Tag: ಕೆ.ಸಿ ಕೊಂಡಯ್ಯ

  • ಭದ್ರತೆಯಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ- ಎಚ್‍ಡಿಕೆ ಹೇಳಿಕೆ ಸಮರ್ಥಿಸಿಕೊಂಡ ಹೊರಟ್ಟಿ

    ಭದ್ರತೆಯಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ- ಎಚ್‍ಡಿಕೆ ಹೇಳಿಕೆ ಸಮರ್ಥಿಸಿಕೊಂಡ ಹೊರಟ್ಟಿ

    ವಿಜಯಪುರ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿರುವ ಕುರಿತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದನ್ನು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಸಮರ್ಥಿಸಿಕೊಂಡಿದ್ದು, ಭದ್ರತೆಯಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

    ಮಹಿಳಾ ವಿವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರು ಹೇಳಿದ್ದರಲ್ಲಿ ತಪ್ಪಿಲ್ಲ. ಭದ್ರತೆಯಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ವಿಫಲತೆಗೆ ಅಧಿಕಾರಿಗಳೇ ಹೊಣೆ ಎಂದು ಎಚ್‍ಡಿಕೆ ಹೇಳಿಕೆಯನ್ನು ಸಮರ್ಥಿಸಿಕೊಂಡರು.

    ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಪ್ರತಿಕ್ರಿಯಿಸಿದ ಅವರು, ನೆರೆ ದೇಶದ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವ ಬದಲು, ದೇಶದಲ್ಲಿನ ಅಲ್ಪಸಂಖ್ಯಾತ ಸಮುದಾಯಕ್ಕೆ ರಕ್ಷಣೆ ನೀಡಬೇಕು. ನಮ್ಮ ಮನೆಯವರಿಗಿಂತ ಪಕ್ಕದ ಮನೆಯವರು ಅಂದವಾಗಿ ಕಾಣುತ್ತಾರೆ. ಲಿಂಗಾಯತರಿಗೆ ಅಲ್ಪಸಂಖ್ಯಾತ ಮಾನ್ಯತೆ ಬೇಡಿಕೆ ಈಡೇರಿಸದ ಸರ್ಕಾರ ಬೇರೆ ದೇಶಗಳ ಅಲ್ಪಸಂಖ್ಯಾತರಿಗೆ ಮಣೆ ಹಾಕುತ್ತಿದೆ. ಇದ್ದವರಿಗೆ ವ್ಯವಸ್ಥೆ ಇಲ್ಲ ಬೇರೆಯವರಿಗೆ ಮಣೆ ಎಷ್ಟು ಸರಿ ಎಂದು ಪ್ರಶ್ನಿಸಿದರು.

    ನೆರೆಯ ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯದ ಲಿಂಗಾಯತರಿಗೆ ಮೀಸಲಾತಿ ನೀಡಬೇಕು. ಮರಾಠಿಗರಿಗೆ ಮಹಾರಾಷ್ಟ್ರ ಸರ್ಕಾರ ನೀಡಿದಂತೆ ಇಲ್ಲಿಯೂ ಲಿಂಗಾಯತರಿಗೆ ಮೀಸಲಾತಿ ನೀಡಬೇಕು. ಇದರಿಂದ ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಸಮಾಜಕ್ಕೆ ಅನಕೂಲವಾಗುತ್ತದೆ ಎಂದು ಸಲಹೆ ನೀಡಿದರು.

    ಸರ್ಕಾರಿ ಭರವಸೆಗಳ ಸಮಿತಿ ವಿಜಯಪುರದ ಮಹಿಳಾ ವಿವಿಗೆ ಭೇಟಿ ನೀಡಿತ್ತು. ಸಮತಿ ಅಧ್ಯಕ್ಷ ಕೆ.ಸಿ.ಕೊಂಡಯ್ಯ, ಸದ್ಯಸ್ಯರಾದ ಬಸವರಾಜ ಹೊರಟ್ಟಿ, ಅರುಣ ಶಹಪುರ ಸೇರಿದಂತೆ ಇತರೆ ಸದಸ್ಯರು ಭೇಟಿ ನೀಡಿ ಪರಿಶೀಲಿಸಿದರು.

    ಈ ವೇಳೆ ಮಾತನಾಡಿದ ಕೆ.ಸಿ.ಕೊಂಡಯ್ಯ, ಸರ್ಕಾರಿ ಕಾಮಗಾರಿಗಳ ಬಗ್ಗೆ ವಿಧಾನ ಪರಿಷತ್ ಹಾಗೂ ವಿಧಾನಸಭೆಯಲ್ಲಿ ಸದಸ್ಯರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದರ ಭಾಗವಾಗಿ ಪ್ರವಾಸ ಮಾಡುತ್ತಿದ್ದೇವೆ. ಸರ್ಕಾರದ ಕಾಮಗಾರಿಗಳ ಸ್ಥಿತಿಗತಿ ಕುರಿತು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುತ್ತೇವೆ. ನಂತರ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ. ವರದಿ ಆಧಾರದ ಮೇಲೆ ಸರ್ಕಾರ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತದೆ ಎಂದರು.

  • ಜಿಂದಾಲ್‍ಗೆ ನೀಡ್ತಿರೋದು ರೈತರ ಭೂಮಿ ಅಲ್ಲ ಸರ್ಕಾರದ್ದು : ಕೆ.ಸಿ ಕೊಂಡಯ್ಯ

    ಜಿಂದಾಲ್‍ಗೆ ನೀಡ್ತಿರೋದು ರೈತರ ಭೂಮಿ ಅಲ್ಲ ಸರ್ಕಾರದ್ದು : ಕೆ.ಸಿ ಕೊಂಡಯ್ಯ

    ದಾವಣಗೆರೆ: ಜಿಂದಾಲ್ ಕಂಪನಿಗೆ ರೈತರ ಭೂಮಿಯನ್ನು ಯಾರೂ ಕೊಡ್ತಿಲ್ಲ. ಸರ್ಕಾರದ ಭೂಮಿಯನ್ನು ನೀಡಲಾಗುತ್ತಿದೆ ಎಂದು ಬಳ್ಳಾರಿಯ ವಿಧಾನ ಪರಿಷತ್ ಸದಸ್ಯ ಕೆ.ಸಿ ಕೊಂಡಯ್ಯ ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಂದಾಲ್‍ಗೆ ಸರ್ಕಾರಿ ಭೂಮಿ ನೀಡುವುದನ್ನು ವಿರೋಧಿಸುವುದು ಸರಿಯಲ್ಲ. ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ ಮಾಡುತ್ತಿರುವುದು ಒಳ್ಳೆಯ ಕೆಲಸ ಎಂದು ಹೇಳಿದರು.

    ಒಳ್ಳೆಯ ಕೆಲಸ ಮಾಡುವಾಗ ನೂರಾರು ವಿಘ್ನಗಳು ಬರುತ್ತವೆ. ಕನ್ನಡಪು ಹೋರಾಟಗಾರ ವಾಟಾಳ್ ನಾಗರಾಜ್ ಸೇರಿದಂತೆ ಹಲವರು ಬಂದು ವಿರೋಧ ಮಾಡುತ್ತಾರೆ. ಇಲ್ಲಿ ರೈತರ ಭೂಮಿಯನ್ನು ಯಾರೂ ಕೊಡ್ತಿಲ್ಲ. ಸರ್ಕಾರದ ಭೂಮಿಯನ್ನು ನೀಡಲಾಗುತ್ತಿದೆ. ಜಿಂದಾಲ್ ಒಳ್ಳೆಯ ಕಂಪನಿ. ಅದು ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತದೆ ಎಂದು ಸರ್ಕಾರಿ ಭೂಮಿ ಪರಭಾರೆಯನ್ನು ಕೆ.ಸಿ ಕೊಂಡಯ್ಯ ಸಮರ್ಥಿಸಿಕೊಂಡರು.

    ಸರ್ಕಾರದಿಂದ ನ್ಯಾಯಯುತವಾಗಿ ಭೂಮಿಯನ್ನು ಜಿಂದಾಲ್‍ಗೆ ನೀಡಲಾಗುತ್ತಿದೆ. ಉದ್ಯಮಗಳಿಗೆ ಹೀಗೆ ತಡೆ ಮಾಡಿದರೆ ಮುಂದೆ ಕೈಗಾರಿಕೆಗಳು ರಾಜ್ಯಕ್ಕೆ ಬರುವುದೇ ಕಷ್ಟವಾಗುತ್ತದೆ. ಸ್ವಪಕ್ಷದವರು ವಿರೋಧ ಮಾಡುವುದು ಅವರ ವೈಯಕ್ತಿಕ ವಿಚಾರ. ದಾಖಲೆಗಳನ್ನು ತೆಗೆದುಕೊಂಡು ಬಂದು ಯಾರೂ ಕೂಡ ಚರ್ಚೆ ಮಾಡುವುದಿಲ್ಲ. ಈ ವಿಚಾರದ ಬಗ್ಗೆ ಸತ್ಯಾಂಶ ತಿಳಿದವರು ಯಾರೂ ಕೂಡ ಇದಕ್ಕೆ ವಿರೋಧ ಮಾಡುವುದಿಲ್ಲ ಎಂದು ಹೇಳಿದರು.