Tag: ಕಿನ್ನಿಗೋಳಿ

  • ಮಂಗ್ಳೂರಿನ ಕಿನ್ನಿಗೋಳಿಯಲ್ಲಿ ಸ್ಟುಡಿಯೋಗೆ ಬೆಂಕಿ- ಮಹಡಿ ಕುಸಿದು ಐವರಿಗೆ ಗಾಯ

    ಮಂಗ್ಳೂರಿನ ಕಿನ್ನಿಗೋಳಿಯಲ್ಲಿ ಸ್ಟುಡಿಯೋಗೆ ಬೆಂಕಿ- ಮಹಡಿ ಕುಸಿದು ಐವರಿಗೆ ಗಾಯ

    ಮಂಗಳೂರು: ಅಗ್ನಿ ಅವಘಡದಿಂದಾಗಿ ಮಂಗಳೂರಿನ ಕಿನ್ನಿಗೋಳಿ ಜಂಕ್ಷನ್ ನಲ್ಲಿದ್ದ ಸ್ಟುಡಿಯೋವೊಂದು ಸಂಪೂರ್ಣ ಬೆಂಕಿಗಾಹುತಿಯಾಗಿರೋ ಘಟನೆ ಕಳೆದ ತಡರಾತ್ರಿ ನಡೆದಿದೆ.

    ಪ್ರತಿಮಾ ಹೆಸರಿನ ಸ್ಟುಡಿಯೋವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದ್ದಕ್ಕಿದ್ದಂತೆಯೇ ಬೆಂಕಿಯ ಜ್ವಾಲೆ ಮೊದಲ ಮಹಡಿಗೂ ಪಸರಿಸಿ ಸ್ಟುಡಿಯೋದಲ್ಲಿದ್ದ ಎಲೆಕ್ಟ್ರಾನಿಕ್ಸ್ ಹಾಗೂ ಇನ್ನಿತರ ಪರಿಕರಗಳು ಸಂಪೂರ್ಣ ಸುಟ್ಟುಕರಕಲಾಗಿದೆ. ಸ್ಟುಡಿಯೋ ಸಮೀಪವಿರುವ ಬೇಕರಿಯೊಂದಕ್ಕೂ ಸ್ವಲ್ಪ ಪ್ರಮಾಣದ ಬೆಂಕಿ ತಗುಲಿದ್ದು, ಭಾಗಶಃ ಹಾನಿಯಾಗಿದೆ.

    ಇದೇ ವೇಳೆ ಕಟ್ಟಡದಲ್ಲಿದ್ದ ಗ್ಯಾಸ್ ಸಿಲಿಂಡರ್‍ವೊಂದು ದೊಡ್ಡದಾದ ಶಬ್ದದೊಂದಿಗೆ ಸ್ಫೋಟಗೊಂಡಿದ್ದು ಬೆಂಕಿ ಹರಡಲು ಇನ್ನಷ್ಟು ಕಾರಣವಾಯಿತು. ಇದರಿಂದ ಅವಘಡ ಸಂಭವಿಸುತ್ತಿದ್ದಂತೆಯೇ ಬೆಂಕಿ ನಂದಿಸಲು ಹರಸಾಹಸಪಡುತ್ತಿದ್ದ ಸಾರ್ವಜನಿಕರು ಭಯಭೀತರಾದರು. ಸುಮಾರು ಒಂದು ಗಂಟೆಗಳ ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಇನ್ನು ಬೆಂಕಿ ನಂದಿಸುವ ವೇಳೆ ಮೊದಲ ಮಹಡಿ ಕುಸಿದಿದ್ದು, ಪರಿಣಾಮ ಇಬ್ಬರು ಅಗ್ನಿಶಾಮಕ ದಳದ ಸಿಬ್ಬಂದಿ ಸಹಿತ ಐದು ಮಂದಿ ಗಾಯಗೊಂಡಿದ್ದಾರೆ.

    ಸದ್ಯ ಗಾಯಾಳುಗಳಿಗೆ ಕಿನ್ನಿಗೋಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಮೂಲ್ಕಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

     

  • ಕಿನ್ನಿಗೋಳಿಯಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

    ಕಿನ್ನಿಗೋಳಿಯಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

    ಮಂಗಳೂರು: ತಾಂತ್ರಿಕ ಶಿಕ್ಷಣದಲ್ಲಿ ಹೊಸತನ ನೈಪುಣ್ಯತೆಯನ್ನು ಬಳಸಿ ಉತ್ತಮ ಸಾಧನೆ ಮಾಡಿ ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು ಎಂದು ಕಟೀಲು ದೇವಳ ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಹೇಳಿದರು. ಕಿನ್ನಿಗೋಳಿ ಯುಗಪುರುಷ ಸಭಾ ಭವನದಲ್ಲಿ ಕಿನ್ನಿಗೋಳಿ ಮತ್ತು ಕೈಕಂಬ ಕೆಐಸಿಟಿ ಮತ್ತು ಎಂಸಿಟಿಸಿ (ತಾಂತ್ರಿಕ ಹಾಗೂ ಕಂಪ್ಯೂಟರ್ ಶಿಕ್ಷಣ ಸಂಸ್ಥೆ) ದಶಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕ ಹರ್ಷದ್ ಎಂ. ಎ ಅಧ್ಯಕ್ಷತೆ ವಹಿಸಿದ್ದರು.

    ಶಿಕ್ಷಣ ಕ್ರಾಂತಿಯ ಹರಿಕಾರ ಅಕ್ಷರ ಸಂತ ಹರೇಕಳ ಹಾಜಬ್ಬ, ಕಿನ್ನಿಗೊಳಿ ಗ್ರಾ. ಪಂ. ಪೌರ ಕಾರ್ಮಿಕ ಬೊಗ್ಗಣ್ಣ, ಅಂಚೆ ಇಲಾಖೆಯ ಎಲಿಯಾಸ್ ಡಿಸೋಜ, ಕಿನ್ನಿಗೋಳಿ ರುದ್ರಭೂಮಿ ನಿರ್ವಾಹಕ ಮಾದವ ಶೆಟ್ಟಿ , ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆ ಎಕ್ಸ್‍ರೇ ಟೆಕ್ನೀಶಿಯನ್ ಲಿಯೋ ಲೂವಿಸ್, ಹಿರಿಯ ಆಟೋ ಚಾಲಕ ಭಾಸ್ಕರ ಶೆಟ್ಟಿ, ಬಹುಮುಖ ಪ್ರತಿಭೆ ಅನುಜ್ಞಾ ಭಟ್, ಅಂತರಾಷ್ಟ್ರೀಯ ಪವರ್ ಲಿಫ್ಟರ್ ಪ್ರದೀಪ್ ಕುಮಾರ್, ಪತ್ರಕರ್ತ ಇರ್ಶಾದ್ ಕಿನ್ನಿಗೋಳಿ, ದಾಯ್ಜಿ ವರ್ಲ್ಡ ಜೂನಿಯರ್ ಮಸ್ತಿ ಪ್ರಶಸ್ತಿ ವಿಜೇತೆ ನಮನ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

    ಸಂಸ್ಥೆಯ ಅರ್ಥಿಕ ಹಿಂದುಳಿದ ವಿದ್ಯಾರ್ಥಿಗಳಾದ ಸಂದೇಶ್, ಮಹಮ್ಮದ್ ಬಶೀರ್, ರಂಜನ ಸಿಕ್ವೇರಾ, ನಿರ್ಮಲಾ, ಪ್ರವೀಣ್ ಶೆಟ್ಟಿ, ದಾಕ್ಷಾಯಣಿ, ರುಫಿಯಾ, ಕಾಮಾಕ್ಷಿ, ಬಬಿತಾ, ನಿರ್ಮಲಾಕ್ಷಿ ಅವರಿಗೆ ಸಂಪೂರ್ಣ ಉಚಿತ ವಿದ್ಯಾಭ್ಯಾಸದ ಸರ್ಟಿಫಿಕೇಟ್ ನೀಡಲಾಯಿತು.

    ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ, ಜುಮ್ಮಾ ಮಸೀದಿಯ ಧರ್ಮಗುರು ಅಬ್ದುಲ್ ಲತೀಫ್ ಸಖಾಫಿ, ಚರ್ಚ್ ಧರ್ಮಗುರು ರೆ. ಫಾ. ವಿನ್ಸೆಂಟ್ ಎಫ್ ಮೊಂತೇರೊ, ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಐಕಳ ಪೊಂಪೈ ಕಾಲೇಜು ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ. ಜಗದೀಶ್ ಹೊಳ್ಳ, ಕೆಐಸಿಟಿ ಮತ್ತು ಎಂಸಿಟಿಸಿ ಪ್ರಿನ್ಸಿಪಾಲ್ ನವೀನ್ ವೈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಮಾರ್ಗದರ್ಶಕರಾಗಿದ್ದ ಮರ್‍ಹೂಮ್ ಮುಲ್ಕಿ ಎಂ.ಎಚ್ ಅಬ್ಬಾಸ್ ಹಾಗೂ ದಿ. ವೈ. ಕಿಟ್ಟ ಕರ್ಕೇರ ಅವರಿಗೆ ನುಡಿ ನಮನ ನಡೆಯಿತು. ಸಂಸ್ಥೆಯ ಶಿಕ್ಷಕಿ ಸುರೇಖಾ ಸ್ವಾಗತಿಸಿದರು. ಪ್ರತಿಮಾ ಪ್ರತಿಭಾ ಪುರಸ್ಕಾರದ ವಿವರ ನೀಡಿದರು. ಸುರೇಖಾ ವಂದಿಸಿದರು. ಅನುರಾಗ್ ಕಾರ್ಯಕ್ರಮ ನಿರೂಪಿಸಿದರು.