Tag: ಕೆಲಸ

  • ಜಗಳ ಮಾಡಿಕೊಂಡು ಗಂಡ-ಹೆಂಡತಿ ಆತ್ಮಹತ್ಯೆ

    ಜಗಳ ಮಾಡಿಕೊಂಡು ಗಂಡ-ಹೆಂಡತಿ ಆತ್ಮಹತ್ಯೆ

    – ಲಾಕ್‍ಡೌನ್‍ನಲ್ಲಿ ಕೆಲಸ ಕಳ್ಕೊಂಡ ಪತಿ
    – ಅನಾಥವಾದ ಮಕ್ಕಳು

    ಲಕ್ನೋ: ಕೌಟುಂಬಿಕ ಕಲಹದಿಂದ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ್‌ನಲ್ಲಿ ನಡೆದಿದೆ.

    ರಾಕೇಶ್ ಕುಮಾರ್ ಸಿಂಗ್ (40) ಮತ್ತು ಪತ್ನಿ ಅರ್ಚನಾ (36) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಗುರುವಾರ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

    ಕುಟುಂಬದವರು ಮತ್ತು ನೆರೆಹೊರೆಯವರು ಅವರನ್ನು ತಕ್ಷಣ ಕೆಳಗಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ದಂಪತಿ ಮೃತಪಟ್ಟಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಇಬ್ಬರು ಜಗಳ ಮಾಡಿಕೊಂಡಿದ್ದಾರೆ. ಆದರೆ ಘಟನೆ ನಡೆದ ಸ್ಥಳದಲ್ಲಿ ಯಾವುದೇ ಡೆತ್‍ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿ ರಾಜ್‍ಕುಮಾರ್ ಅಗರ್ವಾಲ್ ಹೇಳಿದ್ದಾರೆ.

    ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆಗಿದ್ದ ವೇಳೆ ಸಿಂಗ್ ಕೆಲಸ ಕಳೆದುಕೊಂಡಿದ್ದ. ಇದರಿಂದ ಕುಟುಂಬದಲ್ಲಿ ಆಗಾಗ ಜಗಳ ನಡೆಯುತ್ತಿತ್ತು. ಅಲ್ಲದೇ ಆರ್ಥಿಕ ಸಂಕಷ್ಟದಲ್ಲಿದ್ದ ದಂಪತಿ ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಶ್ರೀವಾಸ್ತವ ಹೇಳಿದ್ದಾರೆ.

  • ಜೈಪುರದಲ್ಲಿರುವ ಭಿಕ್ಷುಕರಲ್ಲಿ ಇಬ್ಬರು ಮಾಸ್ಟರ್ ಡಿಗ್ರಿ, 3 ಪದವೀಧರರು ಪತ್ತೆ

    ಜೈಪುರದಲ್ಲಿರುವ ಭಿಕ್ಷುಕರಲ್ಲಿ ಇಬ್ಬರು ಮಾಸ್ಟರ್ ಡಿಗ್ರಿ, 3 ಪದವೀಧರರು ಪತ್ತೆ

    – ಕೆಲಸ ನೀಡಿದರೆ ಮಾಡಲು ಸಿದ್ಧ

    ಜೈಪುರ: ರಾಜಸ್ತಾನದ ಜೈಪುರದಲ್ಲಿ ಪೊಲೀಸರು ಸಮೀಕ್ಷೆ ನಡೆಸಿದ್ದು, ನಗರದಲ್ಲಿರುವ 1,162 ಭಿಕ್ಷುಕರಲ್ಲಿ ಇಬ್ಬರು ಸ್ನಾತಕೋತ್ತರ ಮತ್ತು ಮೂವರು ಪದವೀಧರರನ್ನು ಪತ್ತೆ ಮಾಡಿದ್ದಾರೆ.

    ಜೈಪುರವನ್ನು ಭಿಕ್ಷುಕರಿಂದ ಮುಕ್ತವಾಗಿ ಮಾಡುವುದು ಮತ್ತು ಅವರಿಗೆ ಕೆಲವು ಉದ್ಯೋಗ ಕೌಶಲ್ಯಗಳನ್ನು ನೀಡುವುದು, ಇತರರನ್ನು ಕೌಶಲ್ಯರಹಿತ ಉದ್ಯೋಗಗಳಿಗೆ ಪರಿಚಯಿಸುವುದು ಈ ಸಮೀಕ್ಷೆಯ ಉದ್ದೇಶವಾಗಿದೆ. ಈ ಸಮೀಕ್ಷೆಯ ಪ್ರಕಾರ ಜೈಪುರದಲ್ಲಿ 825 ಭಿಕ್ಷಕರು ಅನಕ್ಷರಸ್ಥರು, 39 ಜನ ಅಕ್ಷರಸ್ಥರು ಮತ್ತು 193 ಜನ ಶಾಲೆಗೆ ಹೋಗಿದ್ದವರು ಸಿಕ್ಕಿದ್ದಾರೆ.

    ಸಮೀಕ್ಷೆಯ ಪ್ರಕಾರ, ಪದವೀಧರ ಭಿಕ್ಷುಕರು ಜೈಪುರದ ರಾಮ್ನಿವಾಸ್ ಬಾಗ್, ಸಿ-ಸ್ಕೀಮ್ ಮತ್ತು ವಾಲ್ಡ್ ಸಿಟಿಯಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ವಿದ್ಯಾವಂತ ಭಿಕ್ಷುಕರು ಅವಕಾಶ ನೀಡಿದರೆ ಗೌರವಯುತ ಜೀವನವನ್ನು ಕಟ್ಟಿಕೊಳ್ಳಲು ಸಿದ್ಧವಿದ್ದೇವೆ ಎಂದು ಹೇಳಿದ್ದಾರೆ ಎಂದು ಸಮೀಕ್ಷೆ ಮಾಡಿದ ಸಂಸ್ಥೆಯವರು ಹೇಳಿದ್ದಾರೆ. ಅಕ್ಷರಸ್ಥ ಐದು ಜನ ಭಿಕ್ಷುಕರಲ್ಲಿ ಇಬ್ಬರು 32 ಮತ್ತು 35 ವರ್ಷದೊಳಗಿನವರು, ಇನ್ನಿಬ್ಬರು 50 ರಿಂದ 55 ವರ್ಷದೊಳಗಿನವರು ಮತ್ತು ಒಬ್ಬರು 65 ವರ್ಷ ವಯಸ್ಸಿನವರು ಎಂದು ತಿಳಿದು ಬಂದಿದೆ.

    ಐದು ಉನ್ನತ ಮಟ್ಟದ ವಿದ್ಯಾವಂತ ಭಿಕ್ಷುಕರು ಹೋಟೆಲ್‍ಗಳು, ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಮತ್ತು ಇತರ ಕೌಶಲ್ಯರಹಿತ ಉದ್ಯೋಗಗಳಲ್ಲಿ ಕೆಲಸ ಮಾಡಲು ಸಿದ್ಧವಿದ್ದೇವೆ ಎಂದು ಸರ್ವೇಯರ್ ಗಳಿಗೆ ತಿಳಿಸಿದ್ದಾರೆ. ಒಟ್ಟು ಭಿಕ್ಷುಕರಲ್ಲಿ ಕನಿಷ್ಠ 419 ಮಂದಿ ಜನರು ಈ ಕೆಲಸವನ್ನು ಬಿಟ್ಟು ಒಳ್ಳೆಯ ಜೀವನವನ್ನು ಕಟ್ಟಿಕೊಳ್ಳಲು ಸಿದ್ಧರಿದ್ದಾರೆ. ಜೊತೆಗೆ 27 ಭಿಕ್ಷುಕರು ಅಧ್ಯಯನ ಮಾಡಲು ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

    ಇದರಲ್ಲಿ ಓರ್ವ ಭಿಕ್ಷುಕ ಮಾತನಾಡಿ, ನಾನು ಝೂನ್‍ಝುನು ಮೂಲದವನು. 25 ವರ್ಷಗಳ ಹಿಂದೆ ಸರ್ಕಾರಿ ಕಾಲೇಜಿನಿಂದ ಪದವಿ ಪಡೆದಿದ್ದೇನೆ. ಉದ್ಯೋಗ ಹುಡುಕಲು ಜೈಪುರಕ್ಕೆ ಬಂದೆ ಆದರೆ ನನಗೆ ಇಲ್ಲಿ ಉದ್ಯೋಗ ಸಿಗಲಿಲ್ಲ. ಈ ಸಮಯದಲ್ಲಿ ನನಗೆ ತಿನ್ನಲು ಮತ್ತು ಮಲಗಲು ಸ್ಥಳವಿಲ್ಲದ ಪರಿಸ್ಥಿತಿ ನಿರ್ಮಾಣವಾಯಿತು. ನನಗೆ ಕುಟುಂಬದವರೆಂದು ಯಾರೂ ಇಲ್ಲ. ಆದ್ದರಿಂದ ಅನಿವಾರ್ಯವಾಗಿ ಬೀದಿಯಲ್ಲಿ ಭಿಕ್ಷೆ ಬೇಡಿ ಜೀವನ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

    ನಮಗೆ ಅವಕಾಶ ಕೊಟ್ಟರೆ ಗೌರವಯುತ ಜೀವನವನ್ನು ಕಟ್ಟಿಕೊಳ್ಳಲು ಸಿದ್ಧವಿದ್ದೇವೆ. ನಾನು ಕಾರ್ಮಿಕ ಕೆಲಸ ಅಥವಾಸ ನಗರವನ್ನು ಸ್ವಚ್ಛ ಮಾಡುವ ಕೆಲಸವಾಗಲಿ ಮಾಡಲು ಸಿದ್ಧ. ನನಗೆ ದೈನಂದಿನ ಅಗತ್ಯಗಳನ್ನು ಖರೀದಿಸಲು ಮತ್ತು ಮನೆಗೆ ಬಾಡಿಗೆ ಪಾವತಿಸಲು ಸಾಧ್ಯವಾಗುವಷ್ಟು ಸಂಬಳ ನೀಡಿದರೆ ಸಾಕು. ಎಲ್ಲರೂ ಒಳ್ಳೆಯ ಜೀವನವನ್ನು ಬಯಸುತ್ತಾರೆ. ಹಾಗೆಯೇ ನಾವು ಕೂಡ ಗೌರವಯುತ ಜೀವನವನ್ನು ಬಯಸುತ್ತೇವೆ ಎಂದು ತಿಳಿಸಿದ್ದಾರೆ.

  • ಕೊರೊನಾ ಸೋಂಕಿನ ನಡುವೆ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ಸಚಿವರು

    ಕೊರೊನಾ ಸೋಂಕಿನ ನಡುವೆ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ಸಚಿವರು

    ಬೆಂಗಳೂರು: ಕೊರೊನಾ ಸೋಂಕಿನ ನಡುವೆಯೂ ಆರೋಗ್ಯ ಸಚಿವ ಶ್ರೀರಾಮುಲು ಅವರು ಆಸ್ಪತ್ರೆಯಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    ಕಳೆದ ಮೂರು ದಿನಗಳ ಹಿಂದೆ ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಸದ್ಯ ಅವರು ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗೆ ಆಸ್ಪತ್ರೆಯಲ್ಲಿ ಇದ್ದುಕೊಂಡೆ ತಮ್ಮ ಕರ್ತವ್ಯವನ್ನು ಮಾಡುತ್ತಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಶ್ರೀರಾಮುಲು ಅವರು, ಕೊರೊನಾ ಸೋಂಕಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ಸೂಕ್ತ ಸುರಕ್ಷಿತ ಕ್ರಮಗಳ ನಡುವೆ ಕೆಲವು ಕಡತಗಳ ಪರಿಶೀಲನೆ ಮಾಡಲಾಯಿತು. ಅಗತ್ಯ ಸಾರ್ವಜನಿಕ ಕೆಲಸಗಳು ನಿಲ್ಲಬಾರದೆಂಬ ದೃಷ್ಟಿಯಿಂದ ಕೆಲವು ತುರ್ತು ಕೆಲಸಗಳನ್ನು ಆಸ್ಪತ್ರೆಯಿಂದಲೇ ನಿರ್ವಹಿಸುತ್ತಿದ್ದೇನೆ. ಸಹಕರಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

    ಜೊತೆಗೆ ಆಸ್ಪತ್ರೆ ನೀಡಿರುವ ಹೆಲ್ತ್ ಬುಲೆಟಿನ್ ಅನ್ನು ಟ್ವೀಟ್ ಮಾಡಿರುವ ಆರೋಗ್ಯ ಸಚಿವರು, ಕೊರೊನ ಸೋಂಕಿನ ಹಿನ್ನೆಲೆಯಲ್ಲಿ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗಳ ತಜ್ಞ ವೈದ್ಯರ ತಂಡ ನನಗೆ ಚಿಕಿತ್ಸೆ ನೀಡುತ್ತಿದೆ. ನಾನು ಆರೋಗ್ಯದಿಂದಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ. ನಿಮ್ಮೆಲ್ಲರ ಪ್ರೀತಿ ಪೂರ್ವಕ ಹಾರೈಕೆಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

  • ಪಾಠ ಕಲಿಸಿದ್ದ ಗುರುವಿನ ನೆರವಿಗೆ ಬಂದ ವಿದ್ಯಾರ್ಥಿಗಳು – ಟಿಫನ್ ಸೆಂಟರ್‌ಗೆ ಶೆಡ್ ನಿರ್ಮಾಣ

    ಪಾಠ ಕಲಿಸಿದ್ದ ಗುರುವಿನ ನೆರವಿಗೆ ಬಂದ ವಿದ್ಯಾರ್ಥಿಗಳು – ಟಿಫನ್ ಸೆಂಟರ್‌ಗೆ ಶೆಡ್ ನಿರ್ಮಾಣ

    – ಕೆಲಸ ಕಳೆದುಕೊಂಡಿದ್ದ ಶಿಕ್ಷಕನಿಗೆ ಸಹಾಯ

    ಹೈದರಾಬಾದ್: ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಅನೇಕರು ಉದ್ಯೋಗ ಕಳೆದುಕೊಂಡು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ತೆಲಂಗಾಣದಲ್ಲಿ ಕೆಲಸ ಕಳೆದುಕೊಂಡಿದ್ದ ಶಿಕ್ಷಕರೊಬ್ಬರಿಗೆ ವಿದ್ಯಾರ್ಥಿಗಳೆಲ್ಲರೂ ಸೇರಿ ಸಹಾಯ ಮಾಡಿದ್ದಾರೆ.

    52 ವರ್ಷದ ಶಿಕ್ಷಕ ಹನುಮಂತುಲ ರಘು ಅವರಿಗೆ ವಿದ್ಯಾರ್ಥಿಗಳೆಲ್ಲರೂ ಸೇರಿ ಒಂದು ಟಿಫಿನ್ ಸೆಂಟರ್ ಶುರು ಮಾಡಲು ಅವರಿಗೆ ಒಂದು ಶೆಡ್ ನಿರ್ಮಾಣ ಮಾಡಿಕೊಟ್ಟಿದ್ದಾರೆ.

    ಶಿಕ್ಷಕ ಹನುಮಂತುಲ ಅವರು ಜಗ್ತಿಯಲ್ ಜಿಲ್ಲೆಯ ಕೋರುಟ್ಲಾದ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆ ಕೆಲಸ ಕಳೆದುಕೊಂಡಿದ್ದರು. ಇದರಿಂದ ಜೀವನ ನಡೆಸುವುದು ತುಂಬಾ ಕಷ್ಟವಾಗಿತ್ತು. ಅವರ ಮಗ ಬಿ.ಎಡ್ ಮುಗಿಸಿದ್ದನು. ಆದರೆ ಅವನು ಕೂಡ ನಿರೋದ್ಯೋಗಿ ಆಗಿದ್ದನು.

    ಆರ್ಥಿಕವಾಗಿ ಕಷ್ಟ ಅನುಭವಿಸುತ್ತಿದ್ದ ಶಿಕ್ಷಕ ಹನುಮಂತುಲ ಬಗ್ಗೆ ತಿಳಿದ 1997-98 ಬ್ಯಾಚ್‍ನ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ವಾಟ್ಸಪ್ ಮೂಲಕ ಎಲ್ಲಾ ವಿದ್ಯಾರ್ಥಿಗಳನ್ನು ಒಗ್ಗೂಡಿ ಅವರಿಗೆ ಸಹಾಯ ಮಾಡಲು ನಿರ್ಧರಿಸಿದ್ದರು. ಅದರಂತೆಯೇ ವಿದ್ಯಾರ್ಥಿಗಳು ಜೊತೆಗೂಡಿ ಉಪಹಾರ ಕೇಂದ್ರ ತೆರೆಯುವುದಕ್ಕೆ ಶೆಡ್ ನಿರ್ಮಿಸಿ ಕೊಟ್ಟಿದ್ದಾರೆ. ಈ ಟಿಫಿನ್ ಸೆಂಟರ್‌ಗೆ ವಿದ್ಯಾರ್ಥಿಗಳೆಲ್ಲರೂ ಸೇರಿ ‘ಗುರುದಕ್ಷಿಣ’ ಎಂದು ಹೆಸರಿಟ್ಟಿದ್ದಾರೆ.

    ನಾನು ರುದ್ರಂಗಿ ಜಿಲ್ಲಾ ಪಂಚಾಯಿತಿ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಇಂಗ್ಲಿಷ್ ಮತ್ತು ಜೀವಶಾಸ್ತ್ರವನ್ನು ವಿದ್ಯಾರ್ಥಿಗಳಿಗೆ ಕಲಿಸಿದ್ದೆ. ಅದನ್ನು ವಿದ್ಯಾರ್ಥಿಗಳು ಮರೆಯಲಿಲ್ಲ. ಇಂದು ನನ್ನ ರಕ್ಷಣೆಗೆ ಬಂದ ನನ್ನ ವಿದ್ಯಾರ್ಥಿಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ನನಗೆ ಪದಗಳಿಲ್ಲ ಎಂದು ರಘು ಸಂತಸದಿಂದ ಹೇಳಿದ್ದಾರೆ.

    ಈಗಾಗಲೇ ಶೆಡ್ ಸಿದ್ಧವಾಗಿದ್ದು, ಈ ಮೂಲಕ ಶಿಕ್ಷಕ ಹನುಮಂತುಲ ಅವರು ಹೊಸ ಜೀವನವನ್ನು ಪ್ರಾರಂಭಿಸಿದ್ದಾರೆ. ಜೊತೆಗೆ ಅವರ ವಿದ್ಯಾರ್ಥಿಗಳು ಗ್ರಾಹಕರನ್ನು ಟಿಫಿನ್ ಸೆಂಟರ್‌ಗೆ ಕರೆತರುವ ಭರವಸೆ ನೀಡಿದ್ದಾರೆ.

  • ಕೆಲಸ ಕಳ್ಕೊಂಡು ತರಕಾರಿ ಮಾರಾಟ ಮಾಡ್ತಿದ್ದ ಟೆಕ್ಕಿಗೆ ಸೋನು ಸೂದ್ ಸಹಾಯ

    ಕೆಲಸ ಕಳ್ಕೊಂಡು ತರಕಾರಿ ಮಾರಾಟ ಮಾಡ್ತಿದ್ದ ಟೆಕ್ಕಿಗೆ ಸೋನು ಸೂದ್ ಸಹಾಯ

    – ಉದ್ಯೋಗಕ್ಕೆ ಸೇರಿದ ಮೂರು ತಿಂಗಳಿಗೆ ಕೆಲಸದಿಂದ ವಜಾ

    ಹೈದರಾಬಾದ್: ಕೊರೊನಾ ಲಾಕ್‍ಡೌನ್ ಶುರುವಾದಗಿನಿಂದ ಬಾಲಿವುಡ್ ನಟ ಸೋನು ಸೂದ್ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ. ಇದೀಗ ಕೋವಿಡ್‍ನಿಂದ ಕೆಲಸ ಕಳೆದುಕೊಂಡು ತರಕಾರಿ ಮಾರಾಟ ಮಾಡುತ್ತಿದ್ದ ಮಹಿಳಾ ಟೆಕ್ಕಿ ನೆರವಿಗೆ ಸೋನು ಸೂದ್ ಧಾವಿಸಿದ್ದಾರೆ. ಇದನ್ನೂ ಓದಿ: ದಯವಿಟ್ಟು ಅಜ್ಜಿಯ ಅಡ್ರೆಸ್ ಹೇಳಿ- ಸೋನು ಸೂದ್

    ಹೈದರಾಬಾದ್‍ನ ಟೆಕ್ಕಿ ಉಂಡಾಡಿ ಶಾರದಾ ಕೊರೊನಾದಿಂದ ಕೆಲಸ ಕಳೆದುಕೊಂಡು ಶ್ರೀನಗರ ಕಾಲೋನಿಯಲ್ಲಿ ತರಕಾರಿಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದರು. ಈ ಬಗ್ಗೆ ತಿಳಿದು ಸೋನು ಸೂದ್ ಮಹಿಳಾ ಟೆಕ್ಕಿಗೆ ಉದ್ಯೋಗವನ್ನು ಕೊಡಿಸಿದ್ದಾರೆ. ಇದನ್ನೂ ಓದಿ: ನೇಗಿಲು ಹಿಡಿದು ಉಳುಮೆ ಮಾಡಿದ ಯುವತಿಯರು- ಕೊಟ್ಟ ಮಾತಿನಂತೆ ಟ್ರ್ಯಾಕ್ಟರ್ ನೀಡಿದ ಸೋನು ಸೂದ್

    ಟೆಕ್ಕಿ ಶಾರದಾ ಬಗ್ಗೆ ರಿಚ್ಚಿ ಶೆಲ್ಸನ್ ಎಂಬವರು ಸೋನ್ ಸೂದ್ ಗಮನಕ್ಕೆ ತಂದಿದ್ದರು. “ಇವರು ಟೆಕ್ಕಿ ಶಾರದಾ, ಇತ್ತೀಚೆಗೆ ಕೊರೊನಾದಿಂದ ಕೆಲಸ ಕಳೆದುಕೊಂಡಿದ್ದಾರೆ. ನಂತರ ಅವರು ತರಕಾರಿ ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ನೀವು ಇವರಿಗೆ ಮತ್ತು ಕುಟುಂಬದವರಿಗೆ ಸಹಾಯ ಮಾಡಬೇಕು” ಎಂದು ಟ್ವೀಟ್ ಮಾಡುವ ಮೂಲಕ ಮನವಿ ಮಾಡಿಕೊಂಡಿದ್ದರು.

    ಇವರ ಮನವಿಗೆ ಸ್ಪಂದಿಸಿದ ನಟ, “ನನ್ನ ಅಧಿಕಾರಿಗಳು ಅವರನ್ನು ಭೇಟಿಯಾಗಿದ್ದಾರೆ. ಟೆಕ್ಕಿಯ ಸಂದರ್ಶನ ಮುಗಿದಿದ್ದು, ಈಗಾಗಲೇ ಉದ್ಯೋಗದ ಪತ್ರವನ್ನು ಕಳುಹಿಸಲಾಗಿದೆ. ಜೈ ಹಿಂದ್” ಎಂದು ಟ್ವಿಟ್ಟರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

    “ಸೋನು ಸೂದ್ ಅವರು ತುಂಬಾ ದಿನಗಳಿಂದ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಅವರ ಬಗ್ಗೆ ನನಗೆ ತಿಳಿದಿತ್ತು. ಆದರೆ ನನಗೆ ಅವರು ಫೋನ್ ಮಾಡಿದಾಗ ಆಶ್ಚರ್ಯ ಮತ್ತು ಸಂತೋಷವಾಯಿತು. ನಾನು ತರಕಾರಿ ಮಾರಾಟ ಮಾಡುತ್ತಿರುವುದಕ್ಕೆ ನಾಚಿಕೆ ಇಲ್ಲ. ಈ ಸಂದರ್ಭದಲ್ಲಿ ನಾವು ಬದುಕುಳಿಯುವುದು ಮುಖ್ಯವಾಗಿದೆ. ಹೀಗಾಗಿ ನಾವು ಯಾವುದೇ ಕೆಲಸ ಮಾಡಿದರೂ ನಾಚಿಕೆಪಡಬೇಕಿಲ್ಲ” ಎಂದು ಶಾರದಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

    ಶಾರದಾ ಹೈದರಾಬಾದ್‍ನಲ್ಲಿ ಎಂಎನ್‍ಸಿ ಕಂಪನಿಗೆ ಸೇರಿದ್ದರು. ಆದರೆ ಕೆಲಸಕ್ಕೆ ಸೇರಿದ ಮೂರು ತಿಂಗಳ ನಂತರ ಕೊರೊನಾ ವೈರಸ್ ಬಿಕ್ಕಟ್ಟಿನಿಂದ ಕಂಪನಿಯ ಶಾರದಾರನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಕೆಲಸ ಕಳೆದುಕೊಂಡ ನಂತರ ಸ್ಥಳೀಯ ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಮಾರಾಟ ಮಾಡುವ ಮೂಲಕ ತನ್ನ ಕುಟುಂಬವನ್ನು ಪೋಷಿಸಲು ಪ್ರಾರಂಭಿಸಿದ್ದರು.

    ಶಾರದಾ ಪ್ರತಿದಿನ ಮುಂಜಾನೆ 4 ಗಂಟೆಗೆ ಎದ್ದು, ತರಕಾರಿಗಳನ್ನು ಪಡೆಯಲು ಸಗಟು ಮಾರುಕಟ್ಟೆಗೆ ಹೋಗುತ್ತಾರೆ. ಅಲ್ಲಿಂದ ತರಕಾರಿ ಖರೀದಿಸಿಕೊಂಡು ನಂತರ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.

    ಸೋನು ಸೂದ್ ಅವರ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇವರೆಗೂ 47,000ಕ್ಕೂ ಹೆಚ್ಚು ಮಂದಿ ಲೈಕ್ಸ್ ಮಾಡಿದ್ದಾರೆ. ಅಲ್ಲದೇ 6,700ಕ್ಕೂ ಹೆಚ್ಚು ನೆಟ್ಟಿಗರು ನಟನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನೆಟ್ಟಿಗರೊಬ್ಬರು “ಈ ಕೊರೊನಾ ಸವಾಲಿನ ಕಾಲದಲ್ಲಿ ನೀವು ನಿಜವಾಗಿಯೂ ಸ್ಪೂರ್ತಿದಾಯಕರಾಗಿದ್ದೀರಿ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಬದುಕು ಕಟ್ಟಿಕೊಂಡ ಬೆಂಗಳೂರಿನಿಂದ ದೂರ ಉಳಿದ ಜನತೆ

    ಬದುಕು ಕಟ್ಟಿಕೊಂಡ ಬೆಂಗಳೂರಿನಿಂದ ದೂರ ಉಳಿದ ಜನತೆ

    – ಬೆಂಗಳೂರಿಗೆ ಮತ್ತೆ ಬರಲು ಹಿಂದೇಟು

    ಬೆಂಗಳೂರು: ನಗರಕ್ಕೆ ಬಂದು ಬದುಕು ಕಟ್ಟಿಕೊಂಡು ಹೇಗೋ ಜೀವನ ಮಾಡುತ್ತಿದ್ದ ಜನರು ಈಗ ಬೆಂಗಳೂರಿಗೆ ಮತ್ತೆ ವಾಪಸ್ ಬರಲು ಹಿಂದೇಟು ಹಾಕುತ್ತಿದ್ದಾರೆ. ಕೊರೊನಾ ಮಾಹಾಮಾರಿಯಿಂದ ಬೆಂಗಳೂರು ಬಿಟ್ಟು ಹೋದ ಜನರು ಮತ್ತೆ ವಾಪಸ್ ಬೆಂಗಳೂರಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

    ಬೆಂಗಳೂರಿನಲ್ಲಿ ಉತ್ತಮ ಸಂಬಳ ಪಡೆದು ಜೀವನ ಕಟ್ಟಿಕೊಂಡಿದ್ದ ಸಾವಿರಾರು ಜನರಿಗೆ ಕೊರೊನಾ ಮಹಾಮಾರಿ ಹೊಡೆತ ಕೊಟ್ಟಿದೆ. ಒಂದೆಡೆ ಲಾಕ್‍ಡೌನ್, ಸೀಲ್‍ಡೌನ್‍ನಿಂದ ಕಂಪನಿಗಳು ಆರ್ಥಿಕ ನಷ್ಟ ಅನುಭವಿಸಿವೆ. ಮತ್ತೊಂದೆಡೆ ಉದ್ಯೋಗಿಗಳಿಗೆ ಕಂಪನಿಗಳು ಸಂಬಳ ನೀಡಲೂ ಕಷ್ಟವಾಗಿದೆ. ಇದಲ್ಲದೇ ಅತೀ ವೇಗದಲ್ಲಿ ಬೆಂಗಳೂರಿನಲ್ಲಿ ಹಬ್ಬುತ್ತಿರುವ ಕೊರೊನಾದಿಂದ ಹಲವು ಉದ್ಯೋಗಿಗಳು ಕೆಲಸ ಬಿಟ್ಟು ಮನೆಗೆ ತೆರಳಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯಲ್ಲೂ ನೂರಾರು ಜನರು ಬೆಂಗಳೂರಿನಿಂದ ತವರು ಕಡೆ ಮುಖ ಮಾಡಿದ್ದು, ಕೆಲವರು ಕೊರೊನಾಗೆ ಹೆದರಿ ಕೆಲಸ ತೊರೆದು ಮನೆಯತ್ತ ಮುಖಮಾಡಿದ್ದಾರೆ. ಇಲ್ಲಿಯೇ ಸಣ್ಣ ಉದ್ಯೋಗ ಸಿಕ್ಕರೂ ಮಾಡುತ್ತೇನೆ. ಬೆಂಗಳೂರಿಗೆ ಹೋಗುವುದಿಲ್ಲ. ಇಂದಿಗೆ ನಾಲ್ಕು ತಿಂಗಳಿನಿಂದ ಕಂಪನಿಯಿಂದ ಸಂಬಳವಾಗಿಲ್ಲ. ಬೆಂಗಳೂರಿನಲ್ಲಿ ಹಣವಿಲ್ಲದೇ ಬದುಕಲು ಸಾಧ್ಯವಿಲ್ಲ. ಹೀಗಾಗಿ ಅನಿವಾರ್ಯ ಕಾರಣದಿಂದ ಮನೆಗೆ ಬಂದಿದ್ದೇನೆ ಎಂದು ಖಾಸಗಿ ಕಂಪನಿಯ ಉದ್ಯೋಗಿ ಜಗದೀಶ್ ಹೇಳಿದ್ದಾರೆ.

    ಇತ್ತ ಧಾರವಾಡದ ಜನತೆಗೂ ಬೆಂಗಳೂರಿಗೆ ಹೋಗಬೇಕೆಂದರೆ ಭಯ ಆಗುತ್ತಿದೆ. ಕಳೆದ 10 ರಿಂದ 20 ವರ್ಷಗಳ ಕಾಲ ಬೆಂಗಳೂರಲ್ಲೇ ಇದ್ದು ಕೆಲಸ ಮಾಡಿಕೊಂಡಿದ್ದ ಜನರಿಗೆ ಬೆಂಗಳೂರಿಗೆ ಬೇಡವಾಗಿದೆ. ಲಾಕ್‍ಡೌನ್ ನಂತರ ಧಾರವಾಡಕ್ಕೆ ಬಂದಿರುವ ಸಹಾಯ ನಿರ್ದೇಶಕರೊಬ್ಬರು, 19 ವರ್ಷಗಳಿಂದ ಬೆಂಗಳೂರಲ್ಲಿ ಇದ್ದರು. ಆದರೆ ಸಿಲಿಕಾನ್ ಸಿಟಿಯಲ್ಲಿ ಸೋಂಕು ಹರಡುವುದನ್ನು ನೋಡಿ ಹೋಗುವುದಕ್ಕೆ ಮನಸ್ಸಿಲ್ಲ. ಅಲ್ಲದೇ ಸಿನೆಮಾ ಇಂಡಸ್ಟ್ರಿ ಸ್ಥಿತಿಯಂತೂ ಬಹಳ ಚಿಂತಾಜನಕ ಸ್ಥಿತಿಯಲ್ಲಿದೆ. ಸದ್ಯ ಇಲ್ಲೆ ಏನಾದರೂ ಕೆಲಸ ಮಾಡಿಕೊಂಡು ಇರುತ್ತೇನೆ ಎನ್ನುತ್ತಿದ್ದಾರೆ.

    ಕೊರೊನಾ ಬಳಿಕ ಬೆಂಗಳೂರು ಬಿಟ್ಟು ತಮ್ಮ ಊರಿಗಳಿಗೆ ಹೋಗಿರುವ ಜನರು ಮತ್ತೆ ಬೆಂಗಳೂರಿಗೆ ವಾಪಸ್ ಆಗುವುದಿಲ್ಲ ಅಂತ ಹೇಳಿದ್ದಾರೆ. ಕೂಲಿನಾದರೂ ಮಾಡಿಕೊಂಡು ಇರುತ್ತೀವಿ, ಬೆಂಗಳೂರು ಸಹವಾಸ ಬೇಡ ಅಂತ ಕೆಲವರು ಕೃಷಿಯತ್ತ ಮುಖ ಮಾಡಿದ್ದರೆ, ಇನ್ನೂ ಕೆಲವರು ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಇಲ್ಲೇ ಇರುತ್ತೀವಿ ಎಂದು ಹೇಳುತ್ತಿದ್ದಾರೆ.

  • ಕೃಷಿಯತ್ತ ಮುಖ ಮಾಡಿದ ಐಟಿಬಿಟಿ ಜನ!

    ಕೃಷಿಯತ್ತ ಮುಖ ಮಾಡಿದ ಐಟಿಬಿಟಿ ಜನ!

    ಬೆಂಗಳೂರು: ಕೊರೊನಾದಿಂದ ಜನ ಹೈರಾಣಾಗಿ ಹೋಗಿದ್ದಾರೆ. ಇಷ್ಟು ದಿನ ಬೆಂಗಳೂರೇ ಎಲ್ಲಾ ಅಂದುಕೊಂಡಿದ್ದ ಯುವಕರು ಈಗ ಹಳ್ಳಿಗಳತ್ತ ಮುಖ ಮಾಡುತ್ತಿದ್ದಾರೆ. ಕಷ್ಟಾನೋ, ಸುಖಾನೋ ಹಳ್ಳಿಯಲ್ಲೇ ಕೃಷಿ ಮಾಡಿಕೊಂಡು ಜೀವನ ಸಾಗಿಸುವ ನಿರ್ಧಾರ ಮಾಡಿದ್ದಾರೆ.

    ಕಳೆದ 3-4 ವರ್ಷದಿಂದ ಬೆಂಗಳೂರಲ್ಲಿ ಜೀವನ ಸಾಗಿಸುತ್ತಿದ್ವಿ. ಆದರೆ ಕೊರೊನಾ ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಇಲ್ಲೇ ಇದ್ದು ವ್ಯವಸಾಯ ಮಾಡು ಅಂತ ಮನೆಯಲ್ಲೂ ಹೇಳುತ್ತಿದ್ದಾರೆ. ಹಾಗಾಗಿ ಮತ್ತೆ ಬೆಂಗಳೂರಿಗೆ ಹೋಗುವ ಯೋಚನೆ ಇಲ್ಲ ಅಂತ ಗಡಿ ಜಿಲ್ಲೆಯ ಚಾಮರಾಜನಗರದ ಯುವಕರು ಹೇಳುತ್ತಿದ್ದಾರೆ.

    ಬೆಂಗಳೂರು ಬಿಟ್ಟು ಬಂದ ಅನೇಕ ಉದ್ಯೋಗಿಗಳು ಮತ್ತೆ ಬೆಂಗಳೂರಿಗೆ ಕಾಲಿಡಲು ಭಯಪಡುತ್ತಿದ್ದಾರೆ. ವೈಟ್ ಫೀಲ್ಡ್ ನ ಫ್ಲಿಪ್ ಕಾರ್ಟ್ ಕಂಪನಿ ಉದ್ಯೋಗಿ ಹರೀಶ್ ತುಮಕೂರಲ್ಲೇ ಕೃಷಿ ಮಾಡಿಕೊಂಡು ಇರುತ್ತೀನಿ ಅಂತಿದ್ದಾರೆ. ಅದೇ ರೀತಿ ಪೀಣ್ಯದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಊರಲ್ಲೇ ಇದ್ದು ತಂದೆ-ತಾಯಿಯನ್ನು ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದಾರೆ.

    ಉಡುಪಿಯಲ್ಲೂ ಕೊರೊನಾ ಸೋಂಕು ಹೆಚ್ಚಿದೆ. ಬೆಂಗಳೂರಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ. ಬೆಂಗಳೂರಲ್ಲಿ ಆಸ್ಪತ್ರೆ ಸರಿಯಿಲ್ಲ, ಸರಿಯಾದ ಚಿಕಿತ್ಸೆ ಸಿಗುತ್ತೆ ಅನ್ನೋ ನಂಬಿಕೆ ಇಲ್ಲ. ಅದಕ್ಕಾಗಿ ಬೆಂಗಳೂರು ಬಿಟ್ಟು ಬಂದೆ ಎಂದು ಬೆಂಗಳೂರಿನಲ್ಲಿದ್ದ ಉದ್ಯೋಗಿ ಹೇಳಿದ್ದಾರೆ. ಬೆಂಗಳೂರಿನಲ್ಲಿದ್ದ ಮತ್ತೊಬ್ಬ ಉದ್ಯೋಗಿ ಕೆಲಸಕ್ಕೆ ಕರೆದರೆ ಮಾತ್ರ ಬೆಂಗಳೂರಿಗೆ ಹೋಗುತ್ತೀನಿ. ಬೆಂಗಳೂರಿನಲ್ಲಿ ಕೊರೊನಾ ಭಯವಿದೆ ಎಂದಿದ್ದಾರೆ.

    ಬೆಂಗಳೂರು ಅಂದರೆ ಸಾಕು ಕೂಲಿ ಕಾರ್ಮಿಕರು ಈಗ ಮೂಗು ಮುರಿಯುತ್ತಿದ್ದಾರೆ. ಸೋಂಕು ಹೆಚ್ಚಾಗುತ್ತಿದೆ. ಏನೇ ಆದರೂ ನಾವು ಬೆಂಗಳೂರಿಗೆ ಹೋಗಲ್ಲ. ನಮ್ಮ ಮನೆಯ ಸಾಮಗ್ರಿಗಳು ಬೆಂಗಳೂರಲ್ಲೇ ಇವೆ. ಅದನ್ನು ತರಲು ಹೋಗೋಣ ಅಂದರೂ ಭಯವಾಗುತ್ತದೆ. ಈ ಬಾರಿ ಉತ್ತಮ ಮಳೆಯಾಗುತ್ತಿದೆ. ಹಾಗಾಗಿ ಇಲ್ಲೇ ಕೃಷಿ ಮಾಡಿ ಜೀವನ ಸಾಗಿಸುತ್ತೀವಿ ಎಂದು ಬೆಂಗಳೂರಿನ ಬಗ್ಗೆ ರಾಯಚೂರಿನ ಜನ ಆತಂಕ ವ್ಯಕ್ತಪಡಿಸಿದ್ದಾರೆ.

  • ಯುವತಿಯರನ್ನ ಅಕ್ರಮವಾಗಿ ಡ್ಯಾನ್ಸ್ ಬಾರ್‌ಗಳಿಗೆ ಬಿಡ್ತಿದ್ದ ಆರೋಪಿ ಅರೆಸ್ಟ್

    ಯುವತಿಯರನ್ನ ಅಕ್ರಮವಾಗಿ ಡ್ಯಾನ್ಸ್ ಬಾರ್‌ಗಳಿಗೆ ಬಿಡ್ತಿದ್ದ ಆರೋಪಿ ಅರೆಸ್ಟ್

    – ಕೆಲಸ ಕೊಡಿಸೋದಾಗಿ ವಿದೇಶಕ್ಕೆ ಕರ್ಕೊಂಡು ಹೋಗ್ತಿದ್ದ

    ಬೆಂಗಳೂರು: ಮಾನವ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಸವರಾಜ್ ಕಳಸದ್ ಬಂಧಿತ ಆರೋಪಿ. ಆರೋಪಿ ಬಸವರಾಜ್ ಕಳಸದ್ ಮೂಲತಃ ಕೊಪ್ಪಳ ಜಿಲ್ಲೆಯವನು ಎಂದು ತಿಳಿದು ಬಂದಿದೆ. ಆರೊಪಿ ಬಸವರಾಜ್ ಕಳಸದ್ ಮೊದಲಿಗೆ ಯುವತಿಯರಿಗೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸುತ್ತಿದ್ದನು. ನಂತರ ಆರೋಪಿ ಯುವತಿಯರನ್ನು ವಿದೇಶಕ್ಕೆ ಕರೆದುಕೊಂಡು ಹೋಗಿ ಅಕ್ರಮವಾಗಿ ಡ್ಯಾನ್ಸ್ ಬಾರ್‌ಗಳಿಗೆ ಬಿಡುತ್ತಿದ್ದನು.

    ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಿಂದ ಯುವತಿಯರನ್ನ ಕರೆದುಕೊಂಡು ಹೋಗುತ್ತಿದ್ದನು ಎಂದು ತಿಳಿದು ಬಂದಿದೆ. ಇದೀಗ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಸದ್ಯಕ್ಕೆ ಈ ಕುರಿತು ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಲಾಕ್‍ಡೌನ್‍ನಿಂದ ಕೆಲಸ ಕಳೆದುಕೊಂಡ ಟೆಕ್ಕಿ – ಜೀವನ ನಿರ್ವಹಣೆಗೆ ತರಕಾರಿ ಮಾರಾಟ

    ಲಾಕ್‍ಡೌನ್‍ನಿಂದ ಕೆಲಸ ಕಳೆದುಕೊಂಡ ಟೆಕ್ಕಿ – ಜೀವನ ನಿರ್ವಹಣೆಗೆ ತರಕಾರಿ ಮಾರಾಟ

    ಮಂಡ್ಯ: ತನ್ನ ಮಗಳು ಚೆನ್ನಾಗಿ ಓದಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಒಳ್ಳೆಯ ಕೆಲಸಕ್ಕೆ ಸೇರಬೇಕೆಂದು ಆ ತಂದೆಯ ಬಯಕೆ ಆಗಿತ್ತು. ಅದರಂತೆ ಅವರ ಮಗಳು ಚೆನ್ನಾಗಿ ಓದಿ ಸಾಫ್ಟ್ ವೇರ್ ಕಂಪನಿಯಲ್ಲಿ ಟೆಕ್ಕಿ ಕೂಡ ಆಗಿದ್ದರು. ಆದರೆ ಇದೀಗ ಕೊರೊನಾ ಆರ್ಭಟದಿಂದಾಗಿ ಇದ್ದ ಕೆಲಸವನ್ನು ಕಳೆದುಕೊಂಡಿದ್ದಾರೆ. ಕೆಲಸವಿಲ್ಲದ ಕಾರಣ ಇದೀಗ ಜೀವನೋಪಾಯಕ್ಕೆ ತರಕಾರಿ ಮಾರುತ್ತಿದ್ದಾರೆ.

    ಸದ್ಯ ಕಳೆದ ಮೂರು ನಾಲ್ಕು ತಿಂಗಳಿನಿಂದ ಇಡೀ ವಿಶ್ವದಲ್ಲಿ ಕೊರೊನಾ ರಣಕೇಕೆ ನಡೆಸುತ್ತಿದೆ. ಕೊರೊನಾ ಮಟ್ಟ ಹಾಕುವ ಉದ್ದೇಶದಿಂದ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್‍ಡೌನ್ ಮೊರೆ ಹೋಗಿದ್ದಾವೆ. ಹೀಗಾಗಿ ಆರ್ಥಿಕ ಪರಿಸ್ಥಿತಿಯಿಂದಾಗಿ ಅನೇಕ ಕಂಪನಿಗಳು ಬಾಗಿಲು ಹಾಕಿದ್ದು, ಇದರಿಂದ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

    ಹೀಗಿದ್ದರೂ ಸಹ ಮಂಡ್ಯದ ಯುವತಿ ಅನು ಧೃತಿಗೆಡದೆ ಬದುಕು ಕಟ್ಟಿಕೊಳ್ಳಲು ತರಕಾರಿ ಮಾರಾಟ ಮಾಡುತ್ತಿದ್ದಾರೆ. ಅನು ಕಳೆದ ನಾಲ್ಕು ವರ್ಷದಿಂದ ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಲಾಕ್‍ಡೌನ್‍ನಿಂದಾಗಿ ಈಕೆ ಕೆಲಸ ಮಾಡುತ್ತಿದ್ದ ಕಂಪನಿ ಮುಚ್ಚಿದ ಪರಿಣಾಮ ಕೆಲಸವಿಲ್ಲದೇ ವಾಪಸ್ ಮಂಡ್ಯಗೆ ಬಂದಿದ್ದಾರೆ. ಮಂಡ್ಯಗೆ ಬಂದು ಏನು ಮಾಡಬೇಕು ಎಂದು ಕುಳಿತಿದ್ದಾಗ ಈಕೆಗೆ ಹೊಳೆದಿದ್ದು ತರಕಾರಿ ಮಾರಾಟ ಮಾಡುವುದು. ಹೀಗಾಗಿ ಈಕೆ ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದಾರೆ.

    ಅನು ಅವರ ತಂದೆ ವಿರೇಂದ್ರಸಿಂಗ್ ಮೂಲತಃ ಉತ್ತರ ಪ್ರದೇಶದವರು. ಮಂಡ್ಯದಲ್ಲಿ ಕಳೆದ 26 ವರ್ಷಗಳಿಂದ ನೆಲಸಿದ್ದು, ತನ್ನ ಮಗಳನ್ನು ಓದಿಸುವ ಸಲುವಾಗಿ ಪಾನಿಪುರಿ, ತರಕಾರಿ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದರು. ತಂದೆಯ ಶ್ರಮದ ಪ್ರತಿಫಲವಾಗಿ ಅನು ರಾಮನಗರದ ಗೌಸಿಯಾ ಎಂಜಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು. ನಂತರ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.

    ಇಷ್ಟು ವರ್ಷ ಕೆಲಸ ಮಾಡಿಕೊಂಡು ನೆಮ್ಮದಿಯಾಗಿ ಇದ್ದರು. ಆದರೆ ಇದೀಗ ಕೊರೊನಾದಿಂದ ಕೆಲಸ ಕಳೆದುಕೊಂಡಿದ್ದಾರೆ. ಈಗ ಅನು ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಬದುಕು ನಡೆಸಲು ತರಕಾರಿ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಾರೆ. ಮಗಳು ಮಾಡುತ್ತಿರುವ ಈ ಕೆಲಸ ಬೇಸರ ತಂದರು ಸಹ ನನ್ನ ಮಗಳು ಮಾಡುತ್ತಿರುವುದು ಇನ್ನೊಬ್ಬರಿಗೆ ಮಾದರಿಯಾಗುತ್ತಿರುವುದು ನನಗೆ ನೆಮ್ಮದಿ ಇದೆ ಎಂದು ಅನು ತಂದೆ ಹೇಳಿದ್ದಾರೆ.

  • ಕೊರೊನಾದಿಂದ ಕೆಲಸ ಕಳ್ಕೊಂಡ ತಂದೆ- ಬಿರಿಯಾನಿ ಮಾರಲು ನಿಂತ ಮಗ

    ಕೊರೊನಾದಿಂದ ಕೆಲಸ ಕಳ್ಕೊಂಡ ತಂದೆ- ಬಿರಿಯಾನಿ ಮಾರಲು ನಿಂತ ಮಗ

    – ಸ್ವ ಉದ್ಯೋಗ ಮಾಡೋ ಮೂಲಕ ಸ್ನೇಹಿತರಿಂದ ಕುಟುಂಬ ನಿರ್ವಹಣೆ

    ಹುಬ್ಬಳ್ಳಿ: ಕೊರೊನಾ ಮಹಾಮಾರಿ ಅದೆಷ್ಟೋ ಜನರ ಉದ್ಯೋಗ ಕಸಿದುಕೊಂಡು ಮೂಲೆ ಸೇರುವಂತೆ ಮಾಡಿದೆ. ಅಲ್ಲದೇ ಅನೇಕರು ಬೇರೆ ಉದ್ಯೋಗ ಮಾಡಲಾಗದೆ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಾಲೇಜಿಗೆ ಹೋಗಿ ವ್ಯಾಸಂಗ ಮಾಡಬೇಕಿದ್ದ ವಿದ್ಯಾರ್ಥಿಗಳಿಬ್ಬರು ಬಿರಿಯಾನಿ ಮಾರುವ ಮೂಲಕ ಕುಟುಂಬಕ್ಕೆ ಆಸರೆಯಾಗಿ ನಿಂತಿದ್ದಾರೆ.

    ಚೇತನ ಹಳ್ಳಿಕೇರಿ ತಂದೆ ಗ್ಯಾರೇಜ್ ನಡೆಸುತ್ತಿದ್ದರು. ಆದರೆ ಕೊರೊನಾ ಕಾರಣದಿಂದ ಗ್ರಾಹಕರು ಕಡಿಮೆಯಾಗಿ ಗ್ಯಾರೇಜ್ ಮುಚ್ಚಿದ್ದಾರೆ. ಹೀಗಾಗಿ ಕುಟುಂಬ ನಿರ್ವಹಣೆಗಾಗಿ ಚೇತನ ತನ್ನ ಸ್ನೇಹಿತ ಸೋಯೆಬ್ ಶೇಖ್ ಜೊತೆ ಸೇರಿ ಹೋಂ ಮೆಡ್ ಬಿರಿಯಾನಿ ಆರಂಭಿಸಿದ್ದಾರೆ.

    ತಮ್ಮ ಹತ್ತಿರವಿದ್ದ ಕಾರನ್ನೇ ಬಳಸಿಕೊಂಡು ಮನೆಯಲ್ಲಿಯೇ ಬಿರಿಯಾನಿ ಪ್ಯಾಕೇಟ್‍ಗಳನ್ನು ಸಿದ್ಧಪಡಿಸಿಕೊಂಡು ಬಂದು ದೇಶಪಾಂಡೆ ನಗರ ಸೇರಿದಂತೆ ಹಲವು ಕಡೆ ವ್ಯಾಪಾರ ಮಾಡುತ್ತಾರೆ. ಎಗ್ ಬಿರಿಯಾನಿ 49 ರೂಪಾಯಿ, ಚಿಕನ್ ಬಿರಿಯಾನಿ 59 ರೂಪಾಯಿಯಂತೆ ಮಾರಾಟ ಮಾಡುತ್ತಾರೆ. ಪ್ರತಿದಿನ 12 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೂ 20ಕ್ಕೂ ಹೆಚ್ಚು ಪ್ಯಾಕೇಟ್‍ಗಳನ್ನು ಮಾರಾಟ ಮಾಡುತ್ತಿದ್ದಾರೆ. ಎಲ್ಲಾ ಖರ್ಚು ಕಳೆದು ಪ್ರತಿ ದಿನ ಐದಾರು ನೂರು ಸಂಪಾದನೆ ಮಾಡುತ್ತಿದ್ದಾರೆ.

    ಚೇತನ ಆರ್.ಎನ್.ಶೆಟ್ಟಿ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ಪರೀಕ್ಷೆ ಬರೆದಿದ್ದಾರೆ. ಇನ್ನೂ ಸೋಯೆಬ್ ಅನಿವಾರ್ಯ ಕಾರಣಗಳಿಂದ ವಿದ್ಯಾಭ್ಯಾಸ ನಿಲ್ಲಿಸಿದ್ದಾನೆ. ಕೊರೊನಾ ಸಂಕಷ್ಟ ಕಾಲದಲ್ಲಿ ಈ ಸ್ನೇಹಿತರು ಸ್ವ ಉದ್ಯೋಗ ಸೃಷ್ಟಿಸಿಕೊಳ್ಳುವ ಮೂಲಕ ಕುಟುಂಬ ನಿರ್ವಹಣೆ ಮಾಡಿ ಇತರರಿಗೂ ಮಾದರಿಯಾಗಿದ್ದಾರೆ.