Tag: ಕೊಡಗು ನೆರೆ

  • ನಮ್ಮದು ಎಂದುಕೊಂಡಿದ್ದ ಮನೆ, ತೋಟ ಎಲ್ಲವೂ ಕೊಚ್ಚಿಕೊಂಡು ಹೋಗಿದೆ – ಕೊಡಗಿನ ಬಾಲಕಿ

    ನಮ್ಮದು ಎಂದುಕೊಂಡಿದ್ದ ಮನೆ, ತೋಟ ಎಲ್ಲವೂ ಕೊಚ್ಚಿಕೊಂಡು ಹೋಗಿದೆ – ಕೊಡಗಿನ ಬಾಲಕಿ

    ಬೆಂಗಳೂರು: ನಮ್ಮದು ಎಂದುಕೊಂಡಿದ್ದ ಮನೆ, ತೋಟ, ಸಮಸ್ತ ಆಸ್ತಿ ಎಲ್ಲವೂ ಪ್ರಾಕೃತಿಕ ದುರಂತದಲ್ಲಿ ಕೊಚ್ಚಿಕೊಂಡು ಹೋಗಿದೆ. ಹೀಗಾಗಿ ತುಂಬಾ ಓದಿ ಏನಾದರೂ ಸಾಧಿಸಬೇಕೆಂಬ ಆಸೆ ದಿಕ್ಕೆಟ್ಟಂತಾಗಿದೆ ಎಂಬ ಮಾತುಗಳನ್ನಾಡಿದ್ದು ಕೊಡಗಿನ ಮಕ್ಕಂದೂರು ಗ್ರಾಮದ ಸುರಕ್ಷಾ ಎಂಬ ಬಾಲಕಿ.

    ಕೊಡಗಿನ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಪೀಪಲ್ ಫಾರ್ ಪೀಪಲ್ ಸಂಸ್ಥೆ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಆಯೋಜಿಸಿದ್ದ ಸಾವಿತ್ರಿ ಬಾ ಪುಲೆ ಚಲನಚಿತ್ರ ಪ್ರದರ್ಶನ ಏರ್ಪಡಿಸಿತ್ತು. ಕಾರ್ಯಕ್ರಮದ ಫೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ವಸತಿಶಾಲೆಗಳ ಕಾರ್ಯನಿರ್ವಾಹಕ ಅಧ್ಯಕ್ಷರಾದ ನಂದನ್ ಕುಮಾರ್ ಅವರು ಸಂತ್ರಸ್ತ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುವ ಬಗ್ಗೆ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ಆಶ್ವಾಸನೆ ನೀಡಿದರು.

    ಚಿತ್ರನಟಿ ತಾರಾ ಮಾತನಾಡಿ, ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದ ಧೀಮಂತ ಮಹಿಳೆ ಸಾವಿತ್ರಿ ಬಾ ಪುಲೆಯ ಕುರಿತಾದ ಈ ಚಲನಚಿತ್ರ ಪ್ರದರ್ಶನ ಕೊಡಗಿನ ಮಕ್ಕಳಿಗಾಗಿ ನಡೆಸುತ್ತಿರುವುದು ಹೆಚ್ಚು ಅರ್ಥಪೂರ್ಣ. ಸಾವಿತ್ರಿ ಬಾ ಪುಲೆಯವರಿಗೆ ಸಲ್ಲಿಸುವ ಗೌರವ. ಕೊಡಗಿನ ಮಕ್ಕಳಿಗಾಗಿ ಹೆಬ್ಬೆಟ್ಟು ರಾಮಕ್ಕ ಚಲನಚಿತ್ರ ಪ್ರದರ್ಶನವನ್ನೂ ಏರ್ಪಡಿಸಲಾಗುವುದು ಎಂಬ ಭರವಸೆ ನೀಡಿದರು.

    ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್. ಜಿ ಸಿದ್ದರಾಮಯ್ಯನವರು ಕೊಡಗಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ತುರ್ತಾಗಿ ಮುಖ್ಯಮಂತ್ರಿಯವರೊಂದಿಗೆ ಸಭೆ ನಡೆಸಿ ವಾಸ್ತವ ಚಿತ್ರಣ ಕಟ್ಟಿಕೊಟ್ಟು ಸರ್ಕಾರದಿಂದ ಹೆಚ್ಚಿನ ಸಹಾಯದ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಡುವುದಾಗಿ ಹೇಳಿದರು.

    ಶಾಸಕರಾದ ಅರುಣ್ ಶಹಾಪುರ ಅವರು ಅಧಿವೇಶನದಲ್ಲೂ ಕೊಡಗಿನ ಸಮಸ್ಯೆಯ ಗಂಭೀರತೆ ಗಮನಕ್ಕೆ ಬಂದಿರಲಿಲ್ಲ. ಆದರೆ ಈಗ ಅರ್ಥವಾಗಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡು ಸರ್ಕಾರದಿಂದ ಹೆಚ್ಚಿನ ಸಹಾಯ ದೊರಕಿಸಿಕೊಡುವುದಾಗಿ ಹೇಳಿದರು. ಪೀಪಲ್ ಫಾರ್ ಪೀಪಲ್ ಸಂಸ್ಥೆ ನಡೆಸಿದ ಈ ಚಲನಚಿತ್ರ ಪ್ರದರ್ಶನದ ತಕ್ಷಣದ ಫಲಶೃತಿ ಎಂಬಂತೆ ನಟ ಪ್ರಕಾಶ್ ರಾಜ್ ಅವರು ಪ್ರಕಾಶ್ ರಾಜ್ ಫೌಂಡೇಶನ್ ವತಿಯಿಂದ 4.89ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ ಮತ್ತು ನಿವೃತ್ತ ಪೊಲೀಸ್‌ ಅಧಿಕಾರಿ ಗೋಪಾಲ್ ಹೊಸೂರು 5 ಮಂದಿ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ತೆಗೆದುಕೊಳ್ಳುವ ಭರವಸೆ ನೀಡಿರುವುದಾಗಿ ಪೀಪಲ್ ಫಾರ್ ಪೀಪಲ್ ಸಂಸ್ಥೆಯ ಅಧ್ಯಕ್ಷರಾದ ಚಕ್ರವರ್ತಿ ಚಂದ್ರಚೂಡ್ ತಿಳಿಸಿದರು.

    ಅಂತಾರಾಷ್ಟ್ರೀಯ ಕಲಾವಿದ ಎಂ. ಎಸ್. ಮೂರ್ತಿ, ಮಾವಳ್ಳಿ ಶಂಕರ್, ಬಿ. ಗೋಪಾಲ್, ಡಾ. ರಾಜಪ್ಪ ದಳವಾಯಿ, ಡಾ. ಕೆ ಸಿ ಶಿವಾರೆಡ್ಡಿ, ಡಾ. ಟಿ ಗೋವಿಂದರಾಜು, ರಂಗಕರ್ಮಿ ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ, ಕಾಂಗ್ರೆಸ್ ವಕ್ತಾರರಾದ ನಟರಾಜ್ ಗೌಡ, ಸೂರ್ಯ ಮುಕುಂದರಾಜ್, ಕನ್ನಡಪರ ಸಂಘಟನೆಗಳ ನಾಗೇಶ್ ಗುರುದೇವ್ ನಾರಾಯಣ್ ಪ್ರಕಾಶ್ ಮೂರ್ತಿ ದೊಡ್ಡಣ್ಣ ಅಹಮದ್ ಸುರೇಶ್ ಸುಚೇಂದ್ರ ಪ್ರಸಾದ್ ವಿಶಾಲ್ ನಂಜುಂಡೇಗೌಡ ಜಿ ಎನ್ ನಾಗರಾಜ್ ಶಿವಬಸವಸ್ವಾಮೀಜಿ ಪಂಚಮಿ ಚೈತ್ರಾಕೋಟೂರ್ ಮನ್ಸೋರೆ, ಹೇಮಾವಂಕಟ್, ಭಾಸ್ಕರ್ ಪ್ರಸಾದ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ಹೆಬ್ಬೆಟ್ ರಾಮಕ್ಕ ಚಲನಚಿತ್ರ ಬೆನಿಫಿಟ್ ಪ್ರದರ್ಶನಕ್ಕೆ ಅವಕಾಶ ಕೊಡುವುದಾಗಿ ಇದೇ ವೇಳೆ ಘೋಷಿಸಿದರು. ಅಕ್ಷರದವ್ವ ಸಾವಿತ್ರಿಬಾಪೂಲೆ ಸಿನಿಮಾ ನೋಡಲು ಅಂಬೇಡ್ಕರ್ ಸಂಶೋಧನಾ ಕೇಂದ್ರದ ವಿಧ್ಯಾರ್ಥಿಗಳು ನಟ ನಟಿಯರು ಸೇರಿದಂತೆ ಸಭಾಂಗಣ ಕಿಕ್ಕಿರಿದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉತ್ತರ ಕರ್ನಾಟಕದ ಅನ್ಯಾಯದ ಬಗ್ಗೆ ಮತ್ತೆ ಧ್ವನಿ ಎತ್ತಿದ ಬಿ ಶ್ರೀರಾಮುಲು

    ಉತ್ತರ ಕರ್ನಾಟಕದ ಅನ್ಯಾಯದ ಬಗ್ಗೆ ಮತ್ತೆ ಧ್ವನಿ ಎತ್ತಿದ ಬಿ ಶ್ರೀರಾಮುಲು

    ಗದಗ: ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗುತ್ತಲೇ ಬಂದಿದೆ. ಮುಂದೆಯೂ ಅನ್ಯಾಯ ಆಗಲಿದೆ. ಮುಖ್ಯಮಂತ್ರಿಗಳು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಿ ಶ್ರೀರಾಮುಲು ಮತ್ತೊಮ್ಮೆ ಆರೋಪಿಸಿದ್ದಾರೆ.

    ಕೊಡಗು ನೆರೆ ಹಾವಳಿ ಪ್ರಕರಣ ಹಿನ್ನಲೆ ಕುರಿತು ಮಾತನಾಡಿದ ಅವರು ಸರ್ಕಾರ ಮುಂಜಾಗ್ರತ ಕ್ರಮವನ್ನು ಕೈಗೊಳ್ಳಲಿಲ್ಲ. ಸರ್ಕಾರ ಎಚ್ಚೆತ್ತುಕೊಂಡಿದ್ದರೆ ಜನರ ಪ್ರಾಣಹಾನಿಯನ್ನು ತಡೆಯಬಹುದಿತ್ತು. ಆದರೆ ಸರ್ಕಾರದ ನಿರ್ಲಕ್ಷ್ಯ ದಿಂದ ಪ್ರಾಣ ಹಾನಿ, ಪ್ರಾಣಿಗಳ ಹಾನಿ, ಆಸ್ತಿ-ಪಾಸ್ತಿ ಹಾನಿ ಸಂಭವಿಸಿದೆ. ಇಷ್ಟೆಲ್ಲಾ ಘಟನೆ ನಡೆದರೂ ಸಿಎಂ ತಡವಾಗಿ ಭೇಟಿ ನೀಡಿರುವುದು ದುರದೃಷ್ಟಕರ ಎಂದು ವಾಗ್ದಾಳಿ ನಡೆಸಿದರು.

    ಸಚಿವ ಎಚ್.ಡಿ ರೇವಣ್ಣ ಬಿಸ್ಕೆಟ್ ಎಸೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಾಜಿ ಪ್ರಧಾನಿ ಮಕ್ಕಳಾದ ರೇವಣ್ಣಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿ ಇರಬೇಕಿತ್ತು. ಸರ್ಕಾರ ಮತ್ತು ಸಚಿವ ಸ್ಥಾನ ಅಹಂಕಾರ ಅವರಲ್ಲಿ ತುಂಬಿಕೊಂಡಿದೆ. ಇದು ಅಧಿಕಾರ ಅಹಂ ಬಹಳ ದಿನ ಉಳಿಯುವುದಿಲ್ಲ. ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರದಿಂದ ಸೂಕ್ತ ಅನುದಾನ ಸಿಗಲಿದ್ದು, ಪ್ರಧಾನಿಗಳು ಕೇರಳ ಹಾಗೂ ಕರ್ನಾಟಕಕ್ಕೆ ಸೂಕ್ತ ಪರಿಹಾರ ನೀಡುತ್ತಾರೆ ಎಂದರು.

    ಸರ್ಕಾರ ಮನಸ್ಸು ಮಾಡಿದರೆ ರೈತರ ಸಂಪೂರ್ಣ ಸಾಲಮನ್ನಾ ಮಾಡಬಹುದು. ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲಮನ್ನಾ ಬಗ್ಗೆ ಕುಮಾರಸ್ವಾಮಿ ಅಧಿಕೃತ ಆದೇಶ ಹೊರಡಿಸಲಿ. ರೈತರ ಸಾಲಮನ್ನಾ ವಿಷಯದಲ್ಲಿ ನಾನು ರಾಜಕೀಯ ಮಾಡುವುದಿಲ್ಲ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮತ್ತೆ ಜೋಡುಪಾಲ, ಮದೆನಾಡಿನಲ್ಲಿ ಗುಡ್ಡ ಕುಸಿತ ಸಾಧ್ಯತೆ: ವಿಜ್ಞಾನಿಗಳು ಹೇಳೋದು ಏನು? ವಿಡಿಯೋ ನೋಡಿ

    ಮತ್ತೆ ಜೋಡುಪಾಲ, ಮದೆನಾಡಿನಲ್ಲಿ ಗುಡ್ಡ ಕುಸಿತ ಸಾಧ್ಯತೆ: ವಿಜ್ಞಾನಿಗಳು ಹೇಳೋದು ಏನು? ವಿಡಿಯೋ ನೋಡಿ

    ಮಡಿಕೇರಿ: ಕೊಡಗಿನ ಜೋಡುಪಾಲ, ಮದೆನಾಡು ಪ್ರದೇಶಗಳು ವಾಸಕ್ಕೆ ಯೋಗ್ಯವಾಗಿಲ್ಲ ಎಂದು ರಾಜ್ಯ ನೈಸರ್ಗಿಕ ನಿರ್ವಹಣೆ ಉಸ್ತುವಾರಿ ಕೇಂದ್ರದ ವಿಜ್ಞಾನಿಗಳು ಹೇಳಿದ್ದಾರೆ.

    ಭೂ ಕುಸಿತಗೊಂಡ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ ರೆಡ್ಡಿ, ಗುಡ್ಡ ಪ್ರದೇಶದಲ್ಲಿ ನೀರು ಇಂಗಿ ಸ್ಫೋಟಗೊಂಡು ಹೊರಬಂದಿದೆ. ಮತ್ತೆ ಕೆಲವು ಕಡೆ ಗುಡ್ಡಗಳು ಕುಸಿದು ಬೀಳುವ ಸಾಧ್ಯತೆಗಳಿವೆ ಎಂದು ತಿಳಿಸಿದರು.

    ಭಾರೀ ಮಳೆಯಿಂದಾಗಿ ಮಣ್ಣು ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಕಳೆದುಕೊಂಡ ಪರಿಣಾಮ ಅಂತರ್ಜಲ ಮಟ್ಟ ಏರಿ ಈ ಕುಸಿತ ಸಂಭವಿಸಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದು, ಮುಂದೆ ಪರಿಸ್ಥಿತಿಯನ್ನು ಯಾವ ರೀತಿ ಎದುರಿಸಬೇಕು ಎಂಬುದಕ್ಕೆ ಕ್ರಮ ಕೈಗೊಳ್ಳಬೇಕಿದೆ. ಇಲ್ಲಿನ ವಾತಾವರಣವನ್ನು ನೋಡಿದರೆ ಜನರಿಂದ ಯಾವುದೇ ರೀತಿಯ ತೊಂದರೆ ಆಗಿಲ್ಲ. ಈಗ ನಾವು ಪ್ರಾಥಮಿಕ ಮಾಹಿತಿ ಕಲೆ ಹಾಕಲು ಬಂದಿದ್ದು ಮುಂದೆ ಸಮಗ್ರ ಅಧ್ಯಯನಕ್ಕೆ ತಂಡ ಬರಲಿದೆ. ಘಟನೆಗೆ ಏನು ಕಾರಣ ಎಂಬ ಬಗ್ಗೆ 2 ತಿಂಗಳು ಅಧ್ಯಯನ ನಡೆಸಿ ವರದಿ ನೀಡಲಾಗುತ್ತದೆ ಎಂದು ವಿವರಿಸಿದರು.

    ಇಲ್ಲಿ ಜನರು ವಾಸಿಸಬಹುದೇ ಇಲ್ಲವೇ ಎಂಬುದನ್ನು ನೋಡಲು ಬಂದಿದ್ದೇವೆ. ಬಳಿಕ ಪರಿಸ್ಥಿತಿಯನ್ನು ಹೇಗೆ ಸರಿಪಡಿಸಲಾಗುತ್ತದೆ ಎಂಬುದನ್ನು ಕಂಡು ಕೊಳ್ಳಬೇಕಿದೆ ಪ್ರಕೃತಿ ವಿಕೋಪವನ್ನು ತಡೆಯಲು ಸಾಧ್ಯವಿಲ್ಲ. ಆದರೆ ನಾವು ಮಾಡಿರುವ ತಪ್ಪನ್ನು ಮುಂದೆ ಮಾಡದೇ ಇರುವ ಹಾಗೇ ನೋಡಿಕೊಳ್ಳಬೇಕಿದೆ ಎಂದು ಶ್ರೀನಿವಾಸರೆಡ್ಡಿ ಹೇಳಿದರು.

    ಬೋಪಯ್ಯ ತಿರುಗೇಟು: ಜೋಡುಪಾಲ ವಾಸ ಯೋಗ್ಯ ಅಲ್ಲವೆಂಬ ತಜ್ಞರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಬೋಪಯ್ಯ ಹತ್ತಾರು ವರ್ಷಗಳಿಂದ ವಾಸವಿದ್ದವರನ್ನು ಎಬ್ಬಿಸುವುದು ಸರಿಯಲ್ಲ ಎಂದಿದ್ದಾರೆ.

    ಸಂಪಾಜೆಯಲ್ಲಿರುವ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಪ್ರತಿಕ್ರಿಯಿಸಿದ ಅವರು, ಯಾವುದೇ ಹೋಮ್ ಸ್ಟೇಗಳಿದ್ದಲ್ಲಿ ಭೂ ಕುಸಿತ ಆಗಿಲ್ಲ, ಬರೀ ಬಡವರ ಮನೆಗಳಿರುವಲ್ಲಿ ಹೆಚ್ಚು ಭೂಕುಸಿತವಾಗಿ ನಾಶ ಆಗಿದೆ. ಹೋಮ್ ಸ್ಟೇ ಇಲ್ಲದ ಮೊಣ್ಣಂಗೇರಿ ಸ್ಥಳಗಳಲ್ಲಿ ಪೂರ್ತಿ ನಾಶವಾಗಿದೆ. ಒಂದು ವರ್ಷದಲ್ಲಿ ಬೀಳಬೇಕಾಗಿದ್ದ ಮಳೆ 15 ದಿನದಲ್ಲಿ ಬಿದ್ದ ಪರಿಣಾಮ ಈ ದುರ್ಘಟನೆಯಾಗಿದೆ ಎಂದು ಎಂದು ವಿಜ್ಞಾನಿಗಳ ಹೇಳಿಕೆಗೆ ತಿರುಗೇಟು ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಡಗಿನ ಒಂದು ಹಳ್ಳಿ ದತ್ತು ಪಡೆಯುತ್ತೇವೆ- ಉಡುಪಿ ಪಲಿಮಾರು ಶ್ರೀ ಘೋಷಣೆ

    ಕೊಡಗಿನ ಒಂದು ಹಳ್ಳಿ ದತ್ತು ಪಡೆಯುತ್ತೇವೆ- ಉಡುಪಿ ಪಲಿಮಾರು ಶ್ರೀ ಘೋಷಣೆ

    ಉಡುಪಿ: ಕೊಡವರ ಕಷ್ಟಕ್ಕೆ ಕರುನಾಡು ಮಿಡಿಯುತ್ತಿದ್ದು ಉಡುಪಿಯ ಪಲಿಮಾರು ಮಠಾಧೀಶರು ಸಹಾಯಕ್ಕೆ ಮುಂದಾಗಿದ್ದಾರೆ.

    ಕೊಡಗಿನ ನೆರೆ ಪೀಡಿತ ಒಂದು ಗ್ರಾಮ ದತ್ತು ಸ್ವೀಕಾರ ಮಾಡುತ್ತೇವೆ ಎಂದು ಉಡುಪಿ ಪಲಿಮಾರು ವಿದ್ಯಾಧೀಶ ತೀರ್ಥ ಶ್ರೀ ನಿರ್ಧಾರ ಮಾಡಿದ್ದಾರೆ. ಉಡುಪಿ ಕೃಷ್ಣ ಮಠದ ಪರ್ಯಾಯ ಸ್ವಾಮೀಜಿಯಾಗಿರುವ ವಿದ್ಯಾಧೀಶರು ಈ ಮೂಲಕ ಮಾನವೀಯತೆ ತೀರ್ಮಾನ ಕೈಗೊಂಡಿದ್ದಾರೆ.

    ಕೃಷ್ಣಮಠ, ಪಲಿಮಾರು ಮಠ ಮತ್ತು ಸಾರ್ವಜನಿಕರ ನೆರೆವಿನಿಂದ ಒಂದು ಗ್ರಾಮದ ನಿರ್ಮಾಣ ಮಾಡುತ್ತೇವೆ ಅಂತ ಹೇಳಿಕೊಂಡಿದ್ದಾರೆ. ಮೊದಲು ಯಾವ ಗ್ರಾಮ ಎನ್ನುವುದು ಗೊತ್ತು ಮಾಡಬೇಕು. ಸಂಬಂಧಪಟ್ಟವರ ಬಳಿ ಈ ಬಗ್ಗೆ ಚರ್ಚೆ ಮಾಡಲಾಗುವುದು. ಅಲ್ಲಿಗೆ ಏನು ಅಗತ್ಯ ಎನ್ನುವುದನ್ನು ಪರಿಶೀಲಿಸಿ ಸೂಕ್ತ ಸೂಕ್ತ ಸಹಾಯ ಮಾಡುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಕೋಟ್ಯಾಧಿಪತಿಯಾಗಿದ್ದ ತಂದೆ ಒಂದು ಪ್ಯಾಂಟು ಶರ್ಟಿಗೆ ಕೈ ಚಾಚಿದ್ದನ್ನು ಕಂಡು ಕಣ್ಣೀರಿಟ್ಟ ಮಗಳು!

    ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮದ ಮೂಲಕ ಕೊಡಗು ಮತ್ತು ಕೇರಳದ ಪರಿಸ್ಥಿತಿ ತಿಳಿದುಕೊಂಡಿದ್ದೇನೆ. ನಾವು ಊಹಿಸಲೂ ಕಷ್ಟವಾಗಿದೆ. ಅಲ್ಲಿನ ಜನರ ಜೀವನ ಪರಿಸ್ಥಿತಿ ಯಾರಿಗೂ ಬಾರದಿರಲಿ. ಭಗವಂತ ಕಷ್ಟದಿಂದ ಹೊರ ಬರುವ ಶಕ್ತಿ ಕೊಡಲಿ. ನಮ್ಮ ಕೈಲಾದ ಸಹಾಯ ಮಾಡೋಣ, ಸಣ್ಣ ಸಹಾಯ ಕಷ್ಟದಲ್ಲಿರುವವರಿಗೆ ದೊಡ್ಡ ಸಹಾಯವಾಗುತ್ತದೆ. ಕೊಡಗನ್ನು ಕರುನಾಡು ಸೇರಿ ಕಟ್ಟುವ ಕೆಲಸವಾಗಬೇಕು ಅಂತ ಪರ್ಯಾಯ ಪಲಿಮಾರು ವಿದ್ಯಾಧೀಶ ಸ್ವಾಮೀಜಿ ಹೇಳಿದರು. ಇದನ್ನೂ ಓದಿ: 20 ದಿನದ ಹಸುಗೂಸಿಗಾಗಿ ಮಳೆಯಲ್ಲೇ ಓಡಿ, ಬದುಕಿಸಿಕೊಳ್ಳಲಾಗದೇ ನರಳಾಡುತ್ತಿರುವ ತಾಯಿ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಸರ್ಕಾರ ಮನಸ್ಸು ಮಾಡಿದ್ರೆ ಸುಳ್ಯ ಭಾಗದಿಂದ ಮಡಿಕೇರಿಗೆ ಸಂಪರ್ಕ ಕಲ್ಪಿಸಬಹುದು!

    ಸರ್ಕಾರ ಮನಸ್ಸು ಮಾಡಿದ್ರೆ ಸುಳ್ಯ ಭಾಗದಿಂದ ಮಡಿಕೇರಿಗೆ ಸಂಪರ್ಕ ಕಲ್ಪಿಸಬಹುದು!

    ಬೆಂಗಳೂರು: ಕೊಡಗನ್ನು ಸಂಪರ್ಕಿಸುವ ಸಂಪಾಜೆ ಘಾಟಿ ರಸ್ತೆ ಬಂದ್ ಆದ ಪರಿಣಾಮ ಪ್ರತಿನಿತ್ಯ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಉದ್ಯೋಗಿಗಳು ಮುಂದೆ ಮಡಿಕೇರಿ ಹೋಗುವುದು ಹೇಗೆ ಎನ್ನುವ ಚಿಂತೆಯಲ್ಲಿದ್ದು, ಸರ್ಕಾರ ಮನಸ್ಸು ಮಾಡಿದರೆ ಮುಂದಿನ ದಿನಗಳಲ್ಲಿ ಈ ಸಮಸ್ಯೆಗೆ ಪರಿಹಾರ ಕಲ್ಪಿಸಬಹುದು.

    ಕೊಡಗು- ದಕ್ಷಿಣ ಕನ್ನಡದ ಗಡಿಭಾಗದಲ್ಲಿ ಸುರಿದ ಭಾರೀ ಮಳೆಗೆ ಸಂಪಾಜೆ ಘಾಟಿ ರಸ್ತೆ ಕೊಚ್ಚಿ ಹೋಗಿದ್ದು ಅಲ್ಲಲ್ಲಿ ಗುಡ್ಡಗಳು ಜರಿದು ಬಿದ್ದ ಕಾರಣ ಬಂಟ್ವಾಳ – ಮೈಸೂರು ರಾಷ್ಟ್ರೀಯ ಹೆದ್ದಾರಿ 275 ಬಂದ್ ಆಗಿದೆ. ಕೊಡಗಿನ ಗ್ರಾಮಗಳಾದ ಸಂಪಾಜೆ, ಚೆಂಬು, ಪೆರಾಜೆ ಗ್ರಾಮದವರಿಗೆ ವಾಣಿಜ್ಯ ವ್ಯವಹಾರಕ್ಕೆ ಸುಳ್ಯವೇ ಹತ್ತಿರವಾಗಿದ್ದರೂ ಉಳಿದ ಪ್ರತೀ ಕೆಲಸಕ್ಕೂ ತಾಲೂಕು ಮತ್ತು ಜಿಲ್ಲಾ ಕೇಂದ್ರವಾದ ಮಡಿಕೇರಿಗೆ ತೆರಳಬೇಕು. ಸಂಪಾಜೆಯಿಂದ ಮುಕ್ಕಾಲು ಗಂಟೆಯಲ್ಲಿ ತಲುಪಬಹುದಾಗಿದ್ದ ಈ ಸ್ಥಳಕ್ಕೆ ಈಗ ಮಾರ್ಗವೇ ಇಲ್ಲದೇ ಜನ ಕಂಗಾಲಾಗಿದ್ದಾರೆ.

     

    ಸುಳ್ಯ, ಪುತ್ತೂರು ತಾಲೂಕಿನ ಹಲವು ಮಂದಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಶಿರಾಡಿ ಘಾಟಿಯಲ್ಲಿ ಸಂಪರ್ಕ ಬಂದ್ ಆದ ಹಿನ್ನೆಲೆಯಲ್ಲಿ ಸಂಪಾಜೆ ಘಾಟಿ ಮೂಲಕವೇ ಮಡಿಕೇರಿ ತಲುಪಿ ಬೆಂಗಳೂರಿಗೆ ಬರುತ್ತಿದ್ದರು. ಆದರೆ ಈಗ ಎರಡು ಘಾಟಿ ರಸ್ತೆಗಳು ಬಂದ್ ಆದ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟಿಯ ಮೂಲಕವೇ ಬೆಂಗಳೂರು ತಲುಪಬೇಕಾದ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಿದೆ.

    ಘಾಟಿ ರಸ್ತೆಗಳು ಬಂದ್ ಆಗಿದ್ದರೂ ಮುಂದೆ ಈ ರೀತಿ ಸಂಪರ್ಕ ಸಮಸ್ಯೆ ಆಗದೇ ಇರಲು ನಾವು ಈಗಲೇ ಪರಿಹಾರವನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಸುಳ್ಯ ಕಡೆಯಿಂದ ಕೊಡಗನ್ನು ಸಂಪರ್ಕಿಸಲು ಕಚ್ಚಾ ರಸ್ತೆಗಳಿದೆ. ಈ ರಸ್ತೆಗಳನ್ನು ಸರ್ಕಾರ ಅಭಿವೃದ್ಧಿ ಪಡಿಸಿದರೆ ಕರಾವಳಿ ಭಾಗದ ಜನರು ಕೊಡಗನ್ನು ಸಂಪರ್ಕಿಸಲು ಸಹಾಯವಾಗುತ್ತದೆ.

    ಯಾವೆಲ್ಲ ರಸ್ತೆಗಳಿವೆ?
    ಮಾರ್ಗ 1: ಕಲ್ಲುಗುಂಡಿ – ಬಾಲಂಬಿ- ದಬ್ಬಡ್ಕ- ಚೆಟ್ಟಿಮಾನಿ- ಮಡಿಕೇರಿ ರಸ್ತೆ
    ಈ ರಸ್ತೆಯ ಮೂಲಕ ಸುಳ್ಯದಿಂದ ಮಡಿಕೇರಿಗೆ ಇರುವ ದೂರ ಕೇವಲ 72 ಕಿಲೋ ಮೀಟರ್. ಕಲ್ಲುಗುಂಡಿಯಿದ್ದ ದಬ್ಬಡ್ಕದವರೆಗೆ ಡಾಂಬರ್ ಹಾಕಲಾಗಿದ್ದು, ಕಾಂತಬೈಲು ಸಮೀಪ ಎರಡು ಕಡೆ ಸಣ್ಣ ಸೇತುವೆಗಳು ನಿರ್ಮಾಣವಾದರೆ ಸುಲಭವಾಗಿ ಚೆಟ್ಟಿಮಾನಿ ತಲುಪಬಹುದು. ಬೇಸಿಗೆ ಸಮಯದಲ್ಲಿ ಈ ರಸ್ತೆಯಲ್ಲಿ ದಬ್ಬಡ್ಕದವರೆಗೂ ಬಸ್ ಸಂಚಾರವಿದೆ. ಲೋಕೋಪಯೋಗಿ ಅಧಿಕಾರಿಗಳು ಮನಸ್ಸು ಮಾಡಿದರೆ ಸುಳ್ಯದಿಂದ ಮಡಿಕೇರಿಗೆ ಒಂದುವರೆ ಗಂಟೆಯಲ್ಲಿ ತಲುಪಬಹುದಾಗಿದೆ.

    ಮಾರ್ಗ 2: ಅರಂತೋಡು-ಮರ್ಕಂಜ- ಎಲಿಮಲೆ- ಸುಬ್ರಹ್ಮಣ್ಯ- ಕಡಮಕಲ್- ಗಾಳಿಬೀಡು- ಮಡಿಕೇರಿ ರಸ್ತೆ
    ಅರಂತೋಡಿನಿಂದ ಕುಕ್ಕೆಸುಬ್ರಹ್ಮಣ್ಯದವರೆಗೆ ಯಾವುದೇ ಸಮಸ್ಯೆ ಇಲ್ಲ. ಸುಬ್ರಹ್ಮಣ್ಯದಿಂದ ಕಡಮಕಲ್ ಮತ್ತು ಗಾಳಿಬೀಡು ನಡುವೆ ಅರಣ್ಯ ಇಲಾಖೆ ಅಳವಡಿಸಿರುವ ಗೇಟ್ ತೆರವುಗೊಳಿಸಿ ಇರುವ ರಸ್ತೆಯನ್ನು ಕೊಂಚ ಅಗಲೀಕರಣ ಮಾಡಿದರೆ ಸುಬ್ರಹ್ಮಣ್ಯದಿಂದ ಮಡಿಕೇರಿಗೆ ಇರುವ 38 ಕಿ.ಮೀ ದೂರವನ್ನು ಮುಕ್ಕಾಲು ಗಂಟೆಯಲ್ಲಿ ಕ್ರಮಿಸಬಹುದು.

    ಮಾರ್ಗ 3: ಸುಳ್ಯ- ಆಲೆಟ್ಟಿ- ಪಾಣತ್ತೂರು- ಕರಿಕೆ- ಭಾಗಮಂಡಲ- ಮಡಿಕೇರಿ ರಸ್ತೆ
    ಸದ್ಯಕ್ಕೆ ಸುಳ್ಯ ಮತ್ತು ಕೊಡಗನ್ನು ಸಂಪರ್ಕಿಸಲು ಇರುವ ಏಕೈಕ ಮಾರ್ಗ. ಆಲೆಟ್ಟಿ ಪಾಣತ್ತೂರು ರಸ್ತೆಯ ಮೂಲಕ ಮಡಿಕೇರಿಗೆ ಪ್ರಯಾಣಿಸಬೇಕಾದರೆ ನೂರೈವತ್ತು ಕಿಲೋ ಮೀಟರ್ ಗಳಿಗೂ ಹೆಚ್ಚು ದೂರ ಪ್ರಯಾಣ ಮಾಡಬೇಕಾಗುತ್ತದೆ. ಲಘು ವಾಹನಗಳು ಮಾತ್ರ ಓಡಬಹುದಾಗಿರುವ ಈ ರಸ್ತೆಯಲ್ಲಿ ಘನ ವಾಹನಗಳ ಓಡಾಟ ಕಷ್ಟ.

    ಆಗುತ್ತಾ ರಸ್ತೆ?
    ಸದ್ಯಕ್ಕೆ ಚಾರ್ಮಾಡಿ ಘಾಟಿಯೊಂದೇ ಕರಾವಳಿಯಿಂದ ಬೆಂಗಳೂರಿಗೆ ತೆರಳುವ ಸುಲಭದ ಮಾರ್ಗವಾಗಿದೆ. ಒಂದು ವೇಳೆ ಗುಡ್ಡ ಜರಿದರೆ ಅಥವಾ ವಾಹನಗಳು ಪಲ್ಟಿಯಾದರೆ ರಸ್ತೆ ಸಂಪರ್ಕ ಕಡಿದುಕೊಳ್ಳುತ್ತದೆ. ಈಗಾಗಲೇ ವಾಹನಗಳು ಸಂಚರಿಸಲು ಹರಸಾಹಸ ಪಡುತಿದ್ದು, ಈ ರಸ್ತೆಯೂ ಬಂದ್ ಆದರೆ ಜನರ ಬದುಕು ದುಸ್ತರವಾಗಲಿದೆ. ಹೀಗಾಗಿ ಸರ್ಕಾರ ಪರ್ಯಾಯ ಮಾರ್ಗವನ್ನು ಅಭಿವೃದ್ಧಿ ಪಡಿಸಿದರೆ ಮುಂದೆ ಅಗಲಿರುವ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿದಂತೆ ಆಗುತ್ತದೆ. ಅನಿವಾರ್ಯತೆ ಇರುವ ಕಾರಣ ಜನ ಪ್ರತಿನಿಧಿಗಳು ಮನಸ್ಸು ಮಾಡಿ ಈ ರಸ್ತೆ ನಿರ್ಮಾಣವಾಗಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಸೆಮಣೆ ಏರಬೇಕಿದ್ದ ಯುವತಿಯರು ಇಂದು ನಿರಾಶ್ರಿತರ ಕೇಂದ್ರದಲ್ಲಿ!

    ಹಸೆಮಣೆ ಏರಬೇಕಿದ್ದ ಯುವತಿಯರು ಇಂದು ನಿರಾಶ್ರಿತರ ಕೇಂದ್ರದಲ್ಲಿ!

    – ಈ ಜಲಪ್ರಳಯದಲ್ಲಿ ಬದುಕಿ ಬಂದಿರುವುದೇ ಹೆಚ್ಚು

    ಮಡಿಕೇರಿ: ಕೊಡಗಿನ 2 ಮನೆಗಳಲ್ಲಿ ಈಗ ಮದುವೆ ಸಂಭ್ರಮ ಮನೆಮಾಡಬೇಕಿತ್ತು. ಆದರೆ ಜಲ ಪ್ರವಾಹದ ಎಫೆಕ್ಟ್ ನಿಂದಾಗಿ ಆ ಮನೆಯವರೆಲ್ಲ ಇದೀಗ ನಿರಾಶ್ರಿತರ ಕೇಂದ್ರದಲ್ಲಿದ್ದಾರೆ.

    ಮಕ್ಕಂದೂರು ಗ್ರಾಮದ ಇಬ್ಬರು ಯುವತಿಯರ ಮದುವೆ ಆಗಸ್ಟ್ 26 ಹಾಗೂ ಸೆಪ್ಟೆಂಬರ್ 12 ಕ್ಕೆ ನಿಗದಿಯಾಗಿತ್ತು. ಮಂಜುಳಾ ಮದುವೆ ಇದೇ 26ಕ್ಕೆ ಕೇರಳದ ಹುಡುಗನ ನಿಶ್ಚಯವಾಗಿತ್ತು. ಮಕ್ಕಂದೂರಿನ ಕಲ್ಯಾಣ ಮಂಟಪದಲ್ಲಿ ಬುಕ್ ಆಗಿತ್ತು. ಮದುವೆ ಸಂಭ್ರಮಕ್ಕೆ ಚಿನ್ನಾಭರಣ, ಬಟ್ಟೆಗಳನ್ನು ಖರೀದಿಸಲಾಗಿತ್ತು.

    ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮಂಜುಳ, ಮದುವೆಗಾಗಿ ಎಲ್ಲ ಸಿದ್ಧತೆಗಳು ನಡೆದಿತ್ತು. ಜಲಪ್ರಳಯದಿಂದ ಅವುಗಳೆಲ್ಲವೂ ಇದೆಯೇ ಅಥವಾ ನಾಶವಾಗಿದೆಯೇ ಎನ್ನುವುದು ಗೊತ್ತಿಲ್ಲ. ನಾವು ಬದುಕಿ ಬಂದಿರುವುದೇ ಹೆಚ್ಚು ಎಂದು ಕಣ್ಣೀರು ಹಾಕಿದರು.

    ಇದೇ ರೀತಿ ಸೆಪ್ಟೆಂಬರ್ 12ಕ್ಕೆ ಕೇರಳ ಯುವಕನ ಜೊತೆ ಮದುವೆ ರಂಜಿತಾ ಎಂಬವರ ಮದುವೆ ನಿಗದಿಯಾಗಿದೆ. ಮದುವೆ ಬೇಕಾದ ತಯಾರಿಗಳೆಲ್ಲವೂ ನಡೆದಿರುವ ಕಾರಣ ವರನ ಕಡೆಯವರು ಯಾವುದೇ ಅಭ್ಯಂತರವಿಲ್ಲ. ಸರಳವಾಗಿ ಮದುವೆ ನಡೆಸಲು ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ನಿಗದಿಯಾಗಿದ್ದ ದಿನಾಂಕದಂದೇ ದೇವಾಲಯದಲ್ಲಿ ಸರಳವಾಗಿ ಇಬ್ಬರ ಮದುವೆ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿದ್ದೇಶ್ವರ ಮಠದಿಂದ ಕೊಡಗಿಗಾಗಿ ನಿಧಿ ಸಂಗ್ರಹ ಪಾದಯಾತ್ರೆ

    ಸಿದ್ದೇಶ್ವರ ಮಠದಿಂದ ಕೊಡಗಿಗಾಗಿ ನಿಧಿ ಸಂಗ್ರಹ ಪಾದಯಾತ್ರೆ

    ಚಿಕ್ಕೋಡಿ: ಕೊಡಗು ನೆರೆ ಸಂತ್ರಸ್ತರಿಗಾಗಿ ಸ್ವಾಮೀಜಿಗಳು ಸ್ವತಃ ಬೀದಿಗೆ ಇಳಿದು ಹೆಗಲಿಗೆ ಜೋಳಿಗೆ ಹಾಕಿ ನಿಧಿ ಸಂಗ್ರಹ ಮಾಡಲು ಮುಂದಾಗಿದ್ದಾರೆ.

    ನಿಡಸೋಸಿ ಸಿದ್ಧಸಂಸ್ಥಾನ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಹಾಗೂ ಹುಕ್ಕೇರಿ ಶ್ರೀ ಮಠದ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಈ ಕಾರ್ಯ ನಡೆಯುತ್ತಿದ್ದು, ಕೇವಲ ಒಂದು ಗಂಟೆಯಲ್ಲಿ 2 ಲಕ್ಷಕ್ಕೂ ಅಧಿಕ ಹಣವನ್ನು ಸಂಗ್ರಹ ಮಾಡಿದ್ದಾರೆ.

    ಅಡವಿ ಸಿದ್ದೇಶ್ವರ ಮಠದಿಂದ ಇಂದು ನಿಧಿ ಸಂಗ್ರಹ ಪಾದಯಾತ್ರೆ ಹುಕ್ಕೇರಿಯಲ್ಲಿ ಪ್ರಾರಂಭವಾಗಿದ್ದು, ಬುಧವಾರ ಸಹ ಮುಂದುವರಿಯಲಿದೆ. ನಾಳೆ ಸಾಯಂಕಾಲ ಸಂಕೇಶ್ವರ ಪಟ್ಟಣದಲ್ಲಿ ಸ್ವಾಮೀಜಿಗಳು ಜೋಳಿಗೆ ಹಾಕಿ ನಿಧಿ ಸಂಗ್ರಹಕ್ಕೆ ಮುಂದಾಗಲಿದ್ದು ಸ್ವಾಮೀಜಿಗಳು ಸೇರಿಸುವ ಹಣವನ್ನು ಜಿಲ್ಲಾಧಿಕಾರಿಗಳ ಮುಖಾಂತರ ಕೊಡಗಿನ ಜನತೆಗೆ ನೀಡಲಿದ್ದಾರೆ.

    ಈ ವೇಳೆ ಮಾತನಾಡಿದ ಶಿವಲಿಂಗೇಶ್ವರ ಸ್ವಾಮೀಜಿಗಳು ಮತ್ತು ಹುಕ್ಕೇರಿ ಮಠದ ಶಿವಾಚಾರ್ಯ ಸ್ವಾಮೀಜಿಗಳು ದೇವರಿಗೆ ದುಡ್ಡು ಖರ್ಚು ಮಾಡಿ ಅಭಿಷೇಕ ಮಾಡಿಸುವುದು ಕೇವಲ ನಮ್ಮ ಶಾಂತಿಗಾಗಿ, ಆದರೆ ಇಂತಹ ಕಾರ್ಯ ಮಾಡುವುದು ಸಮಾಜದ ಒಳಿತಿಗಾಗಿ ಅಂತ ಹೇಳಿದರು. ಅಲ್ಲದೆ ಈ ವಿಚಾರದಲ್ಲಿ ರಾಜಕೀಯವನ್ನು ಬಿಟ್ಟು ಎಲ್ಲ ರಾಜಕಾರಣಿಗಳು ಕೊಡಗಿನ ಜನತೆಯ ಪುನರುಜ್ಜೀವನಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೋಟ್ಯಾಧಿಪತಿಯಾಗಿದ್ದ ತಂದೆ ಒಂದು ಪ್ಯಾಂಟು ಶರ್ಟಿಗೆ ಕೈ ಚಾಚಿದ್ದನ್ನು ಕಂಡು ಕಣ್ಣೀರಿಟ್ಟ ಮಗಳು!

    ಕೋಟ್ಯಾಧಿಪತಿಯಾಗಿದ್ದ ತಂದೆ ಒಂದು ಪ್ಯಾಂಟು ಶರ್ಟಿಗೆ ಕೈ ಚಾಚಿದ್ದನ್ನು ಕಂಡು ಕಣ್ಣೀರಿಟ್ಟ ಮಗಳು!

    ಬೆಂಗಳೂರು: ಪ್ರಕೃತಿಯ ಮುಂದೆ ಮನುಷ್ಯ ಎಷ್ಟು ಕುಬ್ಜನಾಗುತ್ತಾನೆ ಅನ್ನೋದಕ್ಕೆ ಸಾಕ್ಷಿ ಕೊಡಗು ಜಲಪ್ರಳಯ. ಕೋಟಿ ಕೋಟಿ ದುಡ್ಡಿದ್ದ, ಆಸ್ತಿಯಿದ್ದ ಸಿರಿವಂತನೂ, ಏನು ಇಲ್ಲದ ಬಡವನೂ ಪ್ರಕೃತಿಯ ರೌದ್ರನರ್ತನದ ಮುಂದೆ ಮೌನ. ಇಬ್ಬರದು ಒಪ್ಪೊತ್ತಿನ ಊಟಕ್ಕೆ ಪರದಾಟ.

    ಪ್ರಕೃತಿಯ ಸೌಂದರ್ಯದ ಮುಕುಟವಾಗಿದ್ದ ಕೊಡಗಿನಲ್ಲಿ ಈಗ ನರಕ ದರ್ಶನ. ಜಲಪ್ರಳಯದ ರೌದ್ರ ನರ್ತನಕ್ಕೆ ಕೊಡಗಿನಲ್ಲಿ ಈಗ ಸಿರಿವಂತ ಕೋಟ್ಯಾಧಿಪತಿಯೂ ಏನು ಇಲ್ಲದ ಬಡವರು ಒಂದೇ. ಮಹಾಮಳೆಗೇ ಇಡೀ ಆಸ್ತಿಪಾಸ್ತಿ ಬದುಕು ಕೊಚ್ಚಿ ಹೋಗಿದೆ. ಇಂತದ್ದೆ ಕಣ್ಣೀರಿನ ಕಥೆಗೆ ಸಾಕ್ಷಿಯಾಯ್ತು ಇಂದು ಬೆಂಗಳೂರಿನ ಕೊಡವ ಸಮಾಜ. ಕೋಟ್ಯಾಧಿಪತಿಯಾಗಿದ್ದ ವ್ಯಕ್ತಿಯೊಬ್ಬರು ಪ್ರವಾಹಕ್ಕೆ ಬೀದಿಗೆ ಬಂದಿದ್ದು ಪಬ್ಲಿಕ್ ಟಿವಿ ಮುಂದೆ ಕಣ್ಣೀರಿನ ಕಥೆ ಬಿಚ್ಚಿಟ್ಟಿದ್ದು ಹೀಗೆ.

    ನನ್ನ ಸೈಜ್ ದು ಪ್ಯಾಂಟ್ ಇದ್ದರೆ ಕೊಡಿ. ಬಟ್ಟೆ ಏನಿಲ್ಲ ಅಂತಾ ಅಲ್ಲಿರುವ ಬಾಕ್ಸ್ ಗಳನ್ನು ತಡಕಾಡುತ್ತಿದ್ದರು ಕಾಕೇರ ಉತ್ತಯ್ಯ. ಅಲ್ಲೇ ಪಕ್ಕದಲ್ಲಿದ್ದ ಮಗಳು ಸುಶೀಲ ತಂದೆಯ ತಡಕಾಟ ನೋಡಿ ಕಣ್ಣಿರಾದರು. ಮೂವತ್ತು ಎಕ್ರೆ ಜಮೀನು ಇತ್ತು. ಅದೆಷ್ಟೋ ಜನರಿಗೆ ಭೂಮಿಯನ್ನು ದಾನ ಕೊಟ್ಟ ಕೈ. ಈಗ ಒಂದು ಪ್ಯಾಂಟಿಗಾಗಿ ಬಟ್ಟೆ ತುಂಡಿಗಾಗಿ ಕೈ ಚಾಚಿದ್ದಾರೆ ಅಂತಾ ಕಣ್ಣೀರು ಹಾಕಿದರು.

    ತಂದೆಗೆ ಒಟ್ಟು ಮೂವತ್ತು ಎಕರೆ ಜಮೀನು ಇತ್ತು. ಅಂದು ಕೋಟ್ಯಾಧಿಪತಿಯಾಗಿದ್ದ ನಮ್ಮಪ್ಪ, ಅದೆಷ್ಟೋ ಜನರಿಗೆ ಆಸ್ತಿ ಕೊಟ್ಟಿದ್ದರು. ಆದರೆ ಈಗ ಒಂದು ಪ್ಯಾಂಟು ಶರ್ಟಿಗಾಗಿ ಕೊಡವ ಸಮಾಜದ ಮುಂದೆ ಕೈ ಚಾಚಿದ್ದಾರೆ. ಬೆಟ್ಟಗುಡ್ಡಗಳು ಕುಸಿದು ಹೊಳೆಗಳೆಲ್ಲವೂ ತುಂಬಿ ಹರಿಯುತ್ತಿತ್ತು. ನಮ್ಮ ಮನೆ ಕಣ್ಣೆದುರೆ ನೆಲಸಮವಾಗಿದೆ. ಆಸ್ತಿಪಾಸ್ತಿ ಕೊಚ್ಚಿ ಹೋಗಿದೆ. ತೋಟಗಳೆಲ್ಲವೂ ಕುಸಿದು ಬೀಳುತ್ತಿದ್ದವು. ಕೋಟಿಗಟ್ಟಲೇ ಆಸ್ತಿ ಇದ್ದಿದ್ದು, ಮಳೆಯಲ್ಲಿ ಕೊಚ್ಚಿ ಹೋಗಿದೆ ಎಂದು ಸುಶೀಲ ನೋವು ತೋಡಿಕೊಂಡರು.

    ಕಾಕೇರ ಉತ್ತಯ್ಯ ಮಾತನಾಡಿ, ಊರಿನಿಂದ ಹಾಕಿರುವ ಬಟ್ಟೆಯಲ್ಲಿ ಬಂದಿದ್ದೇವೆ. ಮಕ್ಕಳು ಒಬ್ಬರ ಮುಂದೆ ಕೈಚಾಚದೇ ಇರಲಿ ಎಂದು ಹಗಲು ರಾತ್ರಿ ಎನ್ನದೇ ದುಡಿದಿದ್ದು ಎಲ್ಲ ನಾಶವಾಗಿದೆ. ಕೊಡಗಿನಲ್ಲಿ ಕಾಲೂರು ಎನ್ನುವ ಸ್ಥಳವೇ ಇಲ್ಲದಂತಾಗಿದೆ. ಕೋಟ್ಯಾಧಿಪತಿ ಯಾಗಿದ್ದ ನಾವು ಪ್ರಕೃತಿಯ ಆಟದ ಮುಂದೆ ಬಿಕರಿಯಾಗಿದ್ದೇವೆ. ಅಲ್ಲಿ ಹೋದ್ರು ನಮ್ಮ ಹಳೆಯ ಜಮೀನು ಪತ್ತೆ ಹಚ್ಚಲು ಸಾಧ್ಯವೇ ಇಲ್ಲ ಎಂದು ಕಣ್ಣೀರಿಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv