Tag: ಕಾರಣ

  • ಟಿ-20 ವಿಶ್ವಕಪ್ ಆಡಬೇಕೆಂದಿದ್ದ ಧೋನಿ ಸಡನ್ ನಿವೃತ್ತಿ ಘೋಷಿಸಿದ್ದು ಯಾಕೆ?

    ಟಿ-20 ವಿಶ್ವಕಪ್ ಆಡಬೇಕೆಂದಿದ್ದ ಧೋನಿ ಸಡನ್ ನಿವೃತ್ತಿ ಘೋಷಿಸಿದ್ದು ಯಾಕೆ?

    ನವದೆಹಲಿ: ಟಿ-20 ವಿಶ್ವಕಪ್ ಆಡಿ ನಿವೃತ್ತಿ ಆಗಬೇಕು ಎಂದುಕೊಂಡಿದ್ದ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಶನಿವಾರ ಸಂಜೆ ಡಿಢೀರ್‌ ನಿವೃತ್ತಿ ಘೋಷಣೆ ಮಾಡಿದ್ದಾರೆ.

    ಶನಿವಾರ ಸಂಜೆ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ಧೋನಿಯವರು ತಮ್ಮ ನಿವೃತ್ತಿಯನ್ನು ಘೋಷಣೆ ಮಾಡಿದ್ದರು. ಈ ಮೂಲಕ ಟಿ-20 ವಿಶ್ವಕಪ್ ಆಡುತ್ತಾರೆ ಎಂದು ಅಂದುಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಆದರೆ ಟಿ-20 ವಿಶ್ವಕಪ್ ಆಡುವ ಪ್ಲಾನ್‍ನಲ್ಲಿ ಇದ್ದ ಧೋನಿ ಸಡನ್ ಆಗಿ ನಿವೃತ್ತಿ ಹೊಂದಲು ಕಾರಣ ತಿಳಿದು ಬಂದಿದೆ.

    ಧೋನಿಯವರ ಅಪ್ತ ವಲಯದಿಂದ ಬಂದ ಮಾಹಿತಿ ಪ್ರಕಾರ, ಧೋನಿ ಈ ವರ್ಷ ನಡೆಯಬೇಕಿದ್ದ ಟಿ-20 ವಿಶ್ವಕಪ್‍ನಲ್ಲಿ ಆಡಲು ತೀರ್ಮಾನಿಸಿದ್ದರು. ಆದರೆ ಕೊರೊನಾ ವೈರಸ್ ಕಾರಣದಿಂದ ಟಿ-20 ವಿಶ್ವಕಪ್ ಅನ್ನು ಐಸಿಸಿ ಮುಂದೂಡಿತ್ತು. ಆದರೆ ಈಗ ಟಿ-20 ವಿಶ್ವಕಪ್ ಅನ್ನು ಐಸಿಸಿ 2022ಕ್ಕೆ ನಡೆಸಲು ತೀರ್ಮಾನ ಮಾಡಿದೆ. ಹೀಗಾಗಿ ಧೋನಿಯವರು ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದಾರೆ ಎಂದು ಹೇಳಲಾಗಿದೆ.

    ಕಳೆದ ವಿಶ್ವಕಪ್ ಸೈಮಿ ಫೈನಲ್ ಪಂದ್ಯದ ನಂತರ ಕ್ರಿಕೆಟ್‍ನಿಂದ ದೂರ ಉಳಿದಿದ್ದ ಧೋನಿಯವರು, ವಿದಾಯ ಘೋಷಿಸುವ ಯಾವುದೇ ಸುಳಿವನ್ನು ನೀಡಿರಲಿಲ್ಲ. ಆದರೆ ಶನಿವಾರ ಸಂಜೆ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ವಿದಾಯ ಸುದ್ದಿ ನೀಡಿದ್ದಾರೆ. ಈ ಮೂಲಕ ಧೋನಿಯನ್ನು ಮತ್ತೆ ನೀಲಿ ಜೆರ್ಸಿಯಲ್ಲಿ ನೋಡ ಬಯಸಿದ್ದ ಅವರ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಆದರೆ ಅವರು ಈ ಬಾರಿಯ ಐಪಿಎಲ್‍ನಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಅಭಿಮಾನಿಗಳು ಧೋನಿಯನ್ನು ಮೈದಾನದಲ್ಲಿ ನೋಡು ಕಾತುರದಿಂದ ಕಾಯುತ್ತಿದ್ದಾರೆ.

    ಧೋನಿ ಈ ವರೆಗೆ 350 ಏಕದಿನ ಹಾಗೂ 98 ಟಿ-20 ಪಂದ್ಯಗಳನ್ನು ಆಡಿದ್ದಾರೆ. 350 ಏಕದಿನ ಪಂದ್ಯಗಳಲ್ಲಿ ಧೋನಿ 10,773 ರನ್‍ಗಳನ್ನು ಕಲೆ ಹಾಕಿದ್ದಾರೆ. 10 ಶತಗಳನ್ನು ಬಾರಿಸಿದ್ದಾರೆ. ಅಲ್ಲದೆ, 73 ಅರ್ಧ ಶತಕ ಹೊಡೆದಿದ್ದಾರೆ. ಅಲ್ಲದೆ 98 ಟಿ-20 ಪಂದ್ಯಗಳಲ್ಲಿ 1,617 ರನ್‍ಗಳನ್ನು ಗಳಿಸಿದ್ದು, ಎರಡು ಅರ್ಧ ಶತಕ ಬಾರಿಸಿದ್ದಾರೆ.

  • ಟಾರ್ಗೆಟ್ ಮಾಡಿಲ್ಲ, ಐಟಿ ದಾಳಿಗೆ ಕಾರಣ ಇರುತ್ತೆ: ನಟ ಸುದೀಪ್

    ಟಾರ್ಗೆಟ್ ಮಾಡಿಲ್ಲ, ಐಟಿ ದಾಳಿಗೆ ಕಾರಣ ಇರುತ್ತೆ: ನಟ ಸುದೀಪ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ನಟ, ನಿರ್ಮಾಪಕರ ಮೇಲೆ ನಡೆದ ಐಟಿ ದಾಳಿಯಾದ ಬಳಿಕ ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದು, ಯಾರೂ ಟಾರ್ಗೆಟ್ ಮಾಡಿಲ್ಲ ಅವರು ಮಾಡಿರೋದನ್ನು ಪ್ರಶಂಸೆ ಮಾಡಬೇಕು ಎಂದು ಹೇಳಿದ್ದಾರೆ.

    ನಿರ್ದೇಶಕರ ಸಂಘದ ಉದ್ಘಾಟನೆಗೆ ತಡವಾಗಿ ಆಗಮಿಸಿದ ಸುದೀಪ್, ಕಾರ್ಯಕ್ರಮ ಇದೆ ಎನ್ನುವುದನ್ನೇ ಮರೆತುಬಿಟ್ಟು ಊರಿಗೆ ಹೊರಟಿದ್ದೆ. ಎರಡು ದಿನಗಳಿಂದ ತುಂಬಾ ಬ್ಯುಸಿ ಇದ್ದೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಬಳಿಕ ಕಾರ್ಯಕ್ರಮಕ್ಕೆ ಬರುವುದಾಗಿ ಮಾತು ಕೊಟ್ಟಿದ್ದೆ ಆದರೆ ತಡವಾಗಿದೆ. ಮರೆತಿದ್ದಕ್ಕೆ ಕ್ಷಮೆಯಿರಲಿ ಎಂದರು.

    ಐಟಿ ಅಧಿಕಾರಿಗಳು ದಾಳಿ ನಡೆಸಿರುವ ಹಿಂದೆ ಏನೋ ಕಾರಣ ಇರುತ್ತದೆ. ರೈಡ್ ಮಾಡಿದ ತಕ್ಷಣ ಅವರನ್ನು ವಿಲನ್ ಗಳಾಗಿ ನೋಡಲು ಆಗುವುದಿಲ್ಲ. ಆದರೆ ಸದ್ಯ ಊಹಾಪೋಹಗಳು ಹೆಚ್ಚಾಗಿದ್ದು, ನನಗೆ ಇದು ಮೊದಲ ಅನುಭವ.  ನಾವು ಸರಿಯಾಗಿದ್ದರೆ ಭಯ ಪಡುವ ಅವಶ್ಯಕತೆಯೇ ಇಲ್ಲ ಎಂದು ತಿಳಿಸಿದರು.

    ಇದೇ ವೇಳೆ ನಿರ್ದೇಶಕ ಸಂಘದ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಲು ಸಿದ್ಧ ಎಂದು ತಿಳಿಸಿದ ಸುದೀಪ್, ಚಿತ್ರರಂಗದಲ್ಲಿ ಯಾವುದೇ ಸಿನಿಮಾ ಗೆದ್ದರು ಆದರ ಕ್ರೆಡಿಟ್ ಸಿಗಬೇಕಾಗಿದ್ದು ನಿರ್ದೇಶಕರಿಗೆ. ಆದರೆ, ನಿರ್ದೇಶಕರಿಗೆ ಆದರ ಕ್ರೆಡಿಟ್ ಸಿಗುವುದಿಲ್ಲ. ನನಗೂ ನಿರ್ದೇಶಕರ ಸಂಘದ ಕಾರ್ಡ್ ಇರುವುದು ಹೆಮ್ಮೆ ಎನಿಸಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬ್ರೇಕಪ್ ನನಗೆ ಒಂದು ಆಶೀರ್ವಾದ ಇದ್ದಂತೆ – 2 ವರ್ಷದ ನಂತ್ರ ನಟನ ಬಗ್ಗೆ ಮೌನ ಮುರಿದ ಕತ್ರಿನಾ

    ಬ್ರೇಕಪ್ ನನಗೆ ಒಂದು ಆಶೀರ್ವಾದ ಇದ್ದಂತೆ – 2 ವರ್ಷದ ನಂತ್ರ ನಟನ ಬಗ್ಗೆ ಮೌನ ಮುರಿದ ಕತ್ರಿನಾ

    ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ 2 ವರ್ಷಗಳ ನಂತರ ನಟ ರಣ್‍ಬೀರ್ ಕಪೂರ್ ಜೊತೆ ಬ್ರೇಕಪ್ ಆಗಿದ್ದಕ್ಕೆ ಕಾರಣವನ್ನು ತಿಳಿಸಿದ್ದಾರೆ.

    2016ರಲ್ಲಿ ಕತ್ರಿನಾ ಕೈಫ್ ಹಾಗೂ ರಣ್‍ಬೀರ್ ಕಪೂರ್ ನಡುವಿನ ಬ್ರೇಕಪ್ ಸುದ್ದಿ ಹರಿದಾಡುತ್ತಿತ್ತು. ಆದರೆ ಈಗ 2 ವರ್ಷದ ನಂತರ ಕತ್ರಿನಾ ನಟ ರಣ್‍ಬೀರ್ ಕಪೂರ್ ಜೊತೆಗಿನ ಬ್ರೇಕಪ್ ಯಾಕೆ ಮಾಡಿಕೊಂಡಿದೆ ಎನ್ನುವ ವಿಷಯವನ್ನು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

    ಇತ್ತೀಚೆಗೆ ವೋಗ್ ಸಂದರ್ಶನದಲ್ಲಿ ಕತ್ರಿನಾ, “ಬ್ರೇಕಪ್ ನನಗಾಗಿ ಒಂದು ಆಶೀರ್ವಾದ ಇದ್ದಂತೆ. ನನ್ನ ಹಾಗೂ ರಣ್‍ಬೀರ್ ನಡುವೆ ಯಾವುದೇ ಸಂಬಂಧವಿಲ್ಲ. ರಣ್‍ಬೀರ್ ಜೊತೆ ಸಂಬಂಧದಲ್ಲಿದ್ದಾಗ ನಾನು ಯಾರು ಎಂಬುದು ನನಗೆ ಗೊತ್ತಾಗುತ್ತಿರಲಿಲ್ಲ” ಎಂದು ಹೇಳಿದ್ದಾರೆ.

    ಅಷ್ಟೇ ಅಲ್ಲದೇ ನಾನು ನನ್ನ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ನಾನು ಈಗ ಈ ಸಂಬಂಧದಿಂದ ಹೊರಬಂದಿದ್ದು, ಇದನ್ನು ಆಶೀರ್ವಾದದ ರೂಪದಲ್ಲಿ ನೋಡುತ್ತೇನೆ. ಈಗ ನನ್ನ ಪ್ಯಾಟ್ರನ್, ವಿಚಾರ ಹಾಗೂ ನನ್ನ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಈ ಘಟನೆಯ ಬಳಿಕ ನನ್ನ ಜೀವನವನ್ನು ಬೇರೆ ರೀತಿಯಲ್ಲಿ ನೋಡುತ್ತಿದ್ದೇನೆ. ಸಂಬಂಧದಲ್ಲಿ ಒಬ್ಬಂಟಿಯಾಗಿರುವುದು ಅತ್ಯಂತ ಕೆಟ್ಟ ಭಾವನೆ. ನಾನು ಕಳೆದ ಆ ಸಮಯದ ಬಗ್ಗೆ ಈಗ ಯೋಚಿಸುತ್ತಿರುವೆ ಎಂದು ಕತ್ರಿನಾ ತಿಳಿಸಿದ್ದಾರೆ.

    ರಣ್‍ಬೀರ್ ಕಪೂರ್ ಹಾಗೂ ಕತ್ರಿನಾ ಕೈಫ್ ಜೊತೆಯಾಗಿ ಬಾಳಲು ಕೋಟಿ ರೂ. ಮೌಲ್ಯದ ಫ್ಲಾಟ್ ಖರೀದಿಸಿದ್ದರು. ಇಬ್ಬರು ಮದುವೆಯಾಗಲು ಕೂಡ ನಿರ್ಧರಿಸಿದರು. ಆದರೆ ಅಷ್ಟರಲ್ಲಿ ಇಬ್ಬರ ನಡುವೆ ಬಿನ್ನಾಭಿಪ್ರಾಯ ಬಂದು ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದಾರೆ. ಬ್ರೇಕಪ್ ಮಾಡಿಕೊಂಡ ನಂತರ ರಣ್‍ಬೀರ್ ಎಲ್ಲರಿಗೂ ಬ್ರೇಕಪ್ ಪಾರ್ಟಿಯನ್ನು ನೀಡಿದ್ದರು. ಇದರಿಂದ ನಟಿ ಕತ್ರಿನಾ ಕೈಫ್ ಇನ್ನಷ್ಟು ಮನನೊಂದಿದ್ದರು ಎಂದು ವರದಿಯಾಗಿತ್ತು.

    ಕತ್ರಿನಾ ಕೈಫ್ ಈಗ ‘ಭಾರತ್’ ಚತ್ರದಲ್ಲಿ ಸಲ್ಮಾನ್ ಖಾನ್‍ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದಿಂದಾಗಿ ಕತ್ರಿನಾ ಈಗ ಸಲ್ಮಾನ್ ಖಾನ್‍ಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಡ್ಯ ಬಸ್ ಅಪಘಾತಕ್ಕೆ ಕಾರಣ ಸಿಕ್ತು!

    ಮಂಡ್ಯ ಬಸ್ ಅಪಘಾತಕ್ಕೆ ಕಾರಣ ಸಿಕ್ತು!

    -ಅಧಿಕಾರಿಗಳ ವರದಿಯಲ್ಲಿ ಏನಿದೆ?

    ಮಂಡ್ಯ: ಜಿಲ್ಲೆಯಲ್ಲಿ ಬಸ್ ನಾಲೆಗೆ ಉರುಳಿ 30 ಜನರು ಜಲಸಮಾಧಿಯಾದ ದುರಂತ ಘಟನೆಗೆ ನಿಖರವಾದ ಕಾರಣ ಸಿಕ್ಕಿದೆ.

    ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಬಸ್ ಅಪಘಾತ ಕುರಿತು ತನಿಖೆ ನಡೆಸಿ ಸರ್ಕಾರಕ್ಕೆ ಪ್ರಮುಖ ನಾಲ್ಕು ಅಂಶಗಳ ವರದಿಯನ್ನು ಕೊಟ್ಟಿದ್ದಾರೆ.

    ಮೊದಲನೇಯದು ಬಸ್ ಚಾಲಕನ ನಿರ್ಲಕ್ಷ್ಯ ತೋರಿದ್ದು, ಚಾಲನೆ ವೇಳೆ ಮೊಬೈಲ್ ಉಪಯೋಗಿಸಿದ್ದು ಕಾರಣವಾಗಿರಬಹುದು ಎಂದು ತಿಳಿಸಿದ್ದಾರೆ. ನಾಲೆ ಪಕ್ಕ ತಡೆಗೋಡೆ ಇಲ್ಲದೇ ಇರುವುದು ಜೊತೆಗೆ ರಸ್ತೆಯಿಂದ ನಾಲೆವರೆಗೆ ಇಳಿಜಾರು ಇರುವುದು ಸಹ ಅಪಘಾತಕ್ಕೆ ಕಾರಣವಾಗಿದೆ. ಇನ್ನೂ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳು ಹಾಗೂ ಕಿರಿದಾದ ರಸ್ತೆ ಇದ್ದ ಕಾರಣ 30 ಜನರ ಸಾವಿಗೆ ಕಾರಣವಾಗಿರ ಬಹುದು ಎಂದು ಅಧಿಕಾರಿಗಳು ವರದಿಯಲ್ಲಿ ತಿಳಿಸಿದ್ದಾರೆ.

    ಈ ಹಿಂದೆ ಬಸ್ ಅಪಘಾತವಾದ ಸ್ಥಳಿಯರು, ರಸ್ತೆ ಕಿರಿದಾಗಿಲ್ಲ, ಇಲ್ಲಿ ಇದುವರೆಗೂ ಯಾವುದೇ ಅಪಘಾತವೂ ಸಂಭವಿಸಿಲ್ಲ. ಬಸ್ ಹಳೆಯದಾಗಿದ್ದು, ಸ್ಟೇರಿಂಗ್ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ನಾಲೆಗೆ ಬಂದು ಪಲ್ಟಿಯಾಗಿ ಬಿದ್ದಿದೆ. ಅಷ್ಟೇ ಅಲ್ಲದೇ ಬಸ್ಸಿನ ಬಾಗಿಲು ನಾಲೆಗೆ ಕೆಳಮುಖವಾಗಿ ಬಿದ್ದ ಕಾರಣ ಪ್ರಯಾಣಿಕರು ಸಹ ಹೊರಗಡೆ ಬರಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದರು.

    ಅಪಘಾತ ನಡೆದಿದ್ದು ಹೇಗೆ?
    ಪಾಂಡವಪುರದಿಂದ ಮಂಡ್ಯಕ್ಕೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಕನಗನಮರಡಿ ರಸ್ತೆ ಬದಿಯ ವಿಸಿ ನಾಲೆಗೆ ಉರುಳಿತ್ತು. ಖಾಸಗಿ ಬಸ್ ಪ್ರತಿನಿತ್ಯ ಎರಡು ಬಾರಿ ಸಂಚರಿಸುತ್ತಿತ್ತು. ಬಸ್ ಸಂಪೂರ್ಣ ನೀರಿನಲ್ಲಿ ಮುಳುಗಿದ್ದು, 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ವಿಷಯ ತಿಳಿಯುತ್ತಿದ್ದಂತೆ ನಾಲೆಗೆ ಹರಿಸುವ ನೀರನ್ನು ನಿಲ್ಲಿಸಲಾಗಿತ್ತು. ಬಸ್ ಉಲ್ಟಾ ಅಂದರೆ ಬಾಗಿಲು ಕೆಳಗಡೆ ಆಗಿ ಬಿದ್ದಿದ್ದರಿಂದ ಪ್ರಯಾಣಿಕರು ಹೊರ ಬರಲಾರದೇ ಉಸಿರುಗಟ್ಟಿ ಸಾವನ್ನಪ್ಪಿದ್ದರು.

    ಮಂಡ್ಯ ಬಸ್ ದುರಂತಕ್ಕೆ ಇಡೀ ರಾಜ್ಯವೇ ಸಂತಾಪ ಸೂಚಿಸಿದ್ದು, ಸರ್ಕಾರ ಮೃತಪಟ್ಟ ಕುಟುಂಬದವರಿಗೆ ತಲಾ 5 ಲಕ್ಷ ರೂ. ಪರಿಹಾರ ಧನವನ್ನು ನೀಡಿದೆ. ಸಿನಿಮಾರಂಗದವರು ಕೂಡ ತಮ್ಮ ಕೈಲಾದ ಸಹಾಯವನ್ನು ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಏರ್ ಶೋ ಲಕ್ನೋಗೆ ಶಿಫ್ಟ್ ಆಗುತ್ತಾ? ಯಾರು ಏನು ಹೇಳಿದ್ರು?

    ಏರ್ ಶೋ ಲಕ್ನೋಗೆ ಶಿಫ್ಟ್ ಆಗುತ್ತಾ? ಯಾರು ಏನು ಹೇಳಿದ್ರು?

    ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿದ್ದ ಏರ್ ಶೋ ಉತ್ತರಪ್ರದೇಶದ ಲಕ್ನೋಗೆ ಶಿಫ್ಟ್ ಆಗಿದೆ. ಅಧಿಕೃತವಾಗಿ ರಕ್ಷಣಾ ಸಚಿವಾಲಯದಿಂದ ಘೋಷಣೆಯಾಗದೇ ಇದ್ದರೂ ಶೋ ಲಕ್ನೋಗೆ ಶಿಫ್ಟ್ ಆಗುವುದು ಬಹುತೇಕ ಖಚಿತವಾಗಿದೆ.

    1996ರಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ನಡೆಯುತಿತ್ತು. 2019ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಏರ್ ಶೋ ನಡೆಸಲು ಈಗಾಗಲೇ ಸಮಯ ನಿಗದಿಯಾಗಿದೆ. ಆದರೆ ಈಗ ಬಂದಿರುವ ಮಾಹಿತಿ ಪ್ರಕಾರ ಲಕ್ನೋದಲ್ಲಿರುವ ಭಕ್ಷಿ ಕಾ ತಲಾಬ್ ವಾಯುನೆಲೆಯಲ್ಲಿ ಅಕ್ಟೋಬರ್ 27 ನವೆಂಬರ್ 4ರ ಮಧ್ಯೆ ನಡೆಸಲು ಸಿದ್ಧತೆ ನಡೆಸುತ್ತಿದೆ.

    ಸ್ಥಳಾಂತರಕ್ಕೆ ಕಾರಣವೇನು?
    ಈ ವರ್ಷದ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಎರಡು ರಕ್ಷಣಾ ಕಾರಿಡರ್ ಸ್ಥಾಪನೆ ಮಾಡುವುದಾಗಿ ಘೋಷಿಸಿತ್ತು. ಒಂದು ತಮಿಳುನಾಡಿನಲ್ಲಿ ನಿರ್ಮಾಣವಾಗಲಿದ್ದರೆ ಇನ್ನೊಂದು ಉತ್ತರ ಪ್ರದೇಶದಲ್ಲಿ ಆಲಿಘರ್ ನಲ್ಲಿ ನಿರ್ಮಾಣವಾಗುತ್ತಿದೆ. ಮೇಕ್ ಇನ್ ಇಂಡಿಯಾದ ಅಡಿಯಲ್ಲಿ ಜಾಗತಿಕ ಮಟ್ಟದ ಮಿಲಿಟರಿ ಉಪಕರಣಗಳನ್ನು ತಯಾರಿಸಲು ರಕ್ಷಣಾ ಕಾರಿಡರ್ ಸ್ಥಾಪಿಸಲಾಗುತ್ತಿದೆ. ಶನಿವಾರ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆಲಿಘರ್ ಕಾರಿಡರ್ ಅನ್ನು ಉದ್ಘಾಟಿಸಿದ್ದರು. ಈ ರಕ್ಷಣಾ ಕಾರಿಡರ್ ಜನಪ್ರಿಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ವೈಮಾನಿಕ ಪ್ರದರ್ಶನವನ್ನು ಲಕ್ನೋಗೆ ಸ್ಥಳಾಂತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ವಿಶೇಷ ಏನೆಂದರೆ ಈ ಕಾರ್ಯಕ್ರಮದಲ್ಲೇ ಯೋಗಿ ಆದಿತ್ಯನಾಥ್ ಅವರು ಏರೋ ಇಂಡಿಯಾವನ್ನು ಉತ್ತರ ಪ್ರದೇಶದಲ್ಲಿ ನಡೆಸುವಂತೆ ರಕ್ಷಣಾ ಸಚಿವರಿಗೆ ಮನವಿ ಮಾಡಿದ್ದರು. ಉತ್ತರ ಪ್ರದೇಶ ರಕ್ಷಣಾ ಕಾರಿಡರ್ ನಲ್ಲಿ ಎಚ್‍ಎಎಲ್ 1,200 ಕೋಟಿ ರೂ. ಹೂಡಿಕೆ ಮಾಡುವುದಾಗಿ ಈಗಾಗಲೇ ಘೋಷಿಸಿದೆ.

    ಅಧಿಕೃತ ಘೋಷಣೆಯಾಗಿಲ್ಲ:
    ಬೆಂಗಳೂರು ನಗರದಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ರಕ್ಷಣಾ ಇಲಾಖೆಯ ಭೂಮಿಯನ್ನು ವರ್ಗಾಯಿಸುವ ಕುರಿತು ರಕ್ಷಣಾ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಆಗಸ್ಟ್ 4 ರಂದು ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಏರ್ ಶೋ ನಡೆಸಲು ವಿವಿಧ ರಾಜ್ಯಗಳಿಂದ ಪ್ರಸ್ತಾಪ ಬಂದಿದೆ. ಆದರೆ ಅಂತಿಮವಾಗಿಲ್ಲ ಎಂದು ಪ್ರತಿಕ್ರಿಯಿಸಿದ್ದರು.

    ಈ ಹಿಂದೆ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಅವರು ಏರ್ ಶೋವನ್ನು ಗೋವಾದಲ್ಲಿ ನಡೆಸಲು ಉತ್ಸುಕರಾಗಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕ ಕನ್ನಡಿಗರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ ಮನೋಹರ್ ಪರಿಕ್ಕರ್ ಅವರೇ ಗೋವಾದಲ್ಲಿ ಏರ್ ಶೋ ನಡೆಯುವ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿ ವಿಚಾರವನ್ನು ತಣ್ಣಗೆ ಮಾಡಿದ್ದರು.

    ಕೈ ನಾಯಕರ ವಿರೋಧ:
    ಏರ್ ಶೋ ಬೆಂಗಳೂರಿನಿಂದ ಲಕ್ನೋಗೆ ಶಿಫ್ಟ್ ಆಗುತ್ತಿರುವ ಬಗ್ಗೆ ಕಾಂಗ್ರೆಸ್ ನಾಯಕರು ಈಗಾಗಲೇ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಟ್ವೀಟ್ ಮಾಡಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

    ಸಿದ್ದರಾಮಯ್ಯನವರು ಟ್ವೀಟ್ ಮಾಡಿ, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ರಾಜ್ಯದ ಹಿತಾಸಕ್ತಿಯನ್ನು ತೋರಿಸಬೇಕಿತ್ತು. ಆದರೆ ಅವರು ರಾಜ್ಯದ ಹಿತಾಸಕ್ತಿಯನ್ನು ಬಿಟ್ಟಿದ್ದಾರೆ. ಬಿಜೆಪಿ ಆಳ್ವಿಕೆ ಅವಧಿಯಲ್ಲಿ ಹಲವಾರು ರಕ್ಷಣಾ ಯೋಜನೆಗಳು ಬೆಂಗಳೂರಿನಿಂದ ಕೈ ತಪ್ಪುತ್ತಿದೆ ಎಂದು ಬರೆದು ಕಿಡಿಕಾರಿದ್ದಾರೆ.

    ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, 21 ವರ್ಷಗಳಿಂದ ನಡೆಯುತ್ತಿದ್ದ ವೈಮಾನಿಕ ಪ್ರದರ್ಶನವನ್ನು ಕೇಂದ್ರ ಸರ್ಕಾರ ಏಕಾಏಕಿ ಉತ್ತರಪ್ರದೇಶದ ಲಕ್ನೋಗೆ ಸ್ಥಳಾಂತರಿಸುವುದಕ್ಕೆ ನಮಗೆ ತೀವ್ರ ಅಸಮಾಧಾನವಾಗಿದೆ. ಅಲ್ಲದೇ ಈ ಮೊದಲು ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರವರ ಜೊತೆ ವೈಮಾನಿಕ ಪ್ರದರ್ಶನ ಸ್ಥಳಾಂತರಗೊಳ್ಳದಂತೆ ಮಾತುಕತೆ ನಡೆಸಿದ್ದರು ಎಂದು ತಿಳಿಸಿದರು.

    ಬಿಜೆಪಿ ಮಾಜಿ ಸಿಎಂಗಳಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹಾಗೂ ಕೇಂದ್ರ ಸಚಿವರಾದ ಅನಂತಕುಮಾರ್ ರವರು ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಕೂಡಲೇ ಗಮನಹರಿಸಬೇಕು. ಕೇಂದ್ರ ಸಚಿವರು ಹಾಗೂ ಬಿಜೆಪಿ ಮುಖಂಡರು ಏರ್ ಶೋ ಕರ್ನಾಟಕಕ್ಕೆ ಮರಳಿ ಬರುವಂತೆ ಆಗ್ರಹಿಸಬೇಕು. ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಏರ್ ಶೋ ನಡೆಯುತ್ತ ಬಂದಿತ್ತು, 2019ರ ಫೆಬ್ರವರಿಯಲ್ಲಿ ನಡೆಯಬೇಕಿದ್ದ ವೈಮಾನಿಕ ಪ್ರದರ್ಶನಕ್ಕೆ ಬೆಂಗಳೂರಿನಲ್ಲಿ ವ್ಯಾಪಕ ವ್ಯವಸ್ಥೆಯನ್ನು ಸಹ ಈಗಾಗಲೇ ಕಲ್ಪಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ದಿಢೀರ್ ನಿರ್ಧಾರದಿಂದ ತೀವ್ರ ಬೇಸರವಾಗಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews