Tag: ಕೇಂದ್ರ ಸಚಿವ

  • ಗಡ್ಕರಿಗೆ ಸುಪ್ರೀಂ ಬುಲಾವ್- ಆದ್ರೆ ಇದು ಮನವಿಯೇ ಹೊರತು ಸಮನ್ಸ್ ಅಲ್ಲ

    ಗಡ್ಕರಿಗೆ ಸುಪ್ರೀಂ ಬುಲಾವ್- ಆದ್ರೆ ಇದು ಮನವಿಯೇ ಹೊರತು ಸಮನ್ಸ್ ಅಲ್ಲ

    ನವದೆಹಲಿ: ಮಾಲಿನ್ಯ ನಿಯಂತ್ರಣದ ಸಂಬಂಧ ಎಲೆಕ್ಟ್ರಿಕ್ ವಾಹನ ಜಾರಿ ಸಂಬಂಧ ಹೊಸ ವಿಚಾರಗಳನ್ನು ಹಂಚಿಕೊಳ್ಳಲು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಲ್ಲಿ ಸುಪ್ರೀಂ ಕೋರ್ಟ್ ಇಂದು ವಿನಂತಿಸಿದೆ. ಸಚಿವರ ಅಭಿಪ್ರಾಯ ಆಲಿಸಲು ನಾವು ವಿನಂತಿ ಮಾಡುತ್ತಿದ್ದೇವೆ ಹೊರತು ಇದು ವಿಚಾರಣೆಗೆ ಹಾಜರಾಗುವಂತೆ ಮಾಡುವ ಸಮನ್ಸ್ ಅಲ್ಲ ಎಂದು ಕೋರ್ಟ್ ಸ್ಪಷ್ಟನೆ ನೀಡಿದೆ.

    ಸಚಿವ ನಿತಿನ್ ಗಡ್ಕರಿ ಅವರಿಗೆ ಮಾಲಿನ್ಯ ನಿಯಂತ್ರಣದ ಕುರಿತು ನವೀನ ವಿಚಾರಗಳಿವೆ. ಸಾರಿಗೆ ಸಚಿವರೇ ಬಂದು ಎಲೆಕ್ಟ್ರಿಕ್ ವಾಹನಗಳ ತಂತ್ರಜ್ಞಾನದ ಯೋಜನೆಯ ಬಗ್ಗೆ ನಮಗೆ ಮಾಹಿತಿ ನೀಡಬಹುದೇ? ಅಧಿಕಾರಿಗಳಿಗಿಂತ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಯೋಜನೆಯ ಸ್ಪಷ್ಟ ಚಿತ್ರಣ ಇರುವುದರಿಂದ ಸಚಿವರನ್ನು ಕರೆಸಿ ಮಾಹಿತಿ ತಿಳಿದುಕೊಳ್ಳುವುದು ಉತ್ತಮ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಸರ್ಕಾರದ ನೀತಿ ಅನುಷ್ಠಾನಗೊಳಿಸುವ ಅರ್ಜಿಯ ವಿಚಾರಣೆ ಇಂದು ಮುಖ್ಯ ನ್ಯಾ.ಬೊಬ್ಡೆ, ನ್ಯಾ.ಬಿಆರ್ ಗವಿ, ನ್ಯಾ. ಸೂರ್ಯಕಾಂತ್ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ನಡೆಯಿತು.

    ವಿಚಾರಣೆ ಸಂದರ್ಭದಲ್ಲಿ ಸಚಿವರು ನ್ಯಾಯಾಲಯಕ್ಕೆ ಬಂದು ನಮಗೆ ಸಹಾಯ ಮಾಡಬೇಕು ಎಂದು ನಾವು ವಿನಂತಿಸುತ್ತಿದ್ದೇವೆ. ಏಕೆಂದರೆ ಅವರು ನಿರ್ಧಾರಗಳನ್ನು ತೆಗೆದುಕೊಳ್ಳುವ ಹಂತದಲ್ಲಿದ್ದಾರೆ. ಹೀಗಾಗಿ ಕಲಾಪಕ್ಕೆ ಹಾಜರಾಗಬೇಕು ಎಂದು ನ್ಯಾ.ಬೊಬ್ಡೆ ಕೇಳಿಕೊಂಡರು.

    ಈ ವಿನಂತಿಯನ್ನು ಇದನ್ನು ರಾಜಕೀಯ ರೀತಿಯಲ್ಲಿ ನೋಡುವ ಸಾಧ್ಯತೆಯಿದೆ ಎಂದು ಸರ್ಕಾರಿ ವಕೀಲರು ಕೋರ್ಟ್ ಗಮನಕ್ಕೆ ತಂದಾಗ, ಮುಖ್ಯ ನ್ಯಾಯಮೂರ್ತಿಗಳು, “ನಾವು ಅವರನ್ನು ಕರೆಸಿಕೊಳ್ಳುತ್ತಿದ್ದೇವೆ ಎಂದು ಭಾವಿಸಬೇಡಿ. ಇದು ಒಂದು ವಿನಂತಿಯಾಗಿದೆ. ಅಧಿಕಾರದಲ್ಲಿರುವ ಯಾರಾದರೂ ನಿರ್ಧರಿಸಬೇಕೆಂದು ನಾವು ಬಯಸುತ್ತೇವೆ. ದಯವಿಟ್ಟು ಚರ್ಚೆಗೆ ಬರುವಂತೆ ಅವರಿಗೆ ತಿಳಿಸಿ” ಎಂದು ಸೂಚಿಸಿದರು.

    ನಾವು ಸರ್ಕಾರಕ್ಕೆ ಯಾವುದೇ ಆದೇಶಗಳನ್ನು ನೀಡುತ್ತಿಲ್ಲ. ಬದಲಿಗೆ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಸರ್ಕಾರದ ಯೋಜನೆಗಳನ್ನು ನಾವು ತಿಳಿದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತು.

    ಅರ್ಜಿದಾರರನ್ನು ಪ್ರತಿನಿಧಿಸುತ್ತಿರುವ ವಕೀಲ ಪ್ರಶಾಂತ್ ಭೂಷಣ್, ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಂದ ಶುಲ್ಕ ವಿಧಿಸಬಹುದು. ಜೊತೆಗೆ ಎಲೆಕ್ಟ್ರಿಕ್ ವಾಹನಗಳಿಗೆ ಸಹಾಯಧನ ನೀಡಬಹುದು ಎಂದು ಸಲಹೆ ನೀಡಿದರು.

    ಮಾಲಿನ್ಯದ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಈ ವೇಳೆ ಸ್ಪಷ್ಟವಾಗಿ ಹೇಳಿದೆ. ಈ ವಿಷಯ ದೆಹಲಿ ಎನ್‍ಸಿಆರ್‍ಗೆ ಮಾತ್ರವಲ್ಲ, ಇಡೀ ದೇಶಕ್ಕೂ ಮುಖ್ಯವಾಗಿದೆ ಎಂದ ಕೋರ್ಟ್ ಅರ್ಜಿ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿತು.

  • ಕಾಂಗ್ರೆಸ್ ದೇಶದ ರಿಜೆಕ್ಟೆಡ್ ಗೂಡ್ಸ್: ಸದಾನಂದ ಗೌಡ ವ್ಯಂಗ್ಯ

    ಕಾಂಗ್ರೆಸ್ ದೇಶದ ರಿಜೆಕ್ಟೆಡ್ ಗೂಡ್ಸ್: ಸದಾನಂದ ಗೌಡ ವ್ಯಂಗ್ಯ

    – ‘ಕೈ’ ನಾಯಕರಿಂದ ಜನರ ನಡುವೆ ಸಿಎಎ ಗೊಂದಲ ಸೃಷ್ಟಿ

    ಉಡುಪಿ: ಕಾಂಗ್ರೆಸ್ ದೇಶದ ರಿಜೆಕ್ಟೆಡ್ ಗೂಡ್ಸ್. ವಿಪಕ್ಷ ಸ್ಥಾನಮಾನ ಪಡೆಯುವ ತಾಕತ್ ಇಲ್ಲದ ಪಕ್ಷ ಅದು. ರಾಜ್ಯಸಭೆಯಲ್ಲಿ ಸಂಖ್ಯಾಬಲ ಇಲ್ಲದಿದ್ದರೂ ಪೌರತ್ವ ತಿದ್ದುಪಡೆ ಕಾಯ್ದೆ ಪಾಸ್ ಆಗಿದೆ ಎಂದು ಕೇಂದ್ರ ರಸಗೊಬ್ಬರ ಸಚಿವ ಸದಾನಂದ ಗೌಡ ವ್ಯಂಗ್ಯವಾಡಿದ್ದಾರೆ.

    ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದ ಕೇಂದ್ರ ಸಚಿವರು ನವಗ್ರಹ ಕಿಂಡಿ ಮೂಲಕ ಕೃಷ್ಣದರ್ಶನ ಪಡೆದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್‍ಗೆ ದೇಶದಲ್ಲಿ ಕೆಲಸ ಇಲ್ಲ. ಜನರ ನಡುವೆ ಗೊಂದಲ ಸೃಷ್ಟಿ ಮಾಡುವುನ್ನೇ ಉದ್ಯೋಗ ಮಾಡಿಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.

    ಆಳವಾದ ಅಧ್ಯಯನ ಮಾಡದಿದ್ದರೆ ಸಿಎಎ ವಿಚಾರದಲ್ಲಿ ಗೊಂದಲ ಆಗುತ್ತದೆ. ದೇಶದ 130 ಕೋಟಿ ಜನಕ್ಕೆ ಕಾಯ್ದೆಯಿಂದ ತೊಂದರೆ ಆಗಲ್ಲ. ಕಾಂಗ್ರೆಸ್‍ಗೆ ಐದೂವರೆ ವರ್ಷ ವಿರೋಧಿಸಲು ಏನೂ ಸಿಗದೆ ಜನರ ನಡುವೆ ಗೊಂದಲ ತಂದಿಡುತ್ತಿದೆ. ರಾಜ್ಯಸಭೆಯಲ್ಲಿ ಸಂಖ್ಯಾಬಲ 99 ಇದ್ದರೂ 123 ಜನರ ಬೆಂಬಲ ಸಿಕ್ಕಿದೆ. ಲೋಕಸಭೆಯಲ್ಲಿ ಸಿಎಎಗೆ ಬಿಲ್ ಪಾಸಾಗಿದೆ ಎಂದು ಹೇಳಿದರು.

    ಪಿಣರಾಯಿ ರಾಜೀನಾಮೆ ಕೊಡಲಿ:
    ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಿಎಎ ವಿಚಾರದಲ್ಲಿ ಸಣ್ಣತನ ಪ್ರದರ್ಶನ ಮಾಡಿದ್ದಾರೆ. ಅವರು ಸಿಎಂ ಆಗಿ ಮುಂದುವರಿಯಲು ಅರ್ಹರಲ್ಲ. ಕೇರಳದಲ್ಲಿ 3,000 ಜನ ವ್ಯಾಪಾರಿ, ಉದ್ಯೋಗಿಗಳ ಜೊತೆ ಸಿಎಎ ವಿಚಾರವಾಗಿ ಮಾತಡಿದ್ದೇನೆ. ಎಲ್ಲರಿಗೂ ಮನವರಿಕೆಯಾಗಿದೆ. ಸಿಎಂ ಪಿಣರಾಯಿ ಅವರಿಗೂ ಪ್ರತಿಕ್ರಿಯೆ ಕೊಟ್ಟು ಬಂದಿದ್ದೇನೆ ಎಂದರು.

    ರಾಜ್ಯ ಕಾಂಗ್ರೆಸ್ ಏಳು ಹೋಳಾಗಿದೆ:
    ರಾಜ್ಯ ಕಾಂಗ್ರೆಸ್ ಪಾರ್ಟಿ ಒಡೆದು ಹೋಗುತ್ತಿದೆ. ಧರ್ಮಾಧಾರಿತವಾಗಿ ಬಿಜೆಪಿ ದೇಶ ಒಡೆಯುತ್ತಿಲ್ಲ. ರಾಜ್ಯ ಕಾಂಗ್ರೆಸ್ ಏಳು ತಂಡಗಳಾಗಿ ಒಡೆದುಹೋಗಿದೆ. ದಿನೇಶ್ ಗುಂಡುರಾವ್, ಮಾಜಿ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಈಶ್ವರ್ ಖಂಡ್ರೆ, ಮಾಜಿ ಸಚಿವ ಡಿಕೆ ಶಿವಕುಮಾರ್, ಮಾಜಿ ಡಿಸಿಎಂ ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್ ಅವರು ದೆಹಲಿ ಪ್ರವಾಸ ಮಾಡುತ್ತಾರೆ. ವಾರಕ್ಕೊಬ್ಬ ತಂಡ ತೆಗೆದುಕೊಂಡು ದೆಹಲಿಯಲ್ಲಿ ಇರುತ್ತಾರೆ ಎಂದು ಹೇಳಿದರು.

  • ಎಫ್.ಎಂ ಕೇಂದ್ರ ಸ್ಥಾಪಿಸುವಂತೆ ಕೇಂದ್ರ ಸಚಿವರಿಗೆ ಬಿ.ವೈ ರಾಘವೇಂದ್ರ ಮನವಿ

    ಎಫ್.ಎಂ ಕೇಂದ್ರ ಸ್ಥಾಪಿಸುವಂತೆ ಕೇಂದ್ರ ಸಚಿವರಿಗೆ ಬಿ.ವೈ ರಾಘವೇಂದ್ರ ಮನವಿ

    ಶಿವಮೊಗ್ಗ: ಜಿಲ್ಲೆಯ ಜನರ ಆಶೋತ್ತರಗಳಿಗೆ ಪೂರಕವಾಗಿ ಸ್ಪಂದಿಸಲು ಬಹುದಿನಗಳಿಂದ ಜಿಲ್ಲೆಯ ಜನರ ಕನಸಾಗಿರುವ ಎಫ್.ಎಂ ರೇಡಿಯೋ ಕೇಂದ್ರವನ್ನು ಶಿವಮೊಗ್ಗದಲ್ಲಿ ಸ್ಥಾಪಿಸುವಂತೆ ಸಂಸದ ಬಿ.ವೈ ರಾಘವೇಂದ್ರ ಅವರು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಮನವಿ ಮಾಡಿದರು.

    ಈ ಹಿಂದೆ ಶಿವಮೊಗ್ಗದಲ್ಲಿ ಎಫ್.ಎಂ ರೇಡಿಯೋ ಕೇಂದ್ರವನ್ನು ಆರಂಭಿಸುವಂತೆ ಹಾಗೂ ಭದ್ರಾವತಿಯಲ್ಲಿ ಈಗಿರುವ ರೇಡಿಯೋ ಕೇಂದ್ರಕ್ಕೆ ತರಂಗಾತರಗಳನ್ನು ಹೆಚ್ಚಿಸಿ ಮೇಲ್ದರ್ಜೆಗೇರಿಸುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ನಿರೀಕ್ಷೆಯಂತೆ ಯೋಜನೆ ಅನುಷ್ಠಾನಗೊಳ್ಳದ ಹಿನ್ನೆಲೆಯಲ್ಲಿ ಸಂಸದ ಬಿ.ವೈ ರಾಘವೇಂದ್ರರವರು ಮತ್ತೊಮ್ಮೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಎಫ್.ಎಂ ರೇಡಿಯೋ ಕೇಂದ್ರ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದು, ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿರುವುದಾಗಿ ಸಂಸದರು ತಿಳಿಸಿದ್ದಾರೆ.

    ಶಿವಮೊಗ್ಗ ಲೋಕಸಭಾ ಕ್ಷೇತ್ರದ ಹಾಗೂ ಶಿವಮೊಗ್ಗ ಜಿಲ್ಲೆಯ ಕೇಂದ್ರ ಸ್ಥಳವಾಗಿರುವ ಶಿವಮೊಗ್ಗದಲ್ಲಿ ಒಂದು ಎಫ್.ಎಂ ಕೇಂದ್ರ ಇರುವುದಿಲ್ಲ. ಭದ್ರಾವತಿ ಆಕಾಶವಾಣಿ ಕೇಂದ್ರವು ಕಳೆದ 50 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಕಡಿಮೆ ಶಕ್ತಿಯ ಟ್ರಾನ್ಸ್ ಮೀಟರ್ ನಿಂದಾಗಿ ಉತ್ತಮವಾದ ಕಾರ್ಯಕ್ರಮಗಳನ್ನು ಆಯೋಜಿಸಿದರು ಕೂಡ ಕೆಲವೇ ಕಿ.ಮಿ.ಗಳ ದೂರದಲ್ಲಿರುವ ಜಿಲ್ಲಾ ಕೇಂದ್ರಕ್ಕೂ ತಲುಪದಿರುವ ಬಗ್ಗೆ ಸಂಸದರು ಸಚಿವರ ಗಮನಕ್ಕೆ ತಂದಿದ್ದಾರೆ.

    ಶಿವಮೊಗ್ಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಡಿಮೆ ಶಕ್ತಿಯ ದೂರದರ್ಶನ ಕೇಂದ್ರದಲ್ಲಿ ಹೆಚ್ಚಿನ ಸ್ಥಳಾವಕಾಶವಿರುವ ನಿಟ್ಟಿನಲ್ಲಿ ಹೆಚ್ಚಿನ ಶಕ್ತಿಯ ಟ್ರಾನ್ಸ್ ಮೀಟರ್ ಉನ್ನತೀಕರಿಸಿ ಇಲ್ಲಿರುವ ಸ್ಥಳವಕಾಶ ಹಾಗೂ ಸ್ಥಳೀಯ ಕಲಾವಿದರಿಗೆ ಉತ್ತಮ ಅವಕಾಶಗಳು ದೊರೆಯುವ ಹಿನ್ನೆಲೆಯಲ್ಲಿ ಈಗಿರುವ ಟ್ರಾನ್ಸ್ ಮೀಟರ್ 10ಕೆ.ವಿ.ಗೆ ಹೆಚ್ಚಿಸಿ, ಎಫ್.ಎಂ ಕೇಂದ್ರವನ್ನು ಮಂಜೂರು ಮಾಡಿದ್ದಲ್ಲಿ, ಮಲೆನಾಡಿನ ಹೆಚ್ಚಿನ ಸಂಖ್ಯೆಯ ಶಾಸ್ತ್ರೀಯ ಹಾಗೂ ಜನಪದ ಕಲಾವಿದರಿಗೆ ಅನುಕೂಲವಾಗಲಿದೆ ಎಂದು ಸಂಸದರು ಮನವಿಯಲ್ಲಿ ತಿಳಿಸಿದ್ದಾರೆ.

    ಆಕಾಶವಾಣಿ ಕೇಂದ್ರವು ಶಿವಮೊಗ್ಗದಿಂದ 20ಕಿ.ಮೀ. ದೂರದಲ್ಲಿರುವ ಭದ್ರಾವತಿಯಲ್ಲಿದ್ದರೂ, ಅದೂ ನಗರ ವ್ಯಾಪ್ತಿ ಪ್ರದೇಶದಿಂದ 5 ಕಿ.ಮೀ. ದೂರದಲ್ಲಿದೆ. ಶಿವಮೊಗ್ಗ ಜಿಲ್ಲಾದ್ಯಂತ ವಿವಿಧ ಭಾಗಗಳಿಂದ ಇಲ್ಲಿಗೆ ಜನರು ಬರಲು ತೊಂದರೆಯಾಗುತ್ತಿದೆ. ಅದೂ ಅಲ್ಲದೆ ಈ ಕೇಂದ್ರಕ್ಕೆ ನಿರ್ವಹಣಾಧಿಕಾರಿಗಳು ಇಲ್ಲದ ಪ್ರಯುಕ್ತ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ದೊರೆಯದಂತಾಗಿದೆ. ಹೀಗಾಗಿ ಕೂಡಲೇ ಒಬ್ಬರು ಜಿಲ್ಲಾ ಮಟ್ಟದ ಅಧಿಕಾರಿಯನ್ನು ನಿಯೋಜಿಸುವಂತೆಯೂ ಕೇಂದ್ರ ಸಚಿವರಲ್ಲಿ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರೈಲ್ವೆ ಸಚಿವರಿಗೆ ಸಂಸದ ಬಿ.ವೈ ರಾಘವೇಂದ್ರ ಮನವಿ

    ನಗರದಲ್ಲಿ ಯಾವುದೇ ರೀತಿಯ ರೇಡಿಯೋ ಚಾನೆಲ್‍ಗಳು ಇಲ್ಲದಿರುವ ಪ್ರಯುಕ್ತ, ಎಫ್.ಎಂ ಕೇಂದ್ರ ಪ್ರಾರಂಭವಾದಲ್ಲಿ ಇದೊಂದು ಅತ್ಯುತ್ತಮ ರೇಡಿಯೋ ಕೇಂದ್ರ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಸರ್ಕಾರಿ ಎಫ್.ಎಂ ಕೇಂದ್ರ ಸ್ಥಾಪನೆಯಾದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳು ಮತ್ತು ಅವುಗಳ ಉಪಯುಕ್ತತೆ ಬಗ್ಗೆ ಜನರಲ್ಲಿ ಜಾಗೃತಿಯನ್ನುಂಟು ಮಾಡುವಲ್ಲಿ ಸಹಕಾರಿಯಾಗಲಿದೆ ಎಂದು ಸಂಸದರು ತಿಳಿಸಿದ್ದಾರೆ.

  • ಕೊಡಗಿನ ಬಾಳಗೋಡು ಏಕಲವ್ಯ ಶಾಲೆಗೆ 5 ಕೋಟಿ: ಡಿ.ವಿ ಸದಾನಂದಗೌಡ

    ಕೊಡಗಿನ ಬಾಳಗೋಡು ಏಕಲವ್ಯ ಶಾಲೆಗೆ 5 ಕೋಟಿ: ಡಿ.ವಿ ಸದಾನಂದಗೌಡ

    – ಕೈ ಮಿತ್ರರಿಗೆ ಕೇಂದ್ರ ಸಚಿವ ವಿನಂತಿ

    ಮಡಿಕೇರಿ: ರಾಜ್ಯದಲ್ಲಿರುವ ಬುಡಕಟ್ಟು ಇಲಾಖೆ ವ್ಯಾಪ್ತಿಯ ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ (ಇಎಂಆರ್‍ಎಸ್) ಕೇಂದ್ರ ಸರ್ಕಾರವು ಬರೋಬ್ಬರಿ 15 ಕೋಟಿ ಅನುದಾನ ಮಂಜೂರು ಮಾಡಿದೆ.

    ಡಿಸೆಂಬರ್ 31ರಂದು ಅನುದಾನ ಮಂಜೂರಾತಿ ಆದೇಶ ಹೊರಡಿಸಲಾಗಿದ್ದು, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. “ಕೇಂದ್ರ ಸರ್ಕಾರದ ಬುಡಕಟ್ಟು ಇಲಾಖೆಯು ನಮ್ಮ ಬೆಳಗಾವಿ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಗಳ (EMRS) ಅಭಿವೃದ್ಧಿಗೆ ಪ್ರಸಕ್ತ ಸಾಲಿನಲ್ಲಿ ರೂ.15 ಕೋಟಿ ಅನುದಾನವನ್ನು ಮಂಜೂರು ಮಾಡಿದೆ. ಸಮುದಾಯದ ಮಕ್ಕಳ ಏಳ್ಗೆಯತ್ತ ಮತ್ತೊಂದು ಪುಟ್ಟ ಹೆಜ್ಜೆ. ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

    ರಾಜ್ಯದ ಬೆಳಗಾವಿ, ಚಿಕ್ಕಮಗಳೂರು, ಕೊಡಗು ಶಾಲೆಗಳಿಗೆ ತಲಾ 5 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ವಿರಾಜಪೇಟೆ ತಾಲೂಕಿನ ಬಾಳಗೋಡು ಶಾಲೆಗೂ 5 ಕೋಟಿ ಲಭಿಸಿದೆ. ಅಲ್ಲದೇ ಸದಾನಂದಗೌಡ ಅವರು ನಿರಂತರವಾಗಿ ಟ್ವೀಟ್ ಮಾಡುವ ಮೂಲಕ ಪ್ರಧಾನಿ ಮೋದಿ ಅವರು ಜಾರಿ ಮಾಡಿರುವ ಅನುದಾಗಳ ಬಗ್ಗೆ ತಿಳಿಸಿದ್ದಾರೆ.

    ‘ಮನ್ರೆಗಾ’ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಈವರೆಗೆ ಕೇಂದ್ರವು ಕರ್ನಾಟಕಕ್ಕೆ ಒಟ್ಟು 3995.43 ಕೋಟಿ ರೂ. ಹಾಗೂ ಈ ಹಿಂದಿನ ಬಾಕಿ 500 ಕೋಟಿ ರೂ. ಅನುದಾನವನ್ನು ಸಹ ಬಿಡುಗಡೆ ಮಾಡಿದೆ. ಜಿ.ಎಸ್.ಟಿ.ಗೆ ಸಂಬಂಧಪಟ್ಟಂತೆ ಪ್ರಸಕ್ತ ಸಾಲಿನ ಇದುವರೆಗಿನ ಅವಧಿಯಲ್ಲಿ 12,483.73 ಕೋಟಿ ರೂ.ಗಳು ರಾಜ್ಯದ ಪಾಲು. ಇದು ನಿರಂತರ ಪ್ರಕ್ರಿಯೆಯಾಗಿದೆ.

    ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ಸರ್ಕಾರವು 2019-20ರ ಸಾಲಿನಲ್ಲಿ ಈವರೆಗೆ ಕರ್ನಾಟಕ ರಾಜ್ಯಕ್ಕೆ 898.5 ಕೋಟಿ ರೂಗಳನ್ನು ಬಿಡುಗಡೆ ಮಾಡಿದೆ. ಸಿಎಂ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದೊಂದಿಗೆ ಉತ್ತಮ ಸಮನ್ವಯ ಹೊಂದಿದೆ. ಶೈಕ್ಷಣಿಕ ಕ್ಷೇತ್ರದ ಅಮೂಲಾಗೃ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

    ಕೇಂದ್ರ ಸರ್ಕಾರವು 2019-20ರ ಆರ್ಥಿಕ ವರ್ಷದಲ್ಲಿ ಇಲ್ಲಿಯ ತನಕ ವಿವಿಧ ಯೋಜನೆಗಳಡಿಯಲ್ಲಿ ಕರ್ನಾಟಕಕ್ಕೆ 41,889.75 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಅನುದಾನ ಬಿಡುಗಡೆಗೆ ಪ್ರತಿಷ್ಠಾಪಿತ ಮಾರ್ಗಸೂಚಿಗಳಿವೆ. ಯಾವ ರಾಜ್ಯಗಳಿಗೂ ತಾರತಮ್ಯ ಎಸಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಟೀಕೆ ಮಾಡುವ ಮುನ್ನ ಅಂಕಿ-ಅಂಶ, ಸಂತ್ಯಾಂಶ ಏನೆಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಜನರಲ್ಲಿ ತಪ್ಪುಗ್ರಹಿಕೆ ಉಂಟುಮಾಡಲು ಪ್ರಯತ್ನಸಬೇಡಿ ಎಂದು ಕಾಂಗ್ರೆಸ್ ಮಿತ್ರರಿಗೆ ವಿನಂತಿ ಮಾಡಿಕೊಂಡಿದ್ದಾರೆ.

  • ಪಿಯೂಷ್ ಗೋಯಲ್ ಮನೆಯಲ್ಲಿ ಕಳ್ಳತನ- ಕೆಲಸದಾಳು ಬಂಧನ

    ಪಿಯೂಷ್ ಗೋಯಲ್ ಮನೆಯಲ್ಲಿ ಕಳ್ಳತನ- ಕೆಲಸದಾಳು ಬಂಧನ

    ಮುಂಬೈ: ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರ ಮುಂಬೈ ನಿವಾಸದಲ್ಲಿ ಕಳ್ಳತನ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ವಿಷ್ಣುಕುಮಾರ್ ವಿಶ್ವಕರ್ಮ ಎಂದು ಗುರುತಿಸಲಾಗಿದೆ. ಈತ ಕೇಂದ್ರ ಸಚಿವರ ಮನೆಯಲ್ಲಿ ಕೆಲಸದಾಳು ಆಗಿದ್ದನು. ವಿಷ್ಣು ಬೆಳ್ಳಿ ಕಲಾಕೃತಿ, ವಾಚ್, 40 ಸಾವಿರ ಮೌಲ್ಯದ ಬಟ್ಟೆ ಮತ್ತು ಹಾರ್ಡ್ ಡಿಸ್ಕ್ ಮೊದಲಾದವುಗಳನ್ನು ಸೆಪ್ಟೆಂಬರ್ 16ರಂದು ಕಳವು ಮಾಡಿದ್ದಾನೆ. ಈತನನ್ನು ದೆಹಲಿಯಲ್ಲಿ ಪೊಲೀಸರು ಮಂಗಳವಾರ ಬಂಧಿಸಿದ್ದು, ಗುರುವಾರ ಮುಂಬೈಗೆ ಕರೆತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸೆ.10ರಂದು ಪಿಯೂಷ್ ಗೋಯಲ್ ಅವರ ಪತ್ನಿ ಸೀಮಾ ಮುಂಬೈನಲ್ಲಿರುವ ತಮ್ಮ ನಿವಾಸಕ್ಕೆ ಬಂದಾಗ ಬೆಳಕಿಗೆ ಬಂದಿದೆ. ಕೂಡಲೇ ಅವರು ತಮ್ಮ ಆಪ್ತ ಸಹಾಯಕನ್ನು ಪೊಲೀಸ್ ಠಾಣೆಗೆ ದೂರು ನೀಡಲು ಕಳುಹಿಸಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಗಮ್ದೇವಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

    ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದ ಸಂದರ್ಭದಲ್ಲಿ ಮನೆ ಕೆಲಸದಾತ ನಾಪತ್ತೆಯಾಗಿದ್ದನು. ಇದರಿಂದ ಸಂಶಯಗೊಂಡ ಪೊಲೀಸರು ವಿಶ್ವಕರ್ಮನನ್ನು ಟ್ರೇಸ್ ಮಾಡಿದ್ದಾರೆ. ಈ ವೇಳೆ ಆತ ದೆಹಲಿಯಲ್ಲಿರುವುದು ಗೊತ್ತಾಗಿದೆ. ಕೂಡಲೇ ಆತನನ್ನು ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ. ವಿಚಾರಣೆಯ ವೇಳೆ ವಿಷ್ಣು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

    ಇದೇ ವೇಳೆ ಸಚಿವರ ಹಾರ್ಡ್ ಡಿಸ್ಕ್ ಕೂಡ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ನಾನು ಹಾರ್ಡ್ ಡಿಸ್ಕನ್ನು ಕದ್ದಿದ್ದೇನೆ. ಅಲ್ಲದೆ ಅದು ಸರಿ ಇದೆಯೋ ಇಲ್ಲವೋ ಎಂಬುದು ತಿಳಿಯಲು ಕಂಪ್ಯೂಟರ್ ಗೆ ಕನೆಕ್ಟ್ ಮಾಡಿದ್ದೇನೆ ಎಂದು ಅಧಿಕಾರಿಗಳ ಬಳಿ ವಿಷ್ಣು ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ಹಾರ್ಡ್ ಡಿಸ್ಕ್ ನಲ್ಲಿರುವ ಪ್ರಮುಖ ದಾಖಲೆಗಳನ್ನು ಸೋರಿಕೆ ಮಾಡಿದ್ದಾನೋ ಎಂಬುದರ ಬಗ್ಗೆಯೂ ಪರಿಶೀಲನೆ ನಡೆಸಿದ್ದಾರೆ.

    ಈ ಸಂಬಂಧ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 381(ಕಳ್ಳತನ) ಹಾಗೂ 405(ವಿಶ್ವಾಸದ್ರೋಹ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ಟ್ವಿಟ್ಟರ್‌ನಲ್ಲಿ ಸೂಲಿಬೆಲೆಗೆ ಬ್ಲಾಕ್ ಭಾಗ್ಯ ಕಲ್ಪಿಸಿದ ಸದಾನಂದಗೌಡ

    ಟ್ವಿಟ್ಟರ್‌ನಲ್ಲಿ ಸೂಲಿಬೆಲೆಗೆ ಬ್ಲಾಕ್ ಭಾಗ್ಯ ಕಲ್ಪಿಸಿದ ಸದಾನಂದಗೌಡ

    – ಕೇಂದ್ರ ಸಚಿವರಿಗೆ ಧನ್ಯವಾದ ತಿಳಿಸಿದ ಸೂಲಿಬೆಲೆ

    ಬೆಂಗಳೂರು: ಪರಸ್ಪರ ವಾಕ್ ಹಾಗೂ ಟ್ವೀಟ್ ಸಮರದ ಬೆನ್ನಲ್ಲೇ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರನ್ನು ಬ್ಲಾಕ್ ಮಾಡಿದ್ದಾರೆ.

    ಕೇಂದ್ರ ಸಚಿವರು ಬ್ಲಾಕ್ ಮಾಡಿರುವುದನ್ನು ಸ್ಕ್ರೀನ್ ಶಾರ್ಟ್ ತೆಗೆದು ಟ್ವೀಟ್ ಮಾಡಿರುವ ಚಕ್ರವರ್ತಿ ಸೂಲಿಬೆಲೆ ಅವರು, ನಿಮಗೆ ಧನ್ಯವಾದ (ಥ್ಯಾಂಕ್ ಯೂ) ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಟ್ವಿಟ್ಟಿಗರು ತಮ್ಮದೆ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸೂಲಿಬೆಲೆ ದೇಶದ್ರೋಹಿನಾ? – ಡಿವಿಎಸ್ ಪರೋಕ್ಷ ಕಿಡಿ

    ನಮಗೂ ಬ್ಲಾಕ್ ಭಾಗ್ಯ ಕೊಟ್ಟಿದ್ದಾರೆ ಎಂದು ಪೂರ್ವಿ ರಾಜ್ ಅರಸು ರಿಟ್ವೀಟ್ ಮಾಡಿದ್ದಾರೆ. ಪ್ರಣವ್ ಭಟ್ ರಿಟ್ವೀಟ್ ಮಾಡಿ, ತಾಕತ್ತಿದ್ದರೆ ಪ್ರಶ್ನೆಗೆ ಉತ್ತರ ಕೊಡುವ ಪ್ರಯತ್ನ ಮಾಡಿ. ಅದನ್ನು ಬಿಟ್ಟು ಬ್ಲಾಕ್ ಮಾಡೋದಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಮೋದಿ ಅಮೆರಿಕಗೆ ಹೋದ್ರೆ ಇಲ್ಲಿ ಯಾರೂ ಊಟ, ತಿಂಡಿ ಮಾಡಲ್ವಾ – ಸಂಸದರಿಗೆ ಸೂಲಿಬೆಲೆ ಪ್ರಶ್ನೆ

    ಚಕ್ರವರ್ತಿ ಸೂಲೆಬೆಲೆ ಅವರೇ ನೀವು ಪ್ರಧಾನಿ ನರೇಂದ್ರ ಮೋದಿ ಪರ ಮತಯಾಚನೆ ಮಾಡಿ ಕಷ್ಟಪಟ್ಟಿದ್ದು ಇವರಿಗೆ ಪರೋಕ್ಷವಾಗಿ ಅನುಕೂಲವೇ ಆಯಿತು. ಮುಂದೆಯೂ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲ್ಲಾ, ಬರೋಕೆ ಬಿಡಲ್ಲ. ಯುವಜನತೆ ಒಂದು ಕರೆ ಕೊಟ್ಟರೆ ಇವರೆಲ್ಲಾ ಮಕಾಡೆ ಮಲಗೋದು ಗ್ಯಾರಂಟಿ ಎಂದು ಯೋಗಿ ಎಂಬವರು ಟ್ವೀಟ್ ಮಾಡಿದ್ದಾರೆ.

    ಇದಕ್ಕೂ ಮುನ್ನ ನಗರದಲ್ಲಿ ಮಾತನಾಡಿದ್ದ ಕೇಂದ್ರ ಸಚಿವರು, ಯಾರೋ ಕುಳಿತುಕೊಂಡು ಟ್ವೀಟ್ ಮಾಡುತ್ತಾರೆ. ಮಂತ್ರಿಗಿರಿ ಭಿಕ್ಷೆ ಅಂತ ನಮಗೆ ಹೇಳುವವರು, ಚಪ್ಪಾಳೆ ಗಿಟ್ಟಿಸಿಕೊಂಡು ದೇಶ ಕಟ್ಟುವವರು ಎಂದು ಹೇಳಿಕೊಳ್ಳುವವರು. ಈ ರೀತಿಯ ಮಾತುಗಳು ಸರಿಯಲ್ಲ. ಹಾರಿಕೆ ಸುದ್ದಿ ಹರಡುವವರು ದೇಶ ದ್ರೋಹಿಗಳು ಎಂದು ಗಾಂಧೀಜಿ ಹೇಳಿದ್ದಾರೆ. ಇವರೆಲ್ಲಾ ಅದೇ ಬ್ರಾಂಡ್‍ಗೆ ಸೇರುತ್ತಾರೆ. ಭಾಷಣಗಳಿಂದ, ಟ್ವೀಟ್‍ನಿಂದ ಜನರನ್ನು ಪ್ರಚೋದನೆ ಮಾಡುವುದಲ್ಲ. ಇಂತಹ ಮಾತುಗಳು ಹಾಗೂ ಜನರ ಬಗ್ಗೆ ಬಹಳ ನೋವಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

  • ಸೂಲಿಬೆಲೆ ದೇಶದ್ರೋಹಿನಾ? – ಡಿವಿಎಸ್ ಪರೋಕ್ಷ ಕಿಡಿ

    ಸೂಲಿಬೆಲೆ ದೇಶದ್ರೋಹಿನಾ? – ಡಿವಿಎಸ್ ಪರೋಕ್ಷ ಕಿಡಿ

    ಬೆಂಗಳೂರು: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರನ್ನು ಪರೋಕ್ಷವಾಗಿ ದೇಶದ್ರೋಹಿ ಎಂದು ಕರೆದಿದ್ದಾರೆ. ಅವರ ಹೇಳಿಕೆ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ.

    ನಗರದಲ್ಲಿ ಮಾತನಾಡಿದ ಕೇಂದ್ರ ಸಚಿವರು, ಯಾರೋ ಕುಳಿತುಕೊಂಡು ಟ್ವೀಟ್ ಮಾಡುತ್ತಾರೆ. ಮಂತ್ರಿಗಿರಿ ಭಿಕ್ಷೆ ಅಂತ ನಮಗೆ ಹೇಳುವವರು, ಚಪ್ಪಾಳೆ ಗಿಟ್ಟಿಸಿಕೊಂಡು ದೇಶ ಕಟ್ಟುವವರು ಎಂದು ಹೇಳಿಕೊಳ್ಳುವವರು. ಈ ರೀತಿಯ ಮಾತುಗಳು ಸರಿಯಲ್ಲ. ಹಾರಿಕೆ ಸುದ್ದಿ ಹರಡುವವರು ದೇಶ ದ್ರೋಹಿಗಳು ಎಂದು ಗಾಂಧೀಜಿ ಹೇಳಿದ್ದಾರೆ. ಇವರೆಲ್ಲಾ ಅದೇ ಬ್ರಾಂಡ್‍ಗೆ ಸೇರುತ್ತಾರೆ. ಭಾಷಣಗಳಿಂದ, ಟ್ವೀಟ್‍ನಿಂದ ಜನರನ್ನು ಪ್ರಚೋದನೆ ಮಾಡುವುದಲ್ಲ. ಇಂತಹ ಮಾತುಗಳು ಹಾಗೂ ಜನರ ಬಗ್ಗೆ ಬಹಳ ನೋವಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಮೋದಿ ಅಮೆರಿಕಗೆ ಹೋದ್ರೆ ಇಲ್ಲಿ ಯಾರೂ ಊಟ, ತಿಂಡಿ ಮಾಡಲ್ವಾ – ಸಂಸದರಿಗೆ ಸೂಲಿಬೆಲೆ ಪ್ರಶ್ನೆ

    ಕೇಂದ್ರ ಸರ್ಕಾರದಿಂದ ನೆರೆ ಪರಿಹಾರ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ಗುರುವಾರ ಕ್ಯಾಬಿನೆಟ್ ಸಭೆ ಇದೆ. ನಾನು ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಇಬ್ಬರು ಸೇರಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ, ರಾಜ್ಯಕ್ಕೆ ಆದಷ್ಟು ಬೇಗ ನೆರೆ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದರು.

    ಈ ಹಿಂದೆ ನೆರೆ ಪರಿಹಾರದ ಹಣ ಹೇಗೆ ದುರುಪಯೋಗ ಆಗುತ್ತಿತ್ತು ಅಂತ ಗೊತ್ತಿದೆ. ಇದನ್ನು ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳಬೇಕು. ಈಗಾಗಲೇ ಎನ್‍ಡಿಆರ್ ಎಫ್ ಫಂಡ್ ಬಿಡುಗಡೆ ಮಾಡಲಾಗಿದೆ. ಮಂಗಳವಾರ ಸಹೃದಯದಿಂದ ಬಿಹಾರ ನೆರೆ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಆದರೆ ಅದನ್ನೇ ದೊಡ್ಡ ವಿಷಯ ಮಾಡುವ ಪ್ರಯತ್ನವನ್ನು ಕೆಲವರು ಮಾಡಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು. ಇದನ್ನೂ ಓದಿ: ಪ್ರಧಾನಿ ಅಮೆರಿಕಕ್ಕೆ ಹೋಗಿದ್ದರಿಂದ ನೆರೆ ಪರಿಹಾರ ಪ್ರಕಟಿಸಲು ತಡವಾಗಿದೆ – ಪ್ರಹ್ಲಾದ್ ಜೋಷಿ

    ಕೇಂದ್ರ ತಂಡವು ಬಂದು ನೆರೆ ಪೀಡಿತ ಪ್ರದೇಶಗಳ ಪರಿಶೀಲನೆ ಮಾಡಿದೆ. ಮಳೆ ನಿಲ್ಲದೇ ಮನೆ ಕಟ್ಟಲು ಸಾಧ್ಯವಾಗುತ್ತಾ? ಹಿಂದೆಲ್ಲಾ ದುಡ್ಡು ನುಂಗಿ ಹಾಕುವವರೇ ಜಾಸ್ತಿ ಇದ್ದರು. ಹಣ ತರಬೇಕು, ಇಲ್ಲಿ ಅದನ್ನು ಕೊಳ್ಳೆ ಹೊಡೆಯಬೇಕು ಅಂತ ಕಾಯುತ್ತಿದ್ದರು. ಈ ಬಾರಿ ಅದಕ್ಕೆ ಅವಕಾಶ ಇಲ್ಲ. ಸಂತ್ರಸ್ತರಿಗೆ ಆದಷ್ಟು ಬೇಗ ಪರಿಹಾರ ಕೊಡುವ ಕೆಲಸ ರಾಜ್ಯ ಮತ್ತು ಕೇಂದ್ರ ಸರ್ಕಾರ ಮಾಡಲಿವೆ ಎಂದು ಹೇಳಿದರು. ಇದನ್ನೂ ಓದಿ:  ಯಾರೂ ಕಿಸೆಯಿಂದ ಪರಿಹಾರ ಕೊಡಲು ಆಗಲ್ಲ: ಪ್ರತಾಪ್ ಸಿಂಹ

    ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸಮಾಧಾನ ವಿಚಾರವಾಗಿ ಮಾಧ್ಯಮಗಳು ಪ್ರಶ್ನೆ ಕೇಳುತ್ತಿದ್ದಂತೆ ಕೇಂದ್ರ ಸಚಿವರು, ಎಲ್ಲರಿಗೂ ಆಯ್ತಲ್ಲಾ, ಮತ್ತೆ ಅವರಿಗೆ ಏನು ಸ್ಪೆಷಲ್ ಎಂದು ಗುಡುಗಿದರು. ಇದನ್ನೂ ಓದಿ: ಸಿಂಹಗೆ ಮೋದಿ ದೇವ್ರು ಇರ್ಬೋದು, ಬೇಕಾದ್ರೆ ಪೂಜೆ ಮಾಡ್ಲಿ – ಆದ್ರೆ ಮೊದ್ಲು ಪರಿಹಾರ ಕೊಡ್ಲಿ: ಕಾಂಗ್ರೆಸ್ ಕಿಡಿ

  • ಸತ್ಯ ಒಂದಲ್ಲೊಂದು ದಿನ ಹೊರಗೆ ಬರುತ್ತೆ ಅನ್ನೋದಕ್ಕೆ ಎಚ್‍ಡಿಡಿ ಹೇಳಿಕೆಯೇ ಉದಾಹರಣೆ- ಪ್ರಹ್ಲಾದ್ ಜೋಷಿ

    ಸತ್ಯ ಒಂದಲ್ಲೊಂದು ದಿನ ಹೊರಗೆ ಬರುತ್ತೆ ಅನ್ನೋದಕ್ಕೆ ಎಚ್‍ಡಿಡಿ ಹೇಳಿಕೆಯೇ ಉದಾಹರಣೆ- ಪ್ರಹ್ಲಾದ್ ಜೋಷಿ

    ಹುಬ್ಬಳ್ಳಿ: ಸತ್ಯ ಒಂದಲ್ಲ ಒಂದಿನ ಹೊರಗೆ ಬರುತ್ತದೆ ಅನ್ನೋದಕ್ಕೆ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರ ಹೇಳಿಕೆಯೇ ಉದಾಹರಣೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮೈತ್ರಿ ಸರ್ಕಾರದ ಪತನ ಕುರಿತು ದೇವೇಗೌಡ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿ, ಮೈತ್ರಿ ಸರ್ಕಾರದ ಒಳ ಜಗಳದಿಂದಾಗಿ ಸರ್ಕಾರ ಪತನಗೊಂಡಿದೆ. ಈ ಬಗ್ಗೆ ಈ ಹಿಂದೆಯೇ ನಾನು ಹೇಳಿದ್ದೆ. ಬಿಜೆಪಿಯವರೇ ಮೈತ್ರಿ ಸರ್ಕಾರ ಉರುಳಿಸುತ್ತಿದ್ದಾರೆ ಎಂದು ಜನರ ಮುಂದೆ ಬಿಂಬಿಸಿದ್ದರು. ಆದರೆ ಸತ್ಯ ಒಂದಿಲ್ಲ ಒಂದಿನ ಹೊರಬರುತ್ತದೆ ಅನ್ನೋದಕ್ಕೆ ದೇವೇಗೌಡರು ಹೇಳಿಕೆನೇ ಉದಾಹರಣೆ ಎಂದು ತಿಳಿಸಿದರು.

    ಅಧಿಕಾರದ ವ್ಯಾಮೋಹದಿಂದ ಮೈತ್ರಿ ಸರ್ಕಾರ ರಚನೆ ಮಾಡಿದರು. ಆದರೆ ತಮ್ಮ ಒಳ ಬೇಗುದಿಯಿಂದಾಗಿ ಮೈತ್ರಿ ಸರ್ಕಾರ ಅಧೋಗತಿಗೆ ಬಂತು. ಕಾಂಗ್ರೆಸ್ ಪಕ್ಷ ದೇಶದಲ್ಲೇ ಬೌದ್ಧಿಕ ದಿವಾಳಿಕೋರತನಕ್ಕೆ ಸಾಕ್ಷಿಯಾಗಿದೆ. ಪಿ ಚಿದಂಬರಂ ಅವರು ನೆಲದ ಕಾನೂನಿಗೆ ಬೆಲೆ ಇಲ್ಲದಂತೆ ನಡೆದುಕೊಂಡಿದ್ದಾರೆ. ರಾಜ್ಯ ಹಾಗೂ ದೇಶದಲ್ಲಿ ಕಾಂಗ್ರೆಸ್ ಅಧೋಗತಿಗೆ ತೆರಳಿದೆ. ಕಾಂಗ್ರೆಸ್ ನವರಿಗೆ ಯಾವುದನ್ನ ವಿರೋಧ ಮಾಡಬೇಕು ಎಂಬುದು ತಿಳಿದಿಲ್ಲ ಎಂದು ಗರಂ ಆದರು.

    ಸಚಿವಾಕಾಂಕ್ಷಿಗಳಲ್ಲಿ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಸಮಾಧಾನಗೊಂಡವರನ್ನ ಸಮಾಧಾನ ಪಡಿಸುವಂತಹ ಕೆಲಸ ನಡೆದಿದೆ. ರಾಜ್ಯದಲ್ಲಿ ಬಿಜೆಪಿ ಉತ್ತಮ ಆಡಳಿತವನ್ನ ನೀಡಲಿದೆ. ಸರ್ಕಾರ ನಾಲ್ಕು ವರ್ಷ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಇದೇ ವೇಳೆ ಉಮೆಶ್ ಕತ್ತಿ ಜೆಡಿಎಸ್‍ನವರ ಸಂಪರ್ಕದಲ್ಲಿದ್ದಾರೆ ಎಂಬ ವಿಚಾರದ ಕುರಿತು ಮಾತನಾಡಿದ ಜೋಷಿ, ಅದೆಲ್ಲ ಶುದ್ಧ ಸುಳ್ಳು ವಿಚಾರ. ಜೆಡಿಎಸ್ ಹಾಗೂ ಕಾಂಗ್ರೆಸ್ ಮುಳುಗುತ್ತಿರುವ ಹಡಗುಗಳು. ಮುಳುಗುತ್ತಿರುವ ಹಡಗಿನಲ್ಲಿ ಯಾರೂ ಪ್ರಾಣ ಕಳೆದುಕೊಳ್ಳುವುದಿಲ್ಲ. ನೆರೆ ಪರಿಹಾರಕ್ಕೆ ಈಗಾಗಲೇ ಕೇಂದ್ರದಿಂದ ಹಣ ಬಿಡುಗಡೆಯಾಗಿದೆ. ಇನ್ನೂ ಹೆಚ್ಚಿನ ಹಣ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

    ಮಹೇಶ್ ಕುಮಟಳ್ಳಿ ಅವರನ್ನೂ ನಾವು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ನಡೆಸಲಿದ್ದೇವೆ. ಸಚಿವ ಸಂಪುಟ ವಿಸ್ತರಣೆಯಾಗಿದೆ ಆದಷ್ಟು ಬೇಗ ಖಾತೆ ಹಂಚಿಕೆಯಾಗುತ್ತದೆ. ಅನರ್ಹ ಶಾಕಸರೆಲ್ಲರೂ ಅರ್ಹ ಶಾಸಕರಾಗುತ್ತಾರೆ. ಸುಪ್ರೀಂಕೋರ್ಟಿನಲ್ಲಿ ಅವರಿಗೆ ಜಯ ಸಿಗುತ್ತದೆ ಎಂದರು.

  • ವಿತ್ತ ಮಾಂತ್ರಿಕ ಅರುಣ್ ಜೇಟ್ಲಿ ವಿಧಿವಶ

    ವಿತ್ತ ಮಾಂತ್ರಿಕ ಅರುಣ್ ಜೇಟ್ಲಿ ವಿಧಿವಶ

    ನವದೆಹಲಿ: ಮಾಜಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ (66) ವಿಧಿವಶರಾಗಿದ್ದಾರೆ.  ಅನಾರೋಗ್ಯದ ಹಿನ್ನೆಲೆಯಲ್ಲಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಜೇಟ್ಲಿ ಇಂದು ಮಧ್ಯಾಹ್ನ 12 ಗಂಟೆ 7 ನಿಮಿಷಕ್ಕೆ  ಚಿಕಿತ್ಸೆ ಫಲಕಾರಿಯಾಗದೇ  ಮೃತಪಟ್ಟಿದ್ದಾರೆ.

    ಅರುಣ್ ಜೇಟ್ಲಿ ಅವರು ಅನೇಕ ದಿನಗಳಿಂದ ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅನಾರೋಗ್ಯದ ಕಾರಣದಿಂದ ಫೆಬ್ರವರಿಯಲ್ಲಿ ಬಜೆಟ್ ಕೂಡ ಮಂಡನೆ ಮಾಡಿರಲಿಲ್ಲ.

    ಕಳೆದ ಕೆಲವು ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದ ಅರುಣ್ ಜೇಟ್ಲಿ ಮೇ 23ದಂದು ಏಮ್ಸ್ ನಿಂದ ಡಿಸ್ಚಾರ್ಜ್ ಆಗಿದ್ದರು. ಆರೋಗ್ಯದಲ್ಲಿ ಮತ್ತೆ ಏರುಪೇರು ಕಂಡ ಬಂದ ಹಿನ್ನೆಲೆಯಲ್ಲಿ ಆಗಸ್ಟ್ 9 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಆಸ್ಪತ್ರೆಗೆ ದಾಖಲಾಗಿದ್ದರು. 66 ವರ್ಷದ ಅರುಣ್ ಜೇಟ್ಲಿ ಅವರನ್ನು ನೆಫ್ರಾಲಜಿಸ್ಟ್, ಹೃದ್ರೋಗ ತಜ್ಞರು ತಪಾಸಣೆ ಮಾಡಿದ್ದರು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಕೇಂದ್ರ ಆರೋಗ್ಯ ಸಚಿವ ಹರ್ಷವಧನ್, ಗೃಹ ಸಚಿವ ಅಮಿತ್ ಶಾ ಅವರು ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಶುಕ್ರವಾರ (ಆಗಸ್ಟ್ 16) ರಾತ್ರಿ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಆಸ್ಪತ್ರೆಗೆ ತೆರಳಿ ಅರುಣ್ ಜೇಟ್ಲಿಯವರ ಆರೋಗ್ಯ ವಿಚಾರಿಸಿದ್ದರು.

     ಈ ಹಿಂದೆ ಅನಾರೋಗ್ಯದ ಹಿನ್ನೆಲೆಯಲ್ಲಿ ಅಮೆರಿಕಾಗೆ ತೆರಳಿ ಕ್ಯಾನ್ಸರ್ ಚಿಕಿತ್ಸೆ ಪಡೆದುಕೊಂಡಿದ್ದರು. ಹೀಗಾಗಿ ಈ ವರ್ಷದ ಬಿಜೆಪಿ ಸರ್ಕಾರದ ಫೆಬ್ರವರಿ ಬಜೆಟ್ ನ್ನು ಪಿಯೂಶ್ ಗೋಯಲ್ ಮಂಡಿಸಿದ್ದರು. 2014ರ ಮೋದಿ ಸರ್ಕಾರದಲ್ಲಿ ಅರುಣ್ ಜೇಟ್ಲಿ ಅತ್ಯಂತ ಪ್ರಮುಖ ನಾಯಕರಾಗಿದ್ದು, ವಿತ್ತ ಮತ್ತು ರಕ್ಷಣಾ ಇಲಾಖೆಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಶುಗರ್ ಸಮಸ್ಯೆಯಿಂದ ಬಳಲುತ್ತಿದ್ದ ಅರುಣ್ ಜೇಟ್ಲಿ 2018ರ ಮೇ ನಲ್ಲಿ ಕಿಡ್ನಿ ಕಸಿ(kidney transplant) ಮಾಡಿಸಿಕೊಂಡಿದ್ದರು.

    ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಅರುಣ್ ಜೇಟ್ಲಿ ಮತ್ತೆ ಹಳೆಯ ಹುರುಪಿನಲ್ಲಿಯೇ ಸಚಿವರಾಗಿ ಕೆಲಸ ಮಾಡಿಕೊಂಡಿದ್ದರು. ಆದರೆ ಅಂದಿನಿಂದ ಅರುಣ್ ಜೇಟ್ಲಿಯವರ ಆರೋಗ್ಯ ಕ್ಷೀಣಿಸುತ್ತಾ ಬಂದಿತ್ತು. ತಮ್ಮ ಆನಾರೋಗ್ಯವನ್ನು ಎಲ್ಲಿಯೂ ತೋರಿಸಿಕೊಳ್ಳದ ಅರುಣ್ ಜೇಟ್ಲಿ ತೆರೆಯ ಹಿಂದೆ ಎಂಬಂತೆ ಪಕ್ಷದ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

    ಬಾಲ್ಯ: ನವದೆಹಲಿಯಲ್ಲಿ ಡಿಸೆಂಬರ್ 28, 1952ರಂದು ಕಿಶನ್ ಹಾಗೂ ರತನ್ ಪ್ರಭಾ ಜೇಟ್ಲಿ ದಂಪತಿ ಮಗನಾಗಿ ಜನಿಸಿದ್ದ  ಜೇಟ್ಲಿ 1969-70ರ ಅವಧಿಯಲ್ಲಿ ನವದೆಹಲಿಯಲ್ಲಿ ಸೇಂಟ್ ಕ್ಸೇವಿಯರ್ಸ್ ಶಾಲೆಯಲ್ಲಿ ಪ್ರಾಥಮಿಕ ಶಾಲೆ ಅಧ್ಯಯನ ನಡೆಸಿ  1973ರಲ್ಲಿ ನವದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ ನಲ್ಲಿ ವಾಣಿಜ್ಯ ಪದವಿಯನ್ನು ಪಡೆದುಕೊಂಡರು. ಇವರು 1977ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ಫ್ಯಾಕಲ್ಟಿ ಆಫ್ ಲಾದಿಂದ ಕಾನೂನು ಪದವಿಯನ್ನು ಪಡೆದುಕೊಂಡಿದ್ದರು.

    ಭಾರತದ ಹೆಸರಾಂತ ರಾಜಕಾರಣಿ ಹಾಗೂ ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದರು. ಜೊತೆಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ ಸೇವೆಯನ್ನು ಸಲ್ಲಿಸಿದ್ದರು. ಭಾರತ ಸರ್ಕಾರದಲ್ಲಿ ವಾಣಿಜ್ಯ, ಕೈಗಾರಿಕೆ, ಕಾನೂನು ಹಾಗೂ ನ್ಯಾಯಾಂಗದ ಯೂನಿಯನ್ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

    ಆಂತರಿಕ ತುರ್ತು ಪರಿಸ್ಥಿತಿಯ (1975-77) ಘೋಷಣೆಯಾದಾಗ, 19 ತಿಂಗಳುಗಳ ಕಾಲ ಸೆರೆವಾಸದಲ್ಲಿದ್ದರು. 1973ರಲ್ಲಿ ರಾಜ್ ನರೇನ್ ಹಾಗೂ ಜಯ ಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ಆರಂಭವಾದ ಭ್ರಷ್ಟಾಚಾರಕ್ಕೆ ವಿರುದ್ಧದ ಚಳುವಳಿಯಲ್ಲಿ ಅರುಣ್ ಜೇಟ್ಲಿ ಪ್ರಮುಖ ಪಾತ್ರ ವಹಿಸಿದ್ದರು. 1977ರಿಂದ ದೇಶದ ಹಲವಾರು ಹೈಕೋರ್ಟ್ ಗಳಲ್ಲಿ ಹಾಗೂ ಭಾರತದ ಸುಪ್ರೀಂ ಕೋರ್ಟ್ ನಲ್ಲಿ ವಕೀಲರಾಗಿ ಕರ್ತವ್ಯ ನಿರ್ವಹಿಸಿದ್ದರು.

    ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಅಡಿಯಲ್ಲಿ ವಾಜಪೇಯಿ ಸರ್ಕಾರ ಅಧಿಕಾರಕ್ಕೆ ಬಂದಾಗ 1999 ಅಕ್ಟೋಬರ್ 13 ರಲ್ಲಿ  ಮಾಹಿತಿ ಹಾಗೂ ಪ್ರಸಾರ ರಾಜ್ಯ ಮಂತ್ರಿಯಾಗಿ (ಸ್ವತಂತ್ರ ಹೊಣೆಗಾರಿಕೆ) ನೇಮಕಗೊಂಡಿದ್ದರು.

  • ಪ್ರವಾಹದಲ್ಲಿ ಸಿಲುಕಿದ್ದ ಮಕ್ಕಳನ್ನು ಹೆಗಲ ಮೇಲೆ ಹೊತ್ತು ರಕ್ಷಿಸಿದ ಪೊಲೀಸ್ ಪೇದೆ: ವಿಡಿಯೋ

    ಪ್ರವಾಹದಲ್ಲಿ ಸಿಲುಕಿದ್ದ ಮಕ್ಕಳನ್ನು ಹೆಗಲ ಮೇಲೆ ಹೊತ್ತು ರಕ್ಷಿಸಿದ ಪೊಲೀಸ್ ಪೇದೆ: ವಿಡಿಯೋ

    ಗಾಂಧಿನಗರ: ಗುಜರಾತ್‍ನಲ್ಲಿ ಭೀಕರ ಮಳೆಯಾಗುತ್ತಿದ್ದು, ಪ್ರವಾಹದಲ್ಲಿ ಸಿಲುಕಿದ್ದ ಇಬ್ಬರು ಮಕ್ಕಳನ್ನು ಪೊಲೀಸ್ ಪೇದೆಯೊಬ್ಬರು ಭುಜದ ಮೇಲೆ ಹೊತ್ತು ರಕ್ಷಣೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪೊಲೀಸ್ ಪೇದೆ ಪೃಥ್ವಿರಾಜ್ ಜಡೇಜಾ ಅವರು ಶನಿವಾರ ಮೊರ್ಬಿ ಜಿಲ್ಲೆಯ ಪ್ರವಾಹ ಸಂತ್ರಸ್ತರ ರಕ್ಷಣೆಗೆ ನಿಯೋಜನೆ ಗೊಂಡಿದ್ದರು. ಈ ವೇಳೆ ತಂಕರ ಪಟ್ಟಣದಲ್ಲಿ ಇಬ್ಬರು ಬಾಲಕಿಯರು ಪ್ರವಾಹಕ್ಕೆ ಸಿಲುಕಿದ್ದರು. ಆ ಮಕ್ಕಳನ್ನು ಪೇದೆ ಪೃಥ್ವಿರಾಜ್ ಅವರು ಭುಜದ ಮೇಲೆ ಹೊತ್ತು ಪ್ರವಾಹದ ಮಧ್ಯೆ ಸುಮಾರು 1.5 ಕಿಮೀ ದೂರ ಸಾಗಿ ರಕ್ಷಣೆ ಮಾಡಿದ್ದಾರೆ.

    ಪೃಥ್ವಿರಾಜ್ ಅವರ ಸಾಹಸದ ದೃಶ್ಯವನ್ನು ಸ್ಥಳದಲ್ಲಿದ್ದ ಕೆಲವರು ತಮ್ಮ ಮೊಬೈಲ್ ಹಾಗೂ ಕ್ಯಾಮೆರಾದಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಫೇಸ್‍ಬುಕ್, ಟ್ವಿಟ್ಟರ್ ಹಾಗೂ ವಾಟ್ಸಪ್ ಸೇರಿದಂತೆ ವಿವಿಧ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೃಥ್ವಿರಾಜ್ ಅವರ ಕರ್ತವ್ಯ ನಿಷ್ಠೆ ಹಾಗೂ ಮಾನವೀಯತೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    ಈ ಕುರಿತು ಗುಜರಾತ್‍ನ ಡಿಜಿಪಿ ಷಂಷೀರ್ ಸಿಂಗ್ ಅವರು ಟ್ವೀಟ್ ಮಾಡಿದ್ದು, ನಮ್ಮ ಭುಜ ನಿಮ್ಮ ರಕ್ಷಣೆಗಾಗಿ ಇವೆ. ಮೊರ್ಬಿ ಪ್ರವಾಹ ಪೀಡಿತ ಪ್ರದೇಶದಲ್ಲಿ ಪೃಥ್ವಿರಾಜ್ ಅವರು ವೀರರಂತೆ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಸಂತ್ರಸ್ತರಿಗೆ ಅಭಯ ನೀಡಿದ್ದಾರೆ.

    ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಕೂಡ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರವಾಹದಲ್ಲಿ ಸಿಲುಕಿರುವ ಜನರನ್ನು ರಕ್ಷಣೆ ಮಾಡಲು ನಮ್ಮ ವೀರ ಯೋಧರು, ಭದ್ರತಾ ಸಿಬ್ಬಂದಿ ಬದ್ಧತೆ ಹಾಗೂ ತ್ಯಾಗವನ್ನು ಮೆರೆಯುತ್ತಿದ್ದಾರೆ. ಈ ವಿಡಿಯೋವನ್ನು ಒಮ್ಮೆ ನೋಡಿ ಎಂದು ತಿಳಿಸಿದ್ದಾರೆ.

    https://twitter.com/DVSadanandGowda/status/1160372596191289346