ಬೆಂಗಳೂರು: ರಾಜ್ಯದಲ್ಲಿ 4ನೇ ಅಲೆ ಆತಂಕದ ಹೊತ್ತಲ್ಲಿ ಬಿಬಿಎಂಪಿ (BBMP) ಹೊಸ ಆಟ ಶುರು ಮಾಡಿದ್ಯಾ ಅನ್ನೋ ಅನುಮಾನ ಹೆಚ್ಚಾಗಿದೆ. ಬಿಎಫ್.7 ಕೊರೊನಾ ದೇಶಕ್ಕೆ ಕಾಲಿಡಬಹುದು ಅನ್ನೋ ಆತಂಕದ ಬೆನ್ನಲ್ಲೇ ಇದೀಗ ಬಿಬಿಎಂಪಿ ಜನರಿಗೆ ಕಿರಿಕಿರಿ ಮಾಡೋಕೆ ಹೊರಟಂತೆ ಕಾಣುತ್ತಿದೆ. ಕೊರೊನಾ ಟೆಸ್ಟ್ (Corona Test) ಮಾಡದಿದ್ದರೂ ಮೊಬೈಲ್ಗೆ ಮೆಸೇಜ್ಗಳು ಬರೋಕೆ ಶುರುವಾಗಿದೆ. ಸ್ವಾಬ್ ಟೆಸ್ಟ್ ಗೆ ಕೊಡದಿದ್ದರೂ ಮೊಬೈಲ್ಗೆ ಮೆಸೇಜ್ಗಳು ಬರುತ್ತಿರುವುದು ಬೆಳಕಿಗೆ ಬಂದಿದೆ.

ಹೌದು. ಬೆಂಗಳೂರಿನ ಪ್ರಜ್ವಲ್ ಎಂಬವರ ಮೊಬೈಲ್ಗೆ ಮೆಸೇಜ್ವೊಂದು ಬಂದಿದ್ದು, ಕೊರೊನಾ ಟೆಸ್ಟ್ ರಿಪೋರ್ಟ್ ಬರುವವರೆಗೂ ಹೋಂ ಐಸೋಲೇಟ್ ಆಗುವಂತೆ ಸೂಚಿಸಲಾಗಿದೆ. ಆದರೆ ಸ್ವಾಬ್ ಟೆಸ್ಟ್ ಗೆ ಕೊಡದಿದ್ದರೂ ಮೆಸೇಜ್ ಬಂದಿದ್ದೇಗೆ…? ಅಂತ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಪ್ರಜ್ವಲ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಪ್ರತಿನಿಧಿ: ನಿಮಗೇನಾದರೂ ತೊಂದರೆ ಇದ್ಯಾ…?
ದೂರುದಾರ: ನಾನು ಆಫೀಸ್ನಲ್ಲಿದ್ದೇ ಒಂದು ಮೆಸೇಜ್ ಬಂತು. ಅದು ಟೆಸ್ಟ್ಗೆ ಕೊಟ್ಟಿರೋ ಮೆಸೇಜ್. ನಾನು ಯಾವುದೇ ಟೆಸ್ಟ್ ಗೆ ಕೊಟ್ಟಿಲ್ಲ. ನಾನು ಆಸ್ಪತ್ರೆಗೆ ಹೋಗಿಲ್ಲ. ಕೋವಿಡ್ ಮೆಸೇಜ್ ಬಂದಿದೆ. ನನಗೆ ಪಾಸಿಟಿವ್ ಅಂತ ಬಂದಿದೆ. ನನ್ನ ಮನೆ ಲಾಕ್ಡೌನ್ ಮಾಡಿದ್ರೆ ಇತರರಿಗೂ ತೊಂದರೆ ಆಗುತ್ತೆ. ನಾನು ಆರೋಗ್ಯವಾಗಿದ್ದರೂ, ಮೆಸೇಜ್ ಕ್ರಿಯೆಟ್ ಮಾಡಿ ಸರ್ಕಾರದವರು ದುಡ್ಡು ಮಾಡುತ್ತಿದ್ದಾರೆ. ಇದನ್ನೂ ಓದಿ: ಅಶ್ವಥ್ ನಾರಾಯಣನ ಮಂದಿರವಾದರೂ ಕಟ್ಟಲಿ ನಾವೇನೂ ಸಿಟ್ಟಾಗಲ್ಲ: ಡಿಕೆಶಿ

ಪ್ರತಿನಿಧಿ: ನೀವು ಟೆಸ್ಟ್ ಗೆ ಎಲ್ಲಿಯೂ ಹೋಗಿಯೇ ಇಲ್ವಾ…?
ದೂರುದಾರ: ಕೋವಿಡ್ (COVID 19) ಸಂದರ್ಭದಲ್ಲಿ ಅಂದರೆ 8 ತಿಂಗಳ ಹಿಂದೆ ಮಾಡಿಸಿದ್ದು, ಅದು ಬಿಟ್ಟರೆ ಮತ್ತೆ ಮಾಡಿಸಿಲ್ಲ. ಹಿಂದೆ ನಾನು ಟೆಸ್ಟ್ ಗೆ ಹೋಗಿದ್ದ ವೇಳೆ ನಂಬರ್ ಇಟ್ಟುಕೊಂಡು ಈಗ ಮೆಸೇಜ್ ಕಳುಹಿಸುವ ಮೂಲಕ ಸ್ಕ್ಯಾಮ್ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿನಿಧಿ: ಓಕೆ…ಓಕೆ…

ಪ್ರಜ್ವಲ್ಗೆ ಟೆಸ್ಟ್ ಓಟಿಪಿ (Corona Test OTP) ಕೂಡ ಬಂದಿಲ್ಲ. ಆದರೂ ಹೋಂ ಐಸೋಲೇಟ್ ಆಗಿ ಅಂತ ಮೆಸೇಜ್ ಬಂದಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ದೂರು ಕೊಡೋಕೆ ಕೂಡ ಪ್ರಜ್ವಲ್ ಮುಂದಾಗಿದ್ದಾರೆ. ಅಲ್ಲದೆ ಈ ಕುರಿತು ಸುಳಿವು ಕೂಡ ನೀಡಿದ್ದಾರೆ. ಒಟ್ಟಿನಲ್ಲಿ ಟೆಸ್ಟಿಂಗ್ ಟಾರ್ಗೆಟ್ ರೀಚ್ ಆಗಲು ಬಿಬಿಎಂಪಿ ಸಿಬ್ಬಂದಿ ಕಳ್ಳಾಟ ಆಡುತ್ತಿದ್ದಾರಾ…? ಅನ್ನೋ ಅನುಮಾನ ವ್ಯಕ್ತವಾಗಿದೆ. ಈ ರೀತಿಯಾಗಿದ್ರೆ ಜನರ ಜೀವ ಜೊತೆ ಚೆಲ್ಲಾಟವಾಡುತ್ತಿರೋರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಿದೆ.



ಕೊರೊನಾ ರಿಪೋರ್ಟ್ ನೆಗೆಟಿವ್ ಸ್ಟಿಂಗ್ ಆಪರೇಷನ್ ಸಂಬಂಧ ಆರೋಗ್ಯ ಸಚಿವ ಸುಧಾಕರ್ ಮಾತನಾಡಿ, ಮೊದಲು ಪಬ್ಲಿಕ್ ಟಿವಿ ವರದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪಬ್ಲಿಕ್ ಟಿವಿ ಸ್ಟಿಂಗ್ ನೋಡಿ ವೈದ್ಯನಾಗಿ ನನಗೆ ನೋವಾಗಿದೆ. ಕೆಳಹಂತದ ಆರೋಗ್ಯ ಇಲಾಖೆ ಅಧಿಕಾರಿಗಳು ಇಂತಹ ಕೆಲಸ ಮಾಡಿರೋದು ನೋವಾಗಿದೆ. ತಕ್ಷಣ ಬಿಬಿಎಂಪಿ ಆಯುಕ್ತರ ಕರೆ ಮಾಡಿ ಮಾಹಿತಿ ಪಡೆದಿದ್ದೇನೆ. ಜಂಟಿ ಆಯುಕ್ತರು ಸ್ಥಳದಲ್ಲಿ ಈಗಾಗಲೇ ಇದ್ದಾರೆ. ಘಟನೆಯ ಸಂಪೂರ್ಣ ವಿವರ ತೆಗೆದುಕೊಂಡು ತಕ್ಷಣ ಕ್ರಮ ತೆಗೆದುಕೊಳ್ತೀನಿ. ಪಬ್ಲಿಕ್ ಟಿವಿ ಅಭಿಯಾನಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.






