Tag: ಕೊರೊನಾ ಲಸಿಕೆ

  • ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳ ಆರೋಗ್ಯ ವೃದ್ಧಿಗೆ ಕ್ರಮ: ಡಾ.ಕೆ.ಸುಧಾಕರ್

    ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳ ಆರೋಗ್ಯ ವೃದ್ಧಿಗೆ ಕ್ರಮ: ಡಾ.ಕೆ.ಸುಧಾಕರ್

    ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳನ್ನು ಗುರುತಿಸಿದ್ದು, ಅವರ ಆರೋಗ್ಯ ವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

    ಜಿಲ್ಲೆಯಲ್ಲಿ ಕೋವಿಡ್ ಸ್ಥಿತಿಗತಿ ಪರಿಶೀಲನೆ ಸಂಬಂಧ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ತಾಂತ್ರಿಕ ಸಲಹಾ ಸಮಿತಿ ಸಲಹೆಯಂತೆ ಸಂಭವನೀಯ ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕೆ ಸಿದ್ಧತೆ ನಡೆದಿದೆ. ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಕಡಿಮೆ ಇದ್ದು, ಈವರೆಗೆ 148 ಪ್ರಕರಣ ಕಂಡುಬಂದಿದೆ. ಹೆಚ್ಚಿನವರನ್ನು ಕೋವಿಡ್ ಕೇರ್ ಕೇಂದ್ರಕ್ಕೆ ಸೇರಿಸಬೇಕು, ಪರೀಕ್ಷೆ ಕಡಿಮೆ ಮಾಡುವುದು ಬೇಡ ಎಂದು ಸೂಚಿಸಲಾಗಿದೆ. ಹಲವು ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಿದ್ದು, ಅವರಲ್ಲಿ ಶ್ವಾಸಕೋಶದ ತೊಂದರೆ, ರಕ್ತಹೀನತೆ, ಮೂತ್ರಪಿಂಡದ ಸಮಸ್ಯೆ, ಅಪೌಷ್ಠಿಕತೆ ಕಂಡುಬಂದಿದೆ. ಹೀಗೆ ಗುರುತಿಸಿದ ಮಕ್ಕಳಿಗೆ ಅಗತ್ಯ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

    ಇನ್ನು ಒಂದೇ ವಾರದಲ್ಲಿ ‘ಆರೋಗ್ಯ ನಂದನ’ ಕಾರ್ಯಕ್ರಮವನ್ನು ಮುಖ್ಯಮಂತ್ರಿಯವರು ಉದ್ಘಾಟಿಸಲಿದ್ದು, ರಾಜ್ಯದ ಒಂದೂವರೆ ಕೋಟಿ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಲಾಗುವುದು. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ವಿಶೇಷ ಆರೈಕೆ, ಚಿಕಿತ್ಸೆ ನೀಡಿ ಅವರನ್ನು ರಕ್ಷಿಸುವ ಕೆಲಸ ಮಾಡುತ್ತೇವೆ. ಜಿಲ್ಲೆಯಲ್ಲಿ 48% ರಷ್ಟು ಜನರಿಗೆ ಮೊದಲ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಹೆಚ್ಚು ಲಸಿಕೆಯನ್ನು ಇಲ್ಲಿಗೆ ಪೂರೈಕೆ ಮಾಡಿ ವೇಗ ನೀಡಲಾಗುವುದು. ಡಿಸೆಂಬರ್ ಅಂತ್ಯದೊಳಗೆ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದರು. ಇದನ್ನೂ ಓದಿ: ದಶಪಥದ ರಸ್ತೆ ಇರೋದು ಮೈಸೂರಿಗಾಗಿ, ಇದಕ್ಕಾಗಿ ಹೆಚ್ಚು ಆಸಕ್ತಿವಹಿಸಿದ್ದೇನೆ: ಪ್ರತಾಪ್ ಸಿಂಹ

    ಈ ಜಿಲ್ಲೆಯಲ್ಲಿ ಹೊಸ ಜಿಲ್ಲಾಕೇಂದ್ರ ಇನ್ನೂ ಅಂತಿಮ ಆಗಿಲ್ಲ. ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ಆದಷ್ಟು ಬೇಗ ನಿಗದಿಪಡಿಸಲಾಗುವುದು. ಹಾಗೆಯೇ ಜಿಲ್ಲಾಸ್ಪತ್ರೆಯನ್ನೂ ನಿರ್ಮಿಸಲಾಗುವುದು. ಒಂದು ಅಥವಾ ಎರಡು ತಾಯಿ ಮತ್ತು ಶಿಶು ಆಸ್ಪತ್ರೆಯನ್ನು ಇದೇ ವರ್ಷ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. 142 ಉಪಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲಾಗುವುದು. ಈಗಾಗಲೇ 29 ವೈದ್ಯರನ್ನು ಜಿಲ್ಲೆಗೆ ನೀಡಲಾಗಿದೆ. ಆದ್ದರಿಂದ ಯಾವುದೇ ವೈದ್ಯರ ಕೊರತೆ ಇಲ್ಲ. ಇನ್ನಷ್ಟು ಆರೋಗ್ಯ ಮೂಲಸೌಕರ್ಯಕ್ಕೆ ಭೂಮಿ ಮೀಸಲಿಟ್ಟಿದ್ದು, ಇಲ್ಲಿ ಅಭಿವೃದ್ಧಿ ಕಾರ್ಯದ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು. ಇದನ್ನೂ ಓದಿ: ಲಸಿಕಾ ಆಂದೋಲನದಲ್ಲಿ ಕೈ ಜೋಡಿಸುವಂತೆ ಉದ್ದಿಮೆಗಳಿಗೆ ಸಚಿವ ಸುಧಾಕರ್ ಮನವಿ

    ಹಬ್ಬ, ಜಾತ್ರೆ, ಸಭೆ ಸಮಾರಂಭಗಳಲ್ಲಿ ಹೆಚ್ಚು ಜನ ಸೇರಬಾರದು. ಕೋವಿಡ್ ನ ಎರಡೂ ಲಸಿಕೆ ಪಡೆಯುವವರೆಗೆ ಎಚ್ಚರವಾಗಿರಬೇಕು. ಶಾಲೆ ಆರಂಭ ಸಂಬಂಧ ಮಾರ್ಗಸೂಚಿ ನೀಡಲಾಗಿದೆ. ಶಿಕ್ಷಣ ಇಲಾಖೆ ಇದನ್ನು ಆಯಾ ಜಿಲ್ಲಾಡಳಿತಕ್ಕೆ ನೀಡಿದೆ. ಮಕ್ಕಳ ಆರೋಗ್ಯ ಕಾಪಾಡುವುದರ ಜೊತೆಗೆ ಭವಿಷ್ಯ ರೂಪಿಸುವುದು ಕೂಡ ಮುಖ್ಯ. ಅದನ್ನು ಸಮರ್ಥವಾಗಿ ನಿಭಾಯಿಸಬೇಕಿದೆ. ಶಾಲಾ ಸಿಬ್ಬಂದಿಗೆ ಲಸಿಕೆಯನ್ನೂ ನೀಡಲಾಗಿದೆ. ಎಲ್ಲರ ಅಭಿಪ್ರಾಯ ಪಡೆದು ಈ ಕ್ರಮವನ್ನು ಸರ್ಕಾರ ಕೈಗೊಂಡಿದೆ ಎಂದರು. ಇದನ್ನೂ ಓದಿ: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ BMTCಯಿಂದ ಉಚಿತ ಸೇವೆ

  • ಲಸಿಕಾ ಆಂದೋಲನದಲ್ಲಿ ಕೈ ಜೋಡಿಸುವಂತೆ ಉದ್ದಿಮೆಗಳಿಗೆ ಸಚಿವ ಸುಧಾಕರ್ ಮನವಿ

    ಲಸಿಕಾ ಆಂದೋಲನದಲ್ಲಿ ಕೈ ಜೋಡಿಸುವಂತೆ ಉದ್ದಿಮೆಗಳಿಗೆ ಸಚಿವ ಸುಧಾಕರ್ ಮನವಿ

    – ಸಿಎಸ್‍ಆರ್ ನಿಧಿಯಡಿ ನೆರವಾಗಲು ಔಷಧ ಕಂಪನಿಗಳಿಗೆ ಕರೆ

    ಬೆಂಗಳೂರು: ಔಷಧ ವಲಯದ ಉದ್ದಿಮೆಗಳು ತಮ್ಮ ಸಾಂಸ್ಥಿಕ ಹೊಣೆಗಾರಿಕೆ ನಿಧಿಯನ್ನು ಲಸಿಕಾ ಆಂದೋಲನಕ್ಕೆ ದೇಣಿಗೆ ನೀಡುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮನವಿ ಮಾಡಿದ್ದಾರೆ.

    ಕೇಂದ್ರ ಸರ್ಕಾರ ಶೇಕಡಾ ಎಪ್ಪತ್ತೈದರಷ್ಟು ಲಸಿಕೆಯನ್ನು ರಾಜ್ಯಕ್ಕೆ ಉಚಿತವಾಗಿ ನೀಡುತ್ತಿದೆ. ಉಳಿದ ಇಪ್ಪತ್ತೈದರಷ್ಟನ್ನು ಖಾಸಗಿ ವಲಯಕ್ಕೆ ಹಂಚಿಕೆ ಮಾಡಿದೆ. ಖಾಸಗಿ ವಲಯಕ್ಕೆ ನೀಡಿರುವ ಲಸಿಕೆಯನ್ನು ಸಿಎಸ್‍ಆರ್ ನಿಧಿಯಡಿ ಖರೀದಿಸಿ ದೇಣಿಗೆ ರೂಪದಲ್ಲಿ ನೀಡುವಂತೆ ರಾಜ್ಯದ ಪ್ರಮುಖ ಔಷಧ ಉದ್ದಿಮೆದಾರರ ಸಭೆಯಲ್ಲಿ ಮಂಗಳವಾರ ಕರೆ ನೀಡಿದರು.

    ತಜ್ಞರ ಅಭಿಪ್ರಾಯದ ಪ್ರಕಾರ ಮೂರನೇ ಅಲೆ ಅಷ್ಟೇನು ಪರಿಣಾಮಕಾರಿ ಅಲ್ಲ ಎನ್ನಲಾಗುತ್ತಿದೆ. ಆದರೂ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ಎರಡು ಡೋಸ್ ಲಸಿಕೆ ಪಡೆದವರಿಗೆ ಸೋಂಕು ತೀವ್ರ ಪರಿಣಾಮ ಬೀರುವುದಿಲ್ಲ ಮತ್ತು ಸಾವು ಸಂಭವಿಸುವುದಿಲ್ಲ ಎಂಬುದು ರುಜುವಾತಾಗಿದೆ. ಹೀಗಾಗಿ ತ್ವರಿತವಾಗಿ ಲಸಿಕೆ ನೀಡುವುದರಿಂದ ಸಂಭವನೀಯ ಮೂರನೇ ಅಲೆಯಿಂದ ಸಂರಕ್ಷಣೆ ಸಾಧ್ಯ. ಹೀಗಾಗಿ ಸರ್ಕಾರದ ಜತೆ ಉದ್ದಿಮೆಗಳು ಕೈ ಜೋಡಿಸಿದರೆ ಗುರಿ ಸಾಧ್ಯ ಎಂದರು.

    ಔಷಧ ವಲಯ ಮಾತ್ರವಲ್ಲದೆ, ಪೌಷ್ಟಿಕ ಆಹಾರ ಮತ್ತು ಸೌಂದರ್ಯ ವರ್ದಕ ಉದ್ದಿಮೆದಾರರ ಜತೆಗೂ ಮುಂದಿನ ದಿನಗಳಲ್ಲಿ ಸಭೆ ನಡೆಸಿ ಸಿಎಸ್‍ಆರ್ ನಿಧಿಯ ನೆರವನ್ನು ಲಸಿಕಾ ಆಂದೋನಕ್ಕೂ ವಿಸ್ತರಿಸಲು ಮನವಿ ಮಾಡಲಾಗುವುದು. ಇದು ಸರ್ಕಾರ ಮಾತ್ರವಲ್ಲದೆ, ಸಮಾಜದ ಎಲ್ಲರ ಹೊಣೆಗಾರಿಕೆ ಆಗಿರುವುದರಿಂದ ಉದ್ದಿಮೆಗಳು ನೆರವಿನ ಹಸ್ತ ಚಾಚಬೇಕು ಎಂದು ಸಚಿವರು ಮನವಿ ಮಾಡಿದರು.

    ಸಚಿವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಉದ್ದಿಮೆ ಪ್ರತಿನಿಧಿಗಳು, ಔಷಧ ವಲಯದ ಸಂಘಟನೆ ಮೂಲಕ ಮತ್ತು ತಮ್ಮ ಉದ್ದಿಮೆಗಳ ಮೂಲಕ ಸರ್ಕಾರದ ಲಸಿಕಾ ಆಂದೋಲನಕ್ಕೆ ನೆರವಾಗುವುದಾಗಿ ಭರವಸೆ ನೀಡಿದರು. ಸರ್ಕಾರದ ಸಂದೇಶವನ್ನು ತಮ್ಮ ಕಂಪನಿಗಳ ಆಡಳಿತ ಮಂಡಳಿಗೆ ತಿಳಿಸಿ ಆದಷ್ಟು ಬೇಗ ಪ್ರತಿಕ್ರಿಯೆ ನೀಡುವುದಾಗಿ ಸಭೆಯಲ್ಲಿ ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಉದ್ದಿಮೆ ಹೊಂದಿರುವ ಮುವತ್ತಕ್ಕೂ ಹೆಚ್ಚು ಕಂಪನಿಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

    ಆಕ್ಸಿಜನ್ ಕೊರತೆ ನಿವಾರಣೆಗೆ ಕ್ರಮ
    ಸಂಭವನೀಯ ಮೂರನೇ ಅಲೆ ಸಂದರ್ಭದಲ್ಲಿ ಆಕ್ಸಿಜನ್ ಕೊರತೆ ಎದುರಾಗದಂತೆ ಉದ್ಯಮಗಳ ಜತೆ ಸರ್ಕಾರ ಸಮನ್ವಯದಿಂದ ಕಾರ್ಯ ನಿರ್ವಹಿಸಲಿದೆ ಎಂದು ಇದಕ್ಕೂ ಮೊದಲು ಆಕ್ಸಿಜನ್ ಉತ್ಪಾದಕ ಕಂಪನಿಗಳ ಪ್ರತಿನಿಧಿಗಳ ಸಭೆಯಲ್ಲಿ ಸಚಿವ ಸುಧಾಕರ್ ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಆಕ್ಸಿಜನ್ ಸರಬರಾಜು ಕುರಿತಂತೆ ಉದ್ಯಮದ ಪ್ರತಿನಿಧಿಗಳ ಸಭೆ ನಡೆಸಿದ ಸಚಿವರು, ಉದ್ಯಮಗಳ ಸಹಕಾರದೊಂದಿಗೆ ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸಲಾಗಿದೆ. ಸಂಭವನೀಯ ಮೂರನೇ ಅಲೆಯಲ್ಲೂ ಜನರ ಹಿತದೃಷ್ಟಿಯಿಂದ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದರು. ಇದನ್ನೂ ಓದಿ: ಬೆಂಗಳೂರಿಗೆ ಗಡಿ ವಾರ್ಡ್ ಗಳೇ ಡೇಂಜರ್ ಝೋನ್ – 172ಕ್ಕೇರಿದ ಆಕ್ಟಿವ್ ಕಂಟೈನ್‍ಮೆಂಟ್ ಝೋನ್

    ಪ್ರಸ್ತುತ ಒಟ್ಟು ಏಳು ಕಂಪನಿಗಳು 812 ಟನ್ ಗಳಷ್ಟನ್ನು ಪ್ರತಿದಿನ ಉತ್ಪಾದಿಸುತ್ತಿವೆ. ನಮ್ಮಲ್ಲಿ ಒಟ್ಟು 7,900 ಟನ್ ಗಳಷ್ಟಿದೆ. ಸದ್ಯ 5,381 ಟನ್ ಪ್ರಮಾಣದ ದಾಸ್ತಾನು ಇದೆ. ಆಕ್ಸಿಜನ್ ರೀಫಿಲಿಂಗ್ ಘಟಕಗಳು 64 ಇವೆ. ಗದಗ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬೀದರ್, ಯಾದಗಿರಿ, ಚಾಮರಾಜನಗರ, ಕೊಡಗು ಮತ್ತು ಮಂಡ್ಯಗಳಲ್ಲಿ ಇಲ್ಲ. ಮುಂದಿನ ದಿನಗಳಲ್ಲಿ ಎಲ್ಲಾ ತಾಲೂಕು ಮತ್ತು ಜಿಲ್ಲೆಗಳಲ್ಲಿ ಆಕ್ಸಿಜನ್ ಘಟಕಗಳನ್ನು ನಿರ್ಮಿಸುವ ಉದ್ದೇಶವಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹೊರ ರಾಜ್ಯದ ಕೂಲಿ ಕಾರ್ಮಿಕರಿಂದ ಕೊಡಗಿಗೆ ಕೊರೊನಾ ಕಂಟಕ

    ಹಿಂದಿನ ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸಲಾಗುವುದು. ಹೊಸ ಘಟಕಗಳ ಸ್ಥಾಪನೆ, ಟೆಂಡರ್ ಕರೆಯುವುದು, ಜಂಬೋ ಸಿಲೆಂಡರ್ ಖರೀದಿ, ಹೆಚ್ಚುವರಿ ದಾಸ್ತಾನು ಕೇಂದ್ರ, ಸರಬರಾಜು ವ್ಯವಸ್ಥೆ ಸಹಿತ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಖಾಸಗಿ ಕಂಪನಿಗಳು ತಮ್ಮ ಉತ್ಪಾದನೆ, ದಾಸ್ತಾನು ವ್ಯವಸ್ಥೆಗಳನ್ನು ಬಲವರ್ದನೆಗೊಳಿಸಿಕೊಳ್ಳಬೇಕು. ಸರ್ಕಾರದಿಂದ ಅಗತ್ಯವಿರುವ ಎಲ್ಲಾ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು. ಹಿರಿಯ ಅಧಿಕಾರಿಗಳಾದ ಮನೀಷ್ ಮುದ್ಗಿಲ್, ಶಾಲಿನಿ ರಜನೀಶ್, ಉದ್ದಿಮೆಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ:  ಇಂದು 1,298 ಹೊಸ ಕೊರೊನಾ ಪ್ರಕರಣ, 32 ಸಾವು

  • ಕೇರಳದಿಂದಲೇ ಮೂರನೇ ಅಲೆಗೆ ಮುನ್ನುಡಿ – 2ನೇ ಡೋಸ್ ವ್ಯಾಕ್ಸಿನ್ ಪಡೆದವರಲ್ಲಿ ಸೋಂಕು ಪತ್ತೆ

    ಕೇರಳದಿಂದಲೇ ಮೂರನೇ ಅಲೆಗೆ ಮುನ್ನುಡಿ – 2ನೇ ಡೋಸ್ ವ್ಯಾಕ್ಸಿನ್ ಪಡೆದವರಲ್ಲಿ ಸೋಂಕು ಪತ್ತೆ

    ತಿರುವನಂತಪುರ: ಕೇರಳದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದ್ದು, ಇದೀಗ ಕೊರೊನಾ ಮೂರನೇ ಅಲೆಗೆ ಮುನ್ನುಡಿ ಬರೆಯುತ್ತಾ ಎಂಬ ಅನುಮಾನವೊಂದು ಎದ್ದು ಕಾಣುತ್ತಿದೆ.

    ಕೇರಳದಲ್ಲಿ ವ್ಯಾಕ್ಸಿನ್ ಪಡೆದವರನ್ನೂ ಕೊರೊನಾ ಕಾಡುತ್ತಿದೆ. 2 ನೇ ಡೋಸ್ ಪಡೆದ ಸಾವಿರಾರು ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಸುದ್ದಿ ದೇಶದ ಜನರನ್ನು ಬೆಚ್ಚಿ ಬೀಳಿಸುತ್ತಿದೆ. ಲಸಿಕೆ ಪಡೆದ 40 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

    ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಲಸಿಕೆ ಪಡೆದವರಲ್ಲೂ ಸೋಂಕು ಸ್ಫೋಟಗೊಂಡಿದೆ. ಪತ್ತನಂತಿಟ್ಟು ಎಂಬಲ್ಲಿ ಸುಮಾರು 1.35 ಲಕ್ಷ ಕೊವೀಡ್ ಪ್ರಕ್ರರಣಗಳು ಪತ್ತೆಯಾಗಿವೆ. ಮೊದಲ ಡೋಸ್ ಪಡೆದ 14,974 ಮಂದಿಯಲ್ಲಿ ಸೋಂಕು ಪತ್ತೆಯಾದರೆ, 2ನೇ ಡೋಸ್ ಪಡೆದ ಬಳಿಕ 5042 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದನ್ನೂ ಓದಿ: ಕಂಟ್ರೋಲ್‍ಗೆ ಬಾರದ ಕೊರೊನಾ- ನಾಲ್ಕು ದಿನಗಳಿಂದ ದ.ಕ. ಜಿಲ್ಲೆಯಲ್ಲಿ ರಾಜ್ಯದಲ್ಲೇ ಹೆಚ್ಚು ಕೇಸ್

    ಕೇರಳದಲ್ಲಿ ಸೋಂಕು ಈ ಪ್ರಮಾಣದಲ್ಲಿ ಏರಿಕೆಯಾಗಲು ಪ್ರಮುಖ ಕಾರಣ ಕಂಟೈನ್ಮೆಂಟ್ ಝೋನ್ ಮಾಡುವುದರಲ್ಲಿ ಕಟ್ಟುನಿಟ್ಟಿನ ಕ್ರಮ ಅಳವಡಿಸಿಕೊಳ್ಳದೇ ಇರುವುದಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ನಿರ್ದೇಶನದಂತೆ ಅದನ್ನು ಪಾಲಿಸಿಲ್ಲ. ಅಲ್ಲದೆ ಪರೀಕ್ಷೆಯ ಪ್ರಮಾಣವೂ ಕಡಿಮೆ ಇದೆ ಎಂದು ಕೇಂದ್ರದಿಂದ ಭೇಟಿ ನೀಡಿದ ಆರು ಮಂದಿ ತಜ್ಞರನ್ನು ಒಳಗೊಂಡ ತಂಡ ಅಭಿಪ್ರಾಯಪಟ್ಟಿದೆ.

    ಒಟ್ಟಿನಲ್ಲಿ 6 ಜನರ ತಂಡದ ಅಧ್ಯಯನದಲ್ಲಿ ಡೆಲ್ಟಾ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಕೇರಳದಲ್ಲಿ 40 ಸಾವಿರ ಹೊಸ ರೀತಿಯ ಪ್ರಕರಣಗಳು ಪತ್ತೆಯಾಗಿದ್ದು, ಕೇರಳ ಕೊರೋನಾದಿಂದ ಕರ್ನಾಟಕದ ಗಡಿಜಿಲ್ಲೆಗಳಲ್ಲಿ ಆತಂಕ ವ್ಯಕ್ತವಾಗಿದೆ.

  • ಶೇ.100ರಷ್ಟು ಲಸಿಕೆ ಹಾಕಿಸುವ ಗ್ರಾಮ ಪಂಚಾಯಿತಿಗಳಿಗೆ 25 ಲಕ್ಷ ವಿಶೇಷ ಅನುದಾನ ನೀಡಿ: ಪ್ರಿಯಾಂಕ್ ಖರ್ಗೆ

    ಶೇ.100ರಷ್ಟು ಲಸಿಕೆ ಹಾಕಿಸುವ ಗ್ರಾಮ ಪಂಚಾಯಿತಿಗಳಿಗೆ 25 ಲಕ್ಷ ವಿಶೇಷ ಅನುದಾನ ನೀಡಿ: ಪ್ರಿಯಾಂಕ್ ಖರ್ಗೆ

    ಕಲಬುರಗಿ: ಶೇ.100ರಷ್ಟು ಲಸಿಕಾಕರಣ ಪೂರ್ಣಗೊಳಿಸುವ ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯತಿಗಳಿಗೆ ಸರ್ಕಾರ 25 ಲಕ್ಷ ರೂ. ವಿಶೇಷ ಪ್ರೋತ್ಸಾಹ ಅನುದಾನ ಘೋಷಿಸಲಿ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.

    ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, 25 ಲಕ್ಷ ರೂ. ವಿಶೇಷ ಪ್ರೋತ್ಸಾಹ ಅನುದಾನದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ತುರ್ತಾಗಿ ಹಾಗೂ ಅವಶ್ಯಕತೆ ಇರುವ ಜನಪರ ಕಾರ್ಯಕ್ರಮ ಅಥವಾ ಯೋಜನಗಳ ಜಾರಿಗೆ ತರಲು ಅನುಕೂಲವಾಗುತ್ತದೆ. ಸರ್ಕಾರ ಈ ನಿಟ್ಟಿಯಲ್ಲಿ ಯೋಚಿಸಿದರೆ ನಾನು ನನ್ನ ಶಾಸಕರ ನಿಧಿಯಿಂದ ಅಗತ್ಯವಿರುವ ಅನುದಾನ ಒದಗಿಸಲು ಸಿದ್ದನಿದ್ದೇನೆ ಎಂದು ಶಾಸಕರು ಹೇಳಿದ್ದಾರೆ.

    ಬಿಜೆಪಿ ನಾಯಕರ ಅವೈಜ್ಞಾನಿಕ ಸಲಹೆಗಳ ಪರಿಣಾಮವಾಗಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿದಿದ್ದರಿಂದ ಕೋವಿಡ್ ಲಸಿಕಾಕರಣ ಅಭಿಯಾನಕ್ಕೆ ಸಮರ್ಪಕ ವೇಗ ದೊರಕದೆ, ಕುಂಟುತ್ತ ಸಾಗಿದೆ. ಕೊರೊನಾ ಮೂರನೆಯ ಅಲೆ ರಾಜ್ಯದ ಬಾಗಿಲ ಬಳಿ ಕುಳಿತಿದೆ ಎಂದು ತಜ್ಞರು ಎಚ್ಚರಿಸಿದ್ದರೂ ನಿದ್ದೆಗಣ್ಣಿನಲ್ಲಿರುವ ಸರ್ಕಾರ, ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ದಿಟ್ಟ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗುತ್ತಿದೆ. ಜೊತೆಗೆ ಜಿಲ್ಲೆಯ ಕುರಿತ ತನ್ನ ದಿವ್ಯ ನಿರ್ಲಕ್ಷ್ಯತನ ಮುಂದುವರೆಸಿದೆ. ಜಿಲ್ಲೆಯ ಬಿಜೆಪಿ ನಾಯಕರು ಈ ಕುರಿತು ಮೌನವಹಿಸಿದ್ದು ಗಮನಸಿದರೆ ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಹಾಗೂ ಕಲಬುರಗಿ ಜಿಲ್ಲೆಗೆ ತೋರಿಸುತ್ತಿರುವ ಅಲಕ್ಷ್ಯತನಕ್ಕೆ ಸಮ್ಮತಿಸುತ್ತಿದ್ದಾರೆ ಎನಿಸುತ್ತದೆ ಎಂದರು.

    ಗೋಮೂತ್ರ ಸೇವನೆ ಹಾಗೂ ಮೈಗೆ ಹಸುವಿನ ಸಗಣಿ ಮೆತ್ತಿಕೊಳ್ಳುವುದರಿಂದ ಕೊರೊನಾ ಸೋಂಕು ನಿವಾರಿಸಿಬಹುದು ಎಂದು ಬಿಜೆಪಿ ನಾಯಕರು ಕರೆ ಕೊಟ್ಟ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಲಸಿಕೆ ಪಡೆದುಕೊಳ್ಳಲು ಮುಂದೆ ಬರಲಿಲ್ಲ. ಆರಂಭಿಕ ಹಂತದಲ್ಲೇ ಹೀಗೆ ಅವೈಜ್ಞಾನಿಕ ವಿಚಾರಗಳನ್ನು ಜನರ ತಲೆಯೊಳೆಗೆ ತುಂಬಿದ ಬಿಜೆಪಿ ಲಸಿಕಾಕರಣ ವೇಗ ಪಡೆದುಕೊಳ್ಳುಲು ವಿಫಲವಾಗಿರುವುದಕ್ಕೆ ನೇರ ಕಾರಣವಾಗಿದೆ ಎಂದು ದೂರಿದ್ದಾರೆ.

    ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳುವುದರ ಮೂಲಕ ಕೊರೊನಾ ಸೋಂಕನ್ನು ತಡೆಗಟ್ಟಬಹುದು. ಲಸಿಕೆ ಹಾಕಿಸಿಕೊಳ್ಳುವದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ ಎಂದು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ವಿಫಲವಾದರೆ, ಹಸುವಿನ ಮೂತ್ರ ಸೇವನೆ ಹಾಗೂ ಸಗಣಿ ಬಳಿದುಕೊಂಡರೆ ಕೊರೊನಾ ವಾಸಿಯಾಗುತ್ತದೆ ಎನ್ನುವ ಅವೈಜ್ಞಾನಿಕ ವಿಚಾರಗಳನ್ನು ಜನರಿಗೆ ಬಿಜೆಪಿ ನಾಯಕರು ಹೇಳುತ್ತಲೇ ಹೋಗಿದ್ದರಿಂದ ಮಹತ್ವಾಕಾಂಕ್ಷಿ ಅಭಿಯಾನಕ್ಕೆ ಹಿನ್ನೆಡೆಯಾಗುವಂತಾಗಿದೆ ಎಂದರು.

    ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ, ಕಲಬುರಗಿ ಜಿಲ್ಲೆಯಲ್ಲಿ ಮೊದಲ ಡೋಸ್ ಲಸಿಕೆ ಹಾಕಿಸಿಕೊಂಡವರು ಕೇವಲ ಶೇ.36 ಹಾಗೂ ಎರಡನೆಯ ಡೋಸ್ ಹಾಕಿಸಿಕೊಂಡವರು ಕೇವಲ ಶೇ.9 ಜನ ಮಾತ್ರ. ಅಂದರೆ ಒಟ್ಟು 19 ಲಕ್ಷ ವಯಸ್ಕರ ಜನಸಂಖ್ಯೆಯಲ್ಲಿ 8,75,095 ಜನರು ಲಸಿಕೆ ಪಡೆದುಕೊಂಡಿದ್ದಾರೆ. ಇವರಲ್ಲಿ 7,06,232 ಜನರು ಮೊದಲನೆಯ ಡೋಸ್ ಪಡೆದರೆ, ಕೇವಲ 1,68,863 ಜನರು ಎರಡನೆಯ ಡೋಸ್ ಪಡೆದುಕೊಂಡಿದ್ದಾರೆ. ಮೊದಲನೆಯ ಹಾಗೂ ಎರಡನೆಯ ಡೋಸ್ ಸೇರಿದಂತೆ ಕಲಬುರಗಿ ನಗರ ವ್ಯಾಪ್ತಿಯಲ್ಲಿ 2,92,539 ಜನರು ಲಸಿಕೆ ಪಡೆದರೆ, ಚಿತ್ತಾಪುರ ತಾಲೂಕಿನಲ್ಲಿ 1,03,554 ಜನರು ಲಸಿಕೆ ಪಡೆದಿದ್ದಾರೆ. ಕ್ರಮವಾಗಿ ಆಳಂದ 97,074, ಚಿಂಚೋಳಿ 82,237, ಜೇವರ್ಗಿ 81,866, ಕಲಬುರಗಿ ಗ್ರಾಮೀಣ 79, 355, ಸೇಡಂ- 70,855 ಹಾಗೂ ಅಫಝಲಪುರ ತಾಲೂಕಿನಲ್ಲಿ ಒಟ್ಟು 67,615 ಜನರು ಲಸಿಕೆ ಪಡೆದಿದ್ದಾರೆ. ಜಿಲ್ಲೆಯ ಒಟ್ಟು 19 ಲಕ್ಷ ವಯಸ್ಕರ ಜನಸಂಖ್ಯೆಯ ಆಧಾರಕ್ಕೆ ಹೋಲಿಸಿದರೆ ಲಸಿಕೆ ಪಡೆದರವರ ಸಂಖ್ಯೆ ಗಣನೀಯ ಏರಿಕೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ಈ ಕೂಡಲೇ ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

  • ವಾಟ್ಸಪ್‍ನಲ್ಲೇ ಕೊರೊನಾ ಲಸಿಕೆಯ ಪ್ರಮಾಣಪತ್ರ ಪಡೆಯಿರಿ

    ವಾಟ್ಸಪ್‍ನಲ್ಲೇ ಕೊರೊನಾ ಲಸಿಕೆಯ ಪ್ರಮಾಣಪತ್ರ ಪಡೆಯಿರಿ

    ನವದೆಹಲಿ: ಇನ್ನು ಮುಂದೆ ಕೊರೊನಾ ಲಸಿಕೆಯ ಪ್ರಮಾಣಪತ್ರವನ್ನು ಸುಲಭವಾಗಿ ನಿಮ್ಮ ಮೊಬೈಲಿನಲ್ಲೇ ಪಡೆಯಬಹುದು.

    ಹೌದು. ಇಲ್ಲಿಯವರೆಗೆ ಕೋವಿನ್ ಪೋರ್ಟಲ್ ಗೆ ಹೋಗಿ ಮೊಬೈಲ್ ನಂಬರ್, ಒಟಿಪಿ ಹಾಕಿ ಪ್ರಮಾಣಪತ್ರವನ್ನು ಡೌನ್‍ಲೋಡ್ ಮಾಡಬೇಕಿತ್ತು. ಆದರೆ ಈಗ ವಾಟ್ಸಪ್‍ನಲ್ಲೇ ಪ್ರಮಾಣಪತ್ರವನ್ನು ಪಡೆಯಬಹುದು.

    ಏನು ಮಾಡಬೇಕು?
    +91 90131 51515 ನಂಬರ್ ಅನ್ನು ಮೊದಲು ಸೇವ್ ಮಾಡಿ. ಬಳಿಕ ‘covid certificate” ಎಂದು ಈ ನಂಬರಿಗೆ ವಾಟ್ಸಪ್ ಮಾಡಿ. ಇದಾದ ಬಳಿಕ ನಿಮ್ಮ ಮೊಬೈಲಿಗೆ ಒಂದು ಒಟಿಪಿ ಬರುತ್ತದೆ. ಈ ಒಟಿಪಿಯನ್ನು ನಮೂದಿಸಿದರೆ ಪ್ರಮಾಣಪತ್ರ ಕೂಡಲೇ ವಾಟ್ಸಪ್‍ಗೆ ಬಂದಿರುತ್ತದೆ. ಇದನ್ನೂ ಓದಿ : ಮಂಜು ಬಗ್ಗೆ ಹೇಳುತ್ತಾ ಭಾವುಕರಾದ ಚಕ್ರವರ್ತಿ ಚಂದ್ರಚೂಡ್

    ಕೇಂದ್ರ ಸರ್ಕಾರ ಕೊರೊನಾ ಸಂಬಂಧ ಮೈಗವರ್ನ್‍ಮೆಂಟ್ ಕೊರೊನಾ ಹೆಲ್ಪ್ ಡೆಸ್ಕ್ ತೆರೆದಿದೆ. ಇದರ ಮೂಲಕ ಲಸಿಕೆಯ ಪ್ರಮಾಣಪತ್ರ ವಾಟ್ಸಪ್‍ಗೆ ಬರುತ್ತದೆ.

    ಲಸಿಕೆ ನೀಡುವ ಸಮಯದಲ್ಲಿ ಯಾವ ನಂಬರ್ ನೀಡಿದ್ದಿರೋ ಆ ನಂಬರಿನ ವಾಟ್ಸಪ್ ಸಂಖ್ಯೆಗೆ ಮಾತ್ರ ಪ್ರಮಾಣಪತ್ರ ಬರುತ್ತದೆ. ಸೇವೆ ಆರಂಭಗೊಂಡ ಹಿನ್ನೆಲೆಯಲ್ಲಿ ತಡವಾಗಿ ಪ್ರಮಾಣಪತ್ರ ಬರುತ್ತಿದೆ ಎಂದು ಜನ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

  • ಕರಾವಳಿಯಲ್ಲಿ ಕೊರೊನಾ ಹೆಚ್ಚಳ- ಜನರಿಗೆ ಸಿಗುತ್ತಿಲ್ಲ ಲಸಿಕೆ

    ಕರಾವಳಿಯಲ್ಲಿ ಕೊರೊನಾ ಹೆಚ್ಚಳ- ಜನರಿಗೆ ಸಿಗುತ್ತಿಲ್ಲ ಲಸಿಕೆ

    ಕಾರವಾರ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಕೋವಿಡ್ ವ್ಯಾಕ್ಸಿನ್ ಸೆಂಟರ್ ಗಳತ್ತ ಮುಗಿಬಿದ್ದಿದ್ದಾರೆ. ಆದರೆ ನೂರಾರು ಜನರು ದಿನಗಟ್ಟಲೇ ಕಾದರೂ ಜನರಿಗೆ ವ್ಯಾಕ್ಸಿನ್ ಸಿಗುತ್ತಿಲ್ಲ.

    ಕರಾವಳಿ ಜಿಲ್ಲೆಗಳಲ್ಲಿ ಕರೋನಾ ಸೋಂಕಿನ ಪ್ರಮಾಣ ಏರಿಕೆಯತ್ತ ಸಾಗಿದೆ. ಇತ್ತ ಗೋವಾ ಭಾಗದ ಗಡಿ ಜಿಲ್ಲೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕರಾವಳಿ ಭಾಗದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಇದೀಗ ಏರಿಕೆಯತ್ತ ಸಾಗಿದೆ. ಇಂದು 41 ಜನರಿಗೆ ಕೋವಿಡ್ ಪಾಸಿಟಿವ್ ವರದಿಯಾಗಿದ್ದು, ಇಬ್ಬರು ಬಲಿಯಾಗಿದ್ದಾರೆ. ಇದನ್ನೂ ಓದಿ: ಕೊರೊನಾ ವೈರಸ್ ಲೀಕ್ ಆಗಿದ್ದು ಚೀನಾದ ಲ್ಯಾಬ್‍ನಿಂದಲೇ-ಯುಎಸ್ ರಿಪಬ್ಲಿಕನ್ ವರದಿ

    ಇಡೀ ಜಿಲ್ಲೆಯಲ್ಲಿ ಇಂದು 3830 ವ್ಯಾಕ್ಸಿನ್ ಡೋಸ್ ಮಾತ್ರಬಂದಿದೆ. ಭಟ್ಕಳ, ಸಿದ್ದಾಪುರ, ಕುಮಟಾ, ದಾಂಡೇಲಿ ಭಾಗದಲ್ಲಿ ಎರಡು ದಿನದಿಂದ ವ್ಯಾಕ್ಸಿನ್ ಖಾಲಿಯಾಗಿ ದೂರದೂರಿನಿಂದ ಬಂದ ಜನರು ವ್ಯಾಕ್ಸಿನ್ ಸಿಗದೇ ಮರಳುವಂತಾಗಿದೆ. ಕಾರವಾರದಲ್ಲೂ ಸಹ ಇಡೀ ಕೇಂದ್ರಕ್ಕೆ ಇಂದು 300 ಡೋಸ್ ಮಾತ್ರ ಲಭ್ಯವಿದ್ದು, ಕೆಲವೇ ಗಂಟೆಯಲ್ಲಿ ಖಾಲಿಯಾಗಿದ್ದರಿಂದ ವ್ಯಾಕ್ಸಿನ್ ಸೆಂಟರ್ ನಲ್ಲಿ ನೂರಾರು ಜನರು ಕಾದು ಮರಳಿ ಹೋಗುವಂತಾಗಿದೆ. ಇದನ್ನೂ ಓದಿ: ಹೊಸ ಸ್ವರೂಪ ಪಡೆದ ಕೊರೊನಾ-ಕಣ್ಣೀರಿನಿಂದಲೂ ಸೋಂಕು ಹಬ್ಬುತ್ತೆ, ಎಚ್ಚರ..!

  • ಕೊರೊನಾ ಕರಿನೆರಳು- ಇಂದು ಪ್ರಾರಂಭವಾಗಬೇಕಿದ್ದ ಮೀನುಗಾರಿಕೆ ಸಂಪೂರ್ಣ ಬಂದ್!

    ಕೊರೊನಾ ಕರಿನೆರಳು- ಇಂದು ಪ್ರಾರಂಭವಾಗಬೇಕಿದ್ದ ಮೀನುಗಾರಿಕೆ ಸಂಪೂರ್ಣ ಬಂದ್!

    ಕಾರವಾರ: 61 ದಿನಗಳ ನಿರ್ಬಂಧದ ನಂತರ ಇಂದು ಪ್ರಾರಂಭವಾಗಬೇಕಿದ್ದ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಮೀನುಗಾರಿಕೆ ಕೊರೊನಾ ಹೆಚ್ಚಳದಿಂದ ಬಂದ್ ಆಗಿದೆ. ಕೇರಳ ಮತ್ತು ಇತರೆ ರಾಜ್ಯಗಳಲ್ಲಿ ಕೊರೊನಾ ಹೆಚ್ಚಾದ ಪರಿಣಾಮ ಉತ್ತರ ಕನ್ನಡ ಜಿಲ್ಲೆಯ ಕರಾವಳಿಗೂ ತಟ್ಟಿದ್ದು, ಇದೀಗ ಮೀನುಗಾರರೇ ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದಾರೆ.

    ಬಂದ್ ಮಾಡಲು ಕಾರಣ ಏನು?
    ಉತ್ತರ ಕನ್ನಡ ಜಿಲ್ಲೆಯ ಮೀನುಗಾರಿಕೆ ಬಹುತೇಕ ಹೊರ ರಾಜ್ಯಗಳ ಮೀನುಗಾರಿಕಾ ವಹಿವಾಟಿನೊಂದಿಗೆ ಬೆರೆತಿದೆ. ಜಿಲ್ಲೆಯ ಕಾರವಾರದ ಬೈತಕೋಲ್, ಹೊನ್ನಾವರದ ಕಾಸರಕೋಡು ಬಂದರಿನಲ್ಲಿ ನಡೆಯುವ ಮೀನುಗಾರಿಕೆ ಕೇರಳ, ಆಂಧ್ರ, ಗೋವಾ ರಾಜ್ಯಗಳೊಂದಿಗೆ ವ್ಯವಹಾರಿಕ ಸಂಪರ್ಕ ಹೊಂದಿದೆ. ಕೇರಳ ರಾಜ್ಯದಲ್ಲಿ ಲಾಕ್‍ಡೌನ್ ಇರುವುದರಿಂದ ಮೀನುಗಾರಿಕೆ ಸಹ ಬಂದ್ ಆಗಿದೆ.

    ಜಿಲ್ಲೆಯ ಭಾಗದ ಮೀನುಗಾರರು ಸಹ ಕೇರಳ, ಗೋವಾ, ಮಹಾರಾಷ್ಟ್ರ, ಆಂಧ್ರ ಭಾಗಗಳಿಗೆ ಆಳ ಸಮುದ್ರದ ಮೀನುಗಾರಿಕೆಗೆ ತೆರಳುತ್ತಾರೆ. ಹೀಗಾಗಿ ಜಿಲ್ಲೆಯ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಕಡ್ಡಾಯವಾಗಿ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು. ಆದರೆ ಇದುವರೆಗೂ ಜಿಲ್ಲೆಯಲ್ಲಿ ಮೀನುಗಾರರಿಗೆ ವ್ಯಾಕ್ಸಿನ್ ಕೊರತೆ ಹಿನ್ನೆಲೆಯಲ್ಲಿ ಬಹುತೇಕರಿಗೆ ಮೊದಲ ಡೋಸ್ ಸಹ ಆಗಿಲ್ಲ. ಮುಖ್ಯಮಂತ್ರಿಗಳೇ ಮೀನುಗಾರರಿಗೆ ಪ್ರಾಮುಖ್ಯತೆ ಆಧಾರದಲ್ಲಿ ಕರಾವಳಿ ಭಾಗದ ಪ್ರತಿ ತಾಲೂಕಿಗೆ ಮೂರು ಸಾವಿರ ಡೋಸ್ ಮೀಸಲಿಟ್ಟು ನೀಡಲು ಆದೇಶಿಸಿದ್ದಾರೆ. ವ್ಯಾಕ್ಸಿನ್ ಕೊರತೆಯಿಂದ ಮೀನುಗಾರರಿಗೆ ವ್ಯಾಕ್ಸಿನ್ ಸಿಗುತ್ತಿಲ್ಲ. ಇದರ ಜೊತೆಗೆ ಕೇರಳದಿಂದ ರಫ್ತಾಗುವ ಸಿಗಡಿ ಮೀನಿನ ದರ ಸಹ ನಿಗದಿಯಾಗಿಲ್ಲ. ಈಗಿರುವ ದರ ಸಹ ಕಮ್ಮಿ ಇರುವುದರಿಂದ ಸಮುದ್ರದಲ್ಲಿ ಮತ್ಸ್ಯ ಭೇಟಿಗೆ ಹೋದರೆ ನಷ್ಟ ಹೊಂದುವ ಸಾಧ್ಯತೆ ಸಹ ಇರುವುದರಿಂದ ಇವೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡ ಮೀನುಗಾರರು ಇದೀಗ ಮೀನುಗಾರಿಕೆಯನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದಾರೆ.

    ಮೀನುಗಾರರು ಹೇಳುವುದೇನು?
    ಸದ್ಯ ಕೊರೊನಾ ಹೆಚ್ಚಳವಾಗಿದೆ ಜೊತೆಗೆ ಮೀನುಗಾರಿಕೆಗೆ ತೆರಳಲು ವ್ಯಾಕ್ಸಿನ್ ಪಡೆದುಕೊಳ್ಳಲು ವಿಳಂಬವಾಗಿದೆ. ಮುಖ್ಯಮಂತ್ರಿಗಳ ಆದೇಶ ಇದ್ದರೂ ಸಹ ತಮಗೆ ವ್ಯಾಕ್ಸಿನ್ ನೀಡುವಲ್ಲಿ ವಿಳಂಬ ಆಗುತ್ತಿದೆ. ಹೀಗಾಗಿ ನಿಯಮದ ಪ್ರಕಾರ ಇತರೆ ರಾಜ್ಯಗಳಲ್ಲಿ ಮೀನುಗಾರಿಕೆ ಮಾಡಲಾಗುತ್ತಿಲ್ಲ. ಡಿಸೇಲ್ ದರ ಹೆಚ್ಚಳ ವಿಧಿ ಆದ್ರೆ ಸದ್ಯ ರಫ್ತಾಗುವ ಮೀನಿನ ಬೆಲೆಯು ಸಹ ಕಮ್ಮಿ ಇದೆ. ಕೊರೊನಾ ಭಯದಿಂದ ಮೀನುಗಾರ ಕಾರ್ಮಿಕರು ಮೀನುಗಾರಿಕೆಗೆ ಬರುತ್ತಿಲ್ಲ. ಹೀಗಾಗಿ ನಷ್ಟ ಹೊಂದುವುದಕ್ಕಿಂತ ವ್ಯವಸ್ಥೆ ಸರಿ ಆಗುವವರೆಗೆ ಬಂದ್ ಮಾಡಿ ಆಗುವ ನಷ್ಟ ತಪ್ಪಿಸಿಕೊಳ್ಳಬಹುದು ಎಂದು ಕಾರವಾರದ ಬೈತಕೋಲಿನಲ್ಲಿ ಮೀನುಗಾರಿಕಾ ಬೋಟ್ ಹೊಂದಿದ ಪ್ರಶಾಂತ್ ಹೇಳುತ್ತಾರೆ. ಇದನ್ನೂ ಓದಿ: ಕಾರವಾರ ಬಂದರು ವಿಸ್ತರಣೆ- ಹೈಕೋರ್ಟ್ ಮಹತ್ವದ ತೀರ್ಪು

    ಸದ್ಯ ಜಿಲ್ಲೆಯ ಮೀನುಗಾರರಿಗೆ ವ್ಯಾಕ್ಸಿನ್ ಸಂಪೂರ್ಣ ಆಗುವವರೆಗೂ ಮೀನುಗಾರರು ಮೀನುಗಾರಿಕೆಗೆ ತೆರಳುವುದು ಅನುಮಾನವಾಗಿದೆ. ಒಟ್ಟಿನಲ್ಲಿ ಕೊರೊನಾ ಕರಿ ಛಾಯೆ ಇದೀಗ ಮತ್ತೆ ಮೀನುಗಾರರನ್ನು ಬಾಧಿಸುತ್ತಿದೆ. ಇದನ್ನೂ ಓದಿ: ಪ್ರವಾಹ ಹಾನಿ ವೀಕ್ಷಿಸಲು ಬಾರದ ಕಾಗೇರಿ, ಕ್ಷೇತ್ರದಲ್ಲಿ ಸಂಸದರೂ ನಾಪತ್ತೆ

  • ಆಗಸ್ಟ್ ನಲ್ಲಿಯೇ ಮಕ್ಕಳಿಗೆ ಕೊರೊನಾ ಲಸಿಕೆ – ಆರೋಗ್ಯ ಸಚಿವರ ಸುಳಿವು

    ಆಗಸ್ಟ್ ನಲ್ಲಿಯೇ ಮಕ್ಕಳಿಗೆ ಕೊರೊನಾ ಲಸಿಕೆ – ಆರೋಗ್ಯ ಸಚಿವರ ಸುಳಿವು

    ನವದೆಹಲಿ: ಆಗಸ್ಟ್ ಮೂರನೇ ವಾರದಲ್ಲಿಯೇ ಮಕ್ಕಳಿಗೆ ಕೊರೊನಾ ಲಸಿಕೆ ಸಿಗುವ ಸುಳಿವನ್ನು ಕೇಂದ್ರ ಆರೋಗ್ಯ ಸಚಿವ ಮನ್‍ಸುಖ್ ಮಾಂಡವಿಯಾ ನೀಡಿದ್ದಾರೆ.

    ಮಂಗಳವಾರ ಸಂಸದ್ ಭವನದಲ್ಲಿ ಭಾರತೀಯ ಜನತಾ ಪಾರ್ಟಿಯ ಸಂಸದೀಯ ಸಭೆಯಲ್ಲಿ ವ್ಯಾಕ್ಸಿನೇಷನ್ ನೀಡುವ ಕುರಿತು ಮನ್‍ಸುಖ್ ಮಾಂಡವಿಯಾ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಆಗಸ್ಟ್ ನಲ್ಲಿಯೇ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡುವ ಮಾತುಗಳನ್ನಾಡಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ಸದ್ಯ ದೇಶ ಕೊರೊನಾ ಎರಡನೇ ಅಲೆಯಿಂದ ಚೇತರಿಸಿಕೊಳ್ಳುತ್ತಿದ್ದು, ಮೂರನೇ ಅಲೆಯ ಆತಂಕದ ಹೊಸ್ತಿಲಿನಲ್ಲಿದೆ. ಮೂರನೇ ಅಲೆ ಮಕ್ಕಳ ಮೇಲೆಯೇ ನೇರ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ತಜ್ಞರು ಸರ್ಕಾರಗಳಿಗೆ ಎಚ್ಚರಿಕೆ ನೀಡಿದ್ದಾರೆ. ಈಗ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ.

    ದೇಶದ ಹಲವೆಡೆ ವಿವಿಧ ಹಂತಗಳಲ್ಲಿ ಮಕ್ಕಳ ಮೇಲೆ ಲಸಿಕೆ ಪ್ರಯೋಗ ನಡೆಯುತ್ತಿದೆ. ಭಾರತ್ ಬಯೋಟೆಕ್ ಸಹ ಲಸಿಕೆಯ ಪ್ರಯೋಗ ನಡೆಸಿದ್ದು, ಆಗಸ್ಟ್ ಅಂತ್ಯ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಫಲಿತಾಂಶ ಲಭ್ಯವಾಗುವ ಸಾಧ್ಯತೆಗಳಿವೆ. ಜಾಯಿಡ್ಸ್ ಕ್ಯಾಡಿಲ್ ನಡೆಸಿದ ಟ್ರಯಲ್ ಅಂತಿಮಗೊಂಡಿದ್ದು, ಶೀಘ್ರವೇ ಲಸಿಕೆಗೆ ಅನುಮತಿ ಸಿಗಲಿದೆ. ಇದನ್ನೂ ಓದಿ: 20 ತಿಂಗಳಾದ್ರೂ ಜಾರಿಗೆ ಬರದ ಸಿಎಎ – ಇನ್ನೂ 6 ತಿಂಗಳು ಸಮಯ ಕೇಳಿದ ಕೇಂದ್ರ

    ಇತ್ತ ವಿಶ್ವದಲ್ಲಿ ಫೈಜರ್, ಮೊಡೆರ್ನಾ ವಿದೇಶಿ ಕಂಪನಿಗಳು 12 ರಿಂದ 17 ವರ್ಷದೊಳಗಿನವರಿಗೆ ಕೊರೊನಾ ಲಸಿಕೆ ನೀಡುತ್ತಿವೆ. ಈ ಲಸಿಕೆಗಳಿಗೆ ಭಾರತದಲ್ಲಿ ಅನುಮತಿ ಸಿಗಲಿದೆ ಎನ್ನಲಾಗುತ್ತಿದೆ. ಇದುವರೆಗೂ 44 ಕೋಟಿ ಡೋಸ್ ವ್ಯಾಕ್ಸಿನ್ ನೀಡಲಾಗಿದ್ದು, 9 ಕೋಟಿಗೂ ಅಧಿಕ ಜನರು ಸಂಪೂರ್ಣ ವ್ಯಾಕ್ಸಿನೇಟ್ ಆಗಿದ್ದಾರೆ. ಇದನ್ನೂ ಓದಿ: ರಾಜ್ ಕುಂದ್ರಾಗೆ 14 ದಿನ ನ್ಯಾಯಾಂಗ ಬಂಧನ

  • ಎರಡು ಲಸಿಕೆಗಳನ್ನು ಮಿಶ್ರಣ ಮಾಡುವುದು ಅಪಾಯಕಾರಿ ಬೆಳವಣಿಗೆ – ಡಬ್ಲ್ಯೂಎಚ್‍ಒ

    ಎರಡು ಲಸಿಕೆಗಳನ್ನು ಮಿಶ್ರಣ ಮಾಡುವುದು ಅಪಾಯಕಾರಿ ಬೆಳವಣಿಗೆ – ಡಬ್ಲ್ಯೂಎಚ್‍ಒ

    ಜಿನೀವಾ: ಬೇರೆ ಬೇರೆ ಕೋವಿಡ್ ಲಸಿಕೆಗಳನ್ನು ಮಿಶ್ರಣ ಮಾಡುವುದು ಅಪಾಯಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

    ಬೇರೆ ಬೇರೆ ಉತ್ಪಾದಕರು ಅಭಿವೃದ್ಧಿ ಪಡಿಸಿದ ಲಸಿಕೆಗಳನ್ನು ಮಿಶ್ರಣ ಮಾಡುವುದು ಅಪಾಯಕಾರಿ ಬೆಳವಣಿಗೆ. ಇದರ ಬಗ್ಗೆ ಕಡಿಮೆ ಮಾಹಿತಿ ಇದೆ. ಹೆಚ್ಚಿನ ಡೇಟಾಗಳು ಲಭ್ಯವಿಲ್ಲ ಎಂದು ಡಬ್ಲ್ಯೂಎಚ್‍ಒ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.

    ಎರಡನೇ, ಮೂರನೇ ಮತ್ತು ನಾಲ್ಕನೇ ಡೋಸ್ ಅನ್ನು ದೇಶದ ಜನರೇ ನಿರ್ಧರಿಸಿದರೆ ಇದು ಅಸ್ತವ್ಯಸ್ತಕ್ಕೆ ಕಾರಣವಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚೀನಿ ಲಸಿಕೆ ಪಡೆದವರಿಗೆ ಸೌದಿ ನಿರ್ಬಂಧ – ಪಾಕ್ ಜನತೆಗೆ ಶಾಕ್

    ಎರಡು ಉತ್ಪಾದಕರು ಅಭಿವೃದ್ಧಿ ಪಡಿಸಿದ ಲಸಿಕೆಯನ್ನು ಮಿಶ್ರಣ ಮಾಡಿ ನೀಡಿದರೆ ಹೆಚ್ಚು ರೋಗ ನಿರೋಧಕ ಶಕ್ತಿ ಬರಬಹುದು ಎಂಬ ಕಾರಣ ನೀಡಿ ಕೆಲವು ಕಡೆ ಈ ಪ್ರಯೋಗಗಳು ನಡೆಯುತ್ತಿದೆ.

  • ಮೂರನೇ ಡೋಸ್‍ಗಾಗಿ ಫೈಜರ್‌ನಿಂದ ಅರ್ಜಿ

    ಮೂರನೇ ಡೋಸ್‍ಗಾಗಿ ಫೈಜರ್‌ನಿಂದ ಅರ್ಜಿ

    ನವದೆಹಲಿ: ಡೆಲ್ಟಾ, ಡೆಲ್ಟಾ ಪ್ಲಸ್ ಹೀಗೆ ಕೋವಿಡ್ ಸೋಂಕಿನ ಹೊಸ ಹೊಸ ರೂಪಾಂತರಿ ತಳಿಗಳ ಆತಂಕ ಹೊತ್ತಲ್ಲೇ 2ನೇ ಡೋಸ್ ಪಡೆದವರಿಗೆ 3ನೇ ಡೋಸ್ ಲಸಿಕೆ ಕೊಡುವ ಬಗ್ಗೆ ಚರ್ಚೆ ಆರಂಭ ಆಗಿದೆ.

    ಬ್ರಿಟನ್ ಬಳಿಕ ಈಗ ಅಮೆರಿಕದಲ್ಲಿ ಮೂರನೇ ಡೋಸ್ ಲಸಿಕೆ ಕೊಡುವ ಸಾಧ್ಯತೆ ಇದೆ. ಆಗಸ್ಟ್‍ನಲ್ಲಿ 3ನೇ ಡೋಸ್ ಲಸಿಕೆ ವಿತರಣೆಗೆ ಅನುಮತಿ ಕೇಳಿ ಫೈಜರ್ ಕಂಪನಿ ಅರ್ಜಿ ಸಲ್ಲಿಸಲಿದೆ. ಮೂರನೇ ಡೋಸ್ ಕೊಟ್ಟರೆ ಆಗ ಪ್ರತಿಕಾಯ ಶೇಕಡಾ 5ರಿಂದ 10 ಪಟ್ಟು ಹೆಚ್ಚಾಗಲಿದ್ದು, ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ವೈರಸ್ ವಿರುದ್ಧವೂ ಪರಿಣಾಮಕಾರಿಯಾಗಲಿದೆ ಎಂದು ಆರಂಭಿಕ ಅಧ್ಯಯನದಲ್ಲಿ ತಿಳಿದುಬಂದಿದೆ ಎಂದು ಫೈಜರ್ ಹೇಳಿದೆ.

    ಆಸ್ಟ್ರಾಜೆನಿಕಾದ ಕೋವಿಡ್ ಲಸಿಕೆಯ 2ನೇ ಡೋಸ್ ತೆಗೆದುಕೊಂಡವರಿಗೆ 6 ತಿಂಗಳ ಬಳಿಕ 3ನೇ ಡೋಸ್ ಕೊಟ್ಟರೆ ರೋಗ ನಿರೋಧಕ ಶಕ್ತಿ ಅತ್ಯಧಿಕವಾಗಿರಲಿದೆ ಎಂದು ಆಕ್ಸ್ ಫರ್ಡ್ ವಿವಿ ಅಧ್ಯಯನ ತಿಳಿಸಿದೆ. ಬ್ರಿಟನ್‍ನಲ್ಲಿ ಸೆಪ್ಟೆಂಬರ್ ವೇಳೆ 3ನೇ ಡೋಸ್ ಲಸಿಕೆ ವಿತರಣೆ ಆರಂಭ ಆಗುವ ಸಾಧ್ಯತೆ ಇದೆ. ಇದನ್ನೂ ಓದಿ: ನಿಜಕ್ಕೂ ಬಹಳ ಖುಷಿಯಾಗುತ್ತೆ- ಅಭಿಮಾನಿ ಪ್ರೀತಿಗೆ ಡಿಂಪಲ್ ಕ್ವೀನ್ ಫಿದಾ

    ರೋಗ ನಿರೋಧಕ ಶಕ್ತಿ ಕಡಿಮೆ ಆದ ಹಿನ್ನೆಲೆಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮತ್ತೊಂದು ಡೋಸ್ ನೀಡಲು ನಿರ್ಧರಿಸಲಾಗಿದೆ. 2 ಡೋಸ್ ಪಡೆದ ಬಳಿಕ ಎಷ್ಟು ದಿನಗಳ ಕಾಲ ಪ್ರತಿಕಾಯ ಉಳಿಯುತ್ತೆ ಅಂತಾ ಸಾಬೀತು ಆಗಿಲ್ಲ. ದೇಹದಲ್ಲಿ ಉತ್ಪತ್ತಿಯಾದ ರೋಗ ನಿರೋಧಕ ಶಕ್ತಿ 8 ತಿಂಗಳ ಬಳಿಕ ನಶಿಸಿ ಹೋಗುತ್ತಿದೆ. ಹೀಗಾಗಿ 3ನೇ ಡೋಸ್ ನೀಡುವುದರ ಬಗ್ಗೆ ಐಸಿಎಂಆರ್ ಸಲಹೆ ನೀಡಿದೆ.

    ಶೇ.4.5 ನಷ್ಟು ರೋಗ ನಿರೋಧಕ ಶಕ್ತಿ ಇದ್ದು ಡೆಲ್ಟಾ ವೈರಸ್ ವೈರಸ್ ಬಂದರೆ, ಶೇ.3.2ನಷ್ಟು ರೋಗ ನಿರೋಧಕ ಶಕ್ತಿ ಕುಗ್ಗುವುದರ ಬಗ್ಗೆ ಫ್ರಂಟ್ ಲೈನ್ ವಾರಿಯರ್ಸ್ ಮೇಲೆ ನಡೆದ ಅಧ್ಯಯನದಲ್ಲಿ ಬಯಲಾಗಿದೆ. ಹಾಗಾಗಿ 3ನೇ ಡೋಸ್ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಇದನ್ನೂ ಓದಿ: ಟ್ರ್ಯಾಕ್ಟರ್ ಹರಿದು ಬಾಲಕ ಸಾವು- ವಿಷಯ ತಿಳಿದ ಚಾಲಕ ಆತ್ಮಹತ್ಯೆ