Tag: ಕೊಡೆಮುರುಗ

  • ಸೋಲಿನ ಸುಳಿಗೆ ಸಿಕ್ಕವರ ಬಡಿದೆಬ್ಬಿಸೋ ‘ಹುಡುಕಾಡು ಅಲೆದಾಡು’ ಹಾಡು

    ಸೋಲಿನ ಸುಳಿಗೆ ಸಿಕ್ಕವರ ಬಡಿದೆಬ್ಬಿಸೋ ‘ಹುಡುಕಾಡು ಅಲೆದಾಡು’ ಹಾಡು

    ಷ್ಟದಲ್ಲಿದ್ದಾಗ ಕಣ್ಣೀರು ಒರೆಸಲು, ನೋವು, ಸಂಕಟ, ಹತಾಷೆಯಲಿ ಮುಳುಗಿದಾಗ ತಲೆ ನೇವರಿಸಲು, ಕುಸಿದು ಬಿದ್ದಾಗ ಕೈ ಹಿಡಿದು ಮೇಲಕ್ಕೆತ್ತಲು ಎಲ್ಲರಿಗೂ ಎಲ್ಲರೂ ಇರುವುದಿಲ್ಲ. ಅದರಲ್ಲೂ ಈ ಸೋಲೆಂಬ ಸುಳಿಗೆ ಸಿಕ್ಕಿ ಒದ್ದಾಡುವಾಗ್ಲಂತೂ, ನಷ್ಟದಲ್ಲಿ ನಲುಗುತ್ತಿರುವಾಗ್ಲಂತೂ, ಯಾರೊಬ್ಬರೂ ಹತ್ತಿರಕ್ಕೂ ಸುಳಿಯಲ್ಲ. ಅಂತಹ ಪರಿಸ್ಥಿತಿಯಲ್ಲಿ ಯಾರೊಬ್ಬರ ಸಹಾಯಹಸ್ತ ಬೇಡದೇ ಯಾವ ರೀತಿ ಸೋಲಿಗೆ ಸೆಡ್ಡು ಹೊಡೆದು ನಿಲ್ಲಬಹುದು? ಗುರಿ ಮುಟ್ಟೋಕೆ, ಗೆದ್ದು ಗಹಗಹಿಸೋಕೆ ಯಾವ ದಾರಿಯಲ್ಲಿ ಸಾಗಬಹುದು ಎಂಬುದಕ್ಕೆ ಈ ‘ಕೊಡೆಮುರುಗನೇ’ ಸಾಕ್ಷಿ.  ಕೊಡೆಮುರುಗ (Kodemuruga) ಈ ಹೆಸರು ಕಿವಿಗೆ ಬಿದ್ದಾಕ್ಷಣ ಎಲ್ಲೋ ಕೇಳಿದ್ದೀವಲ್ಲ ಎಂದೆನಿಸೋದು ಸತ್ಯ. ಆದರೆ, ಎಲ್ಲರ ಕಣ್ಣಮುಂದೆ ಕೊಡೆಮುರುಗ ಬಂದು ನಿಲ್ಲುವುದಿಲ್ಲ. ಯಾಕಂದ್ರೆ, ಆ ಕೀಚಕಿ ಕೊರೋನಾನೇ ಅದಕ್ಕೆ ಆಸ್ಪದ ಮಾಡಿಕೊಡಲಿಲ್ಲ. ಕೇಳಿ ಪ್ರೇಮಿಗಳೇ ಅಂತ ಆ ಕೊಡೆಮುರುಗ ಗಾಂಧಿನಗರಕ್ಕೆ ಎಂಟ್ರಿಕೊಟ್ಟಿದ್ದೇನೋ ಸತ್ಯ. ಆದರೆ ಅಷ್ಟರಲ್ಲಿ ಅಟ್ಟಹಾಸ ಶುರುವಿಟ್ಟುಕೊಂಡಿದ್ದ ರಣರಕ್ಕಸಿ ಕೊರೋನಾ, ಕೊಡೆಮುರುಗನ ಆಟಕ್ಕೆ ಕಡಿವಾಣ ಹಾಕಿಬಿಟ್ಟಳು. ಮೂರೇ ದಿನಕ್ಕೆ ಥಿಯೇಟರ್‌ ನಿಂದ ಎತ್ತಂಗಡಿ ಮಾಡಿಸಿಬಿಟ್ಟಳು.

    ಇಷ್ಟು ಹೇಳಿದ್ಮೇಲೆ ಇದು ಸಿನಿಮಾದ ಕಥೆ-ವ್ಯಥೆ ಎಂಬುದು ನಿಮಗೆ ಗೊತ್ತಾಗಿರುತ್ತೆ. ಹಂಡ್ರೆಂಡ್ ಪರ್ಸೆಂಟ್ ಇದು ಕೊಡೆಮುರುಗ ಎನ್ನುವ ಚಿತ್ರದ ಕಥೆ. ಸುಬ್ರಮಣ್ಯ ಪ್ರಸಾದ್ ಅನ್ನೋರು ಈ ಚಿತ್ರದ ನಿರ್ದೇಶಕ ಕಂ ನಾಯಕ. ಕೆ.ರವಿಕುಮಾರ್ ಮತ್ತು ಅಶೋಕ್ ಶಿರಾಲಿ ನಿರ್ಮಾಪಕರು. ಕರೋನಾ ಕಾಲದಲ್ಲಿ ನಲುಗಿದ ನಮ್ಮ ಚಿತ್ರ ಈಗ ಬಿಡುಗಡೆ ಮಾಡಿದರೆ ಬೆಳ್ಳಿತೆರೆ ಮೇಲೆ ನಳನಳಿಸಬಹುದು ಅಂತ ರಿರಿಲೀಸ್ ಮಾಡಿದ್ರು. ಆದರೆ ಪ್ರಯೋಜನವಾಗಲಿಲ್ಲ.  ಒಂದು ಸಿನಿಮಾ ಗೆದ್ದರೆ ಮತ್ತೊಂದು ಸಿನಿಮಾಗೆ ಸ್ಪೂರ್ತಿ ಕೊಡುತ್ತೆ. ಅದೇ ಸೋಲಾದರೆ ಈ ಸಿನಿಮಾನೂ ಬೇಡ, ಇದರ ಸಹವಾಸವೂ ಬೇಡ ಎಂದೆನಿಸೋದು ಸತ್ಯ. ಆದರೆ, ಕೊಡೆಮುರುಗ ಚಿತ್ರದ ಸಾರಥಿ ಸುಬ್ರಮಣ್ಯ ಪ್ರಸಾದ್ ಸೋಲಿಗೆ ಶರಣಾಗದೇ ಸೆಡ್ಡು ಹೊಡೆದು ನಿಂತಿದ್ದಾರೆ. ಕನಸುಗಳು ನನಸಾಗಬೇಕು ಎಂದರೆ ಹೋರಾಡಬೇಕು. ನಮ್ಮ ಹಣೆಬರಹವನ್ನು ನಾವೇ ಬದಲಾಯಿಸಿಕೊಳ್ಳಬೇಕು. ಪ್ರಯತ್ನಪಟ್ಟರೆ ಇಡೀ ಜಗತ್ತನ್ನೇ ನಿಮ್ಮತ್ತ ತಿರುಗಿ ನೋಡುವಂತೆ ಮಾಡಬಹುದು ಎನ್ನುತ್ತಿರೋ ಸುಬ್ರಮಣ್ಯ, ಸೋಲಿನ ಸುಳಿಗೆ ಸಿಕ್ಕವರನ್ನ, ಕೈ ಚೆಲ್ಲಿ ಕುಳಿತವರನ್ನು ಬಡಿದೆಬ್ಬಿಸೋ ಕೆಲಸ ಮಾಡಿದ್ದಾರೆ. ‘ಹುಡುಕಾಡು ಅಲೆದಾಡು’ ಎನ್ನುವ ಹಾಡು ಕಟ್ಟಿಕೊಟ್ಟು ಭರವಸೆಯ ಬೆಳಕು ಮೂಡಿಸಿದ್ದಾರೆ.

    ಕಷ್ಟದಲ್ಲಿದ್ದಾಗ ಕಣ್ಣೀರು ಒರೆಸಲು, ನೋವು, ಸಂಕಟ, ಹತಾಷೆಯಲಿ ಮುಳುಗಿದಾಗ ತಲೆ ನೇವರಿಸಲು, ಕುಸಿದು ಬಿದ್ದಾಗ ಕೈ ಹಿಡಿದು ಮೇಲಕ್ಕೆತ್ತಲು ಎಲ್ಲರಿಗೂ ಎಲ್ಲರು ಇರುವುದಿಲ್ಲ. ಅದರಲ್ಲೂ ಈ ಸೋಲೆಂಬ ಸುಳಿಗೆ ಸಿಕ್ಕಿ ಒದ್ದಾಡುವಾಗ್ಲಂತೂ, ನಷ್ಟದಲ್ಲಿ ನಲುಗುತ್ತಿರುವಾಗ್ಲಂತೂ, ಯಾರೊಬ್ಬರೂ ಹತ್ತಿರಕ್ಕೂ ಸುಳಿಯಲ್ಲ. ಇಂತವರಿಗೆ ಸುಬ್ರಮಣ್ಯ ಪ್ರಸಾದ್ ಅಂಥವರು ಸ್ಪೂರ್ತಿಯಾಗುತ್ತಾರೆ. ಕೊಡೆಮುರುಗ ಚಿತ್ರದ ಹುಡುಕಾಡು ಅಲೆದಾಡು (Hudukaadu Aledaadu) ತರಹದ ಹಾಡುಗಳು (Song) ಮೈಕೊಡವಿಕೊಂಡು ಅಖಾಡಕ್ಕಿಳಿಯಲು ಎನರ್ಜಿ ನೀಡುತ್ತವೆ. ಈ ಹಾಡಿಗೆ ಸುಬ್ರಮಣ್ಯ ಅವರೇ ಸಾಹಿತ್ಯ ರಚಿಸಿದ್ದು, ರಾಪರ್ ಚಂದನ್ ಶೆಟ್ಟಿ ಧ್ವನಿಯಾಗಿದ್ದಾರೆ. ಎಂ ಎಸ್ ತ್ಯಾಗರಾಜ್ ಸಂಗೀತ ಸಂಯೋಜನೆ ಮಾಡಿದ್ದು, ಆನಂದ್ ಆಡಿಯೋ ಯೂಟ್ಯೂಬ್ ಪೇಜ್‍ನಲ್ಲಿ ಈ ಹಾಡು ಲಭ್ಯವಿದೆ.  ಹುಡುಕಾಡು ಅಲೆದಾಡು ಹಾಡು ನೋಡಿದ್ಮೇಲೆ ಸುಬ್ರಮಣ್ಯ ಪ್ರಸಾದ್‍ರನ್ನ ನೀವೆಲ್ಲರೂ ಮಲ್ಟಿಟ್ಯಾಲೆಂಟೆಡ್ ಅಂತ ಒಪ್ಪಿಕೊಳ್ಳುತ್ತೀರಿ. ಇವರ ಸಿನಿಮಾಗಳು ಗೆಲ್ಲಬೇಕು, ಇವರಿಗೆ ಯಶಸ್ಸು ಸಿಗಬೇಕು ಅಂತ ಭಾವಿಸ್ತೀರಿ. ಇದೇ ಭಾವನೆ ಸಿನಿಮಾ ಮಂದಿಯಲ್ಲೂ ಬರಬೇಕು. ನಿರ್ದೇಶನ ಹಾಗೂ ನಟನೆಯ ಎರಡನ್ನೂ ಬ್ಯಾಲೆನ್ಸ್ ಮಾಡುವ ತಾಕತ್ತಿರೋ ಸುಬ್ರಮಣ್ಯ ಪ್ರಸಾದ್‍ಗೆ (Subramanya Prasad) ಅವಕಾಶಗಳು ಸಿಗಬೇಕು. ಅದು ನಟನೆಯಾದ್ರೂ ಸೈ, ನಿರ್ದೇಶನವಾದರೂ ಜೈ ಅಂತಿರೋ ಕೊಡೆಮುರುಗ ಕ್ಯಾಪ್ಟನ್‍ಗೆ ಒಳ್ಳೆದಾಗಬೇಕು.

    ಅಷ್ಟಕ್ಕೂ, ಈ ಸುಬ್ರಮಣ್ಯ ಪ್ರಸಾದ್ ಏಕಾಏಕಿ ಡೈರೆಕ್ಟರ್ ಹ್ಯಾಟ್ ತೊಟ್ಟವರಲ್ಲ. ಮುಖಕ್ಕೆ ಮೇಕಪ್ ಹಾಕ್ಕೊಂಡು ನೇರವಾಗಿ ಕ್ಯಾಮೆರಾ ಮುಂದೆ ಬಂದು ನಿಂತವರಲ್ಲ. ದಶಕಗಳಿಂದ ತೆರೆಮರೆಯಲ್ಲಿ ದುಡಿದು ದಣಿದಿದ್ದಾರೆ. ಬಾಲಾಜಿ ಟೆಲಿಫಿಲಂಸ್ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟು ಪುಣ್ಯಕೋಟಿಯಂತಹ ಸೀರಿಯಲ್  ಗಳಿಗೆ ಎಪಿಸೋಡ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಗಾಳಿಪಟ, ಒಂದೇ ಗೂಡಿನ ಹಕ್ಕಿಗಳು, ರಾಧಾ ಕಲ್ಯಾಣ, ಆನಂದ್ ಭೈರವಿ ಧಾರಾವಾಹಿಗಳಿಗೆ ಪ್ರಧಾನ ನಿರ್ದೇಶನ ಇವ್ರದ್ದೆ.

    ಹೀಗೆ, ಒಂದೊಂದೆ ಹೆಜ್ಜೆ ಇಡುತ್ತಾ ಕಿರುತೆರೆಯಲ್ಲಿ ಗುರ್ತಿಸಿಕೊಂಡಿದ್ದ ಸುಬ್ರಮಣ್ಯ ಪ್ರಸಾದ್, ಕೊಡೆಮುರುಗ ಚಿತ್ರದ ಮೂಲಕ ಬೆಳ್ಳಿತೆರೆ ಮೇಲೆ ಕಮಾಲ್ ಮಾಡೋದಕ್ಕೆ ಬಂದರು. ಆದರೆ, ಈ ಕೊರೋನಾ ಅನ್ನೋ ಮಹಾಮಾರಿ ಅದಕ್ಕೆ ಕತ್ತರಿಹಾಕಿದಳು. ಹಾಗಂತ ಕೊಡೆಮುರುಗ ಕಂಗಾಲಾಗಿಲ್ಲ. ಕೈಚೆಲ್ಲಿ ಕುಳಿತಿಲ್ಲ. ಬದಲಾಗಿ ಸೋಲಿಗೆ ಸೆಡ್ಡುಹೊಡೆದು ನಿಂತಿದ್ದಾನೆ. ಗೆಲುವೆಂಬ ಕುದುರೆಯನ್ನೇರಿ ಸವಾರಿ ಹೊರಟೇ ತೀರುತ್ತೇನೆ ಎನ್ನುವ ಆತ್ಮವಿಶ್ವಾಸದಲ್ಲಿ ಹೊಸ ಹೆಜ್ಜೆ ಹಾಕಲು ರೆಡಿಯಿದ್ದಾನೆ. ಈಗಾಗಲೇ ಎರಡನೇ ಚಿತ್ರದ ತಯಾರಿಯಲ್ಲಿ ತೊಡಗಿಸಿಕೊಂಡು, 50 ಪರ್ಸೆಂಟ್ ಸ್ಕ್ರಿಪ್ಟ್ ವರ್ಕಿಂಗ್ ಕೆಲಸ ಮುಗಿಸಿರುವ ಸುಬ್ರಮಣ್ಯ ಪ್ರಸಾದ್, ಜುಲೈ ಅಥವಾ ಆಗಸ್ಟ್ ನಲ್ಲಿ ಸಿನಿಮಾಗೆ ಚಾಲನೆ ನೀಡೋದಕ್ಕೆ ರೆಡಿಯಾಗಿದ್ದಾರೆ.

  • ‘ಕೊಡೆಮುರುಗ’ನಿಗೆ ತಟ್ಟಿದ ಕೋವಿಡ್-19 ಬಿಸಿ – ಜುಲೈನಲ್ಲಿ ಮರು ಬಿಡುಗಡೆಗೆ ಚಿತ್ರತಂಡ ನಿರ್ಧಾರ

    ‘ಕೊಡೆಮುರುಗ’ನಿಗೆ ತಟ್ಟಿದ ಕೋವಿಡ್-19 ಬಿಸಿ – ಜುಲೈನಲ್ಲಿ ಮರು ಬಿಡುಗಡೆಗೆ ಚಿತ್ರತಂಡ ನಿರ್ಧಾರ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ರಾಜ್ಯ ಸರ್ಕಾರ ಕೋವಿಡ್ 19 ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೊರೊನಾ ಎರಡನೇ ಅಲೆಯ ಪರಿಣಾಮ ಹೆಚ್ಚಾಗದಂತೆ ಮುನ್ನೆಚ್ಚರಿಕೆಯ ನಿರ್ಬಂಧಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಜಾರಿಗೊಳಿಸಲಾಗುತ್ತಿದೆ. ಈ ನಿರ್ಬಂಧಗಳಿಗೆ ಚಿತ್ರರಂಗ ಕೂಡ ಹೊರತಾಗಿಲ್ಲ.

    ಕೊರೊನಾ ಹರಡುವಿಕೆ ತಡೆಯಲು ಚಿತ್ರಮಂದಿರಗಳಲ್ಲಿ ಶೇಕಡಾ 50ರಷ್ಟು ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ನೀಡಲಾಗಿದೆ. ನೈಟ್ ಕಫ್ರ್ಯೂ ಜಾರಿಗೆ ತಂದು ಜನರ ರಾತ್ರಿ ಓಡಾಟಕ್ಕೇ ಬ್ರೇಕ್ ಹಾಕಿದ್ರೂ ಕೂಡ ಕೊರೊನಾ ನಿಯಂತ್ರಣಕ್ಕೆ ಬಂದಿಲ್ಲ. ಹೀಗೆ ದಿನದಿಂದ ದಿನಕ್ಕೆ ಕೋವಿಡ್ 19 ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಚಿತ್ರಮಂದಿರಗಳೂ ಕೂಡ ಜನರಿಲ್ಲದೆ ಬಣಗುಟ್ಟತ್ತಿವೆ. ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ಸಿನಿಮಾಗಳಿಗೆ ಪ್ರೇಕ್ಷಕರ ಕೊರತೆ ಎದುರಾಗಿದೆ. ಈ ಕಾರಣಕ್ಕಾಗಿ ಕಳೆದ ವಾರ ತೆರೆಕಂಡ `ಕೊಡೆಮುರುಗ’ ಸಿನಿಮಾವನ್ನು ಹಿಂಪಡೆದು ಮರು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

    ಈ ಬಗ್ಗೆ ಮಾತನಾಡಿರುವ `ಕೊಡೆಮುರುಗ’ ಚಿತ್ರದ ನಿರ್ದೇಶಕ ಸುಬ್ರಮಣ್ಯ ಪ್ರಸಾದ್, ಸಿನಿಮಾ ಎಲ್ಲೆಡೆ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ. ಶೇಕಡಾ 50ರಷ್ಟು ಆಸನಕ್ಕೆ ಅವಕಾಶ ನೀಡಿದ್ದರು ಕೂಡ ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯ ಇದ್ದಿದ್ದರಿಂದ ಜನ ಬರುತ್ತಿದ್ದರು. ಆದರೆ ಕೊರೊನಾ ಎರಡನೇ ಅಲೆ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಜನ ಚಿತ್ರಮಂದಿರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಬೆಳಗಿನ ಶೋಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆಯಲ್ಲೂ ಇಳಿಮುಖವಾಗಿದೆ. ಆದುದರಿಂದ ಕೋವಿಡ್ 19 ಸುಧಾರಣೆಗೆ ಬಂದ ಮೇಲೆ ಸಿನಿಮಾ ಮರು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ ಎಂದಿದ್ದಾರೆ.

    ನಿರ್ದೇಶಕ ಸುಬ್ರಮಣ್ಯ ಪ್ರಸಾದ್. ಸರ್ಕಾರದ ಆದೇಶವನ್ನು ಗೌರವಿಸುತ್ತ, ಸಾರ್ವಜನಿಕರ ಹಿತದೃಷ್ಟಿಯನ್ನೂ ಗಮನದಲ್ಲಿಟ್ಟುಕೊಂಡು `ಕೊಡೆಮುರುಗ’ ಸಿನಿಮಾವನ್ನು ಚಿತ್ರಮಂದಿರದಿಂದ ಹಿಂಪಡೆದಿದ್ದು, ಜುಲೈ ತಿಂಗಳಲ್ಲಿ ಮರು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧಾರ ಮಾಡಿದೆ. `ಕೊಡೆಮುರುಗ’ ಸುಬ್ರಮಣ್ಯ ಪ್ರಸಾದ್ ನಿರ್ದೇಶನದ ಚೊಚ್ಚಲ ಸಿನಿಮಾ. ಮುನಿಕೃಷ್ಣ ಹಾಗೂ ನಿರ್ದೇಶಕ ಸುಬ್ರಮಣ್ಯ ಪ್ರಸಾದ್, ಪಲ್ಲವಿ ಗೌಡ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇದೊಂದು ಕಾಮಿಡಿ ಎಂಟಟೈನ್ಮೆಂಟ್ ಸಿನಿಮಾವಾಗಿದ್ದು ಕೆ. ರವಿಕುಮಾರ್ ಹಾಗೂ ಅಶೋಕ್ ಶಿರಾಲಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಎಂ ಎಸ್ ತ್ಯಾಗರಾಜ್ ಸಂಗೀತ ಸಂಯೋಜನೆ ರುದ್ರಮುನಿ ಬೆಳಗೆರೆ ಛಾಯಾಗ್ರಹಣ ಚಿತ್ರಕ್ಕಿದೆ.

  • ನಕ್ಕು ನಗಿಸುವ ಮನೋರಂಜನಾತ್ಮಕ ಸಿನಿಮಾ ಕೊಡೆಮುರುಗ

    ನಕ್ಕು ನಗಿಸುವ ಮನೋರಂಜನಾತ್ಮಕ ಸಿನಿಮಾ ಕೊಡೆಮುರುಗ

    ಚಿತ್ರ: ಕೊಡೆಮುರುಗ
    ನಿರ್ದೇಶನ: ಸುಬ್ರಮಣ್ಯ ಪ್ರಸಾದ್
    ನಿರ್ಮಾಪಕ: ಕೆ.ರವಿ ಕುಮಾರ್, ಅಶೋಕ್ ಶಿರಾಲಿ
    ಸಂಗೀತ ನಿರ್ದೇಶನ: ಎಂ.ಎಸ್. ತ್ಯಾಗರಾಜ
    ಛಾಯಾಗ್ರಹಣ: ರುದ್ರಮುನಿ ಬೆಳಗೆರೆ
    ತಾರಾಂಗಣ: ಮುನಿಕೃಷ್ಣ, ಸುಬ್ರಮಣ್ಯ ಪ್ರಸಾದ್, ಪಲ್ಲವಿ ಗೌಡ, ಕುರಿ ಪ್ರತಾಪ್, ಇತರರು
    ರೇಟಿಂಗ್: 3.5/5

    ಟ್ರೇಲರ್ ಮೂಲಕ ಸಂಚಲನ ಸೃಷ್ಟಿಸಿದ ಕೊಡೆಮುರುಗ ಸಿನಿಮಾ ಇಂದು ಬಿಡುಗಡೆಯಾಗಿದೆ. ಸಿನಿಮಾ ಎಂದಾಕ್ಷಣ ಎಲ್ಲರ ತಲೆಯಲ್ಲಿ ಮೂಡೋ ಇಮ್ಯಾಜಿನೇಷನ್ ಹ್ಯಾಂಡ್ ಸಂ ಹೀರೋ, ಚೆಂದದ ನಟಿ, ಕಣ್ಣು ಕೋರೈಸೋ ಲೋಕೇಷನ್, ಆಕ್ಷನ್ ಸೀಕ್ವೆಲ್ ಗಳ ಅಬ್ಬರ, ಕಲರ್ ಫುಲ್ ಹಾಡುಗಳು.. ಹೀಗೆ ಇನ್ನೂ ಏನೇನೋ ಇಮ್ಯಾಜಿನೇಷನ್. ಇದೆಲ್ಲ ಇದ್ದರೇನೆ ಸಿನಿಮಾ ಎನ್ನುವಷ್ಟರ ಮಟ್ಟಿಗೆ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗೆ ನಾವು ಹೊಂದಿಕೊಂಡಿದ್ದೇವೆ. ಆದರೆ ಕೊಡೆಮುರುಗ ಸಿನಿಮಾ ಈ ಎಲ್ಲಾ ರೂಲ್ಸ್ ಬ್ರೇಕ್ ಮಾಡಿ ಬೇರೆಯದ್ದೇ ರೀತಿಯ ಪ್ರಯತ್ನ ಇರುವ ಸಿನಿಮಾ.

    ಸಿಂಪಲ್ ಕಂಟೆಂಟ್ ಕೊಡೆಮುರುಗ ಸಿನಿಮಾದ ಶಕ್ತಿ, ಸಿನಿಮಾದೊಳಗೊಂದು ಸಿನಿಮಾ ಕಥೆ ಚಿತ್ರದಲ್ಲಿದೆ. ಟೈಟಲ್‍ನಷ್ಟೇ ಸಿನಿಮಾ ಕಥೆ ಡಿಫ್ರೆಂಟ್ ಆಗಿ ಮೂಡಿ ಬಂದಿದೆ. ಸಿನಿಮಾ ಮಾಡಬೇಕು ಎಂದು ಅಪಾರ ಪ್ರೀತಿ ಇರುವ ನಿರ್ದೇಶಕನೊಬ್ಬ ಸಿನಿಮಾದಲ್ಲಿ ನಾಯಕನಾಗಲು ಲಾಯಕ್ಕಿಲ್ಲದ, ಹೀರೋ ಲುಕ್ಕೇ ಇರದ ವ್ಯಕ್ತಿಯನ್ನು ತನ್ನ ಸಿನಿಮಾಕ್ಕೆ ಹೀರೋ ಮಾಡಲು ಹೊರಡುತ್ತಾನೆ. ಆತನನ್ನು ಇಟ್ಟುಕೊಂಡು ಸಿನಿಮಾ ಮಾಡಲು ಹೊರಟಾಗ ಎದುರಿಸುವ ತಾಪತ್ರಯಳು ಒಂದಾ.. ಎರಡಾ. ಹೀಗೆ ಎದುರಿಸುವ ಸಮಸ್ಯೆಗಳನ್ನು ಔಟ್ ಅಂಡ್ ಔಟ್ ಕಾಮಿಡಿ ಕಥಾಹಂದರದ ಮೂಲಕ ನಿರ್ದೇಶಕ ಸುಬ್ರಮಣ್ಯ ಪ್ರಸಾದ್ ಕಟ್ಟಿಕೊಟ್ಟಿದ್ದಾರೆ.

    ಪ್ರಾಯಶಃ ಗಾಂದೀನಗರದಲ್ಲಿ ಸಿನಿಮಾ ಮಾಡಲು ಬಂದ ಎಷ್ಟೋ ಮಂದಿಗೆ ಈ ಅನುಭವ ಆಗದೇ ಇರೋದಕ್ಕೆ ಸಾಧ್ಯವಿಲ್ಲ. ಅಂತಹ ಸೀರಿಯಸ್ ಎಳೆಯನ್ನು ಕಾಮಿಡಿಯಾಗಿ ಕಟ್ಟಿಕೊಡುವುದು ಸುಲಭದ ಮಾತೂ ಅಲ್ಲ. ಆ ವಿಷಯದಲ್ಲಿ ನಿರ್ದೇಶಕ ಸುಬ್ರಮಣ್ಯ ಪ್ರಸಾದ್ ಗೆದ್ದಿದ್ದಾರೆ. ಇತ್ತ ಹೀರೋ ಆದ ಮುರುಗ ಕೂಡ ಅಷ್ಟೇ ಚಾಲಾಕಿ. ಇದರ ನಡುವೆ ನಿರ್ದೇಶಕರನ್ನು ಯಾಮಾರಿಸುವ ಒಂದಿಷ್ಟು ಅವಕಾಶವಾದಿಗಳು ಇವರೆಲ್ಲರ ಉಪಟಳದಿಂದ, ವಂಚನೆಯಿಂದ ಬಸವಳಿದ ನಿರ್ದೇಶಕ ಹೇಗಾದರೂ ಸರಿ ಸಿನಿಮಾ ನಿರ್ದೇಶನ ಮಾಡಲೇಬೇಕು ಎಂದು ಒದ್ದಾಡುವ ಪರಿ ನೋಡುಗರನ್ನು ಮರುಗುವಂತೆ ಮಾಡುತ್ತೆ.

    ನಿರ್ದೇಶಕ ಸುಬ್ರಮಣ್ಯ ಪ್ರಸಾದ್ ಸಿನಿಮಾದಲ್ಲಿ ನಟಿಸಿದ್ದು ಚಿತ್ರದ ಒಳಗೂ ಅವರದ್ದು ನಿರ್ದೇಶಕರ ಪಾತ್ರ. ಹೀರೋ ಆಗಿ ಮುನಿಕೃಷ್ಣ ಮುರುಗನ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿ ಪಲ್ಲವಿ ಗೌಡ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಎಲ್ಲಾ ಕಲಾವಿದರು ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಚಿತ್ರದ ಹಾಡುಗಳು ಸನ್ನಿವೇಶಕ್ಕೆ ತಕ್ಕಂತೆ ಸೊಗಸಾಗಿ ಮೂಡಿ ಬಂದಿದ್ದು, ಕ್ಯಾಮೆರಾ ಕೆಲಸ ಕೂಡ ಅಷ್ಟೇ ಚೆನ್ನಾಗಿ ತೆರೆ ಮೇಲೆ ಮೂಡಿ ಬಂದಿದೆ. ಒಟ್ಟಿನಲ್ಲಿ ಕೊಡೆಮುರುಗ ಸಿನಿಮಾ ಪ್ರೇಕ್ಷಕರಿಗೆ ಕಿಂಚಿತ್ತೂ ಬೇಸರ ತರಿಸಿದೆ ನಕ್ಕು ನಗಿಸುವ ಸಿನಿಮಾ ಎನ್ನಬಹುದು.