಕಾರಿದರು.

    ಪ್ರತಾಪ್ ಚಂದ್ರಶೆಟ್ಟಿ ರಾಜೀನಾಮೆ ಕೊಡಲು ಕಾಂಗ್ರೆಸ್ ಬಿಡಲಿಲ್ಲ. ಸಭಾಪತಿ ಘಟನೆಯಲ್ಲಿ ಬಲಿಪಶು ಆದ್ರು. ಬಿಹಾರ್, ಉತ್ತರಪ್ರದೇಶದಲ್ಲಿ ಗೂಂಡಾ ವರ್ತನೆ ನಡೆದಿತ್ತು. ಕಾಂಗ್ರೆಸ್ ಆಡಳಿತ ಮಾಡಿದ್ದ ಕಡೆ ಗೂಂಡಾರಾಜ್ ಇತ್ತು. ಹೀಗಾಗಿ ಕಾಂಗ್ರೆಸ್ ಎಲ್ಲ ಕಡೆ ಅಡ್ರೆಸ್ ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ಸಿಗೆ ರಾಜ್ಯದ ಜನರು ಛೀಮಾರಿ ಹಾಕ್ತಿದ್ದಾರೆ. ಕಾಂಗ್ರೆಸ್ ರಾಜ್ಯದ ಜನತೆಯ ಕ್ಷಮೆ ಕೇಳಬೇಕು. ಸಭಾಪತಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಸಭಾಪತಿ ಬರುವುದಿಲ್ಲ ಎಂದು ಉಪಸಭಾಪತಿ ಕೂತಿದ್ದರು. ಕಾಂಗ್ರೆಸ್ಸಿನವರು ಉಪಸಭಾಪತಿ ಮೇಲೆ ಹಲ್ಲೆ ಮಾಡಿದ್ದರು. ಉಪಸಭಾಪತಿ ರಕ್ಷಣೆಗಾಗಿ ಬಿಜೆಪಿ ಹೋಗಿದೆ. ನಾವು ಬಿಜೆಪಿಯವರು ಸಭ್ಯಸ್ಥರು, ಕಾಂಗ್ರೆಸ್ಸಿನವರೇ ಗಲಾಟೆ ಮಾಡಿದ್ದು ಎಂದು ಗರಂ ಆದರು.

    ಬಿಜೆಪಿಗೆ ಯಾರೂ ಅನಿವಾರ್ಯ ಅಲ್ಲ. ಸಂಖ್ಯಾ ಬಲದ ಆಧಾರದ ಮೇಲೆ ಬಿಜೆಪಿ ಸರ್ಕಾರ ಮಾಡಿದೆ. ಆದರೆ ಜೆಡಿಎಸ್ ಗೆ ಯಾರ ಅನಿವಾರ್ಯ ಅನ್ನೋದು ನನಗೆ ಗೊತ್ತಿಲ್ಲ. ಮೈತ್ರಿ ಬಗ್ಗೆ ಎಲ್ಲ ಮಾತಾಡೋಕೆ ನಾನು ಚಿಕ್ಕವನು, ವರಿಷ್ಠರು ನಿರ್ಧಾರ ಮಾಡ್ತಾರೆ. ಸಭಾಪತಿ ಮೇಲೆ ಅವಿಶ್ವಾಸಕ್ಕೆ ನಾವು ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿಲ್ಲ. ಅವರು ಬಹಿರಂಗವಾಗಿಯೇ ಬೆಂಬಲ ನೀಡಿದ್ದಾರೆ ಎಂದರು.

  • ರಾಜ್ಯದ ಜನ ಕಷ್ಟ ಅನುಭವಿಸಲು ಕೋಡಿಹಳ್ಳಿಯೇ ಕಾರಣ- ತಿರುಗಿ ಬಿದ್ದ ರೈತ ಸಂಘದ ರಾಜ್ಯಾಧ್ಯಕ್ಷ

    ರಾಜ್ಯದ ಜನ ಕಷ್ಟ ಅನುಭವಿಸಲು ಕೋಡಿಹಳ್ಳಿಯೇ ಕಾರಣ- ತಿರುಗಿ ಬಿದ್ದ ರೈತ ಸಂಘದ ರಾಜ್ಯಾಧ್ಯಕ್ಷ

    – ಹಸಿರು ಟವಲ್ ಹಾಕಿ, ಆಟವಾಡಿ ರೈತರಿಗೆ ಅವಮಾನ ಮಾಡಬೇಡಿ

    ಮೈಸೂರು: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿರುಗಿ ಬಿದ್ದಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾಲ್ಕು ದಿನಗಳ ಕಾಲ ರಾಜ್ಯದ ಜನ ಕಷ್ಟ ಅನುಭವಿಸಲು ಕೋಡಿಹಳ್ಳಿಯೇ ಕಾರಣ. ನೀವು ಸಾರಿಗೆ ನೌಕರರ ಪರ ಹೋರಾಟ ಮಾಡಿ. ಆದರೆ ಹಸಿರು ಟವಲ್ ಇಳಿಸಿ ಹೋರಾಟ ಮಾಡಿ. ಸುಮ್ಮನೆ ಹಸಿರು ಟವಲ್ ಹಾಕಿಕೊಂಡು ರೈತರಿಗೆ ಅವಮಾನ ಮಾಡಬೇಡಿ. ನಿಮ್ಮಿಂದ ರೈತ ಮುಖಂಡರು, ರೈತ ಸಂಘಟನೆಗಳ ಬಗ್ಗೆ ಜನರಿಗೆ ಕೆಟ್ಟ ಅಭಿಪ್ರಾಯ ಮೂಡಿದೆ ಎಂದು ಟೀಕಿಸಿದ್ದಾರೆ.

    ಕೋಡಿಹಳ್ಳಿ ಚಂದ್ರಶೇಖರ್ ಅವರು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ಕೊಡಬೇಕಿತ್ತು. ಅದನ್ನು ಬಿಟ್ಟು ಸಾರಿಗೆ ನೌಕರರ ಜೊತೆ ಮುಷ್ಕರ ನಡೆಸಿ, ಅದನ್ನೂ ಹಳ್ಳ ಹಿಡಿಸಿದರು. ಅಲ್ಲದೆ ಇದರಿಂದ ರೈತ ಸಂಘದ ವರ್ಚಸ್ಸು ಕುಂದಿದೆ. ಗೌರವ ಕಡಿಮೆಯಾಗಿದೆ. ಹಸಿರು ಟವಲ್ ಹಾಕಿಕೊಂಡು ಆಟವಾಡಬೇಡಿ. ನಿಮಗೆ ಬದ್ಧತೆ ಇದ್ದರೆ ರೈತರ ಬಗ್ಗೆ ಆ ಕಾಳಜಿ ತೋರಿಸಿ. ಪ್ರಚಾರಕ್ಕಾಗಿ, ಬೇರೆ ಸಂಘಟನೆಗಳಲ್ಲಿ ಒಡಕು ಉಂಟುಮಾಡಲು ಈ ರೀತಿ ಮಾಡಬೇಡಿ ಎಂದು ತರಾಟೆಗೆ ತೆಗೆದುಕೊಮಡಿದ್ದಾರೆ.

    ರಾಜ್ಯದ ಜನ ನಾಲ್ಕು ದಿನಗಳಿಂದ ಸಂಕಷ್ಟ ಅನುಭವಿಸುವುದಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಅವರ ತಪ್ಪು ನಿರ್ಧಾರಗಳೇ ಕಾರಣ. ಕೋಡಿಹಳ್ಳಿಗೆ ಸಮಸ್ಯೆಯ ಅರಿವಿಲ್ಲ ಹಾಗಾಗಿ ಅದಕ್ಕೆ ಪರಿಹಾರವೂ ಗೊತ್ತಿಲ್ಲ. ಸಾರಿಗೆ ನೌಕರರನ್ನು ದಿಕ್ಕು ತಪ್ಪಿಸಿರೋದೆ ಕೋಡಿಹಳ್ಳಿ ಚಂದ್ರಶೇಖರ್. ಭಾನುವಾರ ಮುಕ್ತಾಯವಾಗಿದ್ದ ಮುಷ್ಕರವನ್ನು ಮುಂದುವರೆಸಲು ಚಿತಾವಣೆ ಮಾಡಿದ್ದೇ ಕೋಡಿಹಳ್ಳಿ. ಸಾರಿಗೆ ನೌಕರರೇ ನಿಮ್ಮ ಬಗ್ಗೆ ಜನರಿಗೆ ಸಹಾನುಭೂತಿ ಇದೆ. ಕೋಡಿಹಳ್ಳಿ ಮಾತು ಕಟ್ಟಿಕೊಂಡು ಹೋದರೆ ಅವರ ಸಂಘಟಯೇ ಹಾಳಾಗುತ್ತದೆ ಎಂದು ಎಚ್ಚರಿಸಿದ್ದಾರೆ.

  • ಸಾರಿಗೆ ನೌಕರರ ಮುಷ್ಕರ ಅಂತ್ಯ – ಸಂಜೆಯಿಂದಲೇ ಸಂಚಾರ ಆರಂಭ

    ಸಾರಿಗೆ ನೌಕರರ ಮುಷ್ಕರ ಅಂತ್ಯ – ಸಂಜೆಯಿಂದಲೇ ಸಂಚಾರ ಆರಂಭ

    ಬೆಂಗಳೂರು: 4 ದಿನಗಳಿಂದ ನಡೆಯುತ್ತಿದ್ದ ಸಾರಿಗೆ ನೌಕರರ ಮುಷ್ಕರ ಅಂತ್ಯಗೊಂಡಿದ್ದು ಇಂದು ಸಂಜೆಯಿಂದಲೇ ಸರ್ಕಾರಿ ಬಸ್ಸುಗಳು ರಸ್ತೆಗೆ ಇಳಿಯಲಿವೆ.

    ಭಾನುವಾರ ಸರ್ಕಾರ 9 ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿತ್ತು. ಈ ಬೇಡಿಕೆಯನ್ನು ಒಪ್ಪಿರುವ ಬಗ್ಗೆ ಸರ್ಕಾರ ಅಧಿಕೃತವಾಗಿ ತಿಳಿಸಬೇಕು ಜೊತೆಗೆ ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂಬ ಬೇಡಿಕೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮುಂದುವರಿಸಿದ್ದರು.

    ಈ ನಡುವೆ ಮಧ್ಯಾಹ್ನ ಸಾರಿಗೆ ಸಚಿವ ಲಕ್ಷ್ಮಣ ಸವದಿಯವರು ಬೇಡಿಕೆ ಒಪ್ಪಿರುವ ಬಗ್ಗೆ ಪತ್ರ ಕಳುಹಿಸಿದ್ದರು. ಈ ಬೆನ್ನಲ್ಲೇ ನೌಕರರ ಸಂಘದ ಮುಖಂಡರು ಸಭೆ ನಡೆಸಿ ಮಷ್ಕರವನ್ನು ಕೈ ಬಿಡುವ ತೀರ್ಮಾನವನ್ನು ತೆಗೆದುಕೊಂಡರು.

    ಈ ವೇಳೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್‌ ಸರ್ಕಾರ ನೀಡಿದ ಭರವಸೆ ಈಡೇರಿಕೆಗಾಗಿ ಮೂರು ತಿಂಗಳು ಅವಕಾಶ ನೀಡುತ್ತೇವೆ. ಒಂದು ವೇಳೆ ಈ ಅವಧಿಯ ಒಳಗಡೆ ಬೇಡಿಕೆ ಈಡೇರದೇ ಇದ್ದರೆ ಮತ್ತೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

    ಜನವರಿ 1 ರಿಂದ 30ರವರೆಗೆ ಯಾವ ಯಾವ ಕೆಲಸ ಆಗಬೇಕೋ ಅದನ್ನು ಫಾಲೋ ಮಾಡುತ್ತೇವೆ. ನಿಮ್ಮವಿಶ್ವಾಸ ಕಳೆದುಕೊಳ್ಳುವುದಿಲ್ಲ. ದೊಡ್ಡ ಬೇಡಿಕೆ ಇದೆ ಎಂದು ಹೇಳಿ ಮುಷ್ಕರವನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

  • ಬೇಡಿಕೆಗೆ ಒಪ್ಪಿರುವ ಬಗ್ಗೆ ನಡವಳಿಕೆ ಪತ್ರ ಕಳುಹಿಸಿದ ಸಚಿವ ಸವದಿ- ಕೆಲವೇ ಗಂಟೆಗಳಲ್ಲಿ ಬಸ್ ಸಂಚಾರ ಆರಂಭ?

    ಬೇಡಿಕೆಗೆ ಒಪ್ಪಿರುವ ಬಗ್ಗೆ ನಡವಳಿಕೆ ಪತ್ರ ಕಳುಹಿಸಿದ ಸಚಿವ ಸವದಿ- ಕೆಲವೇ ಗಂಟೆಗಳಲ್ಲಿ ಬಸ್ ಸಂಚಾರ ಆರಂಭ?

    – ಮುಷ್ಕರ ಕೈ ಬಿಡುವಂತೆ ಸಾರಿಗೆ ನೌಕರರಿಗೆ ಮನವಿ

    ಬೆಂಗಳೂರು: ಸರ್ಕಾರ ಹಾಗೂ ಸಾರಿಗೆ ನೌಕರರ ಹಗ್ಗ ಜಗ್ಗಾಟ ತಾರಕಕ್ಕೇರಿದ್ದು, ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಭಾನುವಾರ ಮುಷ್ಕರ ವಾಪಸ್ ಪಡೆಯುವುದಾಗಿ ಹೇಳಿ ನೌಕರರು ಯು ಟರ್ನ್ ಹೊಡೆದಿದ್ದರು. ಇಂದು ಸಹ ಸಂಧಾನ ಪ್ರಹಸನ ನಡೆಯುತ್ತಿದ್ದು, ನೌಕರರ ಬೇಡಿಕೆಗೆ ಒಪ್ಪಿರುವ ಕುರಿತು ನಡವಳಿಕೆ ಪತ್ರವನ್ನು ಸಾರಿಗೆ ಸಚಿವ ಲಕ್ಷ್ಮಣ ಸವದಿ ಪ್ರತಿಭಟನಾಕಾರರಿಗೆ ಕಳುಹಿಸಿದ್ದಾರೆ.

    ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಬೇಡಿಕೆ ಈಡೇರಿಕೆ ಕುರಿತು ಭಾನುವಾರವೇ ಒಪ್ಪಿದೆ. ಅದರಂತೆ ಭಾನುವಾರವೇ ಪತ್ರವನ್ನು ಸಹ ಸಿದ್ದ ಪಡಿಸಲಾಗಿದೆ. ಆದರೆ ನೌಕರರು ನಿನ್ನೆ ರಾತ್ರಿ ಯಾಕೆ ತಮ್ಮ ನಿರ್ಧಾರ ಬದಲಿಸಿದರೋ ಗೊತ್ತಿಲ್ಲ. ಇದೀಗ ಬೇಡಿಕೆಗೆ ಸರ್ಕಾರ ಒಪ್ಪಿಗೆ ಸೂಚಿಸಿರುವ ಬಗ್ಗೆ ನೌಕರರು ಪತ್ರವನ್ನು ಕೇಳುತ್ತಿದ್ದಾರೆ. ಅದರಂತೆ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಅವರ ಜೊತೆ ನಡವಳಿಕೆ ಪತ್ರವನ್ನು ಕಳುಹಿಸಿಕೊಡಲಾಗಿದೆ. ನೌಕರರು ಮುಷ್ಕರವನ್ನು ಹಿಂಪಡೆಯುತ್ತಾರೆ ಎಂಬ ಭರವಸೆ ಇದೆ ಎಂದು ತಿಳಿಸಿದರು.

    ಕೋಡಿಹಳ್ಳಿ ಚಂದ್ರಶೇಖರ್ ಪದೇ ಪದೇ ಮಾತು ಬದಲಾವಣೆ ಮಾಡುತ್ತಿದ್ದಾರೆ. ಅವರಲ್ಲಿ ಗೊಂದಲ ಇದ್ದಂತೆ ಕಾಣುತ್ತಿದೆ. ಈಗ ಪತ್ರ ಕಳಿಸಿದ್ದೇವೆ ನೋಡೋಣ. ವಾಪಸ್ ಪಡಿತಾರೆ ಅನ್ನೋ ವಿಶ್ವಾಸ ಇದೆ ಎಂದರು.

    ಯಾವುದೇ ಕಾರಣಕ್ಕೂ ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಸಾಧ್ಯವೇ ಇಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ 10 ಬೇಡಿಕೆಗಳ ಪೈಕಿ 9 ಬೇಡಿಕೆ ಈಡೇರಿಕೆ ಮಾಡಲಾಗಿದೆ. ನಿನ್ನೆ ಸಂಧಾನಕ್ಕೆ ಒಪ್ಪಿ, ಬಳಿಕ ಯಾಕೆ ಯೂಟರ್ನ್ ಆದರೋ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಬಂದ್ ವಾಪಸ್ ಪಡೆಯುತ್ತೇವೆ ಅಂತ ಹೇಳಿದ್ದಾರೆ. ಅವರು ಬೆಂಬಲ ವಾಪಸ್ ಪಡೆಯಲಿ ನಂತರ ಮಾತನಾಡುತ್ತೇನೆ. ಕೋಡಿಹಳ್ಳಿ ಪ್ರತಿಭಟನೆ ಹಿಂದೆ ರಾಜಕೀಯ ಇರುವುದರಲ್ಲಿ ಎರಡು ಮಾತಿಲ್ಲ. ಕೋಡಿಹಳ್ಳಿ ಚಂದ್ರಶೇಖರ್ ಜೊತೆ ನಾವ್ಯಾಕೆ ಮಾತಾಡೋಣ. ನಮ್ಮ ನೌಕರರ ಜೊತೆ ನಾವು ಮಾತನಾಡುತ್ತೇವೆ. ಕೋಡಿಹಳ್ಳಿ ಚಂದ್ರಶೇಖರ್ ಯಾರು ಎಂದು ಸವದಿ ಪ್ರಶ್ನಿಸಿದರು.

    ಈಗಾಗಲೇ ಬಸ್ ಸಂಚಾರ ಪ್ರಾರಂಭ ಆಗಿದೆ. ನೌಕರರಿಗೆ ತೊಂದರೆ ಆಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತೆ. ನೌಕರರು ಮುಷ್ಕರ ಬಿಟ್ಟು ಕೆಲಸಕ್ಕೆ ಹಾಜರಾಗಬೇಕು ಎಂದು ನೌಕರರಿಗೆ ಸವದಿ ಮತ್ತೆ ಮನವಿ ಮಾಡಿದರು. ಎಸ್ಮಾ ಜಾರಿ ಈಗ ಅವಶ್ಯಕತೆ ಇಲ್ಲ. ಈಗಾಗಲೇ ಬಸ್ ಗಳು ಓಡಾಟ ಪ್ರಾರಂಭ ಮಾಡಿವೆ. ಅವರು ನಮ್ಮ ನೌಕರರೇ, ಉಳಿದ ಎಲ್ಲ ನೌಕರರು ಕೆಲಸಕ್ಕೆ ಹಾಜರಾಗಲು ಮನವಿ ಮಾಡುತ್ತೇನೆ. ಎಸ್ಮಾ ಅನ್ನೋದು ಬ್ರಹ್ಮಾಸ್ತ್ರ ಎಂದು ತಿಳಿಸಿದರು.

  • ಸಮಾಜಘಾತುಕ ಶಕ್ತಿಗೆ ಉದಾಹರಣೆಯೇ ಕೋಡಿಹಳ್ಳಿ: ಈಶ್ವರಪ್ಪ ಕಿಡಿ

    ಸಮಾಜಘಾತುಕ ಶಕ್ತಿಗೆ ಉದಾಹರಣೆಯೇ ಕೋಡಿಹಳ್ಳಿ: ಈಶ್ವರಪ್ಪ ಕಿಡಿ

    – ಚಂದ್ರಶೇಖರ್ ನೌಕರರ ದಾರಿ ತಪ್ಪಿಸ್ತಿದ್ದಾರೆ

    ಶಿವಮೊಗ್ಗ: ಸಾರಿಗೆ ನೌಕರರು ಕಳೆದ 4 ದಿನದಿಂದ ನಡೆಸುತ್ತಿರುವ ಮುಷ್ಕರಕ್ಕೆ ಸರ್ಕಾರ ಸ್ಪಂದಿಸಿ ಅವರ 9 ಬೇಡಿಕೆಗಳನ್ನು ಈಡೇರಿಸಿದೆ. ಆದರೂ ನೌಕರರು ಕೋಡಿಹಳ್ಳಿ ಚಂದ್ರಶೇಖರ್ ಮಾತನ್ನು ನಂಬಿ ಹಾಳಾಗುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕೋಡಿಹಳ್ಳಿ ಚಂದ್ರಶೇಖರ್ ಎರಡು ತಲೆ ಹಾವು ಇದ್ದಂತೆ. ಹಾಗಾಗಿ ಇಂತಹ ವ್ಯಕ್ತಿಗಳನ್ನು ಸಂಘಟನೆಗಳಾಗಲಿ, ರಾಜ್ಯದ ಜನರಾಗಲಿ ನಂಬಬಾರದು. ನಾಯಕರು ಎಂದು ಮುಂದೆ ಬಂದು ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ ಇಂತಹವರ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಸಚಿವ ಈಶ್ವರಪ್ಪ ಕೋಡಿಹಳ್ಳಿ ವಿರುದ್ಧ ಹರಿಹಾಯ್ದರು.

    ಒಂದು ವೇಳೆ ಎಸ್ಮಾ ಜಾರಿಯಾದರೆ ಗತಿ ಏನು. ನೌಕರರ ಕುಟುಂಬಕ್ಕೆ ಕೋಡಿಹಳ್ಳಿ ಜವಾಬ್ದಾರರು ಆಗುತ್ತಾರಾ ಎಂದು ಪ್ರಶ್ನಿಸಿದರು. ಕೋಡಿಹಳ್ಳಿ ಹಿಂದೆ ಮತ್ತೆ ಯಾರಿದ್ದಾರೋ ಗೊತ್ತಿಲ್ಲ. ಸಮಯ ಬಂದಾಗ ತಿಳಿಸುತ್ತೇನೆ. ವೈಯಕ್ತಿಕ ಪ್ರತಿಷ್ಠೆಯನ್ನು ಕಾರ್ಮಿಕರ ಮೇಲೆ ಹೇರುವ ಮೂಲಕ ರಾಜ್ಯದ 6 ಕೋಟಿ ಜನರಿಗೆ ತೊಂದರೆಯನ್ನುಂಟು ಮಾಡಿದ್ದಾರೆ. ಈ ಮುಷ್ಕರದಲ್ಲಿ ಕೋಡಿಹಳ್ಳಿ ಭಾಗವಹಿಸುವ ಮೂಲಕ ನೌಕರರ ಯೂನಿಯನ್ ಒಡೆಯುವ ಕೆಲಸಕ್ಕೆ ಕೈಹಾಕಿದ್ದಾರೆ ಎಂದರು.

    ಸಮಾಜಘಾತುಕ ಶಕ್ತಿಗೆ ಉದಾಹರಣೆಯೇ ಕೋಡಿಹಳ್ಳಿ ಚಂದ್ರಶೇಖರ್. ರಾಜ್ಯದಲ್ಲಿ ಅಶಾಂತಿ ಮೂಡಿಸುವ ಕೆಲಸವನ್ನು ಕೋಡಿಹಳ್ಳಿ ಮಾಡುತ್ತಿದ್ದಾರೆ. ನೌಕರರು ಕರ್ತವ್ಯಕ್ಕೆ ಹಾಜರಾಗಲು ಮುಂದಾದರೆ ಕೋಡಿಹಳ್ಳಿ ನೌಕರರಿಗೆ ದಾರಿ ತಪ್ಪಿಸುತ್ತಿದ್ದಾರೆ. ನೌಕರರಿಗೆ ಸ್ವತಂತ್ರವಾಗಿ ಯೋಚಿಸುವ ಬುದ್ಧಿ ಇಲ್ಲವಾ..? ಯಾರದ್ದೋ ಮಾತು ಕೇಳಿ ಪ್ರತಿಭಟನೆ ನಡೆಸುವುದು ಒಳ್ಳೆಯದಲ್ಲ. ಕೋಡಿಹಳ್ಳಿ ಮಾತು ಕೇಳಿದರೆ ನಿಮ್ಮ ಯೂನಿಯನ್ ಒಡೆದು ಹೋಗುತ್ತೆ. ನೌಕರರು ಹಾಳಾಗುತ್ತಾರೆ. 6 ಕೋಟಿ ಜನರಿಗೂ ತೊಂದರೆ ಆಗುತ್ತೆ. ಈಗಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸಚಿವರು ನೌಕರರಿಗೆ ಮನವಿ ಮಾಡಿದರು.

  • ಕೋಡಿಹಳ್ಳಿ ಚಂದ್ರಶೇಖರ್ ಚೈನಾ ಮಾಡೆಲ್: ಸೊಗಡು ಶಿವಣ್ಣ

    ಕೋಡಿಹಳ್ಳಿ ಚಂದ್ರಶೇಖರ್ ಚೈನಾ ಮಾಡೆಲ್: ಸೊಗಡು ಶಿವಣ್ಣ

    ತುಮಕೂರು: ಕೋಡಿಹಳ್ಳಿ ಚಂದ್ರಶೇಖರ್ ನಮ್ಮ ದೇಶದವರಲ್ಲ, ಚೈನಾ ಮಾಡೆಲ್ ಇರಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಡಿಹಳ್ಳಿ ಕಮ್ಯೂನಿಸ್ಟ್ ನಿಬಂಧನೆಗಳನ್ನು ಬಲವಂತವಾಗಿ ಹೇರುವ ಮೂಲಕ ಸಾರಿಗೆ ನೌಕರರ ಹೋರಾಟದ ದಾರಿ ತಪ್ಪಿಸುತಿದ್ದಾರೆ. ನೌಕರರ ಹೋರಾಟದಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡಿದ್ದಾರೆ. ಬಹುಶಃ ಇವರು ಚೀನಾದಿಂದ ಬಂದಿರಬೇಕು. ಅವರು ನಮ್ಮ ದೇಶದವರಲ್ಲಿ ಚೈನಾ ಮಾಡೆಲ್ ಇರಬೇಕು ಎಂದು ಹರಿಹಾಯ್ದಿದ್ದಾರೆ.

    ಕೋವಿಡ್ ಸಂದರ್ಭದಲ್ಲಿ ಈತ ರೈತರ ನೆರವಿಗೆ ನಿಂತಿಲ್ಲ, ರೈತರ ತರಕಾರಿಗಳು ರಸ್ತೆಗೆ ಬಿದ್ದಿತ್ತು. ನಾವು ಅದನ್ನು ಬೆಂಗಳೂರಿಗೆ ರವಾನಿಸಿ ಮಾರಾಟ ಮಾಡಿದ್ದೆವು. ಆಗ ಈತ ಎಲ್ಲಿಗೆ ಹೋಗಿದ್ದರು, ಈತನಿಗೆ ಮಾನ ಮರ್ಯಾದೆ ಇಲ್ವಾ, ಈ ರೀತಿ ಎತ್ತಿಕಟ್ಟಲು ನಾಚಿಕೆ ಆಗುವುದಿಲ್ಲವೇ? ಈನನ್ನು ಮೇಧಾವಿ ಅಂದುಕೊಂಡಿದ್ದೆ, ಈತ ವ್ಯವಸ್ಥೆಯನ್ನು ಬುಡಮೇಲು ಮಾಡುವವ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈತನನ್ನು ಸರ್ಕಾರ ಯಾಕೆ ಸುಮ್ಮನೆ ಬಿಟ್ಟಿದೆ, ಅರೆಸ್ಟ್ ಮಾಡಿ ಒಳಗೆ ಹಾಕಬೇಕು. ಕಾನೂನಿನ ಪ್ರಕಾರ ಚಂದ್ರಶೇಖರ್ ಅವರನ್ನು ಒಳಗೆ ಹಾಕಿದರೆ ಇಷ್ಟೊಂದು ಅಹಿತಕರ ಘಟನೆ ನಡೆಯುತ್ತಿರಲಿಲ್ಲ ಎಂದು ಕಿಡಿಕಾರಿದರು.