Tag: ಕೃಷಿ ಕಾಯಿದೆ

  • ಬಿಜೆಪಿ ಶಾಸಕನ ಬಟ್ಟೆ ಹರಿದು ಹಲ್ಲೆ – ಸಿಎಂ ಅಮರೀಂದರ್ ಸಿಂಗ್ ಖಂಡನೆ

    ಬಿಜೆಪಿ ಶಾಸಕನ ಬಟ್ಟೆ ಹರಿದು ಹಲ್ಲೆ – ಸಿಎಂ ಅಮರೀಂದರ್ ಸಿಂಗ್ ಖಂಡನೆ

    ಚಂಡೀಗಢ: ಮುಕ್ತಸರ್ ಜಿಲ್ಲೆಯ ಮಾಲೌಟ್‍ನಲ್ಲಿ ಶನಿವಾರ ಪ್ರತಿಭಟನೆ ನಡೆಸುತ್ತಿದ್ದ ರೈತರು ಪಂಜಾಬ್‍ನ ಬಿಜೆಪಿ ಶಾಸಕ ಅರುಣ್ ನಾರಂಗ್ ಬಟ್ಟೆ ಹರಿದು ಹೋಗುವಂತೆ ಹಲ್ಲೆ ನಡೆಸಿದ್ದಾರೆ.

    ಸ್ಥಳೀಯ ನಾಯಕರೊಂದಿಗೆ ಸುದ್ದಿಗೋಷ್ಠಿಗೆಂದು ಅಬೋಹರ್ ಶಾಸಕ ಅರುಣ್ ನಾರಂಗ್ ಮಾಲೌಟ್‍ಗೆ ಆಗಮಿಸಿದ್ದ ವೇಳೆ, ರೈತರು ಶಾಸಕರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲದೆ ಅವರ ವಾಹನದ ಮೇಲೆ ಕಪ್ಪು ಮಸಿ ಎಸೆದಿದ್ದಾರೆ. ಬಳಿಕ ಪೊಲೀಸರು ಅರುಣ್ ನಾರಂಗ್‍ರನ್ನು ರಕ್ಷಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

    ಈ ವಿಚಾರವಾಗಿ ಮಾತನಾಡಿದ ಉಪ ಪೊಲೀಸ್ ವರಿಷ್ಠಾಧಿಕಾರಿ ಜಸ್ಪಾಲ್ ಸಿಂಗ್, ರೈತರು ಬಿಜೆಪಿ ಶಾಸಕ ಅರುಣ್ ನಾರಂಗ್‍ರವರಿಗೆ ಸುದ್ದಿಗೋಷ್ಠಿ ನಡೆಸಲು ಬಿಡಲಿಲ್ಲ ಎಂದು ಹೇಳಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ಬಟ್ಟೆ ಹರಿದು ಹೋಗಿದ್ದ ಶಾಸಕರನ್ನು ಪೊಲೀಸರು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದಯ್ಯುತ್ತಿವುದನ್ನು ಕಾಣಬಹುದಾಗಿದೆ. ಸದ್ಯ ಘಟನೆ ಕುರಿತಂತೆ 7 ಮಂದಿ ಹೆಸರಿನಲ್ಲಿ ಹಾಗೂ 200-250 ಅಪರಿಚಿತ ವ್ಯಕ್ತಿಗಳ ವಿರುದ್ಧ ಸಾರ್ವಜನಿಕ ಸೇವೆಗೆ ಅಡ್ಡಿ, ಕೊಲೆ, ಹಲ್ಲೆ, ಜೀವ ಬೆದರಿಕೆ ಮತ್ತು ಗಲಭೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ಘಟನೆ ಕುರಿತಂತೆ ಮಾತನಾಡಿದ ಶಾಸಕ ಅರುಣ್ ನಾರಂಗ್, ಸುದ್ದಿಗೋಷ್ಠಿಗೆಂದು ನಾನು ಮಾಲೌಟ್‍ಗೆ ಹೋಗಿದ್ದೆ. ಈ ವೇಳೆ ಪ್ರತಿಭಟನಕಾರರು ನನಗೆ ಮಾತನಾಡಲು ಅವಕಾಶ ಮಾಡಿಕೊಡಲಿಲ್ಲ. ನನ್ನನ್ನು ಸುತ್ತುವರೆದರು. ನನ್ನ ಮೇಲೆ ಕೆಲವರು ಹಲ್ಲೆ ಮಾಡಿ ಹಿಂಸಾಕೃತ್ಯವನ್ನು ಎಸಗಿದರು ಎಂದು ಹೆಳಿದರು.

    ಈ ವಿಚಾರವಾಗಿ ಯಾರ ಮೇಲೆ ದೂರು ನೀಡಿದ್ದೀರಾ ಎಂಬ ಪ್ರಶ್ನೆಗೆ ಈ ಬಗ್ಗೆ ನಾನು ಪಕ್ಷದ ನಾಯಕರೊಂದಿಗೆ ಮಾತನಾಡುತ್ತೇನೆ ಎಂದರು.

    ಸದ್ಯ ಶಾಸಕರ ಮೇಲಿನ ಹಲ್ಲೆಯನ್ನು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಖಂಡಿಸಿದ್ದು, ಶಾಂತಿಯತೆಯನ್ನು ಹಾಳು ಮಾಡಲು ಪ್ರಯತ್ನಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನಾ ನಿರತ ರೈತರು ಹಿಂಸೆ ಮಾರ್ಗದತ್ತ ತೆರಳಬಾರದು ಹಾಗೂ ನೂತನ ಕೃಷಿ ಕಾಯಿದೆ ವಿಚಾರವಾಗಿ ಉಂಟಾಗುತ್ತಿರುವ ಸಮಸ್ಯೆಯನ್ನು ಬಗೆಹರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

  • ರೈತರು ಧ್ವಜಾರೋಹಣ ಮಾಡಬಾರದೆಂಬ ಸರ್ಕಾರದ ಧೋರಣೆಗೆ ನಾಚಿಕೆಯಾಗ್ಬೇಕು: ಚಂದ್ರಶೇಖರ್

    ರೈತರು ಧ್ವಜಾರೋಹಣ ಮಾಡಬಾರದೆಂಬ ಸರ್ಕಾರದ ಧೋರಣೆಗೆ ನಾಚಿಕೆಯಾಗ್ಬೇಕು: ಚಂದ್ರಶೇಖರ್

    ಬೆಂಗಳೂರು: ರೈತರು ಧ್ವಜಾರೋಹಣ ಮಾಡಬಾರದು ಎಂಬ ಸರ್ಕಾರದ ಧೋರಣೆಗೆ ನಾಚಿಕೆಯಾಗಬೇಕು. ನೈಸ್ ರೋಡ್ ಜಂಕ್ಷನ್ ನಿಂದ ರಾಷ್ಟ್ರ ಬಾವುಟವನ್ನು ಹಿಡಿದು ರ್ಯಾಲಿ ಆರಂಭ ಮಾಡುತ್ತೇವೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

    ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಕೃಷಿ ಕಾಯಿದೆಯನ್ನು ವಿರೋಧಿಸಿ ಇಂದು ಬೆಂಗಳೂರಿನಲ್ಲಿ ರೈತರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಈಗಾಗಲೇ ಮುಂಜಾನೆ ಕೋಲಾರದಿಂದ ಬೆಂಗಳೂರಿಗೆ ಬರುತ್ತಿದ್ದ ಟ್ರ್ಯಾಕ್ಟರ್‍ಗಳನ್ನು ಪೊಲೀಸರು ಅಡ್ಡ ಹಾಕಿ ವಶಪಡಿಸಿಕೊಂಡಿದ್ದಾರೆ. ಹೀಗಾಗಿ ರ್ಯಾಲಿಯಲ್ಲಿ ಕೆಲವು ರೈತರು ಭಾಗಿಯಾಗಿದ್ದರೆ, ಇನ್ನೂ ಕೆಲ ರೈತರು ಹೆದ್ದಾರಿ, ಟೋಲ್ ಗಳಲ್ಲಿಯೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.

    ಈ ಕುರಿತಂತೆ ಮಾತನಾಡಿದ ಕೋಡಿಹಳ್ಳಿ, ಸರ್ಕಾರ, ರೈತರ ಸ್ವಾಭಿಮಾನವನ್ನ ಕೆರಳಿಸುತ್ತಿದೆ. ರೈತರ ಚಳುವಳಿಯನ್ನು ಹತ್ತಿಕ್ಕುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ರೈತರು ಧ್ವಜಾರೋಹಣ ಮಾಡಬಾರದು ಎಂಬ ಸರ್ಕಾರದ ಧೋರಣೆಗೆ ನಾಚಿಕೆಯಾಗಬೇಕು. ನೈಸ್ ರೋಡ್ ಜಂಕ್ಷನ್ ನಿಂದ ರಾಷ್ಟ್ರ ಬಾವುಟವನ್ನು ಹಿಡಿದು ರ್ಯಾಲಿ ಆರಂಭ ಮಾಡುತ್ತೇವೆ. ಜೊತೆಗೆ ಟೋಲ್, ಹೆದ್ದಾರಿಗಳಲ್ಲಿಯೂ ಹೋರಾಟದ ತೀವ್ರತೆ ಹೆಚ್ಚಾಗಿರುತ್ತದೆ. ರೈತರ ವಾಹನಗಳನ್ನ ತಡೆಯಲು ಸರ್ಕಾರ ಪೊಲೀಸರ ಸರ್ಪಗಾವಲು ಹಾಕಿದೆ. ಎಲ್ಲಾ ಚೆಕ್ ಪೋಸ್ಟ್, ಟೋಲ್ ಗಳಲ್ಲಿ ರೈತರನ್ನ ಪೊಲೀಸರು ತಡೆಯುತ್ತಿದ್ದಾರೆ. ಆದರೆ ಟ್ರ್ಯಾಕ್ಟರ್, ಎತ್ತಿನ ಗಾಡಿಯನ್ನು ಪೊಲೀಸರು ತಡೆದರು ಇತರೆ ವಾಹನಗಳ ಮೂಲಕ ರೈತರು ಬೆಂಗಳೂರಿಗೆ ಬರುತ್ತಿದ್ದಾರೆ.

    ಇಂದು ರೈತರೆಲ್ಲರೂ ಸೇರಿ ವಿಧಾನಸೌಧಕ್ಕೆ ನುಗ್ಗುವ (ಮುತ್ತಿಗೆ) ಹಾಕುವ ಪ್ರಯತ್ನ ನಡೆಸಲಾಗುತ್ತದೆ. ಆದರೆ ಪ್ರಯತ್ನದಲ್ಲಿ ಕೆಲ ಬದಲಾವಣೆಗಳು ಆಗುತ್ತದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.