Tag: ಕುಣಿಗಲ್

  • ಕಾಣೆಯಾದ ಮಗ 10 ವರ್ಷದ ಬಳಿಕ ಪ್ರತ್ಯಕ್ಷ

    ಕಾಣೆಯಾದ ಮಗ 10 ವರ್ಷದ ಬಳಿಕ ಪ್ರತ್ಯಕ್ಷ

    – ಮಗನಿಗಾಗಿ ಕಣ್ಣೀರಿಡುತ್ತಿದ್ದ ದಂಪತಿಗೆ ವರವಾದ ಕೊರೊನಾ
    – ಗ್ರಾಮದ ಸ್ವಾಸ್ಥ್ಯಕ್ಕಾಗಿ ಕ್ವಾರಂಟೈನ್ ಕೇಂದ್ರಕ್ಕೆ ಶಿಫ್ಟ್

    ತುಮಕೂರು: ಹತ್ತು ವರ್ಷಗಳ ಹಿಂದೆ ಮಗ ನಾಪತ್ತೆಯಾದ ಹಿನ್ನೆಲೆಯಲ್ಲಿ ಪೋಷಕರು ಪೊಲೀಸರಿಗೆ ದೂರು ನೀಡಿದರೂ ಮಗನನ್ನ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಮಗ ನಾಪತ್ತೆಯಾದ ಕೊರಗಿನಲ್ಲೇ ಹತ್ತು ವರ್ಷಗಳಿಂದ ದಿನದೂಡುತ್ತಿದ್ದ ಪೋಷಕರಿಗೆ ಅಚ್ಚರಿ ಎಂಬಂತೆ ಮಗ ಪ್ರತ್ಯಕ್ಷವಾಗಿದ್ದಾನೆ. ಹಲವು ವರ್ಷಗಳ ಬಳಿಕ ಮಗ ಮನೆ ಸೇರಿದರೂ ಪೋಷಕರು ಅವನ ಜೊತೆ ಸೇರದಂತ ಸಂಕಷ್ಟವನ್ನು ಕೊರೊನಾ ತಂದೊಡ್ಡಿದೆ.

    ಹೌದು. ಕುಣಿಗಲ್ ತಾಲೂಕಿನ ಗುನ್ನಾಗರೆ ಗ್ರಾಮದ ಕೃಷ್ಣಪ್ಪ ದಂಪತಿಗೆ ಕೊರೊನಾ ವರವಾಗಿ ಪರಿಣಮಿಸಿದೆ. ಹತ್ತು ವರ್ಷಗಳ ಹಿಂದೆ ಮನೆ ತೊರೆದು ಹೋಗಿದ್ದ ಮಗ ಕೊರೊನಾ ಭೀತಿಯಿಂದ ಹಿಂತಿರುಗಿ ಬಂದಿದ್ದಾರೆ.

    ಕೃಷ್ಣಪ್ಪ ಅವರ ಮಗ ರಂಗಸ್ವಾಮಿ 2011ರಲ್ಲಿ ಶಾಲೆಗೆಂದು ಹೋಗಿ ಕಾಣೆಯಾಗಿದ್ದರು. ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಮಗ ಕಾಣೆಯಾದ ಹಿನ್ನೆಲೆಯಲ್ಲಿ ಹೆತ್ತವರು ಕಣ್ಣೀರಿನಲ್ಲಿಯೇ ದಿನಗಳನ್ನು ನೂಕುತ್ತಿದ್ದರು. ಶುಕ್ರವಾರ ರಾತ್ರಿ ರಂಗಸ್ವಾಮಿ ತನ್ನ ಅಜ್ಜಿಯ ಮನೆ (ಶೆಟ್ಟಿಗೆರೆ)ಗೆ ಬಂದು ತನ್ನ ಪರಿಚಯವನ್ನು ಹೇಳಿಕೊಂಡಾಗ ಆಶ್ಚರ್ಯವಾಗಿ, ತಂದೆ ತಾಯಿಯ ಗಮನಕ್ಕೆ ತಂದಿದ್ದಾರೆ. ಮಗ ಬಂದಿರುವ ಸುದ್ದಿ ತಿಳಿದು ಶೆಟ್ಟಿಗೆರೆಗೆ ಬಂದ ಕೃಷ್ಣಪ್ಪ ದಂಪತಿ ಮಗನನ್ನು ನೋಡಿ ಆನಂದಬಾಷ್ಪ ಸುರಿಸಿದ್ದಾರೆ.

    ರಂಗಸ್ವಾಮಿ ಕಳೆದ ಹತ್ತು ವರ್ಷಗಳಿಂದ ಬೀದರ್ ಜಿಲ್ಲೆ ಭಾಲ್ಕಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಕೊರೊನಾ ಹಿನ್ನೆಲೆ ಕೆಲಸವಿಲ್ಲದೆ ಬೇಸತ್ತು ತವರಿಗೆ ಬರುವ ಮನಸ್ಸು ಮಾಡಿದ್ದಾರೆ ಎಂದು ಚಿಕ್ಕಪ್ಪ ಕುಮಾರ್ ತಿಳಿಸಿದ್ದಾರೆ.

    ಮಹಾರಾಷ್ಟ್ರ ಗಡಿ ಭಾಗದಿಂದ ಬಂದಿರುವ ಕಾರಣ ಪೋಷಕರೇ ಎಚ್ಚೆತ್ತು, 10 ವರ್ಷದ ನಂತರ ಬಂದ ಮಗನನ್ನು ಮನೆಗೆ ಸೇರಿಸದೆ, ಆರೋಗ್ಯ ತಪಾಸಣೆಗೆಂದು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದರು. ಅವರನ್ನು ಹುಲಿಯೂರು ದುರ್ಗದ ಹೇಮಗಿರಿಬೆಟ್ಟದ ಬಳಿಯ ವಸತಿ ಶಾಲೆಗೆ ಕ್ವಾರಂಟೈನ್ ಮಾಡಲಾಗಿದೆ.

    ಗ್ರಾಮಸ್ಥರ ಆರೋಗ್ಯ ಮುಖ್ಯ:
    ಮಗ ಬಂದಿರುವುದು ಸಂತೋಷ. ಆದರೆ ಅವನು ಗಡಿಭಾಗದಿಂದ ಬಂದಿರುವ ಕಾರಣ ಆರೋಗ್ಯದ ಜತೆ ಗ್ರಾಮಸ್ಥರ ಆರೋಗ್ಯವೂ ಮುಖ್ಯ. 10 ವರ್ಷ ಕಾದ ನಮಗೆ ಹದಿನೈದು ದಿನ ಕಾಯುವುದು ದೊಡ್ಡದಲ್ಲ. ಹಾಗಾಗಿ ವರದಿ ಬಂದ ನಂತರ ಆರೋಗ್ಯವಂತ ಮಗನನ್ನು ಮನೆಗೆ ಸೇರಿಸಿಕೊಳ್ಳುವುದಾಗಿ ಪೋಷಕರು ಹೇಳುತ್ತಿದ್ದಾರೆ.

  • ಸೈಟ್ ವಿಚಾರಕ್ಕೆ ಎರಡು ಕುಟುಂಬಗಳ ಮಾರಾಮಾರಿ -ವೃದ್ಧೆ ಸಾವು

    ಸೈಟ್ ವಿಚಾರಕ್ಕೆ ಎರಡು ಕುಟುಂಬಗಳ ಮಾರಾಮಾರಿ -ವೃದ್ಧೆ ಸಾವು

    ತುಮಕೂರು: ಸೈಟ್ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದ ಪರಿಣಾಮ ಓರ್ವ ವೃದ್ಧೆ ಸಾವನ್ನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಕುಣಿಗಲ್ ತಾಲೂಕಿನ ರಾಯಗೋನಹಳ್ಳಿಯಲ್ಲಿ ನಡೆದಿದೆ.

    ರಾಯಗೋನಹಳ್ಳಿಯ ಲಕ್ಷ್ಮಮ್ಮ (60) ಮೃತ ವೃದ್ಧೆ. ಲಕ್ಷ್ಮಮ್ಮ ಅವರ ಮಗಳು ನರಸಮ್ಮ, ಮಗ ರಂಗಸ್ವಾಮಿ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಗ್ರಾಮದ ದಾಸೇಗೌಡ ಹಾಗೂ ಲಕ್ಷ್ಮಮ್ಮ ಕುಟುಂಬ ನಡುವೆ ಸೈಟ್ ವಿಚಾರಕ್ಕೆ ಜಗಳ ಶುರುವಾಗಿದ್ದು, ದಾಸೇಗೌಡ ಕುಟುಂಬ ಲಕ್ಷ್ಮಮ್ಮನ ಕುಟುಂಬಸ್ಥರಿಗೆ ದೊಣ್ಣೆ ಮತ್ತು ಕಲ್ಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಕುಣಿಗಲ್ ಠಾಣೆಯಲ್ಲಿ ಆರೋಪಿಗಳಾದ ಕೃಷ್ಣಪ್ಪ, ದಾಸೇಗೌಡ, ನಾಗರಾಜು, ಹೇಮಂತ ಕುಮಾರ್, ಕಿರಣ್ ಹಾಗೂ ಮುನಿಕೃಷ್ಣ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಆರೋಪಿಗಳನ್ನು ಬಂಧಿಸುವವರೆಗೂ ಶವ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ರಾಯಗೋನಹಳ್ಳಿ ಗ್ರಾಮದಲ್ಲಿ ಲಕ್ಷ್ಮಮ್ಮ ಅವರ ಮೃತ ದೇಹವಿಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಕುಟುಂಬಸ್ಥರ ಮನವೊಲಿಸಿ ತಿಳಿಗೊಳಿಸಿ ಅಂತ್ಯಸಂಸ್ಕಾರ ನಡೆಸಲು ಮನವಿ ಮಾಡಿಕೊಂಡರು.

  • ಕುಣಿಗಲ್ ಬಳಿ ಭೀಕರ ರಸ್ತೆ ಅಪಘಾತಕ್ಕೆ 12 ಬಲಿ -ಡಿಕ್ಕಿಯ ರಭಸಕ್ಕೆ ಬ್ರೀಜಾ ಅಪ್ಪಚ್ಚಿ

    ಕುಣಿಗಲ್ ಬಳಿ ಭೀಕರ ರಸ್ತೆ ಅಪಘಾತಕ್ಕೆ 12 ಬಲಿ -ಡಿಕ್ಕಿಯ ರಭಸಕ್ಕೆ ಬ್ರೀಜಾ ಅಪ್ಪಚ್ಚಿ

    – ಧರ್ಮಸ್ಥಳ ಪ್ರವಾಸ ಮುಗಿಸಿ ಬರುತ್ತಿದ್ದಾಗ ದುರ್ಘಟನೆ
    – ಬೆಂಗಳೂರು ಮೂಲದ ಯುವಕರಿದ್ದ ಬ್ರೀಜಾ
    – ಹೊಸೂರು ಮೂಲದ ಟವೇರಾಗೆ ಬ್ರೀಜಾ ಡಿಕ್ಕಿ

    ತುಮಕೂರು: ಬೆಳ್ಳಂಬೆಳಗ್ಗೆ ನಡೆದ ಭೀಕರ ರಸ್ತೆ ಅಪಘಾತಕ್ಕೆ 12 ಮಂದಿ ಸಾವನ್ನಪ್ಪಿದ ದಾರುಣ ಘಟನೆ ಕುಣಿಗಲ್ ತಾಲೂಕಿನ ಬ್ಯಾಲದಕೆರೆ ಬಳಿ ನಡೆದಿದೆ.

    ಬೆಳಗ್ಗೆ ನಾಲ್ಕು ಗಂಟೆಯ ವೇಳೆಗೆ ಬೆಂಗಳೂರು ಮೂಲದ ಮೂರು ಮಂದಿ ಯುವಕರಿದ್ದ ಬ್ರಿಜಾ ಕಾರು ನಿಯಂತ್ರಣ ತಪ್ಪಿ ರಸ್ತೆ ಡಿವೈಡರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ನಂತರ ಈ ಕಾರು ಡಿವೈಡರ್ ದಾಟಿ ಮುಂದುಗಡೆ ಬರುತ್ತಿದ್ದ ಟವೇರಾಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬ್ರಿಜಾ ಕಾರಿನಲ್ಲಿದ್ದ 3 ಮಂದಿ ಮೃತಪಟ್ಟರೆ ಟವೇರಾದಲ್ಲಿದ್ದ 9 ಮಂದಿ ಮೃತಪಟ್ಟಿದ್ದಾರೆ.

    ಟವೇರಾದಲ್ಲಿದ್ದ ಮಂಜುನಾಥ್ (35), ತನುಜ (25), ಒಂದು ವರ್ಷದ ಹೆಣ್ಣು ಮಗು, ಗೌರಮ್ಮ (60), ರತ್ನಮ್ಮ (52), ಸುಂದರರಾಜ್ (48), ರಾಜೇಂದ್ರ (27), ಸರಳ (32), ಪ್ರಶನ್ಯಾ (14) ಮೃತಪಟ್ಟರೆ, ಕಾರಿನಲ್ಲಿದ್ದ ಲಕ್ಷ್ಮಿ ಕಾಂತ್ (24), ಸಂದೀಪ (36), ಮಧು (28) ಮೃತಪಟ್ಟಿದ್ದಾರೆ.

    ನಿದ್ದೆಯ ಮಂಪರಿನಲ್ಲಿ ಬ್ರೀಜಾವನ್ನು ಚಾಲಕ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಶ್ವೇತಾ, ಹರ್ಷಿತಾ, ಮಾಲಾಶ್ರೀ, ಗಂಗೋತ್ರಿ ಗಂಭೀರವಾಗಿ ಗಾಯಗೊಂಡಿದ್ದು ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಡಿಕ್ಕಿ ಹೊಡೆದ ರಭಸಕ್ಕೆ ಬ್ರೀಜಾ ಕಾರು ಮುಂದುಗಡೆ ಅಪ್ಪಚ್ಚಿ ಆಗಿ ಹೋಗಿದೆ. ಕಾರಿನಲ್ಲಿದ್ದವರ ತಲೆಯಿಂದ ಚಿಪ್ಪು ಹೊರ ಬಂದಿದೆ.

    ಗಂಭೀರವಾಗಿ ಗಾಯಗೊಂಡ 4 ಮಂದಿಯನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮೂರು ಮಂದಿ ಯುವಕರಿದ್ದ ಕಾರು ಧರ್ಮಸ್ಥಳದಿಂದ ಮರಳುತ್ತಿದ್ದರೆ, ತಮಿಳುನಾಡಿನ ಹೊಸೂರು ಮೂಲದ ವ್ಯಕ್ತಿಗಳು ಟವೇರಾದಲ್ಲಿ ಧರ್ಮಸ್ಥಳಕ್ಕೆ ತೆರಳುತ್ತಿದ್ದರು.

  • ಜಲ್ಲಿ ತುಂಬಿದ ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿ- ಕಾರಿನಲ್ಲಿದ್ದ ಐವರು ಸಾವು

    ಜಲ್ಲಿ ತುಂಬಿದ ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿ- ಕಾರಿನಲ್ಲಿದ್ದ ಐವರು ಸಾವು

    – ನಿಂತಿದ್ದ ಲಾರಿಗೆ ಗುದ್ದಿದ ಮತ್ತೊಂದು ಲಾರಿ
    – ಸ್ಥಳದಲ್ಲೇ ಎರಡೂ ಲಾರಿ ಚಾಲಕರು ಸಾವು
    – ಬೈಕ್ ಡಿಕ್ಕಿಗೆ ಮಾರುದ್ದ ಹಾರಿ ಬಿದ್ದ ಮಹಿಳೆ

    ತುಮಕೂರು: ಜಲ್ಲಿ ತುಂಬಿದ ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಕುಣಿಗಲ್ ತಾಲೂಕಿನ ಹೊಸಳ್ಳಿ ಬಳಿ ನಡೆದಿದೆ.

    ಅಮೃತರೂ ಹೋಬಳಿಯ ದೊಡ್ಡಕಲ್ಲಳ್ಳಿ ಗ್ರಾಮದ ಕಿರಣ್ (24), ರಾಜಣ್ಣ (50), ಮೋಹನ್ (22), ರಂಗಸ್ವಾಮಿ (58) ಹಾಗೂ ಮಧು (24) ಮೃತರು. ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಬಂಧಿಯೊಬ್ಬರನ್ನು ಭೇಟಿಯಾಗಿ ಮರಳುತ್ತಿದ್ದಾಗ ಘಟನೆ ನಡೆದಿದೆ.

    ರಾಜಣ್ಣ, ರಂಗಸ್ವಾಮಿ ಸೇರಿದಂತೆ ಐವರು ನೆಲಮಂಗಲ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಬಂಧಿಯನ್ನು ಭೇಟಿಯಾಗಲು ಸ್ವಿಫ್ಟ್ ಕಾರಿನಲ್ಲಿ ಬೆಳಗ್ಗೆ ಹೋಗಿದ್ದರು. ಅಲ್ಲಿಂದ ವಾಪಸ್ ಆಗುವಾಗ ಗ್ರಾಮದ ಸಮೀಪದಲ್ಲಿ ಚಾಲಕನ ನಿಯಂತ್ರಣದ ತಪ್ಪಿದ ಕಾರು ಟ್ರ್ಯಾಕ್ಟರ್‌ಗೆ ಟಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ. ರಂಗಸ್ವಾಮಿ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೂಡ ಸಾವನ್ನಪ್ಪಿದ್ದಾರೆ.

    ಲಾರಿ ಅಪಘಾತ:
    ನಿಂತಿದ್ದ ಲಾರಿಗೆ ಹಿಂಬದಿಯಿಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರು ಮೃತಪಟ್ಟ ಘಟನೆ ಶಿರಾ ತಾಲೂಕಿನ ದೊಡ್ಡ ಆಲದ ಮರದ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಚಲಿಸುತ್ತಿದ್ದ ಲಾರಿ ಕೆಟ್ಟು ದೊಡ್ಡ ಆಲದ ಮರದ ಬಳಿ ನಿಂತಿತ್ತು. ಇದನ್ನು ಗಮನಿಸದ ಮತ್ತೊಂದು ಲಾರಿ ಚಾಲಕ ವೇಗವಾಗಿ ಬಂದು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಎರಡೂ ಲಾರಿಗಳ ಚಾಲಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿನ ಪ್ರಕರಣ ದಾಖಲಾಗಿದೆ.

    ಬೈಕ್ ಡಿಕ್ಕಿ:
    ತುಮಕೂರು ನಗರದ ಎಸ್.ಐ.ಟಿ ಮುಖ್ಯರಸ್ತೆಯಲ್ಲಿ ಭೀಕರ ಅಪಘಾತವೊಂದು ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಘಟನೆಯಲ್ಲಿ ಗಾಯಗೊಂಡ ಮಹಿಳೆ ಲಕ್ಷ್ಮಮ್ಮ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಲಕ್ಷ್ಮಮ್ಮ ಇಂದು ತುಮಕೂರು ನಗರದ ಎಸ್.ಐ.ಟಿ ಮುಖ್ಯರಸ್ತೆಯನ್ನು ದಾಟುತ್ತಿದ್ದರು. ಈ ವೇಳೆ ವೇಗವಾಗಿ ಬೈಕ್‍ನಲ್ಲಿ ಬಂದ ಕಾಲೇಜು ಹುಡುಗರು ಲಕ್ಷ್ಮಮ್ಮ ಅವರಿಗೆ ಡಿಕ್ಕಿ ಹೊಡೆದಿದ್ದಾರೆ. ಬೈಕ್ ಗುದ್ದಿದ ರಭಸಕ್ಕೆ ಲಕ್ಷ್ಮಮ್ಮ ಮಾರುದ್ದ ಹಾರಿ ಬಿದ್ದಿದ್ದಾರೆ. ಅದೃಷ್ಟವಶಾತ್ ಮಹಿಳೆ ಹಾಗೂ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದೃಶ್ಯವು ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

  • ತಮ್ಮ ಸ್ವಂತ ಖರ್ಚಿನಲ್ಲಿ ಪಾರ್ಕ್ ನಿರ್ಮಿಸಿದ ಪೊಲೀಸರು

    ತಮ್ಮ ಸ್ವಂತ ಖರ್ಚಿನಲ್ಲಿ ಪಾರ್ಕ್ ನಿರ್ಮಿಸಿದ ಪೊಲೀಸರು

    – ಬಿಡುವಿನ ಸಮಯದಲ್ಲಿ ಪಾಕ್ ನಿರ್ಮಾಣಕ್ಕೆ ಶ್ರಮದಾನ

    ತುಮಕೂರು: ಪೊಲೀಸ್ ಎಂದರೆ ಕೇವಲ ಬಂದೋಬಸ್ತ್, ಕೊಲೆ, ದರೋಡೆ ಪ್ರಕರಣಗಳ ತನಿಖೆ ಈ ರೀತಿಯ ಕೆಲಸದಲ್ಲೇ ಜೀವನ ಕಳೆದು ಹೋಗುತ್ತೆ. ಆದರೆ ಈ ಎಲ್ಲಾ ಒತ್ತಡಗಳ ನಡುವೆ ತುಮಕೂರು ಜಿಲ್ಲೆಯ ಪೊಲೀಸರು ಸ್ವಲ್ಪ ಡಿಫರೆಂಟಾಗಿದ್ದಾರೆ. ಇಲ್ಲಿನ ಕುಣಿಗಲ್ ತಾಲೂಕಿನ ಅಮೃತ್ತೂರು ಠಾಣಾ ಆವರಣದಲ್ಲಿ ಸುಂದರವಾದ ಉದ್ಯಾನವನ ನಿರ್ಮಿಸಿ ಇತರರಿಗೆ ಮಾದರಿಯಾಗಿದ್ದಾರೆ.

    ಹೌದು, ಅಮೃತೂರು ಪೊಲೀಸ್ ಠಾಣೆಗೆ ಭೇಟಿ ಕೊಟ್ಟರೆ ಸೀಜಾದ ಬೈಕ್‍ಗಳು, ಅಪಘಾತವಾದ ಕಾರುಗಳ ಬದಲಾಗಿ ಹಚ್ಚ ಹಸಿರಿನ ವಾತಾವರಣ ನಮ್ಮ ಕಣ್ಣಮುಂದೆ ನಿಲ್ಲುತ್ತದೆ. ತಂಪು ತಂಗಾಳಿ ನಮ್ಮ ಮನ ಮುದಗೊಳಿಸುತ್ತದೆ. ಇಲ್ಲಿನ ಪೊಲೀಸರು ಸ್ವತಃ ತಾವೇ ಶ್ರಮದಾನದ ಮೂಲಕ ಮುದ್ದಾದ ಉದ್ಯಾನವನ ನಿರ್ಮಿಸಿಕೊಂಡು ತಮ್ಮ ಪರಿಸರ ಪ್ರೇಮ ತೋರಿದ್ದಾರೆ.

    ಪ್ರಸ್ತುತ ಕ್ಯಾತಸಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪಿಎಸ್‍ಐ ರಾಜು ಈ ಪಾರ್ಕ್ ನಿರ್ಮಾಣಕ್ಕೆ ಕಾರಣಿಕರ್ತರು. ರಾಜು ಅಮೃತ್ತೂರಲ್ಲಿ ಕಾರ್ಯನಿರ್ವಹಿಸುತಿದ್ದ ಸಂದರ್ಭದಲ್ಲಿ ಅವರ ಆಸಕ್ತಿ ಹಾಗೂ ಸಹೋದ್ಯೋಗಿಗಳ ಸಹಕಾರದಿಂದ ಸುಂದವಾದ ಪಾರ್ಕ್ ಕಂಗೊಳಿಸುತಿದೆ. ಈ ಠಾಣೆಯ ಅಧಿಕಾರಿಗಳು ಎಷ್ಟೇ ಒತ್ತಡ ಇದ್ದರೂ ತಮ್ಮ ಕರ್ತವ್ಯದ ನಡುವೆ ಶ್ರಮದಾನದ ಮೂಲಕ ಅತ್ಯಂತ ಸುಂದರವಾದ ಪಾರ್ಕ ಕಟ್ಟಿಕೊಂಡಿದ್ದಾರೆ. ಬಿಡುವಿನ ವೇಳೆ ಬಂದು ಶ್ರದ್ಧೆಯಿಂದ ಶ್ರಮದಾನ ಮಾಡಿ ತಮ್ಮ ಠಾಣೆಯ ಆವರಣ ಹಚ್ಚ ಹಸಿರಿನಂತೆ ಕಂಗೊಳಿಸುವಂತೆ ಮಾಡಿಕೊಂಡಿದ್ದಾರೆ.

    ಸುಮಾರು ಅರ್ಧ ಎಕರೆ ಭೂ ಪ್ರದೇಶದಲ್ಲಿ ಈ ಪಾರ್ಕ್ ನಿರ್ಮಾಣವಾಗಿದ್ದು, ಮಧ್ಯ ಕಲ್ಲಿನ ಮಂಟಪ, ವಿವಿಧ ಹೂವಿನ ಗಿಡಗಳು, ಅಲಂಕಾರಿಕ ಬಳ್ಳಿ, ನೆಲದ ಮೇಲೆ ಹುಲ್ಲಿನ ಹಾಸು, ಹಣ್ಣಿನ ಗಿಡಗಳು ಹೀಗೆ ಸ್ವಚ್ಚ ಸುಂದರವಾಗಿ ಉದ್ಯಾನವನ ಮೂಡಿಬಂದಿದೆ. ಸುತ್ತಲು ವಾಕಿಂಗ್ ಪಾಥ್ ನಿರ್ಮಾಣ ಮಾಡಲಾಗಿದೆ. ಅಮೃತೂರಿನ ಕೆಲ ಸಾರ್ವಜನಿಕರೂ ಕೂಡಾ ಈ ಪಾರ್ಕ್‍ಲ್ಲಿ ಬಂದು ಸುತ್ತಾಡಿ ವಿಶ್ರಾಂತಿ ಪಡೆಯುತ್ತಾರೆ. ಹಾಗೇಯೇ ಪೊಲೀಸರು ಕೂಡಾ ಹಚ್ಚಹಸಿರಿನಿಂದ ಕಂಗೊಳಿಸುವ ಈ ಪಾರ್ಕ್ ನಲ್ಲಿ ಕುಳಿತು ತಮ್ಮ ಒತ್ತಡ ಕಡಿಮೆ ಮಾಡಿಕೊಳ್ಳುತ್ತಾರೆ.

    ಈ ಪಾರ್ಕ್ ನಿರ್ಮಾಣಕ್ಕೆ ಬೇಕಾದ ಕೆಲ ಸಾಮಗ್ರಿಗಳನ್ನು ದಾನಿಗಳು ನೀಡಿದ್ದಾರೆ. ಇನ್ನೂ ಕೆಲವನ್ನು ಪೊಲೀಸರೇ ಸ್ವತಃ ತಮ್ಮ ಹಣ ವಿನಿಯೋಗಿಸಿ ಹಸಿರು ಕ್ರಾಂತಿ ಮಾಡಿದ್ದಾರೆ. ಪಿಎಸ್‍ಐ ರಾಜು ಕೇವಲ ಅಮೃತ್ತೂರು ಠಾಣೆ ಅಷ್ಟೆ ಅಲ್ಲಾ ಕೆ.ಬಿ ಕ್ರಾಸ್ ಠಾಣೆ ಎದುರಲ್ಲೂ ಉದ್ಯಾನವನ ನಿರ್ಮಿಸಿದ್ದಾರೆ. ಪ್ರತಿ ಭಾನುವಾರ ಪರೇಡ್ ಮುಗಿದ ಬಳಿಕ ಪಾರ್ಕ್ ನಿರ್ವಹಣೆ ಕೆಲಸ ಮಾಡಲಾಗುತ್ತಿದ್ದು, ಕಳೆ ಕೀಳುವುದು, ಎಲೆಗಳನ್ನು ಕಟ್ ಮಾಡಿ ಸುಂದರಗೊಳಿಸುತ್ತಾರೆ. ಒಟ್ಟಾರೆ ಖಾಕಿಗಳ ಕೈಚಳಕದಲ್ಲಿ ಕಂಗೊಳಿಸುತ್ತಿದ್ದ ಉದ್ಯಾನವನ ಎಲ್ಲರ ಆಕರ್ಷಣಿಯ ಸ್ಥಳವಾಗಿದೆ.

    ಪಿಎಸ್‍ಐ ರಾಜು ಅವರ ಈ ಹಸಿರು ಪ್ರೀತಿ ಎಲ್ಲರಿಗೂ ಮಾದರಿಯಾಗಿದೆ.

  • 7ರ ಅಂಗವಿಕಲ ಮಗನನ್ನು ಸೊಂಟದಲ್ಲಿಟ್ಟುಕೊಂಡು ಅರ್ಧ ಗಂಟೆ ನಿಂತ್ರೂ ಕ್ಯಾರೆ ಎಂದಿಲ್ಲ ಸಿಬ್ಬಂದಿ!

    7ರ ಅಂಗವಿಕಲ ಮಗನನ್ನು ಸೊಂಟದಲ್ಲಿಟ್ಟುಕೊಂಡು ಅರ್ಧ ಗಂಟೆ ನಿಂತ್ರೂ ಕ್ಯಾರೆ ಎಂದಿಲ್ಲ ಸಿಬ್ಬಂದಿ!

    ತುಮಕೂರು: ತಾಯಿಯೋರ್ವಳು ತನ್ನ ವಿಕಲಚೇತನ ಮಗುವಿನ ವೇತನಕ್ಕಾಗಿ ಮಗನನ್ನು ಕಚೇರಿ ಕೌಂಟರ್ ಕೆಳಗಡೆ ಮಲಗಿಸಿ ಪರಿಪರಿಯಾಗಿ ಕೇಳಿಕೊಂಡ್ರೂ ಅಲ್ಲಿಯ ಸಿಬ್ಬಂದಿಗಳು ಕ್ಯಾರೆ ಎನ್ನದ ಅಮಾನವೀಯ ಘಟನೆಯೊಂದು ಜಿಲ್ಲೆಯ ಕುಣಿಗಲ್ ತಾಲೂಕು ಕಚೇರಿಯಲ್ಲಿ ನಡೆದಿದೆ.

    ಪಾವಸಂದ್ರ ಗ್ರಾಮದ ಮಹಿಳೆ ಕುಮಾರಿ ತನ್ನ 7 ವರ್ಷದ ಮಗ ಹರೀಶನಿಗೆ ಅಂಗವಿಕಲ ವೇತನಕ್ಕಾಗಿ ಅರ್ಜಿ ಹಾಕಲು ಬಂದಿದ್ದರು. ಮಗುವನ್ನು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸೊಂಟದ ಮೇಲೆ ಎತ್ತಿಕೊಂಡು ಸಿಬ್ಬಂದಿಗಳ ಬಳಿ ಮಾಹಿತಿ ಕೇಳಿದ್ದಾರೆ. ಆದರೂ ಯಾರೂ ಈ ಬಡ ಮಹಿಳೆ ಮಾತು ಕೇಳಿಲ್ಲ. ಸೊಂಟ ಸೋತು ಬಂದಾಗ ಕಚೇರಿ ಕೌಂಟರ್ ಕೆಳಗೆ ಮಗುವನ್ನು ಮಲಗಿಸಿ ಪರಿಪರಿಯಾಗಿ ಕೇಳಿಕೊಂಡರೂ ಆಗಲೂ ಅರೆಬರೆ ಮಾಹಿತಿ ನೀಡಿದ್ದಾರೆ.

    ಇದನ್ನು ಗಮನಿಸಿದ ಕರ್ನಾಟ ರಕ್ಷಣಾ ವೇದಿಕೆ ಕಾರ್ಯಕರ್ತರ ಮಂಜುನಾಥ್ ಮಹಿಳೆ ಸಹಾಯಕ್ಕೆ ಧಾವಿಸಿದ್ದಾರೆ. ತಾಲೂಕು ಕಚೇರಿ ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡು ಅಂಗವಿಕಲ ವೇತನದ ಅರ್ಜಿ ಹಾಕಲು ಸಹಾಯ ಮಾಡಿದ್ದಾರೆ. ಈ ನಡುವೆ ಒಂದೂವರೆ ವರ್ಷದ ಹಿಂದೆಯೇ ಮಧ್ಯವರ್ತಿ ಕೆಂಪಣ್ಣ ಎನ್ನುವ ವ್ಯಕ್ತಿ ಅಂಗವಿಕಲ ವೇತನ ಕೊಡಿಸುವುದಾಗಿ ಹೇಳಿ 1300 ರೂ ವಸೂಲಿ ಮಾಡಿದ್ದಾನಂತೆ. ಆತನಿಂದ ಕೆಲಸ ಆಗದೇ ಇದ್ದಾಗ ವಿಕಲಚೇತನ ಮಗುವನ್ನೇ ಎತ್ತಿಕೊಂಡು ತಾಲೂಕು ಕಚೇರಿಗೆ ಬಂದಿದ್ದು ಕರುಳು ಚುರ್ ಎನಿಸುತ್ತಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ವಿದೇಶ ಪ್ರವಾಸದಲ್ಲಿ ಕೈ ಶಾಸಕ-ಪತಿಯ ಅನುಪಸ್ಥಿತಿಯಲ್ಲಿ ಪತ್ನಿಯಿಂದ ಅಧಿಕಾರ ಚಲಾವಣೆ

    ವಿದೇಶ ಪ್ರವಾಸದಲ್ಲಿ ಕೈ ಶಾಸಕ-ಪತಿಯ ಅನುಪಸ್ಥಿತಿಯಲ್ಲಿ ಪತ್ನಿಯಿಂದ ಅಧಿಕಾರ ಚಲಾವಣೆ

    ತುಮಕೂರು: ಶಾಸಕರು ವಿದೇಶ ಪ್ರಯಾಣಕ್ಕೆ ಹೋದಾಗ ಶಾಸಕರ ಪತ್ನಿಯೇ ಕ್ಷೇತ್ರದಲ್ಲಿ ನಾನೇನು ಕಡಿಮೆ ಇಲ್ಲಾ ಅಂತಾ ಆಡಳಿತ ನಡೆಸುತ್ತಿದ್ದಾರೆ.

    ಜಿಲ್ಲೆಯ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ವಿದೇಶ ಪ್ರವಾಸದಲ್ಲಿದ್ದಾರೆ. ಈ ಸಮಯದಲ್ಲಿ ಶಾಸಕರ ಪತ್ನಿ ಸುಮಾ ಕ್ಷೇತ್ರ ಪ್ರವಾಸದಲ್ಲಿ ತೊಡಗಿದ್ದಾರೆ. ಪತಿಯ ಅನುಪಸ್ಥಿತಿಯಲ್ಲಿ ಸುಮಾ ರಂಗನಾಥ್ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ. ಆಸ್ಪತ್ರೆಯಲ್ಲಿನ ಕುಂದು ಕೊರತೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.

    ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ್ ಬಾಬು ಹಾಗೂ ಹಿರಿಯ ಔಷದ ವಿತರಕ ಸಣ್ಣೀರಪ್ಪ ಶಾಸಕರ ಪತ್ನಿಗೆ ಸಾಥ್ ನೀಡಿದ್ದರು. ಹೀಗೆ ದಿಢೀರ್ ಭೇಟಿ ನೀಡಿದ ಶಾಸಕರ ಪತ್ನಿಗೆ ಅಧಿಕಾರಿಗಳು ಎಲ್ಲ ಮಾಹಿತಿಯನ್ನು ನೀಡಿದ್ದಾರೆ.

    ಈ ಸಂದರ್ಭದಲ್ಲಿ ಸುಮಾ ರಂಗನಾಥ್ ಚುನಾವಣೆ ಸಂದರ್ಭದಲ್ಲಿ ನನ್ನ ಪತಿಯ ಪರವಾಗಿ ನಾನೂ ಮತ ಯಾಚಿಸಿದ್ದೇನೆ. ಹಾಗಾಗಿ ಜನ ನಮ್ಮನ್ನು ಗೆಲ್ಲಿಸಿದ್ದಾರೆ. ಈಗ ಜನರ ಸನಸ್ಯೆ ಆಲಿಸಿ ಅವರ ಋಣ ತೀರಿಸಲು ಬಂದಿದ್ದೇನೆ ಎಂದರು.

    ಸುಮಾ ರಂಗನಾಥ್ ರವರು ಪತಿಯ ಅಧಿಕಾರವನ್ನು ಚಲಾಯಿಸಿದ್ದಕ್ಕೆ ಸಾರ್ವಜನಿಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

  • ಡಿಕೆಶಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಕುಣಿಗಲ್ ಶಾಸಕ

    ಡಿಕೆಶಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಕುಣಿಗಲ್ ಶಾಸಕ

    ಬೆಂಗಳೂರು: ಶಾಸಕರೊಬ್ಬರು ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದು ಶನಿವಾರ ವಿಧಾನಸಭೆಯಲ್ಲಿ ನಡೆದಿದೆ.

    ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರು ಡಿ.ಕೆ.ಶಿವಕುಮಾರ್ ಅವರ ನಾದಿನಿಯ ಪತಿ. ಕಾಂಗ್ರೆಸ್‍ನಿಂದ ಟಿಕೆಟ್ ಕೊಡಿಸಿದ್ದಲ್ಲದೇ, ಅವರ ಗೆಲುವಿಗೆ ಶಿವಕುಮಾರ್ ಶ್ರಮಿಸಿದ್ದರು. ಹೀಗಾಗಿ ಅವರು ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

    ಕುಣಿಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಡಾ.ಎಚ್.ಡಿ.ರಂಗನಾಥ್ ಅವರು, ಒಟ್ಟು 58,697 ಮತ ಪಡೆದು ಜಯಸಾಧಿಸಿದ್ದರು. ಬಿಜೆಪಿಯ ಡಾ.ಕೃಷ್ಣಕುಮಾರ ಅವರು 53,097 ಮತ ಪಡೆದು 5,600 ಮತಗಳ ಅಂತರದಲ್ಲಿ ಸೋತಿದ್ದರು.

  • ಹೆಲ್ಮೆಟ್ ಹಾಕಿದ್ರೆ ತಲೆ ಉಳಿಯುತ್ತೆ, ಮತ ಹಾಕಿದ್ರೆ ದೇಶ ಉಳಿಯುತ್ತೆ- ಸಿದ್ದಗಂಗಾ ಕಿರಿಯ ಶ್ರೀಗಳಿಂದ ಮತದಾನದ ಜಾಗೃತಿ

    ಹೆಲ್ಮೆಟ್ ಹಾಕಿದ್ರೆ ತಲೆ ಉಳಿಯುತ್ತೆ, ಮತ ಹಾಕಿದ್ರೆ ದೇಶ ಉಳಿಯುತ್ತೆ- ಸಿದ್ದಗಂಗಾ ಕಿರಿಯ ಶ್ರೀಗಳಿಂದ ಮತದಾನದ ಜಾಗೃತಿ

    ತುಮಕೂರು: ಮತದಾನ ನಮ್ಮ ಸಂವಿಧಾನ ನಮಗೆ ಕೊಟ್ಟಿರುವ ಹಕ್ಕು. ಅದನ್ನು ಯಾವುದೇ ಕಾರಣದಿಂದ ಕಳೆದುಕೊಳ್ಳಬಾರದು. ಮತದ ಪಾವಿತ್ರತೆಯನ್ನು ಕಾಪಾಡಿಕೊಳ್ಳಿ ಎಂದು ಸಿದ್ದಗಂಗಾ ಕಿರಿಯ ಶ್ರೀಗಳು ಸಾರ್ವಜನಿಕರಲ್ಲಿ ಮನವಿ ಮಾಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

    ಕುಣಿಗಲ್ ನ ಕೆಂಪನಹಳ್ಳಿಯಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ. ದಯವಿಟ್ಟು ಯಾರೂ ಮನೆಯಲ್ಲಿ ಕೂರದೇ ಕಡ್ಡಾಯವಾಗಿ ಮತಗಟ್ಟೆಗೆ ಹೋಗಿ ತಮಗೆ ಇಚ್ಛೆ ಬಂದ ಅಭ್ಯರ್ಥಿಗೆ ಮತದಾನ ಮಾಡಿ. ಉತ್ತಮ ನಾಯಕನನ್ನು ಆಯ್ಕೆ ಮಾಡುವುದು ಪ್ರಜೆಗಳಾಗಿ ನಮ್ಮ ಮೇಲೆ ಇರುವ ಜವಾಬ್ದಾರಿ ಎಂದು ಭಕ್ತರಲ್ಲಿ ವಿನಂತಿ ಮಾಡಿಕೊಂಡರು.

    ಹೆಲ್ಮೆಟ್ ಹಾಕಿದರೆ ತಲೆ ಉಳಿಯುತ್ತೆ ಮತ ಹಾಕಿದರೆ ದೇಶ ಉಳಿಯುತ್ತೆ ಎಂದು ಹೇಳುತ್ತಾರೆ. ಉತ್ತಮ ನಾಯಕನನ್ನು ಆಯ್ಕೆ ಮಾಡುವುದು ಪ್ರಜೆಗಳಾದ ನಮ್ಮ ಮೇಲೆ ಇರುವ ಜವಾಬ್ದಾರಿ. ಮತದಾನ ಮಾಡುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿ ಎಂದು ಹೇಳಿದರು.

    ತಾನೂ ಪ್ರತೀ ನಿತ್ಯ ಬಾಗಿಯಾಗುವ ಎಲ್ಲಾ ವೇದಿಕೆಯಲ್ಲಿ ಸಿದ್ದಲಿಂಗಸ್ವಾಮಿಗಳು ಮತದಾನದ ಮಹತ್ವದ ಕುರಿತು ಅರಿವು ಮೂಡಿಸುತಿದ್ದಾರೆ.

  • ಪೌಲ್ಟ್ರಿಗಳಲ್ಲಿ ಕೋಳಿಗಳನ್ನ ದಪ್ಪವಾಗಿಸೋಕೆ ಮದ್ಯ ಕುಡಿಸ್ತಾರಾ?

    ಪೌಲ್ಟ್ರಿಗಳಲ್ಲಿ ಕೋಳಿಗಳನ್ನ ದಪ್ಪವಾಗಿಸೋಕೆ ಮದ್ಯ ಕುಡಿಸ್ತಾರಾ?

    ಬೆಂಗಳೂರು: ಚಿಕನ್ ಪ್ರಿಯರಿಗೆ ಶಾಕ್ ನೀಡುವಂತಹ ಸುದ್ದಿಯೊಂದು ಹರಿದಾಡ್ತಿದೆ. ಈ ಬಗ್ಗೆ ಯಾವುದೇ ಅಧ್ಯಯನ ನಡೆದಿಲ್ಲ ಅಥವಾ ಪಶುಸಂಗೋಪನಾ ಇಲಾಖೆಗೆ ಇಂತಹ ಯಾವುದೇ ಪ್ರಕರಣ ಬಂದಿಲ್ಲ. ಆದ್ರೂ ಪೌಲ್ಟ್ರಿ ಫಾರ್ಮ್‍ಗಳಲ್ಲಿ ಕೋಳಿಗಳನ್ನ ದಪ್ಪ ಮಾಡೋಕೆ ಮದ್ಯಪಾನ ನೀಡ್ತಾರೆ ಅಂತ ಕುಣಿಗಲ್ ತಾಲೂಕಿನಲ್ಲಿ ಸುದ್ದಿ ಹರಿದಾಡ್ತಿದೆ.

    ಮೂಲಗಳ ಮಾಹಿತಿಯ ಪ್ರಕಾರ ಕುಣಿಗಲ್‍ನಲ್ಲಿ ಸುಮಾರು 50 ರಿಂದ 60 ಕೋಳಿ ಫಾರ್ಮ್‍ಗಳಿದ್ದು, ಇವುಗಳಲ್ಲಿ ಕೆಲವು ಫಾರ್ಮ್‍ಗಳು ಕಡಿಮೆ ಬೆಲೆಯ ಮದ್ಯವನ್ನ ಕೋಳಿಗಳ ಮೇವಿನಲ್ಲಿ ಬೆರೆಸಿ ಕೊಡ್ತಿದ್ದಾರೆ ಎನ್ನಲಾಗಿದೆ. ಮದ್ಯದ ಅಮಲಿನಲ್ಲಿ ಕೋಳಿಗಳು ಹೆಚ್ಚಿನ ಮೇವು ಹಾಗೂ ನೀರು ಸೇವಿಸುತ್ತವೆ. ಹೀಗಾಗಿ ಅವುಗಳ ತೂಕ ಹೆಚ್ಚಾಗಿ ಮಾಲೀಕನಿಗೆ ಲಾಭ ಸಿಗುತ್ತದೆ ಎಂದು ಹೇಳಲಾಗಿದೆ.

    ಆದ್ರೆ ಕುಣಿಗಲ್‍ನ ಪ್ರಭಾರಿ ಸಹಾಯಕ ನಿರ್ದೇಶಕರಾದ ಡಾ. ನವೀನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇಂತಹ ಯಾವುದೇ ದೂರುಗಳು ಬಂದಿಲ್ಲ. ಆದ್ರೆ ಕಡಿಮೆ ಬೆಲೆಯ ಮದ್ಯವನ್ನ ಪೌಲ್ಟ್ರಿಗಳಲ್ಲಿ ನೀಡಲಾಗ್ತಿದೆ ಅಂತ ಜನ ಹೇಳ್ತಿದ್ದಾರೆ. ಆದ್ರೆ ನಿರ್ದಿಷ್ಟವಾದ ಪ್ರಕರಣಗಳಿಲ್ಲ. ಅಲ್ಲದೆ ಮದ್ಯದ ಅಮಲಿನಲ್ಲಿ ಕೋಳಿಗಳು ಹೆಚ್ಚು ಮೇವು ಸೇವಿಸುತ್ತವೆ ಎಂಬ ಬಗ್ಗೆ ಯಾವುದೇ ಅಧ್ಯಯನ ನಡೆದಿಲ್ಲ ಎಂದಿದ್ದಾರೆ.

    ದೇಹದೊಳಗೆ ಮದ್ಯ ಹೋದ ನಂತರ ನಿರ್ಜಲೀಕರಣವಾಗುತ್ತದೆ. ಇದರಿಂದ ಕೋಳಿ ಹೆಚ್ಚು ನೀರು ಕುಡಿಯಬಹುದು ಮತ್ತು ಆಹಾರ ಸೇವಿಸಬಹುದು ಎಂದು ಊಹಿಸಬಹುದು. ಆದ್ರೆ ಕೇವಲ ಊಹೆ ಮೇಲೆ ಕೋಳಿಗಳ ತೂಕ ಹೆಚ್ಚಾಗುತ್ತದೆ ಎಂಬ ನಿರ್ಧಾರಕ್ಕೆ ಬಂದು ಮಾಲೀಕರು ಲಾಭ ಮಾಡಿಕೊಳ್ತಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಇವೆಲ್ಲಾ ಅವೈಜ್ಞಾನಿಕ ವರದಿ ಎಂದಿದ್ದಾರೆ.