Tag: ಕೋಚಿಮುಲ್

  • ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಗೆ ಹೈಕೋರ್ಟ್ ಆಸ್ತು – ಸತ್ಯಕ್ಕೆ ಸಂದ ಜಯ ಎಂದ ಸಂಸದ ಸುಧಾಕರ್

    ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಗೆ ಹೈಕೋರ್ಟ್ ಆಸ್ತು – ಸತ್ಯಕ್ಕೆ ಸಂದ ಜಯ ಎಂದ ಸಂಸದ ಸುಧಾಕರ್

    ಚಿಕ್ಕಬಳ್ಳಾಪುರ: ಸಂಸದ ಸುಧಾಕರ್ ಸಚಿವರಾಗಿದ್ದಾಗ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಚಿಮುಲ್ (Kochimul) ವಿಭಜನೆ ಮಾಡಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಿದ್ದ ಆದೇಶವನ್ನ ಮರುಸ್ಥಾಪನೆ ಮಾಡುವಂತೆ ಹೈಕೋರ್ಟ್ ತೀರ್ಪು ನೀಡಿದೆ. ಇದು ಕೋಲಾರ ಮತ್ತು ಚಿಕ್ಕಳ್ಳಾಪುರ ಜಿಲ್ಲೆಯ ರೈತರ (Chikkaballapura Farmers) ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಸಂಸದ ಡಾ.ಕೆ ಸುಧಾಕರ್ ತಿಳಿಸಿದ್ದಾರೆ. ಇದನ್ನೂ ಓದಿ: ಕೊನೆಗೂ ಅಲ್ಪಸಂಖ್ಯಾತ ಅಭ್ಯರ್ಥಿಗೆ ಶಿಗ್ಗಾಂವಿ ಟಿಕೆಟ್‌ ನೀಡಿದ ಕಾಂಗ್ರೆಸ್‌

    ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಸದ ಸುಧಾಕರ್ (Dr. K Sudhakar), ಆಡಳಿತಾತ್ಮಕ ದೃಷ್ಟಿಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ಹಿತಾಸಕ್ತಿ ಕಾಪಾಡಲು ಪ್ರತ್ಯೇಕ ಹಾಲು ಒಕ್ಕೂಟ ಅಗತ್ಯವಿದೆ ಎಂದು ಹೋರಾಟ ಮಾಡಿ, ಅಂದಿನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಸಂಪುಟದ ಸದಸ್ಯರನ್ನು ಮನವೊಲಿಸಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ತರುವಲ್ಲಿ ಯಶಸ್ವಿಯಾಗಿದ್ದೆ. ಆದರೆ ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ದ್ವೇಷದ ರಾಜಕಾರಣಕ್ಕಾಗಿ, ನನ್ನ ಮೇಲಿನ ಸೇಡಿಗಾಗಿ ಬಿಜೆಪಿ ಸರ್ಕಾರದ (BJP Government) ಆದೇಶವನ್ನು ಏಕಾಏಕಿ ರದ್ದು ಮಾಡಿ ಜಿಲ್ಲೆಯ ರೈತರ ಹಕ್ಕು ಕಸಿದುಕೊಳ್ಳುವ ಪಾಪದ ಕೆಲಸ ಮಾಡಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಭರತ್‌ ಬೊಮ್ಮಾಯಿ 16.17 ಕೋಟಿ ಆಸ್ತಿ ಒಡೆಯ; ಆದ್ರೂ ಸ್ವಂತ ಕಾರು ಇಲ್ಲ!

    ‘ಬೆಟ್ಟ ಅಗೆದು ಇಲಿ ಹಿಡಿದರು’ ಎನ್ನುವ ಹಾಗೆ ರಾಜಕೀಯ ಸ್ವಾರ್ಥಕ್ಕಾಗಿ, ದ್ವೇಷ ರಾಜಕಾರಣಕ್ಕಾಗಿ 17 ತಿಂಗಳ ಹಿಂದೆ ಪ್ರತ್ಯೇಕ ಹಾಲು ಒಕ್ಕೂಟ ರಚನೆಯ ಅದೇಶವನ್ನ ರದ್ದು ಮಾಡಿದ್ದ ಕಾಂಗ್ರೆಸ್ ಸರ್ಕಾರ ಈಗ ನ್ಯಾಯಾಲಯದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಕೋಚಿಮುಲ್ ಹಾಲು ಒಕ್ಕೂಟವನ್ನು ವಿಭಜನೆ ಮಾಡಿದ್ದ ಆದೇಶವೇ ಸರಿ ಇದೆ ಎಂದು ಒಪ್ಪಿಕೊಂಡಿದೆ. ಕಾಂಗ್ರೆಸ್ ಸರ್ಕಾರದ ಈ ದ್ವಂದ್ವ ನೀತಿಯಿಂದ, ಎಡಬಿಡಂಗಿ ನಡೆಯಿಂದ 17 ತಿಂಗಳು ಅನಗತ್ಯವಾಗಿ ವ್ಯರ್ಥವಾಗಿದೆ. ಕೆಲವೇ ಕೆಲವು ನಾಯಕರ ಸ್ವಾರ್ಥ ರಾಜಕಾರಣಕ್ಕೆ 17 ತಿಂಗಳ ಕಾಲ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ ಎಂದು ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಇಂಡಿಗೋ, ಏರ್‌ ಇಂಡಿಯಾ, ಸ್ಪೈಸ್‌ಜೆಟ್‌ ಸೇರಿ ಮತ್ತೆ 95 ವಿಮಾನಗಳಿಗೆ ಬಾಂಬ್‌ ಬೆದರಿಕೆ ಕರೆ

    ರೈತರಿಗಾದ ಈ ನಷ್ಟಕ್ಕೆ ಯಾರು ಹೊಣೆ? ಇಂದಿನ ಕೋರ್ಟ್ ತೀರ್ಪು ಕಾಂಗ್ರೆಸ್ ನಾಯಕರಿಗೆ ಕಪಾಳ ಮೋಕ್ಷ ಮಾಡಿದ್ದು, ಇನ್ನು ಮುಂದಾದರೂ ಜಿಲ್ಲೆಯ ಕಾಂಗ್ರೆಸ್ ನಾಯಕರು ಅಭಿವೃದ್ಧಿಯ ವಿಷಯದಲ್ಲಿ ರಾಜಕೀಯ ಮಾಡದೆ ಜನಪರವಾಗಿ ಕೆಲಸ ಮಾಡಲಿ ಎಂದು ಆಶಿಸುತ್ತೇನೆ. ಮಾತೆತ್ತಿದರೆ ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಉದ್ದುದ್ದ ಭಾಷಣ, ನೀತಿ ಪಾಠ ಹೇಳುವ ಕಾಂಗ್ರೆಸ್ ನಾಯಕರು ಕೋಚಿಮುಲ್ ಆಡಳಿತ ಮಂಡಳಿಯ ಅವಧಿಯು 2024ರ ಮೇ 12ಕ್ಕೆ ಮುಕ್ತಾಯವಾಗಿದ್ದರೂ ಇನ್ನೂ ಚುನಾವಣೆ ನಡೆಸಿಲ್ಲ. ಈ ಬಗ್ಗೆ ಹೈಕೋರ್ಟ್‍ನಲ್ಲಿ ಹೂಡಲಾಗಿದ್ದ ದಾವೆಗೆ ಕೋರ್ಟ್ ತೀರ್ಪು ನೀಡಿದ್ದು, ಆಡಳಿತ ಮಂಡಳಿ ರಚನೆಗಾಗಿ 90 ದಿನಗಳ ಒಳಗಾಗಿ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳಿಸಬೇಕೆಂದು ಜುಲೈ 17ರಂದು ಹೈಕೋರ್ಟ್ ಆದೇಶಿಸಿತ್ತು. ಅಕ್ರಮ ನೇಮಕಾತಿ, ಭ್ರಷ್ಟಾಚಾರದ ಮೂಲಕ ರೈತರ ಹಣ ಲೂಟಿ ಮಾಡಲು ಚುನಾವಣೆ ನಡೆಸದೇ ಅಧಿಕಾರಕ್ಕೆ ಅಂಟಿಕೊಂಡಿರುವ ಕಾಂಗ್ರೆಸ್ ನಾಯಕರು, ಈ ಕೂಡಲೇ ಹಾಲು ಒಕ್ಕೂಟದ ವಿಭಜನೆಯ ಪ್ರಕ್ರಿಯೆ ಆರಂಭಿಸಿ ಚುನಾವಣೆ ನಡೆಸಬೇಕು ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ.

  • ರೈತರಿಗೆ ಕೋಚಿಮುಲ್ ಬಿಗ್ ಶಾಕ್ – ಹಾಲು ಉತ್ಪಾದಕರಿಗೆ 2 ರೂ. ಕಡಿತ

    ರೈತರಿಗೆ ಕೋಚಿಮುಲ್ ಬಿಗ್ ಶಾಕ್ – ಹಾಲು ಉತ್ಪಾದಕರಿಗೆ 2 ರೂ. ಕಡಿತ

    – ಇಂದಿನಿಂದಲೇ ಜಾರಿ, ಹಾಲು ಉತ್ಪಾದಕರು ಕಂಗಾಲು

    ಕೋಲಾರ: ಕೆಎಂಎಫ್ (KMF) ಹಾಲಿನ ದರ (Milk Price) ಏರಿಕೆ ಮಾಡಿದ ಬೆನ್ನಲ್ಲೇ ರೈತರಿಗೆ (Farmers) ನೀಡುವ ಹಾಲಿನ ಬೆಲೆಯಲ್ಲಿ 2 ರೂಪಾಯಿ ಕಡಿತಗೊಳಿಸಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ (KOCHIMUL) ರೈತರಿಗೆ ಬಿಗ್ ಶಾಕ್ ನೀಡಿದೆ.

    ಈಗಷ್ಟೇ ಮುಂಗಾರು ಆರಂಭವಾಗಿ ರೈತರು ನಿಟ್ಟುಸಿರು ಬಿಡುತ್ತಿದ್ದ ವೇಳೆ ಕೋಚಿಮುಲ್ ಆಡಳಿತ ಮಂಡಳಿ ದಿಢೀರ್‌ 2 ರೂ. ಕಡಿಮೆ ಮಾಡಿದ್ದರಿಂದ ರೈತರು ಕಂಗಾಲಾಗಿದ್ದಾರೆ. ಪ್ರತಿ ಲೀಟರ್ ಹಾಲಿನ ಮೇಲೆ 2 ರೂ. ಕಡಿತ ಮಾಡಿದ್ದು, ಇಂದು ಬೆಳಿಗ್ಗೆಯಿಂದ ಜಾರಿಗೆ ಬರುವಂತೆ ಕೋಚಿಮುಲ್ ಆದೇಶ ಆದೇಶ ಹೊರಡಿಸಿದೆ.

    ಈ ಮೊದಲು ಪ್ರತಿ ಲೀಟರ್‌ ಹಾಲಿಗೆ 33.40 ರೂ. ನೀಡಲಾಗುತ್ತಿತ್ತು. ಕೋಚಿಮುಲ್‌ ಆದೇಶದಿಂದ ಉತ್ಪಾದಕರಿಗೆ ಪರಿಷ್ಕೃತ ದರ ಲೀಟರ್ ಗೆ 31.40 ರೂ. ಸಿಗಲಿದೆ.

    ಜನವರಿಯಲ್ಲಿ ಪ್ರತಿ ದಿನ ಕೋಚಿಮುಲ್‌ಗೆ 9.65 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿತ್ತು. ಆದರೆ ಜೂನ್ ತಿಂಗಳಿನಿಂದ ಪ್ರತಿ ದಿನ ಕೋಚಿಮುಲ್‌ಗೆ 12.37 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿದೆ. ಇದನ್ನೂ ಓದಿ: Champions: ವಿಶ್ವ ಚಾಂಪಿಯನ್ಸ್‌ಗೆ ಬಂಪರ್‌ ಗಿಫ್ಟ್‌ – 125 ಕೋಟಿ ರೂ. ಬಹುಮಾನ ಚೆಕ್‌ ವಿತರಣೆ

    ಕೋಲಾರ – ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳಿಂದ ಎರಡೂವರೆ ಲಕ್ಷ ಲೀಟರ್‌ ಹಾಲು ಹೆಚ್ಚಳವಾದ ಕಾರಣ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕೋಚಿಮುಲ್ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದೆ.

    ಈಗಾಗಲೇ ಲೀಟರ್‌ಗೆ 2 ರೂ. ಹೆಚ್ಚಳ ಮಾಡಿ ಕೆಎಂಎಫ್‌ ಆದೇಶ ಹೊರಡಿಸಿದೆ. ಈಗ ರೈತರಿಗೆ 2 ರೂ. ಕಡಿತ ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

     

  • ಕೋಚಿಮುಲ್ ನೇಮಕಾತಿ ಅಕ್ರಮದಲ್ಲಿ ಮಂಗಳೂರು ವಿವಿ ಭಾಗಿಯಾಗಿರುವ ಶಂಕೆ – ಇಡಿ ವಿಚಾರಣೆ

    ಕೋಚಿಮುಲ್ ನೇಮಕಾತಿ ಅಕ್ರಮದಲ್ಲಿ ಮಂಗಳೂರು ವಿವಿ ಭಾಗಿಯಾಗಿರುವ ಶಂಕೆ – ಇಡಿ ವಿಚಾರಣೆ

    – ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವದಲ್ಲೇ ಪ್ರಶ್ನೆಪತ್ರಿಕೆ ಮಾರಾಟವಾಗಿರುವ ಅನುಮಾನ
    – ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ರಾಜುಕೃಷ್ಣ ಚಲನ್ನವರ್ ವಿಚಾರಣೆ

    ಮಂಗಳೂರು: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನೇಮಕಾತಿ ಪರೀಕ್ಷೆ ಹಗರಣದಲ್ಲಿ ಮಂಗಳೂರು ವಿವಿ (Mangaluru University) ನೇರವಾಗಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

    ಪರೀಕ್ಷಾ ಪೂರ್ವದಲ್ಲೇ ಕೋಚಿಮುಲ್ (Kochimul) ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮಾರಾಟವಾಗಿದೆ ಅನ್ನೋ ಬಗ್ಗೆ ಸಂಶಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರ (ಜ.20) ಮಂಗಳೂರು ವಿವಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳ ತಂಡ ಭೇಟಿ ನೀಡಿ ತೀವ್ರ ವಿಚಾರಣೆ ನಡೆಸಿದೆ. ಇದನ್ನೂ ಓದಿ: ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಮೋದಿ ಕಠಿಣ ವ್ರತ – ಪ್ರತಿದಿನ 1 ಗಂಟೆ ವಿಶೇಷ ಮಂತ್ರ ಪಠಣ

    ದಕ್ಷಿಣ ಕನ್ನಡ ಜಿಲ್ಲೆಯ ಉಲ್ಲಾಳ ತಾಲೂಕಿನ ಕೊಣಾಜೆಯಲ್ಲಿರುವ ಮಂಗಳೂರು ವಿವಿಗೆ ಇ.ಡಿ ಅಧಿಕಾರಿಗಳ ತಂಡ ಭೇಟಿ ನೀಡಿದ್ದು, ಪರೀಕ್ಷಾಂಗ ಕುಲಸಚಿವ ಪ್ರೊ.ರಾಜುಕೃಷ್ಣ ಚಲನ್ನವರ್ ಅವರನ್ನ ವಿಚಾರಣೆ ನಡೆಸಿದೆ. ಇದನ್ನೂ ಓದಿ: ರಾಮಮಂದಿರದ ಮಂಡಲೋತ್ಸವ ಪೂಜೆಗೆ ರಾಯಚೂರಿನ ವೈದಿಕರಿಬ್ಬರು ಆಯ್ಕೆ

    ಕೋಚಿಮುಲ್ ನೇಮಕಾತಿ ಹಗರಣ ಸಂಬಂಧ ಈ ಹಿಂದೆಯೇ ವಿವಿ ಪರೀಕ್ಷಾಂಗ ಕುಲಸಚಿವರಿಗೆ ನೋಟಿಸ್ ನೀಡಲಾಗಿತ್ತು. ಶನಿವಾರ ವಿವಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ, ವಿವಿ ಅಧಿಕಾರಿಗಳೇ ಅಭ್ಯರ್ಥಿಗಳಿಗೆ ಲಕ್ಷಾಂತರ ರೂ.ಗಳಿಗೆ ಪ್ರಶ್ನೆಪತ್ರಿಕೆ ಮಾರಾಟ ಮಾಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. ಅಲ್ಲದೇ ವಿವಿ ಅಧಿಕಾರಿಗಳ ಇ-ಮೇಲ್, ದೂರವಾಣಿ ಕರೆಗಳ ವಿವರ ಹಾಗೂ ಬ್ಯಾಂಕಿಂಗ್ ವ್ಯವಹಾರಗಳ ಕುರಿತು ತೀವ್ರ ತಪಾಸಣೆ ನಡೆಸಿದೆ. ಇದನ್ನೂ ಓದಿ: ತಲೆಗೂದಲಿಗೆ ಹಗ್ಗ ಕಟ್ಟಿಕೊಂಡೇ ರಾಮರಥ ಎಳೆದ ಸ್ವಾಮೀಜಿ; ಅಯೋಧ್ಯೆ ಕಡೆಗೆ 566 ಕಿಮೀ ಯಾತ್ರೆ

  • ಕೋಚಿಮುಲ್‌ ನೇಮಕಾತಿ ಅಕ್ರಮ – ಶಾಸಕರ ಶಿಫಾರಸು ಪತ್ರ ನೀಡಿದ ಅಭ್ಯರ್ಥಿಗಳಿಗೆ ಇಡಿ ಶಾಕ್‌

    ಕೋಚಿಮುಲ್‌ ನೇಮಕಾತಿ ಅಕ್ರಮ – ಶಾಸಕರ ಶಿಫಾರಸು ಪತ್ರ ನೀಡಿದ ಅಭ್ಯರ್ಥಿಗಳಿಗೆ ಇಡಿ ಶಾಕ್‌

    ಬೆಂಗಳೂರು: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿ(KOCHIMUL) ನೇಮಕಾತಿ ಪಡೆಯಲು ಶಿಫಾರಸು ಪತ್ರ ಕೊಟ್ಟವರಿಗೆ ಜಾರಿ ನಿರ್ದೇಶನಾಲಯ (ED) ಶಾಕ್‌ ನೀಡಿದೆ.

    ಮಾಲೂರು ಕಾಂಗ್ರೆಸ್‌ ಶಾಸಕ ನಂಜೇಗೌಡ ಮನೆಯ ಮೇಲೆ ದಾಳಿ ಮಾಡಿದಾಗ 30ಕ್ಕೂ ಹೆಚ್ಚು ಸಚಿವರು, ಶಾಸಕರ ಶಿಫಾರಸು ಪತ್ರ ಪತ್ತೆಯಾಗಿದೆ ಎಂದು ಇಡಿ  ಅಧಿಕೃತವಾಗಿ ತಿಳಿಸಿತ್ತು. ಇದನ್ನೂ ಓದಿ: ಮೇಯರ್‌ ಚುನಾವಣೆ : ಮಾಲ್ಡೀವ್ಸ್‌ ಆಡಳಿತ ಪಕ್ಷಕ್ಕೆ ಹೀನಾಯ ಸೋಲು – ಭಾರತದ ಪರ ಪಕ್ಷಕ್ಕೆ ಭರ್ಜರಿ ಜಯ

    ಈಗ ನೇಮಕಾತಿಯಾದ 10 ಅಭ್ಯರ್ಥಿಗಳಿಗೆ ನೋಟಿಸ್ ನೀಡಿದ್ದು ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಇಡಿ ಸೂಚಿಸಿದೆ. ಪ್ರತಿಯೊಬ್ಬ ಅಭ್ಯರ್ಥಿಗಳ ಬಳಿ 20 ರಿಂದ 30 ಲಕ್ಷ ರೂ. ಹಣವನ್ನು ಪಡೆಯಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಆಯ್ಕೆಯಾದ ಎಲ್ಲರಿಗೂ ಇಡಿ ನೋಟಿಸ್‌ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟು – ಪಾಕಿಸ್ತಾನದಲ್ಲಿ 1 ಮೊಟ್ಟೆಯ ಬೆಲೆ 33 ರೂ. – ಈರುಳ್ಳಿ ಪ್ರತಿ ಕೆಜಿಗೆ 250 ರೂ.

    ಮೊದಲ ಹಂತದಲ್ಲಿ 10 ಮಂದಿಯನ್ನು ಇಡಿ ವಿಚಾರಣೆ ನಡೆಸಲಿದ್ದು ಶಿಫಾರಸು ಪತ್ರ ಕೊಟ್ಟ ಎಲ್ಲರನ್ನು ವಿಚಾರಣೆ ನಡೆಸಲಿದೆ. ಲೋಕಸಭೆ ಚುನಾವಣೆ ಮುನ್ನವೇ ವಿಚಾರಣಾ ಮ್ಯಾರಥಾನ್‌ ನಡೆಯಲಿದೆ.

     

  • ಮಾಲೂರು ಶಾಸಕ ನಂಜೇಗೌಡ ಮನೆ ಮೇಲೆ ಇಡಿ ದಾಳಿ

    ಮಾಲೂರು ಶಾಸಕ ನಂಜೇಗೌಡ ಮನೆ ಮೇಲೆ ಇಡಿ ದಾಳಿ

    ಕೋಲಾರ: ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಮಾಲೂರು ಕಾಂಗ್ರೆಸ್‌ ಶಾಸಕ ಕೆ.ವೈ.ನಂಜೇಗೌಡ (KY Nanjegowda) ಮನೆ ಮೇಲೆ ದಾಳಿ ನಡೆಸಿದ್ದಾರೆ.

    ನಂಜೇಗೌಡ ಅವರು ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ (KOCHIMUL) ಅಧ್ಯಕ್ಷರಾಗಿದ್ದು, ಮಾಲೂರು ತಾಲೂಕಿನ ಕೊಮ್ಮನಹಳ್ಳಿಯಲ್ಲಿರುವ ಅವರ ಮನೆಯಲ್ಲಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.

    ಹುತ್ತೂರು ಹೋಬಳಿಯಲ್ಲಿರುವ ಕೋಚಿಮುಲ್‌ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಇತ್ತೀಚೆಗೆ ಕೋಚಿಮುಲ್‌ ನೇಮಕಾತಿ ವಿಚಾರದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿರುವ ಅರೋಪ ಕೇಳಿ ಬಂದಿತ್ತು. ಇದನ್ನೂ ಓದಿ: ಇನ್ಮುಂದೆ ಮದುವೆ, ಪ್ರವಾಸಕ್ಕೆ ಸಿಗಲಿದೆ ಬಿಎಂಟಿಸಿ ಬಸ್ – ಯಾವ್ಯಾವ ಬಸ್‍ಗೆ ಎಷ್ಟು ರೇಟ್?

    25 ಜನ ಅಧಿಕಾರಿಗಳ ತಂಡ ಬೆಳಗಿನ ಜಾವ 5 ಗಂಟೆಗೆ ಡೈರಿಗೆ ಆಗಮಿಸಿ ದಾಖಲೆ ಪರಿಶೀಲಿಸುತ್ತಿದೆ. ಹಾಲು ಒಕ್ಕೂಟದ ಸುತ್ತಮುತ್ತ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿದೆ. ಏಕ ಕಾಲದಲ್ಲಿ 10 ಕಡೆಗಳಲ್ಲಿ ಇಡಿ ತಂಡ ದಾಳಿ ಮಾಡಿದೆ. ಮಾಲೂರು ತಾಲೂಕಿನ ದೊಡ್ಡಮಲೆ ಗ್ರಾಮದಲ್ಲಿರುವ ಆಪ್ತ ಸಹಾಯಕ ಹರೀಶ್ ಮನೆ ಮೇಲೂ ದಾಳಿ ನಡೆದಿದೆ.

     

    ಕೋಚಿಮುಲ್ ಎಂಡಿ ಗೋಪಾಲ ಮೂರ್ತಿ ಕೋಲಾರ ನಿವಾಸ, ಕೋಚಿಮುಲ್ ಅಡ್ಮಿನ್ ಮ್ಯಾನೇಜರ್ ನಾಗೇಶ್ ಅವರ ಬೆಂಗಳೂರು ರಾಮಮೂರ್ತಿ ನಗರದಲ್ಲಿರುವ ಮನೆ ಮೇಲೂ ದಾಳಿ ನಡೆದಿದೆ.

     

  • ಬಿಜೆಪಿ, ಕಾಂಗ್ರೆಸ್ ನಾಯಕರ ಸ್ವಪ್ರತಿಷ್ಠೆಯಿಂದ ಪ್ರತ್ಯೇಕವಾಯ್ತು ಕೋಚಿಮುಲ್

    ಬಿಜೆಪಿ, ಕಾಂಗ್ರೆಸ್ ನಾಯಕರ ಸ್ವಪ್ರತಿಷ್ಠೆಯಿಂದ ಪ್ರತ್ಯೇಕವಾಯ್ತು ಕೋಚಿಮುಲ್

    ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘ ಕೋಚಿಮುಲ್ ಕೊನೆಗೂ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಸ್ವಪ್ರತಿಷ್ಠೆಯಿಂದ ಪ್ರತ್ಯೇಕವಾಗಿದೆ.

    ಕೋಲಾರದಿಂದ ಹಾಲು ಒಕ್ಕೂಟ ಪ್ರತ್ಯೇಕಿಸಿ ಸಚಿವ ಸಂಪುಟ ಸಭೆಯಲ್ಲಿ ಇಂದು ಒಪ್ಪಿಗೆ ಸೂಚಿಸಲಾಗಿದೆ. ಕೆಲ ನಿರ್ದೇಶಕರು ಹಾಗೂ ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಒತ್ತಾಸೆಯಂತೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಜಿಲ್ಲೆಯ ಕೆಲ ನಾಯಕರಿಗೆ ಇದರಿಂದ ಹಿನ್ನೆಡೆಯಾಗಿದೆ. ಇದನ್ನೂ ಓದಿ: 119 ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

    ಕಳೆದ ಒಂದು ವರ್ಷದಿಂದ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ನಾಯಕರ ಮಧ್ಯೆ ಒಕ್ಕೂಟ ವಿಭಾಗದ ವಿಚಾರವಾಗಿ ಮುಸುಕಿನ ಗುದ್ದಾಟ ನಡೆಯುತಿತ್ತು. ಇದೀಗ ಸಚಿವ ಸಂಪುಟ ಸಭೆಯಲ್ಲಿ ಕೋಲಾರದಿಂದ ಹಾಲು ಒಕ್ಕೂಟ ಪ್ರತ್ಯೇಕಿಸುವ ತೀರ್ಮಾನ ಮಾಡಿದ್ದು, ಲಕ್ಷಾಂತರ ರೈತರಿಂದ ಕಟ್ಟಿದ ಒಕ್ಕೂಟ ಇಂದು ಪ್ರತ್ಯೇಕವಾಗುವ ಮೂಲಕ ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ. ಇದನ್ನೂ ಓದಿ:  ಕಿತ್ತಳೆ ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ

  • ಶಾಸಕ ಸುಧಾಕರ್ ಬೆಂಬಲಿಗರ ಹತಾಶ ಮನೋಭಾವದ ಆಡಿಯೋ ವೈರಲ್!

    ಶಾಸಕ ಸುಧಾಕರ್ ಬೆಂಬಲಿಗರ ಹತಾಶ ಮನೋಭಾವದ ಆಡಿಯೋ ವೈರಲ್!

    ಚಿಕ್ಕಬಳ್ಳಾಪುರ: ಕೋಚಿಮುಲ್ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರಿಗೆ ಮುಖಭಂಗವಾಗಿದ್ದು, ಈ ಸಂಬಂಧ ಶಾಸಕರ ಬೆಂಬಲಿಗ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಚಿಕ್ಕಬಳ್ಳಾಪುರ ಕೋಚಿಮುಲ್ ನಿರ್ದೇಶಕ ಸ್ಥಾನವು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಪಾಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಬಗ್ಗೆ ಸುಧಾಕರ್ ಬೆಂಬಲಿಗರಾದ ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಚನ್ನಕೇಶವ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ದ್ಯಾವಪ್ಪ ಮೊಬೈಲ್ ಮೂಲಕ ಮಾತನಾಡಿದ್ದಾರೆ. ಈ ಇಬ್ಬರ ನಡುವಿನ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಸಂಭಾಷಣೆಯಲ್ಲಿ ಕೆಲ ಕೀಳುಮಟ್ಟದ ಪದ ಪ್ರಯೋಗ ಮಾಡಿರುವ ಬೆಂಬಲಿಗರು ಏನಣ್ಣ ಹೀಗಾಗಾಯ್ತೋ? ಜೆಡಿಎಸ್‍ನವರಿಗೆ ಎಷ್ಟು ಬೇಗ ರೆಕ್ಕೆ ಪುಕ್ಕ ಬಂದುಬಿಡ್ತು, ನಮ್ಮ ಜೊತೆ 98 ಮಂದಿ ಮತದಾರರಿದ್ದರು. ನಮ್ಮ ಜೊತೆ ಬಂದರು ಆಣೆ, ಪ್ರಮಾಣ ಮಾಡಿದರು. ಆದರೆ ಅದರಲ್ಲಿ ಕೆಲವರು ಜೆಡಿಎಸ್‍ನವರಿಗೆ ಮತ ಹಾಕಿಬಿಟ್ಟು ದ್ರೋಹ ಮಾಡಿದ್ದಾರೆ ಎಂದು ಮಾತನಾಡಿದ್ದಾರೆ.

    ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿಯ ಕೆಲ ಒಡಕುಗಳನ್ನು ಬಿಚ್ಚಿಟ್ಟಿದ್ದಾರೆ. ಕಾಂಗ್ರೆಸ್‍ನ ಅಕ್ರಮವಾಗಿ ಹಣ ಮಾಡಿದ್ದಾರೆ. ನಮ್ಮ ಶಾಸಕರು ಏನು ಮಾಡಲಿಲ್ಲ. ಆದರೂ ಕರೆ ಮಾಡಿ ಸಾಕಷ್ಟು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಾತನಾಡಿರುವುದು ಆಡಿಯೋದಲ್ಲಿದೆ.

    ಈ ಚುನಾವಣೆ ಶಾಸಕ ಸುಧಾಕರ್ ಅವರಿಗೆ ಸಾಕಷ್ಟು ಪ್ರತಿಷ್ಠೆಯಾಗಿತ್ತು. ಆದರೆ ಕಾಂಗ್ರೆಸ್‍ಗೆ ಭಾರೀ ಹಿನ್ನಡೆಯಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. 7 ನಿಮಿಷ 56 ಸೆಕೆಂಡಿನ ಈ ಆಡಿಯೋ ವೈರಲ್ ಆಗಿದ್ದು, ಇದು ಜೆಡಿಎಸ್‍ನವರಿಗೆ ಒಂದು ರೀತಿಯ ಆಶ್ರಯವಾಗಿವಾಗಿದೆ.

  • ಒಂದು ವೋಟಿಗೆ ಲಕ್ಷ ಲಕ್ಷ -ಕೋಚಿಮುಲ್ ಚುನಾವಣೆಯಲ್ಲೂ ರೆಸಾರ್ಟ್ ರಾಜಕೀಯ ಬಲು ಜೋರು

    ಒಂದು ವೋಟಿಗೆ ಲಕ್ಷ ಲಕ್ಷ -ಕೋಚಿಮುಲ್ ಚುನಾವಣೆಯಲ್ಲೂ ರೆಸಾರ್ಟ್ ರಾಜಕೀಯ ಬಲು ಜೋರು

    ಚಿಕ್ಕಬಳ್ಳಾಪುರ: ಒಂದು ವೋಟಿಗೆ ಒಂದಲ್ಲ ಎರಡು ಲಕ್ಷ ಇದು ಲೋಕಸಭಾ ಚುನಾವಣೆಯನ್ನೇ ಮೀರಿಸುವ ಮಹಾ ಚುನಾವಣೆಯೊಂದು ರಾಜ್ಯದಲ್ಲಿ ನಡಿಯುತ್ತಿದೆ. ಹೌದು ಇಡೀ ದೇಶವೇ ಲೋಕಸಭಾ ಚುನಾವಣೆಯ ಗುಂಗಲ್ಲಿರುವಾಗ ರಾಜ್ಯದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಸಹಕಾರ ಸಂಘಗಳ ಹಾಲು ಒಕ್ಕೂಟದ ಚುನಾವಣೆ ಒಳಗೊಳಗೆ ಭಾರೀ ಸದ್ದು ಮಾಡುತ್ತಿದೆ.

    ಕೋಚಿಮುಲ್(ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ) ಚುನಾವಣೆಯಲ್ಲಿ ರೆಸಾರ್ಟ್ ರಾಜಕೀಯ ಬಲು ಜೋರಾಗಿದ್ದು, ಕೋಟಿ ಕೋಟಿ ಕುರುಡು ಕಾಂಚಾಣ ಕುಣಿದಾಡುತ್ತಿದೆ. ಚಿಕ್ಕಬಳ್ಳಾಪುರ ಕ್ಷೇತ್ರದ ಕೋಚಿಮುಲ್ ನಿರ್ದೇಶಕರ ಆಯ್ಕೆಯಲ್ಲಿ ಕೋಟಿ ಕೋಟಿ ಕುರುಡು ಕಾಂಚಾಣ ಖರ್ಚಾಗುತ್ತಿದೆ. ಲೋಕಸಭಾ ಚುನಾವಣೆಯನ್ನೇ ಮೀರಿಸಿರುವ ಈ ಕೋಚಿಮುಲ್ ಚುನಾವಣೆಯಲ್ಲಿ ಒಂದು ವೋಟಿಗೆ ಒಂದರಿಂದ ಎರಡು ಲಕ್ಷ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ.

    ಮತಕ್ಕಾಗಿ ಪ್ರವಾಸ, ರೆಸಾರ್ಟ್ ವಾಸ್ತವ್ಯ:
    ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹಾಗೂ ಹಾಲಿ ನಿರ್ದೇಶಕರಾಗಿದ್ದ ಶಾಸಕ ಸುಧಾಕರ್ ಬೆಂಬಲಿಗ ಕೆ.ವಿ ನಾಗರಾಜ್ ಹಾಗೂ ಜೆಡಿಎಸ್ ಅಭ್ಯರ್ಥಿ ಭರಣಿ ವೆಂಕಟೇಶ್ ಶತಾಯಗತಾಯ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿದ್ದು, ಕೋಟಿ ಕೋಟಿ ಖರ್ಚು ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಈಗಾಗಲೇ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ವಿ ನಾಗರಾಜ್ 70ಕ್ಕೂ ಹೆಚ್ಚು ಮಂದಿ ಮತದಾರರನ್ನ ಗೋವಾ ಪ್ರವಾಸಕ್ಕೆ ಕರೆದೊಯ್ದು ಬೆಂಗಳೂರಿಗೆ ವಾಪಾಸ್ಸು ಕರೆತರುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಗೋವಾದಲ್ಲಿ ಮೋಜು ಮಸ್ತಿ ಮಾಡಿದ ಮತದಾರರು ಇಂದು ಗೋವಾದಿಂದ ನಿರ್ಗಮಿಸಿ ಕಾರವಾರದ ಮೂಲಕ ಬೆಂಗಳೂರಿನತ್ತ ಪಯಣ ಬೆಳೆಸಿದ್ದಾರೆ. ಈ ಗೋವಾ ಪ್ರವಾಸದಲ್ಲಿ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಬೆಂಬಲಿಗರು ಸಹ ಭಾಗವಹಿಸಿದ್ದಾರೆ. ತಡರಾತ್ರಿ ಮತದಾರರನ್ನ ಭೇಟಿ ಮಾಡಿ ಮಾತುಕತೆ ನಡೆಸಿ ಶಾಸಕ ಸುಧಾಕರ್ ಸಹ ಬೆಂಗಳೂರಿಗೆ ವಾಪಾಸ್ಸಾಗಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ತಲಾ ಮತದಾರರಿಗೆ ಒಂದು ಲಕ್ಷ ರೂ. ಹಣ ಕೊಡುವುದಾಗಿ ಅಮಿಷ ಹೊಡ್ಡಲಾಗಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ.

    ಇತ್ತ ಜೆಡಿಎಸ್ ಅಭ್ಯರ್ಥಿ ಭರಣಿ ವೆಂಕಟೇಶ್ ಸಹ 60 ರಿಂದ 70 ಮಂದಿಯನ್ನ ಎರಡು ತಂಡಗಳಾಗಿ ಮೈಸೂರು, ಮಂಗಳೂರಿಗೆ ರೆಸಾರ್ಟ್ ವಾಸ್ತವ್ಯಕ್ಕೆ ಕರೆದುಕೊಂಡು ಹೋಗಿದ್ದಾರೆ. ಕಾಂಗ್ರೆಸ್‍ನವರು ತಲಾ ಒಂದು ವೋಟಿಗೆ ಒಂದು ಲಕ್ಷ ಕೊಡುತ್ತಿದ್ದರೇ, ನಾವೇನು ಕಡಿಮೆ ಇಲ್ಲವೆಂದು ಜೆಡಿಎಸ್ ಅಭ್ಯರ್ಥಿ ಸಹ ಒಂದಲ್ಲ ಒಂದೂವರೆ ತೆಗೆದುಕೊಳ್ಳಿ ಆದರೆ ಮಿಸ್ ಮಾಡದೇ ವೋಟ್ ನಮಗೆ ಹಾಕಿ ಅಂತಿದ್ದಾರೆ ಎನ್ನಲಾಗಿದೆ.

    ಈಗಾಗಲೇ ಗೋವಾ ರೆಸಾರ್ಟ್ ವಾಸ್ತವ್ಯ ಮುಗಿಸಿ ವಾಪಾಸ್ಸಾಗುತ್ತಿರುವ ಕಾಂಗ್ರೆಸ್ ಬೆಂಬಲಿತರು ದೇವನಹಳ್ಳಿ ಬಳಿಯ ಗೋಲ್ಡ್ ಫಿಂಚ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಲು ರೂಂ ಬುಕ್ ಮಾಡಲಾಗಿದೆ. ಮತ್ತೊಂದೆಡೆ ಜೆಡಿಎಸ್ ಬೆಂಬಲಿತರಿಗೆ ಕೋಲಾರದ ಎಸ್.ಎನ್ ರೆಸಾರ್ಟ್ ನಲ್ಲಿ ವಾಸ್ತವ್ಯಕ್ಕೆ ಸಿದ್ಧತೆಗಳು ನಡೆದಿವೆ ಎನ್ನಲಾಗಿದೆ.

    ಹೌದು ಪ್ರತಿಷ್ಠಿತ ಕೋಚಿಮುಲ್ ಚುನಾವಣೆ ನಾಳೆ ಕೋಲಾರದಲ್ಲಿ ನಡೆಯಲಿದ್ದು, ರೆಸಾರ್ಟ್ ಗಳಿಂದ ನೇರವಾಗಿ ಮತಕೇಂದ್ರಗಳತ್ತ ಮತದಾರರು ತೆರಳಲಿದ್ದಾರೆ. ಅಂದಹಾಗೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ 171 ಮತಗಳಿದ್ದು ಸೂಪರ್ ಸೀಡ್ ಅಗಿರುವ ಸಂಘಗಳು ಹೊರತುಪಡಿಸಿ 158 ಮಂದಿ ಮತದಾರರಿದ್ದಾರೆ. ಹೀಗಾಗಿ 80 ಮತಗಳನ್ನ ಪಡೆದವರು ಚಿಕ್ಕಬಳ್ಳಾಪುರ ಕ್ಷೇತ್ರದ ಕೋಚಿಮುಲ್ ನಿರ್ದೇಶಕರಾಗಿ ಆಯ್ಕೆಯಾಗಲಿದ್ದಾರೆ. ಹೀಗಾಗಿ ಇಬ್ಬರು ಅಭ್ಯರ್ಥಿಗಳು 80 ಮತಗಳನ್ನ ಪಡೆಯೋಕೆ ರೆಸಾರ್ಟ್ ರಾಜಕೀಯ, ಹಣದ ಅಮಿಷ ಸೇರಿ ನಾನಾ ತಂತ್ರಗಾರಿಕೆಗಳಲ್ಲಿ ತೊಡಗಿದ್ದಾರೆ.

    ಸಮ್ಮಿಶ್ರ ಸರ್ಕಾರದ ದೋಸ್ತಿಗಳೇ ಇಲ್ಲಿ ಪ್ರತಿಸ್ಪರ್ಧಿಗಳು:
    ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ನಡೆಯುತ್ತಿದ್ದರೆ ಇಲ್ಲಿ ಅದೇ ದೋಸ್ತಿ ಪಕ್ಷಗಳ ನಾಯಕರು ಮುಖಂಡರು ನಾನಾ ನೀನಾ ಅನ್ನೋ ಜಿದ್ದಾಜಿದ್ದಿಗೆ ಬಿದ್ದಿದ್ದಾರೆ. ಆಸಲಿಗೆ ಇದು ಕೋಲಾರ ಜಿಲ್ಲೆಯಲ್ಲಿ ಕೆ ಎಚ್ ಮುನಿಯಪ್ಪ ಬಣ ಹಾಗೂ ಸ್ಪೀಕರ್ ರಮೇಶ್ ಕುಮಾರ್ ಬಣಗಳ ನಡುವೆ ಶೀತಲಸಮರ ನಡೆಯುತ್ತಿದೆ ಎನ್ನಲಾಗಿದ್ದು, ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಒಳಗೊಳಗೆ ನಾಯಕರು ಮುಸುಕಿನ ಗುದ್ದಾಟ ತೆರೆಮರೆಯ ಕಸರತ್ತುಗಳನ್ನ ನಡೆಸುತ್ತಿದ್ದಾರೆ. ಮತ್ತೊಂದೆಡೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಸಹ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಹಾಗೂ ಗೌರಿಬಿದನೂರು ಶಾಸಕ ಸಚಿವ ಎನ್.ಎಚ್ ಶಿವಶಂಕರರೆಡ್ಡಿ ಬಣದ ನಡುವೆ ಪೈಪೋಟಿ ಇದೆ ಎನ್ನಲಾಗಿದೆ.

    ಕೋಲಾರ-ಚಿಕ್ಕಬಳ್ಳಾಪುರ ಎರಡು ಜಿಲ್ಲೆಗಳಲ್ಲಿ ನೀರಿಗೆ ಬರ ಇದ್ದರೂ ಹಾಲಿಗೆ ಬರ ಇಲ್ಲ. ಹೈನುಗಾರಿಕೆಯನ್ನ ತಮ್ಮ ಬದುಕಿನ ಆಧಾರ ಅರ್ಥಿಕ ಮೂಲ ಮಾಡಿಕೊಂಡಿರುವ ಬಹುತೇಕ ರೈತರು ಕೃಷಿ ಕಾಯಕದ ಜೊತೆ ಹೈನೋದ್ಯಮವನ್ನೂ ನೆಚ್ಚಿಕೊಂಡಿದ್ದಾರೆ. ಆದರೆ ಇಂತಹ ರೈತರ ಮತ ಪಡೆದು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗುವ ನಾಯಕರು ಅವರ ಮತ ಭಿಕ್ಷೆಯಿಂದ ಅಧ್ಯಕ್ಷ ಸ್ಥಾನ ಅಲಂಕರಿಸಿ ಇಂದು ಕುರುಡು ಕಾಂಚಾಣಕ್ಕೆ ತಮ್ಮ ಮತ ಮಾರಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ನಿರ್ದೇಶಕರಾಗುವ ಹಠ ಯಾಕೆ?
    ಕೆಎಂಎಫ್ ಕರ್ನಾಟಕ ಮಿಲ್ಕ್ ಫೆಡರೇಷನ್‍ನ ಅಂಗ ಸಂಸ್ಥೆ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆಯಾಗುವ ಎರಡನೇ ಒಕ್ಕೂಟ. ಹೀಗಾಗಿ ಒಕ್ಕೂಟದಲ್ಲಿ ಪ್ರತಿ ವರ್ಷ ಕೋಟಿ ಕೋಟಿ ವ್ಯಾಪಾರ, ವ್ಯವಹಾರ, ವಹಿವಾಟು ನಡೆಯುತ್ತೆ. ಪ್ರತಿಷ್ಠಿತ ಒಕ್ಕೂಟದ ನಿರ್ದೇಶಕರಾದರೆ ಸ್ಥಳೀಯವಾಗಿ ರಾಜಕೀಯ ಲಾಭ ಜೊತೆಗೆ ಹಣದ ಲಾಭವೂ ಒದಗಿಬರುತ್ತೆ. ಹೀಗಾಗಿ ರಾಜಕೀಯ ನಾಯಕರಿಗೆ ಚುನಾವಣೆಯಲ್ಲಿ ತಮ್ಮ ತಮ್ಮ ಬೆಂಬಲಿತರನನ್ನ ಗೆಲ್ಲಿಸಿಕೊಂಡು, ಪ್ರತಿಷ್ಠಿತ ಸಂಸ್ಥೆಯ ಅಧ್ಯಕ್ಷರಾಗಿ ಅಧಿಕಾರದ ಹಿಡಿತ ಸಾಧಿಸುವುದು ಅದರಿಂದ ರಾಜಕೀಯ ಲಾಭ ಪಡೆಯುವ ಲೆಕ್ಕಾಚಾರವಾಗಿದೆ.