Tag: ಕೊಯಮತ್ತೂರು

  • ಬೆಂಗ್ಳೂರಿನಿಂದ ವಿಮಾನದಲ್ಲಿ ಕೊಯಮತ್ತೂರಿಗೆ ತೆರಳಿದ 6 ಮಂದಿಗೆ ಸೋಂಕು

    ಬೆಂಗ್ಳೂರಿನಿಂದ ವಿಮಾನದಲ್ಲಿ ಕೊಯಮತ್ತೂರಿಗೆ ತೆರಳಿದ 6 ಮಂದಿಗೆ ಸೋಂಕು

    ನವದೆಹಲಿ: ದೇಶದಲ್ಲಿ ದೇಶೀಯ ವಿಮಾನಯಾನ ಸೇವೆ ಪುನರಾರಂಭವಾದ ಬಳಿಕ ಕೋವಿಡ್-19 ಸೋಂಕಿಗೆ ತುತ್ತಾದ ಪ್ರಯಾಣಿಕರ ಸಂಖ್ಯೆ 23ಕ್ಕೇರಿದೆ.

    ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ್ದ 11 ಮಂದಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಬೆಂಗಳೂರಿನಿಂದ ಕೊಯಮತ್ತೂರಿಗೆ ಮೇ 26 ರಂದು ಆಗಮಿಸಿದ್ದ ವಿಮಾನದಲ್ಲಿ ಆರು ಮಂದಿ, ದೆಹಲಿಯಿಂದ ಜಮ್ಮುವಿಗೆ ಮೇ 27 ರಂದು ಆಗಮಿಸಿದ್ದ ಮೂವರು, ದೆಹಲಿಯಿಂದ ಕೊಯಮತ್ತೂರಿಗೆ ಮೇ 27 ಮಂದಿಗೆ ಆಗಮಿಸಿದ್ದ ಇಬ್ಬರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿರುವುದಾಗಿ ಇಂಡಿಗೋ ವಿಮಾನಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

    ಇದಕ್ಕೂ ಮುನ್ನ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ್ದ ಮೂವರ ವರದಿಯಲ್ಲೂ ಕೊರೊನಾ ಪಾಸಿಟಿವ್ ಆಗಮಿಸಿತ್ತು. ಈ ಹಿನ್ನೆಲೆಯಲ್ಲಿ ಮಾಹಿತಿ ನೀಡಿರುವ ವಿಮಾನಯಾನ ಸಂಸ್ಥೆ, ಎಲ್ಲಾ ಪ್ರಯಾಣಿಕರಿಗೂ ಫೇಸ್ ಮಾಸ್ಕ್, ಫೇಸ್ ಶೀಲ್ಡ್, ಗ್ಲೌಸ್ ಧರಿಸಿಯೇ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಎಲ್ಲಾ ವಿಮಾನಗಳನ್ನು ಪ್ರಯಾಣಿಕರಿಗೆ ಸೇವೆ ನೀಡಿದ ಬಳಿಕ ತಪ್ಪದೇ ನಿರಂತರವಾಗಿ ಸ್ಯಾನಿಟೈಸ್ ಮಾಡಿ ಮರುಸೇವೆ ನೀಡಲಾಗುತ್ತಿದೆ. ಅಲ್ಲದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದ ಸಿಬ್ಬಂದಿಗೆ 14 ದಿನಗಳ ಹೋ ಕ್ವಾರಂಟೈನ್ ಮಾಡಲಾಗುತ್ತಿದೆ. ಪ್ರಯಾಣಿಕರ ಸುರಕ್ಷತೆಯ ಉದ್ದೇಶದಿಂದ ಸರ್ಕಾರ ಎಲ್ಲಾ ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಗುತ್ತಿದೆ ಎಂದಿದ್ದಾರೆ.

    ದೇಶೀಯ ವಿಮಾನಯಾನ ಆರಂಭವಾದ ಬಳಿಕ ಮೇ 26 ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿತ್ತು. ಇಂಡಿಗೋ ವಿಮಾನದಲ್ಲಿ ಚೆನ್ನೈನಿಂದ ಕೊಯಮತ್ತೂರಿಗೆ ಮೇ 25 ರಂದು ವ್ಯಕ್ತಿ ಪ್ರಯಾಣ ಮಾಡಿದ್ದ. ಆ ಬಳಿಕ ಮೇ 25 ರಂದು ದೆಹಲಿಯಿಂದ ಲೂದಿಯಾನಕ್ಕೆ ಅಲೈಯನ್ಸ್ ಏರ್ ವಿಮಾನ(91837)ದಲ್ಲಿ ಪ್ರಯಾಣಿಸಿದ್ದ ವ್ಯಕ್ತಿಯ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ಈ ಎರಡು ವಿಮಾನದಲ್ಲಿ ಸೇವೆ ಸಲ್ಲಿಸಿದ್ದ ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.

    ಮೇ 27 ರಂದು ಸ್ಪೈಸ್ ಜೆಟ್ 8194 ವಿಮಾನದಲ್ಲಿ ಅಹಮಾಬಾದ್‍ನಿಂದ ದೆಹಲಿಗೆ ಹಾಗೂ ಮೇ 25 ರಂದು ಎಸ್‍ಜಿ 8152 ವಿಮಾನದಲ್ಲಿ ದೆಹಲಿಯಿಂದ ಗುವಾಹಟಿಗೆ ಪ್ರಯಾಣಿಸಿದ್ದ ಇಬ್ಬರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿತ್ತು. ಇಂಡಿಗೋ 6ಇ 7214 ವಿಮಾನದಲಿ ಬೆಂಗಳೂರಿನಿಂದ ಮಧುರೈಗೆ ಆಗಮಿಸಿದ್ದ ರೋಗ ಲಕ್ಷಣಗಳು ಕಂಡುಬಾರದ ವ್ಯಕ್ತಿಯ ವರದಿ ಕೊರೊನಾ ಪಾಸಿಟಿವ್ ಆಗಮಿಸಿತ್ತು.

    ಟ್ರೂಜೆಟ್ ಏರ್ ಲೈನ್ಸ್ ವಿಮಾನದಲ್ಲಿ ಚೆನ್ನೈನಿಂದ ಸೇಲಂಗೆ ಮೇ 27 ರಂದು ಪ್ರಯಾಣಿಸಿದ್ದ 6 ಮಂದಿಗೂ ಕೊರೊನಾ ಕಂಡು ಬಂದಿದೆ. ಈ ಕುರಿತು ಮಾಹಿತಿ ನೀಡಿರುವ ಏರ್ ಪ್ಯಾಸೆಂಜರ್ಸ್ ಅಸೋಸಿಯೇಶನ್ ಆಫ್ ಇಂಡಿಯಾದ ಅಧ್ಯಕ್ಷ ಡಿ ಸುಧಾಕರ ರೆಡ್ಡಿ, ಇದುವರೆಗೂ 23 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದೆ. ಎಲ್ಲಾ ಸುರಕ್ಷತಾ ವ್ಯವಸ್ಥೆ ಕೈಗೊಂಡ ಬಳಿಕವೂ ಪ್ರಕರಣಗಳು ಕಂಡು ಬಂದಿರುವುದು ದುರದೃಷ್ಟಕರ. ಇದು ನಮಗೆ ಮತ್ತೊಮ್ಮೆ ನಮ್ಮ ವ್ಯವಸ್ಥೆಯನ್ನು ಪುನರ್ ವಿಮರ್ಶೆ ಮಾಡಿ ಬದಲಾವಣೆ ತರುವ ಸಮಯ ಅನ್ನಿಸುತ್ತದೆ ಎಂದಿದ್ದಾರೆ.

    ಆರೋಗ್ಯ ಸೇತು ಮತ್ತು ಥರ್ಮಲ್ ಪರೀಕ್ಷೆಗಳು ಕೋವಿಡ್-19 ರೋಗಿಗಳನ್ನು ಗುರುತಿಸಲು ನಿರೀಕ್ಷಿತ ಸಹಕಾರಿ ಆಗಿಲ್ಲ ಎಂದು ಏರ್ ಇಂಡಿಯಾ ಮಾಜಿ ಕಾರ್ಯನಿರ್ವಾಹಕ ಜೀತಿಂದರ್ ಭಾರ್ಗವ್ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಮೊದಲ ನಾಲ್ಕು ದಿನಗಳ ಅವಧಿಯಲ್ಲಿ ಕಡಿಮೆ ಪ್ರಯಾಣಿಕರೊಂದಿಗೆ ವಿಮಾನಯಾನ ಆರಂಭವಾದರೂ ಕೋವಿಡ್ ಪ್ರಕರಣಗಳು ವರದಿಯಾಗಿರುವುದು ಮತ್ತಷ್ಟು ಪ್ರಯಾಣಿಕರು ವಿಮಾನ ಸಂಚಾರದಿಂದ ದೂರ ಉಳಿಯುವಂತೆ ಮಾಡಿದೆ. ಇದು ವಿಮಾನ ಪ್ರಯಾಣಿಕರ ಸಂಖ್ಯೆಯ ಮೇಲೆ ಪ್ರಭಾವ ಬೀರಲಿದೆ ಎಂದು ಹೇಳಿದ್ದಾರೆ. ಉಳಿದಂತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಗುರುವಾರ 50 ವಿಮಾನಗಳು 16 ನಗರಕ್ಕೆ ಸಂಚರಿಸಿದೆ. ಒಟ್ಟು 5,583 ಪ್ರಯಾಣಿಕರ ಪೈಕಿ 4,255 ಮಂದಿ ಪ್ರಯಾಣಿಸಿದ್ದಾರೆ.

  • ಕನ್ನಡ ಬಾವುಟ ತೆಗೆಯಿರಿ ಎಂದ ತಮಿಳರು- ಪ್ರಾಣ ಹೋದರು ತೆಗೆಯಲ್ಲ ಎಂದ ಕನ್ನಡಿಗರು

    ಕನ್ನಡ ಬಾವುಟ ತೆಗೆಯಿರಿ ಎಂದ ತಮಿಳರು- ಪ್ರಾಣ ಹೋದರು ತೆಗೆಯಲ್ಲ ಎಂದ ಕನ್ನಡಿಗರು

    ಮೈಸೂರು: ಮೈಸೂರು ಮತ್ತು ಚಾಮರಾಜನಗರದ ಕೆಲ ಯುವಕರು ತಮಿಳಿಗರ ದಾದಾಗಿರಿಗೆ ಅವರ ನೆಲದಲ್ಲೇ ನಿಂತು, ಅವರದ್ದೇ ಭಾಷೆಯಲ್ಲಿ ತಕ್ಕ ಉತ್ತರ ಕೊಟ್ಟು ಬಂದಿದ್ದಾರೆ.

    ತಮಿಳುನಾಡು ಪ್ರವಾಸಕ್ಕೆ ಹೋಗುವ ಕರ್ನಾಟಕದ ವಾಹನಗಳ ಮೇಲೆ ಕನ್ನಡ ಬಾವುಟ ಇರೋದು ಕಂಡರೆ ಸಾಕು ಕನ್ನಡಿಗರ ಮೇಲೆ ದೌರ್ಜನ್ಯ ಮಾಡಿ ಬಾವುಟ ಬಿಚ್ಚಿಸುವ ಪುಂಡಾಟಿಕೆ ತಮಿಳುನಾಡಿನಲ್ಲಿ ಜೋರಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸದ್ಯ ವಿಡಿಯೋವೊಂದು ಲಭ್ಯವಾಗಿದೆ. ವಾಹನದ ಮೇಲಿದ್ದ ಕನ್ನಡ ಬಾವುಟವನ್ನು ತೆಗೆಯುವಂತೆ ಒತ್ತಾಯ ಮಾಡಿವರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಮೈಸೂರು ಮತ್ತು ಚಾಮರಾಜನಗರದ ಕೆಲ ಯುವಕರು ತಮಿಳುನಾಡಿಗೆ ಪ್ರವಾಸಕ್ಕೆ ತೆರಳಿದ್ದು, ಈ ವೇಳೆ ಕೊಯಮತ್ತೂರಿನಲ್ಲಿ ಬೈಕ್‍ನಲ್ಲಿ ಬಂದ ಸ್ಥಳೀಯ ಯುವಕರು ಕಾರನ್ನು ಅಡ್ಡಗಟ್ಟಿದ್ದಾರೆ. ಆ ಬಳಿಕ ಕಾರಿನ ಮುಂಭಾಗ ಕಟ್ಟಿದ್ದ ಕನ್ನಡ ಬಾವುಟ ತೆಗೆಯುವಂತೆ ಗಲಾಟೆ ಮಾಡಿದ್ದಾರೆ.

    ತಮಿಳರ ಈ ವರ್ತನೆಗೆ ಅವರದ್ದೇ ಶೈಲಿಯಲ್ಲಿ ಉತ್ತರ ಕೊಟ್ಟಿರುವ ಕರ್ನಾಟಕ ಯುವಕರು, ಯಾವುದೇ ಕಾರಣಕ್ಕೂ ಬಾವುಟವನ್ನು ತೆಗೆಯುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಮತ್ತಷ್ಟು ಪಟ್ಟು ಹಿಡಿದ ತಮಿಳಿನ ಯುವಕರು ತೆಗೆಯಲೇ ಬೇಕು ಎಂದು ಮಾತಿನ ಚಕಮಕಿ ನಡೆಸಿದ್ದಾರೆ.

    ಕನ್ನಡ ಬಾವುಟ ಯಾವುದೇ ಕಾರಣಕ್ಕೆ ತೆಗೆಯುವುದಿಲ್ಲ ಎಂದು ತಮಿಳಿನಲ್ಲೇ ಎಚ್ಚರಿಸಿದ ಕನ್ನಡದ ಯುವಕರು, ಇಲ್ಲಿ ಬಾವುಟ ತೆಗೆಸಿದರೆ ಕರ್ನಾಟಕದಲ್ಲಿ ಬೇರೆ ಘಟನೆ ನಡೆಯುತ್ತದೆ. ನಮ್ಮ ಪ್ರಾಣ ಹೋದರು ಬಾವುಟ ತೆಗೆಯುವುದಿಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ. ಯಾವಾಗ ಕನ್ನಡಿಗ ಯುವಕರ ಪಟ್ಟು ಬಿಗಿಯಾಯಿತೋ ಆಗ ತಮಿಳು ಯುವಕರು ಅಲ್ಲಿಂದ ಮರು ಮಾತನಾಡದೆ ತೆರಳಿದ್ದಾರೆ.

  • ಓರ್ವ ವಿದ್ಯಾರ್ಥಿಗಾಗಿ ಪುನರಾರಂಭವಾಯ್ತು 76 ವರ್ಷದ ಹಳೆಯ ಶಾಲೆ

    ಓರ್ವ ವಿದ್ಯಾರ್ಥಿಗಾಗಿ ಪುನರಾರಂಭವಾಯ್ತು 76 ವರ್ಷದ ಹಳೆಯ ಶಾಲೆ

    ಕೊಯಂಬತ್ತೂರು: ಹತ್ತಾರು ವಿದ್ಯಾರ್ಥಿಗಳಿದ್ದರು ಅದೆಷ್ಟೋ ಶಾಲೆಗಳನ್ನು ಸರ್ಕಾರ ಮುಚ್ಚಿವೆ. ಆದರೆ ತಮಿಳುನಾಡಿದ ವಾಲ್‍ಪರೈನಲ್ಲಿರುವ ಚಿನ್ನಕಲ್ಲರ್ ನ 76 ವರ್ಷದ ಹಳೆದ ಶಾಲೆವೊಂದನ್ನು ಕೇವಲ ಒಂದೇ ಒಂದು ವಿದ್ಯಾರ್ಥಿಗಾಗಿ ಪುನರಾರಂಭಿಸಲಾಗಿದೆ.

    ಹೌದು. ಹತ್ತಾರು ಮಕ್ಕಳಿದ್ದರು ಮುಚ್ಚುವ ಈಗಿನ ಕಾಲದ ಶಾಲೆಗಳ ಮಧ್ಯೆ ಕೇವಲ ಒಂದು ವಿದ್ಯಾರ್ಥಿ ಶಾಲೆಯೊಂದು ಪುನರಾರಂಭವಾಗುವುದು ಎಲ್ಲೆಡೆ ಭಾರಿ ಸುದ್ದಿಯಾಗಿದೆ. 2017-18ರ ಶೈಕ್ಷಣಿಕ ವರ್ಷದಲ್ಲಿ ಒಂದು ಹುಡುಗಿಗೆ ಶಿಕ್ಷಣ ನೀಡಿದ ಬಳಿಕ ಈ ಶಾಲೆಗೆ ಮಕ್ಕಳು ದಾಖಲಾತಿ ಆಗದ ಕಾರಣಕ್ಕೆ ಶಾಲೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಆದರೆ ಈ ವರ್ಷ ಗ್ರಾಮದ ಟೀ ಎಸ್ಟೇಟ್‍ನಲ್ಲಿ ಕೆಲಸ ಮಾಡುವ ರಾಜೇಶ್ವರಿ ಅವರು ತನ್ನ ಮಗನನ್ನು ಈ ವರ್ಷ ಶಾಲೆಗೆ ಸೇರಿಸಿದ್ದಾರೆ. ಶಿವ(6) ಓರ್ವನಿಗಾಗಿ ಈ ಶಾಲೆ ಸಿಬ್ಬಂದಿಗಳು ಮತ್ತೆ ಶಾಲೆ ಬಾಗಿಲು ತೆರೆದಿದ್ದಾರೆ.

    ಮನೆಯಿಂದ ನಾಲ್ಕು ಕಿ.ಮೀ ದೂರವಿರುವ ಪರಿಯಕಲ್ಲರ್ ಶಾಲೆಗೆ ಮಗನನ್ನು ಕಳುಹಿಸಲು ಕಷ್ಟವಾಗುತ್ತದೆ ಎಂದು ಮಹಿಳೆ ತಮ್ಮ ಮನೆಗೆ ಹತ್ತಿರವಿರುವ ಚಿನ್ನಕಲ್ಲರ್ ಶಾಲೆಯನ್ನು ಮತ್ತೆ ತನ್ನ ಮಗನಿಗಾಗಿ ತೆರೆಯುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದರು. ತಾಯಿಯ ಮನವಿಗೆ ಮಣಿದ ಶಿಕ್ಷಣ ಅಧಿಕಾರಿಗಳು, ಓರ್ವ ವಿದ್ಯಾರ್ಥಿಗಾಗಿ ಶಾಲೆಯನ್ನು ಮತ್ತೆ ಆರಂಭಿಸಿದ್ದಾರೆ.

    ಸದ್ಯ ಸೋಮವಾರದಂದು ಶಿವ 1ನೇ ತರಗತಿಗೆ ದಾಖಲಾತಿ ಪಡೆದಿದ್ದಾನೆ. ಮಗುವಿಗೆ ಅಗತ್ಯ ಶಿಕ್ಷಣ ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಈ ಹಿಂದೆ ಇಲಾಖೆ ಶಾಲೆಯನ್ನು ಪುನರಾರಂಭಿಸಲು ವಿಶೇಷ ಪ್ರಯತ್ನಗಳನ್ನೂ ಮಾಡಿತ್ತು. ಆದರೆ ಶೂನ್ಯ ದಾಖಲಾತಿಯ ಕಾರಣ ಕಳೆದ ವರ್ಷ ಮುಖ್ಯ ಶಿಕ್ಷಕರು ಸೇರಿದಂತೆ ಎಲ್ಲಾ ಸಿಬ್ಬಂದಿಯನ್ನು ಬೇರೊಂದು ಶಾಲೆಗೆ ವರ್ಗಾವಣೆ ಮಾಡಲಾಗಿತ್ತು ಎಂದು ಪೆರಿಯಕಲ್ಲರ್ ಶಾಲೆ ಮುಖ್ಯ ಶಿಕ್ಷಕ ಶಕ್ತಿವೇಲ್ ಹೇಳಿದ್ದಾರೆ.

    1943ರಲ್ಲಿ ಎಸ್ಟೇಟ್‍ನಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಮಕ್ಕಳು ಹಾಗೂ ಸ್ಥಳೀಯ ಮಕ್ಕಳಿಗೆ ಶಿಕ್ಷಣ ನೀಡಲು ಈ ಶಾಲೆ ಆರಂಭಿಸಲಾಗಿತ್ತು. ಆಗ ಈ ಸ್ಥಳದಲ್ಲಿ 300ಕ್ಕೂ ಅಧಿಕ ಕಾರ್ಮಿಕರ ಕುಟುಂಬಗಳು ವಾಸವಾಗಿದ್ದವು. ಆದ್ದರಿಂದ 70 ವರ್ಷಗಳ ಕಾಲ ಶಾಲೆ ಸರಿಯಾಗಿ ನಡೆದಿತ್ತು. ಅಲ್ಲದೆ ಪ್ರತಿ ವರ್ಷ 50ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದರು. ಆದರೆ ಕೆಲ ವರ್ಷಗಳಿಂದ ಕೂಲಿ ಕಾರ್ಮಿಕರು ವಲಸೆ ಹೋಗಲು ಆರಂಭಿಸಿದ ಬಳಿಕ ಶಾಲೆ ತನ್ನ ಅಸ್ತಿತ್ವ ಕಳೆದುಕೊಂಡಿತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

    ದಟ್ಟ ಅರಣ್ಯದಿಂದ ಕೂಡಿರುವ ಚಿನ್ನಕಲ್ಲರ್ ಪ್ರದೇಶದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. 2017-18ರಲ್ಲಿ ದಾಖಲಾಗಿದ್ದ ಓರ್ವ ವಿದ್ಯಾರ್ಥಿನಿಗಾಗಿ ಅಧ್ಯಾಪಕ ಹಾಗೂ ಮುಖ್ಯ ಶಿಕ್ಷಕರನ್ನು ನೇಮಿಸಲಾಗಿತ್ತು. ಆ ಬಳಿಕ ಶಾಲೆಯ ಸುತ್ತಾಮುತ್ತಾ ಆನೆಗಳ ಹಾವಳಿ ಹೆಚ್ಚಾಗುತ್ತಿದಂತೆ ಮಕ್ಕಳು ಶಾಲೆಯತ್ತ ಬರಲು ಹೆದರಿದರು. ಶಾಲೆಯ ಗಾಜು, ಬಾಗಿಲುಗಳೂ ಆನೆ ದಾಳಿಗೆ ಹಾನಿಯಾಗಿದ್ದವು. ಅಲ್ಲದೆ ಪ್ರದೇಶದಲ್ಲಿ ಆನೆ ಸೇರಿ ಇನ್ನಿತರ ಪ್ರಾಣಿಗಳು ಇಲ್ಲಿ ವಾಸವಾಗಿದ್ದ ಜನರ ಮೇಲೆ ದಾಳಿ ಮಾಡುವ ಪ್ರಕರಣ ಹೆಚ್ಚಾಗುತ್ತಿದ್ದಂತೆ ಜನರು ಇಲ್ಲಿಂದ ವಲಸೆ ಹೋಗಲು ಶುರುಮಾಡಿದರು. ಹೀಗಾಗಿ ಸದ್ಯ ಈ ಪ್ರದೇಶದಲ್ಲಿ ಕೇವಲ 15 ಕುಟುಂಬಗಳು ಮಾತ್ರ ವಾಸವಾಗಿದೆ ಎಂದು ಅಧಿಕಾರಿಗಳು ಮಾಹಿತಿ ಕೊಟ್ಟರು.

    ಬಳಿಕ ಮಾತನಾಡುತ್ತ, ಇತ್ತೀಚಿಗೆ ಇಲ್ಲಿ ಆನೆ ದಾಳಿ ನಡೆಸಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ. ಆದರೆ ಗ್ರಾಮಸ್ಥರಲ್ಲಿ ಇನ್ನೂ ಕಾಡು ಪ್ರಾಣಿಗಳ ಭಯ ಇದೆ. ಅಲ್ಲದೆ ಶಿವನನ್ನು ಪೆರಿಯಕಲ್ಲರ್ ಶಾಲೆಗೆ ಕಳಿಸುವ ಬಗ್ಗೆ ತಾಯಿಯ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ. ಒಂದು ವೇಳೆ ಅವರು ಒಪ್ಪಿದರೆ ಈ ಶಾಲೆ ಮತ್ತೆ ಮುಚ್ಚಲಿದೆ ಎಂದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ದಾಳಿ ಮಾಡಿದ್ದು ನಿಜ, ಹೆಣಗಳನ್ನು ಲೆಕ್ಕ ಹಾಕುವುದು ನಮ್ಮ ಕೆಲ್ಸವಲ್ಲ: ಏರ್ ಚೀಫ್ ಮಾರ್ಷಲ್

    ದಾಳಿ ಮಾಡಿದ್ದು ನಿಜ, ಹೆಣಗಳನ್ನು ಲೆಕ್ಕ ಹಾಕುವುದು ನಮ್ಮ ಕೆಲ್ಸವಲ್ಲ: ಏರ್ ಚೀಫ್ ಮಾರ್ಷಲ್

    ಕೊಯಮತ್ತೂರು: ಬಾಲಕೋಟ್ ಮೇಲಿನ ಏರ್ ಸ್ಟ್ರೈಕ್ ನಡೆಸಿದ ಬಗ್ಗೆ ಎದ್ದ ಪ್ರಶ್ನೆಗಳಿಗೆ ವಾಯುಸೇವೆ ಮುಖ್ಯಸ್ಥ ಬಿ.ಎಸ್ ಧನೋವಾ ಕೊಯಮತ್ತೂರಲ್ಲಿ ಸುದ್ದಿಗೋಷ್ಠಿ ನಡೆಸಿ ಉತ್ತರ ನೀಡಿದ್ದಾರೆ.

    ಏರ್ ಸ್ಟ್ರೈಕ್ ನಡೆದ ಬಳಿಕ ಎಷ್ಟು ಉಗ್ರರು ಹತ್ಯೆಯಾಗಿದ್ದಾರೆ ಸಾಕ್ಷ್ಯ ನೀಡಿ ಎಂದಿದ್ದ ಪ್ರತಿಪಕ್ಷಗಳಿಗೆ ಉತ್ತರ ಎನ್ನುವಂತೆ ಬಿ. ಎಸ್ ಧನೋವಾ ಅವರು, ನೀಡಿದ್ದ ಗುರಿಗಳನ್ನು ವಾಯುಸೇನೆ ಹೊಡೆದು ಹಾಕಿದ್ದು ನಿಜ. ಆದರೆ ಹೆಣಗಳನ್ನು ಲೆಕ್ಕ ಹಾಕುವುದು ನಮ್ಮ ಕೆಲಸವಲ್ಲ. ಕಾಡಿನಲ್ಲಿ ಬಾಂಬ್ ಹಾಕುವ ಅಗತ್ಯ ನಮಗೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ.

    ನಮಗೆ ಏನು ಗುರಿ ನೀಡಲಾಗಿತ್ತೋ ಆ ಗುರಿಯನ್ನು ಹೊಡೆದಿದ್ದೇವೆ. ಅರಣ್ಯದಲ್ಲಿ ಬಾಂಬ್ ಹಾಕಿದ್ದರೆ ಪಾಕಿಸ್ತಾನ ಯಾಕೆ ನಮ್ಮ ಮೇಲೆ ದಾಳಿ ನಡೆಸಬೇಕಿತ್ತು. ಅವರ ಪ್ರಧಾನಿ ಏಕೆ ಪ್ರತಿಕ್ರಿಯೆ ನೀಡುತ್ತಿದ್ದರು ಎಂದು ಪ್ರಶ್ನಿಸಿದರು.

    ನೀಡಿದ್ದ ಗುರಿ ಸರಿಯಾಗಿ ದಾಳಿ ಮಾಡಿದ್ದೇವಾ ಇಲ್ಲವೋ ಎನ್ನುವುದು ಮಾತ್ರ ನಮ್ಮ ಕೆಲಸ. ಅದನ್ನು ಹೊರತು ಪಡಿಸಿ ಹೆಣಗಳನ್ನು ಲೆಕ್ಕ ಹಾಕುವುದು ನಮ್ಮ ಕೆಲಸವಲ್ಲ. ಆ ಕೆಲಸ ಏನಿದ್ದರೂ ಸರ್ಕಾರ ಮಾಡುತ್ತದೆ ಎಂದರು.

    ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಬಗ್ಗೆ ಮಾತನಾಡಿ, ಅಭಿನಂದನ್ ಅವರ ಆರೋಗ್ಯ ಸ್ಥಿತಿ ನೋಡಿ ಅವರು ಮತ್ತೆ ಕೆಲಸಕ್ಕೆ ಹಾಜರಾಗಬಹುದಾ ಇಲ್ಲವಾ ಎಂಬುದು ತಿಳಿಯಲಿದೆ. ಅವರು ಸಂಪೂರ್ಣವಾಗಿ ಫಿಟ್ ಆಗಿದ್ದರೆ ಅವರು ಪೈಲಟ್ ಆಗಿ ಮುಂದುವರಿಯಬಹುದು ಎಂದು ಹೇಳಿದರು.

    ನಾವು ದಾಳಿಗೆ ಸಿದ್ಧರಾದಾಗ ಯಾವ ವಿಮಾನ ಬೇಕು ಯಾವುದು ಬೇಡ ಎನ್ನುವುದನ್ನು ಪ್ಲಾನ್ ಮಾಡುತ್ತೇವೆ. ಶತ್ರುಗಳು ನಮ್ಮ ಮೇಲೆ ಬಂದಾಗ ಯಾವ ವಿಮಾನವನ್ನು ಕಳುಹಿಸಬೇಕು ಎನ್ನುವುದನ್ನು ನಾವು ಪ್ಲಾನ್ ಮಾಡಲು ಸಾಧ್ಯವಿಲ್ಲ. ನಮ್ಮ ಬಳಿ ಇರುವ ಎಲ್ಲ ವಿಮಾನಗಳು ಶತ್ರುಗಳನ್ನು ನಾಶ ಮಾಡುವ ಸಾಮಥ್ರ್ಯವನ್ನು ಹೊಂದಿದೆ ಎಂದರು.

    ನಮ್ಮ ಮಿಗ್-21 ಜೆಟ್ ಯುದ್ಧ ವಿಮಾನ ಸಮರ್ಥವಾಗಿದೆ. ಮಿಗ್-21 ಅದ್ಭುತವಾದ ಏರ್‍ಕ್ರಾಫ್ಟ್. ಈ ಯುದ್ಧ ವಿಮಾನವನ್ನು ಅಪ್‍ಗ್ರೇಡ್ ಮಾಡಲಾಗಿದೆ. ಈ ವಿಮಾನದಲ್ಲಿ ಅದ್ಭುತವಾದ ರಡಾರ್ ಇದೆ ಹಾಗೂ ಏರ್ ಟು ಏರ್ ಮಿಸೈಲ್ ವೆಪನ್ ಸಿಸ್ಟಮ್ ಇದೆ ಎಂದು ತಿಳಿಸಿದ್ದಾರೆ.

    ಪ್ರಸ್ತುತ ಗಡಿಯಲ್ಲಿ ನಡೆಯುತ್ತಿರುವ ಪರಿಸ್ಥಿತಿಯ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಉತ್ತರಿಸಿದರು.

    ನಮ್ಮ ವಿರುದ್ಧ ಮಾಡಿದ ದಾಳಿ ವೇಳೆ ಅವರು ಎಫ್ 16 ವಿಮಾನವನ್ನು ಬಳಸಿದ್ದಾರೆ. ಯಾಕೆಂದರೆ ಎಫ್ 16 ನಲ್ಲಿ ಬಳಸುವ ಎಎಂಆರ್‍ಎಎಎಂ ಕ್ಷಿಪಣಿ ನಮ್ಮ ಭೂ ಪ್ರದೇಶದಲ್ಲಿ ಬಿದ್ದಿದೆ. ಅವರ ಎಫ್ 16 ವಿಮಾನವನ್ನು ನಾವು ಹೊಡೆದು ಹಾಕಿದ್ದೇವೆ ಎಂದು ತಿಳಿಸಿದರು.

    ಅಮೆರಿಕ ಮತ್ತು ಪಾಕಿಸ್ತಾನ ಮಧ್ಯೆ ಯಾವ ರೀತಿಯ ಒಪ್ಪಂದ ನಡೆದಿದೆ ಎನ್ನುವುದು ಗೊತ್ತಿಲ್ಲ. ಬೇರೆ ದೇಶದ ವಿರುದ್ಧದ ಎಫ್ 16 ಬಳಕೆ ಮಾಡಬಾರದು ಎನ್ನುವ ಒಪ್ಪಂದ ಇದ್ದರೆ ಪಾಕಿಸ್ತಾನ ಉಲ್ಲಂಘನೆ ಮಾಡಿದೆ ಎಂದು ಹೇಳಬಹುದು ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗಳೂರು ಏರೋಸ್ಪೇಸ್‍ನಲ್ಲಿ ತಪ್ಪಿತು ದುರಂತ: ಎರಡು ಇಂಡಿಗೋ ವಿಮಾನಗಳು ಪಾರಾಗಿದ್ದು ಹೇಗೆ?

    ಬೆಂಗಳೂರು ಏರೋಸ್ಪೇಸ್‍ನಲ್ಲಿ ತಪ್ಪಿತು ದುರಂತ: ಎರಡು ಇಂಡಿಗೋ ವಿಮಾನಗಳು ಪಾರಾಗಿದ್ದು ಹೇಗೆ?

    ಬೆಂಗಳೂರು: ಹಾರಾಟದ ವೇಳೆ ಬೆಂಗಳೂರು ಏರೋಸ್ಪೇಸ್ ನಲ್ಲಿ ಎರಡು ವಿಮಾನಗಳ ಮಧ್ಯೆ ಸಂಭವಿಸಬಹುದಾಗಿದ್ದ ಡಿಕ್ಕಿ ಕೆಲವೇ ಅಂತರದಲ್ಲಿ ತಪ್ಪಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಜುಲೈ 10 ರಂದು ಇಂಡಿಗೋ ಸಂಸ್ಥೆಯ ಎರಡು ವಿಮಾನಗಳು ಕೇವಲ 200 ಅಡಿ ಅಂತರದಲ್ಲಿ ಹಾರಾಟ ನಡೆಸಿತ್ತು. ಒಂದು ವೇಳೆ ಮುಖಾಮುಖಿ ಡಿಕ್ಕಿಯಾಗಿದ್ದರೆ ಹೈದರಾಬಾದಿಗೆ ಹೊರಟಿದ್ದ ವಿಮಾನದಲ್ಲಿದ್ದ 162 ಜನ ಹಾಗೂ ಹಾಗೂ ಕೊಚ್ಚಿಗೆ ತೆರಳುತ್ತಿದ್ದ ವಿಮಾನದಲ್ಲಿದ್ದ 166 ಪ್ರಯಾಣಿಕರ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿತ್ತು.

    ನಡೆದದ್ದು ಏನು?
    6ಇ-779 ಇಂಡಿಗೋ ವಿಮಾನವು ಕೊಯಮತ್ತೂರಿನಿಂದ ಹೈದ್ರಾಬಾದ್‍ಗೆ ಹೊರಟಿತ್ತು. ಅದೇ ಸಮಯದಲ್ಲಿ 6ಇ-6505 ವಿಮಾನವು ಬೆಂಗಳೂರಿನಿಂದ ಕೊಚ್ಚಿಗೆ ಪ್ರಯಾಣ ಬೆಳೆಸಿತ್ತು. ಎರಡು ವಿಮಾನಗಳು ಪರಸ್ಪರ ಮುಖಾಮುಖಿಯಾಗಿ ಡಿಕ್ಕಿ ಹೊಡೆಯುವ ಸಂಭವವನ್ನು ಅರಿತ ಸಂಚಾರ ಡಿಕ್ಕಿ ತಪ್ಪಿಸುವ ವ್ಯವಸ್ಥೆ(ಟಿಸಿಎಎಸ್) ಎಚ್ಚರಿಕೆಯ ಸಿಗ್ನಲ್ ರವಾನಿಸಿದೆ. ಅಪಾಯದ ಸಿಗ್ನಲ್ ಬಂದ ಕೂಡಲೇ ವಿಮಾನಗಳ ಹಾರಾಟದ ಎತ್ತರವನ್ನು ಬದಲಾಯಿಸಲಾಗಿದೆ ಎಂದು ಇಂಡಿಗೋ ಏರ್ ಲೈನ್ಸ್ ಹೇಳಿದೆ.

    ಹೈದರಾಬಾದಿಗೆ ಹೊರಟಿದ್ದ ವಿಮಾನವು 36,000 ಅಡಿ ಅಂತರದಲ್ಲಿ ಹಾರಬೇಕಿದ್ದರೆ, ಕೊಚ್ಚಿಗೆ ಹೊರಟಿದ್ದ ವಿಮಾನ 28,000 ಅಡಿ ಎತ್ತರದಲ್ಲಿರಬೇಕಿತ್ತು. ಆದರೆ ಈ ವಿಮಾನಗಳು ಅನುಕ್ರಮವಾಗಿ 27,300 ಅಡಿ ಮತ್ತು 27,500 ಅಡಿ ಎತ್ತರದಲ್ಲಿ ಹಾರಾಟ ನಡೆಸುತಿತ್ತು. 8 ಕಿ.ಮೀ ದೂರದಲ್ಲಿದ್ದಾಗ ವಿಮಾನಗಳ ಕಾಕ್‍ಪಿಟ್ ಗೆ ಎಚ್ಚರಿಕೆ ಸಿಗ್ನಲ್ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಮಾನ ಅಪಘಾತ ತನಿಖಾ ಮಂಡಳಿ(ಎಎಐಬಿ) ತನಿಖೆ ಆರಂಭಿಸಿದೆ.

    ಏನಿದು ಟಿಸಿಎಎಸ್?
    ಹಾರಾಟದ ಸಂದರ್ಭದಲ್ಲಿ ಎರಡು ವಿಮಾನಗಳ ಮಧ್ಯೆ ಸಂಭವಿಸಬಹುದಾದ ಡಿಕ್ಕಿಯನ್ನು ತಪ್ಪಿಸಲು ಸಂಚಾರ ಡಿಕ್ಕಿ ತಪ್ಪಿಸುವ ವ್ಯವಸ್ಥೆ(ಟಿಸಿಎಎಸ್) ಬಳಸಲಾಗುತ್ತದೆ. ಕಡಿಮೆ ಅಂತರದಲ್ಲಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಎರಡು ವಿಮಾನಗಳು ಹಾರಾಟ ನಡೆಸುತ್ತಿದ್ದರೆ ಟಿಸಿಎಎಸ್ ನಲ್ಲಿರುವ ಟ್ರಾನ್ಸ್ಪಾಂಡರ್ ಸಿಗ್ನಲ್‍ಗಳನ್ನು ಆಧಾರಿಸಿ ಕಾಕ್‍ಪಿಟ್ ನಲ್ಲಿ ಸ್ವಯಂಚಾಲಿತವಾಗಿ ಧ್ವನಿ ಸಂದೇಶ ನೀಡುತ್ತದೆ. ಎಚ್ಚರಿಕೆಯ ಸಂದೇಶ ಹೇಗಿರುತ್ತದೆ ಎಂದರೆ ಒಂದು ವಿಮಾನದ ಕಾಕ್‍ಪಿಟ್‍ಗೆ “ಮತ್ತಷ್ಟು ಎತ್ತರಕ್ಕೆ ಹೋಗಿ” ಎನ್ನುವ ಎಚ್ಚರಿಕೆ ನೀಡಿದರೆ ಇನ್ನೊಂದು ವಿಮಾನಕ್ಕೆ “ಎತ್ತರವನ್ನು ತಗ್ಗಿಸಿ” ಎನ್ನುವ ಧ್ವನಿ ಸಂದೇಶವನ್ನು ನೀಡುತ್ತದೆ. ಈ ಸಂದೇಶ ಅನುಸಾರ ಪೈಲಟ್‍ಗಳು ವಿಮಾನ ಎತ್ತರವನ್ನು ಏರಿಸಿ/ತಗ್ಗಿಸುವ ಮೂಲಕ ಡಿಕ್ಕಿಯನ್ನು ತಪ್ಪಿಸುತ್ತಾರೆ.

    ಪರಸ್ಪರ ಡಿಕ್ಕಿಯಾಗುವ ಬಗ್ಗೆ ಟಿಸಿಎಎಸ್ ಸಂದೇಶ ಮೊಳಗಿಸುವುದು ಇದೇ ಮೊದಲೆನಲ್ಲ. ಈ ಜನವರಿಯಲ್ಲಿ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳು ಪರಸ್ಪರ ಮುಖಾಮುಖಿಯಾಗಿತ್ತು.

  • ಹೆಲ್ಮೆಟ್ ಹಾಕಿ ಬಸ್ ಚಲಾಯಿಸಿದ ಚಾಲಕ- ಕಾರಣ ಕೇಳಿದ್ರೆ ನಿಮಗೆ ಇಷ್ಟವಾಗುತ್ತೆ

    ಹೆಲ್ಮೆಟ್ ಹಾಕಿ ಬಸ್ ಚಲಾಯಿಸಿದ ಚಾಲಕ- ಕಾರಣ ಕೇಳಿದ್ರೆ ನಿಮಗೆ ಇಷ್ಟವಾಗುತ್ತೆ

    ಚೆನ್ನೈ: ಚಾಲಕರೊಬ್ಬರು ಹೆಲ್ಮೆಟ್ ಧರಿಸಿ ಬಸ್ ಚಲಾಯಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಬಸ್ ಚಾಲಕನನ್ನು ಶಿವಕುಮಾರ್ ಎಂದು ಗುರುತಿಸಲಾಗಿದೆ. ಬಸ್ ಕೊಯಮತ್ತೂರಿನಿಂದ ಈರೋಡ್ ಕಡೆ ಸಂಚರಿಸುತ್ತಿತ್ತು. ಈ ಬಸ್ ನಲ್ಲಿ ಇದೇ ಮೊದಲ ಬಾರಿಗೆ ಬಸ್ ಚಾಲಕ ಹೆಲ್ಮೆಟ್ ಧರಿಸಿ ಬಸ್ ಚಲಾಯಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಸಿಬ್ಬಂದಿಗೂ ಐಎಸ್‍ಐ ಹೆಲ್ಮೆಟ್ ಕಡ್ಡಾಯ- ಮೈಸೂರು ಪೊಲೀಸ್ ಆಯುಕ್ತರಿಂದ ಸುತ್ತೋಲೆ

    ಹೆಲ್ಮೆಟ್ ಧರಿಸಲು ಕಾರಣವೇನು?
    ತಮಿಳುನಾಡು ಸಾರಿಗೆ ಇಲಾಖೆಯ ಸಿಬ್ಬಂದಿ ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ನಡೆಸುತ್ತಿದ್ದು, ಈ ಪ್ರತಿಭಟನೆ ಮಂಗಳವಾರ ಐದನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಯಿಂದಾಗಿ ಕೊಯಮತ್ತೂರು ಪ್ರಯಾಣಿಕರು ಬಸ್ ಗಾಗಿ ಕಾದು ಸುಸ್ತಾಗಿದ್ದರು. ಕೊನೆಗೊಂದು ಬಸ್ ಬಂತು. ಆ ಬಸ್ ನಲ್ಲಿ ಜನವಿಲ್ಲದ ಕಾರಣ ಪ್ರಯಾಣಿಕರು ಬೇಗ ಬೇಗ ಹತ್ತಿ ಸೀಟ್ ನಲ್ಲಿ ಕುಳಿತುಕೊಂಡ್ರು. ಇದನ್ನೂ ಓದಿ: ಕೈಗೆ ಸಿಕ್ಕ ಹೆಲ್ಮೆಟ್ ಹಾಕೊಂಡು ಪೊಲೀಸರಿಂದ ಬಚಾವಾದ್ರೆ ಸಾಕು ಅಂತಿದ್ರೆ ನೀವು ಈ ಸುದ್ದಿ ಓದ್ಲೇಬೇಕು

    ಈ ವೇಳೆ ಬಸ್ ಚಾಲಕ ಹೆಲ್ಮೆಟ್ ಹಾಕಿರುವುದು ಕೆಲ ಮಂದಿಯ ಗಮನಕ್ಕೆ ಬಂದಿದೆ. ಕೂಡಲೇ ಅದರಲ್ಲೊಬ್ಬ ಪ್ರಯಾಣಿಕ ಚಾಲಕನ ಹತ್ತಿರ ಹೋಗಿ ಯಾಕೆ ಹೆಲ್ಮೆಟ್ ಧರಿಸಿದ್ದೀರಿ ಎಂದು ಕೇಳಿದ್ದಾನೆ. ಈ ವೇಳೆ ಚಾಲಕ ಸಾರಿಗೆ ನೌಕರರು ಎಲ್ಲರೂ ಪ್ರತಿಭಟನೆ ನಡೆಸುತ್ತಿದ್ದಾರೆ. ನಾನು ಮಾತ್ರ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ನಾನು ಅವರಿಗೆ ಟಾರ್ಗೆಟ್ ಆಗಬಾರದೆಂದು, ನನ್ನ ರಕ್ಷಣೆಗೋಸ್ಕರ ನಾನು ಹೆಲ್ಮೆಟ್ ಹಾಕ್ಕೊಂಡು ಕೆಲಸ ಮಾಡುತ್ತಿದ್ದೇನೆ ಅಂತ ಹೇಳಿದ್ದಾರೆ. ಚಾಲಕನ ಒಳ್ಳೆಯತನದ ಗುಣಕ್ಕೆ ಬಸ್ ನಲ್ಲಿದ್ದ ಪ್ರಯಾಣಿಕರು ಕೃತಜ್ಞತೆ ಸಲ್ಲಿಸಿದ್ದಾರೆ.

     

    https://youtu.be/5-2to324ssU

  • 8 ಮದುವೆ ಮಾಡಿಕೊಂಡು 4.5 ಕೋಟಿ ರೂ. ವಂಚಿಸಿದ ಉದ್ಯಮಿ

    8 ಮದುವೆ ಮಾಡಿಕೊಂಡು 4.5 ಕೋಟಿ ರೂ. ವಂಚಿಸಿದ ಉದ್ಯಮಿ

    ಕೊಯಮತ್ತೂರು: ಸಾರಿಗೆ ಉದ್ಯಮಿಯೊಬ್ಬ ಎಂಟು ಮದುವೆಯಾಗಿ ಸುಮಾರು 4.5 ಕೋಟಿ ರೂ. ಹಣದೊಂದಿಗೆ ಪರಾರಿಯಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಚೆನ್ನೈನ ಕಾಲೇಜೊಂದರಲ್ಲಿ ಪ್ರಾಧ್ಯಾಪಕಿಯಾಗಿರುವ ಇಂದಿರಾ ಗಾಂಧಿ ಎಂಬವರು ಈ ಕುರಿತು ದೂರು ನೀಡಿದ ಬಳಿಕ ಉದ್ಯಮಿಯ ನಿಜ ಬಣ್ಣ ಈಗ ಬೆಳಕಿಗೆ ಬಂದಿದೆ.

    ಇತ್ತೀಚೆಗಷ್ಟೇ 57 ವರ್ಷದ ಪುರುಷೋತ್ತಮ್ ಎಂಬಾತನನ್ನು ಇಂದಿರಾ ಗಾಂಧಿ ಎಂಬವರು ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಬಳಿಕ ಇಂದಿರಾ ತಮ್ಮ ಹೆಸರಿನಲ್ಲಿ ಚೆನ್ನೈನಲ್ಲಿರುವ ಬಂಗಲೆಯೊಂದನ್ನು ಮಾರಾಟ ಮಾಡಿ ಕೊಯಮತ್ತೂರ್ ನಲ್ಲಿ ಜೀವನ ಸಾಗಿಸುವ ಆಸೆಯನ್ನು ತಮ್ಮ ಪತಿ ಪುರುಷೋತ್ತಮ್ ಬಳಿ ಹಂಚಿಕೊಂಡಿದ್ದರು. ಆದರೆ ಮನೆ ಮಾರಾಟ ಮಾಡಿದ ಬಳಿಕ ಬಂದ 1.5 ಕೋಟಿ ಹಣದೊಂದಿಗೆ ಪುರುಷೋತ್ತಮ್ ಪರಾರಿಯಾಗಿದ್ದಾನೆ.

    ಈ ವಿಚಾರ ತಿಳಿದ ಇಂದಿರಾ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಪುರುಷೋತ್ತಮ್ ಇತಿಹಾಸ ಕಂಡು ಬೆಚ್ಚಿಬಿದ್ದಿದ್ದಾರೆ. ಈತ ಇಂದಿರಾರನ್ನು ಮದುವೆಯಾಗುವುದಕ್ಕೂ ಮುನ್ನ ಮೂವರು ಮಹಿಳೆಯರನ್ನು ಮದುವೆಯಾಗಿದ್ದು, ಅಲ್ಲದೇ ಆತ ಮದುವೆಯಾಗಿದ್ದ ಇಂದಿರಾ ಅವರು ಸೇರಿ ಮೂವರು ಮಹಿಳೆಯರ ಬಳಿ ಒಟ್ಟಾರೆ 4.5 ಕೋಟಿ ಹಣ ವಂಚಿಸಿ ಪರಾರಿಯಾಗಿದ್ದಾನೆ. ಆದರೆ ಇಂದಿರಾ ಅವರನ್ನು ಮದುವೆಯಾದ ಬಳಿಕ ಮತ್ತೆ ಮೂರು ಮದುವೆಯಾಗಿರುವ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ.

    ಇದಕ್ಕೂ ಮುನ್ನ ಮದುವೆಯಾಗಿದ್ದ ಕುಮದವಳ್ಳಿ ಎಂಬ ಮಹಿಳೆ ದೂರಿನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಪುರುಷೋತ್ತಮ್ ತನ್ನ ಆಸ್ತಿ ಕುರಿತು ನ್ಯಾಯಾಲಯದಲ್ಲಿ ದೂರು ದಾಖಲಾಗಿದ್ದು, ಈ ಆಸ್ತಿ ತನ್ನ ಹೆಸರಿಗೆ ಬಂದರೆ 17 ಕೋಟಿ ರೂ. ಬರುತ್ತದೆ. ಆದರೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವುದರಿಂದ ಹಣದ ಅಗತ್ಯವಿದೆ ಎಂದು ಹೇಳಿ ಕುಮದುವಳ್ಳಿ ಅವರ ಆಸ್ತಿಯನ್ನು ಮಾರಾಟ ಮಾಡಿ 3 ಕೋಟಿ ರೂ. ಹಣದೊಂದಿಗೆ ಪರಾರಿಯಾಗಿದ್ದ ಎಂದು ತಿಳಿಸಿದ್ದಾರೆ.

    ಪುರುಷೋತ್ತಮ್ ವೈವಾಹಿಕ ಸಂಸ್ಥೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಂಸ್ಥೆ ನಡೆಸುತ್ತಿರುವ ಮೋಹನ್ ಹಾಗೂ ವಿಜಯ ಕುಮಾರಿ ಎಂಬವರ ಜೊತೆ ಸೇರಿ ಈ ಕೃತ್ಯ ನಡೆಸಿದ್ದಾನೆ. ಈತನಿಂದ ಹಣ ಪಡೆದು ಸಂಸ್ಥೆ ಮಾಲೀಕರು ಈತನಿಗೆ ಹೆಚ್ಚು ಹಣ ಹೊಂದಿರುವ ಶ್ರೀಮಂತ ಮಹಿಳೆಯರನ್ನು ಪರಿಚಯ ಮಾಡಿಸುತ್ತಿದ್ದರು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಪ್ರಸ್ತುತ ಇಂದಿರಾ ಹಾಗೂ ಮೂವರು ಮಹಿಳೆಯರು ನೀಡಿದ ದೂರಿನ ಮೇರೆಗೆ ಪುರುಷೋತ್ತಮ್ ವಿರುದ್ಧ ಕೊಯಮತ್ತೂರು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಪುರುಷೋತ್ತಮ್ ಹಲವು ಮದುವೆಗಳನ್ನು ಕಾನೂನಾತ್ಮಕವಾಗಿ ರಿಜಿಸ್ಟರ್ ಸಹ ಮಾಡಿಸಿದ್ದು, ಹೆಚ್ಚು ಶ್ರೀಮಂತ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ. ಈತನ ಮೇಲೆ ಈಗಾಗಲೇ 18 ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಕೊಯಮತ್ತೂರು ಪೂರ್ವ ಮಹಿಳಾ ಪೊಲೀಸ್ ಠಾಣೆ ಅಧಿಕಾರಿ ಮಾಸುತಾ ಬೇಗಂ ಹೇಳಿದ್ದಾರೆ.

  • ಸಾವಿನಲ್ಲೂ 9 ಮಂದಿ ಬಾಳಲ್ಲಿ ಹೊಸ ಬೆಳಕು ಮೂಡಿಸಿ ಸಾರ್ಥಕತೆ ಮೆರೆದ ಮಹಿಳೆ

    ಸಾವಿನಲ್ಲೂ 9 ಮಂದಿ ಬಾಳಲ್ಲಿ ಹೊಸ ಬೆಳಕು ಮೂಡಿಸಿ ಸಾರ್ಥಕತೆ ಮೆರೆದ ಮಹಿಳೆ

    ಕೊಯಮತ್ತೂರು: ಮೆದುಳು ನಿಷ್ಕ್ರಿಯಗೊಂಡಿದ್ದ 56 ವರ್ಷದ ಮಹಿಳೆಯೊಬ್ಬರು ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನಡೆದಿದೆ.

    ಕೊಯಮತ್ತೂರಿನ ಬ್ಯಾಂಕ್‍ವೊಂದರಲ್ಲಿ ಉದ್ಯೋಗಿಯಾಗಿದ್ದ ಮಹಿಳೆಯೊಬ್ಬರು ತಮ್ಮ ಹೃದಯ, ಯಕೃತ್ತು, ಶ್ವಾಸಕೋಶ, ಕಿಡ್ನಿಗಳು, ಕಣ್ಣುಗಳು, ಚರ್ಮ ಮತ್ತು ಎಲುಬುಗಳನ್ನು ಮೃತಪಡುವ ಮೊದಲು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆಯನ್ನು ಮೆರೆದಿದ್ದಾರೆ.

    ನವೆಂಬರ್ 30 ರಂದು ಇವರು ಆಫೀಸ್‍ನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಇದ್ದಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದರು. ನಂತರ ಸಹ ಉದ್ಯೋಗಿಗಳು ಕೂಡಲೇ ಇವರನ್ನು ಸಮೀಪದ ಕೆ.ಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯನ್ನು ಪರೀಕ್ಷೆ ಮಾಡಿದ ಬಳಿಕ ಅವರಿಗೆ ಅಧಿಕ ರಕ್ತ ಒತ್ತಡ, ಕಾರ್ಡಿಯೊ-ವ್ಯಾಸ್ಕೂಲರ್ (ಹೃದಯ-ರಕ್ತನಾಳದ ಸಮಸ್ಯೆ) ಮತ್ತು ಮೆದುಳಿನ ರಕ್ತ ಸ್ರಾವದಿಂದ ಬಳಲುತ್ತಿದ್ದಾರೆ ಎನ್ನುವ ವಿಚಾರ ವೈದ್ಯರಿಗೆ ತಿಳಿಯಿತು.

    ಪರಿಣಿತ ವೈದ್ಯರ ತಂಡವೊಂದು ಭಾನುವಾರ ಆಕೆಯನ್ನ ಆಪರೇಷನ್ ಮಾಡಿ ಉಳಿಸಲು ಪ್ರಯತ್ನಿಸಿದ್ದಾರೆ. ಆದರೆ ಆಕೆಯ ಮೆದುಳು ನಿಷ್ಕ್ರಿಯವಾಯಿತು. ಅಷ್ಟೇ ಅಲ್ಲದೇ ಮತ್ತೆ ಅದನ್ನು ಸರಿ ಮಾಡಲು ಸಾಧ್ಯವಾಗದಷ್ಟು ಹಾನಿಯಾಯಿತು ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ.ಜಿ ಭಕ್ತವತ್ಸಲಂ ಹೇಳಿದರು.

    ವೈದ್ಯರು ಮತ್ತೆ ಎರಡು ಪರೀಕ್ಷೆಗಳನ್ನು ಮಾಡಿ ಸಂಜೆ ಹೊತ್ತಿಗೆ ಆಕೆಯ ಬ್ರೈನ್ ಡೆಡ್ ಆಗಿದೆ ಎಂದು ತಿಳಿಸಿದ್ದಾರೆ. ನಂತರ ಮಹಿಳೆಯ ಮಗ ಮತ್ತು ಮಗಳ ಇಬ್ಬರ ಅನುಮತಿಯನ್ನು ಪಡೆದು ಹೃದಯ, ಯಕೃತ್ತು, ಶ್ವಾಸಕೋಶ, ಕಿಡ್ನಿಗಳು, ಕಣ್ಣುಗಳು, ಚರ್ಮ ಮತ್ತು ಎಲುಬುಗಳನ್ನು ಆಸ್ಪತ್ರೆ ಪಡೆದುಕೊಂಡಿತು.

    ಮಹಿಳೆಯಿಂದ ಪಡೆದುಕೊಂಡ ಅಂಗಾಂಗಗಳನ್ನು, ತಮಿಳು ನಾಡಿನ ಟ್ರಾನ್ಸ್ ಪ್ಲಾಂಟ್ ಅಥಾರಿಟಿ, ಯಕೃತ್ತು, ಮತ್ತು ಒಂದು ಕಿಡ್ನಿ ಕೆ.ಜಿ. ಆಸ್ಪತ್ರೆಗೆ, ಮತ್ತೊಂದು ಕಿಡ್ನಿಯನ್ನು ಶ್ರೀ ರಾಮಕೃಷ್ಣ ಆಸ್ಪತ್ರೆಗೆ, ಕಣ್ಣುಗಳನ್ನು ಅರವಿಂದ್ ಕಣ್ಣಿನ ಆಸ್ಪತ್ರೆಗೆ, ಚರ್ಮ ಮತ್ತು ಎಲುಬುಗಳನ್ನು ಗಂಗಾ ಆಸ್ಪತ್ರೆ, ಹೃದಯ ಮತ್ತು ಶ್ವಾಸಕೋಶ ಫೊರ್ಟಿಸ್ ಆಸ್ಪತ್ರೆ/ಗ್ಲೋಬಲ್ ಆಸ್ಪತ್ರೆ ಹಸ್ತಾಂತರಿಸಲಾಗುವುದು. ಇದರಿಂದ 9 ಜನರ ಜೀವನದಲ್ಲಿ ಹೊಸ ಬೆಳಕು ಮೂಡುತ್ತದೆ ಎಂದು ಭಕ್ತವತ್ಸಲಂ ಹೇಳಿದ್ದಾರೆ.

     

  • 700 ಗ್ರಾಂ ಚಿನ್ನದ ಪುಡಿಯನ್ನ ಬ್ಯಾಂಡೇಜ್‍ ನಲ್ಲಿ ಇರಿಸಿ ಸಾಗಾಟ ಮಾಡ್ತಿದ್ದ!

    700 ಗ್ರಾಂ ಚಿನ್ನದ ಪುಡಿಯನ್ನ ಬ್ಯಾಂಡೇಜ್‍ ನಲ್ಲಿ ಇರಿಸಿ ಸಾಗಾಟ ಮಾಡ್ತಿದ್ದ!

    ಚೆನ್ನೈ: 26 ಲಕ್ಷ ರೂ. ಮೌಲ್ಯದ ಸುಮಾರು 700 ಗ್ರಾಂನಷ್ಟು ಚಿನ್ನದ ಪುಡಿಯನ್ನು ಪ್ರಯಾಣಿಕನೊಬ್ಬನಿಂದ ವಶಪಡಿಸಿಕೊಂಡ ಘಟನೆ ಕೊಯಮತ್ತೂರಿನಲ್ಲಿ ನಡೆದಿದೆ.

    ಏರ್ ಅರೇಬಿಯಾ ವಿಮಾನದಲ್ಲಿ ಬಂದಿದ್ದ ಪ್ರಯಾಣಿಕನಿಂದ ಕಸ್ಟಮ್ಸ್ ಅಧಿಕಾರಿಗಳು ಚಿನ್ನದ ಪೌಡರ್ ವಶಪಡಿಸಿಕೊಂಡಿದ್ದಾರೆ. ಕೇರಳ ಮೂಲದ ಪ್ರಯಾಣಿಕ ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 4.30ರ ವೇಳೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದುದನ್ನು ಕಂಡ ಅಧಿಕಾರಿಗಳು ಆತನನ್ನು ತಡೆದು ವಿಚಾರನೆ ನಡೆಸಿದ್ದರು.

    ಪರಿಶೀಲನೆ ನಡೆಸಿದ ಬಳಿಕ 26.34 ಲಕ್ಷ ರೂ. ಮೌಲ್ಯದ ಚಿನ್ನದ ಪುಡಿಯನ್ನ ತನ್ನ ಎರಡೂ ಕಲುಗಳಲ್ಲಿ ಇಟ್ಟು ಬ್ಯಾಂಡೇಜ್ ಸುತ್ತಿದ್ದು ಪತ್ತೆಯಾಯ್ತು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

    ಈ ಚಿನ್ನವನ್ನು ಲಾಭಕ್ಕಾಗಿ ಕೇರಳದ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ತೆಗೆದುಕೊಂಡು ಹೋಗಲಾಗ್ತಿತ್ತು ಎಂದು ವರದಿಯಾಗಿದೆ.