Tag: ಕೊರೊನಾ ಅಲೆ

  • ಕಡ್ಡಾಯ ಮಾಸ್ಕ್‌ ನಿಯಮ ಕೈಬಿಡಿ – ಸರ್ಕಾರಕ್ಕೆ ತಜ್ಞರ ಸಲಹೆ

    ಕಡ್ಡಾಯ ಮಾಸ್ಕ್‌ ನಿಯಮ ಕೈಬಿಡಿ – ಸರ್ಕಾರಕ್ಕೆ ತಜ್ಞರ ಸಲಹೆ

    ನವದೆಹಲಿ: ಮಾಸ್ಕ್‌ ಕಡ್ಡಾಯದ ನಿಯಮ ಕೈಬಿಡಬೇಕು ಎಂದು ಸಾಂಕ್ರಾಮಿಕ ರೋಗಗಳ ತಜ್ಞರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

    ಏಷ್ಯಾ ಮತ್ತು ಯುರೋಪ್‌ ದೇಶಗಳಲ್ಲಿ ಕೋವಿಡ್‌ ಏರಿಕೆ ಆಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರಗಳು ಕಟ್ಟೆಚ್ಚರ ವಹಿಸಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ಸೂಚನೆಯ ಬೆನ್ನಲ್ಲೇ ಸಾಂಕ್ರಾಮಿಕ ರೋಗಗಳ ತಜ್ಞರು ಅದಕ್ಕೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಮಾಸ್ಕ್‌ ಕಡ್ಡಾಯದ ನಿಯಮ ಕೈಬಿಡಬೇಕು. ಗಂಭೀರ ಅನಾರೋಗ್ಯವುಳ್ಳವರು ಮತ್ತು ವೃದ್ಧರು ಮಾತ್ರ ಮಾಸ್ಕ್‌ ಧರಿಸಲು ಸಲಹೆ ನೀಡಬೇಕು. ಲಸಿಕೆ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಸೋಲಿಸಲು 25 ವರ್ಷಗಳ ಬಳಿಕ ಒಂದಾದ ಸಹೋದರರು

    ದೆಹಲಿಯ ಏಮ್ಸ್‌ನ ಹಿರಿಯ ಸಾಂಕ್ರಾಮಿಕ ರೋಗಗಳ ತಜ್ಞ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಸಹಯೋಗದ ಕೋವ್ಯಾಕ್ಸಿನ್‌ ಲಸಿಕೆ ಪ್ರಯೋಗದ ಉಸ್ತುವಾರಿಯಾಗಿರುವ ಡಾ.ಸಂಜಯ್‌ ರಾಯ್‌, ಸಫ್ದರ್‌ಜಂಗ್‌ ಆಸ್ಪತ್ರೆಯ ಕಮ್ಯುನಿಟಿ ಮೆಡಿಸಿನ್‌ ವಿಭಾಗದ ಮುಖ್ಯಸ್ಥ ಡಾ.ಜುಗಲ್‌ ಕಿಶೋರ್‌, ಹಿರಿಯ ಸಾಂಕ್ರಾಮಿಕ ರೋಗಗಳ ತಜ್ಞ ಹಾಗೂ ಸಾರ್ವಜನಿಕ ಆರೋಗ್ಯ ತಜ್ಞ ಡಾ.ಚಂದ್ರಕಾಂತ್‌ ಲಹಾರಿಯಾ ಸೇರಿದಂತೆ ಕೆಲ ತಜ್ಞರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಬೇರೆ ದೇಶಗಳಲ್ಲಿ ಕೋವಿಡ್‌ ಹೆಚ್ಚಳವಾಗುತ್ತಿದೆ ಎಂದು ನಾವು ಭಯ ಪಡುವ ಅಗತ್ಯವಿಲ್ಲ. ಮುಂದೆ ಕೊರೊನಾ ಅಲೆಗಳು ಭಾರತಕ್ಕೆ ಬರುವ ಸಾಧ್ಯತೆ ಬಹಳ ಕಡಿಮೆ. ಭಾರತದಲ್ಲಿ ಶೇ.80ರಿಂದ ಶೇ.90ರಷ್ಟು ಜನರಿಗೆ ಕೋವಿಡ್‌ ಈಗಾಗಲೇ ಬಂದು ಹೋಗಿದೆ. ಹೀಗಾಗಿ ಅವರಲ್ಲಿ ನೈಸರ್ಗಿಕವಾಗಿ ಕೋವಿಡ್‌ ನಿರೋಧಕ ಶಕ್ತಿ ವೃದ್ಧಿಯಾಗಿದೆ. ನಮ್ಮ ದೇಶದಲ್ಲಿ ನಾವೇ ಅಭಿವೃದ್ಧಿ ಅಭಿವೃದ್ಧಿಪಡಿಸಿದ ಲಸಿಕೆಯನ್ನು ನೀಡಿದ್ದೇವೆ ಮತ್ತು ಬಹುತೇಕ ಎಲ್ಲರಿಗೂ ಲಸಿಕೆ ನೀಡಲಾಗಿದೆ. ಬೇರೆ ದೇಶಗಳನ್ನು ನೋಡಿಕೊಂಡು ನಮ್ಮಲ್ಲೂ ಹಾಗೇ ಆಗಬಹುದು ಎಂದು ಊಹೆ ಮಾಡುವುದು ಸರಿಯಲ್ಲ ಎಂದು ತಜ್ಞರು ಹೇಳಿದ್ದಾರೆ. ಇದನ್ನೂ ಓದಿ: ಭಾರತದ ವಿದೇಶಾಂಗ ನೀತಿಯನ್ನು ಹೊಗಳಿದ ಪಾಕ್ ಪ್ರಧಾನಿ

    ಬೇರೆ ರಾಷ್ಟ್ರಗಳಲ್ಲಿ ಸೋಂಕು ಏರಿಕೆ ಆಗುತ್ತಿರುವ ಕಾರಣಕ್ಕೆ ನಮ್ಮಲ್ಲೂ ಏರಿಕೆ ಆಗುತ್ತದೆ ಎಂದು ಊಹಿಸುವುದು ತಪ್ಪು. ಸದಾ ನಾವು ಹೆದರಿಕೆಯಲ್ಲಿ ಬದುಕುವುದು ಸರಿಯಲ್ಲ. ರಾಜ್ಯಗಳು ನಿರ್ಬಂಧ ಸಡಿಲಿಸುತ್ತಿರುವ ಪ್ರಕ್ರಿಯೆ ಮುಂದುವರಿಸಬೇಕು ಎಂದು ಐಸಿಎಂಆರ್‌ ಹೆಚ್ಚುವರಿ ನಿರ್ದೇಶಕ ಡಾ.ಸಮೀರಣ್‌ ಪಾಂಡಾ ತಿಳಿಸಿದ್ದಾರೆ.

    ಏಷ್ಯಾದ ಚೀನಾ, ದಕ್ಷಿಣ ಕೊರಿಯಾ, ಹಾಂಕಾಂಗ್‌ನಲ್ಲಿ ಕೊರೊನಾ ಸೋಂಕು ಭಾರೀ ಏರಿಕೆ ಕಾಣುತ್ತಿದೆ. ಯುರೋಪ್‌ ದೇಶಗಳ ಜೊತೆ ಅಮೆರಿಕದಲ್ಲೂ ಒಮಿಕ್ರಾನ್‌ ಅಬ್ಬರ ಜಾಸ್ತಿಯಾಗಿದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರ ಪರೀಕ್ಷೆ ಹೆಚ್ಚಿಸಬೇಕು ಮತ್ತು ಲಸಿಕೆ ಪ್ರಮಾಣವನ್ನು ಜಾಸ್ತಿ ಮಾಡಬೇಕು ಎಂದು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.