Tag: ಕೂದಲು

  • ಕೂದಲು ರಫ್ತಿಗೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ

    ಕೂದಲು ರಫ್ತಿಗೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ

    ನವದೆಹಲಿ: ಭಾರತದಿಂದ ಬೇರೆ ದೇಶಗಳಿಗೆ ಕೂದಲು ರಫ್ತು ಮಾಡುವುದಕ್ಕೆ ವಿದೇಶಿ ವ್ಯವಹಾರಗಳ ಮಹಾ ನಿರ್ದೇಶನಾಲಯ(ಡಿಜಿಎಫ್‍ಟಿ)ಕೆಲವು ನಿರ್ಬಂಧ ಹೇರಿದೆ.

    ಪರವಾನಗಿ ಇರುವವರು ಅಥವಾ ಡಿಜಿಎಫ್‍ಟಿಯಿಂದ ಅನುಮತಿ ಪಡೆದವರು ಮಾತ್ರವೇ ಕೂದಲು ರಪ್ತು ಮಾಡಬಹುದು. ಕೂದಲಿನ ಕಳ್ಳಸಾಗಣೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಾಗಿದೆ. ರಫ್ತುದಾರರು ಭಾರತದ ಹೊರಗೆ ಕೂದಲಿನ ಸಾಗಣೆಯನ್ನು ಕಳುಹಿಸಲು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯದಿಂದ ಅನುಮತಿ ಅಥವಾ ಪರವಾನಗಿಯನ್ನು ಪಡೆಯಬೇಕಾಗುತ್ತದೆ ಎಂದು ಡಿಜಿಎಫ್‍ಟಿ ತಿಳಿಸಿದೆ.

    ದೇಶದಲ್ಲಿ ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳನಾಡು ಅತಿ ಹೆಚ್ಚು ಕೂದಲು ರಪ್ತು ಮಡುವ ರಾಜ್ಯಗಳಾಗಿವೆ. ಭಾರತ ಈ ಆರ್ತೀಕ ವರ್ಷದ ಏಪ್ರಿಲ್-ನವೆಂಬರ್ ಅವಧಿಯಲ್ಲಿ 1 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಕೂದಲು ರಫ್ತು ಮಾಡಿದೆ.

    ಕೂದಲು ರಫ್ತುದಾರರು ಈ ಕ್ರಮವನ್ನು ಸ್ವಾಗತಿಸಿದ್ದಾರೆ.  ಮ್ಯಾನ್ಮಾರ್ ಮತ್ತು ಚೀನಾದಂತಹ ದೇಶಗಳಿಗೆ ಕಚ್ಚಾ ಮಾನವ ಕೂದಲನ್ನು ಕಳ್ಳಸಾಗಣೆ ಮಾಡುವ ವಿಚಿತ್ರ ಸವಾಲನ್ನು ಎದುರಿಸುತ್ತಿದೆ ಆರೋಪಿಸಿದ್ದಾರೆ. ಇದು ಸ್ಥಳೀಯ ಕೈಗಾರಿಕೆಗಳು ಮತ್ತು ರಫ್ತುಗಳಿಗೆ ಹಾನಿಯನ್ನುಂಟುಮಾಡುತ್ತಿದೆ. ಈಗ ಈ ನಿರ್ಬಂಧದಿಂದ, ನಿಜವಾದ ರಫ್ತುದಾರರು ಮಾತ್ರ ಉತ್ಪನ್ನವನ್ನು ರಫ್ತು ಮಾಡಲು ಸಾಧ್ಯವಾಗುತ್ತದೆ. ಇದು ತಮ್ಮ ಬಹುಕಾಲದ ಬೇಡಿಕೆಯಾಗಿದೆ ಎಂದು ಮಾನವ ಕೂದಲು ಮತ್ತು ಕೂದಲಿನ ಉತ್ಪನ್ನಗಳ ತಯಾರಕರು ಮತ್ತು ರಫ್ತುದಾರರ ಸಂಘ ಆಫ್ ಇಂಡಿಯಾ ಸುನೀಲ್ ಎಮಾನಿ ಹೇಳಿದ್ದಾರೆ.

  • ಕೂದಲ ರಕ್ಷಣೆಗಾಗಿ ಮನೆಯಲ್ಲೇ ತಯಾರಿಸಿ ಮದ್ದು

    ಕೂದಲ ರಕ್ಷಣೆಗಾಗಿ ಮನೆಯಲ್ಲೇ ತಯಾರಿಸಿ ಮದ್ದು

    ಕೂದಲು ತುಂಬಾ ಉದ್ದವಾಗಿ ಇರಬೇಕು, ದಪ್ಪವಾಗಿ ಅಂತೆಲ್ಲ ಆಸೆ ಇರುತ್ತದೆ. ನಮ್ಮ ಸುಂದರ ಕೂದಲಿಗೆ ಮನೆಯಲ್ಲಿಯೇ ಕೆಲ ಎಣ್ಣೆಗಳನ್ನು ತಯಾರಿಸಬಹುದು. ಕೂದಲಿಗೆ ಎಣ್ಣೆ ಹಾಕುವುದು ಎಲ್ಲಾ ಸತ್ತ ಕೂದಲಿನ ಕೋಶಗಳನ್ನು ಪುನಶ್ಚೇತನಗೊಳಿಸಲು ಸಹಾಯ ಮಾಡುತ್ತದೆ. ಎಣ್ಣೆಯನ್ನು ಹಚ್ಚುವುದರಿಂದ ಕೂದಲನ್ನು ಬೇರುಗಳಿಂದ ತುದಿಯವರೆಗೆ ಬಲಪಡಿಸುತ್ತದೆ. ಆದ್ದರಿಂದ ಎಣ್ಣೆಗೆ ನೈಸರ್ಗಿಕ ಪದಾರ್ಥಗಳನ್ನು ಸೇರಿಸಿ ಕೂದಲ ಆರೋಗ್ಯವನ್ನು ಹೆಚ್ಚಿಸುವುದು ಹೇಗೆಂದು ನೋಡೋಣ.

    ಈರುಳ್ಳಿ ಎಣ್ಣೆ: ಈರುಳ್ಳಿ ಮತ್ತು ಕರಿಬೇವಿನ ಎಲೆಗಳನ್ನು ತೆಗೆದಿಟ್ಟುಕೊಳ್ಳಿ. ಈ ಎರಡನ್ನೂ ಚೆನ್ನಾಗಿ ಪೇಸ್ಟ್ ಮಾಡಿ. ಕಡಿಮೆ ಉರಿಯಲ್ಲಿ, ಕೊಬ್ಬರಿ ಎಣ್ಣೆಗೆ ಈ ಪೇಸ್ಟ್ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. 5-10 ನಿಮಿಷಗಳ ನಂತರ, ಉರಿ ಹೆಚ್ಚಿಸಿ. ಈ ಮಿಶ್ರಣವನ್ನು ಕುದಿಯಲು ಬಿಡಿ. ಈ ಮಿಶ್ರಣವನ್ನು ತಣ್ಣಗಾಗಲು ಪಕ್ಕಕ್ಕೆ ಇರಿಸಿ ಮತ್ತು ರಾತ್ರಿಯಿಡೀ ಬಿಡಿ. ಮರುದಿನ, ಎಣ್ಣೆಯನ್ನು ಸೋಸಿ, ಸೂಕ್ತವಾದ ಡಬ್ಬಿಯಲ್ಲಿ ಸಂಗ್ರಹಿ ನಿಮ್ಮ ಕೂದಲಿಗೆ ಹಚ್ಚುತ್ತಾ ಬನ್ನಿ. ಇದನ್ನೂ ಓದಿ: ಖರ್ಜೂರ ತಿಂದು ಆರೋಗ್ಯವಾಗಿರಿ – ಪ್ರತಿದಿನ ಒಂದೊಂದು ತಿಂದರೂ ನೀವು ಗಟ್ಟಿಯಾಗ್ತೀರಿ

    ದಾಸವಾಳ ಎಣ್ಣೆ: ದಾಸವಾಳ ಹೂವು ಮತ್ತು ಎಲೆಗಳನ್ನು ತೆಗೆದುಕೊಂಡು ರುಬ್ಬಿಕೊಳ್ಳಿ. ನಂತರ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಚನ್ನಾಗಿ ಕಾಯಿಸಿ, ಎಣ್ಣೆ ಕಾದ ನಂತರ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ ಮತ್ತೆ ಚನ್ನಾಗಿ ಕುದಿಸಿದರೆ ದಾಸವಾಳದ ಎಣ್ಣೆ ರೆಡಿ. ಇದನ್ನೂ ಓದಿ: ಚಳಿಗಾಲದಲ್ಲಿ ಈ ತರಕಾರಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

    ನೆಲ್ಲಿಕಾಯಿ ಎಣ್ಣೆ: ಒಣಗಿದ ನೆಲ್ಲಿಕಾಯಿ ತೆಗೆದುಕೊಂಡು ತೆಂಗಿನ ಎಣ್ಣೆಯಲ್ಲಿ ಹಾಕಿ ಕುದಿಸಿ, ನಂತರ ಸೋಸಿಕೊಳ್ಳಿ. ಈ ಎಣ್ಣೆಯನ್ನು ನಿಯಮಿತವಾಗಿ ಬಳಸುವುದು ಹೆಚ್ಚು ಪ್ರಯೋಜನಕಾರಿ. ಇದನ್ನೂ ಓದಿ: ತ್ವಚೆಯ ಅಂದಕ್ಕೆ ಮನೆಮದ್ದು – ಇಲ್ಲಿದೆ ಟಿಪ್ಸ್‌

    ಪುದೀನಾ ಎಣ್ಣೆ: ಕೆಲವು ಪುದೀನಾ ಎಲೆಗಳನ್ನು ಪುಡಿಮಾಡಿ. ಬಾದಾಮಿ ಎಣ್ಣೆಯೊಂದಿಗೆ ಪಾತ್ರೆಯಲ್ಲಿ ಪುಡಿಮಾಡಿದ ಎಲೆಗಳನ್ನು ಹಾಕಿ, ಎರಡು ಮೂರು ದಿನಗಳವರೆಗೆ ಸೂರ್ಯನ ಕೆಳಗೆ ಬಿಡಿ. ಎಣ್ಣೆಯನ್ನು ಸೋಸಿಕೊಳ್ಳಿ ಮತ್ತು ಬಳಸಿ.

  • ಕೂದಲು ಉದುರುವ ಸಮಸ್ಯೆಗೆ ಕರಿಬೇವಿನ ಎಲೆಗಳಲ್ಲಿದೆ ಪರಿಹಾರ

    ಕೂದಲು ಉದುರುವ ಸಮಸ್ಯೆಗೆ ಕರಿಬೇವಿನ ಎಲೆಗಳಲ್ಲಿದೆ ಪರಿಹಾರ

    ಕೂದಲು ಉದುರುವಿಕೆಗೆ ಹಲವು ಕಾರಣಗಳಿವೆ. ಆದರೆ ನಾವು ಅಂಗಡಿಯಲ್ಲಿ ಸಿಗುವ ಎಲ್ಲಾ ಶಾಂಪೂ, ಹೇರ್ ಆಯಿಲ್‍ಗಳನ್ನು ಬಳಸಿರುತ್ತೇವೆ. ಆದರೆ ಕೆಲವು ಬಾರಿ ನಾವು ನಮ್ಮ ಮನೆಯಲ್ಲಿ ಇರುವ ಮನೆ ಮದ್ದುಗಳನ್ನು ಬಳಸುವುದರಿಂದ ಈ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಕೂದಲು ಉದುರುವ ಸಮಸ್ಯೆಗೆ ಪರಿಹಾರ ನಿಮ್ಮ ಮನೆಯ ಹಿತ್ತಲಿನಲ್ಲೇ ಇದೆ.

    ಕೂದಲು ಉದುರುವಿಕೆ ತಡೆಯಲು ಹಲವಾರು ಶಾಂಪೂ ಹಾಗೂ ಇತರ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರ ಪ್ರಭಾವ ಮಾತ್ರ ತಾತ್ಕಾಲಿಕ. ಇದನ್ನು ನಾವು ದೀರ್ಘಕಾಲದ ತನಕ ಬಳಸಿದರೆ ಅದರಿಂದ ಬೇರೆ ರೀತಿಯ ಅಡ್ಡಪರಿಣಾಮಗಳು ಬರಬಹುದು. ಹೀಗಾಗಿ ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡರೆ ತುಂಬಾ ಒಳ್ಳೆಯದು.

    * ಒಂದು ಕಪ್ ತೆಂಗಿನ ಎಣ್ಣೆಯಲ್ಲಿ ಒಂದು ಹಿಡಿ ಕರಿಬೇವಿನ ಎಲೆಗಳನ್ನು ಕುದಿಸಿ. ನಂತರ ಇದನ್ನು ಫಿಲ್ಟರ್ ಮಾಡಿ, ಕೂದಲಿನ ಬೇರುಗಳಿಗೆ ವಾರಕ್ಕೆ ಎರಡು ಬಾರಿ ಮಸಾಜ್ ಮಾಡಿ. ನಂತರ ನಿಮ್ಮ ತಲೆಯನ್ನು ಶಾಂಪೂ ಬಳಸಿ ತೊಳೆಯಿರಿ. ವಾರಕ್ಕೆ ಎರಡು ಬಾರಿ ಇದನ್ನು ಮಾಡಿ.

    * ಕರಿಬೇವಿನ ಎಲೆಗಳು, ನೆಲ್ಲಿಕಾಯಿ ಮಿಕ್ಸಿಯಲ್ಲಿ ಪುಡಿ ಮಾಡಿ ನಿಮ್ಮ ಕೂದಲಿಗೆ ಹಚ್ಚಿ. ನಂತರ 1 ಗಂಟೆಯ ನಂತರ ತಲೆ ತೊಳೆಯಿರಿ.

    * ಕರಿಬೇವಿನ ಎಲೆಗಳನ್ನು ನುಣ್ಣಗೆ ರುಬ್ಬಿಕೊಳ್ಳಿ. ಇದನ್ನು ಒಂದು ಕಪ್ ಮೊಸರಿನೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿ. ನಂತರ ಒಂದು ಗಂಟೆ ನೆನೆಸಿ ಮತ್ತು ತೊಳೆಯಿರಿ. ಹೀಗೆ ಮಾಡುವುದರಿಂದ ಕೂದಲು ಉದುರುವುದನ್ನು ತಡೆಯುವುದಲ್ಲದೆ ತಲೆಹೊಟ್ಟು ಕೂಡ ತಡೆಯಬಹುದು.

    * ಎರಡು ಚಮಚ ಮೆಂತ್ಯೆ ಕಾಳುಗಳನ್ನು ತೆಗೆದುಕೊಂಡು ಅದನ್ನು ಹುಡಿ ಮಾಡಿಕೊಳ್ಳಿ. 10-15 ಕರಿಬೇವಿನ ಎಲೆಗಳನ್ನು ತೆಗೆದುಕೊಳ್ಳಿ. ಎರಡು ಚಮಚ ನೆಲ್ಲಿಕಾಯಿ ಹುಡಿ ಹಾಕಿ ಮಿಶ್ರಣ ಮಾಡಿ. ಈ ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ ಮತ್ತು ಇದನ್ನು ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ. ತಲೆಬುರುಡೆ ಮತ್ತು ಕೂದಲಿಗೆ ಪೇಸ್ಟ್ ಬಳಸಿಕೊಳ್ಳಿ. 30 ನಿಮಿಷ ಕಾಲ ಹಾಗೆ ಬಿಡಿ ಮತ್ತು ಇದರ ಬಳಿಕ ಕೂದಲು ತೊಳೆಯಿರಿ.

    * ಎರಡು ಕಪ್ ನೀರು ಬಳಸಿಕೊಳ್ಳಿ ಮತ್ತು 10-15 ಕರಿಬೇವಿನ ಎಲೆಗಳನ್ನು ಹಾಕಿ ಕುದಿಸಿ. ಸ್ವಲ್ಪ ಸಮಯ ಇದನ್ನು ಸರಿಯಾಗಿ ಕುದಿಸಿ. ಶಾಂಪೂ ಹಾಕಿಕೊಂಡು ಕೂದಲು ತೊಳೆದ ಬಳಿಕ ಈ ನೀರಿನಿಂದ ಮತ್ತೆ ಕೂದಲು ತೊಳೆಯಿರಿ.

  • ಬರ್ತ್‍ಡೇ ಕ್ಯಾಂಡಲ್ ಊದುವಾಗ ಕೂದಲಿಗೆ ಬೆಂಕಿ – ಕಿರುಚಾಡಿದ ಟಿವಿ ಸ್ಟಾರ್

    ಬರ್ತ್‍ಡೇ ಕ್ಯಾಂಡಲ್ ಊದುವಾಗ ಕೂದಲಿಗೆ ಬೆಂಕಿ – ಕಿರುಚಾಡಿದ ಟಿವಿ ಸ್ಟಾರ್

    ವಾಷಿಂಗ್ಟನ್: ಹುಟ್ಟುಹಬ್ಬದ ಸಮಾರಂಭದಲ್ಲಿ ಬರ್ತ್‍ಡೇ ಕ್ಯಾಂಡಲ್ ಊದುವಾಗ ಅಮೇರಿಕ ಸ್ಟಾರ್ ನಟಿ ನಿಕೋಲ್ ರಿಚಿ ಕೂದಲಿಗೆ ಬೆಂಕಿ ಹೊತ್ತಿ ಕಿರುಚಾಡಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    birthday candle

    ಸಾಮಾನ್ಯವಾಗಿ ಬರ್ತ್‍ಡೇ ದಿನ ಪ್ರತಿಯಬ್ಬರು ತಮ್ಮ ಪ್ರೀತಿ ಪಾತ್ರರೊಂದಿಗೆ ಇರಲು ಇಚ್ಛಿಸುತ್ತಾರೆ. ಅದರಲ್ಲಿಯೂ ಕೇಕ್, ಮೇಣದ ಬತ್ತಿ, ಬರ್ತ್‍ಡೇ ಕ್ಯಾಪ್ ಇವೆಲ್ಲವೂ ಸದಾ ನೆನಪಿನಲ್ಲಿ ಉಳಿಯುತ್ತದೆ. ಆದರೆ ಅಮೇರಿಕದ ಟಿವಿ ಸ್ಟಾರ್ ನಿಕೋಲ್ ರಿಚಿಯವರ 40ನೇ ವರ್ಷದ ಹುಟ್ಟುಹಬ್ಬದ ದಿನದಂದು ನಡೆದಿದ್ದೇ ಬೇರೆಯಾಗಿದೆ. ಸದ್ಯ ಈ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಬರ್ತ್‍ಡೇ ಸಮಾರಂಭದಲ್ಲಿ ನಿಕೋಲ್ ರಿಚಿ ಮಾತ್ರವಲ್ಲ ಪಾರ್ಟಿಗೆ ಆಗಮಿಸಿದ್ದವರು ಕೂಡ ಈ ಘಟನೆಯನ್ನು ಸದಾ ನೆನಪಿನಲ್ಲಿಟ್ಟುಕೊಂಡಿರುತ್ತಾರೆ. ಇದನ್ನೂ ಓದಿ: ಮೂಲೆಗುಂಪಾಗಿರೋ ಕಾಂಗ್ರೆಸ್ ಟಾಂಗಾ, ಸೈಕಲ್ ಓಡಿಸೋದಕ್ಕೆ ಮಾತ್ರ ಸೀಮಿತ: ಆರ್. ಅಶೋಕ್

    ಸೆಪ್ಟೆಂಬರ್ 21ರಂದು 40ನೇ ವಸಂತಕ್ಕೆ ಕಾಲಿಟ್ಟ ರಿಚಿ, ಕುಟುಂಬ ಮತ್ತು ಸ್ನೇಹಿತರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ಕಪ್ಪು ಬಣ್ಣದ ಆಫ್ ಶೋಲ್ಡರ್ ಟಾಪ್ ಧರಿಸಿ, ಕೇಕ್ ಮೇಲೆ ನಿಲ್ಲಿಸಿದ್ದ ಕ್ಯಾಂಡಲ್‍ನನ್ನು ಊದಲು ಮುಂದಕ್ಕೆ ವಾಲಿದಾಗ ರಿಚಿ ಗುಂಗುರು ಕೂದಲು ಕ್ಯಾಂಡಲ್‍ಗೆ ತಾಗಿ ಬೆಂಕಿ ಹೊತ್ತಿಕೊಳ್ಳುತ್ತದೆ. ಈ ವೇಳೆ ಗಾಬರಿಗೊಂಡ ರಿಚಿ ಕಿರುಚಾಡುತ್ತಾ ಕೂದಲನ್ನು ಹೊಡೆದುಕೊಳ್ಳುತ್ತಾರೆ. ಆಗ ಇತರರು ಕೂಡ ಆಕೆಗೆ ಸಹಾಯ ಮಾಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

    ಸದ್ಯ ಹುಟ್ಟುಹಬ್ಬದ ದಿನದಂದು ತಮ್ಮ ಅನುಯಾಯಿಗಳೊಂದಿಗೆ ನಡೆದ ಈ ಅಹಿತಕರವಾದ ಘಟನೆಯನ್ನು ರಿಚಿಯವರು ಹಂಚಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ಈ ವೀಡಿಯೋ, ಇಲ್ಲಿಯವರೆಗೂ 2.8 ಮಿಲಿಯನ್‌ಗೂ  ಅಧಿಕ ಮಂದಿ ವೀಕ್ಷಿಸಿದ್ದು, ಕೆಲವರು  ಅದೃಷ್ಟವಶಾತ್ ಒಳ್ಳೆಯದಾಯಿತು ಎಂದರೆ, ಮತ್ತಷ್ಟು ಮಂದಿ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಇದನ್ನೂ ಓದಿ: ನಾನು ಸಾಮಾನ್ಯ ಮುನುಷ್ಯ, ನನಗೆ ಸೆಕ್ಯೂರಿಟಿ ಬೇಡವೆಂದ: ಪಂಜಾಬ್ ಸಿಎಂ

  • 99 ದಿನಗಳಲ್ಲಿ ಮುಡಿ ಕೂದಲಿನಿಂದ ಮಲೆ ಮಾದಪ್ಪನಿಗೆ ಬಂದ ಅದಾಯ 1.49 ಕೋಟಿ ರೂ.

    99 ದಿನಗಳಲ್ಲಿ ಮುಡಿ ಕೂದಲಿನಿಂದ ಮಲೆ ಮಾದಪ್ಪನಿಗೆ ಬಂದ ಅದಾಯ 1.49 ಕೋಟಿ ರೂ.

    ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಕೂದಲಿನ ಬಿಡ್ ನಡೆದಿದ್ದು, ಪ್ರತಿ ಕೆ.ಜಿ.ಗೆ 15,535 ರೂ. ನಂತೆ 4,595 ಕೆ.ಜಿ. ತುಂಡು ಕೂದಲು, 951 ಕೆ.ಜಿ. ಉದ್ದದ ಕೂದಲು ಮಾರಾಟವಾಗಿದ್ದು, ಇದರಿಂದ ಬರೋಬ್ಬರಿ 1,49,40,391 ರೂ. ಆದಾಯ ಬಂದಿದೆ.

    ನಾಡಿನ ಪ್ರಮುಖ ದೇಗುಲಗಳಲ್ಲಿ ಒಂದಾದ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಹರಕೆ ಕೂದಲಿನ ಬಿಡ್ ನಡೆದಿದ್ದು, ಪ್ರತಿ ಕೆಜಿಗೆ 15,535 ರೂ. ನಂತೆ 4,595 ಕೆಜಿ ತುಂಡು ಕೂದಲು, 951 ಕೆ.ಜಿ. ಉದ್ದ ಕೂದಲು ಮಾರಾಟವಾಗಿದ್ದು, ಬರೋಬ್ಬರಿ 1,49,40,391 ರೂ. ಆದಾಯ ಬಂದಿದೆ. ಹುಂಡಿಯಲ್ಲಿ ಸಂಗ್ರಹವಾಗುತ್ತಿದ್ದ ಹಣದಿಂದ ಗಮನ ಸೆಳೆಯುತ್ತಿದ್ದ ಮಲೆ ಮಾದಪ್ಪ ಈಗ ಮತ್ತಷ್ಟು ಶ್ರೀಮಂತನಾಗಿದ್ದು, ಹರಕೆ ಕೂದಲಿನ ಹರಾಜಿನಿಂದ ಬರೋಬ್ಬರಿ 1.49 ಕೋಟಿ ರೂ. ಸಂಗ್ರಹವಾಗಿದೆ. ಇದನ್ನೂ ಓದಿ: ನಿನ್ನ ವಾಹನದಿಂದ ಬೆಳೆ ಉಳಿಸು- ಗಣಪತಿಗೆ ಜೀವಂತ ಇಲಿ ನೀಡಿ ಬೇಡಿಕೊಂಡ ರೈತ

    ಈ ಕುರಿತು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಮಾಹಿತಿ ನೀಡಿ, ಕಳೆದ ವರ್ಷಕ್ಕಿಂತ ಈ ವರ್ಷ ಪ್ರತಿ ಕೆ.ಜಿ.ಗೆ 8,135 ರೂ. ಹೆಚ್ಚಿನ ಲಾಭ ಬಂದಿದ್ದು, ಒಟ್ಟು ಹಣ 1.49 ಕೋಟಿ ರೂ. ಸಂಗ್ರಹವಾಗಿರುವುದು ಸಾರ್ವಕಾಲಿಕ ದಾಖಲೆಯಾಗಿದೆ. ಈ ಮುಡಿ ಕೂದಲು 99 ದಿನಗಳಲ್ಲಿ ಸಂಗ್ರಹವಾಗಿತ್ತು ಎಂದು ತಿಳಿಸಿದ್ದಾರೆ.

  • ಬಾಲಕಿ ಹೊಟ್ಟೆಯಲ್ಲಿ 2ಕೆಜಿ ಕೂದಲ ಉಂಡೆ ಪತ್ತೆ- ವೈದ್ಯರು ಶಾಕ್

    ಬಾಲಕಿ ಹೊಟ್ಟೆಯಲ್ಲಿ 2ಕೆಜಿ ಕೂದಲ ಉಂಡೆ ಪತ್ತೆ- ವೈದ್ಯರು ಶಾಕ್

    ಲಕ್ನೋ: 17 ವರ್ಷದ ಬಾಲಕಿಯೊಬ್ಬಳ ಹೊಟ್ಟೆಯಿಂದ 2ಕೆಜಿ ಕೂದಲನ್ನು ಶಸ್ತ್ರ ಚಿಕಿತ್ಸೆ ಮೂಲಕ ವೈದ್ಯರು ಹೊರ ತೆಗೆದು ಶಾಕ್ ಆಗಿರುವ ಘಟನೆ ಲಕ್ನೋದ ಬಲರಾಂಪುರ್ ಆಸ್ಪತ್ರೆಯಲ್ಲಿ ನಡೆದಿದೆ.

    ಕಳೆದೆರಡು ವರ್ಷದಿಂದ ಬಾಲಕಿಯ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದಳು. ಕೊನೆಗೆ ವಾಂತಿ ಹಾಗೂ ಹೊಟ್ಟೆ ನೋವಿನ ಸಮಸ್ಯೆಯಿಂದ ಒದ್ದಾಡಲು ಶುರು ಮಾಡಿದಾಗ ಆಕೆಯ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

    ಈ ವೇಳೆ ವೈದ್ಯರು ಅಲ್ಟ್ರಾಸೌಂಡ್ ಪರೀಕ್ಷೆ ನಡೆಸಿದ ನಂತರ ಬಾಲಕಿ ಹೊಟ್ಟೆಯಲ್ಲಿ ಗಡ್ಡೆ ಕಾಣಿಸಿಕೊಂಡಿದೆ. ನಂತರ ವೈದ್ಯರು ಸಿಟಿ ಸ್ಕ್ಯಾನ್ ಮಾಡಿದಾಗಲೂ ಮತ್ತೆ ಬಾಲಕಿ ಹೊಟ್ಟೆಯಲ್ಲಿ ಗಡ್ಡೆ ಪತ್ತೆಯಾಗಿದೆ. ಕೊನೆಗೆ ಎಂಡೊಸ್ಕೋಪ್ ಮಾಡಿದ ನಂತರ ಆಕೆಯ ಹೊಟ್ಟೆಯಲ್ಲಿ ಕೂದಲಿನ ಉಂಡೆ ಪತ್ತೆಯಾಗಿದ್ದು, ಅದು ಎರಡು ಕೆಜಿ ತೂಕ ಇರುವ ಹಾಗೂ 20 ಸೆಂ.ಮೀ. ಅಗಲದ ಗಡ್ಡೆ ಇರುವುದನ್ನು ಕಂಡು ವೈದ್ಯರು ಕೂಡ ಆಶ್ಚರ್ಯಗೊಂಡಿದ್ದಾರೆ. ಇದನ್ನೂ ಓದಿ: ಲಾಕ್‍ಡೌನ್ ನಡುವೆಯೂ ನಂಜುಂಡೇಶ್ವರನಿಗೆ ಬಂತು ಕೋಟಿ ಕಾಣಿಕೆ!

    ಒಟ್ಟಾರೆ ಕೂಲಂಕುಷವಾಗಿ ತಪಾಸಣೆ ನಡೆಸಿದ ನಂತರ ವೈದ್ಯರು ಹುಟ್ಟಿನಿಂದಲೇ ಬಾಲಕಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ. ಕೊನೆಗೆ ಒಂದೂವರೆ ಗಂಟೆಗಳ ಶಸ್ತ್ರ ಚಿಕಿತ್ಸೆ ನಡೆಸಿ ಬಳಿಕ ಬಾಲಕಿ ಹೊಟ್ಟೆಯಿಂದ ಕೂದಲನ್ನು ಹೊರತೆಗೆದಿದ್ದು, ಇದೀಗ ಹೊಟ್ಟೆ ನೋವಿನ ಯಾವುದೇ ಸಮಸ್ಯೆಗಳಿಲ್ಲದೇ ಬಾಲಕಿ ಚೇತರಿಸಿಕೊಳ್ಳುತ್ತಿದ್ದಾಳೆ. ನಂತರ ವೈದ್ಯರು ಕೂದಲು ಹೊಟ್ಟೆಯಲ್ಲಿರುವ ಸಣ್ಣ ಕರುಳನ್ನು ಸಂಪೂರ್ಣವಾಗಿ ಮುಚ್ಚಿದ್ದರಿಂದ ಆಹಾರ ಹಾದುಹೋಗಲು ಸಾಧ್ಯವಾಗಲಿಲ್ಲ. ಅಲ್ಲದೇ ಇದರಿಂದ ಬಾಲಕಿ 32ಕೆಜಿ ತೂಕವನ್ನು ಕಳೆದುಕೊಂಡಿರುವುದಾಗಿ ವೈದ್ಯರು ತಿಳಿಸಿದ್ದಾರೆ.

    ಕೊನೆಗೆ ಬಾಲಕಿ ಅಪರೂಪದ ಟ್ರೈಕೋಬೆಜೋವರ್ ಕಾಯಿಲೆಯಿಂದ ಬಳಲುತ್ತಿದ್ದಾಳೆ ಎಂದು ತಿಳಿದುಬಂದಿದ್ದು, ಈ ರೋಗಿಗಳು ತಮ್ಮ ಕೂದಲನ್ನು ಕಿತ್ತು ಸೇವಿಸುತ್ತಾರೆ ಎಂದು ಸತ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಹತ್ತಾರು ಎಕರೆ, ಮಾವಿನ ತೋಪು, ನಿರ್ಜನ ಪ್ರದೇಶ – ನೂರಾರು ಜನ… ಕೋಟಿ ಕೋಟಿ ವ್ಯವಹಾರ!

  • ಚರ್ಮದ ಕಾಂತಿ ಹೆಚ್ಚಿಸಲು ಕುಡಿಯಿರಿ ದಾಸವಾಳ ಚಹಾ

    ಚರ್ಮದ ಕಾಂತಿ ಹೆಚ್ಚಿಸಲು ಕುಡಿಯಿರಿ ದಾಸವಾಳ ಚಹಾ

    ದೇಹ ಸೌಂದರ್ಯಕ್ಕಾಗಿ ಎಷ್ಟೋ ಜನ ತುಂಬ ಪ್ರಯತ್ನ ಪಡುತ್ತಿರುರತ್ತಾರೆ. ನಾವು ಎಲ್ಲರ ಮುಂದೆ ಚೆನ್ನಾಗಿ ಕಾಣಿಸಿಕೊಳ್ಳಬೇಕು ಎಂಬುದು ಪ್ರತಿಯೊಬ್ಬರ ಆಸೆಯಾಗಿರುತ್ತೆ. ಆದರೆ ಏನೋ ಮಾಡಲು ಹೋಗಿ, ಏನೋ ಮಾಡಿಕೊಂಡು ಇರುವ ಸೌಂದರ್ಯವನ್ನು ಹಾಳು ಮಾಡಿಕೊಳ್ಳುವವರು ತುಂಬಾ ಜನ ಇದ್ದಾರೆ. ಅಂತವರಿಗೆ ನೈಸರ್ಗಿಕವಾಗಿ ಹೇಗೆ ನಮ್ಮ ದೇಹದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂಬುವುದಕ್ಕೆ ಮಾಹಿತಿ ಈ ಕೆಳಗಿನಂತಿದೆ.

    ದಾಸವಾಳದಿಂದ ತಯಾರಿಸಿದ ಚಹಾವನ್ನು ಸೇವಿಸುವುದರಿಂದ ಚರ್ಮದ ಕಾಂತಿ ಹೆಚ್ಚುವುದು, ಅಧಿಕ ರಕ್ತದೊತ್ತಡ ನಿಯಂತ್ರಣ, ತೂಕ ನಷ್ಟ ಮತ್ತು ಕೂದಲು ಬೆಳವಣಿಗೆಗೆ ಇದು ಸಹಾಯಕವಾಗಿದೆ.

    ದಾಸವಾಳದ ಚಹಾದಿಂದಾಗುವ ಸೌಂದರ್ಯ ಪ್ರಯೋಜನಗಳು:
    1. ಹೊಸ ಚರ್ಮದ ಬೆಳವಣಿಗೆಗೆ ಸಹಾಯಕ: ದಾಸವಾಳದಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವುದರಿಂದ ಈ ಚಹಾ ಕುಡಿಯುವುದರಿಂದ ದೇಹದಲ್ಲಿ ಹಾಳಾದ ಚರ್ಮ ಬೆಳವಣಿಗೆಗೆ ಸಹಾಯಕವಾಗಿದೆ. ನಿಮ್ಮ ಚರ್ಮವನ್ನು ಆರೋಗ್ಯಕರ, ತಾರುಣ್ಯ ಮತ್ತು ಹೊಳೆಯುವಂತೆ ಮಾಡಲು ಉಪಯುಕ್ತವಾಗುತ್ತದೆ.

    2. ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ.

    3. ಉರಿಯೂತವನ್ನು ಸರಾಗಗೊಳಿಸುತ್ತದೆ: ಕಪ್ಪು ಕಲೆಗಳು, ಚರ್ಮ ಸುಕ್ಕಾಗಿರುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಮ್ಮ ಚರ್ಮದ ಮೇಲೆ ಉಂಟಾಗುವ ಹಾನಿಕಾರಕ ಪರಿಣಾಮಗಳನ್ನು ನಿಯಂತ್ರಿಸಲು ಸಹ ಇದು ಸಹಾಯ ಮಾಡುತ್ತದೆ. ಇದನ್ನೂ ಓದಿ: ಮಾನ್ಸೂನ್ ವೇಳೆ ಧರಿಸಬಹುದಾದ 7 ಶೈಲಿಯ ಡ್ರೆಸ್‍ಗಳು

    4. ಕೂದಲು ಬೇರುಗಳನ್ನು ಬಲಪಡಿಸುತ್ತದೆ: ದಾಸವಾಳದಿಂದ ಮಾಡಿದ ಚಹಾದ ಮತ್ತೊಂದು ಅದ್ಭುತ ಪ್ರಯೋಜನವೆಂದರೆ ಇದು ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ, ಇದು ಕೂದಲಿನ ಉತ್ತಮ ಬೆಳವಣಿಗೆಗೆ ಪ್ರಮುಖ ಪೋಷಕಾಂಶಗಳಾಗಿವೆ. ಆದ್ದರಿಂದ, ದಾಸವಾಳದ ಚಹಾವನ್ನು ಕುಡಿಯುವುದರಿಂದ ನಿಮ್ಮ ಕೂದಲು ದಪ್ಪ, ಹೊಳೆಯುವಂತೆ ಮತ್ತು ನಿಮ್ಮ ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ.

    5. ಕೂದಲಿನ ಗುಣಮಟ್ಟವನ್ನು ಉತ್ತಮಗೊಳಿಸುತ್ತದೆ: ನೀವು ದಾಸವಾಳದ ಚಹಾವನ್ನು ಕ್ಲೆನ್ಸರ್ ಆಗಿ ಬಳಸಿದರೆ, ತಲೆಹೊಟ್ಟು ನಿವಾರಣೆಯಾಗಲು ಸಹಾಯಕವಾಗುತ್ತದೆ. ಇದನ್ನೂ ಓದಿ:ಫ್ಯಾಬಿಯನ್ ಅಲೆನ್ ಫ್ಯಾಬುಲಸ್ ಕ್ಯಾಚ್ – ಫಿಂಚ್‍ಗೆ ಪಂಚ್

    
    
  • ಕೂದಲುದುರುವಿಕೆ ತಡೆಯಲು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಈರುಳ್ಳಿ ಎಣ್ಣೆ

    ಕೂದಲುದುರುವಿಕೆ ತಡೆಯಲು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಈರುಳ್ಳಿ ಎಣ್ಣೆ

    ಪ್ರತಿಯೊಬ್ಬ ಮಹಿಳೆ ಹಾಗೂ ಪುರುಷರಲ್ಲಿ ಕೂದಲಿಗೆ ಸಂಬಂಧಿಸಿದಂತೆ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಇದ್ದೇ ಇರುತ್ತದೆ. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಮನೆ ಮದ್ದು ಈರುಳ್ಳಿ.

    ಹೌದು. ಈರುಳ್ಳಿ ನಿಮ್ಮ ಕಣ್ಣಲ್ಲಿ ನೀರು ತರಿಸಬಹುದು, ಆದರೆ ಇದು ತಲೆ ತುಂಬಾ ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಈರುಳ್ಳಿಗೆ ನಿಮ್ಮ ತಲೆಗೂದಲು ಉದುರುವಿಕೆಯನ್ನು ತಡೆಗಟ್ಟುವ ಶಕ್ತಿಯಿದೆ. ಹೀಗಾಗಿ ಮನೆಯಲ್ಲಿಯೇ ಸುಲಭವಾಗಿ ಈರುಳ್ಳಿ ಎಣ್ಣೆಯನ್ನು ತಯಾರಿಸಿ ಕೂದಲಿಗೆ ಹಚ್ಚಿ. ಇದರಿಂದ ನಿಮ್ಮ ಕೂದಲು ದಟ್ಟವಾಗಿ ಹಾಗೂ ಉದ್ದವಾಗಿ ಬೆಳೆಯುತ್ತದೆ.

    ಬೇಕಾಗುವ ಸಾಮಗ್ರಿಗಳು:
    ಕೊಬ್ಬರಿ ಎಣ್ಣೆ- 200 ಮಿ.ಲೀ
    ಬೇವಿನ ಎಲೆಗಳು- 1 ಕಪ್
    ಈರುಳ್ಳಿ- ಅರ್ಧ ಕಪ್

    ಮಾಡುವ ವಿಧಾನ
    * ಮೊದಲು ಕರಿಬೇವಿನ ಎಲೆ ಹಾಗೂ ಈರುಳ್ಳಿಯನ್ನು ನೀರು ಬಳಸದೆ ರುಬ್ಬಿಕೊಳ್ಳಿ.

    * ಇತ್ತ ಒಂದು ಪಾತ್ರೆಗೆ ತೆಂಗಿನ ಎಣ್ಣೆಯನ್ನು ಹಾಕಿ ನಂತರ ರುಬ್ಬಿದ ಈರುಳ್ಳಿ ಹಾಗೂ ಕರಿಬೇವಿನ ಮಿಶ್ರಣವನ್ನು ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಎಣ್ಣೆ ಸ್ವಲ್ಪ ಕಡು ಕಪ್ಪು ಬಣ್ಣಕ್ಕೆ ತಿರುಗುತ್ತಿದ್ದಂತೆಯೇ ಉರಿ ನಿಲ್ಲಿಸಿ ರಾತ್ರಿ ಇಡೀ ಹಾಗೆಯೇ ಇಟ್ಟುಬಿಡಿ.

    * ಬೆಳಗ್ಗೆ ಇದನ್ನು ಸೋಸಿ ಎಣ್ಣೆ ಮತ್ತು ಮಿಶ್ರಣವನ್ನು ಬೇರ್ಪಡಿಸಿ. ಇದು ಸ್ವಲ್ಪ ದಪ್ಪವಾಗಿರುತ್ತದೆ. ಹೀಗಾಗಿ ಜರಡಿ ಮೂಲಕ ಹಾದುಹೋಗಲು ಕೆಲ ಸಮಯ ತೆಗೆದುಕೊಳ್ಳುತ್ತದೆ.

    * ಹೀಗೆ ತೆಗೆದ ಎಣ್ಣೆಯನ್ನು ಒಂದು ಬಾಟ್ಲಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳಿ. ವಾರದಲ್ಲಿ ಒಂದು ಸಲ ಹಚ್ಚಿದರೆ ನಿಮ್ಮ ಕೂದಲು ಸೊಂಪಾಗಿ ಹಾಗೂ ಉದ್ದವಾಗಿ ಬೆಳೆಯುವುದರಲ್ಲಿ ಎರಡು ಮಾತಿಲ್ಲ.

  • ಹುಡುಗಿಯ ಹೊಟ್ಟೆಯಲ್ಲಿದ್ದ 2 ಕೆಜಿ ಕೂದಲನ್ನು ಹೊರತೆಗೆದ ವೈದ್ಯರು..!

    ಹುಡುಗಿಯ ಹೊಟ್ಟೆಯಲ್ಲಿದ್ದ 2 ಕೆಜಿ ಕೂದಲನ್ನು ಹೊರತೆಗೆದ ವೈದ್ಯರು..!

    ಹೈದರಾಬಾದ್: 17 ವರ್ಷದ ಹುಡುಗಿಯ ಹೊಟ್ಟೆಯಲ್ಲಿದ್ದ 2 ಕೆಜಿ ಕೂದಲನ್ನು ಹೊರ ತೆಗೆದು ಆಕೆಯ ಪ್ರಾಣ ರಕ್ಷಣೆ ಮಾಡುವಲ್ಲಿ ತೆಲಂಗಾಣದ ಉಸ್ಮಾನಿಯಾ ಜನರಲ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.

    ‘ರಾಪುಂಜೆಲ್ ಸಿಂಡ್ರೋಮ್’ ಎಂಬ ಅಪರೂಪದ ಕಾಯಿಲೆಯಿಂದ ಹುಡುಗಿಯ ಹೊಟ್ಟೆಯಲ್ಲಿ ಸುಮಾರು 2 ಕೆಜಿ ಕೂದಲು ಬೆಳೆದಿತ್ತು. ಹೈದರಾಬಾದ್‍ನ ಶಂಶಾಬಾದ್ ಮೂಲದ ಈ ಹುಡುಗಿ ಅಪೌಷ್ಠಿಕತೆಯಿಂದ ಬಳಲುತ್ತಿದ್ದಳು. ಇದಲ್ಲದೆ ಹಸಿವಿನಿಂದ ತನ್ನ ಕೂದಲನ್ನು ಕಳೆದ 5 ತಿಂಗಳಿನಿಂದ ಸೇವಿಸುತ್ತಾ ಬಂದಿದ್ದಾಳೆ. ಬಳಿಕ ಇದೀಗ ಉಸ್ಮಾನಿಯ ಆಸ್ಪತ್ರೆಯ ಅಧೀಕ್ಷಕ ಡಾ.ನಾಗೇಂದರ್ ಬಿ ಅವರನ್ನೊಳಗೊಂಡ ವೈದ್ಯರ ತಂಡವು 150 ಸೆಂ.ಮೀ ಉದ್ದ ಬೆಳೆದಿದ್ದ ಸುಮಾರು 2 ಕೆಜಿ ಕೂದಲನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದಾರೆ.ಇದನ್ನೂ ಓದಿ: ಲಸಿಕೆ ಪಡೆದ್ರೆ ಪುರುಷತ್ವ, ಕೈ, ಕಾಲು ಹೋಗುತ್ತೆ- ಕೊರೊನಾ ವ್ಯಾಕ್ಸಿನ್ ಬಗ್ಗೆ ಸುಳ್ಳು ವದಂತಿ

    ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ವೈದ್ಯರಾದ ಡಾ.ನಾಗೇಂದರ್ ಅವರು, ಆಸ್ಪತ್ರೆಯಲ್ಲಿ ನಾವು ಈ ಮೊದಲು ರಾಪುಂಜೆಲ್ ಸಿಂಡ್ರೋಮ್‍ಗೆ ಚಿಕಿತ್ಸೆ ನೀಡಿದ್ದೇವೆ. ಬಾಲಕಿಯ ಹೊಟ್ಟೆಯಲ್ಲಿದ್ದ 150 ಸೆಂ.ಮೀ ಕೂದಲಿನಲ್ಲಿ ಪೈಕಿ 30 ಸೆಂ.ಮೀ ಹೊಟ್ಟೆಯಲ್ಲಿ ಮತ್ತು 120 ಸೆಂ.ಮೀ ಸಣ್ಣ ಕರುಳಿನಿಂದ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದೇವೆ. ವಾಂತಿ ಮತ್ತು ಹೊಟ್ಟೆ ನೋವಿನಿಂದಾಗಿ ಒಂದು ತಿಂಗಳ ಹಿಂದೆ 17 ವರ್ಷದ ಹುಡುಗಿ ಪೂಜಿತಾ ಮಂಡಲ್ ಆಸ್ಪತ್ರೆಗೆ ದಾಖಲಾಗಿದ್ದಳು. ತನ್ನ ಸ್ವಂತ ಕೂದಲನ್ನು ಹುಡುಗಿ ತಿನ್ನುತ್ತಿದ್ದಳು ಎಂದು ಆಕೆಯ ಸಹೋದರಿ ತಿಳಿಸಿದ ಬಳಿಕ ಆಕೆಗೆ ಚಿಕಿತ್ಸೆ ಪ್ರಾರಂಭಿಸಿ ಇದೀಗ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.

    ವಿಶ್ವದಾದ್ಯಂತ ಈವರೆಗೆ ಕಂಡುಬಂದಿರುವ 68 ಪ್ರಕರಣಗಳ ಪೈಕಿ ಹೊಟ್ಟೆಯಿಂದ ಹೊರತೆಗೆದಿರುವ ಅತೀ ಉದ್ದದ ಕೂದಲಾಗಿದೆ. ಆಕೆ ಆಸ್ಪತ್ರೆಗೆ ದಾಖಲಾಗಿದ್ದ ಸಮಯದಲ್ಲಿ ಆಕೆಗೆ ಕೊರೊನಾ ಪಾಸಿಟಿವ್ ಬಂದಿದ್ದರಿಂದ ಆಕೆಗೆ ಮೊದಲು ಕೋವಿಡ್ ಚಿಕಿತ್ಸೆ ಕೊಡಿಸಿ ಅದರಿಂದ ಚೇತರಿಸಿಕೊಂಡ ಬಳಿಕ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ವೈದ್ಯರು ಮಾಹಿತಿ ಹಂಚಿಕೊಂಡರು.

    ಪೂಜಿತಾ ಮಂಡಲ್ ಅಪೌಷ್ಠಿಕತೆಯಿಂದ ಬಳಲುತ್ತಿದ್ದು, ತಿಂದ ಕೂದಲು ಜೀರ್ಣವಾಗದೆ ಇದ್ದುದ್ದರಿಂದ ಈ ಮಟ್ಟಕ್ಕೆ ಸೇರಿಕೊಂಡಿತ್ತು. ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಮತ್ತು ಅಧೀಕ್ಷಕ ಡಾ.ಬಿ ನಾಗೇಂದ್ರ, ಸಹಾಯ ಪ್ರಾಧ್ಯಾಪಕ ಡಾ.ಜಿ ಅನಿಲ್ ಕುಮಾರ್, ಸಹಾಯಕ ಪ್ರಾಧ್ಯಾಪಕರಾದ ಡಾ.ಎ ಅಜಿತಾ ಮತ್ತು ಪಿ.ಜಿ ವಿದ್ಯಾರ್ಥಿಗಳು ಸೇರಿದಂತೆ ಅರಿವಳಿಕೆ ವಿಭಾಗದ ಹಿರಿಯ ಪ್ರಾಧ್ಯಾಪಕರು ಡಾ.ಪಾಂಡು ನಾಯಕ್, ಡಾ.ಕೆ.ರಾಣಿ ಮತ್ತು ಡಾ.ಪವನ್ ತಂಡ ಬಾಲಕಿಗೆ ಶಸ್ತ್ರ ಚಿಕಿತ್ಸೆಗೆ ನೆರವಾಗಿದ್ದಾರೆ.

  • ಯಾವ ಹೇರ್ ಕಲರ್ ಮಾಡಿಸಿದ್ರೆ ಬೆಸ್ಟ್? ಇಲ್ಲಿದೆ ಮಾಹಿತಿ

    ಯಾವ ಹೇರ್ ಕಲರ್ ಮಾಡಿಸಿದ್ರೆ ಬೆಸ್ಟ್? ಇಲ್ಲಿದೆ ಮಾಹಿತಿ

    ಸಾಮಾನ್ಯವಾಗಿ ಕೂದಲಿಗೆ ಸದಾ ಒಂದೇ ರೀತಿಯ ಹೇರ್ ಕಲರ್ ಹಚ್ಚಿದರೆ ಬೋರ್ ಆಗುತ್ತದೆ. ಮೊದಲಿಗೆ ಹೇರ್ ಕಲರ್ ಹಚ್ಚಿಕೊಂಡಾಗ ಅದನ್ನು ಬಹಳ ಇಷ್ಟ ಪಡುತ್ತೀರಾ, ಆದರೆ ತಿಂಗಳುಗಳು ಕಳೆದಂತೆ ಕನ್ನಡಿ ಮುಂದೆ ನಿಂತಾಗ ಒಂದೇ ರೀತಿಯ ಹೇರ್ ಕಲರ್ ನಿಮಗೆ ಬೇಸರ ತರಿಸುತ್ತದೆ. ಹೀಗಾಗಿ ಅದರಲ್ಲಿ ಹೊಸತನ ಹುಡುಕಲು ಆರಂಭಿಸುತ್ತೀರ. ಖುಷಿ ವಿಚಾರವೆಂದರೆ ಇದೀಗ ಹೇರ್ ಕಲರ್‍ಗೊಳಿಸಲು ಹಲವಾರು ರೀತಿಯ ಬಣ್ಣಗಳಿವೆ. ಅದರಲ್ಲೂ ನಿಮ್ಮ ಸ್ಕೀನ್ ಕಲರ್‍ಗೆ ಮ್ಯಾಚ್ ಆಗುವಂತಹ ಹೇರ್ ಕಲರ್ ನಿಮಗೆ ಸಖತ್ ರಿಚ್ ಲುಕ್ ನೀಡುತ್ತದೆ. ಆದರೆ ನಿಮ್ಮ ಕೂದಲಿಗೆ ಸೂಟ್ ಆಗುವಂತಹ ಬಣ್ಣ ಯಾವುದು? ಯಾವ ತರಹದ ಕೂದಲಿಗೆ ಯಾವ ಬಣ್ಣ ಹಚ್ಚಿಕೊಳ್ಳಬೇಕು ಈ ಎಲ್ಲದರ ಬಗ್ಗೆ ಕೆಲವೊಂದಷ್ಟು ಮಾಹಿತಿ ಈ ಕೆಳಗಿನಂತಿದೆ.

    ಬೋಲ್ಡ್ ಕಲರ್ ಹೇರ್
    ದಪ್ಪ ಹಾಗೂ ಉದ್ದನೆಯ ಕೂದಲನ್ನು ಹೊಂದಿರುವವರು ಪರ್ಪಲ್(ನೇರಳೆ) ಮತ್ತು ಬ್ಲೂ(ನೀಲಿ) ಹೇರ್ ಕಲರಿಂಗ್ ಮಾಡಿಸಿದರೆ ನಿಮ್ಮ ಕೂದಲು ಬಹಳ ಸುಂದರವಾಗಿ ಕಾಣಿಸುತ್ತದೆ. ಅಲ್ಲದೆ ಈ ಬಣ್ಣ ಕೂದಲಗೆ ಆಕರ್ಷಕ ಲುಕ್ ನೀಡುತ್ತದೆ.

    ರೆಡ್-ಬ್ರಾವ್ನ್ ಕಲರ್ ಹೇರ್
    ರೆಡ್ ಹಾಗೂ ಬ್ರಾವ್ನ್ ಮಿಶ್ರಿತ ಕಲರ್ ಪ್ರಸ್ತುತ ಬೋಲ್ಡ್ ಲುಕ್ ನೀಡುತ್ತದೆ. ಎಲ್ಲಾ ರೀತಿಯ ಮಾಡ್ರೆನ್ ಡ್ರಸ್‍ಗಳಿಗೆ ಈ ಹೇರ್ ಕಲರ್ ಸಖತ್ ಮ್ಯಾಚ್ ಆಗುತ್ತದೆ.

    ಟೂ-ಟೋನ್ಡ್ ಹೇರ್ ಕಲರ್
    ಬೇಬಿ ಕಟ್ ಹೇರ್ ಸ್ಟೈಲ್ ಮಾಡಿಸಿದ್ರೆ, ನಿಮ್ಮ ಕೂದಲಿಗೆ ಟೂ-ಟೋನ್ಡ್ ಹೇರ್ ಕಲರ್ ಉತ್ತಮ. ಇದು ಒಂದೇ ಕಡೆ ಎರಡು ಶೇಡ್‍ನಂತೆ ಕಾಣಿಸುವ ಈ ಹೇರ್ ಕಲರ್ ಮಹಿಳೆಯರಿಗೆ ಸಖತ್ ಡಿಫರೆಂಟ್ ಲುಕ್ ನೀಡುತ್ತದೆ.

    ಪ್ಲಾಟಿನಂ ಬ್ಲಾಂಡ್ ಹಾಗೂ ಪರ್ಪಲ್ ರೂಟ್ಸ್
    ಕಣ್ಮನ ಸೆಳೆಯುವಂತಹ ಈ ಹೇರ್ ಕಲರ್ ಪ್ಲಾಟಿನಂ ಹಾಗೂ ಪರ್ಪಲ್(ನೇರಳೆ) ಮಿಶ್ರಣ ಹೊಂದಿರುವ ಹೇರ್ ಕಲರ್ ಆಗಿದ್ದು, ಇದು ಕೂದಲಿಗೆ ಸಖತ್ ಸ್ಟೈಲಿಶ್ ಲುಕ್ ನೀಡುತ್ತದೆ.

    ಸ್ಟ್ರಾಬೆರಿ ಬ್ಲಾಂಡ್ ಒಂಬ್ರೆ
    ಈ ಹೇರ್ ಕಲರ್ ಕೂದಲಿಗೆ ಕತ್ತಲಿನಲ್ಲಿಯು ಹೊಳಪು ನೀಡುತ್ತದೆ. ಸ್ಟ್ರಾಬೆರೆ ಬ್ರಾವ್ನ್ ಹಾಗೂ ಆರೆಂಜ್ ಕಲರ್ ಬಣ್ಣದಿಂದ ಮಿಶ್ರಣಗೊಂಡ ಹೇರ್ ಕಲರ್ ಆಗಿದ್ದು, ಬಿಳಿ ತ್ವಚೆ ಹೊಂದಿರುವವರಿಗೆ ಬಹಳ ಸುಂದರವಾಗಿ ಕಾಣಿಸುತ್ತದೆ.

    ಒಟ್ಟಾರೆ ಮುಂಜಾಗ್ರತಾ ಕ್ರಮವಾಗಿ ನಿಮ್ಮ ತ್ವಚೆಯ ಆರೋಗ್ಯಕ್ಕೆ ಹೊಂದಾಣಿಕೆಯಾಗುವಂತಹ ಹೇರ್ ಕಲರ್ ಮಾಡಿಕೊಳ್ಳುವುದು ಉತ್ತಮ. ಇದನ್ನು ಓದಿ:  ಮಹಿಳೆಯರ ಫೇಮಸ್ 5 ಅಂಡರ್‌ಕಟ್ ಹೇರ್ ಸ್ಟೈಲ್