Tag: ಕಾವೇರಿ ನೀರು ನಿಯಂತ್ರಣಾ ಸಮಿತಿ

  • ಜುಲೈ ತಿಂಗಳು ಸಂತೃಪ್ತಿಯಾಗಿದೆ – ಆಗಸ್ಟ್‌ನಲ್ಲಿ 45 ಟಿಎಂಸಿ ನೀರು ಹರಿಸುವಂತೆ ತಮಿಳುನಾಡು ಒತ್ತಾಯ

    ಜುಲೈ ತಿಂಗಳು ಸಂತೃಪ್ತಿಯಾಗಿದೆ – ಆಗಸ್ಟ್‌ನಲ್ಲಿ 45 ಟಿಎಂಸಿ ನೀರು ಹರಿಸುವಂತೆ ತಮಿಳುನಾಡು ಒತ್ತಾಯ

    ನವದೆಹಲಿ: ಕಾವೇರಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು ತಮಿಳುನಾಡಿಗೆ (TamilNadu) ಸಮರ್ಪಕ ನೀರು ಹರಿದು ಹೋಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಯಾವುದೇ ಆದೇಶ ನೀಡದೇ ಸಭೆಯನ್ನು ಮುಂದೂಡಿದೆ.

    ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಸಂಬಂಧ ಜುಲೈ 14ರಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆದಿತ್ತು.

    ಬುಧವಾರ ದೆಹಲಿಯಲ್ಲಿ ಸಭೆ ನಡೆಸಿದ ಪ್ರಾಧಿಕಾರ, ಎರಡು ರಾಜ್ಯಗಳಿಂದ ಮಾಹಿತಿ ಕಲೆ ಹಾಕಿತು. ಸುಪ್ರೀಂ ಕೋರ್ಟ್ (Supreme Court) ಆದೇಶದಂತೆ ಜುಲೈ ಮತ್ತು ಆಗಸ್ಟ್‌ನಲ್ಲಿ ನೀರು ಹರಿಸಬೇಕು, ಜುಲೈ ತಿಂಗಳ ನೀರಿನ ಪಾಲು ಸಂತೃಪ್ತಿಯಾಗಿದೆ ಎಂದು ಹೇಳಿ ಆಗಸ್ಟ್ ತಿಂಗಳ 45 ಟಿಎಂಸಿ ನೀರು ಹರಿಸಲು ತಮಿಳುನಾಡು ಒತ್ತಾಯಿಸಿದೆ. ಇದನ್ನೂ ಓದಿ: ಕೆಆರ್‌ಎಸ್ ಜಲಾಶಯ ಸಂಪೂರ್ಣ ಭರ್ತಿ – ಕಾವೇರಿ ಕೊಳ್ಳದ ಜನರಿಗೆ ಪ್ರವಾಹದ ಆತಂಕ

    ಜೂನ್ 1 ರಿಂದ ಜುಲೈ 22 ವರೆಗೂ ಕರ್ನಾಟಕದ 4 ಜಲಾಶಯಗಳ ಒಳಹರಿವು 118.245 ಟಿಎಂಸಿಯಷ್ಟಿದೆ. ಆದರೆ, ಇದೇ ಅವಧಿಯಲ್ಲಿ 30 ವರ್ಷಗಳ ಸರಾಸರಿ (1989-90 ರಿಂದ 2018-19) ಒಳಹರಿವು 98.679 ಟಿಎಂಸಿ ಇದೆ. ಕಾವೇರಿ ನೀರು ನಿಯಂತ್ರಣ ಸಮಿತಿ ತನ್ನ 99ನೇ ಸಭೆಯಲ್ಲಿ ಬಿಳಿಗುಂಡ್ಲುವಿನಲ್ಲಿ ಕರ್ನಾಟಕವು ಜುಲೈ 31ರ ವರೆಗೆ ಪ್ರತಿದಿನ 1 ಟಿಎಂಸಿಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ನಿರ್ಧರಿಸಿತು. ಅಂತೆಯೇ ನೀರು ಹರಿಸಿದೆ. ಬಿಳಿಗುಂಡ್ಲುವಿನಲ್ಲಿ ಖಾತ್ರಿಪಡಿಸಬೇಕಾದ ಹರಿವನ್ನು ನಿರ್ಧರಿಸುವಾಗ ತಮಿಳುನಾಡಿನ ಮೂರು ಜಲಾಶಯಗಳಲ್ಲಿನ ಕ್ಯಾರಿಓವರ್ ಶೇಖರಣೆ ಮತ್ತು ಇಡೀ ಕಾವೇರಿ ಜಲಾನಯನ ಪ್ರದೇಶದಲ್ಲಿನ ಜಲವಿಜ್ಞಾನದ ಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ಹೇಳಿತು.

    ಸದ್ಯ ನೀರಿನ ಹರಿವು ಸುಗಮವಾಗಿರುವ ಹಿನ್ನೆಲೆಯಲ್ಲಿ ಯಾವುದೇ ಆದೇಶ ನೀಡುವುದಿಲ್ಲ, ಸುಪ್ರೀಂ ಕೋರ್ಟ್ ಆದೇಶದ ಅನ್ವಯ ನೀರು ಬಿಡಿ. ಜುಲೈ 30 ರಂದು ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆ ನಡೆಸಿ, ತಮಿಳುನಾಡಿಗೆ ನೀಡಬೇಕಾದ ನೀರಿನ ಪ್ರಮಾಣದ ಬಗ್ಗೆ ಮತ್ತೊಮ್ಮೆ ಸಮಾಲೋಚನೆ ನಡೆಸಲಾಗುವುದು ಎಂದು ಸಿಡಬ್ಲ್ಯೂಆರ್‌ಸಿ ಹೇಳಿದೆ. ಇದನ್ನೂ ಓದಿ: ಯಾವ ರಾಜ್ಯವನ್ನೂ ಕಡೆಗಣಿಸಿಲ್ಲ, ಪ್ರತಿಪಕ್ಷಗಳ ಪ್ರತಿಭಟನೆ ದುರುದ್ದೇಶಪೂರ್ವಕ: ನಿರ್ಮಲಾ ಸೀತಾರಾಮನ್

    ಜುಲೈ 14ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ತಮಿಳುನಾಡಿಗೆ ಪ್ರತಿನಿತ್ಯ 1 ಟಿಎಂಸಿ ನೀರಿಗೆ ಬದಲಾಗಿ, ಜುಲೈ 31ರ ವರೆಗೆ 8 ಸಾವಿರ ಕ್ಯುಸೆಕ್‌ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ – ನಿತ್ಯ 8 ಸಾವಿರ ಕ್ಯುಸೆಕ್‌ ನೀರು ಹರಿಸಲು ಸರ್ಕಾರ ನಿರ್ಧಾರ: ಸಿಎಂ

  • ಕಾವೇರಿ ನೀರು ಬಿಡುಗಡೆ ವಿಚಾರ; ರಾಜ್ಯ ಸರ್ಕಾರ ನಿರ್ಧಾರದ ಬೆನ್ನಲ್ಲೇ ಸರ್ವಪಕ್ಷಗಳ ಸಭೆ ಕರೆದ ತ.ನಾಡು ಸರ್ಕಾರ

    ಕಾವೇರಿ ನೀರು ಬಿಡುಗಡೆ ವಿಚಾರ; ರಾಜ್ಯ ಸರ್ಕಾರ ನಿರ್ಧಾರದ ಬೆನ್ನಲ್ಲೇ ಸರ್ವಪಕ್ಷಗಳ ಸಭೆ ಕರೆದ ತ.ನಾಡು ಸರ್ಕಾರ

    ನವದೆಹಲಿ/ಚೆನ್ನೈ: ಕಾವೇರಿ ನದಿಯಿಂದ (Cauvery River) ತಮಿಳುನಾಡಿಗೆ ನಿತ್ಯ ಒಂದು ಟಿಎಂಸಿ ನೀರು ಬಿಡುಗಡೆ ಮಾಡಲು ಕರ್ನಾಟಕ ರಾಜ್ಯ ಸರ್ಕಾರ ನಿರಾಕರಿಸಿದ್ದು, ಪ್ರತಿನಿತ್ಯ 8 ಕ್ಯುಸೆಕ್‌ ನೀರು ಹರಿಸಲು ತೀರ್ಮಾನ ಕೈಗೊಂಡ ಮರುದಿನವೇ ತಮಿಳುನಾಡು ಸರ್ಕಾರ (Tamil Nadu Government) ಸರ್ವಪಕ್ಷಗಳ ಸಭೆ ಕರೆದಿದೆ. ನಾಳೆ (ಮಂಗಳವಾರ) ಚೆನ್ನೈನಲ್ಲಿ ಜಲಸಂಪನ್ಮೂಲ ಸಚಿವ ದೊರೈಮುರುಗನ್ (Durai Murugan) ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.

    ಭಾನುವಾರ ಸರ್ವಪಕ್ಷಗಳ ಸಭೆ ಕರೆದಿದ್ದ ಕರ್ನಾಟಕ ಸರ್ಕಾರ ಕಾವೇರಿ ನೀರು  ನಿಯಂತ್ರಣಾ ಸಮಿತಿ (CWRC) ಶಿಫಾರಸ್ಸು ಅನ್ವಯ ನಿತ್ಯ ಒಂದು ಟಿಎಂಸಿ ನೀರು ಬಿಡುಗಡೆ ಮಾಡದಿರಲು ತಿರ್ಮಾನಿಸಿತ್ತು. ಜುಲೈ 31ರ ವರೆಗೆ ನಿತ್ಯ 8 ಕ್ಯುಸೆಕ್‌ ನೀರು ಹರಿಸಲು, ಮಳೆ ಕಡಿಮೆಯಾದ್ರೆ, ಅದಕ್ಕಿಂತಲೂ ಕಡಿಮೆ ನೀರು ಹರಿಸಲು ತೀರ್ಮಾನಿಸಿತ್ತು. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ – ನಿತ್ಯ 8 ಸಾವಿರ ಕ್ಯುಸೆಕ್‌ ನೀರು ಹರಿಸಲು ಸರ್ಕಾರ ನಿರ್ಧಾರ: ಸಿಎಂ

    ಅಲ್ಲದೇ ಮಳೆಯ ಪ್ರಮಾಣ ನಿರೀಕ್ಷೆಗಿಂತ ಸರಿ ಸುಮಾರು 28% ಕೊರತೆ ಇದ್ದು ಈವರೆಗಿನ ಮಳೆಗೆ ಜಲಾಶಯಗಳು ಕೂಡಾ ಭರ್ತಿಯಾಗಿಲ್ಲ. ಹವಮಾನ ಇಲಾಖೆ ಮಳೆಯ ಭರವಸೆ ನೀಡಿದ್ದರೂ ಗ್ಯಾರಂಟಿ ಇಲ್ಲ ಹೀಗಾಗೀ ಜುಲೈ ಅಂತ್ಯದವರೆಗೂ 1 ಟಿಎಂಸಿ ನೀರು ಸಾಧ್ಯವಿಲ್ಲ ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವರಿಕೆ ಮಾಡಲು ನಿರ್ಧರಿಸಿದೆ. ಇದನ್ನೂ ಓದಿ: ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ವರೆಗೂ ಹೋಗೋಣ – ರಾಜ್ಯ ಸರ್ಕಾರಕ್ಕೆ ಆರ್‌. ಅಶೋಕ್‌ ಬೆಂಬಲ!

    ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸ್ಸಿನ ವಿರುದ್ಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ಮೇಲ್ಮನವಿ ಸಲ್ಲಿಸಿ ರಾಜ್ಯದ ಪರಿಸ್ಥಿತಿಯನ್ನು ಮನವರಿಕೆ ಮಾಡಲು ನಿರ್ಧರಿಸಿದ್ದು ಅಲ್ಲಿಯವರೆಗೂ ನೀರು ಬಿಡುಗಡೆ ಮಾಡದಿರಲು ಸರ್ವ ಪಕ್ಷಯಲ್ಲಿ ತಿರ್ಮಾನಿಸಿತ್ತು. ರಾಜ್ಯ ಸರ್ಕಾರದ ಈ ತಿರ್ಮಾನದ ಬೆನ್ನಲ್ಲೇ ಈಗ ತಮಿಳುನಾಡಿನ ಪಕ್ಷಗಳ ಸಭೆಯನ್ನು ಸಚಿವ ದೊರೈಮುರುಗನ್ ಕರೆದಿದ್ದು, ಒತ್ತಡ ಹೆಚ್ಚಿಸುವ ಪ್ರಯತ್ನ ಆರಂಭಿಸಿದೆ. ಇದನ್ನೂ ಓದಿ: Karnataka Assembly Session| ಟಾರ್ಗೆಟ್‌ ಸಿದ್ದರಾಮಯ್ಯ – ಪ್ರತಿಪಕ್ಷಗಳಿಗೆ ಸಿಕ್ಕಿವೆ 3 ಬ್ರಹ್ಮಾಸ್ತ್ರಗಳು 

  • ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ವರೆಗೂ ಹೋಗೋಣ – ರಾಜ್ಯ ಸರ್ಕಾರಕ್ಕೆ ಆರ್‌. ಅಶೋಕ್‌ ಬೆಂಬಲ!

    ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ವರೆಗೂ ಹೋಗೋಣ – ರಾಜ್ಯ ಸರ್ಕಾರಕ್ಕೆ ಆರ್‌. ಅಶೋಕ್‌ ಬೆಂಬಲ!

    – ತಮಿಳಿನಾಡಿನವರು ಸಮರ್ಥವಾಗಿ ವಾದಿಸಿದ್ದಾರೆ, ನಮ್ಮವರು ವಿಫಲರಾಗಿದ್ದಾರೆ: ಶಾಸಕ ಜಿಟಿಡಿ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ತಮಿಳುನಾಡಿಗೆ ಪ್ರತಿನಿತ್ಯ 1 ಟಿಎಂಸಿ ನೀರಿಗೆ ಬದಲಾಗಿ, ಜುಲೈ 31ರ ವರೆಗೆ 8 ಸಾವಿರ ಕ್ಯುಸೆಕ್‌ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಕುರಿತು ಪ್ರತಿಪಕ್ಷ ನಾಯಕ ಆರ್. ಅಶೋಕ್‌ (R Ashoka) ಸೇರಿದಂತೆ ಇತರ ನಾಯಕರು ಪ್ರತಿಕ್ರಿಯಿಸಿದ್ದಾರೆ.

    ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್‌. ಅಶೋಕ್‌, ಅಗತ್ಯವಿದ್ದರೆ ಕಾವೇರಿ ನೀರಿನ (Cauvery Water) ವಿಚಾರದಲ್ಲಿ ಸುಪ್ರೀಂ ಕೋರ್ಟ್‌ವರೆಗೂ ಹೋಗೋಣ ಅಂತ ಸಲಹೆ ಕೊಟ್ಟಿರುವುದಾಗಿ ತಿಳಿಸಿದ್ದಾರೆ.

    ಸುಪ್ರೀಂ ವರೆಗೂ ಹೋಗೋಣ:
    ಕಳೆದ ವರ್ಷ ಬರಗಾಲ ಇತ್ತು, ಈಗೇನೋ ಅಲ್ಪಸ್ವಲ್ಪ ಮಳೆ ಬಂದು ನೀರು ಬಂದಿದೆ. ಇಂಥ ಸಮಯದಲ್ಲಿ ಕಾವೇರಿ ನಿರ್ವಹಣಾ ಸಮಿತಿ ಆದೇಶ ಆಘಾತ ತಂದಿದೆ. ಇಂತಹ ಸಮಯದಲ್ಲಿ ನೀರು ಬಿಡುವುದು ಸರಿಯಲ್ಲ ಅಂತ ಹೇಳಿದ್ದೇವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಬಳಿ ಮೇಲ್ಮನವಿ ಹಾಕಿ ಅಂದಿದ್ದೇವೆ, ಬೇಕಾದ್ರೆ ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ವರೆಗೂ ಹೋಗೋಣ ಅಂತ ಸಲಹೆ ಕೊಟ್ಟಿದ್ದೇವೆ. ಆದರೆ ಸಿಎಂ, ಎಜಿ ಅವರೆಲ್ಲ ಏಕಾಏಕಿ ಆಗಲ್ಲ ಅಂದರೆ ಹಿನ್ನಡೆ ಆಗಲಿದೆ, ಅಲ್ಪಸ್ವಲ್ಪ ಬಿಡೋಣ ಅಂದಿದ್ದಾರೆ. ಜೊತೆಗೆ ನೀರಿನ ಪ್ರಮಾಣ ಕಡಿಮೆ ಮಾಡಲು ಮನವಿ ಮಾಡುವಂತೆ ಪ್ರಧಿಕಾರದ ಬಳಿ ಮನವಿ ಮಾಡುವುದಾಗಿ ಸಿಎಂ ಹೇಳಿದ್ದಾರೆಂದು ತಿಳಿಸಿದ್ದಾರೆ.

    ಮೊದಲು ಕುಚಿಕುಗಳ ಮನವೊಲಿಸಲಿ:
    ಇನ್ನು ವಿಧಾನ ಪರಿಷತ್‌ ಸದಸ್ಯ ಸಿ.ಟಿ ರವಿ ಮಾತನಾಡಿ, ತಮಿಳುನಾಡಿನಲ್ಲಿ ಇಂಡಿ ಒಕ್ಕೂಟದ ಸರ್ಕಾರ ಇದೆ. ಅವರನ್ನು ಕಾಂಗ್ರೆಸ್ ಮನವೊಲಿಸಲಿ. ಆಗ ಕೇಂದ್ರವೂ ಬೇಡ, ಸುಪ್ರೀಂ ಕೋರ್ಟು ಬೇಡ. ಜಗಳ ಇಲ್ಲದೆಯೇ ಸಮಸ್ಯೆ ಬಗೆಹರಿಸಬಹುದು. ತಮಿಳುನಾಡು ಸರ್ಕಾರ ಇವರ ಕುಚಿಕು, ಹಾಗಾಗಿ ಮೊದಲು ಅವರ ಮನವೊಲಿಸಲಿ. ಕೇಂದ್ರಕ್ಕೆ ನಿಯೋಗ ಅಗತ್ಯವೇ ಇರಲ್ಲ ಎಂದು ಕುಟುಕಿದ್ದಾರೆ.

    ಸರ್ವ ಪಕ್ಷ ಸಭೆಗೆ ಇವರು ಆಹ್ವಾನ ಕೊಟ್ಟಿದ್ದು ಒಂದು ದಿನದ ಹಿಂದೆ. ಆದರೂ ನಾವು ಬಂದಿದ್ದೇವೆ, ಅಭಿಪ್ರಾಯ ಹೇಳಿದ್ದೇವೆ. ಮುಂಚಿತವಾಗಿ ಆಹ್ವಾನ ಬಂದಿದ್ದಿದ್ರೆ ಎಲ್ಲರೂ ಸಮಯ ಸರಿ ಮಾಡಿಕೊಂಡು ಬರುತ್ತಿದ್ದರು. ಇನ್ಮುಂದೆಯಾದರೂ ಇಂತಹ ಸಭೆಗಳಿಗೆ ಮುಂಚಿತವಾಗಿ ಆಹ್ವಾನ ಕೊಡಲಿ ಎಂದು ಸಿ.ಟಿ ರವಿ ಸಲಹೆ ನೀಡಿದ್ದಾರೆ.

    ತಮಿಳಿನಾಡಿನವರು ಸಮರ್ಥವಾಗಿ ವಾದಿಸಿದ್ದಾರೆ:
    ಜೆಡಿಎಸ್‌ ಶಾಸಕ ಜಿ.ಟಿ ದೇವೇಗೌಡ ಮಾತನಾಡಿ, ಕಾವೇರಿ ಪ್ರಾಧಿಕಾರದಲ್ಲಿ ಸಮರ್ಥವಾಗಿ ವಾದ ಮಾಡುವಲ್ಲಿ ನಮ್ಮವರು ವಿಫಲರಾಗಿದ್ದಾರೆ. ತಮಿಳಿನಾಡಿನವರು ಸಮರ್ಥವಾಗಿ ವಾದ ಮಾಡಿದ್ದರಿಂದ ಅವರ ಪರವಾಗಿ ತೀರ್ಪು ಬರ್ತಿದೆ. ಕಬಿನಿಯಲ್ಲಿ ನೀರು ತುಂಬಿದೆ ಡ್ಯಾಮ್ ಸುರಕ್ಷತೆ ದೃಷ್ಟಿಯಿಂದ ನೀರು ಬಿಟ್ಟಿದ್ದೇವೆ. ಭದ್ರತಾ ದೃಷ್ಟಿಯಿಂದ ನೀರನ್ನ ಬಿಡ್ತೇವೆ ಎಂದಿದ್ದಾರೆ. ಒಳಹರಿವು ನಿಂತರೆ ನೀರು ಬಿಡೋದನ್ನ ನಿಲ್ಲಿಸ್ತೇವೆ ಎಂದಿದ್ದಾರೆ, ನಾವು ಅದೇ ಹೇಳಿದ್ದೇವೆ. ರೈತರಿಗೆ ನೀರು ಸರಿಯಾಗಿ ಕೊಡಬೇಕು ಇಲ್ಲದೇ ಹೋದರೆ ಸಮಸ್ಯೆಯಾಗುತ್ತೆ. ಕಳೆದ ವರ್ಷ ಬರಗಾಲದಲ್ಲಿ ಸಾಕಷ್ಟು ಸಮಸ್ಯೆಯನ್ನ ರೈತರು ಅನುಭವಿಸಿದ್ದಾರೆ. ನೀರಿಲ್ಲದಿದ್ದಾಗ ಏನು ಮಾಡಬೇಕು ಅನ್ನೋದರ ಬಗ್ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ಕೇಳಬೇಕು. ಸಮರ್ಥವಾಗಿ ಕಾವೇರಿ ಪ್ರಾಧಿಕಾರದಲ್ಲಿ ವಾದವನ್ನ ಮಂಡಿಸಬೇಕು. ಅದಕ್ಕಾಗಿ ಮೇಲ್ಮನವಿ ಸಲ್ಲಿಸಲು ಸಲಹೆ ನೀಡಿದ್ದೇವೆ ಎಂದು ವಿವರಿಸಿದ್ದಾರೆ.

  • ತಮಿಳುನಾಡಿಗೆ ಕಾವೇರಿ – ನಿತ್ಯ 8 ಸಾವಿರ ಕ್ಯುಸೆಕ್‌ ನೀರು ಹರಿಸಲು ಸರ್ಕಾರ ನಿರ್ಧಾರ: ಸಿಎಂ

    ತಮಿಳುನಾಡಿಗೆ ಕಾವೇರಿ – ನಿತ್ಯ 8 ಸಾವಿರ ಕ್ಯುಸೆಕ್‌ ನೀರು ಹರಿಸಲು ಸರ್ಕಾರ ನಿರ್ಧಾರ: ಸಿಎಂ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ತಮಿಳುನಾಡಿಗೆ ಪ್ರತಿನಿತ್ಯ 1 ಟಿಎಂಸಿ ನೀರಿಗೆ ಬದಲಾಗಿ, ಜುಲೈ 31ರ ವರೆಗೆ 8 ಸಾವಿರ ಕ್ಯುಸೆಕ್‌ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ.

    ಜುಲೈ 31ರ ವರೆಗೆ ತಮಿಳುನಾಡಿಗೆ (Tamil Nadu) ನಿತ್ಯ 1 ಟಿಎಂಸಿ ನೀರು ಹರಿಸಬೇಕೆಂಬ ಕಾವೇರಿ ನೀರು ನಿಯಂತ್ರಣಾ ಸಮಿತಿ ಶಿಫಾರಸು ಹಿನ್ನೆಲೆಯಲ್ಲಿ ಭಾನುವಾರ ವಿಧಾನಸೌಧದಲ್ಲಿ ಸರ್ವಪಕ್ಷಗಳ ಸಭೆ ನಡೆಸಲಾಯಿತು. ಸಭೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ಘಟಾನುಘಟಿ ನಾಯಕರು ಪಾಲ್ಗೊಂಡಿದ್ದರು. ಸಮಗ್ರ ಚರ್ಚೆಯ ಬಳಿಕ ಎರಡು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.

    ನಿರ್ಣಯ – 1

    ಲೀಗಲ್ ಟೀಂ ಮೋಹನ್ ಕಾತರಕಿ ಅವರ ಸಲಹೆ ಮೇರೆಗೆ ತಮಿಳುನಾಡಿಗೆ 1 ಟಿಎಂಸಿ ಬದಲಾಗಿ 8 ಸಾವಿರ ಕ್ಯುಸೆಕ್ ನೀರು ಬಿಡಲು ತೀರ್ಮಾನ.

    ನಿರ್ಣಯ – 2

    1 ಟಿಎಂಸಿ ನೀರು ಬಿಡಬೇಕು ಎಂಬ ಕಾವೇರಿ ನೀರು ನಿಯಂತ್ರಣಾ ಸಮಿತಿ ಆದೇಶಕ್ಕೆ ವಿರುದ್ಧವಾಗಿ ಕಾವೇರಿ ನೀರು ನಿರ್ವಹಣಾ ಸಮಿತಿ (ಸಿಡಬ್ಲ್ಯೂಎಂಎ) ಮುಂದೆ ಮೇಲ್ಮನವಿ ಸಲ್ಲಿಸಲು ತೀರ್ಮಾನ.

    ಸಭೆಯ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸರ್ವಪಕ್ಷಗಳ ಸಭೆಯಲ್ಲಿ ತಮಿಳುನಾಡಿಗೆ ಪ್ರತಿನಿತ್ಯ 1 ಟಿಎಂಸಿ ನೀರಿಗೆ ಬದಲಾಗಿ, 8 ಸಾವಿರ ಕ್ಯೂಸೆಕ್‌ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಅಲ್ಲದೇ ಕಾವೇರಿ ನೀರು ನಿಯಂತ್ರಣಾ ಸಮಿತಿ ಆದೇಶಕ್ಕೆ ವಿರುದ್ಧವಾಗಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಕಾವೇರಿ ವಿಚಾರವಾಗಿ ಕೇಂದ್ರಕ್ಕೆ ಸರ್ವ ಪಕ್ಷ ನಿಯೋಗ ತೆಗೆದುಕೊಂಡು ಹೋಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಇಂದಿನ ಸರ್ವ ಪಕ್ಷಗಳ ಸಭೆ ಕರೆಯಲಾಗಿತ್ತು. ಅಶೋಕ್, ಸದಾನಂದಗೌಡ, ಜಿ.ಟಿ ದೇವೇಗೌಡ, ಸಿಟಿ ರವಿ, ಎ.ಮಂಜು, ರೈತ ಸಂಘದವರು, ಯದವೀರ್, ಕಾವೇರಿ ಭಾಗದ ಶಾಕಸರ ಇದ್ದರು. ಸಭೆಯಲ್ಲಿ ವಸ್ತು ಸ್ಥಿತಿಯನ್ನ ನಾನು, ಡಿಕೆ ಶಿವಕುಮಾರ್ ಕೊಟ್ಟಿದ್ದೇವೆ. ಲೀಗಲ್ ಟೀಂ ಕಾತರಕಿ, ಎ.ಜಿ ಶಶಿಕಿರಣ್ ಶೆಟ್ಟಿ ಅವರು ಸಭೆಯಲ್ಲಿ ಇದ್ದರು.

    ಸಂಗ್ರಹವಿರುವ ನೀರು 2 ತಿಂಗಳಿಗೆ ಆಗುತ್ತೆ:
    ಜುಲೈ 11 ರಂದು ನಡೆದ ಕಾವೇರಿ ನೀರು ನಿಯಂತ್ರಣಾ ಸಮಿತಿ ಸಭೆಯಲ್ಲಿ 31ರ ವರೆಗೆ ತಮಿಳುನಾಡಿಗೆ ನಿತ್ಯ 1 ಟಿಎಂಸಿ ನೀರು ಬಿಡುವಂತೆ ಶಿಫಾರಸು ಮಾಡಲಾಗಿತ್ತು. ಸಾಮಾನ್ಯವಾಗಿ ಜೂನ್‌ ತಿಂಗಳಲ್ಲಿ 9.14 ಟಿಎಂಸಿ ನೀರು ಬಿಡಬೇಕಿತ್ತು. ಜುಲೈನಲ್ಲಿ 31.24 ಟಿಎಂಸಿ ನೀರು ಬಿಡಬೇಕಿತ್ತು. ಆದ್ರೆ ಸಂಗ್ರಹವಿರುವ 40.43 ಟಿಎಂಸಿ ನೀರು 2 ತಿಂಗಳಿಗೆ ಆಗುತ್ತೆ. ಈಗ ನಾವು 5 ಟಿಎಂಸಿಗೂ ಹೆಚ್ಚು ನೀರು ಬಿಡುಗಡೆ ಮಾಡಿದ್ದೇವೆ ಎಂದು ವಿವರಿಸಿದರು.

    1 ಟಿಎಂಸಿ ನೀರು ಬಿಡೋಕೆ ಆಗಲ್ಲ: 
    ಸಭೆಯಲ್ಲಿ ಕಾತರಕಿ ಅವರು ನೀರಿನ ಸಂಗ್ರಹದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಾರಿ ಸುಮಾರು 30% ಒಳಹರಿವು ಕಡಿಮೆಯಾಗಿದೆ. ಕಬಿನಿಯಲ್ಲಿ 96%, ಹಾರಂಗಿಯಲ್ಲಿ 76%, ಹೇಮಾವತಿಯಲ್ಲಿ 56%, ಕೆಆರ್‌ಎಸ್‌ನಲ್ಲಿ 54% ನೀರು ಸಂಗ್ರಹವಾಗಿದೆ. ಒಟ್ಟಾರೆಯಾಗಿ 63% ಮಾತ್ರ ನೀರು ಸಂಗ್ರಹ ಆಗಿದೆ. ಜುಲೈ 12ರಂದು 5 ಸಾವಿರ ಕ್ಯುಸೆಕ್‌ ಒಳಹರಿವು ಆಗಿತ್ತು, ಅಷ್ಟೇ ಹೊರಹರಿವೂ ಆಗಿದೆ. ಜು.13 ಮತ್ತು 14ರಂದು ಒಳಹರಿವು ಹೆಚ್ಚಾಗಿದ್ದರೂ, ಒಂದು ಟಿಎಂಸಿ ನೀರು ಬಿಡೋಕೆ ಕಷ್ಟಸಾಧ್ಯವಾಗಿದೆ. ಆದ್ದರಿಂದ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

    ಮಳೆ ಕಡಿಮೆಯಾದ್ರೆ ಬಿಡೋ ನೀರೂ ಕಡಿಮೆ ಮಾಡ್ತೀವಿ: 
    ಸದ್ಯ 8 ಸಾವಿರ ಕ್ಯುಸೆಕ್‌ ನೀರು ಬಿಡುವ ನಿರ್ಧಾರ ಆಗಿದೆ. 1 ಟಿಎಂಸಿ ನೀರಿನ ಬದಲಾಗಿ 8 ಸಾವಿರ ಕ್ಯುಸೆಕ್ ಬಿಡಲು ಕಾತರಕಿ ಸಲಹೆ ಕೊಟ್ಟರು. ಮಳೆ ಬಾರದೇ ಹೋದರೆ ಕ್ಯುಸೆಕ್ ನೀರಿನಲ್ಲೂ ಕಡಿಮೆ ಮಾಡೋಣ, ಜೊತೆಗೆ ಅಪೀಲು ಹಾಕೋಣ ಅಂತಾ ಸಲಹೆ ಕೊಟ್ಟರು. ಅದರಂತೆ ತೀರ್ಮಾನ ಆಗಿದೆ. ಒಂದು ವೇಳೆ ಮಳೆ ಜಾಸ್ತಿ ಆದಲ್ಲಿ ಎಷ್ಟು ಬಿಡಬೇಕೋ ಅಷ್ಟು ನೀರು ಬಿಡ್ತೀವಿ. ಮಳೆ ಕಡಿಮೆ ಆದರೆ ಈಗ ಬಿಡುವ 8 ಸಾವಿರ ಕ್ಯುಸೆಕ್ ನೀರಿನಲ್ಲೂ ಕಡಿಮೆ ಮಾಡುತ್ತೇವೆ ಎಂದು ಸಿಎಂ ಸ್ಪಷ್ಟಪಡಿಸಿದರು.

  • ತಮಿಳುನಾಡಿಗೆ ಕಾವೇರಿ – CWRC ಶಿಫಾರಸು ವಿರೋಧಿಸಿ ಮೇಲ್ಮನವಿ ಸಲ್ಲಿಕೆಗೆ ತೀರ್ಮಾನ!

    ತಮಿಳುನಾಡಿಗೆ ಕಾವೇರಿ – CWRC ಶಿಫಾರಸು ವಿರೋಧಿಸಿ ಮೇಲ್ಮನವಿ ಸಲ್ಲಿಕೆಗೆ ತೀರ್ಮಾನ!

    – ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷ ಸಭೆ

    ಬೆಂಗಳೂರು: ಜುಲೈ 31ರ ವರೆಗೆ ತಮಿಳುನಾಡಿಗೆ (Tamil Nadu) ನಿತ್ಯ 1 ಟಿಎಂಸಿ ನೀರು ಹರಿಸಬೇಕೆಂಬ ಕಾವೇರಿ ನೀರು ನಿಯಂತ್ರಣಾ ಸಮಿತಿ (CWRC) ಶಿಫಾರಸ್ಸನ್ನು ಸರ್ವಪಕ್ಷ ಸಭೆಯಲ್ಲಿ ತಿರಸ್ಕರಿಸಲಾಯಿತು. ಶಿಫಾರಸು ಕುರಿತು ಮರುಪರಿಶೀಲನೆ ನಡೆಸುವಂತೆ ಮೇಲ್ಮನವಿ ಸಲ್ಲಿಸಲು ತೀರ್ಮಾನ ಕೈಗೊಳ್ಳಲಾಯಿತು. ಸಭೆ ಬಳಿಕ ಸಿಎಂ ಸಿದ್ದರಾಮಯ್ಯ (Siddaramaiah) ಅಧಿಕೃತವಾಗಿ ತೀರ್ಮಾನ ಪ್ರಕಟಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಇತ್ತೀಚೆಗಷ್ಟೇ ಕಾವೇರಿ ನೀರು ನಿಯಂತ್ರಣಾ ಸಮಿತಿ ತಮಿಳುನಾಡಿಗೆ ನಿತ್ಯ 1 ಟಿಎಂಸಿ ನೀರು ಬಿಡಲು ಶಿಫಾರಸು ಮಾಡಿತ್ತು. ಈ ಸಂಬಂಧ ತೀರ್ಮಾನ ಕೈಗೊಳ್ಳಲು ಭಾನುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷ ಸಭೆ (ALL Party Meeting) ಕರೆಯಲಾಗಿತ್ತು. ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಮಿತಿ ಆದೇಶಕ್ಕೆ ವಿರುದ್ಧವಾಗಿ ಮೇಲ್ಮನವಿ ಸಲ್ಲಿಸಲು ಸರ್ಕಾರ ನಿರ್ಧರಿಸಿರುವುದಾಗಿ ತಿಳಿಸಿದರು.

    ಸಭೆ ಆರಂಭಗೊಂಡ ನಂತರ ಮೊದಲಿಗೆ ಕಾವೇರಿ ತಾಂತ್ರಿಕ ಸಮಿತಿ, ಕಾವೇರಿ ಕೊಳ್ಳದ 4 ಜಲಾಶಯಗಳಲ್ಲಿ (Reservoirs) ನೀರಿನ ಸಂಗ್ರಹ, ಒಳ ಹರಿವು, ಮಳೆಯ ಪ್ರಮಾಣದ ಕುರಿತ ವರದಿ ನೀಡಿತು. ಸಭೆಯಲ್ಲಿ 4 ಜಲಾಶಯದ ನೀರಿನ ಸಂಗ್ರಹದ ಮಾಹಿತಿ ನೀಡಿದ ಅಧಿಕಾರಿಗಳು, ಹಾರಂಗಿಯಲ್ಲಿ 76%, ಹೇಮಾವತಿಯಲ್ಲಿ 56%, ಕೆಆರ್‌ಎಸ್‌ಯಲ್ಲಿ 54% ಹಾಗೂ ಕಬಿನಿ-96% ನೀರು ಇದೆ ಎಂಬ ಮಾಹಿತಿಯನ್ನು ಸಭೆಯ ಗಮನಕ್ಕೆ ತಂದಿತು. ವರದಿ ಆಧರಿಸಿ ಸರ್ವಪಕ್ಷಗಳೊಂದಿಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಈ ವೇಳೆ ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಿಂದ ಅಷ್ಟು ಪ್ರಮಾಣದ ನೀರನ್ನು ಬಿಡಲು ಅಸಾಧ್ಯ ಎಂದು ಕಾಂಗ್ರೆಸ್‌ ನಾಯಕರು ಪ್ರಸ್ತಾಪಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ವಿಪಕ್ಷಗಳು ಕಾಂಗ್ರೆಸ್‌ ಸರ್ಕಾರದ (Congress Government) ಧೋರಣೆಯನ್ನು ಖಂಡಿಸಿದವು, ಮುಂಚೆಯಿಂದಲೂ ಕೇಳಿದಷ್ಟು ನೀರು ಬಿಟ್ಟು ಅಭ್ಯಾಸ ಮಾಡಿಬಿಟ್ಟಿದ್ದೀರಿ. ಪ್ರತೀ ಸಲವೂ ಕಾವೇರಿ ನೀರು ನಿರ್ವಹಣಾ ಸಮಿತಿ ಹಾಗೂ ಕಾವೇರಿ ನೀರು ನಿಯಂತ್ರಣಾ ಮಡಳಿಗಳ ಆದೇಶ ಜಾರಿ ಮಾಡಿದ್ರಿ. ಸರ್ಕಾರದ ಈ ನಡೆಯಿಂದ ನಮ್ಮ ನೀರು ತಮಿಳುನಾಡಿಗೆ ಹರಿದುಹೋಯ್ತು. ನಮ್ಮ ರೈತರಿಗೆ ಸಮಸ್ಯೆ ಆದರೂ ಸರ್ಕಾರ ತಲೆಕೆಡಿಸಿಕೊಳ್ಳಲಿಲ್ಲ. ನಮ್ಮ ದನಿ, ರೈತರ ದನಿ ನೀವು ಕೇಳಿಸಿಕೊಳ್ಳಲೇ ಇಲ್ಲ ಎಂದು ವಿಪಕ್ಷ ನಾಯರು ಆರೋಪಿಸಿದರು. ಬಳಿಕ ಸರ್ವಪಕ್ಷಗಳು ಸಿಡಬ್ಲ್ಯೂಆರ್‌ಸಿ ಶಿಫಾರಸ್ಸನ್ನು ಮರುಪರಿಶೀಲಿಸುವಂತೆ ಮೇಲ್ಮನವಿ ಸಲ್ಲಿಸಲು ಸಭೆಯಲ್ಲಿ ಒಪ್ಪಿಗೆ ಸೂಚಿಸಿದವು.

    ಪ್ರಮುಖ ನಾಯಕರು ಭಾಗಿ:
    ಸರ್ವಪಕ್ಷ ಸಭೆಯಲ್ಲಿ ನಾಯಕ ಆರ್. ಅಶೋಕ್, ದೆಹಲಿ ಪ್ರತಿನಿಧಿ ಜಯಚಂದ್ರ, ಸಚಿವ ಚೆಲುವರಾಯಸ್ವಾಮಿ, ಜವರಾಯೇಗೌಡ, ಸದಾನಂದಗೌಡ, ಕಾಂಗ್ರೆಸ್‌ ನಾಯಕರಾದ ಶಿವಲಿಂಗೇಗೌಡ, ದಿನೇಶ್ ಗುಂಡೂರಾವ್, ಸುನೀಲ್ ಬೋಸ್, ಯತೀಂದ್ರ ಸಿದ್ದರಾಮಯ್ಯ, ಪರಮೇಶ್ವರ್, ಯು.ಬಿ ವೆಂಕಟೇಶ್, ಹೆಚ್‌.ಸಿ ಮಹದೇವಪ್ಪ, ಕೆ.ಜೆ ಜಾರ್ಜ್, ಪೊನ್ನಣ್ಣ, ಕೃಷ್ಣಭೈರೇಗೌಡ, ಮೈಸೂರಿನ ಬಿಜೆಪಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಿಟಿ ರವಿ, ಮಂಜುಳಾ ಲಿಂಬಾವಳಿ, ಶ್ರೀವತ್ಸವ, ಜಿ.ಟಿ ದೇವೇಗೌಡ, ಸುರೇಶ್ ಬಾಬು, ಭೋಜೇಗೌಡ, ಶರವಣ, ಮಂಜೇಗೌಡ ಪಾಲ್ಗೊಂಡಿದ್ದರು. ಇದರೊಂದಿಗೆ ಕಾವೇರಿ ಭಾಗದ ಶಾಸಕರು, ಪರಿಷತ್ ಸದಸ್ಯರು, ಸಂಸದರು, ಅಡ್ವೋಕೇಟ್ ಜನರಲ್, ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿ ಸಿಎಸ್ ಸೇರಿ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

    ಸಭೆಗೆ ಕೇಂದ್ರ ಸಚಿವರ ಗೈರು:
    ಮಹ್ವದ ಸಭೆಗೆ ಕೇಂದ್ರ ಸಚಿವರಾದ ಹೆಚ್‌.ಡಿ ಕುಮಾರಸ್ವಾಮಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಶಿ, ಸಂಸದರಾದ ತೇಜಸ್ವಿ ಸೂರ್ಯ, ಡಾ.ಸಿ.ಎನ್‌ ಮಂಜುನಾಥ್, ಪಿ.ಸಿ ಮೋಹನ್ ಗೈರಾಗಿದ್ದರು.

  • ರಾಜ್ಯ ಸರ್ಕಾರಕ್ಕೆ ಕಾವೇರಿ ಬಗ್ಗೆ ಕಾಳಜಿಯಿಲ್ಲ: ಜಿ.ಟಿ.ದೇವೇಗೌಡ

    ರಾಜ್ಯ ಸರ್ಕಾರಕ್ಕೆ ಕಾವೇರಿ ಬಗ್ಗೆ ಕಾಳಜಿಯಿಲ್ಲ: ಜಿ.ಟಿ.ದೇವೇಗೌಡ

    ಕಲಬುರಗಿ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಮುಂದೆ ಸರ್ಕಾರ ತನ್ನ ವಾದ ಮಂಡಿಸಲು ವಿಫಲವಾಗಿದ್ದು, ರಾಜ್ಯ ಸರ್ಕಾರಕ್ಕೆ ಕಾವೇರಿ ಬಗ್ಗೆ ಕಾಳಜಿಯಿಲ್ಲದಂತಾಗಿದೆ ಎಂದು ಜೆಡಿಎಸ್ (JDS) ಶಾಸಕ ಜಿ.ಟಿ.ದೇವೇಗೌಡ (G.T.Deve Gowda) ಹೇಳಿದ್ದಾರೆ.

    ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರೇ ಇಲ್ಲದಿದ್ದರೆ ಜನರಿಗೆ ಕುಡಿಯುವ ನೀರು ಸಿಗುತ್ತಾ? ರಾಜ್ಯದ ಜನರಿಗೆ ಕುಡಿಯುವ ನೀರು ಕೊಡಲಿಲ್ಲ ಎಂದಾಗ ರಾಜ್ಯ ಸರ್ಕಾರ ಉಳಿಯುತ್ತಾ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗಲಿದೆ ಎಂದು ಮೊದಲೇ ಹವಾಮಾನ ಇಲಾಖೆ ವರದಿ ನೀಡಿದಾಗಲೇ ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಹೋಗಬೇಕಿತ್ತು. ಸಂಕಷ್ಟ ಸೂತ್ರ ರೂಪಿಸುವಂತೆ ಮನವಿ ಮಾಡಬೇಕಾಗಿತ್ತು ಎಂದರು. ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸುವ ಮೋದಿ ಕಾವೇರಿ ವಿವಾದ ಬಗೆಹರಿಸಲು ಸಾಧ್ಯವಿಲ್ವಾ?: ಪ್ರಿಯಾಂಕ್ ಖರ್ಗೆ

    ಯಾವುದೇ ಆದೇಶವಿಲ್ಲದಿದ್ದಾಗಲೇ ತಮಿಳುನಾಡು ರಾಜ್ಯಕ್ಕೆ ನೀರು ಬಿಟ್ಟಿದ್ದಾರೆ. ಸ್ಟಾಲಿನ್ ಜೊತೆ ಮಾತನಾಡಿಕೊಂಡು, ಅವರ ಜೊತೆಗೂಡಿ ಇಂಡಿಯಾ ಒಕ್ಕೂಟವನ್ನು ಅಧಿಕಾರಕ್ಕೆ ತರಲು ರಾಜ್ಯ ಸರ್ಕಾರ ನೀರು ಬಿಟ್ಟಿದ್ದಾರೆ. ಅಧಿಕಾರದ ಅಮಲಿನಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ತೇಲಾಡುತ್ತಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ವೈರಿಯಾಗಿಯೇ ಇರಬೇಕು ಎಂದು ಕಾಂಗ್ರೆಸ್ ಆಸೆ ಪಟ್ಟಿತ್ತು. ಆದರೆ ಮೈತ್ರಿಯಿಂದ ಇದೀಗ ಇವರಿಗೆ ದೊಡ್ಡ ಆತಂಕ ಎದುರಾಗಿದೆ. ಸಮರ್ಥ ಮುಖ್ಯಮಂತ್ರಿ ಎನಿಸಿಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ವಿಫಲ ಮುಖ್ಯಮಂತ್ರಿ ಆಗಿದ್ದಾರೆ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬೆಂಗಳೂರು ಬಂದ್ – ಹೋಟೆಲ್ ತೆರೆದಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆ

    ಕಾವೇರಿ ವಿಚಾರವಾಗಿ ಬೆಂಗಳೂರು ಬಂದ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡುತ್ತಿದ್ದಾರೆ. ಶಾಂತಿಯುತ ಪ್ರತಿಭಟನೆ ಮಾಡಿದರೂ 144 ಸೆಕ್ಷನ್ ಹಾಕಿದ್ದಾರೆ. ಇದೊಂದು ಅವೈಜ್ಞಾನಿಕ ಸರ್ಕಾರವಾಗಿದೆ. ಹೋರಾಟ ಮಾಡುತ್ತಿರುವ ಕನ್ನಡಿಗರನ್ನೇ ಬಂಧಿಸುತ್ತಿದೆ. ಕಾವೇರಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹೆಚ್.ಡಿ.ದೇವೇಗೌಡರನ್ನು ಭೇಟಿಯಾಗಿಲ್ಲ. ಬಂದು ಮಾತುಕತೆ ಕೂಡ ನಡೆಸಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಪ್ರತಿನಿತ್ಯ 3 ಸಾವಿರ ಕ್ಯೂಸೆಕ್‌ ನೀರು ಹರಿಸಿ – ಕರ್ನಾಟಕಕ್ಕೆ CWRC ಆದೇಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]