Tag: ಕೃತಕ ಬಣ್ಣ

  • ಟ್ಯಾಟೂಗೆ 22 ಹೆವಿ ಮೆಟಲ್‌ ಬಳಕೆಯಿಂದ ಚರ್ಮರೋಗ: ದಿನೇಶ್‌ ಗುಂಡೂರಾವ್‌

    ಟ್ಯಾಟೂಗೆ 22 ಹೆವಿ ಮೆಟಲ್‌ ಬಳಕೆಯಿಂದ ಚರ್ಮರೋಗ: ದಿನೇಶ್‌ ಗುಂಡೂರಾವ್‌

    – ಕೇಕ್‌ಗಳಿಗೆ ಅಪಾಯಕಾರಿ ರಾಸಾಯನಿಕ ಬಳಕೆ
    – ತಪಾಸಣೆ ಮುಂದಾದ ಆಹಾರ ಸುರಕ್ಷತಾ ಇಲಾಖೆ

    ಬೆಂಗಳೂರು: ಆಹಾರ ಸುರಕ್ಷತೆ (Food Safety) ಮತ್ತು ಔಷಧ ಆಡಳಿತದ ಅಧಿಕಾರಿಗಳ ವಿಶ್ಲೇಷಣಾ ವರದಿಯ ಪ್ರಕಾರ, ಟ್ಯಾಟೂಗೆ ಬಳಸುವ ಇಂಕ್‌ನಲ್ಲಿ 22 ಹೆವಿ ಮೆಟಲ್‌ ಬಳಕೆ ಮಾಡುತ್ತಿರುವುದು ಕಂಡುಬಂದಿದೆ. ಈ ಟ್ಯಾಟೂ ಇಂಕ್ ನಲ್ಲಿರುವ ಮೈಕ್ರೋ ಆರ್ಗ್ಯಾನಿಸಮ್ ಮತ್ತು ಹೆವಿ ಮೆಟಲ್ಸ್ ಚರ್ಮದ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಇದರಿಂದ ಅನೇಕ ಚರ್ಮ ರೋಗಗಳು ಉಂಟಾಗುತ್ತವೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ (Dinesh Gundu Rao) ತಿಳಿಸಿದರು.

    ಇಡ್ಲಿ ತಯಾರಿಕೆಗೆ ಬಳಸುವ ಪ್ಲಾಸ್ಟಿಕ್‌ ಹಾಗೂ ಹಸಿರು ಬಟಾಣಿಗೆ ಬಳಸುವ ಬಣ್ಣದಲ್ಲಿ ಕ್ಯಾನ್ಸರ್‌ ಕಾರಕ ಅಂಶಗಳು (Carcinogenicity Element) ಪತ್ತೆಯಾದ ಬೆನ್ನಲ್ಲೇ ಸಚಿವರು ಆಹಾರ ಸುರಕ್ಷತಾ ಇಲಾಖೆ ಆಯುಕ್ತ ಶ್ರೀನಿವಾಸ್ ಅವರ ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಇದನ್ನೂ ಓದಿ: 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ದೈಹಿಕ ಹಲ್ಲೆ ನಡೆಸಿ ವಿಕೃತಿ – ಅಪ್ರಾಪ್ತೆ ಜನನಾಂಗಕ್ಕೆ 28 ಹೊಲಿಗೆ

    ರಾಜ್ಯದಲ್ಲಿ ತಯಾರಾಗುವ ಮತ್ತು ಮಾರಾಟಕ್ಕಾಗಿ ಸರಬರಾಜಾಗುತ್ತಿರುವ ಔಷಧಗಳ ಮತ್ತು ಕಾಂತಿವರ್ಧಕ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳುವುದು ಮತ್ತು ಉತ್ತಮ ಗುಣಮಟ್ಟದ, ಸುರಕ್ಷಿತ ಹಾಗೂ ಪರಿಣಾಮಕಾರಿ ಔಷಧಗಳನ್ನು ನಿಯಂತ್ರಿತ ಬೆಲೆಗಳಲ್ಲಿ ಗ್ರಾಹಕರಿಗೆ ದೊರಕುವಂತೆ ಮಾಡುವುದೇ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಮುಖ್ಯ ಉದ್ದೇಶವಾಗಿರುತ್ತದೆ.

    ಔಷಧ ಆಡಳಿತ ವಿಭಾಗದ ಅಮಲು ಜಾರಿ ಅಧಿಕಾರಿಗಳಿಂದ ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಔಷಧ ಪರೀಕ್ಷಾ ಪ್ರಯೋಗಾಲಯಗಳಲ್ಲಿ ಜನವರಿ 2025ರಲ್ಲಿ 1,133 ಔಷಧಗಳ ಮಾದರಿಗಳನ್ನು ವಿಶ್ಲೇಷಣೆಗೆ ಪಡೆಯಲಾಗಿದೆ. ಅವುಗಳಲ್ಲಿ 938 ಉತ್ತಮ ಗುಣಮಟ್ಟದ ಔಷಧಗಳೆಂದು, 106 ಉತ್ತಮ ಗುಣಮಟ್ಟವಿಲ್ಲದ ಔಷಧಿಗಳೆಂದು ಘೋಷಿತವಾಗಿದೆ. ಫೆಬ್ರವರಿ ತಿಂಗಳಲ್ಲಿ 1,841 ಔಷಧ ಮಾದರಿಗಳನ್ನು ವಿಶ್ಲೇಷಣೆಗೆ ಪಡೆಯಲಾಗಿದೆ. ಇಲ್ಲಿಯವರೆಗೆ 58 ಮಾದರಿಗಳು ಅನುತ್ತಮ ಗುಣಮಟ್ಟದ ಔಷಧಿಗಳೆಂದು ಘೋಷಿತವಾಗಿದೆ ಎಂದು ವಿವರಿಸಿದರು.

    2024ರ ಡಿಸೆಂಬರ್‌ನಲ್ಲಿ ಕಾಂತಿವರ್ಧಕಗಳ ಗುಣಮಟ್ಟವನ್ನು ಪರೀಕ್ಷಿಸಲು ಇಂದಿನವರೆಗೆ 262 ಕಾಂತಿವರ್ಧಕ ಮಾದರಿಗಳನ್ನು ವಿಶ್ಲೇಷಣೆಗೆ ಪಡೆಯಲಾಗಿದೆ. ಅವುಗಳಲ್ಲಿ 120 ಉತ್ತಮ ಗುಣಮಟ್ಟದ ಕಾಂತಿವರ್ಧಕಗಳೆಂದು ಘೋಷಿತವಾಗಿದೆ. ಉಳಿದ ಮಾದರಿಗಳು ವಿಶ್ಲೇಷಣಾ ಹಂತದಲ್ಲಿರುತ್ತದೆ ಎಂದರು. ಇದನ್ನೂ ಓದಿ: ದಯವಿಟ್ಟು ಗಂಡಸರ ಬಗ್ಗೆ ಯೋಚಿಸಿ: ಪತ್ನಿ ದೌರ್ಜನ್ಯಕ್ಕೆ ಬೇಸತ್ತು ಟೆಕ್ಕಿ ಆತ್ಮಹತ್ಯೆ

    2024ರ ಡಿಸೆಂಬರ್ ಹಾಗೂ 2025ರ ಜನವರಿ ತಿಂಗಳಲ್ಲಿ ಔಷಧ ಮತ್ತು ಕಾಂತಿವರ್ಧಕ ಅಧಿನಿಯಮದ 1940 ಮತ್ತು ಅದರಡಿಯ ನಿಯಾಮಾವಳಿಗಳನ್ನು ಉಲ್ಲಂಘನೆ ಮಾಡಿದ 75 ಸಂಸ್ಥೆಗಳ ವಿರುದ್ಧ ಮಾನ್ಯ ನ್ಯಾಯಾಲಯಗಳಲ್ಲಿ ಮೊಕದ್ದಮೆ ದಾಖಲಿಸಲು ಅನುಮತಿ ನೀಡಲಾಗಿದೆ. ರಾಜ್ಯದಲ್ಲಿ NSQ ಬಂದಂತಹ ಪ್ರಕರಣಗಳಲ್ಲಿ ಜನವರಿ 2025ರ ಮಾಹೆಯಲ್ಲಿ ವಿಶೇಷ ಅಭಿಯಾನ ಕೈಗೊಂಡು ಸುಮಾರು 17 ಲಕ್ಷಕ್ಕಿಂತಲೂ ಹೆಚ್ಚಿನ ಮೌಲ್ಯದ ಅನುತ್ತಮ ಗುಣಮಟ್ಟವಲ್ಲದ ಔಷಧಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ ಎಂದು ತಿಳಿಸಿದರು.

    ಮಾದಕ ಔಷಧಗಳ (NDPS) ದುರ್ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನವರಿ 2025ರ ಮಾಹೆಯಲ್ಲಿ ವಿಶೇಷ ಅಭಿಯಾನ ಕೈಗೊಂಡು ಒಟ್ಟು 488 ಔಷಧ ಮಳಿಗೆಗಳನ್ನು ಪರಿವೀಕ್ಷಿಸಿ ಅದರಲ್ಲಿ ನಿಯಮಗಳನ್ನು ಉಲ್ಲಂಘಿಸಿರುವ 400 ಮಳಿಗೆಗಳಿಗೆ ಕಾರಣ ಕೇಳುವ ನೋಟಿಸ್‌ ಜಾರಿಗೊಳಿಸಲಾಗಿದೆ. ನಂತರ ನೋಟಿಸ್‌ಗೆ ಸಮಂಜಸ ಉತ್ತರ ನೀಡದ ಸಂಸ್ಥೆಗಳ ಪೈಕಿ 213 ಪರವಾನಗಿಗಳನ್ನು ಅಮಾನತ್ತುಗೊಳಿಸಿ, 03 ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ. 2025ರ ಫೆ.17 ರಿಂದ ಫೆ.19ರ ವರೆಗೆ ರಾಜ್ಯಾದ್ಯಂತ ಎಲ್ಲಾ ಔಷಧ ಮಳಿಗೆಗಳಲ್ಲಿ ಆಂಟಿಬಯೋಟಿಕ್ ಔಷಧಗಳ ದುರ್ಬಳಕೆ ಬಗ್ಗೆ ಅಮಲು ಜಾರಿ ಅಧಿಕಾರಿಗಳ ವಿಶೇಷ ತಪಾಸಣೆ ಕೈಗೊಂಡು 199 ಪರಿವೀಕ್ಷಣೆಗಳನ್ನು ನಡೆಸಲಾಗಿದೆ. 52 ಔಷಧ ಮಳಿಗೆಗಳಲ್ಲಿ ಆಂಟಿಬಯೋಟಿಕ್ ಔಷಧಗಳನ್ನು ಮಾರಾಟ ಮಾಡಿರುವುದು ಕಂಡುಬಂದಿರುತ್ತದೆ. ಈ 52 ಪ್ರಕರಣಗಳಲ್ಲಿ ಮೊಕದ್ದಮೆ ಹೂಡಲು ಗಮನಹರಿಸಲಾಗುತ್ತಿದೆ ಎಂದು ಹೇಳಿದರು.

    ಟ್ಯಾಟೂ ಅನ್‌ಸೇಫ್‌:
    ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಅಧಿಕಾರಿಗಳು ಟ್ಯಾಟೂ ಹಾಕಲು ಉಪಯೋಗಿಸುವ ಇಂಕ್ ಅನ್ನು ಮಾರುಕಟ್ಟೆಯಿಂದ ಪಡೆದು ವಿಶ್ಲೇಷಣೆ ನಡೆಸಲಾಗಿದೆ. ವಿಶ್ಲೇಷಣಾ ವದರಿಯ ಪ್ರಕಾರ ಟ್ಯಾಟೂನಲ್ಲಿ 22 ಹೆವಿ ಮೆಟಲ್‌ ಇರುವುದು ಕಂಡುಬಂದಿದೆ. ಇದು ಔಷಧ ಮತ್ತು ಕಾಂತಿವರ್ಧಕ ಅಧಿನಿಯಮಗಳ ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲ. ಈ ಟ್ಯಾಟು ಇಂಕ್ ನಲ್ಲಿರುವ ಮೈಕ್ರೋ ಆರ್ಗ್ಯಾನಿಸಮ್ ಮತ್ತು ಹೆವಿ ಮೆಟಲ್ಸ್ ಚರ್ಮದ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಇದರಿಂದ ಅನೇಕ ಚರ್ಮ ರೋಗಗಳು ಉಂಟಾಗುತ್ತವೆ. ಈ ಕುರಿತು ನಿಯಮಗಳನ್ನು ರೂಪಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿರುವುದರಿಂದ ಕ್ರಮ ಜರುಗಿಸಬೇಕು ಎಂದು ಕೇಂದ್ರಕ್ಕೆ ಒತ್ತಾಯಿಸಿದರು.

    ಅಲ್ಲದೇ ರಿಂಗರ್ ಲ್ಯಾಕ್ಟೇಟ್ ದ್ರಾವಣಕ್ಕೆ ಸಂಬಂಧಿಸಿದಂತೆ 246 ಬ್ಯಾಚ್‌ನ ಮಾದರಿಗಳಲ್ಲಿ 113 ಅನುತ್ತಮ ಗುಣಮಟ್ಟದೆಂದು ಘೋಷಿತವಾಗಿದೆ. ಈ ಸಂಬಂಧ ತಯಾರಿಕಾ ಸಂಸ್ಥೆಯಾದ ಪಶ್ಚಿಮ್‌ಬಂಗಾ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ 9 ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಇನ್ನುಳಿದ ಅನುತ್ತಮ ಗುಣಮಟ್ಟದ 25 ಪ್ರಕರಣಗಳಲ್ಲಿ ಮೊಕದ್ದಮೆ ಹೂಡಲು ಅನುಮತಿ ನೀಡಲಾಗಿದ್ದು, ಮೊಕದ್ದಮೆ ಹೂಡುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

    ಸುಧಾರಣಾ ಕ್ರಮಗಳೇನು?
    ಈ ಕಳಪೆ ಗುಣಮಟ್ಟದ ಔಷಧಗಳು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗದಂತೆ ತಡೆಯಬೇಕು. ಈಗ ಇರುವ ದಾಸ್ತಾನುಗಳನ್ನು ಹಿಂಪಡೆಯಲು ಚಿಲ್ಲರೆ ಔಷಧ ಮಳಿಗೆಗಳು / ಸಗಟು ಮಾರಾಟಗಾರರು / ತಯಾರಿಕಾ ಸಂಸ್ಥೆಗಳ ವಿವರಗಳನ್ನು ಗಣಕೀಕರಣಗೊಳಿಸಲಾಗುತ್ತಿದೆ. ಶೀಘ್ರದಲ್ಲಿ ಸದರಿ ತಂತ್ರಾಂಶವನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.\

    ಆಹಾರ ಸುರಕ್ಷತೆ:
    2025ರ ಜನವರಿಯಲ್ಲಿ 3,608 ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ಅವುಗಳಲ್ಲಿ 26 ಮಾದರಿಗಳು ಅಸುರಕ್ಷಿತ ಮತ್ತು 28 ಮಾದರಿಗಳು ಕಳಪೆ ಎಂದು ವರದಿಯಾಗಿದೆ. 2025ರ ಫೆಬ್ರವರಿ 2025ರ ಮಾಹೆಯಲ್ಲಿ 2,543 ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ಅವುಗಳಲ್ಲಿ 8 ಮಾದರಿಗಳು ಅಸುರಕ್ಷಿತ ಮತ್ತು 5 ಮಾದರಿಗಳು ಕಳಪೆ ಎಂದು ವರದಿಯಾಗಿದೆ ಎಂದು ಸಚಿವರು ವಿವರಿಸಿದರು.

    ಕೇಕ್‌ನಲ್ಲಿ ತಗ್ಗಿದ ಕೃತಕ ಬಣ್ಣದ ಪ್ರಮಾಣ:
    2024ರ ಮಾಹೆಯಲ್ಲಿ ಕೇಕ್ ತಯಾರಿಕೆಯಲ್ಲಿ ಕೃತಕ ಬಣ್ಣಗಳನ್ನು ಬಳಸುತ್ತಿರುವ ಕುರಿತಂತೆ 295 ಮಾದರಿಗಳನ್ನ ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿದ್ದು ಅವುಗಳಲ್ಲಿ 12 ಮಾದರಿಗಳು (ಶೇ.4.06ರಷ್ಟು) ಅಸುರಕ್ಷಿತ ಎಂದು ವರದಿಯಾಗಿತ್ತು. 2025ರಲ್ಲಿ ಪುನಃ ಪರಿಶೀಲನೆ ನಡೆಸಿದಾಗ 7 ಮಾದರಿಗಳು ಅನ್‌ಸೇಫ್‌ ಎಂದು ವರದಿ ಬಂದಿದೆ. ಹೀಗಾಗಿ ಉದ್ದಿಮೆದಾರರಿಗೆ ನಿಗದಿತ ಮಿತಿಯೊಳಗೆ ಬಣ್ಣ ಬಳಸುವಂತೆ ಅರಿವು ಮೂಡಿಸಲಾಗಿದೆ. ಜೊತೆಗೆ ಮತ್ತೊಂದು ಸುತ್ತಿನಲ್ಲಿ ಕೇಕ್‌ ಟೆಸ್ಟಿಂಗ್‌ ಮಾಡಲು ಆಹಾರ ಇಲಾಖೆಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

  • ಗೋಬಿ, ಕಾಟನ್‌ ಕ್ಯಾಂಡಿ ಆಯ್ತು.. ಈಗ ಚಿಕನ್‌, ಫಿಶ್‌ ಕಬಾಬ್‌ಗೆ ಕರ್ನಾಟಕ ಶಾಕ್‌!

    ಗೋಬಿ, ಕಾಟನ್‌ ಕ್ಯಾಂಡಿ ಆಯ್ತು.. ಈಗ ಚಿಕನ್‌, ಫಿಶ್‌ ಕಬಾಬ್‌ಗೆ ಕರ್ನಾಟಕ ಶಾಕ್‌!

    – ಕೃತಕ ಬಣ್ಣ ಬಳಕೆಯ ಆಹಾರ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ?
    – ಆಹಾರದಲ್ಲಿ ಬಳಸುವ ಕೃತಕ ಬಣ್ಣಗಳು ಯಾವುವು?

    ಗೋಬಿ ಮಂಚೂರಿ (Gobi Manchurian), ಕಾಟನ್‌ ಕ್ಯಾಂಡಿ (Cotton Candy) ಆಯ್ತು. ಈಗ ಕಬಾಬ್‌ ಪ್ರಿಯರಿಗೆ ರಾಜ್ಯ ಸರ್ಕಾರ ಶಾಕ್‌ ಕೊಟ್ಟಿದೆ. ಕ್ಯಾನ್ಸರ್‌ ಕಾರಕ ಅಂಶ ಇರುವ ಕಾರಣ ಗೋಬಿ ಮತ್ತು ಕ್ಯಾಂಡಿ ಕಾಟನ್‌ಗೆ ಕೃತಕ ಬಣ್ಣ ಬಳಕೆಗೆ ನಿಷೇಧ ಹೇರಿತ್ತು. ಅದರ ಬೆನ್ನಲ್ಲೇ ಚಿಕನ್‌ ಕಬಾಬ್‌, ಫಿಶ್‌ ಕಬಾಬ್‌ ಹಾಗೂ ಇತರೆ ಖಾದ್ಯಗಳ ತಯಾರಿಕೆಗೆ ಕೃತಕ ಬಣ್ಣ ಬಳಸುವುದಕ್ಕೆ ಸರ್ಕಾರ ನಿಷೇಧ ವಿಧಿಸಿ ಆದೇಶ ಹೊರಡಿಸಿದೆ.

    ಕಣ್ಣಿಗೆ ಆಕರ್ಷಣೆ, ನಾಲಿಗೆಗೆ ರುಚಿ ಸಿಕ್ಕರೆ ಮನುಷ್ಯ ತನ್ನ ಮೇಲಿನ ನಿಯಂತ್ರಣವನ್ನೇ ಕಳೆದುಕೊಳ್ಳುತ್ತಾನೆ. ತಿನಿಸುಗಳು ಮೊದಲು ಕಣ್ಣಿಗೆ ಆಕರ್ಷಣೀಯವಾಗಿ ಕಾಣುತ್ತವೆ. ಆಮೇಲೆ ರುಚಿ ಆಸ್ವಾಧಿಸಲು ಸೆಳೆಯುತ್ತವೆ. ರುಚಿಕರ ತಿನಿಸನ್ನು ನಾಲಿಗೆಗೆ ಇಟ್ಟರೆ ಸಾಕು, ಆಹಾ.. ಇನ್ನೂ ಬೇಕು ಎನಿಸುತ್ತದೆ. ಆದರೆ ಆರೋಗ್ಯಕ್ಕೆ? ರುಚಿಯ ಮುಂದೆ ಕೆಲವೊಮ್ಮೆ ಆರೋಗ್ಯ ಕಾಳಜಿಯೂ ಗೌಣವಾಗಿಬಿಡುತ್ತದೆ. ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಬಹುಪಾಲು ಮಂದಿ ಡೋಂಟ್ ಕೇರ್ ಎನ್ನುತ್ತಾರೆ. ಆದರೆ ಸರ್ಕಾರ ಬಿಡಬೇಕಲ್ಲ, ತನ್ನ ಸಮಾಜದ ಪ್ರತಿಯೊಬ್ಬ ನಾಗರಿಕರ ಹಿತಕ್ಕಾಗಿ ಕೆಲವೊಂದು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸುತ್ತದೆ. ಈಗಲೂ ಅಂತಹದ್ದೊಂದು ಘೋಷಣೆಯಾಗಿದೆ. ಇದನ್ನೂ ಓದಿ: ಕೇಂದ್ರದಿಂದ ರಾಜ್ಯಕ್ಕೆ ಸಿಗಬೇಕಾದ ನೆರವಿನ ವಿಚಾರದಲ್ಲಿ ಕೇಂದ್ರ ಸಚಿವರಿಂದ ಭರವಸೆ: ಡಿಕೆಶಿ

    ಚಿಕನ್ (Chicken Kabab), ಫಿಶ್ ಕಬಾಬ್‌ (Fish Kabab) ಹಾಗೂ ಇತರೆ ಖಾದ್ಯಗಳ ತಯಾರಿಕೆಗೆ ಕೃತಕ ಬಣ್ಣಗಳನ್ನು ಬಳಸುವುದಕ್ಕೆ ಕರ್ನಾಟಕ ಸರ್ಕಾರ ಸಂಪೂರ್ಣ ನಿಷೇಧ ವಿಧಿಸಿದೆ. ಚಿಕನ್ ಮತ್ತು ಫಿಶ್ ಕಬಾಬ್ ತಯಾರಿಕೆಯಲ್ಲಿ ಬಳಸುವ ಕೃತಕ ಬಣ್ಣಗಳ ಮಾದರಿಗಳನ್ನು ತಪಾಸಣೆಗೆ ಒಳಪಡಿಸಿದಾಗ ಕಳಪೆ ಗುಣಮಟ್ಟದ್ದು ಎಂದು ತಿಳಿದುಬಂದಿದೆ. ಕೃತಕ ಬಣ್ಣಗಳನ್ನು ಬಳಸಿದ ಖಾದ್ಯಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಆಹಾರ ಸುರಕ್ಷತಾ ಇಲಾಖೆ ಆಯುಕ್ತರು ತನಿಖೆ ನಡೆಸಿ ಕ್ರಮಕೈಗೊಳ್ಳಲಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿದೆ. ರಾಜ್ಯಾದ್ಯಂತ ಕಬಾಬ್ ಮತ್ತು ತಿನಿಸುಗಳಲ್ಲಿ ಕೃತಕ ಬಣ್ಣಗಳನ್ನು ಬಳಸುತ್ತಿರುವ ಕುರಿತು ರಾಜ್ಯದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಗೆ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ.

    39 ಕಬಾಬ್ ಮಾದರಿಗಳ ಪರೀಕ್ಷೆಯಿಂದ ಗೊತ್ತಾಗಿದ್ದೇನು?
    ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯು ಪ್ರಯೋಗಾಲಯಗಳಲ್ಲಿ 39 ಕಬಾಬ್‌ಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿತು. ಅವುಗಳ ಪೈಕಿ ಎಂಟರಲ್ಲಿ ಕೃತಕ ಬಣ್ಣವನ್ನು ಬಳಸಿರುವುದರಿಂದ ಸೇವನೆಗೆ ಅಸುರಕ್ಷಿತವಾಗಿದೆ ಎಂದು ತಿಳಿದುಬಂತು. ಇವುಗಳಲ್ಲಿ ಏಳು ಮಾದರಿಗಳಲ್ಲಿ ‘ಸೂರ್ಯಾಸ್ತ ಹಳದಿ’ (ಸೂರ್ಯ ಮುಳುಗುವ ಸಂದರ್ಭದಲ್ಲಿ ಕಂಡುಬರುವ ಬಣ್ಣ) ಹಾಗೂ ಒಂದರಲ್ಲಿ ‘ಸೂರ್ಯಾಸ್ತ ಹಳದಿ’ ಮತ್ತು ಕಾರ್ಮೋಸಿಸ್’ ಕಂಡುಬಂದಿದೆ. ಇದನ್ನೂ ಓದಿ: ಯಾರಾದರೂ ಆರಾಮಾಗಿ ಇರುತ್ತಾರಾ: ದರ್ಶನ್‌ ಭೇಟಿಯ ನಂತರ ರಕ್ಷಿತಾ ಪ್ರೇಮ್‌ ಭಾವುಕ

    ಯಾವ ಆರೋಗ್ಯ ಸಮಸ್ಯೆಗೆ ಕಾರಣ?
    ಕಳೆದ 50 ವರ್ಷಗಳಲ್ಲಿ ಕೃತಕ ಬಣ್ಣಗಳನ್ನು ಒಳಗೊಂಡಿರುವ ಆಹಾರಗಳ ಸೇವನೆಯು 500% ಹೆಚ್ಚಾಗಿದೆ. ಇಂತಹ ಪದಾರ್ಥ ಸೇವನೆಯಲ್ಲಿ ಮಕ್ಕಳ ಪಾಲು ಹೆಚ್ಚಿದೆ ಅಧ್ಯಯನಗಳು ಹೇಳುತ್ತವೆ. ತಜ್ಞರ ಪ್ರಕಾರ, ಆಹಾರದ ಬಣ್ಣಗಳು ಅನೇಕ ಗಂಭೀರ ಮತ್ತು ಅಪಾಯಕಾರಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಇದರಲ್ಲಿ ಹೃದ್ರೋಗಗಳು, ಮೆಟಾಬಾಲಿಕ್ ಸಿಂಡ್ರೋಮ್, ಜನನ ದೋಷಗಳು, ನರಕೋಶಗಳಿಗೆ ಹಾನಿ, ಮೂತ್ರಪಿಂಡ ಮತ್ತು ಕ್ಯಾನ್ಸರ್‌ನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹೇಳುತ್ತಾರೆ.

    ಅಲರ್ಜಿ ಸಮಸ್ಯೆ: ಕೆಲವರಿಗೆ ಕೃತಕ ಬಣ್ಣ ಬಳಕೆಯ ಆಹಾರ ಪದಾರ್ಥ ಸೇವಿಸಿದ ಬಳಿಕ ಅಸ್ತಮಾ, ಸೀನುವಿಕೆ, ಕಣ್ಣಿನಲ್ಲಿ ನೀರೂರುವುದು, ಚರ್ಮದ ಕಿರಿಕಿಯಂತಹ ಅಲರ್ಜಿ ಸಮಸ್ಯೆಯನ್ನು ಅನುಭವಿಸುತ್ತಾರೆ. ಇಂತಹವರು ಆರೋಗ್ಯಕರ ಆಹಾರ ಸೇವನೆ ಅಭ್ಯಾಸ ರೂಢಿಸಿಕೊಳ್ಳಬೇಕು. ಜೊತೆಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಇಲ್ಲದೇ ಹೋದರೆ, ಕೋಮಾ ಸ್ಥಿತಿಗೆ ಹೋಗಬಹುದು. ಪರಿಸ್ಥಿತಿ ಗಂಭೀರವಾದಲ್ಲಿ ಸಾವು ಕೂಡ ಸಂಭವಿಸಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.

    ವರ್ತನೆಯ ಸಮಸ್ಯೆ: ಕೃತಕ ಆಹಾರ ಬಣ್ಣಗಳು ಮಕ್ಕಳಲ್ಲಿ ಹೈಪರ್‌ಆಕ್ಟೀವ್‌, ನಿದ್ರಾಹೀನತೆ, ಕಿರಿಕಿರಿ, ಖಿನ್ನತೆ ಮತ್ತು ಕೋಪಗೊಳ್ಳುವಿಕೆಯಂತಹ ನಡವಳಿಕೆಯ ಬದಲಾವಣೆಗಳಿಗೆ ಕಾರಣವಾಗುತ್ತವೆ ಎಂದು ಅಧ್ಯಯನ ತಿಳಿಸಿದೆ. ಇದನ್ನೂ ಓದಿ: ದರ್ಶನ್‌ ಭೇಟಿಗೆ ಪರಪ್ಪನ ಅಗ್ರಹಾರಕ್ಕೆ ಆಗಮಿಸಿದ ರಕ್ಷಿತಾ, ಪ್ರೇಮ್‌

    ಜೀರ್ಣಕ್ರಿಯೆ ಸಮಸ್ಯೆ: ಕೃತಕ ಆಹಾರ ಬಣ್ಣಗಳಿಂದ ಜೀರ್ಣಕ್ರಿಯೆ ಸಮಸ್ಯೆಗೆ ಕಾರಣವಾಗುತ್ತದೆ. ಇದರಿಂದ ತೀವ್ರವಾದ ಅತಿಸಾರ, ಎದೆಯುರಿ ಮತ್ತು ಮಲಬದ್ಧತೆಗೆ ಕಾರಣವಾಗುತ್ತದೆ.

    ಕ್ಯಾನ್ಸರ್‌: ರೆಡ್‌ 40, ಯೆಲ್ಲೋ 5 ಮತ್ತು ಯೆಲ್ಲೋ 6 (ಕೃತಕ ಆಹಾರ ಬಣ್ಣಗಳು) ಇವು ಕ್ಯಾನ್ಸರ್ ಕಾರಕ ವಸ್ತುಗಳು ಎಂದು ಅಧ್ಯಯನಗಳು ಹೇಳುತ್ತದೆ. ಇವುಗಳಲ್ಲಿ ಮಾಲಿನ್ಯಕಾರಕ ಅಂಶಗಳಿರುತ್ತವೆ. ಬೆಂಜಿಡಿನ್, 4-ಅಮಿನೊಬಿಫೆನಿಲ್ ಮತ್ತು 4-ಅಮಿನೊಅಜೋಬೆನ್ಜೆನ್ ಆಹಾರದ ಬಣ್ಣಗಳಲ್ಲಿ ಕಂಡುಬರುವ ಕಾರ್ಸಿನೋಜೆನ್‌ಗಳಾಗಿವೆ.

    ಆಹಾರದಲ್ಲಿ ಬಳಸುವ ಕೃತಕ ಬಣ್ಣಗಳು ಯಾವುವು?
    ರೆಡ್‌ 3: ಇದನ್ನು ಎರಿಥ್ರೋಸಿನ್ ಎಂದೂ ಕರೆಯುತ್ತಾರೆ. ಈ ಚೆರ್ರಿ-ಕೆಂಪು ಬಣ್ಣವನ್ನು ಸಾಮಾನ್ಯವಾಗಿ ಕ್ಯಾಂಡಿ, ಪಾಪ್ಸಿಕಲ್ಸ್ ಮತ್ತು ಕೇಕ್-ಅಲಂಕರಣ ಜೆಲ್‌ಗಳಲ್ಲಿ ಬಳಸಲಾಗುತ್ತದೆ.

    ರೆಡ್‌ 40: ಅಲ್ಲೂರ ಕೆಂಪು ಬಣ್ಣವು ಗಾಢವಾಗಿರುತ್ತದೆ. ಇದನ್ನು ಕ್ರೀಡಾ ಪಾನೀಯಗಳು, ಕ್ಯಾಂಡಿ, ಕಾಂಡಿಮೆಂಟ್ಸ್ ಮತ್ತು ಸಿರಿಧಾನ್ಯಗಳಲ್ಲಿ ಬಳಸಲಾಗುತ್ತದೆ. ಇದನ್ನೂ ಓದಿ: ಬಿಬಿಎಂಪಿಯಲ್ಲಿ ಕೋಟಿ ಕೋಟಿ ಹಣ ಅಕ್ರಮ ವರ್ಗಾವಣೆ ಬಯಲಿಗೆ

    ಯೆಲ್ಲೋ 5: ಟಾರ್ಟ್ರಾಜೈನ್ ನಿಂಬೆ-ಹಳದಿ ಬಣ್ಣವಾಗಿದೆ. ಇದನ್ನು ಕ್ಯಾಂಡಿ, ತಂಪು ಪಾನೀಯಗಳು, ಚಿಪ್ಸ್ ಮತ್ತು ಪಾಪ್ಕಾರ್ನ್‌ಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.

    ಬ್ಲ್ಯೂ 1: ಇದನ್ನು ಬ್ರಿಲಿಯಂಟ್ ಬ್ಲೂ ಎಂದೂ ಕರೆಯಲಾಗುತ್ತದೆ. ಹಸಿರು-ನೀಲಿ ಬಣ್ಣವನ್ನು ಐಸ್ ಕ್ರೀಮ್, ಬಟಾಣಿ, ಪ್ಯಾಕೇಜ್ ಮಾಡಿದ ಸೂಪ್‌ಗಳು, ಪಾಪ್ಸಿಕಲ್‌ಗಳು ಮತ್ತು ಐಸಿಂಗ್‌ಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

    ಬೇರೆ ರಾಜ್ಯಗಳಲ್ಲಿ ನಿಷೇಧ?
    ಇದವರೆಗೂ ಕರ್ನಾಟಕ ಬಿಟ್ಟರೆ ಬೇರೆ ರಾಜ್ಯಗಳಲ್ಲಿ ಆಹಾರ ಪದಾರ್ಥಕ್ಕೆ ಕೃತಕ ಬಣ್ಣಗಳ ಬಳಕೆಗೆ ನಿಷೇಧ ಹೇರಿಲ್ಲ. 2024 ರ ಮಾರ್ಚ್‌ ತಿಂಗಳಲ್ಲಿ ಗೋಬಿ ಮಂಚೂರಿ ಮತ್ತು ಕಾಟನ್‌ ಕ್ಯಾಂಡಿ ತಯಾರಿಕೆಗೆ ಕೃತಕ ಬಣ್ಣ ಬಳಸುವುದನ್ನು ನಿಷೇಧಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು. ಮತ್ತೆ ಈಗ ಚಿಕನ್‌, ಫಿಶ್‌ ಮತ್ತು ಇತರೆ ಖಾದ್ಯಗಳಲ್ಲಿ ಕೃತಕ ಬಣ್ಣ ಬಳಕೆಗೆ ನಿಷೇಧ ಹೇರಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2006 ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳು (ಆಹಾರ ಉತ್ಪನ್ನಗಳು, ಗುಣಮಟ್ಟಗಳು ಮತ್ತು ಆಹಾರ ಸೇರ್ಪಡೆಗಳು) ನಿಯಮಗಳು 2011 ರ ಅನ್ವಯ ನಿಷೇಧ ವಿಧಿಸಿದೆ. ಗ್ರಾಹಕರಲ್ಲಿ ಗಂಭೀರವಾದ ಆರೋಗ್ಯ ಅಪಾಯಗಳನ್ನು ಉಂಟುಮಾಡುತ್ತವೆ ಎಂಬುದನ್ನು ಈ ನಿಯಮಗಳು ಒತ್ತಿ ಹೇಳುತ್ತವೆ.

    ಆರೋಗ್ಯಕರ, ಉತ್ತಮ ಆಹಾರ ಸೇವಿಸಿ
    ಸಂಸ್ಕರಿಸದ ಆಹಾರ ಸೇವನೆ ಮಾಡಬೇಕು. ಜಂಕ್ ಫುಡ್‌ ಬದಲಾಗಿ ಪೌಷ್ಟಿಕಾಂಶ ಇರುವ ಆಹಾರ ಸೇವಿಸಬೇಕು. ಆರೋಗ್ಯದ ದೃಷ್ಟಿಯಿಂದ ನೀವು ಹಾಲು, ಮೊಸರು, ಚೀಸ್, ಮೊಟ್ಟೆ, ಮಾಂಸ, ಸುವಾಸನೆಯಿಲ್ಲದ ಬಾದಾಮಿ, ಮಕಾಡಾಮಿಯಾ ಬೀಜಗಳು, ಗೋಡಂಬಿ, ವಾಲ್‌ನಟ್ಸ್, ಸೂರ್ಯಕಾಂತಿ ಬೀಜಗಳು, ತಾಜಾ ಹಣ್ಣು ಮತ್ತು ತರಕಾರಿ, ಓಟ್ಸ್, ಕಂದು ಅಕ್ಕಿ, ಕ್ವಿನೋವಾ, ಬಾರ್ಲಿ, ಬೀನ್ಸ್‌ ಕಡಲೆಯಂತಹ ಆಹಾರಗಳನ್ನು ಸೇವಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.