Tag: ಕಾರ್ಯಕ್ರಮ

  • ಸಿ.ಟಿ ರವಿ ನೋಡಿ ನನಗೆ ಹೊಟ್ಟೆ ಕಿಚ್ಚು: ಗೋವಿಂದ ಕಾರಜೋಳ

    ಸಿ.ಟಿ ರವಿ ನೋಡಿ ನನಗೆ ಹೊಟ್ಟೆ ಕಿಚ್ಚು: ಗೋವಿಂದ ಕಾರಜೋಳ

    ಚಿಕ್ಕಮಗಳೂರು: ಸಚಿವ ಸಿ.ಟಿ.ರವಿ ನೋಡಿ ನನಗೆ ಹೊಟ್ಟೆ ಕಿಚ್ಚು ಬಂದಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಅವರು ಹೇಳಿದ್ದಾರೆ. ಚಿಕ್ಕಮಗಳೂರಿನ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದ ವಿವಿಧ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಡಿಸಿಎಂ ಈ ಮಾತನಾಡಿದ್ದಾರೆ.

    ನಾನು ಸಮಾಜ ಕಲ್ಯಾಣ ಸಚಿವನಾಗಿ ನನ್ನ ಜಿಲ್ಲೆಗೆ ಇಷ್ಟೊಂದು ಹಣ ಅನುದಾನ ತೆಗೆದುಕೊಂಡಿಲ್ಲ, ಆದರೆ ಸಿ.ಟಿ ರವಿ ಅವರು ಜಿಲ್ಲೆಯ ಅಭಿವೃದ್ಧಿಗೆ 959 ಕೋಟಿ ರೂ. ಹಣ ಅನುದಾನ ತಂದಿದ್ದಾರೆ. ನನಗೆ ಅವರನ್ನ ನೋಡಿ ಹೊಟ್ಟೆ ಕಿಚ್ಚು ಬಂದಿದೆ ಎಂದು ಗೋವಿಂದ ಕಾರಜೋಳ ಅವರು ಹೇಳಿದರು.

    ಇಂದು ಚಿಕ್ಕಮಗಳೂರಿನಲ್ಲಿ ಸಮಾಜ ಕಲ್ಯಾಣ ಹಾಗೂ ಲೊಕೋಪಯೋಗಿ ಇಲಾಖೆ ವ್ಯಾಪ್ತಿಯ 90 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ನಾನು ಇವತ್ತು ಬರುತ್ತಿರಲಿಲ್ಲ. ಸಾಕಷ್ಟು ಕೆಲಸ ಇತ್ತು. ರೈಲ್ವೆ ಇಲಾಖೆ ಸಭೆಗೆ ಹೋಗಬೇಕಿತ್ತು. ಆದರೆ ಸೋಮವಾರ ಸಿ.ಟಿ ರವಿಯವರು ಬೈದದ್ದನ್ನ ನೋಡಿ ಇವತ್ತು ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಅಭಿವೃದ್ಧಿ ಕೆಲಸಕ್ಕೆ ಸರ್ಕಾರದ ಸಂಪೂರ್ಣ ಸಹಮತ ಇರುತ್ತೆ ಎಂದು ಡಿಸಿಎಂ ತಿಳಿಸಿದರು.

    ಕಾರ್ಯಕ್ರಮದಲ್ಲಿ ಚಿತ್ರದುರ್ಗ ಸಂಸದ ನಾರಾಯಣ ಸ್ವಾಮಿ, ವಿಧಾನ ಪರಿಷತ್ ಶಾಸಕ ಬೋಜೇಗೌಡ, ಪ್ರಾಣೇಶ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಸೇರಿ ವಿವಿಧ ಶಾಸಕರು, ಅಧಿಕಾರಿಗಳು ಉಪಸ್ಥಿತರಿದ್ದರು.

  • ಬಿಗ್ ಬಾಸ್ ಮನೆಗೆ ಬಂದು ಸಿಹಿ ಸುದ್ದಿ ಕೊಟ್ಟ ಚಂದನಾ

    ಬಿಗ್ ಬಾಸ್ ಮನೆಗೆ ಬಂದು ಸಿಹಿ ಸುದ್ದಿ ಕೊಟ್ಟ ಚಂದನಾ

    ಬೆಂಗಳೂರು: ಬಿಗ್ ಬಾಸ್ ಮನೆಗೆ ಸ್ಪರ್ಧಿ ಚಂದನಾ ಅವರು ಎಂಟ್ರಿ ಕೊಟ್ಟು ಮನೆಯ ಸ್ಪರ್ಧಿಗಳ ಬಳಿ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.

    ಶುಕ್ರವಾರ ಹಾಡು ಹಾಡುವ ಮೂಲಕವೇ ಚಂದನಾ ಕನ್ಛೇಶನ್ ರೂಮಿನಿಂದ ಮನೆಯೊಳಗೆ ಪ್ರವೇಶಿಸಿದರು. ಚಂದನಾ ಬರುತ್ತಿದ್ದಂತೆ ಮೊದಲು ಕಿಶನ್ ಅವರನ್ನು ತಪ್ಪಿಕೊಂಡಿದ್ದಾರೆ. ಬಳಿಕ ಮನೆಯ ಸದಸ್ಯರೆಲ್ಲಾ ಚಂದನಾ ಅವರನ್ನು ತಪ್ಪಿಕೊಂಡು ಸ್ವಾಗತಿಸಿದ್ದಾರೆ. ಚಂದನಾರನ್ನು ನೋಡಿ ಸದಸ್ಯರು ಮೊದಲು ಶಾಕ್ ಆಗಿ ನಂತರ ಖುಷಿಪಟ್ಟಿದ್ದಾರೆ.

    ಚಂದನಾ ಲಿವಿಂಗ್ ಏರಿಯಾದಲ್ಲಿ ಕುಳಿತು ನಾನು ನಿಮ್ಮೆಲ್ಲರಾ ಜೊತೆ ಸಿಹಿ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇನೆ. ಈ ವಿಷಯವನ್ನು ನಾನು ಇದುವರೆಗೂ ಯಾರ ಬಳಿಯೂ ಹಂಚಿಕೊಂಡಿಲ್ಲ. ಮೊದಲ ಬಾರಿಗೆ ನಿಮ್ಮೆಲ್ಲರಾ ಬಳಿ ಹೇಳುತ್ತಿದ್ದೇನೆ ಎಂದರು. ಚಂದನಾ ಈ ರೀತಿ ಹೇಳುತ್ತಿದ್ದಂತೆ ತಕ್ಷಣ ವಾಸುಕಿ ನಿಮಗೆ ಮದುವೆ ಫಿಕ್ಸ್ ಆಯ್ತಾ ಎಂದು ಹೇಳಿದ್ದಾರೆ. ಇದನ್ನು ಕೇಳಿ ಚಂದನಾ ಹಾಗೂ ಮನೆಯ ಸದಸ್ಯರು ನಕ್ಕಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಹೊಸದೊಂದು ಹಾಡಿನ ಕಾರ್ಯಕ್ರಮ ಶುರುವಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಚಂದನಾ ಮೊದಲ ಬಾರಿಗೆ ನಿರೂಪಣೆ ಮಾಡುತ್ತಿದ್ದಾರೆ. ಈ ವಿಷಯವನ್ನು ಚಂದನಾ ಬಿಗ್ ಬಾಸ್ ಮನೆಯ ಸದಸ್ಯರ ಜೊತೆ ಹಂಚಿಕೊಂಡಿದ್ದಾರೆ. ಅಲ್ಲದೆ ಈ ಕಾರ್ಯಕ್ರಮಕ್ಕಾಗಿ ವಾಸುಕಿ ಅವರಿಗೆ ಶೀರ್ಷಿಕೆ ಗೀತೆ ಬರೆದುಕೊಡಲು ಹೇಳಿದ್ದಾರೆ. ವಾಸುಕಿ ಕಾರ್ಯಕ್ರಮಕ್ಕಾಗಿ ಹಾಡನ್ನು ಬರೆದು ಅದನ್ನು ಲಿವಿಂಗ್ ಏರಿಯಾದಲ್ಲಿ ಕುಳಿತುಕೊಂಡು ಹಾಡು ಹಾಡಿದ್ದಾರೆ. ವಾಸುಕಿ ಹಾಡು ಹಾಡಿದ ಬಳಿಕ ಬಿಗ್ ಬಾಸ್ ಚಂದನಾರನ್ನು ಮನೆಯಿಂದ ಹೊರಡುವಂತೆ ಹೇಳುತ್ತಾರೆ. ಆಗ ವಾಸುಕಿ, ಚಂದನಾರನ್ನು ತಪ್ಪಿಕೊಂಡು ಮುತ್ತು ನೀಡಿ ಆಲ್ ದಿ ಬೆಸ್ಟ್ ಎಂದು ಹೇಳಿದ್ದಾರೆ.

     

  • ಅಮಿತ್ ಶಾ ಕಾರ್ಯಕ್ರಮಕ್ಕೆ ಮರಗಳ ಮಾರಣಹೋಮ!

    ಅಮಿತ್ ಶಾ ಕಾರ್ಯಕ್ರಮಕ್ಕೆ ಮರಗಳ ಮಾರಣಹೋಮ!

    ಹುಬ್ಬಳ್ಳಿ: ಜನವರಿ 18ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಡೆಯಲಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಜನಜಾಗೃತಿ ಸಮಾವೇಶಕ್ಕೆ ಹತ್ತಾರು ಮರಗಳನ್ನ ಕಡಿದು ಹಾಕಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ನೆಹರು ಮೈದಾನದಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ. ಈ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ. ಹೀಗಾಗಿ ಭದ್ರತಾ ದೃಷ್ಟಿಯಿಂದ ಹತ್ತಾರು ಮರಗಳ ಟೊಂಗೆ ಕಡಿಯಬೇಕಾದ ಪಾಲಿಕೆ ಸಿಬ್ಬಂದಿ ಮರಗಳನ್ನ ಕಡಿದು ಹಾಕಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರು ಗೃಹ ಸಚಿವ ಅಮಿತ್ ಶಾ ಅವರಿಗೆ ಭದ್ರತೆ ನೀಡುವ ಜವಾಬ್ದಾರಿ ಹೊತ್ತಿದ್ದಾರೆ. ಹೀಗಾಗಿ ರಕ್ಷಣೆಗೆ ತೊಡಕಾಗುತ್ತದೆ ಎಂದು ನೆಹರು ಮೈದಾನದಕ್ಕೆ ಹೊಂದಿಕೊಂಡಿರುವ ಕೊಪ್ಪಿಕರ ರಸ್ತೆಯ ಬಳಿಯ ಗಿಡಮರಗಳ ಟೊಂಗೆ ಕಡಿಯಲು ಪಾಲಿಕೆಗೆ ಸೂಚಿಸಿದ್ದರು. ಆದರೆ ಪಾಲಿಕೆ ಸಿಬ್ಬಂದಿ ಟೊಂಗೆಗಳನ್ನ ಕಡಿಯದೆ ಮರಗಳನ್ನೇ ನೆಲಕ್ಕೆ ಉರುಳಿಸಿದ್ದಾರೆ.

    ಮರ ಕಡಿದಿದ್ದಕ್ಕೆ ಸಚಿವರು ಗರಂ:
    ಅಮಿತ್ ಶಾ ಕಾರ್ಯಕ್ರಮದ ಭದ್ರತೆಗಾಗಿ ಮರಗಳನ್ನ ಕಡಿದು ಹಾಕಿರುವ ವಿಚಾರ ತಿಳಿಯುತ್ತಿದ್ದಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಿಟ್ಟಾಗಿ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳನ್ನ ತರಾಟೆಗೆ ತಗೆದುಕೊಂಡಿದ್ದಾರೆ. ಮರಗಳನ್ನ ಕಡಿದಿದ್ದು ಯಾರು? ಅವರಿಗೆ ಸೂಚನೆ ಕೊಟ್ಟವರು ಯಾರು? ಎಂದು ಪ್ರಲ್ಹಾದ ಜೋಶಿ ಪಾಲಿಕೆ ಆಯುಕ್ತರನ್ನ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಮರಗಳನ್ನ ಕಡಿದಿರುವ ಬಗ್ಗೆ ಪರಿಶೀಲನೆ ನಡೆಸಿ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಲ್ಹಾದ್ ಜೋಶಿ ಸೂಚನೆ ನೀಡಿದ್ದಾರೆ.

  • ಸ್ನೇಹದ ಬದಲು ಕರಾವಳಿಯಲ್ಲಿ ಸಂಘರ್ಷ ಸೃಷ್ಟಿಸಿದ ಮುಸ್ಲಿಂ ಬಿಲ್ಲವ ಸಮಾವೇಶ

    ಸ್ನೇಹದ ಬದಲು ಕರಾವಳಿಯಲ್ಲಿ ಸಂಘರ್ಷ ಸೃಷ್ಟಿಸಿದ ಮುಸ್ಲಿಂ ಬಿಲ್ಲವ ಸಮಾವೇಶ

    ಉಡುಪಿ: ಕರಾವಳಿಯ ಪ್ರಬಲ ಸಮುದಾಯ ಬಿಲ್ಲವರ ಜೊತೆ ಮುಸಲ್ಮಾನ ಸ್ನೇಹ ಸಮ್ಮಿಲನ ಮಾಡಲು ಮಾಜಿ ಸಚಿವ ಸೊರಕೆ ಮುಂದಾಗಿದ್ದರು. ಬಿಜೆಪಿ ನಾಯಕರನ್ನು ಕರೆದು ಒಂದು ದಿನದ ಸಭೆ ನಡೆಸಲು ಚಿಂತನೆ ನಡೆಸಿದ್ದರು. ಆದರೆ ಸೊರಕೆ ಪ್ಲ್ಯಾನ್ ಎಲ್ಲಾ ಉಲ್ಟಾ ಆಗಿದ್ದು, ಬಿಲ್ಲವರೇ ತಮ್ಮ ನಾಯಕನ ವಿರುದ್ಧ ತಿರುಗಿ ಬಿದ್ದಿದ್ದಾರೆ.

    ಮುಸ್ಲಿಂ ಬಿಲ್ಲವ ಸ್ನೇಹ ಸಮ್ಮಿಲನ. ಕರಾವಳಿಯಲ್ಲಿ ಬಹಳ ಚರ್ಚೆ, ವಿವಾದಕ್ಕೆ ಕಾರಣವಾದ ಕಾರ್ಯಕ್ರಮ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಜನವರಿ 11ಕ್ಕೆ ಕಾರ್ಯಕ್ರಮ ನಡೆಯಬೇಕಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಪ್ರಬಂಧ ಮಂಡಿಸಬೇಕಿತ್ತು. ಆದರೆ ಬಿಲ್ಲವ ಮುಖಂಡರ ವಿರೋಧದಿಂದ ಕಾರ್ಯಕ್ರಮ ರದ್ದಾಗಿದೆ. ಕಾರ್ಯಕ್ರಮ ರದ್ದಾದ್ರೂ ಆಕ್ರೋಶದ ಕಿಡಿ ಕಮ್ಮಿಯಾಗಿಲ್ಲ. ಸಮಾವೇಶ ಮಾಡುವುದಾದ್ರೆ ಮಾಡಿ ನಮ್ಮದೇನೂ ತಕರಾರಿಲ್ಲ. ನಿಮ್ಮ ಸಂಪ್ರದಾಯವನ್ನು ಬಿಡುತ್ತೀರಾ? ದನಕಳ್ಳತನ ಮಾಡುವವರನ್ನು ಶಿಕ್ಷಿಸಿ ಸಮಾಜದಿಂದ ಹೊರಗಿಡ್ತೀರಾ ಎಂಬೆಲ್ಲಾ ಸವಾಲುಗಳನ್ನು ಹಾಕಿದ್ದಾರೆ.

    ಬಿಲ್ಲವ ಮುಖಂಡ ಅಚ್ಯುತ ಕಲ್ಮಾಡಿ ಮಾತನಾಡಿ, ಮುಸಲ್ಮಾನರಿಂದ ಬಿಲ್ಲವರು ಕಲಿಯುವಂತದ್ದೇನಿಲ್ಲ. ಮೊದಲು ಅವರ ಯುವಕರನ್ನು ಸರಿ ದಾರಿಗೆ ತರಲಿ ಎಂದು ಹೇಳಿದ್ದಾರೆ. ಮಾಜಿ ಸಚಿವ ಬಿಲ್ಲವ ಮುಖಂಡ ವಿನಯ್ ಕುಮಾರ್ ಸೊರಕೆ ಈ ಕಾರ್ಯಕ್ರಮದ ಅಧ್ಯಕ್ಷ. ಕೋಟ ಶ್ರೀನಿವಾಸ್ ಪೂಜಾರಿ ಕಾರ್ಯಕ್ರಮದ ಮುಖ್ಯ ಅತಿಥಿ. ವಿರೋಧ ಶುರುವಾಗುತ್ತಲೇ ಕೋಟ ಕಣದಿಂದ ಹಿಂದೆ ಸರಿದಿದ್ದರು.

    ಕೋಟ ಶ್ರೀನಿವಾಸ್ ಪೂಜಾರಿ ಹಿಂದೆ ಸರಿದ ನಂತರ ಪ್ರಮುಖ ಬಿಲ್ಲವರು ಕಾರ್ಯಕ್ರಮಕ್ಕೆ ಕೈಕೊಡುತ್ತಾ ಬಂದರು. ಆರು ತಾಲೂಕು ಮೀಟಿಂಗಲ್ಲಿ ಸಿಕ್ಕ ಬೆಂಬಲ ಕೊನೆಯ ಹಂತದವರೆಗೆ ಬಾಳಲಿಲ್ಲ. ಈ ನಡುವೆ ಸ್ನೇಹ ಸಮ್ಮಿಲನ ಸಂಘರ್ಷದ ಕಡೆ ತಿರುಗುತ್ತಿದೆ ಎಂದಾಗ ಕಾರ್ಯಕ್ರಮ ರದ್ಧಾಗಿದೆ. ವಿರೋಧ ವ್ಯಕ್ತಪಡಿಸಿದ ಬಿಲ್ಲವ ಮುಖಂಡರ ಮೇಲೆ ಸೊರಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವಿಜಯಕುಮಾರ್ ಸೊರಕೆ, ಬಿಜೆಪಿ ಮತ್ತು ಅದರ ಪರಿವಾರ ಸಂಘಟನೆಗಳಿಗೆ ಕೋಮು ಸೌಹಾರ್ದತೆ ಬೇಕಿಲ್ಲ. ಕರಾವಳಿಯ ಎರಡು ಧರ್ಮಗಳ ನಡುವೆ ಸದಾ ವೈರತ್ವ ಉಳಿಸಲು ಪ್ರಯತ್ನ ಮಾಡುವಲ್ಲಿ ಯಶಸ್ವಿಯಾಗುತ್ತಿದೆ. ಜನ ಬುದ್ಧಿವಂತರಿದ್ದಾರೆ. ಸ್ನೇಹಹಸ್ತಕ್ಕೂ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಬಿಲ್ಲವರು ಕರಾವಳಿಯ ಪ್ರಬಲ ವೋಟ್ ಬ್ಯಾಂಕ್. ಬಿಜೆಪಿ ಕಡೆ ಇರುವ ಶಕ್ತಿಯನ್ನು ಬಳಸಿ ಕಾಂಗ್ರೆಸ್ ತನ್ನೆಡೆ ಸೆಳೆಯಲು ಈ ಯತ್ನ ಮಾಡಿ ವಿಫಲವಾಗಿದೆ. ಈ ಬೆಳವಣಿಗೆ ನಂತರ ಬಿಲ್ಲವರು ಕಾಂಗ್ರೆಸ್‍ನಿಂದ ಮತ್ತಷ್ಟು ದೂರ ಉಳಿದರು ಆಶ್ಚರ್ಯವಿಲ್ಲ.

  • ಶ್ರೀಗವಿಮಠ ಕೆರೆಯಲ್ಲಿ ಸಂಭ್ರಮದ ತೆಪ್ಪೋತ್ಸವ ಕಾರ್ಯಕ್ರಮ

    ಶ್ರೀಗವಿಮಠ ಕೆರೆಯಲ್ಲಿ ಸಂಭ್ರಮದ ತೆಪ್ಪೋತ್ಸವ ಕಾರ್ಯಕ್ರಮ

    ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದು ಪ್ರಖ್ಯಾತವಾದ ಸಂಸ್ಥಾನ ಶ್ರೀ ಗವಿಮಠದ ಜಾತ್ರಾ ಮಹೋತ್ಸವ ರಥೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಜಾತ್ರೆಯ ಸಾಂಪ್ರದಾಯಿಕ ಆಕರ್ಷಣೆಗಳಲ್ಲಿ ಒಂದಾದ ತೆಪ್ಪೋತ್ಸವ ಕಾರ್ಯಕ್ರಮವೂ ಶ್ರೀ ಗವಿಮಠ ಆವರಣದಲ್ಲಿನ ಕೆರೆಯಲ್ಲಿ ಜರುಗಿತು.

    ಪೂರ್ವದಲ್ಲಿ ಶ್ರೀ ಗವಿಸಿದ್ಧೇಶ್ವರ ಪಲ್ಲಕ್ಕಿಯೂ ಕೆರೆಯ ಭವ್ಯ ವೇದಿಕೆಯಲ್ಲಿ ಆಗಮಿಸಿ ಪ್ರತಿಷ್ಠಾನಗೊಂಡ ನಂತರ ಉತ್ಸವ ಪೂಜೆಯೊಂದಿಗೆ ಆರಂಭವಾಯಿತು. ಈ ವರ್ಷದ ಕಾರ್ಯಕ್ರಮಕ್ಕೆ ಸಂಗೀತ ಸುಧೆಯನ್ನು ಹರಿಸಲು ‘ಸರಿಗಮಪ’ ಖ್ಯಾತಿಯ ಅರ್ಜುನ್ ಇಟಗಿ, ಮಾನ್ಯ ಪಾಟೀಲ, ಸಂಗೀತಾ ಹಾಗೂ ಶ್ರೀಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಜರುಗಿತ್ತು. ನಂತರ ಪೂಜ್ಯ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ನಂತರ ಸುಮಾರು ವರ್ಷಗಳ ಹಿಂದೆ ಕುಷ್ಠ ರೋಗಕ್ಕೆ ತುತ್ತಾಗಿ ಊರ ಜನರಿಂದ ತಾತ್ಸಾರಕ್ಕೆ ಒಳಗಾಗಿ ಈಶಪ್ಪ ಎಂಬವರು ಊರಿನ ಹೊರಗೆ ಉಳಿದಿದ್ದರು. ಶ್ರೀ ಶಿವಶಾಂತವೀರ ಪೂಜ್ಯರ ಕೃಪಾಕಟಾಕ್ಷದಿಂದ ಗುಣಮುಖನಾಗಿ, ಪ್ರಸ್ತುತ ಯಾವ ರೋಗವು ಇಲ್ಲದೆ ಆರೋಗ್ಯವಾಗಿರುವ ಈಶಪ್ಪ ಮತ್ತು ದಾಕ್ಷಾಯಣಿ ದಂಪತಿ ಪೂಜೆ ಸಲ್ಲಿಸುವುದರ ಮೂಲಕ ತೆಪ್ಪೋತ್ಸವಕ್ಕೆ ಚಾಲನೆಯನ್ನು ನೀಡಿದ್ದು ಈ ವರ್ಷದ ಜಾತ್ರಾ ವಿಶೇಷವಾಗಿತ್ತು.

    ಸುಂದರ ವಾತಾವರಣದ ಶುಭ ಸಂಜೆ ಸೂರ್ಯನ ಬಂಗಾರ ಕಿರಣ ನಿರ್ಗಮನ, ಚಂದ್ರನ ಬೆಳ್ಳಿ ಕಿರಣಗಳ ಬೆಳಕಿನ ಆಗಮನದಲ್ಲಿ ನಡೆಯುವ ಈ ಮಹೋತ್ಸವ ಭಕ್ತರನ್ನು ಆನಂದದ ಭಕ್ತಿಯಲ್ಲಿ ತೇಲಾಡಿ ಮಂತ್ರಮುಗ್ಧಗೊಳಿಸಿತ್ತು. ಪ್ರಾಕೃತಿಕ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಶೃಂಗಾರಗೊಂಡ ಶ್ರೀ ಗವಿಮಠದ ಆವರಣದಲ್ಲಿ ವೈಶಂಪಾಯನ ಸರೋವರದಂತೆ ಕಾಣುವ ಶ್ರೀ ಮಠದ ಕೆರೆಯೂ ನೋಡಲು ಸುಂದರವಾಗಿತ್ತು. ನಿಸರ್ಗದ ಕಣ್ಮನ ಸೆಳೆಯುವ ಕೆರೆಯಲ್ಲಿ ಸುಂದರ ಮಧುವಣಗಿತ್ತಿಯಂತೆ ಶೃಂಗಾರಗೊಂಡ ತೆಪ್ಪವು ದೈವದ ತೊಟ್ಟಿಲಿನಂತೆ ತೇಲುತ್ತಾ ಶ್ರೀ ಗವಿಸಿದ್ಧೇಶ್ವರನ ಭವ್ಯ ಮೂರ್ತಿಯನ್ನು ತನ್ನ ಮಡಿಲಲ್ಲಿ ಸ್ವೀಕರಿಸಿ ತೂಗುತ್ತಾ ಭಕ್ತರ ಮನಗಳನ್ನು ತಣಿಸಿತ್ತು. ಸುಗಂಧ ಭರಿತ ಪುಷ್ಪಗಳಿಂದ ಅಲಂಕಾರಗೊಂಡ ತೆಪ್ಪವು ನೋಡಲು ಸುಂದರ ಮನೋಹರವಾಗಿತ್ತು.

    ಇನ್ನೂ ಕೆರೆಯ ಸುತ್ತಲೂ ಪ್ರದಕ್ಷಿಣೆ ಹಾಕುವಾಗ ಬಳಗಾನೂರ ಚಿಕೇನಕೊಪ್ಪದ ಶ್ರೀ ಶಿವಶರಣರ ಕಂಠದಿಂದ ನಾದಮಯವಾಗಿ ಹೊರಹೊಮ್ಮುವ ಶ್ರೀ ಗವಿಸಿದ್ಧೇಶ್ವರ ಪಾಹಿಮಾಮ್ ಪಾಹಿಮಾಮ್ ಎನ್ನುವ ಸ್ತೋತ್ರ ಕರ್ಣಸ್ಪರ್ಶವಾದಾಗ ಸಾಕ್ಷಾತ್ ಶ್ರೀ ಗವಿಸಿದ್ಧೇಶ್ವರ ಎಲ್ಲ ಭಕ್ತರನ್ನು ಹರಸುತ್ತಿದ್ದಾನೆ ಎಂಬ ಭಾವ ಭಕ್ತರಲ್ಲಿ ಮೂಡಿತ್ತು. ಪರಮಾನಂದ ಭಾವದಿಂದ ನೆರೆದಿದ್ದ ಕೆರೆಯ ಸುತ್ತಮುತ್ತ ಸುಮಾರು 12 ರಿಂದ 15 ಸಾವಿರಕ್ಕಿಂತ ಹೆಚ್ಚು ಭಕ್ತ ಜನಸ್ತೋಮ ತೆಪ್ಪೋತ್ಸವ ವೀಕ್ಷಿಸಿ ಪುನಿತರಾದರು.

  • ಕಾರ್ಯಕ್ರಮದಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಉತ್ತರ ಕನ್ನಡ ಡಿಸಿ

    ಕಾರ್ಯಕ್ರಮದಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಉತ್ತರ ಕನ್ನಡ ಡಿಸಿ

    ಕಾರವಾರ: ನಗರದ ವಾರ್ತಾ ಇಲಾಖೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಅವರು ಲೋ ಬಿಪಿಯಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

    ವಾರ್ತಾ ಇಲಾಖೆಯ ವಾರ್ತಾ ಸ್ಪಂದನ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ವೈದ್ಯರ ಜೊತೆ ಫೋನ್ ಇನ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಭಾಗವಹಿಸಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಕುಳಿತಾಗಲೇ ಪ್ರಜ್ಞೆ ತಪ್ಪಿ ಬಿದ್ದಿದ್ದು, ತಕ್ಷಣ ಸ್ಥಳದಲ್ಲಿದ್ದ ವೈದ್ಯರು ಅವರಿಗೆ ಪ್ರಥಮ ಚಿಕಿತ್ಸೆ ನೀಡಿದರು.

    ಪ್ರಥಮ ಚಿಕಿತ್ಸೆ ನೀಡಿದ ಕೆಲ ಸಮಯದ ನಂತರ ಚೇತರಿಸಿಕೊಂಡ ಡಿಸಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಆದರೆ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಹರೀಶ್ ಕುಮಾರ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಟಾಲಿವುಡ್‍ನಲ್ಲಿ ರಶ್ಮಿಕಾ ಹಿಗ್ಗಾಮುಗ್ಗ  ಟ್ರೋಲ್

    ಟಾಲಿವುಡ್‍ನಲ್ಲಿ ರಶ್ಮಿಕಾ ಹಿಗ್ಗಾಮುಗ್ಗ ಟ್ರೋಲ್

    ಹೈದರಾಬಾದ್: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಒಂದಲ್ಲಾ ಒಂದು ವಿಷಯಕ್ಕೆ ಟ್ರೋಲ್ ಆಗುತ್ತಿದ್ದಾರೆ. ಇಷ್ಟು ದಿನ ಸ್ಯಾಂಡಲ್‍ವುಡ್‍ನಲ್ಲಿ ಟ್ರೋಲ್ ಆಗುತ್ತಿದ್ದ ರಶ್ಮಿಕಾ ಇದೀಗ ಟಾಲಿವುಡ್‍ನಲ್ಲೂ ಸಾಕಷ್ಟು ಟ್ರೋಲ್‍ಗೆ ಒಳಗಾಗಿದ್ದಾರೆ.

    ಇತ್ತೀಚೆಗೆ ರಶ್ಮಿಕಾ, ಪ್ರಿನ್ಸ್ ಮಹೇಶ್ ಬಾಬು ಅವರ ಜೊತೆ ನಟಿಸಿದ ‘ಸರಿಲೇರು ನೀಕ್ಕೆವ್ವರು’ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ವೇದಿಕೆ ಮೇಲೆ ರಶ್ಮಿಕಾ ಭಾಷಣ ಕೇಳಿ ತೆಲುಗು ಪ್ರೇಕ್ಷಕರು ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

    ಚಿತ್ರ ಟ್ರೈಲರ್ ಬಿಡುಗಡೆ ವೇಳೆ ರಶ್ಮಿಕಾ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸದ್ಯ ಈ ವಿಡಿಯೋ ನೋಡಿದ ಪ್ರೇಕ್ಷಕರು ಅವರಿಗೆ ‘ಓವರ್ ಆಕ್ಟಿಂಗ್’, ‘ಓವರ್ ಆ್ಯಕ್ಟಿಂಗ್‍ಗೆ ಮುಖ ಏನಾದರೂ ಇದ್ದರೆ ಅದು ರಶ್ಮಿಕಾ ರೀತಿ ಇರುತಿತ್ತು’ ಎಂದು ಸಾಕಷ್ಟು ಟ್ರೋಲ್ ಮಾಡುತ್ತಿದ್ದಾರೆ.

    ಮಹೇಶ್ ಬಾಬು ಅವರು ಟ್ರೈಲರ್ ಬಿಡುಗಡೆಯ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್‍ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ನೋಡಿ ಪ್ರೇಕ್ಷಕರು ಕಮೆಂಟ್ ಮಾಡುವ ಮೂಲಕ ರಶ್ಮಿಕಾ ಅವರ ಕಾಲೆಳೆಯುತ್ತಿದ್ದಾರೆ.

    ಈ ವಿಡಿಯೋ ನೋಡಿ ಕೆಲವರು, ಓವರ್ ಆ್ಯಕ್ಟಿಂಗ್ ಅವಾರ್ಡ್ ಗೋಸ್ ಟು ರಶ್ಮಿಕಾ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, ಏನ್ ಡವ್ ಮಾಡ್ತಾಳೆ ಗುರು ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಮೆಗಾ ಸ್ಟಾರ್ ಚಿರಂಜೀವಿ ಅವರ ಮುಂದೆ ಹೇಗೆ ನಡೆದುಕೊಳ್ಳಬೇಕು ಎಂಬುದು ರಶ್ಮಿಕಾಗೆ ಗೊತ್ತಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.

    ರಶ್ಮಿಕಾ ಅವರನ್ನು ಟ್ರೋಲ್ ಮಾಡುತ್ತಿದ್ದಂತೆ ಅವರ ಅಭಿಮಾನಿಗಳು ನಟಿ ಪರ ಬ್ಯಾಟ್ ಬೀಸಿದ್ದಾರೆ. ನಟಿಯರಾದ ಹನ್ಸಿಕಾ, ಕಾಜಲ್, ರಕುಲ್ ಅವರೇ ತೆಲುಗುವಿನಲ್ಲಿ ಮಾತನಾಡುವುದಿಲ್ಲ. ಆದರೆ ರಶ್ಮಿಕಾ ಹಾಗೂ ಸಾಯಿ ಪಲ್ಲವಿ ಟಾಲಿವುಡ್‍ಗೆ ಬಂದು ತೆಲುಗು ಮಾತನಾಡುವುದನ್ನು ಕಲಿತಿದ್ದಾರೆ ಎಂದು ಕಿರಿಕ್ ಬೆಡಗಿಗೆ ಸಪೋರ್ಟ್ ಮಾಡಿದ್ದಾರೆ.

  • ವಿಜಯನಗರ ಗತವೈಭವ ಸಾರೋ ಹಂಪಿ ಉತ್ಸವಕ್ಕೆ ಕ್ಷಣಗಣನೆ

    ವಿಜಯನಗರ ಗತವೈಭವ ಸಾರೋ ಹಂಪಿ ಉತ್ಸವಕ್ಕೆ ಕ್ಷಣಗಣನೆ

    – ಜನವರಿ 10, 11ರಂದು ಹಂಪಿ ಉತ್ಸವ
    – ಮಂಗಳಮುಖಿ & ಅಂಗವಿಕಲರಿಂದಲೂ ಕಾರ್ಯಕ್ರಮ

    ಬಳ್ಳಾರಿ: ಹಲವು ಅಡೆತಡೆಗಳ ಮಧ್ಯೆ ಕಳೆದ ವರ್ಷ ಮುಂದೂಡಿದ್ದ ಹಂಪಿ ಉತ್ಸವವನ್ನು ಇದೀಗ ಜನವರಿ 10 ಮತ್ತು 11ರಂದು ಮಾಡಲು ನಿರ್ಧಾರ ಮಾಡಲಾಗಿದ್ದು, ಉತ್ಸವಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ.

    ಈ ಬಾರಿಯ ಹಂಪಿ ಉತ್ಸವಕ್ಕೆ ಬರುವ ಪ್ರವಾಸಿಗರನ್ನು ಮತ್ತು ಪ್ರೇಕ್ಷಕರನ್ನು ರಂಜಿಸಲು ಸ್ಥಳೀಯ ಕಲಾವಿದರು ಸೇರಿದಂತೆ ಸ್ಯಾಂಡಲ್‍ವುಡ್ ಮತ್ತು ಬಾಲಿವುಡ್‍ನ ಹತ್ತು-ಹಲವು ಗಾಯಕರು ಉತ್ಸವದಲ್ಲಿ ಕಾರ್ಯಕ್ರಮ ನೀಡಲಿದ್ದಾರೆ. ಇದನ್ನೂ ಓದಿ: ಹಂಪಿ ಉತ್ಸವಕ್ಕೆ ಕ್ಷಣ ಗಣನೆ: ತುಂಗಭದ್ರಾ ನದಿಗೆ ಬಾಗಿನ ಅರ್ಪಿಸಿದ ಲಕ್ಷ್ಮಣ ಸವದಿ

    ಪ್ರತಿ ವರ್ಷದಂತೆ ಈ ಬಾರಿಯೂ ಹಂಪಿ ಉತ್ಸವದಲ್ಲಿ ಹೊಸ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ರಾಜ್ಯದಲ್ಲಿ ಒಂದು ಕಡೆ ನೆರೆ ಮತ್ತೊಂದು ಕಡೆ ಬರ ಹಿನ್ನೆಲೆಯಲ್ಲಿ ಮೂರು ದಿನಗಳ ಉತ್ಸವವನ್ನು ಎರಡು ದಿನ ಮಾತ್ರ ಮಾಡಲಾಗುತ್ತಿದೆ. ಈ ಬಾರಿ ವಿಶೇಷ ಎನ್ನುವಂತೆ ಮುಂಗಾರು ಮಳೆ ಖ್ಯಾತಿಯ ಸಂಗೀತಗಾರ ಮನೋಮೂರ್ತಿ, ಮುಂಬೈನ ಖ್ಯಾತ ಹಿನ್ನಲೆ ಗಾಯಕಿ ನೀತಿ ಮೋಹನ್ ತಂಡ ಹಾಗೂ ಬೆಂಗಳೂರಿನ ಸುಪ್ರಿಯ ಲೋಹಿತ್ ತಂಡದಿಂದ ಹಾಡುಗಾರಿಕೆ ಇದೆ. ಇದರ ಜೊತೆಗೆ ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅವರ ಹಾಸ್ಯದ ಹೊನಲು, ಚಿತ್ರಸಂತೆ, ಫಿಶ್ ಅಕ್ವೇರಿಯಾ ಟೂನಲ್, ಮತ್ಸ್ಯಮೇಳ, ಹಂಪಿ ಬೈಸ್ಕೈ ಕಾರ್ಯಕ್ರಮಗಳು ಮನೋರಂಜನೆ ನೀಡಲಿದೆ.

    ಉತ್ಸವಕ್ಕಾಗಿ ಒಟ್ಟು 4 ವೇದಿಕೆಗಳನ್ನು ನಿರ್ಮಿಸಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಹಂಪಿ ಉತ್ಸವವನ್ನು ಉದ್ಘಾಟಿಸಲಿದ್ದಾರೆ. 120ಕ್ಕೂ ಹೆಚ್ಚು ಮಂದಿ ಕಲಾವಿದರು ವಿವಿಧ ವೇದಿಕೆಗಳಲ್ಲಿ ತಮ್ಮ ಕಾರ್ಯಕ್ರಮಗಳು ನೀಡಲಿದ್ದಾರೆ. ಈ ಬಾರಿಯ ಹಂಪಿ ಉತ್ಸವದಲ್ಲಿ ಮಂಗಳಮುಖಿಯರಿಗೆ ವಿಶೇಷ ಅವಕಾಶ ಕಲ್ಪಿಸಲಾಗಿದ್ದು, ಅವರು ಒಂದು ನಾಟಕ, ಜೋಗತಿ ಕುಣಿತ ಸೇರಿದಂತೆ ಹಿಂದೂಸ್ತಾನಿ ಗಾಯನ ಕಾರ್ಯಕ್ರಮ ನೀಡಲಿದ್ದಾರೆ.

    ಅಷ್ಟೇ ಅಲ್ಲದೆ ವಿಕಲಚೇತನರಿಗೆ ಸಮೂಹ ನೃತ್ಯ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಇನ್ನೂ 7 ದಿನಗಳ ಕಾಲ ವಿಜಯನಗರ ವೈಭವ ಕಥಾಹಂಗಮ ಧ್ವನಿ ಮತ್ತು ಬೆಳಕು ಪ್ರದರ್ಶನಗೊಳ್ಳಲಿದೆ. ಇದರ ಜೊತೆಗೆ ಹೆಲಿಕಾಪ್ಟರ್‌ನಲ್ಲಿ ಹಂಪಿಯನ್ನು ನೋಡುವ ಹಂಪಿ ಬೈಸ್ಕೈ ವಿಶೇಷವಾಗಿದೆ. ಹಾಗೆಯೇ ಭದ್ರತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

    ಹಂಪಿ ಉತ್ಸವವನ್ನು ನೋಡಲು ದೇಶ-ವಿದೇಶಗಳಿಂದ ಪ್ರವಾಸಿಗರು ಬರುವ ನಿರೀಕ್ಷೆಯಿದೆ. ಆದರೆ ಪದೇ ಪದೇ ಉತ್ಸವದ ದಿನಾಂಕ ಬದಲಾಣೆಯಾಗುತ್ತಿರುವ ಹಿನ್ನಲೆ ಈ ಬಾರಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಬಹುದು ಎನ್ನಲಾಗುತ್ತಿದೆ.

  • ಬೆಂಗ್ಳೂರಿಗೆ ಪ್ರಧಾನಿ – ರೋಡ್‍ಗಳಿಗೆ ದಿಢೀರ್ ಬಣ್ಣ ಬಳಿದು ಹೂಕುಂಡ ನೆಟ್ಟ ಬಿಬಿಎಂಪಿ

    ಬೆಂಗ್ಳೂರಿಗೆ ಪ್ರಧಾನಿ – ರೋಡ್‍ಗಳಿಗೆ ದಿಢೀರ್ ಬಣ್ಣ ಬಳಿದು ಹೂಕುಂಡ ನೆಟ್ಟ ಬಿಬಿಎಂಪಿ

    ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಇಂದು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಹಲವೆಡೆ ರಸ್ತೆಗಳ ಶೃಂಗಾರ ಕೆಲಸ ಆರಂಭಗೊಂಡಿದೆ. ಮೋದಿ ಸಂಚಾರ ಮಾಡುವ ರಸ್ತೆಗಳ ಕಾಮಗಾರಿಗಳನ್ನು ತರಾತುರಿಯಲ್ಲಿ ಬಿಬಿಎಂಪಿ ಕೈಗೆತ್ತಿಕೊಂಡಿದೆ.

    ನಗರದ ಡಿಆರ್ ಡಿಓ ಆವರಣ, ರಾಜಭವನ ಹಾಗೂ ಜಿಕೆವಿಕೆಯಲ್ಲಿ ಮೋದಿ ಅವರ ಕಾರ್ಯಕ್ರಮ ಆಯೋಜನೆಯಾಗಿದೆ. ಹೀಗಾಗಿ ಈ ರಸ್ತೆಗಳಿಗೆ ಸಂಪರ್ಕ ನೀಡುವ ಮಾರ್ಗಗಳನ್ನು ಬಿಬಿಎಂಪಿ ಚೆಂದಗೊಳಿಸುತ್ತಿದೆ.

    ಎಚ್‍ಎಎಲ್, ಮುರುಗೇಶ್ ಪಾಳ್ಯ, ಮಣಿಪಾಲ್ ರಸ್ತೆ, ದೊಮ್ಮಲೂರು, ಟ್ರಿನಿಟಿ ಸರ್ಕಲ್, ಎಂಜಿ ರೋಡ್, ರಾಜಭವನ, ಡಿ ಆರ್ ಡಿಓ ಕಚೇರಿ ರಸ್ತೆಗಳಲ್ಲಿ ಕಾಮಗಾರಿ ನಡೆದಿದೆ. ಈ ಎಲ್ಲಾ ರಸ್ತೆಗಳಲ್ಲಿ ಡಿವೈಡರ್ ಪೇಂಟಿಂಗ್, ಟ್ರೀ ಟ್ರಿಮ್ಮಿಂಗ್, ಜೀಬ್ರಾ ಕ್ರಾಸ್ ಪೇಂಟಿಂಗ್, ಸ್ಟ್ರೀಟ್ ಲೈಟ್ ಸರಿಪಡಿಸುವುದು ಹಾಗೂ ಗುಂಡಿ ಮುಚ್ಚುವ ಕಾಮಗಾರಿಗಳನ್ನು ಮಾಡಲಾಗುತ್ತಿದೆ.

    ಬರೋಬ್ಬರಿ ರಸ್ತೆ ರಿಪೇರಿಗಾಗಿಯೇ ಒಂದೂವರೆ ಕೋಟಿ ರೂ.ಗಳನ್ನು ಬಿಬಿಎಂಪಿ ಖರ್ಚು ಮಾಡುತ್ತಿದೆ. ಉಳಿದಂತೆ ಇತರೆ ಕಾಮಗಾರಿ ಲೆಕ್ಕದಲ್ಲಿ ಒಂದೂವರೆ ಕೋಟಿ ರೂ. ಖರ್ಚಾಗುತ್ತಿದೆ. ಅದರಲ್ಲೂ ರಾಜಭವನ ರಸ್ತೆಯಲ್ಲಿ ಇಕ್ಕೆಲಗಳನ್ನು ಅಗೆಯಲಾಗಿದೆ. ಇವತ್ತಿವರೆಗೂ ಪಾಲಿಕೆ ಸೂಚನ ಫಲಕವೇ ಹಾಕುತ್ತಿರಲಿಲ್ಲ. ಆದರೆ ಈಗ ಹಳ್ಳ ಕಾಣದಂತೆ ಟರ್ಪಲ್ ಸಹ ಹಾಕಿ ಮುಚ್ಚಲಾಗಿದೆ.

    ಇಂದು ಮಧ್ಯಾಹ್ನ ಸುಮಾರು 2.10ಕ್ಕೆ ತುಮಕೂರು ವಿವಿ ಹೆಲಿಪ್ಯಾಡ್‍ಗೆ ಆಗಮಿಸಲಿರುವ ಪ್ರಧಾನಿ ಮೋದಿ, ಮೊದಲು ಸಿದ್ದಗಂಗಾ ಮಠಕ್ಕೆ ಭೇಟಿ ಕೊಡಲಿದ್ದಾರೆ. ಲಿಂಗೈಕ್ಯ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಮಾಡಿ ಪೂಜೆ ನೆರವೇರಿಸಲಿದ್ದಾರೆ. ಭೇಟಿ ಸ್ಮರಣಾರ್ಥ ಗದ್ದುಗೆ ಪಕ್ಕದಲ್ಲಿ ಬಿಲ್ವಪತ್ರೆ ಗಿಡ ನೆಡಲಿದ್ದಾರೆ. ಶಿವಕುಮಾರ ಶ್ರೀಗಳ ವಸ್ತು ಸಂಗ್ರಹಾಲಯಕ್ಕೆ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಠದ ವಿದ್ಯಾರ್ಥಿಗಳ ಜೊತೆ ಮಾತನಾಡಲಿದ್ದಾರೆ. ಆ ಬಳಿಕ ತುಮಕೂರು ಕಾರ್ಯಕ್ರಮದಲ್ಲಿ ಭಾಗವಹಿಸಿ ಬೆಂಗಳೂರಿಗೆ ಆಗಮಿಸಲಿದ್ದಾರೆ.

  • 1 ಗಂಟೆ ಡ್ಯಾನ್ಸ್‌ಗೆ ಬರೋಬ್ಬರಿ 3 ಕೋಟಿ ಸಂಭಾವನೆ ಪಡೆದ ಐರಾವತ ಬೆಡಗಿ

    1 ಗಂಟೆ ಡ್ಯಾನ್ಸ್‌ಗೆ ಬರೋಬ್ಬರಿ 3 ಕೋಟಿ ಸಂಭಾವನೆ ಪಡೆದ ಐರಾವತ ಬೆಡಗಿ

    ಮುಂಬೈ: ಐರಾವತ ಬೆಡಗಿ ಊರ್ವಶಿ ರೌಟೇಲಾ ಕಾರ್ಯಕ್ರಮವೊಂದರಲ್ಲಿ ಒಂದು ಗಂಟೆ ಡ್ಯಾನ್ಸ್ ಮಾಡಲು ಬರೋಬ್ಬರಿ 3 ಕೋಟಿ ರೂ. ಸಂಭಾವನೆ ಆಗಿ ಪಡೆದಿದ್ದಾರೆ.

    ಡಿಸೆಂಬರ್ 31ರ ರಾತ್ರಿ ಮಹಾರಾಷ್ಟ್ರದ ಪುಣೆಯಲ್ಲಿ ಹೊಸ ವರ್ಷ ಆಚರಿಸಲು ಬಾಲಿವುಡ್ ಕಾರ್ನಿವಲ್ 2020 ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಒಂದು ಗಂಟೆ ಡ್ಯಾನ್ಸ್ ಮಾಡಲು ಊರ್ವಶಿ 3 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ.

    ವರದಿಗಳ ಪ್ರಕಾರ, ಇದುವರೆಗೂ ಶಾರುಖ್ ಖಾನ್, ಸಲ್ಮಾನ್ ಖಾನ್ ಸೇರಿದಂತೆ ಇತರ ಕಲಾವಿದರು ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡಲು ಇಷ್ಟು ದೊಡ್ಡ ಮೊತ್ತವನ್ನು ಸಂಭಾವನೆಯಾಗಿ ಪಡೆದಿಲ್ಲ ಎಂದು ಹೇಳಲಾಗುತ್ತಿದೆ. ಸದ್ಯ 3 ಕೋಟಿ ಸಂಭಾವನೆ ಪಡೆಯುವ ಮೂಲಕ ಊರ್ವಶಿ ಬೇರೆ ಕಲಾವಿದರ ದಾಖಲೆಯನ್ನೇ ಮುರಿದಿದ್ದಾರೆ.

    ಹೊಸ ವರ್ಷದ ಕಾರ್ಯಕ್ರಮದಲ್ಲಿ ಊರ್ವಶಿ, ‘ಡ್ಯಾಡಿ ಮಮ್ಮಿ’, ‘ಹಸಿನೋ ಕಾ ದೀವಾನಾ’ ಹಾಗೂ ತಾವು ನಟಿಸಿದ ‘ಪಾಗಲ್‍ಪಂತಿ’ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಡ್ಯಾನ್ಸ್ ಮಾಡುವ ಮೊದಲು ಊರ್ವಶಿ ತಮ್ಮ ಇನ್‍ಸ್ಟಾದಲ್ಲಿ ವಿಡಿಯೋ ಹಾಕುವ ಮೂಲಕ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದರು.

    ಊರ್ವಶಿ ಕೊನೆಯದಾಗಿ ಪಾಗಲ್‍ಪಂತಿ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಅವರನ್ನು ಹೊರತುಪಡಿಸಿ ನಟ ಜಾನ್ ಅಬ್ರಾಹಂ, ಅನಿಲ್ ಕಪೂರ್, ಅರ್ಷದ್ ವಾರ್ಸಿ, ಕೃತಿ ಕರಾಬಂಧ, ಇಲಿಯಾನಾ ಡಿಕ್ರೂಸ್ ನಟಿಸಿದ್ದರು. ಈ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಸದ್ದು ಮಾಡಲಿಲ್ಲ.