Tag: ಕೊಲ್ಲ ಪ್ರವೀಣ್

  • ಮನಸಿಗೆ ಮುತ್ತಿಕ್ಕುವ ಮಿಸ್ಸಿಂಗ್ ಬಾಯ್!

    ಮನಸಿಗೆ ಮುತ್ತಿಕ್ಕುವ ಮಿಸ್ಸಿಂಗ್ ಬಾಯ್!

    ಬೆಂಗಳೂರು: ರಘುರಾಮ್ ನಿರ್ದೇಶನದ ಮಿಸ್ಸಿಂಗ್ ಬಾಯ್ ಚಿತ್ರ ತೆರೆ ಕಂಡಿದೆ. ಮನಮಿಡಿಯುವ ಸತ್ಯ ಕಥೆಯಾಧಾರಿತ ಚಿತ್ರವೆಂಬ ಕಾರಣದಿಂದ ಮಿಸ್ಸಿಂಗ್ ಬಾಯ್ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿತ್ತು. ಆ ನಂತರದಲ್ಲಿ ನಿರ್ದೇಶಕರು ಪ್ರತಿಯೊಂದು ಹಂತದಲ್ಲಿಯೂ ಈ ಸಿನಿಮಾವನ್ನು ಕುತೂಹಲದ ಉತ್ತುಂಗದಲ್ಲಿಯೇ ಕಾಪಾಡಿಕೊಂಡು ಬಂದಿದ್ದರು. ಬಿಡುಗಡೆಯಾಗೋದು ತಡವಾದರೂ ಪ್ರೇಕ್ಷಕರ ಗಮನ ಅತ್ತಿತ್ತ ಸರಿಯದಂತೆ ನೋಡಿಕೊಂಡಿದ್ದ ಮಿಸ್ಸಿಂಗ್ ಬಾಯ್ ನ ಭಾವುಕ ಕಥೆಯನ್ನು ಕಣ್ತುಂಬಿಕೊಂಡ ಪ್ರತಿಯೊಬ್ಬರೂ ಮೆಚ್ಚಿಕೊಂಡಿದ್ದಾರೆ.

    ಕೊಲ್ಲ ಪ್ರವೀಣ್ ನಿರ್ಮಾಣ ಮಾಡಿರೋ ಮಿಸ್ಸಿಂಗ್ ಬಾಯ್ ಚಿತ್ರ ತೊಂಬತ್ತರ ದಶಕದಲ್ಲಿ ಇದೇ ಕರ್ನಾಟಕದಲ್ಲಿ ನಡೆದಿದ್ದ ಕಥೆಯಾಧಾರಿತ ಚಿತ್ರ. ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆದಿದ್ದ ಈ ಕಥೆಯನ್ನು ರಘುರಾಮ್ ಕೈಗೆತ್ತಿಕೊಂಡಾಗ ಎಲ್ಲರೂ ಬೆರಗಾಗಿದ್ದದ್ದು ನಿಜ. ಆದರೆ ಇಂಥಾ ಬೆರಗನ್ನು ಸತ್ಯ ಘಟನೆಯೊಂದರ ಸುತ್ತಾ ದೃಶ್ಯ ಕಟ್ಟಿದ ನಂತರವೂ ಜೀವಂತವಾಗಿಡೋದು ಕಷ್ಟ. ನಿರ್ದೇಶಕ ಕಥೆಯ ಪಾತ್ರಗಳನ್ನೇ ಉಸಿರಾಡದಿದ್ದರೆ ಅದು ಖಂಡಿತಾ ಸಾಧ್ಯವಾಗೋದಿಲ್ಲ. ಆದರೆ ರಘುರಾಮ್ ನೈಜ ಘಟನೆಯ ಎಲ್ಲ ಭಾವಗಳನ್ನೂ ಬೊಗಸೆಯಲ್ಲಿ ಹಿಡಿದು ತಾಜಾತನದಿಂದಲೇ ಪ್ರೇಕ್ಷಕರ ಮನಸಿಗೆ ಸೋಕಿಸುವಲ್ಲಿ ಗೆದ್ದಿದ್ದಾರೆ. ಮಿಸ್ಸಿಂಗ್ ಬಾಯ್ ಚಿತ್ರ ಆಪ್ತ ಅನ್ನಿಸೋದು ಈ ಕಾರಣದಿಂದಲೇ.

    ಸತ್ಯ ಘಟನೆಗೆ ಬದ್ಧವಾಗಿಯೇ ಹುಬ್ಬಳ್ಳಿಯ ನೆಲದಿಂದಲೇ ಈ ಚಿತ್ರದ ದೃಶ್ಯಾವಳಿಗಳು ಬಿಚ್ಚಿಕೊಳ್ಳುತ್ತವೆ. ಅಲ್ಲಿನ ರೈಲ್ವೇ ನಿಲ್ದಾಣದಲ್ಲಿ ಹೆತ್ತವರ ಕೈ ತಪ್ಪಿಸಿಕೊಂಡು ರೈಲಿನಲ್ಲಿ ಕಾಣೆಯಾಗೋ ಹುಡುಗನ ಆರ್ತಸ್ಥಿತಿಯನ್ನು ಎಲ್ಲರ ಮನಸಿಗೂ ಅಂಟಿಕೊಳ್ಳುವಂಥಾ ಭಾವ ತೀವ್ರತೆಯೊಂದಿಗೆ ನಿರ್ದೇಶಕರು ಕಟ್ಟಿ ಕೊಟ್ಟಿದ್ದಾರೆ. ಅದೇ ಬಿಗಿಯಲ್ಲಿಯೇ ಕಥೆ ವಿದೇಶಕ್ಕೂ ಸಂಚರಿಸುತ್ತೆ. ಮಗುವನ್ನು ಕಳೆದುಕೊಂಡ ಹೆತ್ತವರ ಸಂಕಟ ಮತ್ತು ಕರುಳ ಬಂಧದ ಸ್ವಪ್ನ ಬಿದ್ದಂತೆ ದೂರದ ದೇಶದಲ್ಲಿ ತಲ್ಲಣಿಸೋ ನಾಯಕನ ಮಿಡಿತಗಳನ್ನು ಪ್ರೇಕ್ಷಕರು ಅತ್ತಿತ್ತ ಹಂದಾಡಲೂ ಆಸ್ಪದ ಕೊಡದ ರೀತಿಯಲ್ಲಿ ನಿರೂಪಿಸಲಾಗಿದೆ.

    ನಾಯಕ ಗುರುನಂದನ್ ಇದೇ ಮೊದಲ ಸಾರಿ ಅವರ ಇಮೇಜಿನಾಚೆಗಿನ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಭಾವಪ್ರಧಾನ ಸನ್ನಿವೇಶಗಳಲ್ಲಿಯಂತೂ ನೋಡುಗರು ತಲ್ಲಣಿಸುವಂತೆ ಪರಿಣಾಮಕಾರಿಯಾದ ನಟನೆ ನೀಡಿದ್ದಾರೆ. ಈ ಚಿತ್ರದ ಮೂಲಕವೇ ಗುರುನಂದನ್ ಚಿತ್ರ ಜೀವನದಲ್ಲಿ ಹೊಸ ಅಧ್ಯಾಯವೊಂದು ಶುರುವಾಗೋ ಎಲ್ಲ ಲಕ್ಷಣಗಳೂ ದಟ್ಟವಾಗಿಯೇ ಗೋಚರಿಸಿದೆ. ಇನ್ನುಳಿದಂತೆ ರಂಗಾಯಣ ರಘು ನಟನೆ ಎಂದಿನಂತೆ ಸೊಗಸಾಗಿದೆ. ನಾಯಕನ ತಾಯಿ ಸೇರಿದಂತೆ ಪ್ರತೀ ಪಾತ್ರಗಳೂ ಕಾಡುವಂತೆ ಮೂಡಿ ಬಂದಿದೆ. ರವಿಶಂಕರ್ ಗೌಡ ಕೂಡಾ ಪರಿಣಾಮಕಾರಿಯಾಗಿ ನಟಿಸಿದ್ದಾರೆ. ನಾಯಕನ ತಾಯಿಯಾಗಿ ಭಾಗೀರಥಿ ಬಾಯಿ ಕದಂ ನಟನೆ ನಿಜಕ್ಕೂ ಅದ್ಭುತ.

    ಒಟ್ಟಾರೆಯಾಗಿ ಮಿಸ್ಸಿಂಗ್ ಬಾಯ್ ಭಿನ್ನ ಪಥದ ಚಿತ್ರ. ತುಂಬಾ ಕಾಲದ ನಂತರ ಮನಮಿಡಿಯುವ ಕಥಾ ಹಂದರದ ವಿಶಿಷ್ಟ ಸಿನಿಮಾ ನೋಡಿದ ಅನುಭವಕ್ಕಾಗಿ ಒಮ್ಮೆ ಮಿಸ್ಸಿಂಗ್ ಬಾಯ್ ಚಿತ್ರವನ್ನು ನೋಡಲೇಬೇಕಿದೆ.

    ರೇಟಿಂಗ್: 4/5

  • ಎಳೇ ಜೀವದ ಬೆರಳ ಮೊನೆ ಎದೆಗೆ ತಾಕಿಸೋ ಮಿಸ್ಸಿಂಗ್ ಬಾಯ್ ಟ್ರೈಲರ್!

    ಎಳೇ ಜೀವದ ಬೆರಳ ಮೊನೆ ಎದೆಗೆ ತಾಕಿಸೋ ಮಿಸ್ಸಿಂಗ್ ಬಾಯ್ ಟ್ರೈಲರ್!

    ಬೆಂಗಳೂರು: ಕೊಲ್ಲ ಪ್ರವೀಣ್ ನಿರ್ಮಾಣದ ಮಿಸ್ಸಿಂಗ್ ಬಾಯ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರೀಕರಣ ಆರಂಭವಾದ ಕ್ಷಣದಿಂದಲೂ ಈ ಸಿನಿಮಾ ಒಂದಲ್ಲಾ ಒಂದು ರೀತಿಯಲ್ಲಿ ಸದಾ ಸುದ್ದಿಯಲ್ಲಿತ್ತು. ಕೊಂಚ ತಡವಾದರೂ ಕೂಡಾ ಇದರೆಡೆಗಿನ ಕುತೂಹಲ ಮಾತ್ರ ಸಡಿಲವಾಗಿರಲಿಲ್ಲ. ಅದಕ್ಕೆ ಕಾರಣವಾಗಿರೋದು ಇದಕ್ಕೆ ಆರಿಸಿಕೊಂಡಿರೋ ಮನಮಿಡಿಯುವ ಸತ್ಯಕಥೆ!

    ನಿರ್ದೇಶಕ ರಘುರಾಮ್ ತಮ್ಮ ಕೂಸೆಂದುಕೊಂಡು ಶ್ರದ್ಧೆಯಿಂದ ನಿರ್ದೇಶನ ಮಾಡಿರೋ ಚಿತ್ರ ಮಿಸ್ಸಿಂಗ್ ಬಾಯ್. ಈಗ ಬಿಡುಗಡೆಯಾಗಿರೋ ಟ್ರೈಲರ್ ಆ ಶ್ರದ್ಧೆ ಮತ್ತು ಇಡೀ ಚಿತ್ರದ ಆದ್ರ್ರತೆ ಎಂಥಾದ್ದೆಂಬುದಕ್ಕೆ ಸಾಕ್ಷಿಯಂತಿದೆ. ಬುದ್ಧಿ ಬಲಿಯುವ ಮುನ್ನವೇ ಕೈ ಬಿಡಿಸಿಕೊಂಡು ಎಲ್ಲಿಯೋ ಕಳೆದು ಹೋದ ಮಗ. ಆತ ಬಂದೇ ಬರುತ್ತಾನೆಂಬ ನಂಬಿಕೆಯನ್ನೇ ಉಸಿರಾಗಿಸಿಕೊಂಡ ಹೆತ್ತವರು. ಆದರೆ ಈ ಜೀವಗಳನ್ನು ಬೆಸೆಯೋ ದಾರಿ ಮಾತ್ರ ಕಲ್ಪಿಸಿಕೊಳ್ಳಲೂ ಕಷ್ಟವಾಗುವಷ್ಟು ದೂರ.

    ಇಂಥಾದ್ದೊಂದು ಸ್ಥಿಯಲ್ಲಿರುವವರ ಕರುಳ ಮರ್ಮರ ಎಂಥಾದ್ದಿರುತ್ತದೆಂಬುದನ್ನು ಈ ಟ್ರೈಲರ್ ಪರಿಣಾಮಕಾರಿಯಾಗಿಯೇ ಅನಾವರಣಗೊಳಿಸಿದೆ. ಈ ಮೂಲಕ ಮಿಸ್ಸಿಂಗ್ ಬಾಯ್ ಚಿತ್ರದ ಒಟ್ಟಾರೆ ಆಂತರ್ಯ ಎಂಥಾದ್ದೆಂಬುದರ ಝಲಕ್ ಅನ್ನು ರಘುರಾಮ್ ನೀಡಿದ್ದಾರೆ. ಈ ಟ್ರೈಲರ್ ಮೂಲಕವೇ ಮಿಸ್ಸಿಂಗ್ ಬಾಯ್ ಪ್ರತೀ ಪ್ರೇಕ್ಷಕರಿಗೂ ಮತ್ತಷ್ಟು ಆಪ್ತವಾಗೋದು ಗ್ಯಾರಂಟಿ.

    ಈ ಟ್ರೈಲರ್ ಮೂಲಕವೇ ರಘುರಾಮ್ ತಮ್ಮ ಇಷ್ಟು ವರ್ಷಗಳ ಶ್ರಮವನ್ನ ಸಾರ್ಥಕವಾಗಿಸಿಕೊಂಡಿದ್ದಾರೆ. ಯಾಕೆಂದರೆ ಇದನ್ನು ನೋಡಿದ ಯಾರೇ ಆದರೂ ಒಂದರೆ ಕ್ಷಣ ಭಾವುಕರಾಗದಿರಲು ಸಾಧ್ಯವೇ ಇಲ್ಲ. ಅದೆಷ್ಟೋ ವರ್ಷಗಳ ಹಿಂದೆ ಹೆತ್ತವರ ಕೈ ಬಿಡಿಸಿಕೊಂಡು ಕಾಣೆಯಾದ ಎಳೇ ಹುಡುಗನ ಬೆರಳ ಮೊನೆ ಎದೆಗೇ ತಾಕಿದಂಥಾ ತಲ್ಲಣದಿಂದ ಕಂಪಿಸದಿರಲೂ ಸಾಧ್ಯವಿಲ್ಲ. ಒಂದು ಟ್ರೈಲರ್ ಪರಿಣಾಮಕಾರಿಯಾಗಲು ಇದಕ್ಕಿಂತಲೂ ಬೇರೇನೂ ಬೇಕಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv