Tag: ಕುರಿಗಾಯಿಗಳು

  • ರಭಸವಾಗಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ಕುರಿಗಳು – ಕುರಿಗಾಹಿಗಳ ಕಣ್ಣೀರು

    ರಭಸವಾಗಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ಕುರಿಗಳು – ಕುರಿಗಾಹಿಗಳ ಕಣ್ಣೀರು

    ಚಿತ್ರದುರ್ಗ: ಭಾರೀ ಮಳೆಯಿಂದಾಗಿ ರಭಸವಾಗಿ ಹರಿಯುತ್ತಿರುವ ಹಳ್ಳವೊಂದರಲ್ಲಿ 14 ಕುರಿಗಳು ಕೊಚ್ಚಿ ಹೋಗಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ದೊಡ್ಡ ತೇಕಲವಟ್ಟಿ ಗ್ರಾಮದ ಹಳ್ಳದಲ್ಲಿ ನಡೆದಿದೆ.

    ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ದೊಡ್ಡ ತೇಕಲವಟ್ಟಿಯ ಹಳ್ಳ ಭರ್ತಿಯಾಗಿ ರಭಸವಾಗಿ ಹರಿಯುತ್ತಿದೆ. ಈ ವೇಳೆ ಕುರಿಗಳನ್ನು ಮೇಯಿಸಲು ತೆರಳಿದ್ದ ಈಶ್ವರಪ್ಪ ಎಂಬವರ 4 ಕುರಿಗಳು, ರೇವಣ್ಣನ 4 ಕುರಿಗಳು ಹಾಗೂ ರಂಗಪ್ಪ ಎಂಬವರಿಗೆ ಸೇರಿದ 2 ಕುರಿಗಳು ಹಳ್ಳ ದಾಟುವ ಸಂದರ್ಭದಲ್ಲಿ ಹಳ್ಳದ ರಭಸಕ್ಕೆ ಕೊಚ್ಚಿ ಹೋಗಿ ಸಾವನ್ನಪ್ಪಿವೆ. ಇದನ್ನೂ ಓದಿ: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿ ಆತ್ಮಹತ್ಯೆ – ಶಿಕ್ಷಕ ಅರೆಸ್ಟ್

    ಈ ವೇಳೆ ಸಾವನ್ನಪ್ಪಿದ್ದ 10 ಕುರಿಗಳು ಕುರಿಗಾಹಿಗಳ ಸಾಹಸದಿಂದ ಕೈಗೆ ಸಿಕ್ಕಿವೆ. ಆದರೆ ಇನ್ನೂ 4 ಕುರಿಗಳು ನೀರಲ್ಲೇ ಕೊಚ್ಚಿ ಹೋಗಿವೆ. ಹೀಗಾಗಿ ಸಾವನ್ನಪ್ಪಿರುವ ಕುರಿಗಳನ್ನು ವಾಪಸ್ ತಂದು ತಮ್ಮ ಮನೆಯ ಮುಂದೆ ರಾಶಿ ಹಾಕಿರುವ ಕುರಿಗಾಹಿಗಳು ಕಣ್ಣೀರಿಡುತ್ತಿರುವ ದೃಶ್ಯ ಎಲ್ಲರ ಮನಕಲಕುವಂತಿದೆ.

    ಕಳೆದ ವರ್ಷದಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕುತ್ತಿರುವ ಕುರಿಗಾಹಿಗಳು ಕಷ್ಟಪಟ್ಟು ಸಾಕಿರೋ ಕುರಿಗಳು ಕಣ್ಮುಂದೆಯೇ ಕೊಚ್ಚಿ ಹೋದ ದೃಶ್ಯ ನೆನೆದು ಕಣ್ಣೀರಿಡ್ತಾ, ಕಂಗಾಲಾಗಿದ್ದಾರೆ. ಕುರಿಗಾಹಿಗಳ ಬದುಕಿಗೆ ಆಸರೆಯಾಗಿದ್ದ ಕುರಿಗಳನ್ನು ಕಳೆದುಕೊಂಡಿರೋ ಹಿನ್ನೆಲೆ ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಮನೆ ಮಾಡಿದೆ. ಹೀಗಾಗಿ ಇದೊಂದು ಅತಿವೃಷ್ಟಿ ಎಂದು ಪರಿಗಣಿಸಿ ಈ ಕೂಡಲೇ ತಾಲೂಕು ಆಡಳಿತ ಹಾಗೂ ಸರ್ಕಾರ ಕುರಿಗಾಹಿಗಳ ನೆರವಿಗೆ ಧಾವಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಯುವರತ್ನನಿಗೆ ಪದ್ಮಶ್ರೀ ನೀಡಲು ಶಿಫಾರಸ್ಸಿಗೆ ತೀರ್ಮಾನ

  • ಹಳ್ಳದ ಪಕ್ಕ ಸಿಲುಕಿದ್ದ ಕುರಿ, ಕುರಿಗಾಯಿ ರಕ್ಷಣೆ

    ಹಳ್ಳದ ಪಕ್ಕ ಸಿಲುಕಿದ್ದ ಕುರಿ, ಕುರಿಗಾಯಿ ರಕ್ಷಣೆ

    ಧಾರವಾಡ: ಹಳ್ಳದ ಪಕ್ಕ ಸಿಲುಕಿದ್ದ ಕುರಿ ಹಾಗೂ ಕುರಿಗಾಯಿಯನ್ನು ರಕ್ಷಣೆ ಮಾಡಿದ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮದ ಬಳಿ ನಡೆದಿದೆ.

    ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಬಹುತೇಕ ಹಳ್ಳಗಳು ತುಂಬಿ ಹರಿಯುತ್ತಿವೆ. ಹೀಗಾಗಿ ಗುಮ್ಮಗೋಳ ಹಾಗೂ ಶಿರೂರ ಗ್ರಾಮದ ಹಳ್ಳದ ಬಳಿ ಕುರಿಗಾಯಿಗಳು ಸಿಲುಕಿದ್ದ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಆಗಮಿಸಿದ ನವಲಗುಂದ ತಹಶಿಲ್ದಾರ್ ನವೀನ್ ಹುಲ್ಲೂರ, ಸ್ಥಳಿಯ ಜನರ ಜೊತೆ ಸೇರಿ ಕುರಿ ಹಾಗೂ ಕುರಿಗಾಯಿಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಿದರು.

    ಸುಮಾರು 200 ಕುರಿಗಳ ಜೊತೆ ಹಳ್ಳದ ಪಕ್ಕದಲ್ಲಿ ನಿಂತಿದ್ದ 6 ಕುರಿಗಾಯಿಗಳು ಹಳ್ಳದ ಬಳಿಯೇ ತಂಗಿದ್ದರು. ಆದರೆ ಬೆಳಗ್ಗೆಯಿಂದ ಏಕಾಏಕಿ ಮಳೆ ಹೆಚ್ಚಾದ ಕಾರಣ ಹಳ್ಳದ ನೀರಿನಲ್ಲಿ ಏರಿಕೆಯಾಗಿದೆ. ಹೀಗಾಗಿ ಸ್ಥಳೀಯರು ಕರೆ ಮಾಡಿ ಹೇಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ನವೀನ್, ಕುರಿ ಹಾಗೂ ಕುರಿಗಾಯಿಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಿದರು. ಈ ವೇಳೆ ನವಲಗುಂದ ಪೊಲೀಸರು ಸಹ ತಾಲೂಕು ಆಡಳಿತಕ್ಕೆ ಸ್ಥಳದಲ್ಲಿ ಕುರಿ ರಕ್ಷಣೆಗೆ ಸಹಾಯ ಮಾಡಿದರು.

  • ಕೊರೊನಾ, ಲಾಕ್‍ಡೌನ್- ಅಲೆಮಾರಿ ಕುರಿಗಾಯಿಗಳ ಬದುಕು ಅಯೋಮಯ

    ಕೊರೊನಾ, ಲಾಕ್‍ಡೌನ್- ಅಲೆಮಾರಿ ಕುರಿಗಾಯಿಗಳ ಬದುಕು ಅಯೋಮಯ

    ಚಿತ್ರದುರ್ಗ: ಹೊಟ್ಟೆಪಾಡಿಗಾಗಿ ಮನೆಮಂದಿಯನ್ನೆಲ್ಲ ಬಿಟ್ಟು ಕುರಿ ಸಾಕಣಿಕೆಗಾಗಿ ಊರಿಂದ ಊರಿಗೆ ಸಾಗುವ ಅಲೆಮಾರಿ ಕುರಿಗಾಯಿಗಳ ಬದುಕು ಕೊರೊನಾ ಮಹಾಮಾರಿಯಿಂದಾಗಿ ಭಾರೀ ಸಂಕಷ್ಟಕ್ಕೆ ಸಿಲುಕಿದೆ.

    ಜಿಲ್ಲೆಯ ಹಿರಿಯೂರು, ಚಳ್ಳಕೆರೆ, ಹೊಸದುರ್ಗ, ಹೊಳಲ್ಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗಳ ವಿವಿಧ ಹಳ್ಳಿಗಳ ಕುರಿಗಾಹಿಗಳು ಹೊಟ್ಟೆಪಾಡಿಗಾಗಿ ಬೇರೆಯವರ ಜಮೀನಿನಲ್ಲಿ ಟೆಂಟ್ ಹಾಕಿಕೊಂಡು, ಕುರಿಮಂದೆ ಕೂಡಿಕೊಂಡು, ರೈತರು ಕೊಡುವ ಧಾನ್ಯಗಳಿಂದ ಆಹಾರ ತಯಾರಿಸಿ ಹೊಟ್ಟೆ ತುಂಬಿಸಿಕೊಂಡು ಹೇಗೋ ಜೀವನ ಸಾಗಿಸುತ್ತಿದ್ದರು. ಆದರೆ ಕೊರೊನಾ ಕಾರಣದಿಂದ ಇದೀಗ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

    ಕೊರೊನಾ ಹಾಗೂ ಲಾಕ್‍ಡೌನ್ ಇರುವುದರಿಂದ ರೈತರು ತಮ್ಮ ಹೊಲಗಳಲ್ಲಿ ಕುರಿಗಳನ್ನು ನಿಲ್ಲಿಸುತ್ತಿಲ್ಲ. ಹೀಗಾಗಿ ಕೊರೊನಾ ಲಾಕ್‍ಡೌನ್ ವೇಳೆ ಕುರಿಗಳ ಮೇವಿಗಾಗಿ ಕುರಿಗಾಯಿಗಳು ಪರದಾಡುವಂತಾಗಿದೆ. ಕುರಿಗಾರರು ನಿತ್ಯ ತಮ್ಮ ಕುರಿಗಳಿಗೆ ಕುಡಿಯುವ ನೀರಿನ ಅಭಾವ, ಮೇವು-ಆಹಾರ ಸಿಗದೇ ಚಡಪಡಿಸುತ್ತಿದ್ದಾರೆ. ಬೆಳಗಾದರೆ ಎತ್ತಕಡೆ ಹೋಗಬೇಕೆಂದು ಚಿಂತಿಸುತ್ತಿದ್ದಾರೆ. ಲಾಕ್‍ಡೌನ್ ಹಾಗೂ ಕೊರೊನಾ ಹಿನ್ನೆಲೆ ಯಾವ ಕಡೆಯೂ ಹೋಗಲಾಗದೆ. ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

    ಮರಿ ಹಾಕಿದರೂ ತಾಯಿ ಕುರಿಯಲ್ಲಿ ಹಾಲಿನ ಅಭಾವ ಕಂಡು ಬರುತ್ತಿದ್ದು, ಕುರಿಗಳ ಬೆಲೆ ಚೆನ್ನಾಗಿದೆ ಮಾರಾಟ ಮಾಡೋಣ ಅಂದ್ರೆ ಲಾಕ್‍ಡೌನ್ ಹಿನ್ನೆಲೆ ಮಾರುಕಟ್ಟೆಗಳು ತೆರೆದಿಲ್ಲ. ಅಲ್ಲದೆ ಕೊರೊನಾ ಭೀತಿಯಿಂದ ಖರೀದಿಸುವವರು ಸಹ ಮಾರುಕಟ್ಟೆಗೆ ಧಾವಿಸುತ್ತಿಲ್ಲ. ಹೀಗಾಗಿ ಕುರಿಗಾಯಿಗಳು ಭಾರೀ ನಷ್ಟ ಅನುಭವಿಸುವಂತಾಗಿದೆ.

    ಇಷ್ಟೆಲ್ಲ ಸಮಸ್ಯೆ ಅನುಭವಿಸುವ ಕುರಿಗಾಯಿಗಳ ಬಗ್ಗೆ ಪಶು ವೈದ್ಯಾಧಿಕಾರಿಗಳು ಸ್ವಲ್ಪವೂ ಅನುಕಂಪ ತೋರಿಸುತ್ತಿಲ್ಲ. ಸಮೀಕ್ಷೆಯನ್ನೂ ನಡೆಸುತ್ತಿಲ್ಲ, ಅನೇಕ ಬಾರಿ ಕುರಿಗಳು ವಿವಿಧ ರೋಗದಿಂದ ಸಾಯುತ್ತಿವೆ. ಆದರೆ ಪಶು ವೈದ್ಯಾಧಿಕಾರಿಗಳು ಈ ಬಗ್ಗೆ ತಲೆ ಕೆಡಸಿಕೊಳ್ಳುವುದಿಲ್ಲ. ಮಳೆ, ಗಾಳಿ, ಚಳಿಗೆ ನೂರಾರು ಕುರಿ ಮತ್ತು ಕುರಿಗಾಯಿಗಳು ತತ್ತರಿಸುತ್ತಿದ್ದಾರೆ. ಜೋಪಡಿ ನೆರಳಿನಲ್ಲಿ ಜೀವಿಸುವ ಇವರಿಗೆ ಯಾವುದೇ ಭದ್ರತೆ ಇಲ್ಲ, ಹೊಲಗದ್ದೆಗಳಲ್ಲಿ ಠಿಕಾಣಿ ಹೂಡುವ ಕುರಿಗಾಯಿಗಳ ಜೀವಕ್ಕೂ ರಕ್ಷಣೆ ಇಲ್ಲವಾಗಿದೆ.

    ಅಲೆಮಾರಿ ಕುರಿಗಾಯಿಗಳಿಗೆ ಭೀಮಾ ಯೋಜನೆಯಡಿ ವಿಮೆ ಸೌಲಭ್ಯವಿರುತ್ತದೆ. ಆದರೆ ಬಹುತೇಕ ಕುರಿಗಾಯಿಗಳು ವಿಮಾ ಯೋಜನೆ ಅನುಕೂಲ ಪಡೆದಿಲ್ಲ. ಹೀಗಾಗಿ ವಲಸೆ ಕುರಿಗಾಯಿಗಳ ಬದುಕು ಅತಂತ್ರ ಸ್ಥಿತಿಯಲ್ಲಿದ್ದು, ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಹೀಗಾಗಿ ಸರ್ಕಾರ ಇವರಿಗೆ ಸೂಕ್ತ ನೆರವು ನೀಡಬೇಕಿದೆ.

    ಕಳೆದ ಒಂದು ವರ್ಷದಿಂದ ಉತ್ತಮ ಮಳೆಯಾದರೂ ಕುರಿಗಾಯಿಗಳ ಬದುಕು ಮಾತ್ರ ಕೊರೊನಾ ಮಹಾಮಾರಿಯ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿದೆ. ಮಳೆಯೇ ಇರಲಿ, ಬಿಸಿಲೇ ಇರಲಿ, ಕುರಿಗಳ ಸಾಕಣಿಕೆಗಾಗಿ ಮೇವು ಹಾಗೂ ಮಂದೆ ಕೂಡುವ ಕಾಯಕ, ಹರಸಿ ಸಾಗುವ ಅಲೆಮಾರಿಗಳಿಗೆ ಲಾಕ್‍ಡೌನ್ ಶಾಪವಾಗಿ ಪರಿಣಮಿಸಿದೆ. ಊರಿಂದ ಊರಿಗೆ ಹೋಗುವ ಈ ಕುರಿಗಾಯಿಗಳು, ಬೇರೆ ಊರಿಂದ ಬಂದಿದ್ದಾರೆಂದರೆ ಕುರಿಗಳ ಸಹಿತ ಊರೊಳಗೆ ಪ್ರವೇಶಿಸೋದಕ್ಕೂ ಹರಸಾಹಸ ಪಡಬೇಕು. ಗ್ರಾಮ ಪ್ರವೇಶಿಸಿದರೂ ನೆಮ್ಮದಿ ಇಲ್ಲದ ಬದುಕು ಸಾಗಿಸಬೇಕು. ಆ ಊರಿಗೆ ಕೊರೊನಾ ಎಂಟ್ರಿ ಕೊಟ್ಟರೆ ಈ ಕುರಿಗಾಯಿಗಳೇ ಹೊಣೆಯಾಗಬೇಕು.