Tag: ಕೇಂದ್ರ ರಕ್ಷಣಾ ಸಚಿವೆ

  • ಚೈನಾ ವಸ್ತುಗಳ ಮೇಲೆ ನಿಷೇಧ ಯಾಕಿಲ್ಲ: ನಿರ್ಮಲಾ ಸೀತಾರಾಮನ್‍ಗೆ ವಿದ್ಯಾರ್ಥಿಗಳ ಪ್ರಶ್ನೆ

    ಚೈನಾ ವಸ್ತುಗಳ ಮೇಲೆ ನಿಷೇಧ ಯಾಕಿಲ್ಲ: ನಿರ್ಮಲಾ ಸೀತಾರಾಮನ್‍ಗೆ ವಿದ್ಯಾರ್ಥಿಗಳ ಪ್ರಶ್ನೆ

    – ಈ ಬಾರಿ ಬಹುಮತದಿಂದ ಗೆದ್ದರೆ 50 ವರ್ಷ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಖಚಿತ
    – ಕಾಂಗ್ರೆಸ್ ಅವಧಿಯಲ್ಲಿ ರಕ್ಷಣಾ ವ್ಯವಸ್ಥೆ ಕುಲಗೆಟ್ಟಿತ್ತು

    ಬೆಂಗಳೂರು: ರಾಜಾಜಿನಗರದ ಕೆಎಲ್‍ಇ ಸೊಸೈಟಿ ಸ್ಕೂಲ್‍ನಲ್ಲಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಅವರು ವಿದ್ಯಾರ್ಥಿಗಳ ಜೊತೆ ಭಾನುವಾರ ಸಂವಾದ ಕಾರ್ಯಕ್ರಮ ನಡೆಸಿದರು. ಚೈನಾ ವಸ್ತುಗಳ ಮೇಲೆ ನಿಷೇಧ ಹೇರುವುದು, ಪುಲ್ವಾಮಾ ದಾಳಿ ಸೇರಿದಂತೆ ಅನೇಕ ವಿಚಾರವಾಗಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ನಿರ್ಮಲಾ ಸೀತಾರಾಮನ್ ಉತ್ತರ ನೀಡಿದರು.

    ಪಾಕಿಸ್ತಾನ ಬಗ್ಗೆ ತಲೆಕೆಡಿಸಿಕೊಂಡಿರುವ ನಾವು ಚೀನಾವನ್ನ ಮರೆತಿರುವುದೇಕೆ? ಚೈನಾ ಉತ್ಪನ್ನಗಳ ಮೇಲೆ ನಿಷೇಧ ಏಕೆ ಹೇರುತ್ತಿಲ್ಲ ಎಂದು ವಿದ್ಯಾರ್ಥಿಯೊಬ್ಬ ಪ್ರಶ್ನಿಸಿದ. ಇದಕ್ಕೆ ಪ್ರತಿಕ್ರಿಯೆ ನೀಡಿದ ನಿರ್ಮಲಾ ಸೀತಾರಾಮನ್ ಅವರು, ಚೈನಾ ವಸ್ತುಗಳಿಗೆ ನಿಷೇಧ ಹೇರುವುದು ಅಷ್ಟು ಸುಲಭವಲ್ಲ. ಒಂದು ವೇಳೆ ನಿಷೇಧ ಹೇರಿದರೆ ಬಡ ಮತ್ತು ಮಧ್ಯಮ ವರ್ಗದವರ ಮೇಲೆ ಪೆಟ್ಟು ಬೀಳುತ್ತದೆ. ಚೀನಾದಿಂದ ಬರುತ್ತಿರುವ ಕಡಿಮೆ ದರದ ವಸ್ತುಗಳಿಂದಲೇ ಅನೇಕ ಸಣ್ಣ ಕೈಗಾರಿಕೆಗಳು ನಡೆಯುತ್ತಿವೆ. ಚೈನಾದ ವಸ್ತುಗಳನ್ನ ನಿಷೇಧಿಸಿದರೆ ಅದು ನಮ್ಮ ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಭಾರತದಲ್ಲಿ ಕಡಿಮೆ ದರದ ವಸ್ತುಗಳು ಗಗನಕ್ಕೇರಿದರೆ ಅದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸುವ ಮೂಲಕ ಉತ್ತರ ನೀಡಿದರು.

    ಅಮೆರಿಕವು ಒಸಮಾ ಬಿನ್ ಲ್ಯಾಡನ್ ಹತ್ಯೆ ಮಾಡಿದಂತೆ ಪುಲ್ವಾಮಾದಲ್ಲಿ ದಾಳಿ ಮಾಡಿದ ಉಗ್ರರಿಗೆ ತಿರುಗೇಟು ನೀಡಲು ಸಾಧ್ಯವಿಲ್ಲವೇ ಎಂದು ವಿದ್ಯಾರ್ಥಿಯೊಬ್ಬ ಪ್ರಶ್ನಿಸಿದ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವೆ ನಿರ್ಮಲಾ ಸೀತಾರಾಮನ್ ಅವರು, 40 ಹುತಾತ್ಮ ಯೋಧರ ಬಲಿದಾನ ನೀರಿನಲ್ಲಿ ಹೋಮವಾಗಲು ಬಿಡುವುದಿಲ್ಲ. 2014ರ ನಂತರ ಉಗ್ರರ ಉಪಟಳ ಕಡಿಮೆಯಾಗಿದೆ ಎಂದು ಉತ್ತರಿಸುವ ಮೂಲಕ ಪ್ರತಿಕಾರದ ಸುಳಿವು ಬಿಟ್ಟುಕೊಟ್ಟರು.

    ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯಕ್ರಮ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಕಳೆದ ಚುನಾವಣೆ ಬಿಜೆಪಿಯನ್ನು ಗೆಲ್ಲಿಸಿದ್ದು ಮುಖ್ಯವಲ್ಲ. ಈ ಬಾರಿ ಬಹುಮತದಿಂದ ಜಯಗಳಿಸುವಂತೆ ಮಾಡುವುದು ನಮಗೆ ಮುಖ್ಯವಾಗಿದೆ. ಒಂದು ವೇಳೆ 2019ರ ಚುನಾವಣೆಯಲ್ಲಿ ಬಿಜೆಪಿ ಬಹುಮತದಿಂದ ಸರ್ಕಾರ ರಚನೆ ಮಾಡಿದರೆ ಮುಂದಿನ 50 ವರ್ಷಗಳ ಕಾಲ ನಮ್ಮ ಪಕ್ಷವೇ ಅಧಿಕಾರದಲ್ಲಿರುತ್ತೆ ಎಂದು ತಿಳಿಸಿದರು.

    ಕೇಂದ್ರ ಸರ್ಕಾರದ ಅಭಿವೃದ್ಧಿಗಳನ್ನು ಪ್ರಸ್ತಾಪಿಸಿದ ಸಚಿವರು, ದಿನದ ಇಪ್ಪತ್ತು ನಾಲ್ಕು ಗಂಟೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಕೆಲಸ ಮಾಡುತ್ತಿದೆ. ಒಂದೇ ಒಂದು ರೂಪಾಯಿ ವ್ಯರ್ಥವಾಗದಂತೆ ದೇಶದ ಖಜಾನೆಯನ್ನು ಉಪಯೋಗಿಸಿದ್ದೇವೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅಧಿಕಾರಕ್ಕೆ ಬರುತ್ತೆಂದು ನಾನು ತುಂಬಾ ವಿಶ್ವಾಸ ಹೊಂದಿದ್ದೇನೆ ಎಂದರು.

    ವೇದಿಕೆಯಲ್ಲಿ ಒಂದಾಂದ ನಂತರ ಒಂದು ಯೋಜನೆಗಳನ್ನು ಗಂಟೆಗಟ್ಟಲೆ ಹೇಳಿಕೊಂಡು ಹೋಗಬಹುದು. 2014ರಲ್ಲಿ ಕೇಂದ್ರ ಸರ್ಕಾರ ರಚನೆಯಾದಾಗಿನಿಂದ ಯೋಜನೆಗಳು, ನಿರ್ಧಾರಗಳು ಬೆಳೆಯುತ್ತ ಬಂದಿವೆ. ನಿಮ್ಮ ನಿರ್ದಿಷ್ಟ ಪ್ರಶ್ನೆಗಳಿಗೆ ನಾನು ಖುಷಿಯಿಂದ ಉತ್ತರಿಸುವೆ. ಆಹಾರ ಭದ್ರತೆ, ಅಗತ್ಯ ವಸ್ತುಗಳ ಬೆಲೆ ಇನ್ನಿತರ ವಿಚಾರಗಳು ಹಿಂದೆ ಹೇಗಿದ್ದವು ಈಗ ಹೇಗಿದೆ ಅನ್ನುವ ವ್ಯತ್ಯಾಸ ನಿಮಗೆ ತಿಳಿದಿರಲಿ. ಜಿಎಸ್‍ಟಿ, ಕಪ್ಪು ಹಣ ವಿಚಾರಗಳು ಜಾರಿಗೆ ಬರುತ್ತಾ ಎನ್ನುವುದು ಪ್ರಶ್ನೆಯಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿದ್ದಾರೆ. ಭಾರತದ ಜೊತೆ ವಿಶ್ವದ ಅನೇಕ ದೇಶಗಳು ಉತ್ತಮ ಆಂತರಿಕ ಸಂಬಂಧ ಹೊಂದಿವೆ. ಇದು ಪ್ರಧಾನಿ ಅವರಿಂದ ಸಾಧ್ಯವಾಗಿದೆ. ಪ್ರಗತಿ ಕಾರ್ಯಕ್ರಮದ ಮೂಲಕ ಜಿಲ್ಲಾಧಿಕಾರಿ ಜೊತೆ ಮೋದಿ ನೇರವಾಗಿ ಚರ್ಚಿಸುತ್ತಾರೆ. ಇದು ಅವರ ಗುಣ ಎಂದರು.

    ಕಾಂಗ್ರೆಸ್ ಸರ್ಕಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಚಿವೆ ನಿರ್ಮಾಲಾ ಸೀತಾರಾಮನ್ ಅವರು, ಯುಪಿಎ ಅವಧಿಯಲ್ಲಿ ರಕ್ಷಣಾ ವ್ಯವಸ್ಥೆ ಕುಲಗೆಟ್ಟಿತ್ತು. ಸೈನಿಕರಿಗೆ ಬಂದೂಕು ಇದ್ದರೆ ಬುಲೆಟ್ ಇರುತ್ತಿರಲಿಲ್ಲ. ಬುಲೆಟ್ ಪ್ರೂಫ್ ಜಾಕೆಟ್ ಇರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅರುಣ್ ಜೇಟ್ಲಿಯವರ ಮಾರ್ಗದರ್ಶನದಲ್ಲಿ ಸಮಸ್ಯೆಗಳನ್ನು ನಾನು ನಿವಾರಿಸಿದ್ದೇನೆ. ಒಂದು ವರ್ಷದಲ್ಲಿ ಭಾರತೀಯ ರಕ್ಷಣಾ ವಲಯವನ್ನು ಬಲಗೊಳಿಸಲಾಗಿದೆ. ಒಂದೊಂದು ರೂಪಾಯಿಯನ್ನು ರಕ್ಷಣಾ ವಲಯಕ್ಕೆ ಸದ್ಬಳಕೆ ಆಗಿದೆ. ರಕ್ಷಣಾ ವಲಯಕ್ಕೆ ಮೀಸಲಿಟ್ಟ ಪ್ರತಿ ಅನುದಾನವನ್ನು ಒಂದೇ ವರ್ಷದಲ್ಲಿ ಸದ್ಬಳಕೆ ಮಾಡಿಕೊಂಡಿದ್ದೇವೆ. ಪ್ರತಿ ವರ್ಷ ಬರುವ ಅನುದಾನ ಎಲ್ಲೂ ದುರ್ಬಳಕೆಯಾಗದಿದ್ದರೆ ರಕ್ಷಣಾ ವಲಯ ಎಷ್ಟು ಬಲಗೊಳ್ಳುತ್ತದೆಂದು ನೀವೇ ಯೋಚಿಸಿ ವಿದ್ಯಾರ್ಥಿಗಳಿಗೆ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉರಿ ಸಿನಿಮಾ ನೋಡಿ  How’s the josh ಎಂದ ನಿರ್ಮಲಾ ಸೀತಾರಾಮನ್

    ಉರಿ ಸಿನಿಮಾ ನೋಡಿ How’s the josh ಎಂದ ನಿರ್ಮಲಾ ಸೀತಾರಾಮನ್

    ಬೆಂಗಳೂರು: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಹು ನಿರೀಕ್ಷಿತಾ ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾವನ್ನು ಮಾಜಿ ಸೈನಿಕರ ಜೊತೆ ನಗರದ ಸೆಂಟ್ರಲ್ ಸ್ಪಿರಿಟ್ ಮಾಲ್ ನಲ್ಲಿ ನೋಡಿದ್ದು, ಸಿನಿಮಾ ನೋಡಿದ ಬಳಿಕ ‘ಹೈ ಜೋಷ್’ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಮಾಲ್‍ಗೆ ಪ್ರವೇಶ ನೀಡುತ್ತಿದ್ದಂತೆ ನಿರ್ಮಲಾ ಸೀತಾರಾಮನ್ ಅವರಿಗೆ ಸಾರ್ವಜನಿಕರು ಬೆಂಗಳೂರಿಗೆ ಸ್ವಾಗತ ಎಂದು ಶುಭಕೋರಿದರು. ಅಲ್ಲದೇ ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆಗಳನ್ನು ಕೂಗಿದರು. ಆದಿತ್ಯ ಧಾರ್ ನಿರ್ದೇಶನದ ಉರಿ ದ ಸರ್ಜಿಕಲ್ ಸ್ಟ್ರೈಕ್ ಸಿನಿಮಾಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದ್ದು, ಉಗ್ರರರನ್ನು ಹತ್ಯೆಗೈದ ಭಾರತೀಯ ಯೋಧರ ರೋಚಕ ಕಥೆಯನ್ನು ಸಿನಿಮಾವನ್ನಾಗಿ ರೂಪಿಸಲಾಗಿದೆ.

    ಸಿನಿಮಾ ನೋಡಿ ಮತ್ತಷ್ಟು ಉಲ್ಲಾಸಗೊಂಡಿದ್ದ ಸಚಿವೆ ನಿರ್ಮಲಾ ಅವರು, ‘ವಾಟ್ ಎ ಪವರ್ ಪ್ಯಾಕ್ಡ್ ಮೂವಿ’ ಎಂದಿದ್ದಾರೆ. ಅಲ್ಲದೇ ಸಿನಿಮಾದಲ್ಲಿ ನಟನೆ ಮಾಡಿರುವ ವಿಕಿ ಕೌಶಲ್, ಯಾಮಿ ಗೌತಮ್, ಮೋಹಿತ್ ರೈನಾ, ಮತ್ತು ಪರೇಶ್ ರಾವಲ್ ಅವರು ಉತ್ತಮವಾಗಿ ಪಾತ್ರ ನಿರ್ವಹಣೆ ಮಾಡಿದ್ದಾರೆ. ಅವರಿಗೆ ಧನ್ಯವಾದ ಎಂದು ತಿಳಿಸಿದ್ದಾರೆ. ಇದಕ್ಕು ಮುನ್ನ ಟ್ವೀಟ್ ಮಾಡಿದ್ದ ಸಚಿವರು, ಕೊನೆಗೂ ಸಿನಿಮಾ ನೋಡಲು ಸಮಯವನ್ನ ಪಡೆದಿದ್ದಾಗಿ ಬರೆದುಕೊಂಡಿದ್ದರು.

    2016ರಲ್ಲಿ ಉರಿಯಲ್ಲಿ ನಡೆದ ಭಯೋತ್ಪಾದಕರ ದಾಳಿಯ ಪ್ರತಿಕವಾಗಿ ಭಾರತೀಯ ಸೈನ್ಯ ಪಾಕ್ ಆಕ್ರಮಿತ ಕಾಶ್ಮೀರ ನಸುಕಿನ ವೇಳೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಕೈಗೊಂಡು ಉಗ್ರರನ್ನು ಹೊಡೆದುರುಳಿಸಿತ್ತು. ಭಾರತೀಯ ಸೇನೆಗೆ ಗೌರವ ಸಲ್ಲಿಸುವ ಸಲುವಾಗಿ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿ ‘ಹೌ ಇಸ್ ದಿ ಜೋಷ್’ ಎಂದು ಕೇಳುವಾಗ ಪ್ರತಿಕ್ರಿಯೆಯಾಗಿ ‘ಹೈ ಸರ್’ ಎಂದು ಕೇಳುವುದೇ ರೋಮಾಂಚನವಾಗಿರುತ್ತದೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಡಿಯಲ್ಲಿ ನುಸುಳಿದ್ರೆ ನಾವು ಪ್ರತ್ಯುತ್ತರ ಕೊಡದೇ ಬಿಡಲ್ಲ: ನಿರ್ಮಲ ಸೀತಾರಾಮನ್

    ಗಡಿಯಲ್ಲಿ ನುಸುಳಿದ್ರೆ ನಾವು ಪ್ರತ್ಯುತ್ತರ ಕೊಡದೇ ಬಿಡಲ್ಲ: ನಿರ್ಮಲ ಸೀತಾರಾಮನ್

    ಬೆಂಗಳೂರು: ಗಡಿಯಲ್ಲಿ ಅಕ್ರಮವಾಗಿ ನುಸಳಿ ದಾಳಿಗೆ ಮುಂದಾದರೆ, ನಾವು ಪ್ರತ್ಯುತ್ತರ ನೀಡದೇ ಬಿಡುವುದಿಲ್ಲವೆಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲ ಸೀತಾರಾಮನ್ ಎಚ್ಚರಿಕೆ ನೀಡಿದ್ದಾರೆ.

    ಯಲಹಂಕ ವಾಯುನೆಲೆಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಪಾಕಿಸ್ತಾನ ಗಡಿಯನ್ನು ಉಲ್ಲಂಘಿಸಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಾಧ್ಯಮಗಳಿಂದ ನನಗೆ ಈ ವಿಚಾರ ಗೊತ್ತಾಗಿದೆ. ನನಗೆ ಹೆಚ್ಚಿನ ಮಾಹಿತಿ ಬಂದ ನಂತರ ಇದರ ಬಗ್ಗೆ ಮಾತನಾಡುತ್ತೇನೆ. ಅಲ್ಲದೇ ಗಡಿಯಲ್ಲಿ ಅಕ್ರಮವಾಗಿ ನುಸುಳಿ ದಾಳಿಗೆ ಮುಂದಾದರೇ, ನಾವು ಪ್ರತ್ಯುತ್ತರ ಕೊಡದೇ ಬಿಡುವುದಿಲ್ಲ ಎಂದು ಹೇಳಿದರು.

    ಸರ್ಜಿಕಲ್ ಸ್ಟ್ರೈಕ್ ಎರಡನೇ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಭಾನುವಾರ ದೇಶದ 53 ಸ್ಥಳಗಲ್ಲಿ `ಪರಾಕ್ರಮ್ ಪಥ್’ ದಿವಸ್ ಆಚರಣೆ ಮಾಡಲಾಗಿದೆ. ಸರ್ಜಿಕಲ್ ಸ್ಟ್ರೈಕ್ ಸ್ಮರಿಸುವುದು ಮತ್ತು ಆಚರಿಸುವುದು ಅತ್ಯವಶ್ಯಕವಾಗಿದೆ. ಉಗ್ರರು ನಮ್ಮ ದೇಶಕ್ಕೆ ನುಸುಳಿ ದಾಳಿ ಮಾಡಿದ್ದರು. ಇದರ ಪ್ರತಿಕಾರವಾಗಿ ನಮ್ಮ ಸೈನಿಕರು 2016ರ ಸೆಪ್ಟೆಂಬರ್ 28ರ ಮಧ್ಯರಾತ್ರಿ ಉಗ್ರರ ಅಡುಗುತಾಣಗಳ ಮೇಲೆ ದಾಳಿ ನಡೆಸಿದ್ದರು. ಹೀಗಾಗಿ ಈ ದಿನವನ್ನು ಉಗ್ರರಿಗೆ ಕೊಟ್ಟ ಎಚ್ಚರಿಕೆಯ ಸಂದೇಶವನ್ನಾಗಿ ಪರಾಕ್ರಮ್ ಪರ್ವ ದಿನವನ್ನು ಆಚರಿಸಿದ್ದೇವೆ ಎನ್ನುವ ಮೂಲಕ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ.

    ಸರ್ಜಿಕಲ್ ಸ್ಟ್ರೈಕ್ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿಲ್ಲ. ಅದು ರಾಜಕಾರಣದ ಆಟವಲ್ಲ. ಆದರೆ ಇದನ್ನು ರಾಜಕೀಯವಾಗಿ ಬಳಸುತ್ತಿರುವುದು ನಾಚಿಕೆಗೇಡು. ಮತ್ತೆ ಮತ್ತೆ ನಮ್ಮ ಗಡಿಯಲ್ಲಿ ದಾಳಿ ಮಾಡಿದ್ರೆ ನಾವು ಸುಮ್ಮನೇ ಕೂರುವುದಿಲ್ಲ ಎಂದರು.

    ಏರ್ ಶೋ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ, ಎಲ್ಲರಿಗೂ ಏರೋ ಇಂಡಿಯಾ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಆದರೆ ಕೆಲ ರಾಜ್ಯದವರು ಸಹ ನಮ್ಮಲ್ಲಿಯೂ ಏರೋ ಇಂಡಿಯಾ ನಡೆಸಿ ಎಂದು ಕೇಳುತ್ತಿದ್ದಾರೆ. ಉತ್ತರ ಪ್ರದೇಶದವರೂ ನಮ್ಮಲ್ಲಿಯೂ ಎಚ್‍ಎಎಲ್ ಇದೆ, ಇಲ್ಲೂ ಏರೋ ಇಂಡಿಯಾ ಶೋ ಮಾಡಿಕೊಡಿ ಎಂದು ಕೇಳುತ್ತಿದ್ದಾರೆ. ಯಾವುದೇ ರಾಜ್ಯದವರು ಕೇಳಬಾರದು ಅಂತಾ ಏನು ಇಲ್ಲ. ಅವರು ಹಾಗೆಯೇ ಕೇಳಿದ್ದರು. ಈ ಬಾರಿ ಏರ್ ಶೋದಲ್ಲಿ ರಫೇಲ್ ವಿಮಾನ ಹಾರಾಟ ಮಾಡುವುದಿಲ್ಲ. ರಫೇಲ್ ಇನ್ನೂ ನಿರ್ಮಾಣದ ಹಂತದಲ್ಲಿದೆ. ಏರ್ ಷೋ ಉದ್ಘಾಟನೆಗೆ ಅತಿಥಿಗಳನ್ನು ಇನ್ನೂ ನಿರ್ಧರಿಸಿಲ್ಲ ಎಂದು ತಿಳಿಸಿದರು.

    ಹೆಚ್‍ಎಎಲ್ ಸಿಬ್ಬಂದಿ ಕಡಿತದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ಈ ಮೊದಲು ಎಚ್‍ಎಎಲ್ ಜೊತೆ ಒಪ್ಪಂದ ಮಾಡಿಕೊಂಡಿತ್ತಾ? ಏಕಾಏಕಿ ಎನ್‍ಡಿಎ ಅಧಿಕಾರಿ ಬಂದ ಕೂಡಲೇ, ನಮ್ಮ ಸರ್ಕಾರ ರಫೇಲ್ ಡೀಲ್ ಕೊಟ್ಟಿದೆ ಎಂದು ಬೊಬ್ಬೆ ಹೊಡೆಯುತ್ತಿದೆ. ಆದರೆ ಇಲ್ಲಿಯ ತನಕ ಒಂದೇ ಒಂದು ಒಡಂಬಡಿಕೆಯ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಈಗ ರಫೇಲ್ ಡಸಾಲ್ಟ್ ಡೀಲ್ ಮಾಡಿರುವುದರಿಂದ 20 ರಿಂದ 30 ಸಾವಿರ ಎಚ್‍ಎಎಲ್ ಉದ್ಯೋಗಳನ್ನು ಕಸಿದುಕೊಂಡಿದೆ ಎಂದು ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಎಚ್‍ಎಎಲ್ ಪ್ರಕರಣಕ್ಕೆ ಮೊಸಳೆ ಕಣ್ಣಿರು ಹಾಕುತ್ತಿದ್ದಾರೆ. ಎಚ್‍ಎಎಲ್‍ಗೆ ಅವರು ಏನು ಮಾಡಿದ್ದಾರೆ ಎನ್ನುವುದನ್ನು ಅವರೇ ಬಂದು ಹೇಳಲಿ ಪ್ರಶ್ನಿಸಿದರು.

    ಬಿಬಿಎಂಪಿ ಮೆಯರ್ ಚುನಾವಣೆಗೆ ಗೈರಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಬಿಎಂಪಿ ಮೇಯರ್ ಚುನಾವಣೆಯ ದಿನದಂದೇ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಸೈನಿಕರೊಡನೆ ಪೂರ್ವ ನಿಗದಿಯಾದ ಕಾರ್ಯಕ್ರಮದಂತೆ ಸಂವಾದ ನಡೆಸುತ್ತಿದ್ದರು. ಶಿಷ್ಟಾಚಾರದ ಪ್ರಕಾರ ಕೇಂದ್ರ ರಕ್ಷಣಾ ಸಚಿವೆಯಾಗಿ ನನ್ನ ಉಪಸ್ಥಿತಿ ಅನಿವಾರ್ಯವಾಗಿತ್ತು. ಹೀಗಾಗಿ ನಾನು ಬರಲು ಸಾಧ್ಯವಾಗುವುದಿಲ್ಲವೆಂದು ಮೊದಲೇ ಎಲ್ಲರಿಗೂ ತಿಳಿಸಿದ್ದೆ. ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಲು ನಾನು ಕಾರಣವಲ್ಲ. ಒಂದು ವೇಳೆ ನಾನೇ ಸೋಲಿಗೆ ಕಾರಣ ಎಂದು ಆರೋಪ ಮಾಡಿದ್ದರೆ ಅವರ ಬಳಿ ನಾನೇ ಮಾತನಾಡುತ್ತೇನೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv