Tag: ಕಿರಿತ್ ಸೋಮಯ್ಯ

  • INS ವಿಕ್ರಾಂತ್ ಕೇಸ್ – ಬಿಜೆಪಿ ಮುಖಂಡ ಕಿರಿತ್ ಸೋಮಯ್ಯಗೆ ಮಧ್ಯಂತರ ಜಾಮೀನು

    INS ವಿಕ್ರಾಂತ್ ಕೇಸ್ – ಬಿಜೆಪಿ ಮುಖಂಡ ಕಿರಿತ್ ಸೋಮಯ್ಯಗೆ ಮಧ್ಯಂತರ ಜಾಮೀನು

    ಮುಂಬೈ: ಐಎನ್‌ಎಸ್ ವಿಕ್ರಾಂತ್ ಹೆಸರಲ್ಲಿ ಸಂಗ್ರಹಿಸಿದ್ದ ದೇಣಿಗೆಯನ್ನು ದುರುಪಯೋಗ ಪಡಿಸಿಕೊಂಡ ಆರೋಪದ ಅಡಿಯಲ್ಲಿ ಬಿಜೆಪಿ ಮುಖಂಡ ಕಿರಿತ್ ಸೋಮಯ್ಯ ಅವರನ್ನು ಬಂಧಿಸದಂತೆ ಬಾಂಬೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

    ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನುಜಾ ಪ್ರಭುದೇಸಾಯಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ಒಂದು ವೇಳೆ ಸೋಮಯ್ಯ ಅವರನ್ನು ಬಂಧಿಸಿದಲ್ಲಿ, 50,000 ರೂ. ವೈಯಕ್ತಿಕ ಬಾಂಡ್ ಮೇಲೆ ಅವರನ್ನು ಬಿಡುಗಡೆ ಮಾಡಬೇಕು ಎಂದು ನ್ಯಾಯಮೂರ್ತಿ ಅನುಜಾ ಪ್ರಭುದೇಸಾಯಿ ಅವರ ಏಕಸದಸ್ಯ ಪೀಠ ಆದೇಶಿಸಿದೆ. ಇದನ್ನೂ ಓದಿ: ಐಎನ್‌ಎಸ್ ದೇಣಿಗೆ ವಂಚನೆ: ಬಿಜೆಪಿ ಮುಖಂಡ ಕಿರಿತ್ ಸೋಮಯ್ಯ, ಪುತ್ರನ ವಿರುದ್ಧ ಪ್ರಕರಣ ದಾಖಲು

    KIRIT SOMAYYA

    ಕಿರಿತ್ ಸೋಮಯ್ಯ ಅವರ ವಿರುದ್ಧ ಮಾಡಲಾದ ಆರೋಪಗಳು ಮಾಧ್ಯಮದ ವರದಿಗಳನ್ನು ಆಧರಿಸವೆ ಎಂದು ಎಫ್‌ಐಆರ್ ಸೂಚಿಸುತ್ತದೆ. 57 ಕೋಟಿ ರೂ. ದುರ್ಬಳಕೆ ಮಾಡಿಕೊಂಡಿರುವ ಆರೋಪ ಇದ್ದರೂ ದೂರುದಾರರು ಯಾವ ಆಧಾರದ ಮೇಲೆ ಅಂಕಿ ಅಂಶಗಳನ್ನು ಬರೆದಿದ್ದಾರೆ ಎಂಬುದಕ್ಕೆ ದಾಖಲೆಗಳಿಲ್ಲ. 2013ರಲ್ಲಿ ಹಣ ಸಂಗ್ರಹಿಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಈ ವರೆಗೆ ಯಾವುದೇ ದೂರು ದಾಖಲಾಗಿಲ್ಲ. 9 ವರ್ಷಗಳ ನಂತರ ದಾಖಲಾಗಿರುವ ಒಂದು ದೂರು ಸಹ ಅಸ್ಪಷ್ಟವಾಗಿದೆ. ಇದರಲ್ಲಿ ನಿಖರ ಆಧಾರವಿಲ್ಲ ಎಂದು ಏಕಸದಸ್ಯದ ಪೀಠ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಭಾರತಕ್ಕೆ ಕಾಲಿಟ್ಟ ಹೊಸ ರೂಪಾಂತರಿ ʼXEʼ – ಮುಂಬೈನಲ್ಲಿ ಮೊದಲ

    ಪ್ರಕರಣ ಕುರಿತ ತನಿಖೆಗೆ ಸಹಕರಿಸಬೇಕು. ಏ.18ರಿಂದ ನಾಲ್ಕು ದಿನಗಳ ಕಾಲ ತನಿಖಾಧಿಕಾರಿ ಮುಂದೆ ಹಾಜರಾಗಬೇಕು ಎಂದು ಸೋಮಯ್ಯ ಅವರಿಗೆ ನಿರ್ದೇಶನ ನೀಡಿದ ನ್ಯಾಯಮೂರ್ತಿಗಳು, ವಿಚಾರಣೆಯನ್ನು ಏ.28ಕ್ಕೆ ಮುಂದೂಡಿದ್ದಾರೆ. ತನಿಖೆಯ ಪ್ರಗತಿ ವರದಿಯನ್ನು ಸಲ್ಲಿಸುವಂತೆ ಟ್ರಾಂಬೆ ಪೊಲೀಸರಿಗೆ ನಿರ್ದೇಶನ ನೀಡಿದೆ.

    ರಾಜ್ಯಸರ್ಕಾರದ ಪರ ಹಿರಿಯ ವಕೀಲ ಶಿರೀಶ್ ಗುಪ್ತೆ ಅವರು ಸೋಮಯ್ಯ ಅವರು ಜಾಮೀನಿಗೆ ಸಲ್ಲಿಸಿದ ಅರ್ಜಿಯನ್ನು ವಿರೋಧಿಸಿದ್ದಾರೆ. ತಂದೆ-ಮಗ ಇಬ್ಬರೂ ನಗರದಲ್ಲಿ ಇತರರೊಂದಿಗೆ ಹಲವಾರು ಕ್ಯಾಂಪೇನ್‌ಗಳನ್ನು ನಡೆಸಿದ್ದರಿಂದ ನಿಖರವಾದ ಮೊತ್ತ ಪತ್ತೆಹಚ್ಚಲು ಅವರನ್ನು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ನಡೆಸುವುದು ಅವಶ್ಯವಾಗಿದೆ ಎಂದು ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಹಿಜಬ್, ಹಲಾಲ್‍ನಿಂದಾಗಿ ಬೆಲೆ ಏರಿಕೆಯ ಗಮನ ದೂರವಾಗಿದೆ: ಶಶಿ ತರೂರ್

    KIRITH

    ಹಿನ್ನೆಲೆ ಏನು?
    ಐಎನ್‌ಎಸ್ ವಿಕ್ರಾಂತ್ ಅನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸುವ ಸಲುವಾಗಿ ಕಿರೀಟ್ ಸೋಮೈಯ ಅವರು 57 ಕೋಟಿ ಸಂಗ್ರಹಿಸಿದ್ದರು. ಈ ಹಣವನ್ನು ಅವರು ದುರುಪಯೋಗಪಡಿಸಿಕೊಂಡಿದ್ದಾರೆ’ ಎಂದು ಸೇನೆಯ ಮಾಜಿ ಅಧಿಕಾರಿಯೊಬ್ಬರು ಟ್ರಾಂಬೆ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 6ರಂದು ದೂರು ದಾಖಲಿಸಿದ್ದರು. ಅಧಿಕಾರಿಯೊಬ್ಬರು ನೀಡಿದ ದೂರಿನ ಮೇರೆಗೆ ಸೋಮಯ್ಯ ಹಾಗೂ ಪುತ್ರನ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 406 (ನಂಬಿಕೆಗೆ ವಂಚಿಸಿ ಅಪರಾಧ), 420 (ಆಸ್ತಿ ವಿತರಣೆ ವಂಚನೆ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

  • ಐಎನ್‌ಎಸ್ ದೇಣಿಗೆ ವಂಚನೆ: ಬಿಜೆಪಿ ಮುಖಂಡ ಕಿರಿತ್ ಸೋಮಯ್ಯ, ಪುತ್ರನ ವಿರುದ್ಧ ಪ್ರಕರಣ ದಾಖಲು

    ಐಎನ್‌ಎಸ್ ದೇಣಿಗೆ ವಂಚನೆ: ಬಿಜೆಪಿ ಮುಖಂಡ ಕಿರಿತ್ ಸೋಮಯ್ಯ, ಪುತ್ರನ ವಿರುದ್ಧ ಪ್ರಕರಣ ದಾಖಲು

    ನವದೆಹಲಿ: ಐಎನ್‌ಎಸ್ ವಿಕ್ರಾಂತ್ ಉಳಿಸಲು ಕ್ರೌಡ್ ಫಂಡಿಂಗ್ ಅಭಿಯಾನಕ್ಕೆ ಸಂಬಂಧಿಸಿದಂತೆ ಶಿವಸೇನೆ ಹಾಗೂ ಬಿಜೆಪಿ ನಡುವೆ ಮಾತಿನ ಚಕಮಕಿ ನಡೆಯುತ್ತಿರುವ ಹೊತ್ತಿನಲ್ಲೇ ಐಎನ್‌ಎಸ್ ವಿಕ್ರಾಂತ್ ಹೆಸರಲ್ಲಿ ಸಂಗ್ರಹಿಸಿದ್ದ ದೇಣಿಗೆಯನ್ನು ದುರುಪಯೊಗ ಪಡಿಸಿಕೊಂಡ ಆರೋಪದ ಅಡಿಯಲ್ಲಿ ಬಿಜೆಪಿ ಮುಖಂಡ ಕಿರಿತ್ ಸೋಮಯ್ಯ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

    ಮಾಜಿ ಸೇನಾ ಸಿಬ್ಬಂದಿ ಬುಧವಾರ ಸಂಜೆ ಉಪನಗರ ಮನ್‌ಖುರ್ದ್ ನಲ್ಲಿರುವ ಟ್ರಾಂಬೆ ಪೊಲೀಸ್ ಠಾಣೆಯಲ್ಲಿ ೫೭ ಕೋಟಿ ರೂ.ಗೂ ಹೆಚ್ಚು ಹಣವನ್ನು ದುರುಪಯೋಗ ಮಾಡಿಕೊಂಡಿರುವುದಾಗಿ ಆರೋಪಿಸಿ, ನೀಡಿದ ದೂರಿನ ಆಧಾರದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 406 (ನಂಬಿಕೆಗೆ ವಂಚಿಸಿ ಅಪರಾಧ), 420 (ಆಸ್ತಿ ವಿತರಣೆ ವಂಚನೆ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಟ್ರಾಂಬೆ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: XE ರೂಪಾಂತರಿ ಮುಂಬೈನಲ್ಲಿ ಪತ್ತೆಯಾಗಿಲ್ಲ: ಮಹಾರಾಷ್ಟ್ರ ಸ್ಪಷ್ಟನೆ

    SANJAY RAwath

    1961 ರಲ್ಲಿ ಕಾರ್ಯಾರಂಭ ಮಾಡಿದ ಭಾರತೀಯ ನೌಕಾಪಡೆಯ ಮೆಜೆಸ್ಟಿಕ್-ಕ್ಲಾಸ್ ವಿಮಾನವಾಹಕ ನೌಕೆ ಎಎನ್‌ಎಸ್ ವಿಕ್ರಾಂತ್, 1971ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಪೂರ್ವ ಪಾಕಿಸ್ತಾನದ ನೌಕಾ ದಿಗ್ಬಂಧನವನ್ನು ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದನ್ನು 1997ರಲ್ಲಿ ರದ್ದುಗೊಳಿಸಲಾಯಿತು. ಜನವರಿ 2014ರಲ್ಲಿ, ಹಡಗನ್ನು ಆನ್‌ಲೈನ್ ಹರಾಜಿನ ಮೂಲಕ ಮಾರಾಟ ಮಾಡಲಾಯಿತು ಮತ್ತು ಅದೇ ವರ್ಷದ ನವೆಂಬರ್‌ನಲ್ಲಿ ರದ್ದುಗೊಳಿಸಲಾಯಿತು. ಆದ್ದರಿಂದ INS ವಿಕ್ರಾಂತ್ ಗೆ ನಿಧಿ ಸಂಗ್ರಹಿಸಲು ಕಿರಿತ್ ಸೋಮಯ್ಯ ಅಭಿಯಾನ ಆರಂಭಿಸಿದ್ದರು ಎಂದು ದೂರುದಾರರು ಉಲ್ಲೇಖಿಸಿದ್ದಾರೆ.

    ಹಡಗು ಉಳಿಸಲು ಕಿರಿತ್ ಸೋಮಯ್ಯ ಅವರಿಗೆ ದೇಣಿಗೆ ನೀಡಿದ್ದೇನೆ ಮತ್ತು ಬಿಜೆಪಿ ನಾಯಕರು ಇದೇ ಉದ್ದೇಶಕ್ಕಾಗಿ 57 ಕೋಟಿಗೂ ಹೆಚ್ಚು ಸಂಗ್ರಹಿಸಿದ್ದಾರೆ. ಆದರೆ, ಮೊತ್ತವನ್ನು ಮಹಾರಾಷ್ಟ್ರ ರಾಜಭವನಕ್ಕೆ ಠೇವಣಿ ಮಾಡದೇ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ. ಇದನ್ನೂ ಓದಿ: ಭಾರತಕ್ಕೆ ಕಾಲಿಟ್ಟ ಹೊಸ ರೂಪಾಂತರಿ ʼXEʼ – ಮುಂಬೈನಲ್ಲಿ ಮೊದಲ ಪ್ರಕರಣ ಪತ್ತೆ

    ಈ ಆರೋಪವನ್ನು ತಳ್ಳಿಹಾಕಿದ ಕಿರಿತ್ ಸೋಮಯ್ಯ, ವಿಕ್ರಾಂತ್ ನಿಧಿ ಸಂಗ್ರಹದಲ್ಲಿ ಯಾವುದೇ ಹಗರಣ ನಡೆದಿಲ್ಲ, ನಾನು ಯಾವುದೇ ತಪ್ಪು ಮಾಡಿಲ್ಲ. ಸಂಜಯ್ ರಾವತ್ ಆರೋಪ ಮಾಡುತ್ತಿದ್ದಾರೆ, ಆದರೆ ಅವುಗಳನ್ನು ಸಾಬೀತುಪಡಿಸಲು ಪುರಾವೆಗಳನ್ನು ನೀಡಿಲ್ಲ. ಎಫ್‌ಐಆರ್ ಪ್ರತಿಯನ್ನೂ ನಾನು ಸ್ವೀಕರಿಸಿಲ್ಲ. ನಾನು ತನಿಖೆ ಎದುರಿಸಲು ಸಿದ್ಧನಿದ್ದೇನೆ. ರಾವತ್ ಅವರ ಬಳಿ ಸಾಕ್ಷ್ಯವಿದ್ದರೆ ಅದನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಹಸ್ತಾಂತರಿಸಲಿ ಎಂದು ತಿರುಗೇಟು ನೀಡಿದ್ದಾರೆ.

    ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ (ED) ತನಿಖೆಗೆ ಒಳಪಟ್ಟಿರುವ ಸಂಜಯ್ ರಾವುತ್ ಅವರು ಬುಧವಾರ ಸೋಮಯ್ಯ ಅವರ ವಿರುದ್ಧ ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪ ಮಾಡಿದ್ದರು.